ರಕ್ಷಣಾ ಸಚಿವಾಲಯ

ಮಿಷನ್ ಸಾಗರ: ಐ.ಎನ್.ಎಸ್.ಕೇಸರಿಯಿಂದ ಮಾಲ್ದೀವ್ಸ್ ಗೆ ಆಹಾರ ಸಾಮಗ್ರಿಗಳ ಹಸ್ತಾಂತರ

Posted On: 12 MAY 2020 6:59PM by PIB Bengaluru

ಮಿಷನ್ ಸಾಗರ: .ಎನ್.ಎಸ್.ಕೇಸರಿಯಿಂದ ಮಾಲ್ದೀವ್ಸ್ ಗೆ ಆಹಾರ ಸಾಮಗ್ರಿಗಳ ಹಸ್ತಾಂತರ

 

ಮಿಷನ್ ಸಾಗರಕಾರ್ಯಾಚರಣೆಯ ಅಂಗವಾಗಿ ಭಾರತೀಯ ನೌಕಾದಳದ ನೌಕೆ ಕೇಸರಿಯು ಮಾಲ್ದೀವ್ಸ್ ಮಾಲೆ ಬಂದರನ್ನು 2020 ಮೇ 12 ರಂದು ಪ್ರವೇಶಿಸಿತು. ಭಾರತ ಸರಕಾರವು ಸ್ನೇಹ ಸೌಹಾರ್ದತೆಯ ಬಾಂಧವ್ಯ ಹೊಂದಿರುವ ವಿದೇಶಗಳಿಗೆ ಸಹಾಯವನ್ನು ನೀಡುತ್ತಿದೆ. ಮತ್ತು ಇದರಂಗವಾಗಿ .ಎನ್.ಎಸ್. ಕೇಸರಿಯು ಮಾಲ್ದೀವ್ಸ್ ಜನತೆಗೆ 580 ಟನ್ ಆಹಾರ ಸಾಮಗ್ರಿಗಳನ್ನು ಹೊತ್ತೊಯ್ದಿತು. ವಲಯದಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದ ಮತ್ತು ಸಾಮಾಜಿಕ ಅಂತರ ಕಾಪಾಡಬೇಕಾಗಿರುವುದರಿಂದ ಆನ್ ಲೈನ್ ಮೂಲಕ ಹಸ್ತಾಂತರ ಕಾರ್ಯಕ್ರಮ 2020 ಮೇ 12 ರಂದು ನಡೆಯಿತು. ಸಮಾರಂಭದಲ್ಲಿ ಮಾಲ್ದೀವ್ಸ್ ವಿದೇಶೀ ಸಚಿವ ಶ್ರೀ ಅಬ್ದುಲ್ಲಾ ಶಾಹೀದ್ ಮತ್ತು ರಕ್ಷಣಾ ಸಚಿವರಾದ ಶ್ರೀಮತಿ ಮರಿಯಾ ಅಹ್ಮದ್ ದೀದಿ ಭಾಗವಹಿಸಿದ್ದರು. ಭಾರತದ ಕಡೆಯಿಂದ ಮಾಲ್ದೀವ್ಸ್ ನಲ್ಲಿ ಭಾರತದ ಹೈಕಮಿಶನರ್ ಶ್ರೀ ಸಂಜಯ ಸುಧೀರ್ ಪ್ರತಿನಿಧಿಯಾಗಿದ್ದರು. ಭಾರತವು ಕೊಡಮಾಡಿದ ಸಹಾಯವನ್ನು ವಿದೇಶಿ ಸಚಿವ ಶ್ರೀ ಅಬ್ದುಲ್ಲಾ ಶಾಹೀದ್ ಶ್ಲಾಘಿಸಿದರು.

ಸಾಗರವಲಯದಲ್ಲಿರುವ ಎಲ್ಲರ ಭದ್ರತೆ ಮತ್ತು ಬೆಳವಣಿಗೆ ಎಂಬ ಪ್ರಧಾನ ಮಂತ್ರಿ ಅವರ ಮುಂಗಾಣ್ಕೆ ಹಾಗು ನೆರೆ ಹೊರೆಯವರು ಮೊದಲು ಎಂಬ ನೀತಿಯನ್ನು ಅನುಸರಿಸಿ ಹಡಗನ್ನು ನಿಯೋಜಿಸಲಾಗಿತ್ತು. ದೇಶದ ನೀತಿ ಮತ್ತು ಪ್ರಧಾನ ಮಂತ್ರಿ ಅವರ ಮುಂಗಾಣ್ಕೆಯಲ್ಲಿ ಮಾಲ್ದೀವ್ಸ್ ಪ್ರಮುಖವಾಗಿ ಗುರುತಿಸಲ್ಪಡುವ ರಾಷ್ಟ್ರವಾಗಿದೆ. ಕಾರ್ಯಾಚರಣೆಯನ್ನು ರಕ್ಷಣಾ ಮತ್ತು ವಿದೇಶೀ ವ್ಯವಹಾರಗಳ ಸಚಿವಾಲಯಗಳ ನಡುವಣ ನಿಕಟ ಸಮನ್ವಯ ಮತ್ತು ಭಾರತ ಸರಕಾರದ ಇತರ ಏಜೆನ್ಸಿಗಳ ನೆರವಿನೊಂದಿಗೆ ಅನುಷ್ಟಾನಿಸಲಾಗಿದೆ.

ಆಪರೇಶನ್ ಸಮುದ್ರ ಸೇತುವನ್ನು ಅನುಸರಿಸಿ ಮಿಶನ್ ಸಾಗರ ನಡೆಯಿತು. ಸಮುದ್ರ ಸೇತುವಿನಲ್ಲಿ ಮಾಲ್ದೀವ್ಸ್ ಸಹಿತ ಸಾಗರೋತ್ತರ ದೇಶಗಳಲ್ಲಿ ನೆಲೆಸಿದ್ದ ಭಾರತೀಯ ನಾಗರಿಕರನ್ನು ಮರಳಿ ದೇಶಕ್ಕೆ ಕರೆತರಲಾಯಿತು. .ಎನ್.ಎಸ್. ಜಲಾಶ್ವ ಮತ್ತು .ಎನ್.ಎಸ್. ಮಗರ್ ಮೂಲಕ 2020 ಮೇ 8 ಮತ್ತು 9 ರಂದು ಒಟ್ಟು 900 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ.

ಭಾರತ ಮತ್ತು ಮಾಲ್ದೀವ್ಸ್ ಗಳು ನಿಕಟ ನಾವಿಕ/ ಸಾಗರೋತ್ತರ ನೆರೆ ಹೊರೆಯ ದೇಶಗಳು. ಅವು ಪರಸ್ಪರ ಬಲಿಷ್ಟ ಮತ್ತು ಸೌಹಾರ್ದದ ರಕ್ಷಣಾ ಹಾಗು ರಾಜತಾಂತ್ರಿಕ ಬಾಂಧವ್ಯಗಳನ್ನು ಹೊಂದಿವೆ.

***



(Release ID: 1623455) Visitor Counter : 251