ರೈಲ್ವೇ ಸಚಿವಾಲಯ

ಸಾಮಾಜಿಕ ಸೇವಾ ಬದ್ಧತೆಯಿಂದ ಮಾರ್ಚ್ 28 ರಿಂದ 8.5 ಲಕ್ಷಕ್ಕೂ ಹೆಚ್ಚು ಜನರಿಗೆ ತಯಾರಿಸಿದ ಆಹಾರ ವಿತರಿಸಿದ ರೈಲ್ವೆ

Posted On: 09 APR 2020 3:07PM by PIB Bengaluru

ಸಾಮಾಜಿಕ ಸೇವಾ ಬದ್ಧತೆಯಿಂದ ಮಾರ್ಚ್ 28 ರಿಂದ 8.5 ಲಕ್ಷಕ್ಕೂ ಹೆಚ್ಚು ಜನರಿಗೆ ತಯಾರಿಸಿದ ಆಹಾರ ವಿತರಿಸಿದ ರೈಲ್ವೆ

ತಯಾರಿಸಿದ ಊಟದಲ್ಲಿ 5 ಲಕ್ಷಕ್ಕೂ ಹೆಚ್ಚು ಐಆರ್ಸಿಟಿಸಿ ಅಡುಗೆಮನೆಗಳಲ್ಲಿ ತಯಾರಿಸಲಾಗಿದೆ; ತನ್ನ ಸ್ವಂತ ಸಂಪನ್ಮೂಲಗಳಿಂದ ಸುಮಾರು 2 ಲಕ್ಷ ಊಟ ಒದಗಿಸಿದ ಆರ್ಪಿಎಫ್; 1.5 ಲಕ್ಷ ಊಟಕ್ಕೆ ಎನ್ಜಿಒಗಳ ಕೊಡುಗೆ

ಇವುಗಳಲ್ಲಿ, ಆರ್ಪಿಎಫ್ ಒಂದರಿಂದಲೇ ಸುಮಾರು 6 ಲಕ್ಷ ಊಟ ವಿತರಣೆ; ಇತರ ರೈಲ್ವೆ ಮತ್ತು ಸರ್ಕಾರಿ ಇಲಾಖೆಗಳು, ಎನ್ಜಿಒಗಳಿಂದ ವಿತರಣಾ ಚಟುವಟಿಕೆಗೆ ಸಹಕಾರ

 

COVID-19 ಕಾರಣದಿಂದಾಗಿ ಲಾಕ್ ಡೌನ್ ನಂತರ ತನ್ನ ಸಾಮಾಜಿಕ ಸೇವಾ ಬದ್ಧತೆಗನುಗುಣವಾಗಿ ಭಾರತೀಯ ರೈಲ್ವೆ ಅಗತ್ಯವಿರುವ ಜನರಿಗೆ ತಯಾರಿಸಿದ ಆಹಾರವನ್ನು ನೀಡಲು ಪ್ರಾರಂಭಿಸಿದೆ. ಐಆರ್ಸಿಟಿಸಿ ಅಡುಗೆ ಮನೆಗಳು, ಆರ್ಪಿಎಫ್ ಸಂಪನ್ಮೂಲಗಳು ಮತ್ತು ಎನ್ಜಿಒಗಳ ಕೊಡುಗೆಗಳ ಮೂಲಕ ಮಧ್ಯಾಹ್ನದ ಊಟವನ್ನು ಕಾಗದದ ತಟ್ಟೆಗಳಲ್ಲಿ ಮತ್ತು ರಾತ್ರಿಯ ಊಟವನ್ನು ಪ್ಯಾಕೆಟ್ಗಳಲ್ಲಿ  ಒದಗಿಸುತ್ತಿದೆ. ಬಡವರು, ನಿರ್ಗತಿಕರು, ಭಿಕ್ಷುಕರು, ಮಕ್ಕಳು, ಕೂಲಿಗಳು, ವಲಸೆ ಕಾರ್ಮಿಕರು, ಸಿಲುಕಿಕೊಂಡ ವ್ಯಕ್ತಿಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಿಂದ ಸ್ವಲ್ಪ ದೂರದಲ್ಲಿ ಆಹಾರವನ್ನು ಹುಡುಕಿ ಬರುವವರಿಗೆ ತಯಾರಿಸಿದ ಆಹಾರವನ್ನು ನೀಡಲಾಗುತ್ತಿದೆ.

ಅಗತ್ಯವಿರುವ ಜನರಿಗೆ ಆಹಾರ ಮತ್ತು ಇತರ ನೆರವು ಒದಗಿಸಲು ರೈಲ್ವೆ ತನ್ನ ಪ್ರಯತ್ನಗಳ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ರೈಲ್ವೆ ನಿಲ್ದಾಣಗಳಿಂದಾಚೆ ಜಿಲ್ಲೆಯ ಅಧಿಕಾರಿಗಳು ಮತ್ತು ಎನ್ಜಿಒ ಗಳೊಂದಿಗೆ ಸಮಾಲೋಚಿಸಿ ದೂರ ಪ್ರದೇಶಗಳಿಗೆ ಹೋಗಬೇಕು ಎಂದು ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ನೀಡಿದ್ದ ಸಲಹೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ.

ಆರ್ಪಿಎಫ್, ಜಿಆರ್ಪಿ, ವಲಯಗಳ ವಾಣಿಜ್ಯ ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಎನ್ಜಿಒಗಳ ಸಹಾಯದಿಂದ ಆಹಾರ ವಿತರಣೆ ನಡೆಯುತ್ತಿದೆ. ಅಗತ್ಯವಿರುವವರಿಗೆ ಆಹಾರವನ್ನು ತಲುಪಿಸುವಾಗ, ಸಾಮಾಜಿಕ ಅಂತರ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತ ಮತ್ತು ಎನ್ಜಿಒಗಳ ಸಹಾಯದಿಂದ ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗತ್ಯವಿರುವ ಜನರಿಗೆ ಆಹಾರ ಪೂರೈಕೆಯನ್ನು ಹೆಚ್ಚಿಸಲು ಸಂಬಂಧಪಟ್ಟ ವಲಯ ಮತ್ತು ವಿಭಾಗದ ಜಿಎಂ ಗಳು/ ಡಿಆರ್ಎಂ ಗಳು ಐಆರ್ಸಿಟಿಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ಮತ್ತು ದಕ್ಷಿಣ ಮಧ್ಯದಂತಹ ವಿವಿಧ ವಲಯಗಳು ಮತ್ತು ಆರ್ಪಿಎಫ್, ಇತರ ಸರ್ಕಾರಿ ಇಲಾಖೆಗಳು ಮತ್ತು ಎನ್ಜಿಒಗಳ ಸಹಾಯದಿಂದ ನವದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೆಂಟ್ರಲ್, ಅಹಮದಾಬಾದ್, ಭೂಸಾವಲ್, ಹೌರಾ, ಪಾಟ್ನಾ, ಗಯಾ, ರಾಂಚಿ, ಕತಿಹಾರ್, ದೀನ್ ದಯಾಳ್ ಉಪಾಧ್ಯಾಯ ನಗರ, ಬಾಲಸೋರ್, ವಿಜಯವಾಡ, ಖುರ್ದಾ, ಕಟ್ಪಾಡಿ, ತಿರುಚಿರಾಪಲ್ಲಿ, ಧನ್ಬಾದ್, ಗುವಾಹಟಿ, ಸಮಸ್ತಿಪುರ, ಪ್ರಯಾಗರಾಜ್, ಇಟಾರ್ಸಿ, ವಿಶಾಖಪಟ್ಟಣಂ, ಚೆಂಗಲ್ಪಟ್ಟು, ಪುಣೆ, ಹಾಜಿಪುರ, ರಾಯಪುರ ಮತ್ತು ಟಾಟಾ ನಗರಗಳಲ್ಲಿನ ಐಆರ್ಸಿಟಿಸಿ ಅಡುಗೆಮನೆಗಳ ಸಕ್ರಿಯ ಸಹಕಾರದೊಂದಿಗೆ ಭಾರತೀಯ ರೈಲ್ವೆ ಮಾರ್ಚ್ 28, 2020 ರಿಂದ ಇದುವರೆಗೆ 8.5 ಲಕ್ಷದಷ್ಟು ಬಡವರಿಗೆ ಮತ್ತು ನಿರ್ಗತಿಕರಿಗೆ ತಯಾರಿಸಿದ ಆಹಾರ ವಿತರಿಸಿದೆ.

ಐಆರ್ಸಿಟಿಸಿ 6 ಲಕ್ಷಕ್ಕೂ ಹೆಚ್ಚು ತಯಾರಿಸಿದ ಊಟವನ್ನು ಒದಗಿಸಿದೆ ಮತ್ತು ಸುಮಾರು 2 ಲಕ್ಷ ಊಟವನ್ನು ಆರ್ಪಿಎಫ್ ತನ್ನದೇ ಆದ ಸಂಪನ್ಮೂಲಗಳಿಂದ ಒದಗಿಸಿದೆ. ರೈಲ್ವೆ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಎನ್ಜಿಒಗಳು ಸುಮಾರು 1.5 ಲಕ್ಷ ಊಟವನ್ನು ದೇಣಿಗೆ ನೀಡಿವೆ. ಐಆರ್ಸಿಟಿಸಿ, ಎನ್ಜಿಒಗಳು ಮತ್ತು ರೈಲ್ವೆ ರಕ್ಷಣಾ ಪಡೆ ಅಗತ್ಯವಿರುವ ಜನರಿಗೆ ಆಹಾರ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. 28.03.2020 ರಂದು 74 ಸ್ಥಳಗಳಲ್ಲಿ 5419 ನಿರ್ಗತಿಕರಿಗೆ ಆಹಾರ ವಿತರಣೆಯಿಂದ ಪ್ರಾರಂಭಿಸಲಾಯಿತು, ಸಂಖ್ಯೆ ಪ್ರತಿದಿನವೂ ಹೆಚ್ಚಾಗಿದೆ. ಸುಮಾರು 6 ಲಕ್ಷ ನಿರ್ಗತಿಕರಿಗೆ ಆರ್ಪಿಎಫ್ನಿಂದ 313 ಸ್ಥಳಗಳಲ್ಲಿ 08.4.2020 ರವರೆಗೆ ಆಹಾರವನ್ನು ವಿತರಿಸಲಾಗಿದೆ. ಭಾರತೀಯ ರೈಲ್ವೆಯ ಊಟದ ವಿತರಣೆಯು ಇಂದು 1 ಲಕ್ಷ ಜನರಿಗೆ ಸಮೀಪದಲ್ಲಿದೆ.

ಐಆರ್ಸಿಟಿಸಿ PM-CARES ನಿಧಿಗೆ 20 ಕೋಟಿ ರೂ.ಗಳನ್ನು ನೀಡಿದೆ. ಇದರಲ್ಲಿ  2019-20 ಸಿಎಸ್ಆರ್ ನಿಧಿಯಿಂದ 1.5 ಕೋಟಿ ರೂ., 2020-21 ಸಿಎಸ್ಆರ್ ನಿಧಿಯಿಂದ 6.5 ಕೋಟಿ ರೂ. ಮತ್ತು 12 ಕೋಟಿ ರೂ. ದೇಣಿಗೆಯಾಗಿದೆ.

COVID-19 ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರವನ್ನು ಒದಗಿಸಲು ಭಾರತೀಯ ರೈಲ್ವೆ ಸಂಪೂರ್ಣ ಸಿದ್ಧವಾಗಿದೆ. ಇದಕ್ಕಾಗಿ ಆಹಾರ ಧಾನ್ಯಗಳು ಮತ್ತು ಇತರ ಕಚ್ಚಾ ವಸ್ತುಗಳ ಸಾಕಷ್ಟು ದಾಸ್ತಾನುಗಳನ್ನು ಮಾಡಿಕೊಳ್ಳಲಾಗುತ್ತಿದೆ.

***



(Release ID: 1612535) Visitor Counter : 197