ಸಂಪುಟ

ಮಾನವ ಕಳ್ಳಸಾಗಣೆ ತಡೆಗಟ್ಟಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ದ್ವಿಪಕ್ಷೀಯ ಸಹಕಾರದ ತಿಳುವಳಿಕೆ ಒಪ್ಪಂದಕ್ಕೆ ಸಂಪುಟದ ಅಂಗೀಕಾರ

Posted On: 27 NOV 2019 11:18AM by PIB Bengaluru

ಮಾನವ ಕಳ್ಳಸಾಗಣೆ ತಡೆಗಟ್ಟಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ದ್ವಿಪಕ್ಷೀಯ ಸಹಕಾರದ ತಿಳುವಳಿಕೆ ಒಪ್ಪಂದಕ್ಕೆ ಸಂಪುಟದ ಅಂಗೀಕಾರ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮಾನವ ಕಳ್ಳಸಾಗಣೆ ತಡೆಗಟ್ಟಲು - ಕಳ್ಳಸಾಗಣೆಗೆ ಬಲಿಯಾದವರ ರಕ್ಷಣೆ, ಚೇತರಿಕೆ, ವಾಪಸಾತಿ ಮತ್ತು ಮರು ಏಕೀಕರಣ- ದ್ವಿಪಕ್ಷೀಯ ಸಹಕಾರ ಕುರಿತು ಭಾರತ ಮತ್ತು ಮ್ಯಾನ್ಮಾರ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಅನುಮೋದನೆ ನೀಡಿದೆ.
ಒಪ್ಪಂದದ ಗುರಿ:
• ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಬಲಪಡಿಸುವುದು ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ತಡೆಗಟ್ಟುವಿಕೆ, ರಕ್ಷಣೆ, ಚೇತರಿಕೆ ಮತ್ತು ವಾಪಸಾತಿ ವಿಷಯಗಳ ಕುರಿತು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದು.
• ಎಲ್ಲಾ ರೀತಿಯ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಮತ್ತು ಕಳ್ಳಸಾಗಾಣಿಕೆಗೆ ಬಲಿಯಾದವರನ್ನು ರಕ್ಷಿಸಲು ಮತ್ತು ನೆರವು ಒದಗಿಸಲು ಸಹಕಾರವನ್ನು ಬಲಪಡಿಸುವುದು.
• ಎರಡೂ ದೇಶಗಳಲ್ಲಿ ಕಳ್ಳಸಾಗಣೆದಾರರು ಮತ್ತು ಸಂಘಟಿತ ಅಪರಾಧ ಸಂಘಟನೆಗಳ ಮೇಲೆ ತ್ವರಿತ ತನಿಖೆ ಮತ್ತು ಕಾನೂನು ಕ್ರಮ ಜರುಗಿಸುವುದನ್ನು ಖಚಿತಪಡಿಸಿಕೊಳ್ಳುವುದು.
• ವಲಸೆ ಮತ್ತು ಗಡಿ ನಿಯಂತ್ರಣಗಳನ್ನು ಬಲಪಡಿಸುವುದು ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಸಂಬಂಧಿಸಿದ ಸಚಿವಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಸಹಕಾರ ಮತ್ತು ಕಾರ್ಯತಂತ್ರಗಳನ್ನುಅನುಷ್ಠಾನಗೊಳಿಸಿವುದು.
• ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವ ಪ್ರಯತ್ನಗಳನ್ನು ಮಾಡಲು ಕಾರ್ಯನಿರತ ಗುಂಪು, ಕಾರ್ಯಪಡೆಗಳನ್ನು ಸ್ಥಾಪಿಸುವುದು
• ಕಳ್ಳಸಾಗಣೆದಾರರು ಮತ್ತು ಕಳ್ಳಸಾಗಾಣಿಕೆಗೆ ಬಲಿಯಾದವರ ಬಗ್ಗೆ ಸುರಕ್ಷಿತ ಮತ್ತು ಗೌಪ್ಯ ರೀತಿಯಲ್ಲಿ ಅಂಕಿಅಂಶವನ್ನು ಅಭಿವೃದ್ಧಿಪಡಿಸುವುದು ಮತ್ತು ಹಂಚಿಕೊಳ್ಳುವುದು. ಭಾರತ ಮತ್ತು ಮ್ಯಾನ್ಮಾರ್ನ ನಿಗದಿಪಡಿಸಿದ ಸಂಸ್ಥೆಗಳ ಮೂಲಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು.
• ಎರಡೂ ದೇಶಗಳಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು.
• ಕಳ್ಳಸಾಗಣೆಗೆ ಒಳಗಾದವರ ರಕ್ಷಣೆ, ಚೇತರಿಕೆ, ವಾಪಸಾತಿ ಮತ್ತು ಏಕೀಕರಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ರಚನೆ ಮತ್ತು ಅಳವಡಿಕೆ.
ಹಿನ್ನೆಲೆ:
ಮಾನವ ಕಳ್ಳಸಾಗಣೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜಾಲಗಳನ್ನು ಹೊಂದಿದೆ. ಮಾನವ ಕಳ್ಳಸಾಗಣೆಯ ಸಂಕೀರ್ಣ ಸ್ವರೂಪದಿಂದಾಗಿ ಅದನ್ನು ದೇಶೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಭಾಯಿಸಲು ಬಹು ಆಯಾಮದ ಕಾರ್ಯತಂತ್ರದ ಅವಶ್ಯಕತೆ ಇದೆ. ಇದರ ವ್ಯಾಪ್ತಿಯು ಜಾಗತಿಕ ಮಟ್ಟದಲ್ಲಿರುವುದರಿಂದ, ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಸಹಕಾರ ಮತ್ತು ಸಹಯೋಗ ಅತ್ಯಗತ್ಯವಾಗಿದೆ.
ಗಡಿ ನಿಯಂತ್ರಣ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸುವುದು ಮತ್ತು ಭಾರತ ಮತ್ತು ಮ್ಯಾನ್ಮಾರ್ ನಡುವೆ ನೇರ ಸಂವಹನ ಮಾರ್ಗಗಳನ್ನು ಸ್ಥಾಪಿಸುವುದು, ಮಾನವ ಕಳ್ಳಸಾಗಣೆಯನ್ನು ಎದುರಿಸಲು ಮತ್ತು ಗಡಿಯಾಚೆಗಿನ ಮತ್ತು ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸಲು ಈ ತಿಳುವಳಿಕೆ ಒಪ್ಪಂದ ಪರಿಣಾಮಕಾರಿ ಸಾಧನವಾಗಿದೆ.

 

***



(Release ID: 1593740) Visitor Counter : 266