ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಜೂನ್ 20-21 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ


ಜೂನ್ 20 ರಂದು ಹೂಗ್ಲಿಯಲ್ಲಿ ಪಶ್ಚಿಮಬಂಗಾ ದಿನಾಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ರೈಲ್ವೆ, ಕೃಷಿ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ ಮತ್ತು ಪಶುಸಂಗೋಪನಾ ವಲಯಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ  ಅವರಿಂದ ಹಲವು ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ  ಹಲವು ಪ್ರಮುಖ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ಆ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಕೃಷಿ ಸ್ಟಾಕ್, ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಮತ್ತು ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ  ಸೇರಿವೆ

ದೇಶಾದ್ಯಂತ 9.44 ಕೋಟಿಗೂ ಅಧಿಕ ರೈತರಿಗೆ ಆರ್ಥಿಕ ನೆರವು ನೀಡುವ 18,880 ಕೋಟಿ ರೂ. ಮೌಲ್ಯದ 23 ನೇ ಪ್ರಧಾನ ಮಂತ್ರಿ-ಕಿಸಾನ್ ಕಂತನ್ನು ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ

ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಪ್ರಧಾನಮಂತ್ರಿ ಅವರಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ಮೂರು ನೌಕಾ ಹಡಗುಗಳಾದ ಐಎನ್‌ಎಸ್ ದುನಗಿರಿ, ಐಎನ್‌ಎಸ್ ಸಂಶೋಧಕ್ ಮತ್ತು ಐಎನ್‌ಎಸ್ ಅಗ್ರೇಯಗಳ ನಿಯೋಜನೆ

200ಕ್ಕೂ ಅಧಿಕ ಎಂಎಸ್‌ಎಂಇಗಳು ಸೇರಿ ಭಾರತೀಯ ಕೈಗಾರಿಕೆಗಳ ವ್ಯಾಪಕ ಭಾಗವಹಿಸುವಿಕೆಯೊಂದಿಗೆ ಹಡಗುಗಳ ನಿರ್ಮಾಣ

ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಜೂನ್ 21 ರಂದು ಕೋಲ್ಕತ್ತಾದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಐಡಿವೈ 2026ರ ವಿಷಯ: “ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ’’

प्रविष्टि तिथि: 19 JUN 2026 11:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜೂನ್ 20-21 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.  ಜೂನ್ 20 ರಂದು ಮಧ್ಯಾಹ್ನ 3:45ರ ಸುಮಾರಿಗೆ ಪ್ರಧಾನ ಮಂತ್ರಿ ಅವರು ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಪಶ್ಚಿಮ ಬಂಗಾಳ ದಿವಸ್ (ಪಶ್ಚಿಮ ಬಂಗಾಳ ದಿನ) ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಪಶ್ಚಿಮ ಬಂಗಾಳದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವರು, ರಾಷ್ಟ್ರಕ್ಕೆ ಸಮರ್ಪಿಸುವರು ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಜೂನ್ 21 ರಂದು ಬೆಳಿಗ್ಗೆ 6:30ರ ಸುಮಾರಿಗೆ ಪ್ರಧಾನಮಂತ್ರಿ ಅವರು ಕೋಲ್ಕತ್ತಾದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಂತರ ಬೆಳಿಗ್ಗೆ 9:15ರ ಸುಮಾರಿಗೆ ಪ್ರಧಾನ ಮಂತ್ರಿ ಅವರು ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಮೂರು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ನೌಕಾ ಹಡಗುಗಳಾದ ಐಎನ್ಎಸ್ ದುನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರೇಯಗಳನ್ನು ಕಾರ್ಯಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವರು.

ಹೂಗ್ಲಿಯಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಪಶ್ಚಿಮಬಂಗಾ ದಿವಸ್ (ಪಶ್ಚಿಮ ಬಂಗಾಳ ದಿನ) ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದ ಆಚರಣೆಗಳು ಹೂಗ್ಲಿಯ ತಾರಕೇಶ್ವರದಲ್ಲಿ ನಡೆಯಲಿವೆ, ಇದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಸಂಬಂಧಿಸಿದ ಐತಿಹಾಸಿಕ ಮಹತ್ವದ ಸ್ಥಳವಾಗಿದೆ.

ಈ ವರ್ಷದ ಪಶ್ಚಿಮಬಂಗಾ ದಿವಸ್‌ನ ವಿಷಯ: ”ಪಶ್ಚಿಮ ಬಂಗಾಳ: ಪರಂಪರೆ, ಸಾಮರಸ್ಯ ಮತ್ತು ಅಭಿವೃದ್ಧಿ’’ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ, ಸಾಮಾಜಿಕ ಒಗ್ಗಟ್ಟು ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.

ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರೈಲ್ವೆ, ಕೃಷಿ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ ಮತ್ತು ಪಶುಸಂಗೋಪನೆ ವಲಯಗಳನ್ನು ವ್ಯಾಪಿಸಿರುವ ಈ ಉಪಕ್ರಮಗಳು ಮೂಲಸೌಕರ್ಯವನ್ನು ಬಲವರ್ಧನೆಗೊಳಿಸುತ್ತವೆ, ಜೀವನೋಪಾಯವನ್ನು ಸುಧಾರಿಸುತ್ತವೆ, ರೈತರ ಕಲ್ಯಾಣವನ್ನು ಹೆಚ್ಚಿಸುತ್ತವೆ ಮತ್ತು ರಾಜ್ಯಾದ್ಯಂತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯ 23 ನೇ ಕಂತನ್ನು ಪ್ರಧಾನ ಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ. ಈ ಕಂತಿನ ಅಡಿಯಲ್ಲಿ ದೇಶಾದ್ಯಂತ 9.44 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ 18,880 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೇರವಾಗಿ ವರ್ಗಾಯಿಸಲಾಗುವುದು.

ಪಶ್ಚಿಮ ಬಂಗಾಳದಲ್ಲಿಯೇ 45 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ 900 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಜಮಾ ಮಾಡಲಾಗುವುದು, ಇದರಿಂದಾಗಿ ರಾಜ್ಯದಲ್ಲಿ ಈ ಯೋಜನೆಯಡಿ ಒಟ್ಟು ವಿತರಣೆ 15,000 ಕೋಟಿ ರೂಪಾಯಿಗೂ ಅಧಿಕ ಹಣ ತಲುಪುತ್ತದೆ. 2019 ರಲ್ಲಿ ಈ ಯೋಜನೆ ಆರಂಭವಾದಾಗಿನಿಂದ ದೇಶಾದ್ಯಂತ ಒಟ್ಟು 4.46 ಲಕ್ಷ ಕೋಟಿ ರೂಪಾಯಿ ಅಧಿಕ ಹಣ ವಿತರಣೆ ಮಾಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಹಲವು ಪ್ರಮುಖ ಕೃಷಿ ಯೋಜನೆಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಅವುಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಡಿಜಿಟಲ್ ಕೃಷಿ ಮಿಷನ್‌ನ ಭಾಗವಾಗಿ ಕೃಷಿ ಸ್ಟಾಕ್, ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಮತ್ತು ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಸೇರಿವೆ.

ಪ್ರಧಾನಮಂತ್ರಿ ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿ ಎಂ ಎಫ್ ಬಿ ವೈ)ಗೆ ಚಾಲನೆ ನೀಡಲಿದ್ದು, ಅದು ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯ ಪ್ರಯೋಜನಗಳನ್ನು ರಾಜ್ಯದ ರೈತರಿಗೆ ವಿಸ್ತರಿಸಲಿದೆ. 2026–27ರ ಅವಧಿಯಲ್ಲಿ ಈ ಉಪಕ್ರಮವು ಪಶ್ಚಿಮ ಬಂಗಾಳ ರಾಜ್ಯದ ಸುಮಾರು 14 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಮಾರು 50 ಲಕ್ಷ ರೈತರಿಗೆ ವಿಮಾ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಸುಮಾರು 28,140 ಕೋಟಿ ರೂ. ಅಂದಾಜು ವಿಮೆ ಮೌಲ್ಯದೊಂದಿಗೆ ಬೆಳೆಗಳನ್ನು ರಕ್ಷಿಸುತ್ತದೆ ಮತ್ತು ಗಣನೀಯ ಪ್ರೀಮಿಯಂ ಸಬ್ಸಿಡಿ ಮೂಲಕ ರೈತರನ್ನು ಬೆಂಬಲಿಸುತ್ತದೆ.

ಡಿಜಿಟಲ್ ಕೃಷಿ ಮಿಷನ್‌ನ ಭಾಗವಾಗಿ ಪ್ರಧಾನಮಂತ್ರಿ ಅವರು ಪಶ್ಚಿಮ ಬಂಗಾಳದಲ್ಲಿ ಅಗ್ರಿಸ್ಟ್ಯಾಕ್ ಅನ್ನು ಆರಂಭಿಸಲಿದ್ದಾರೆ, ಇದು ರಸಗೊಬ್ಬರ ವಿತರಣೆ, ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು, ನೇರ ನಗದು ವರ್ಗಾವಣೆಗಳು ಮತ್ತು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯ ಅಡಿಯಲ್ಲಿ ಖರೀದಿಯಂತಹ ಕೃಷಿ ಸಂಬಂಧಿತ ಸೇವೆಗಳಿಗೆ ಏಕೀಕೃತ ಡಿಜಿಟಲ್ ವೇದಿಕೆಯನ್ನು ಸಕ್ರಿಯಗೊಳಿಸುತ್ತದೆ. ಈ ಉಪಕ್ರಮವು ಕೃಷಿಯಲ್ಲಿ ಡಿಜಿಟಲ್ ಆಡಳಿತವನ್ನು ಬಲಪಡಿಸುತ್ತದೆ ಮತ್ತು ರೈತ ಕೇಂದ್ರಿತ ಸೇವೆಗಳ ಪರಿಣಾಮಕಾರಿ ವಿತರಣೆಯನ್ನು ಸುಗಮಗೊಳಿಸುತ್ತದೆ.

ಅಲ್ಲದೆ, ಪ್ರಧಾನಮಂತ್ರಿ ಸಾಂಪ್ರದಾಯಿಕ ಭಾರತೀಯ ಪದ್ಧತಿಗಳಲ್ಲಿ ಬೇರೂರಿರುವ ಸುಸ್ಥಿರ, ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸಲು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಗೆ ಚಾಲನೆ ನೀಡಲಿದ್ದಾರೆ. 2026-27ರ ಅನುಮೋದಿತ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ, ರಾಜ್ಯವು 17,300 ಹೆಕ್ಟೇರ್‌ಗಳಲ್ಲಿ 346 ನೈಸರ್ಗಿಕ ಕೃಷಿ ಕ್ಲಸ್ಟರ್‌ಗಳನ್ನು ಸ್ಥಾಪಿಸಲಿದೆ, ಜೊತೆಗೆ ಜೈವಿಕ-ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು ರೂಪಿಸಲಿದೆ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಅಳವಡಿಕೆಯನ್ನು ಬಲಪಡಿಸಲು ಕೃಷಿ ಸಖಿಗಳನ್ನು ಸಜ್ಜುಗೊಳಿಸಲಿದೆ.

ಸಮಗ್ರ ಕೃಷಿ ಅಭಿವೃದ್ಧಿಯತ್ತ ಒಂದು ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (ಪಿಎಂಡಿಡಿಕೆವೈ) ಜಾರಿಗೆ ಚಾಲನೆ ನೀಡುವರು. ಈ ಯೋಜನೆಯು ಪುರುಲಿಯಾ, ಡಾರ್ಜಿಲಿಂಗ್, ಅಲಿಪುರ್ದಾರ್ ಮತ್ತು ಜಾರ್ಗ್ರಾಮ್ ಜಿಲ್ಲೆಗಳನ್ನು ಒಳಗೊಳ್ಳಲಿದ್ದು, ಕೃಷಿ ಉತ್ಪಾದಕತೆಯನ್ನು ಸುಧಾರಿಸುವುದು, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು, ಕೊಯ್ಲಿನ ನಂತರದ ಮೂಲಸೌಕರ್ಯ ಮತ್ತು ನೀರಾವರಿ ಸೌಲಭ್ಯಗಳನ್ನು ಬಲಪಡಿಸುವುದು, ಸಾಂಸ್ಥಿಕ ಸಾಲಕ್ಕೆ ಲಭ್ಯತೆಯನ್ನು ಹೆಚ್ಚಿಸುವುದು ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಬಹು ಕೇಂದ್ರ ಮತ್ತು ರಾಜ್ಯ ಯೋಜನೆಗಳ ಸಂಯೋಜನೆಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತದೆ.

ಪ್ರಧಾನಮಂತ್ರಿ ಅವರು ದಕ್ಷಿಣ 24 ಪರಗಣದ ಫ್ರೇಸರ್‌ಗಂಜ್‌ನಲ್ಲಿ ಆಧುನೀಕರಿಸಿದ ಮತ್ತು ಸಾಮರ್ಥ್ಯ ವಿಸ್ತರಿಸಿದ ಮೀನುಗಾರಿಕೆ ಬಂದರನ್ನು ಮತ್ತು ಬಿರ್ಭೂಮ್‌ನ ಸೈಂಥಿಯಾದಲ್ಲಿ ಹೊಸದಾಗಿ ನಿರ್ಮಿಸಲಾದ ಆಧುನಿಕ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ಮೀನುಗಾರಿಕೆ ಮೂಲಸೌಕರ್ಯವನ್ನು ಬಲಪಡಿಸುತ್ತವೆ, ಕೊಯ್ಲಿನ ನಂತರದ ನಿರ್ವಹಣೆಯನ್ನು ಸುಧಾರಿಸುತ್ತವೆ ಮತ್ತು ಮೀನು ಉತ್ಪಾದಕರು ಮತ್ತು ವ್ಯಾಪಾರಿಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುತ್ತವೆ.

ನಾಡಿಯಾ ಜಿಲ್ಲೆಯ ಹರಿಂಗಟಾದಲ್ಲಿ ಪ್ರಧಾನಮಂತ್ರಿಯವರು ಪ್ರಾದೇಶಿಕ ವೀರ್ಯ ಉತ್ಪಾದನಾ ಪ್ರಯೋಗಾಲಯ ಮತ್ತು ಮೇಕೆಗಳಿಗಾಗಿ ವೀರ್ಯ ಬ್ಯಾಂಕ್ ಅನ್ನು ಉದ್ಘಾಟಿಸಲಿದ್ದಾರೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಸ್ಥಾಪಿಸಲಾದ ಇದು ಪೂರ್ವ ಭಾರತದಲ್ಲಿ ಮೊದಲನೆಯದು ಮತ್ತು ವೈಜ್ಞಾನಿಕ ಜಾನುವಾರು ಸಂತಾನೋತ್ಪತ್ತಿ, ಆನುವಂಶಿಕ ಸುಧಾರಣೆ ಮತ್ತು ವರ್ಧಿತ ಉತ್ಪಾದಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ

ಪ್ರಧಾನಮಂತ್ರಿ ಅವರು ಸುಮಾರು 590 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಹೌರಾ ಜಿಲ್ಲೆಯಲ್ಲಿ ಸಂಕ್ರೈಲ್-ಸಂತ್ರಗಚಿ ಲಿಂಕ್ ಲೈನ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪೂರ್ವ ಭಾರತದ ಅತ್ಯಂತ ಜನನಿಬಿಡ ರೈಲು ಕಾರಿಡಾರ್‌ಗಳಲ್ಲಿ ಒಂದಾದ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಮತ್ತು ಪ್ರಯಾಣಿಕ ಮತ್ತು ಸರಕು ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಈ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಹೌರಾದಲ್ಲಿ 300 ಹಾಸಿಗೆಗಳ ಹೊಸ ವಿಭಾಗೀಯ ರೈಲ್ವೆ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆಧುನಿಕ ಆರೋಗ್ಯ ಮೂಲಸೌಕರ್ಯ, ಸುಧಾರಿತ ರೋಗಪತ್ತೆ ಸೌಲಭ್ಯಗಳು, ತಜ್ಞ ವೈದ್ಯಕೀಯ ಸೇವೆಗಳು ಮತ್ತು ತುರ್ತು ಆರೈಕೆ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆಯು ರೈಲ್ವೆ ಫಲಾನುಭವಿಗಳು ಮತ್ತು ಈ ಪ್ರದೇಶದ ಜನರಿಗೆ ಆರೋಗ್ಯ ಸೇವೆಗಳನ್ನು ಗಮನಾರ್ಹವಾಗಿ ಬಲಪಡಿಸುತ್ತದೆ.

ಪುರ್ಬಾ ಮೇದಿನಿಪುರ ಜಿಲ್ಲೆಯ ಹೌರ್ ಮತ್ತು ರಾಧಾಮೋಹನಪುರ ನಡುವಿನ ರಸ್ತೆ ಮೇಲ್ಸೇತುವೆಗೂ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು ರೈಲು ಮತ್ತು ರಸ್ತೆ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಸುಗಮ ಮತ್ತು ಅಡೆತಡೆಯಿಲ್ಲದ ಸಂಚಾರಕ್ಕೆ ಅನುಕೂಲವಾಗುತ್ತದೆ.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ -III) ಅಡಿಯಲ್ಲಿ ಅಭಿವೃದ್ಧಿಪಡಿಸಲಾದ 49 ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 315 ಕಿಲೋಮೀಟರ್‌ಗಳಿಗೂ ಅಧಿಕ ಉದ್ದವನ್ನು ಒಳಗೊಂಡ ಈ ಯೋಜನೆಗಳು ಗ್ರಾಮೀಣ ಸಂಪರ್ಕವನ್ನು ಸುಧಾರಿಸುತ್ತದೆ. ಮಾರುಕಟ್ಟೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸೌಲಭ್ಯಗಳಿಗೆ ಲಭ್ಯತೆಯನ್ನು ಸುಗಮಗೊಳಿಸುತ್ತದೆ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

ಈ ಯೋಜನೆಗಳು ಒಟ್ಟಾರೆ ಪಶ್ಚಿಮ ಬಂಗಾಳದಾದ್ಯಂತ ಮೂಲಸೌಕರ್ಯವನ್ನು ಬಲವರ್ಧನೆಗೊಳಿಸಲಿವೆ, ರೈತರನ್ನು ಸಬಲೀಕರಣಗೊಳಿಸಲಿವೆ, ಜೀವನೋಪಾಯವನ್ನು ವೃದ್ಧಿಸಲಿವೆ ಮತ್ತು ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವತ್ತ ಒಂದು ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತವೆ. ಈ ಉಪಕ್ರಮಗಳು ಸಮಗ್ರ ಬೆಳವಣಿಗೆ, ಆಧುನಿಕ ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ವಿಕಸಿತ ಪಶ್ಚಿಮ ಬಂಗಾಳ ಮತ್ತು ವಿಕಸಿತ ಭಾರತದ ದೂರದೃಷ್ಟಿಯ ಸಾಕಾರಾಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಲಿವೆ.

ಕೋಲ್ಕತ್ತಾದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋಲ್ಕತ್ತಾದ ರೆಡ್ ರೋಡ್ ನಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನದ ರಾಷ್ಟ್ರೀಯ ಆಚರಣೆಯ ನೇತೃತ್ವ ವಹಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಸಾವಿರಾರು ಯೋಗ ಸಾಧಕರೊಂದಿಗೆ ಸಾಮಾನ್ಯ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

2026ರ ಅಂತಾರಾಷ್ಟ್ರೀಯ ಯೋಗ ದಿನದ ವಿಷಯವಾದ ”ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’’ ಎಂಬುದಾಗಿದ್ದು, ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ, ಭಾವನಾತ್ಮಕ ಸ್ಥಿತಿಸ್ಥಾಪಕತ್ವ ಮತ್ತು ಸಕ್ರಿಯ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇದರಿಂದಾಗಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಕೊಡುಗೆ ನೀಡುತ್ತದೆ. ಜೀವಿತಾವಧಿಯನ್ನು ಹೆಚ್ಚಿಸುವ ಮತ್ತು ಆರೋಗ್ಯಕರ, ಸಕ್ರಿಯ ಮತ್ತು ಗೌರವಯುತ ವೃದ್ಧಾಪ್ಯಕ್ಕೆ ಹೆಚ್ಚಿನ ಒತ್ತು ನೀಡುವ ಯುಗದಲ್ಲಿ ಈ ವಿಷಯವು ವಿಶೇಷವಾಗಿ ಪ್ರಸ್ತುತವಾಗಿದೆ. 2015ರಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನ (ಯು ಎನ್ ಜಿ ಎ) ಜೂನ್ 21 ಅನ್ನು ಐಡಿವೈ ಆಗಿ ಆಚರಿಸುವ ಭಾರತದ ಪ್ರಸ್ತಾಪವನ್ನು ಅಂಗೀಕರಿಸಿದ ಬಳಿಕ ಪ್ರಧಾನಮಂತ್ರಿಗಳು ನವದೆಹಲಿ, ಚಂಡೀಗಢ, ಲಕ್ನೋ, ಮೈಸೂರು, ನ್ಯೂಯಾರ್ಕ್ (ವಿಶ್ವಸಂಸ್ಥೆಯ ಪ್ರಧಾನ ಕಚೇರಿ) ಮತ್ತು ಶ್ರೀನಗರ ಮತ್ತು ವಿಶಾಖಪಟ್ಟಣಂ ಸೇರಿದಂತೆ ವಿವಿಧ ಸ್ಥಳಗಳಿಂದ ಅಂತಾರಾಷ್ಟ್ರೀಯ ಯೋಗಾದಿನಾಚರಣೆಗಳ ನೇತೃತ್ವ ವಹಿಸಿದ್ದಾರೆ.

ವಿಶ್ವಾದ್ಯಂತ ಸುಮಾರು 2,500 ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸಲಾಗುತ್ತಿದ್ದು, 210 ಕ್ಕೂ ಅಧಿಕ ಭಾರತೀಯ ಮಿಷನ್‌ಗಳು ಮತ್ತು ಕಚೇರಿಗಳಲ್ಲಿ ಭಾಗವಹಿಸುವಿಕೆಯೊಂದಿಗೆ ಆರೋಗ್ಯ, ಸಾಮರಸ್ಯ ಮತ್ತು ಸಾಮೂಹಿಕ ಯೋಗಕ್ಷೇಮಕ್ಕಾಗಿ ಜಾಗತಿಕ ಆಂದೋಲನವಾಗಿ ಯೋಗದ ಸ್ಥಾನಮಾನವನ್ನು ಪುನರುಚ್ಚರಿಸುತ್ತದೆ.

ಪ್ರಧಾನಮಂತ್ರಿ ಅವರು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಿದ ಮೂರು ನೌಕಾ ಹಡಗುಗಳನ್ನು ಸಹ ನಿಯೋಜಿಸಲಿದ್ದಾರೆ - ಸುಧಾರಿತ ರಹಸ್ಯ ಯುದ್ಧನೌಕೆ ಐಎನ್ಎಸ್ ದುನಗಿರಿ, ಸಮೀಕ್ಷೆ ಹಡಗು (ದೊಡ್ಡದು) ಐಎನ್ಎಸ್ ಸಂಶೋಧಕ್ ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ಆಳವಿಲ್ಲದ ನೀರಿನ ನೌಕೆ ಐಎನ್ಎಸ್ ಅಗ್ರೇ.

ಈ ಸೇರ್ಪಡೆಗಳು ರಾಷ್ಟ್ರದ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಸಾಗರ  ಜಾಗೃತಿಯನ್ನು ಹೆಚ್ಚಿಸುತ್ತವೆ ಮತ್ತು ಭೌಗೋಳಿಕ ರಾಜಕೀಯ ಬೆದರಿಕೆಗಳ ವಿರುದ್ಧ ನಮ್ಮ ಕರಾವಳಿ ನೀರಿನ ಸುರಕ್ಷತೆಯನ್ನು ಬಲಪಡಿಸುತ್ತವೆ.

ಈ ಮೂರು ಹಡಗುಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ ಮತ್ತು ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ (ಜಿಆರ್‌ಎಸ್‌ಇ) ನಿರ್ಮಿಸಿದೆ, ಇದರಲ್ಲಿ 200ಕ್ಕೂ ಅಧಿಕ ಎಂಎಸ್‌ಎಂಇಗಳು ಸೇರಿ ಭಾರತೀಯ ಉದ್ಯಮದ ವ್ಯಾಪಕ ಭಾಗವಹಿಸುವಿಕೆ ಇದೆ. ಶೇಕಡ 75 ಕ್ಕಿಂತ ಅಧಿಕ ಸ್ಥಳೀಯ ವಿಷಯದೊಂದಿಗೆ ಈ ಹಡಗುಗಳು ಆತ್ಮನಿರ್ಭರ ಭಾರತಕ್ಕೆ ದೇಶದ ಬದ್ಧತೆಗೆ ಸಾಕ್ಷಿಯಾಗಿದೆ.

 

*****


(रिलीज़ आईडी: 2275308) आगंतुक पटल : 9
इस विज्ञप्ति को इन भाषाओं में पढ़ें: Bengali , Assamese , English , Urdu , Marathi , हिन्दी , Punjabi , Gujarati , Tamil , Telugu