ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ಲೋವಾಕಿಯಾ ಪ್ರಧಾನಮಂತ್ರಿ ಜತೆ ನೀಡಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿ ಮೋದಿ ಹೇಳಿಕೆ

प्रविष्टि तिथि: 15 JUN 2026 4:58PM by PIB Bengaluru

ಗೌರವಾನ್ವಿತರೆ,

ಪ್ರಧಾನ ಮಂತ್ರಿ ಫಿಕೊ,

ಎರಡೂ ದೇಶಗಳ ಪ್ರತಿನಿಧಿಗಳೆ,

ಮಾಧ್ಯಮ ಸ್ನೇಹಿತರೆ,

ನಮಸ್ಕಾರ!

“ಎಲ್ಲರಿಗೂ ಸ್ವಾಗತ”

 

ನಮಗೆ ನೀಡಿದ ಆತ್ಮೀಯ ಮತ್ತು ಪ್ರೀತಿಯ ಸ್ವಾಗತಕ್ಕಾಗಿ ಪ್ರಧಾನ ಮಂತ್ರಿ ಫಿಕೊ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ಅವರು ಅನುಭವಿ ನಾಯಕರಷ್ಟೇ ಅಲ್ಲ, ಭಾರತದ ನಿಜವಾದ ಸ್ನೇಹಿತರೂ ಹೌದು. ಅವರ ಸ್ನೇಹ ಮತ್ತು ಅಚಲ ಬದ್ಧತೆಯು ಭಾರತ-ಸ್ಲೋವಾಕಿಯಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇಂದು ನಾನು ಅವರನ್ನು ಭೇಟಿ ಮಾಡಿರುವುದು ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಐತಿಹಾಸಿಕ ಕ್ಷಣವನ್ನು ಕಾಣುವ ಸೌಭಾಗ್ಯ ನನಗೆ ಸಿಕ್ಕಿದೆ ಎಂಬುದರಿಂದ ನನಗೆ ಸಂತೋಷವಾಗಿದೆ.

ನನ್ನ ಈ ಭೇಟಿಯು ಸ್ಲೋವಾಕಿಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ನಮ್ಮ ಸಂಬಂಧವನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ ಎಂಬುದರಿಂದಲೂ ನನಗೆ ಸಂತೋಷವಾಗಿದೆ. ಇದು ನಮ್ಮ ಹಂಚಿಕೆಯ ನಂಬಿಕೆ, ಹಂಚಿಕೆಯ ಆದ್ಯತೆಗಳು ಮತ್ತು ಹಂಚಿಕೆಯ ಭವಿಷ್ಯವನ್ನು ಪ್ರತಿಬಿಂಬಿಸುತ್ತಿದೆ.

ಸ್ನೇಹಿತರೆ,

ಇಂದು ಪ್ರಧಾನಮಂತ್ರಿ ಮತ್ತು ನಾನು ನಮ್ಮ ಸಹಕಾರಕ್ಕೆ ಹೊಸ ನಿರ್ದೇಶನ ಮತ್ತು ಪರಿಷ್ಕೃತ ಆವೇಗ ನೀಡುವ ಕುರಿತು ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ನಮ್ಮ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಹಕಾರದಲ್ಲಿ ಆಗುತ್ತಿರುವ ಪ್ರಗತಿ ನಮಗೆ ತೃಪ್ತಿಯ ವಿಷಯವಾಗಿದೆ.

ಆದಾಗ್ಯೂ, ನಮ್ಮ ಸಾಮರ್ಥ್ಯಗಳು ವಿಶಾಲವಾಗಿವೆ, ನಮ್ಮ ಆಕಾಂಕ್ಷೆಗಳು ಇನ್ನೂ ಹೆಚ್ಚಿವೆ. ಆಟೋಮೊಬೈಲ್ಸ್, ರೈಲ್ವೆ, ಮುಂದುವರಿದ ಉತ್ಪಾದನೆ ಮತ್ತು ಹಸಿರು ತಂತ್ರಜ್ಞಾನಗಳು ನಮಗೆ ನಿರ್ದಿಷ್ಟ ಆಸಕ್ತಿಯ ಕ್ಷೇತ್ರಗಳಾಗಿವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಜನರ ಕಲ್ಯಾಣಕ್ಕಾಗಿ ನಮ್ಮ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಮೂಲಕ ನಾವು ಇಂದು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ.

ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ)ವನ್ನು ಅಂತಿಮಗೊಳಿಸುವಲ್ಲಿ ಸ್ಲೋವಾಕಿ ನೀಡಿರುವ ಬೆಂಬಲಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ನಾನು ನನ್ನ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಎರಡೂ ದೇಶಗಳ ಕೈಗಾರಿಕೆಗಳು, ನವೋದ್ಯಮಗಳು ಮತ್ತು ವ್ಯಾಪಾರ ವ್ಯವಹಾರಗಳು ಅದರಿಂದ ಗರಿಷ್ಠ ಪ್ರಯೋಜನ ಪಡೆಯುವ ರೀತಿಯಲ್ಲಿ ನಾವು ಅದರ ಆರಂಭಿಕ ಅನುಷ್ಠಾನಕ್ಕೆ ಕೆಲಸ ಮಾಡುತ್ತೇವೆ.

ಸ್ನೇಹಿತರೆ,

ತಂತ್ರಜ್ಞಾನವು ನಮ್ಮ ಭವಿಷ್ಯದ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿದೆ. ಡಿಜಿಟಲ್ ತಂತ್ರಜ್ಞಾನ ಕುರಿತು ಇಂದು ಸಹಿ ಹಾಕಲಾದ ಒಪ್ಪಂದವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದ ಸಹಕಾರದಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಸ್ಲೋವಾಕಿಯಾದ ವಿಶ್ವವಿದ್ಯಾಲಯವೊಂದರಲ್ಲಿ ಎಐ ಕುರಿತ ಭಾರತದ ಅಧ್ಯಕ್ಷ ಪೀಠ ಸ್ಥಾಪಿಸಲಾಗುತ್ತಿದೆ ಎಂಬ ವಿಷಯದಿಂದ ನನಗೆ ಸಂತೋಷವಾಗಿದೆ. ಎಐ ಮನುಕುಲದ ಸೇವೆ ಮತ್ತು ಪ್ರಗತಿಗೆ ಪ್ರಬಲ ಸಾಧನವಾಗಬೇಕು ಎಂಬುದು ನಮ್ಮ ಹಂಚಿಕೆಯ ನಂಬಿಕೆಯಾಗಿದೆ. ಎಐನ ಭವಿಷ್ಯವು ನಾವೀನ್ಯತೆ ಮೇಲೆ ಮಾತ್ರವಲ್ಲದೆ ನಂಬಿಕೆ, ಜವಾಬ್ದಾರಿ ಮತ್ತು ಮಾನವ ಘನತೆಯ ಮೇಲೂ ನೆಲೆಗೊಳ್ಳಬೇಕು ಎಂದು ನಾವು ನಂಬುತ್ತೇವೆ.

ಬಾಹ್ಯಾಕಾಶ ವಲಯದಲ್ಲಿ ನಮ್ಮ ಸಹಕಾರ ವಿಸ್ತರಿಸಲು ಅಪಾರ ಸಾಮರ್ಥ್ಯವಿದೆ. 2017ರಲ್ಲಿ ಸ್ಲೋವಾಕಿಯಾದ ಮೊದಲ ಉಪಗ್ರಹವನ್ನು ಭಾರತ ಉಡಾವಣೆ ಮಾಡಿತು. ಇಂದು ಭಾರತದ ಬಾಹ್ಯಾಕಾಶ ವಲಯವು ಹಿಂದೆಂದೂ ಕಾಣದ ವೇಗದಲ್ಲಿ ಹೊಸ ಎತ್ತರ ತಲುಪುತ್ತಿದೆ. ಈ ಬೆಳವಣಿಗೆಯ ಪ್ರಯಾಣದ ಭಾಗವಾಗಲು ನಾನು ಸ್ಲೋವಾಕ್ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇನೆ.

ನಾಗರಿಕ ಪರಮಾಣು ಇಂಧನವು ಎರಡೂ ದೇಶಗಳಿಗೆ ಆದ್ಯತೆಯ ಪ್ರಮುಖ ಕ್ಷೇತ್ರವಾಗಿದೆ. ಈ ವಲಯದಲ್ಲಿ ಎರಡೂ ರಾಷ್ಟ್ರಗಳ ಕೈಗಾರಿಕೆಗಳು ಮತ್ತು ತಜ್ಞರ ನಡುವಿನ ಸಹಕಾರ ಹೆಚ್ಚಿಸಲು ನಾವು ಒತ್ತು ನೀಡಿದ್ದೇವೆ.

ರಕ್ಷಣಾ ಸಹಕಾರವು ನಮ್ಮ ಆಳವಾದ ಪರಸ್ಪರ ನಂಬಿಕೆ ಮತ್ತು ಕಾರ್ಯತಂತ್ರ ಒಮ್ಮುಖದ ಪ್ರತಿಬಿಂಬವಾಗಿದೆ. ಈ ಪ್ರಮುಖ ವಲಯದಲ್ಲಿ ಇಂದು ನಾವು ಉದ್ದೇಶ ಪತ್ರಕ್ಕೆ ಸಹಿ ಹಾಕಿದ್ದೇವೆ ಎಂಬುದರಿಂದ ನನಗೆ ಸಂತೋಷವಾಗಿದೆ. ಇದು ಎರಡೂ ದೇಶಗಳ ರಕ್ಷಣಾ ಕೈಗಾರಿಕೆಗಳ ನಡುವಿನ ಜಂಟಿ ಅಭಿವೃದ್ಧಿ, ಜಂಟಿ ಉತ್ಪಾದನೆ ಮತ್ತು ಸಹಕಾರಕ್ಕೆ ಹೊಸ ಆವೇಗ ನೀಡುತ್ತದೆ.

ಸ್ನೇಹಿತರೆ,

ಭಾರತ ಮತ್ತು ಸ್ಲೋವಾಕಿಯಾ ಕೂಡ ಜಾಗತಿಕ ವೇದಿಕೆಯಲ್ಲಿ ನಿಕಟ ಸಮನ್ವಯದಲ್ಲಿ ಮುಂದುವರಿಯುತ್ತಿವೆ. ಎಲ್ಲಾ ವಿವಾದಗಳು ಮತ್ತು ಉದ್ವಿಗ್ನತೆಗಳನ್ನು ಶಾಂತಿಯುತ ಕಾರ್ಯವಿಧಾನಗಳ ಮೂಲಕ ಪರಿಹರಿಸಬೇಕು ಎಂಬುದನ್ನು ನಾವು ಒಪ್ಪುತ್ತೇವೆ. ನಮ್ಮ ಎಲ್ಲಾ ಪಾಲುದಾರರೊಂದಿಗೆ ನಾವು ಈ ದಿಕ್ಕಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.

21ನೇ ಶತಮಾನದ ವಾಸ್ತವತೆಗಳು ಮತ್ತು ಸವಾಲುಗಳಿಗೆ ಅನುಗುಣವಾಗಿ ಜಾಗತಿಕ ಸಂಸ್ಥೆಗಳು ತಮ್ಮನ್ನು ತಾವು ಮರು ವ್ಯಾಖ್ಯಾನಿಸಿಕೊಳ್ಳಬೇಕು ಎಂಬುದನ್ನು ಸಹ ನಾವು ಒಪ್ಪುತ್ತೇವೆ. ಈ ವಿಷಯದ ಬಗ್ಗೆ ಜಾಗತಿಕ ಪ್ರಯತ್ನಗಳನ್ನು ಬಲಪಡಿಸುವತ್ತ ನಾವು ಕೆಲಸ ಮಾಡುತ್ತೇವೆ.

ಸ್ನೇಹಿತರೆ,

ನಮ್ಮ 2 ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ನಮ್ಮ ಸಂಬಂಧಕ್ಕೆ ಬಲವಾದ ಅಡಿಪಾಯ ಒದಗಿಸುತ್ತವೆ. ಭಾರತದ ಪ್ರಾಚೀನ ಉಪನಿಷತ್ತುಗಳನ್ನು ಸ್ಲೋವಾಕ್ ಭಾಷೆಗೆ ಅನುವಾದಿಸುವುದು ನಮ್ಮ ಸಾಂಸ್ಕೃತಿಕ ನಿಕಟತೆಗೆ ಅತ್ಯುತ್ತಮ ಉದಾಹರಣೆಯಾಗಿದೆ.

ಸ್ಲೋವಾಕಿಯಾದಲ್ಲಿ ವಾಸಿಸುವ ಭಾರತೀಯ ಮೂಲದ ಜನರು ಅದರ ಆರ್ಥಿಕತೆ ಮತ್ತು ಸಮಾಜಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಮ್ಮ ಎರಡೂ ದೇಶಗಳ ನಡುವೆ ವೃತ್ತಿಪರರು ಮತ್ತು ನುರಿತ ಕಾರ್ಮಿಕರ ಚಲನಶೀಲತೆ ಹೆಚ್ಚಿಸಲು, ನಾವು ಇಂದು ಕಾರ್ಮಿಕ ವಲಸೆಯ ಒಪ್ಪಂದವನ್ನು ಘೋಷಿಸಿದ್ದೇವೆ. ಸಾಮಾಜಿಕ ಭದ್ರತೆಯ ಒಪ್ಪಂದವನ್ನು ನಾವು ಶೀಘ್ರದಲ್ಲೇ ಅಂತಿಮಗೊಳಿಸುತ್ತೇವೆ.

ಗೌರವಾನ್ವಿತರೆ,

ಇಂದಿನ ಅತ್ಯಂತ ಅರ್ಥಪೂರ್ಣ ಚರ್ಚೆಗಳಿಗೆ ಮತ್ತು ಭಾರತದ ಬಗ್ಗೆ ನಿಮ್ಮ ಸಕಾರಾತ್ಮಕ ದೃಷ್ಟಿಕೋನಕ್ಕಾಗಿ ನಾನು ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ಯನ್ನು ವ್ಯಕ್ತಪಡಿಸುತ್ತೇನೆ.

140 ಕೋಟಿ ಭಾರತೀಯರ ಪರವಾಗಿ ಭಾರತಕ್ಕೆ ಭೇಟಿ ನೀಡುವಂತೆ ನಾನು ನಿಮಗೆ ಆಹ್ವವನ್ನು ನೀಡುತ್ತೇನೆ. ನೀವು ಈ ಆಹ್ವಾನವನ್ನು ಸ್ವೀಕರಿಸಿದ್ದೀರಿ ಎಂಬುದರಿಂದ ನನಗೆ ಸಂತೋಷವಾಗಿದೆ. ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ.

ನಮ್ಮ ಸಮಗ್ರ ಸಹಭಾಗಿತ್ವವು ಮುಂಬರುವ ವರ್ಷಗಳಲ್ಲಿ ನಮ್ಮ ಜನರಿಗೆ ಹೊಸ ಅವಕಾಶಗಳು, ಹಂಚಿಕೆಯ ಸಮೃದ್ಧಿ ಮತ್ತು ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ.

ತುಂಬು ಧನ್ಯವಾದಗಳು, ನಮಸ್ಕಾರ.

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಹೇಳಿಕೆ ನೀಡಿದ್ದಾರೆ.

 

*****

 


(रिलीज़ आईडी: 2273518) आगंतुक पटल : 5
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Telugu , Malayalam