ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ನವದೆಹಲಿಯಲ್ಲಿ ಭೂ ಬಂದರು ನಿರ್ವಹಣಾ ವ್ಯವಸ್ಥೆಗೆ (ವಿನಿಮಯ್) ಚಾಲನೆ


ಭಾರತದ ಅತ್ಯಂತ ದೀರ್ಘಾವಧಿಯ ಸತತವಾಗಿ ಆಯ್ಕೆಯಾದ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಮೋದಿಜಿ ನಾಳೆ ಪಾತ್ರರಾಗಲಿದ್ದಾರೆ; ಇದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ

ಎಲ್ ಪಿ ಎಂ ಎಸ್ ಮತ್ತು ಸ್ಮಾರ್ಟ್ ಬಾರ್ಡರ್ಸ್ ಒಟ್ಟಾಗಿ ಹೆಚ್ಚು ಸುರಕ್ಷಿತ ಮತ್ತು ಆಧುನಿಕ ಗಡಿ ನಿರ್ವಹಣಾ ವ್ಯವಸ್ಥೆಯನ್ನು ನಿರ್ಮಿಸಲಿವೆ; ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ದೃಢ ಹಾಗೂ ಸುರಕ್ಷಿತ ಚೌಕಟ್ಟನ್ನು ಖಚಿತಪಡಿಸುವುದು ನಿಶ್ಚಿತ

ನಾಲ್ಕು ಆಯಾಮಗಳ ಗಡಿ ಭದ್ರತಾ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿ ಭೂ ಬಂದರುಗಳ ಪ್ರಾಧಿಕಾರ ಹೊರಹೊಮ್ಮುತ್ತಿದೆ

ಭೂ ಬಂದರು ನಿರ್ವಹಣಾ ವ್ಯವಸ್ಥೆ (ಎಲ್ ಪಿ ಎಂ ಎಸ್) ಚಾಲನೆ: ಶೇಕಡಾ 90 ರಷ್ಟು ಕಾಗದದಪತ್ರದ ಕೆಲಸಗಳ ನಿರ್ಮೂಲನೆ, ಸಿಂಗಲ್ ಎಲೆಕ್ಟ್ರಾನಿಕ್ ವಿಂಡೋ ಪರಿಚಯ, ಮತ್ತು ಪ್ರಕ್ರಿಯೆಯ ಸಮಯದಲ್ಲಿ ಶೇಕಡಾ 40–60 ರಷ್ಟು ಕಡಿತ; ಸ್ಮಾರ್ಟ್ ಗಡಿಗಳಿಗಾಗಿ ಹೊಸ ಡಿಜಿಟಲ್ ಅಡಿಪಾಯ

ದೇಶದಾದ್ಯಂತ ಪ್ರಸ್ತುತ ಹದಿನೈದು ಭೂ ಬಂದರುಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇನ್ನೂ 11 ಭೂ ಬಂದರುಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ

ಗಡಿ ಜಿಲ್ಲೆಗಳಿಂದ ವಲಸೆಯನ್ನು ಕಡಿಮೆ ಮಾಡುವಲ್ಲಿ, ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮತ್ತು ಗಡಿಗಳಲ್ಲಿ  ಸಾಂಸ್ಕೃತಿಕ ಹಾಗೂ ಜನರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವಲ್ಲಿ ಭೂ ಬಂದರುಗಳು ಪ್ರಮುಖ ಪಾತ್ರ ವಹಿಸುತ್ತಿವೆ

ಭೂ ಬಂದರು ವ್ಯಾಪಾರವು 2014 ರಲ್ಲಿ ₹5,000 ಕೋಟಿಯಿಂದ ಇಂದು ₹83,000 ಕೋಟಿಗೆ ಬೆಳೆದಿದೆ—ಮೋದಿ ಸರ್ಕಾರದ 12 ವರ್ಷಗಳ ಅವಧಿಯಲ್ಲಿ 16 ಪಟ್ಟು ಹೆಚ್ಚಳವಾಗಿದೆ

ಎಲ್ ಪಿ ಎಂ ಎಸ್ ಮೂಲಕ, ಒಂದೇ ವೇದಿಕೆಯಲ್ಲಿ ಐಸ್ ಗೇಟ್ (ICEGATE), ಮೋಟಾರು ವಾಹನ ವ್ಯವಸ್ಥೆ, ಸಿಬಿಐಸಿ, ಬಿ ಎಸ್ ಎಫ್, ಡಿಜಿಎಫ್ ಟಿ, ಯುಐಡಿಎಐ ಮತ್ತು ಯುಲಿಪ್ ನಡುವೆ ನೈಜ-ಸಮಯದ  ದತ್ತಾಂಶ ಹಂಚಿಕೆಯು ಗಡಿ ಸಂಸ್ಥೆಗಳ ನಡುವಿನ ಸಮನ್ವಯವನ್ನು ಬಲಪಡಿಸುತ್ತದೆ ಮತ್ತು ಗಡಿ ನಿರ್ವಹಣೆಯ ದಕ್ಷತೆ, ಭದ್ರತೆ ಹಾಗೂ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ

ಸರಕು ನಿರ್ವಹಣೆ, ವಾಹನ ಪ್ರಕ್ರಿಯೆ ಮತ್ತು ಸಂಸ್ಥೆಗಳ ನಡುವಿನ ಸಮನ್ವಯವನ್ನು ಈಗ ಒಂದೇ ವೇದಿಕೆಯಲ್ಲಿ ಸಂಯೋಜಿಸಿರುವುದರಿಂದ, ಎಲ್ ಪಿ ಎಂ ಎಸ್ ಭೂ ಬಂದರುಗಳನ್ನು ದೇಶದ ಭದ್ರತಾ ವ್ಯವಸ್ಥೆಯ ಪ್ರಮುಖ ಅಂಗವಾಗಿ ಪರಿವರ್ತಿಸಿದೆ

प्रविष्टि तिथि: 09 JUN 2026 8:22PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಭೂ ಬಂದರು ನಿರ್ವಹಣಾ ವ್ಯವಸ್ಥೆಗೆ (ಎಲ್ ಪಿ ಎಂ ಎಸ್ – ‘ವಿನಿಮಯ್’) ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋದ ನಿರ್ದೇಶಕರು, ಕಾರ್ಯದರ್ಶಿ (ಗಡಿ ನಿರ್ವಹಣೆ) ಮತ್ತು ಭಾರತೀಯ ಭೂ ಬಂದರುಗಳ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, 2014ರ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭೂ ಬಂದರು ಪ್ರಾಧಿಕಾರಕ್ಕೆ ಹೊಸ ನಿರ್ದೇಶನವನ್ನು ನೀಡಲಾಯಿತು. ಕೇವಲ ಭದ್ರತಾ ಕೇಂದ್ರಿತ ವಿಧಾನವಲ್ಲದೆ, ಭೂ ಬಂದರುಗಳನ್ನು ಭದ್ರತೆಯ ಮೊದಲ ರಕ್ಷಣಾ ಗೋಡೆಯಾಗಿ, ವ್ಯಾಪಾರವನ್ನು ಸುಗಮಗೊಳಿಸುವ ಸಾಧನವಾಗಿ ಮತ್ತು ಜನರ ನಡುವಿನ ಬಾಂಧವ್ಯಕ್ಕೆ ಸೇತುವೆಯಾಗಿ ಅಭಿವೃದ್ಧಿಪಡಿಸಲಾಯಿತು. ಅದೇ ಸಮಯದಲ್ಲಿ, ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಕಾನೂನುಬದ್ಧ ವ್ಯಾಪಾರವನ್ನು ಉತ್ತೇಜಿಸುವುದು ಮತ್ತು ಗಡಿಯಲ್ಲಿರುವ ಗ್ರಾಮಗಳು ಹಾಗೂ ಜಿಲ್ಲೆಗಳಿಂದ ವಲಸೆಯಂತಹ ಸವಾಲುಗಳನ್ನು ಎದುರಿಸುವಲ್ಲಿ ಭೂ ಬಂದರುಗಳು ಮಹತ್ವದ ಪಾತ್ರವಹಿಸಿವೆ. ಗಡಿಗಳಲ್ಲಿ ಜನರ ಸುಲಭ ಸಂಚಾರವು ಉಭಯ ದೇಶಗಳ ಜನರ ನಡುವಿನ ಪರಸ್ಪರ ನಂಬಿಕೆಯನ್ನು ಬಲಪಡಿಸಿದೆ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸಿದೆ. ವಿಶಾಲವಾದ ಭೂ ಗಡಿಗಳನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಗಡಿ ನಿರ್ವಹಣೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ʻಸ್ಮಾರ್ಟ್ ಬಾರ್ಡರ್ಸ್ʼ ಪರಿಕಲ್ಪನೆಯಡಿಯಲ್ಲಿ ಭಾರತದ ಗಡಿಗಳನ್ನು ಸುರಕ್ಷಿತಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯವು ನಾಲ್ಕು ಆಯಾಮಗಳ ಕಾರ್ಯತಂತ್ರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ತಿಳಿಸಿದರು. ಈ ಸ್ಮಾರ್ಟ್ ಬಾರ್ಡರ್ ದೃಷ್ಟಿಕೋನವನ್ನು  ನೆರವೇರಿಸುವಲ್ಲಿ ಭೂ ಬಂದರುಗಳ ಪ್ರಾಧಿಕಾರವು ಪ್ರಮುಖ ಪಾತ್ರ ವಹಿಸಲಿದೆ. ಭದ್ರತೆಗೆ ವಿಶೇಷ ಒತ್ತು ನೀಡುವುದರ ಜೊತೆಗೆ, ಎಲ್ಲಾ ಪಾಲುದಾರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭೂ ಬಂದರು ನಿರ್ವಹಣಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಸ್ಮಾರ್ಟ್ ಬಾರ್ಡರ್ ಉಪಕ್ರಮದೊಂದಿಗೆ ಈ ವ್ಯವಸ್ಥೆಯು ಅಭೇದ್ಯ ಮತ್ತು ಸುರಕ್ಷಿತ ಗಡಿ ನಿರ್ವಹಣಾ ಚೌಕಟ್ಟನ್ನು ರಚಿಸಲು ಸಹಾಯ ಮಾಡುತ್ತದೆ. ಎಲ್ ಪಿ ಎಂ ಎಸ್ ಮತ್ತು ಸ್ಮಾರ್ಟ್ ಬಾರ್ಡರ್ ಉಪಕ್ರಮಗಳು ಒಟ್ಟಾಗಿ ಹೆಚ್ಚು ಸುರಕ್ಷಿತ ಮತ್ತು ಆಧುನಿಕ ಗಡಿ ನಿರ್ವಹಣಾ ವ್ಯವಸ್ಥೆಯನ್ನು ಸೃಷ್ಟಿಸಲಿವೆ ಎಂದು ಅವರು ಹೇಳಿದರು. ಇದು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮತ್ತು ದೃಢವಾದ ಹಾಗೂ ಸುರಕ್ಷಿತ ಚೌಕಟ್ಟನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.

ಭೂ ಬಂದರುಗಳ ಪ್ರಾಧಿಕಾರವು ತನ್ನ ಭೂ ಬಂದರುಗಳಿಗಾಗಿ ಆಧುನಿಕ, ಡಿಜಿಟಲ್, ಸಂಯೋಜಿತ ಮತ್ತು ನೈಜ-ಸಮಯದ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ, ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಗೆ ತಂದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಭೂ ಬಂದರು ನಿರ್ವಹಣಾ ವ್ಯವಸ್ಥೆಯ ಮೂಲಕ, ಭೂ ಬಂದರುಗಳ ಸ್ಥಾಪನೆಯ ಹಿಂದಿನ ಪ್ರಮುಖ ಉದ್ದೇಶಗಳನ್ನು ಭೂ ಬಂದರುಗಳ ಪ್ರಾಧಿಕಾರವು ಪೂರೈಸಿದೆ ಎಂದು ಅವರು ತಿಳಿಸಿದರು. ಮುಂಬರುವ ದಿನಗಳಲ್ಲಿ, ನಾವು ಭೂ ಬಂದರು ನಿರ್ವಹಣಾ ವ್ಯವಸ್ಥೆಯನ್ನು ದೇಶದ ಸ್ಮಾರ್ಟ್ ಸೆಕ್ಯುರಿಟಿ ಗ್ರಿಡ್ನ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತೇವೆ, ಇದರಿಂದಾಗಿ ನಮ್ಮ ಆರ್ಥಿಕ ಭದ್ರತೆ ಮಾತ್ರವಲ್ಲದೆ ಭೌತಿಕ ಭದ್ರತೆಯನ್ನೂ ಸಹ ಖಚಿತಪಡಿಸಿಕೊಳ್ಳುತ್ತೇವೆ. ಭೂ ಬಂದರುಗಳ ಪ್ರಾಧಿಕಾರದ ಈ ಉಪಕ್ರಮವು ಸ್ಮಾರ್ಟ್ ಬಾರ್ಡರ್ಸ್ ದೃಷ್ಟಿಕೋನವನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಈ ವ್ಯವಸ್ಥೆಯು ಸರಕು, ಪ್ರಯಾಣಿಕರು ಮತ್ತು ವಾಹನಗಳ ನಿರ್ವಹಣೆಗೆ ಸಂಯೋಜಿತ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಇದು ವಿವಿಧ ಸಂಸ್ಥೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸುತ್ತದೆ ಮತ್ತು ಮಾಹಿತಿ ವಿನಿಮಯವನ್ನು ಹೆಚ್ಚು ಸುಗಮಗೊಳಿಸುತ್ತದೆ. ಸುಮಾರು 90% ಕಾಗದಪತ್ರದ ಕೆಲಸಗಳು ಇಲ್ಲದಂತಾಗುತ್ತವೆ. ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆಯನ್ನು ಆಧರಿಸಿದ ಸಿಂಗಲ್ ಎಲೆಕ್ಟ್ರಾನಿಕ್ ವಿಂಡೋ (ಎ ಎನ್ ಪಿ ಆರ್) ಮತ್ತು ಗೇಟ್ ಆಪರೇಟಿಂಗ್ ವ್ಯವಸ್ಥೆಯು  ಗಮನಾರ್ಹ ಸಮಯವನ್ನು ಉಳಿಸುತ್ತದೆ. ಟ್ರಕ್ಗಳು ಸರದಿಯಲ್ಲಿ ಕಾಯುವ ಸಮಯ ಸುಮಾರು 40% ರಿಂದ 60% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ,  ಜೊತೆಗೆ ಗೇಟ್ ನ ಕಾರ್ಯನಿರ್ವಹಣೆಯ ಸಮಯ 22% ರಿಂದ 35% ರಷ್ಟು ಕಡಿಮೆಯಾಗುತ್ತದೆ. ಇದು ವ್ಯಾಪಾರವನ್ನು ಹೆಚ್ಚಿಸುವುದಲ್ಲದೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಉಭಯ ದೇಶಗಳ ನಾಗರಿಕರ ನಡುವೆ ಉತ್ತಮ ಸಮನ್ವಯ, ಸಂವಾದ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಸುಗಮಗೊಳಿಸುತ್ತದೆ.

ಎಲ್ ಪಿ ಎಂ ಎಸ್ಮೂಲಕ, ಸಾಮಾನ್ಯ ವೇದಿಕೆಯಲ್ಲಿ ಐಸ್ ಗೇಟ್, ಮೋಟಾರು ವಾಹನ ವ್ಯವಸ್ಥೆ, ಸಿಬಿಐಸಿ, ಬಿ ಎಸ್ ಎಫ್, ಡಿಜಿಎಫ್ ಟಿ, ಯುಐಡಿಎಐ ಮತ್ತು ಯುಲಿಪ್ ನಡುವೆ ನೈಜ-ಸಮಯದ ದತ್ತಾಂಶ ಹಂಚಿಕೆಯು ಗಡಿ ಸಂಸ್ಥೆಗಳ ನಡುವಿನ ಸಮನ್ವಯವನ್ನು ಬಲಪಡಿಸುತ್ತದೆ ಮತ್ತು ಗಡಿ ನಿರ್ವಹಣೆಯ ದಕ್ಷತೆ, ಭದ್ರತೆ ಹಾಗೂ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂದು ಗೃಹ ಸಚಿವರು ಹೇಳಿದರು. ಈ ಎಲ್ಲಾ ಪಾಲುದಾರರ ನಡುವೆ ಸಮನ್ವಯ ಮತ್ತು ಮಾಹಿತಿ ವಿನಿಮಯವನ್ನು ಸಕ್ರಿಯಗೊಳಿಸುವ ವೇದಿಕೆಯು ದೇಶಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಮತ್ತು ಅಭಿವೃದ್ಧಿಗೆ ಹೊಸ ವೇಗವನ್ನು ನೀಡುತ್ತದೆ ಎಂದು ಅವರು ಹೇಳಿದರು. ಕಳೆದ 12 ವರ್ಷಗಳಲ್ಲಿ ಭೂ ಬಂದರುಗಳು ಗಮನಾರ್ಹ ರೂಪಾಂತರಕ್ಕೆ ಒಳಗಾಗಿವೆ. 2014 ರಲ್ಲಿ ಭೂ ಬಂದರುಗಳ ಮೂಲಕ ವ್ಯಾಪಾರ ₹5,000 ಕೋಟಿಯಷ್ಟಿದ್ದರೆ, ಅದು ಈಗ ₹83,000 ಕೋಟಿಗೆ ಏರಿಕೆಯಾಗಿದ್ದು, 16 ಪಟ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಶಾ ತಿಳಿಸಿದರು. ಪ್ರಸ್ತುತ 15 ಭೂ ಬಂದರುಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಹೆಚ್ಚುವರಿ 11 ಭೂ ಬಂದರುಗಳು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಶ್ರೀ ಶಾ ಹೇಳಿದರು.

ಭೂ ಬಂದರುಗಳಿಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಂದಿರುವ ದೃಷ್ಟಿಕೋನವನ್ನು ನಿಗದಿತ ಕಾಲಮಿತಿಯೊಳಗೆ ಸಾಧಿಸಲಾಗುವುದು ಎನ್ನುವ ವಿಶ್ವಾಸವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ವ್ಯಕ್ತಪಡಿಸಿದರು. ಭೂ ಬಂದರುಗಳ ಪ್ರಾಧಿಕಾರದ ಈ ಉಪಕ್ರಮವನ್ನು ಸ್ಮಾರ್ಟ್ ಬಾರ್ಡರ್ ಪರಿಕಲ್ಪನೆಯೊಂದಿಗೆ ಸಂಯೋಜಿಸಿದಾಗ, ಭೂ ಬಂದರುಗಳ ಪ್ರಾಧಿಕಾರವು ಭಾರತದ ಆರ್ಥಿಕ ಭದ್ರತೆ ಮತ್ತು ಗಡಿ ಭದ್ರತೆ ಎರಡರಲ್ಲೂ ಪ್ರಮುಖ ಅಂಶವಾಗಿ ಹೊರಹೊಮ್ಮುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಜೂನ್ 9, 2026ರಂದು ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಸತತ 12 ವರ್ಷಗಳ ಆಡಳಿತವನ್ನು ಪೂರೈಸಿದ ದಿನ ಇದಾಗಿದೆ ಎಂದು ಅವರು ಉಲ್ಲೇಖಿಸಿದರು. ಕೆಲವು ನಾಯಕರು ತಮ್ಮ ಹೆಚ್ಚಿನ ಸಮಯವನ್ನು ಕೇವಲ ಅಧಿಕಾರದಲ್ಲಿ ಉಳಿಯಲು ಪ್ರಯತ್ನಿಸುವುದರಲ್ಲೇ ಕಳೆಯುತ್ತಾರೆ, ಆದರೆ ಮೋದಿ ಅವರು ಕಚೇರಿಯಲ್ಲಿ ಕಳೆದ 12 ವರ್ಷಗಳನ್ನು ಸಮರ್ಪಿತ ಸೇವೆಯ ಅವಧಿಯನ್ನಾಗಿ ಪರಿಗಣಿಸಿದ್ದಾರೆ ಮತ್ತು ಇಡೀ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ್ದಾರೆ ಎಂದು ಅವರು ಹೇಳಿದರು. ಮೋದಿ ಅವರು ದೇಶದ ಸೇವೆಯನ್ನೇ ತಮ್ಮ ಜೀವನದ ಪರಮೋದ್ದೇಶವನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ದೇಶವನ್ನು ಮುನ್ನಡೆಸಲು ಬದ್ಧರಾಗಿದ್ದಾರೆ. ಒಬ್ಬ ನಿಸ್ವಾರ್ಥ ಕರ್ಮಯೋಗಿಯಂತೆ ಮೋದಿ ಅವರು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ, ಇದರಿಂದಾಗಿ ಭಾರತವು ಇಂದು ಜಾಗತಿಕ ಮಾನದಂಡವಾಗಿ ಮತ್ತು ವೈವಿಧ್ಯಮಯ ವಲಯಗಳಲ್ಲಿ ಪ್ರಗತಿಯ ಮೈಲಿಗಲ್ಲಾಗಿ ಹೊರಹೊಮ್ಮಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚುನಾಯಿತ ಪ್ರಧಾನ ಮಂತ್ರಿಯಾಗಿ ಇಂದು ಕಚೇರಿಯಲ್ಲಿ 4,398 ದಿನಗಳನ್ನು ಪೂರೈಸಿದ್ದಾರೆ ಮತ್ತು ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ನಾಳೆ ಮೀರಿಸಲಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತದ ಚುನಾಯಿತ ಪ್ರಧಾನ ಮಂತ್ರಿಯಾಗಿ ಅತಿ ದೀರ್ಘಾವಧಿಯವರೆಗೆ ಸತತವಾಗಿ ದೇಶ ಸೇವೆ ಮಾಡಿದ ಹೆಗ್ಗಳಿಕೆಗೆ ಮೋದಿಜಿ ಅವರು ಪಾತ್ರರಾಗಲಿದ್ದಾರೆ ಎಂದು ಅವರು ಹೇಳಿದರು. ತಮ್ಮ ಅಧಿಕಾರಾವಧಿಯಲ್ಲಿ ಮೋದಿಜಿ ಅವರು ಸಾರ್ವಜನಿಕ ಕಲ್ಯಾಣವನ್ನು ಆಡಳಿತದ ಮಾರ್ಗದರ್ಶಿ ತತ್ವವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸ್ವಂತದ ಪಕ್ಕಾ ಮನೆ ಇರಬೇಕು ಎನ್ನುವ ಹೊಸ ದೃಷ್ಟಿಕೋನವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪರಿಚಯಿಸಿದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಇಂದು ಭಾರತೀಯ ನಾಗರಿಕರಿಗೆ ಈಗಾಗಲೇ ಸುಮಾರು 4 ಕೋಟಿ ಪಕ್ಕಾ ಮನೆಗಳನ್ನು ಒದಗಿಸಲಾಗಿದ್ದು, ಇನ್ನೊಂದು 2 ಕೋಟಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಪಕ್ಕಾ ಮನೆ ಇಲ್ಲದ ಒಂದೇ ಒಂದು ಕುಟುಂಬವೂ ಇರುವುದಿಲ್ಲ ಎಂದು ಅವರು ಹೇಳಿದರು. ವಸತಿಯೊಂದಿಗೆ, ಎಲ್ ಪಿಜಿ ಸಂಪರ್ಕಗಳು, ಶೌಚಾಲಯಗಳು, ಸುರಕ್ಷಿತ ಕುಡಿಯುವ ನೀರು, ₹5 ಲಕ್ಷದವರೆಗೆ ಉಚಿತ ಆರೋಗ್ಯ ರಕ್ಷಣೆ ಮತ್ತು ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 5 ರಿಂದ 7 ಕಿಲೋಗ್ರಾಂ ಉಚಿತ ಆಹಾರ ಧಾನ್ಯಗಳಂತಹ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಶ್ರೀ ಶಾ ತಿಳಿಸಿದರು. ತಲೆಮಾರುಗಳಿಂದ ಇಂತಹ ಅಗತ್ಯ ಸೇವೆಗಳನ್ನು ಪಡೆಯಲು ಹೆಣಗಾಡುತ್ತಿದ್ದ ಕುಟುಂಬಗಳಿಗೆ ಮೋದಿ ಅವರು ತಮ್ಮ ಕೇವಲ 12 ವರ್ಷಗಳ ಅಧಿಕಾರಾವಧಿಯಲ್ಲಿ ಈ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಮೋದಿ ಅವರು ಅಭಿವೃದ್ಧಿಯ ಅರ್ಥವನ್ನು ಮರು ವ್ಯಾಖ್ಯಾನಿಸಿದ್ದಾರೆ. ಅವರು ಭಾರತದ ಆಡಳಿತ ಇತಿಹಾಸದಲ್ಲಿ ಆಡಳಿತ ಮತ್ತು ಪ್ರಗತಿಯ ಪ್ರತಿಯೊಂದು ಆಯಾಮವನ್ನು ಒಳಗೊಂಡಿರುವ ‘360-ಡಿಗ್ರಿ ಅಭಿವೃದ್ಧಿ’ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಿದರು. ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಕಳೆದ 12 ವರ್ಷಗಳಲ್ಲಿ 250 ದಶಲಕ್ಷ  ಜನರು ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು. ಅನಿಶ್ಚಿತ ಜಾಗತಿಕ ವಾತಾವರಣದ ಹೊರತಾಗಿಯೂ, ಭಾರತವು ಸ್ಥಿರತೆ ಮತ್ತು ಚೇತರಿಸಿಕೊಳ್ಳುವಿಕೆಯೊಂದಿಗೆ ತನ್ನ ಗುರಿಗಳತ್ತ ಸ್ಥಿರವಾಗಿ ಮತ್ತು ವೇಗವಾಗಿ ಮುನ್ನಡೆಯುತ್ತಿದೆ.

ಕಳೆದ 12 ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವವು ಮೂಲಭೂತ ರೂಪಾಂತರಕ್ಕೆ ಒಳಗಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಂಶಪಾರಂಪರ್ಯ ರಾಜಕಾರಣ, ಜಾತಿ ಆಧಾರಿತ ರಾಜಕಾರಣ ಮತ್ತು ಭ್ರಷ್ಟಾಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೊಂದು ಆಳವಾಗಿ ಬೇರೂರಿದೆಯೆಂದರೆ, ಜನರು ಅವುಗಳೊಂದಿಗೆ ಜೀವಿಸಲು ಒಗ್ಗಿ ಹೋಗಿದ್ದರು ಎಂದು ಅವರು ಹೇಳಿದರು. ಆದಾಗ್ಯೂ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಮೂಲಭೂತ ಮತ್ತು ದೂರಗಾಮಿ ಬದಲಾವಣೆಯನ್ನು ತಂದರು. ಮೋದಿ ಅವರು ಕುಟುಂಬದ ವಂಶಾವಳಿ, ಜಾತಿ ಪರಿಗಣನೆಗಳು ಮತ್ತು ಭ್ರಷ್ಟಾಚಾರದ ಮೂಲಕ ಗಳಿಸಿದ ಸಂಪತ್ತಿನ ಪ್ರಭಾವದಿಂದ ನಡೆಸಲ್ಪಡುವ ರಾಜಕೀಯದ ಸ್ಥಾನದಲ್ಲಿ ಕಾರ್ಯಕ್ಷಮತೆ  ಮತ್ತು ಉತ್ತಮ ಆಡಳಿತದ ಕೇಂದ್ರಿತ ರಾಜಕೀಯವನ್ನು ತಂದರು ಎಂದು ಅವರು ಹೇಳಿದರು. ಇದರ ಪರಿಣಾಮವಾಗಿ, ಅನೇಕ ರಾಜ್ಯಗಳಲ್ಲಿ ನಮ್ಮ ಸರ್ಕಾರಗಳು ಮರು ಆಯ್ಕೆಯಾದವು, ಇದು ಹೆಚ್ಚಿನ ಸ್ಥಿರತೆ, ದೀರ್ಘಕಾಲೀನ ನೀತಿಗಳ ರಚನೆ ಮತ್ತು ಆ ನೀತಿಗಳ ಹೆಚ್ಚು ಪರಿಣಾಮಕಾರಿ ಅನುಷ್ಠಾನ ಮತ್ತು ಆಡಳಿತಕ್ಕೆ ಕಾರಣವಾಯಿತು. ದೇಶದ ರಾಜಕೀಯ ಇತಿಹಾಸದಲ್ಲಿ ಕಾರ್ಯಕ್ಷಮತೆಯ ರಾಜಕೀಯವನ್ನು ಸ್ಥಾಪಿಸಿದ ಕೀರ್ತಿ ಯಾರಿಗಾದರೂ ಸಲ್ಲಬೇಕಾದರೆ ಅದು ಮೋದಿಜಿ ಅವರಿಗೆ ಸಲ್ಲುತ್ತದೆ. ಕೇವಲ ಮಹಿಳಾ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು, ಮೋದಿ ಅವರು ‘ಮಹಿಳಾ ನೇತೃತ್ವದ ಅಭಿವೃದ್ಧಿ’ ಪರಿಕಲ್ಪನೆಯನ್ನು ಮುನ್ನಡೆಸಿದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಶಸ್ತ್ರ ಪಡೆಗಳು, ಪೊಲೀಸ್, ವಿಜ್ಞಾನ, ಸಂಶೋಧನೆ, ಉದ್ಯಮಶೀಲತೆ, ಡ್ರೋನ್ ಗಳು, ಕ್ರೀಡೆ, ನವೋದ್ಯಮಗಳು ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳಲು ಉತ್ತೇಜಿಸುವ ಬಗ್ಗೆ ಸಮಾಜದಲ್ಲಿ ಒಂದು ಕಾಲದಲ್ಲಿ ಹಿಂಜರಿಕೆ ಇತ್ತು ಎಂದು ಅವರು ಹೇಳಿದರು. ಗಡಿ ಭದ್ರತಾ ಪಡೆಯ ಗಡಿ ಕಾವಲುಗಾರರಲ್ಲಿ, ಅತ್ಯಂತ ಕಠಿಣ ಗಡಿ ಪ್ರದೇಶಗಳಲ್ಲೂ ಮಹಿಳೆಯರು ಸಮಾನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ನೋಡುವುದು ಅಪಾರ ಹೆಮ್ಮೆ ಮತ್ತು ತೃಪ್ತಿಯ ವಿಷಯವಾಗಿದೆ ಎಂದು ಶ್ರೀ ಶಾ ಹೇಳಿದರು. ಮೋದಿ ಅವರು ನಾಗರಿಕರ ಸಹಭಾಗಿತ್ವದ ಪರಿಕಲ್ಪನೆಯನ್ನೂ ಬದಲಾಯಿಸಿದರು. ಮಹಾತ್ವಾಕಾಂಕ್ಷಿ ಜಿಲ್ಲೆಗಳು ಮತ್ತು ಮಹಾತ್ವಾಕಾಂಕ್ಷಿ ಬ್ಲಾಕ್ ಗಳ ರಚನೆಯ ಮೂಲಕ, ಅವರು ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ವಾಸ್ತವವಾಗಿ ತಂದರು. ಅಭಿವೃದ್ಧಿಯ ಪಯಣದಲ್ಲಿ ಹಿಂದುಳಿದಿದ್ದ ಜಿಲ್ಲೆಗಳಿಗೆ 30 ಕ್ಕೂ ಹೆಚ್ಚು ನಿಯತಾಂಕಗಳಲ್ಲಿ ನಿರ್ದಿಷ್ಟ ಅಭಿವೃದ್ಧಿ ಗುರಿಗಳನ್ನು ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ನೀಡಲಾಯಿತು, ಇವುಗಳನ್ನು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಗಳಿಗೆ ಸಮಾನವಾಗಿ ತರುವ ಉದ್ದೇಶವನ್ನು ಹೊಂದಲಾಗಿತ್ತು. ಹಲವಾರು ಮಹತ್ವಾಕಾಂಕ್ಷಿ ಜಿಲ್ಲೆಗಳು ಈಗ ಹಲವಾರು ನಿಯತಾಂಕಗಳಲ್ಲಿ ದೇಶದ ಅಗ್ರ ಐದು ಜಿಲ್ಲೆಗಳಿಗೆ ಹೋಲಿಸಬಹುದಾದ ಮಟ್ಟವನ್ನು ತಲುಪಿವೆ ಎಂದು ಅವರು ತಿಳಿಸಿದರು. ಈ ಸಮಗ್ರ  ಅಭಿವೃದ್ಧಿಯ ದೃಷ್ಟಿಕೋನವು ಈಗ ಆಡಳಿತಾತ್ಮಕ ಪ್ರೇರಣೆ, ಜನರ ಆಕಾಂಕ್ಷೆಗಳ ಜಾಗೃತಿ ಮತ್ತು ಸಾಮೂಹಿಕ ಪ್ರಯತ್ನ ಹಾಗೂ ಸಾಧನೆಯ ಮನೋಭಾವದ ಮೂಲಕ ಮುಂದುವರಿಯುತ್ತಿದೆ. ಈ ಹಿಂದೆ, ಪ್ರಭಾವಿ ಸಚಿವರು ಅಥವಾ ಸಂಸದರು ಪ್ರತಿನಿಧಿಸುವ ಜಿಲ್ಲೆಗಳು ಮಾತ್ರ ಗಣನೀಯ ಅಭಿವೃದ್ಧಿಯನ್ನು ಪಡೆಯುತ್ತವೆ ಎಂದು ನಂಬಲಾಗಿತ್ತು, ಆದರೆ ಈ ಮನಸ್ಥಿತಿ ಈಗ ಸಂಪೂರ್ಣವಾಗಿ ಬದಲಾಗಿದೆ.

ಕಳೆದ 12 ವರ್ಷಗಳಲ್ಲಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಪ್ರತಿ ತಿಂಗಳು 81 ಕೋಟಿ ಜನರಿಗೆ 5 ಕಿಲೋಗ್ರಾಂ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. 58 ಕೋಟಿಗಿಂತಲೂ  ಹೆಚ್ಚು ಹೊಸ ಜನ್-ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. 44 ಕೋಟಿಗಿಂತಲೂ ಹೆಚ್ಚು ಜನರು ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ಹೊಂದಿದ್ದು, ₹5 ಲಕ್ಷದವರೆಗೆ ಆರೋಗ್ಯ ರಕ್ಷಣೆಯನ್ನು ಪಡೆಯುತ್ತಿದ್ದಾರೆ. 16 ಕೋಟಿ  ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ, ಹಾಗೆಯೇ 13 ಕೋಟಿ  ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೆರವು ಪಡೆದಿದ್ದಾರೆ. 12 ಕೋಟಿ 76ಲಕ್ಷ  ಕುಟುಂಬಗಳಿಗೆ ಶೌಚಾಲಯಗಳನ್ನು ಒದಗಿಸಲಾಗಿದೆ, 10 ಕೋಟಿ 55 ಲಕ್ಷ   ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ನೀಡಲಾಗಿದೆ ಮತ್ತು 4 ಕೋಟಿಗಿಂತಲೂ  ಹೆಚ್ಚು ಜನರಿಗೆ ಪಕ್ಕಾ ಮನೆಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು. 3 ಕೋಟಿಗಿಂತಲೂ ಹೆಚ್ಚು ಗ್ರಾಮೀಣ ಬಡ ಮಹಿಳೆಯರು ‘ಲಖ್ ಪತಿ ದೀದಿ’ಗಳಾಗಿದ್ದಾರೆ ಮತ್ತು 93 ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಇಂದು ಭಾರತವು ಡಿಜಿಟಲ್ ವಹಿವಾಟಿನಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ, ಮೊಬೈಲ್ ತಯಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಶ್ರೀ ಶಾ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗವಿರಲಿ ಅಥವಾ ಜಾಗತಿಕ ಸಂಘರ್ಷಗಳಿಂದ ಉಂಟಾಗುವ ಆರ್ಥಿಕ ಸವಾಲುಗಳಿರಲಿ, ಭಾರತವು ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಮಾತ್ರವಲ್ಲದೆ ಮುನ್ನಡೆಯುತ್ತಲೇ ಇದೆ. ಕಳೆದ 12 ವರ್ಷಗಳ ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳು, ಹಲವಾರು ಸವಾಲುಗಳ ಹೊರತಾಗಿಯೂ, ದೇಶವು ದೂರದರ್ಶಿ ಮತ್ತು ಬಲವಾದ ನಾಯಕತ್ವದ ಮೂಲಕ ಅವುಗಳನ್ನು ಜಯಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಭಾರತದ ನಿರ್ವಹಣೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗಗಳಿಗೆ ಸ್ಪಂದಿಸುವ ಜಾಗತಿಕ ಇತಿಹಾಸದಲ್ಲಿ ಒಂದು ಮಾನದಂಡ ಎಂದು ಒಪ್ಪಿಕೊಂಡಿವೆ ಎಂದು ಶ್ರೀ ಶಾ ತಿಳಿಸಿದರು.

 

*****


(रिलीज़ आईडी: 2270951) आगंतुक पटल : 22
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Odia , Tamil , Telugu , Malayalam