ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೈಪ್ರಸ್ ಅಧ್ಯಕ್ಷರ ಅಧಿಕೃತ ಭಾರತ ಭೇಟಿ ಕುರಿತು ಜಂಟಿ ಹೇಳಿಕೆ

ಪ್ರಕಟಣಾ ದಿನಾಂಕ: 22 MAY 2026 9:31PM by PIB Bengaluru

ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 2026 ಮೇ 20-23ರ ವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಐರೋಪ್ಯ ಒಕ್ಕೂಟ ಮಂಡಳಿ ಸಭೆಯು ಸೈಪ್ರಸ್ ಅಧ್ಯಕ್ಷತೆಯ ಅವಧಿಯಲ್ಲಿ ನಡೆಯುವುದರಿಂದ ಈ ಭೇಟಿ ನಿರ್ದಿಷ್ಟ ಮತ್ತು ವಿಶೇಷ ಮಹತ್ವ ಹೊಂದಿದೆ.

2025 ಜೂನ್ ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೈಪ್ರಸ್ ಗೆ ನೀಡಿದ್ದ ಭೇಟಿಯಿಂದ ಸೃಷ್ಟಿಯಾದ ಐತಿಹಾಸಿಕ ಆವೇಗಕ್ಕೆ ಈ ಭೇಟಿಯು ಪೂರಕವಾಗಿದೆ. ಇದು ಕಾರ್ಯತಂತ್ರ ಪಾಲುದಾರಿಕೆಗೆ ಅಡಿಪಾಯ ಹಾಕಿದ್ದಲ್ಲದೆ, ಭಾರತ-ಸೈಪ್ರಸ್ ಸಂಬಂಧಗಳನ್ನು ಫಲಿತಾಂಶ-ಆಧಾರಿತ ಮತ್ತು ಅನುಷ್ಠಾನ-ಚಾಲಿತ ಹಂತಕ್ಕೆ ಪರಿವರ್ತಿಸುವುದನ್ನು ಗುರುತಿಸುತ್ತದೆ.

2025ರಲ್ಲಿ ಹೊರಡಿಸಲಾದ ಜಂಟಿ ಘೋಷಣೆಯ ಅನುಷ್ಠಾನದಲ್ಲಿ ಸಾಧಿಸಲಾದ ಗಣನೀಯ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದರಲ್ಲಿ ರಾಜಕೀಯ ಸಂವಾದದ ಪ್ರಗತಿ, ಹೆಚ್ಚಿದ ವ್ಯಾಪಾರ ತೊಡಗಿಸಿಕೊಳ್ಳುವಿಕೆ, ಹೆಚ್ಚಿದ ರಕ್ಷಣಾ ಸಂಪರ್ಕಗಳು, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಸಹಕಾರದ ಆರಂಭ ಸೇರಿವೆ. ವಿಕಸನಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಭೂದೃಶ್ಯ ಮತ್ತು ಭಾರತ-ಸೈಪ್ರಸ್ ಪಾಲುದಾರಿಕೆಯ ಆಳವನ್ನು ಗುರುತಿಸಿ, ನಾಯಕರು ಹೊಸ ವಾಸ್ತವಗಳು ಮತ್ತು ಅವಕಾಶಗಳನ್ನು ಪ್ರತಿಬಿಂಬಿಸಲು ದ್ವಿಪಕ್ಷೀಯ ಸಮಗ್ರ ಪಾಲುದಾರಿಕೆಯನ್ನು ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತೀಕರಿಸಲು ಒಪ್ಪಿಕೊಂಡರು.

ಸೈಪ್ರಸ್ ಅಧ್ಯಕ್ಷರಾದ ಕ್ರಿಸ್ಟೋಡೌಲಿಡ್ಸ್ ಅವರನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2026 ಮೇ 22ರಂದು ರಾಷ್ಟ್ರಪತಿ ಭವನದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಅವರು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ರಾಜ್‌ಘಾಟ್‌ನಲ್ಲಿ ಗೌರವ ನಮನ ಸಲ್ಲಿಸಿದರು. ಭಾರತಕ್ಕೆ ಭೇಟಿ ನೀಡಿದ ಗಣ್ಯರ ಗೌರವಾರ್ಥ ಗೌರವಾನ್ವಿತ ರಾಷ್ಟ್ರಪತಿಗಳು ಔತಣಕೂಟ ಆಯೋಜಿಸಿದ್ದರು.

ಪ್ರಧಾನ ಮಂತ್ರಿ ಮೋದಿ ಮತ್ತು ಸೈಪ್ರಸ್ ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ಅವರು 2026 ಮೇ 22ರಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಿದರು. ವಿವಿಧ ವಲಯಗಳಲ್ಲಿ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯಲ್ಲಿ ಆಗಿರುವ ಹೊಸ ಬೆಳವಣಿಗೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಭಾರತ ಮತ್ತು ಸೈಪ್ರಸ್ ನಡುವಿನ ನಿಕಟ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಯನ್ನು ಅವರು ಪುನರುಚ್ಚರಿಸಿದರು. ಭಾರತ-ಐರೋಪ್ಯ ಒಕ್ಕೂಟ ಸಂಬಂಧಗಳು, ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಭಾರತ-ಸೈಪ್ರಸ್ ಸಮಗ್ರ ಪಾಲುದಾರಿಕೆಯ ಪ್ರಮುಖ ಅಂಶವಾಗಿ ಉನ್ನತ ರಾಜಕೀಯ ಮಟ್ಟದಲ್ಲಿ ನಿಯಮಿತ ಸಂಪರ್ಕವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. 2025ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಭೇಟಿ ಸಮಯದಲ್ಲಿ ಘೋಷಿಸಲಾದ ಭಾರತ-ಸೈಪ್ರಸ್ ಜಂಟಿ ಕ್ರಿಯಾಯೋಜನೆ 2025-2029ರ ಅನುಷ್ಠಾನದಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ಅವರು ಸ್ವಾಗತಿಸಿದರು. ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ 2027ರಲ್ಲಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 65ನೇ ವಾರ್ಷಿಕೋತ್ಸವ ಆಚರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

2026ರ ಎಐ ಇಂಪ್ಯಾಕ್ಟ್ ಶೃಂಗಸಭೆಯ ಯಶಸ್ವಿ ಆತಿಥ್ಯಕ್ಕಾಗಿ ಅಧ್ಯಕ್ಷರಾದ ಕ್ರಿಸ್ಟೋಡೌಲೈಡ್ಸ್ ಅವರು ಪ್ರಧಾನ ಮಂತ್ರಿ ಮೋದಿ ಅವರನ್ನು ಅಭಿನಂದಿಸಿದರು. ಸೈಪ್ರಸ್ ಅನ್ನು ಪ್ರತಿನಿಧಿಸಿದ ಸಂಶೋಧನೆ, ನಾವೀನ್ಯತೆ ಮತ್ತು ಡಿಜಿಟಲ್ ನೀತಿ ಖಾತೆಯ ಉಪ ಸಚಿವರು, ಎಐ ಶೃಂಗಸಭೆಯ ಘೋಷಣೆಯನ್ನು ಅನುಮೋದಿಸಿದರು. ಎಐನ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸಮಗ್ರ ಅಭಿವೃದ್ಧಿಯತ್ತ ಕೆಲಸ ಮಾಡುವ ಬಗ್ಗೆ ಇಬ್ಬರೂ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಹಂಚಿಕೆಯ ಮೌಲ್ಯಗಳು ಮತ್ತು ಬಹುಪಕ್ಷೀಯ ಸಹಕಾರ

ಇಬ್ಬರೂ ನಾಯಕರು ಶಾಂತಿ, ಪ್ರಜಾಪ್ರಭುತ್ವ, ಕಾನೂನಿನ ನಿಯಮ, ಪರಿಣಾಮಕಾರಿ ಬಹುಪಕ್ಷೀಯತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ತಮ್ಮ ಹಂಚಿಕೆಯ ಬದ್ಧತೆಯನ್ನು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ನಾಗರೀಕ ಸನ್ನದು ಮತ್ತು ಅಂತಾರಾಷ್ಟ್ರೀಯ ಕಾನೂನಿನಲ್ಲಿ ನೆಲೆಗೊಂಡಿರುವ ನಿಯಮ ಆಧಾರಿತ ಅಂತಾರಾಷ್ಟ್ರೀಯ ಕ್ರಮಕ್ಕೆ ಅವರು ತಮ್ಮ ಬೆಂಬಲ ಪುನರುಚ್ಚರಿಸಿದರು, ಸಂಚರಣೆ ಮತ್ತು ವಾಯುಸಂಚಾರ ಸ್ವಾತಂತ್ರ್ಯ, ಅಡೆತಡೆಯಿಲ್ಲದ ವಾಣಿಜ್ಯ ಮತ್ತು ಸಾರ್ವಭೌಮ ಕಡಲ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಡಂಬಡಿಕೆ(ಯುಎನ್ ಸಿಎಲ್ಒಎಸ್) ಮೇಲೆ ನಿರ್ದಿಷ್ಟ ಒತ್ತು ನೀಡಿದರು.

ಜಾಗತಿಕ ಸವಾಲುಗಳನ್ನು ಎದುರಿಸಲು, ಸುಧಾರಿತ ಮತ್ತು ಪರಿಣಾಮಕಾರಿ ಬಹುಪಕ್ಷೀಯತೆಯ ಮೂಲಕ ಉದಯೋನ್ಮುಖ ಬೆಳವಣಿಗೆಗಳಿಗೆ ಜಗತ್ತನ್ನು ಸಿದ್ಧಪಡಿಸಲು ಇಬ್ಬರೂ ನಾಯಕರು ತಮ್ಮ ಕರೆಯನ್ನು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ, ವಿಶ್ವಸಂಸ್ಥೆ ಮತ್ತು ಕಾಮನ್‌ವೆಲ್ತ್ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸಮನ್ವಯ ಬಲಪಡಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ದಕ್ಷತೆಯಾಗಿಸಲು ಮತ್ತು ಸಮಕಾಲೀನ ಭೌಗೋಳಿಕ ರಾಜಕೀಯ ಸವಾಲುಗಳನ್ನು ಪ್ರತಿನಿಧಿಸುವ ಮಾರ್ಗಗಳನ್ನು ಒಳಗೊಂಡಂತೆ ಅದರ ಸುಧಾರಣೆಯ ತುರ್ತು ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಷಯಗಳು ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟವಾಗಿ ಸಮನ್ವಯ ಸಾಧಿಸಲು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಕುರಿತು ಅಂತರ-ಸರ್ಕಾರಿ ಮಾತುಕತೆಗಳನ್ನು ಅಂತಿಮಗೊಳಿಸುವ ಪ್ರಯತ್ನಗಳನ್ನು ಬೆಂಬಲಿಸುವುದನ್ನು ಮುಂದುವರಿಸಲು ಅವರು ಒಪ್ಪಿಕೊಂಡರು. ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಸೈಪ್ರಸ್ ತನ್ನ ಸದೃಢವಾದ ಬೆಂಬಲ ಪುನರುಚ್ಚರಿಸಿತು. ಎರಡೂ ಕಡೆಯವರು ನಿಕಟ ಸಹಕಾರದಲ್ಲಿ ತೊಡಗಿಸಿಕೊಳ್ಳಲು ಮತ್ತು ಪರಸ್ಪರ ಅಭ್ಯರ್ಥಿಗಳನ್ನು ಒಳಗೊಂಡಂತೆ ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ಬೆಂಬಲಿಸಲು ಒಪ್ಪಿಕೊಂಡರು.

ಸಾರ್ವಭೌಮತ್ವ ಮತ್ತು ಶಾಂತಿಗೆ ಬೆಂಬಲ

ಸೈಪ್ರಸ್ ಮತ್ತು ಭಾರತವು ಒಪ್ಪಿಕೊಂಡ ವಿಶ್ವಸಂಸ್ಥೆಯ ಮಾರ್ಗಸೂಚಿ ಮತ್ತು ಸಂಬಂಧಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ರಾಜಕೀಯ ಸಮಾನತೆಯೊಂದಿಗೆ ದ್ವಿವಲಯ, ದ್ವಿಕೋಮು ಒಕ್ಕೂಟದ ಆಧಾರದ ಮೇಲೆ ಸೈಪ್ರಸ್ ಪ್ರಶ್ನೆಗೆ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಪರಿಹಾರ ಸಾಧಿಸಲು ಮಾತುಕತೆಗಳನ್ನು ಪುನರಾರಂಭಿಸಲು ತಮ್ಮ ಬಲವಾದ ಬದ್ಧತೆಯನ್ನು ವ್ಯಕ್ತಪಡಿಸಿದವು. ಸೈಪ್ರಸ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ (ಯುಎನ್ಎಫ್ ಐಸಿವೈಪಿ) ಪ್ರಮುಖ ಪಾತ್ರ ಮತ್ತು ಅದರ ಆದೇಶಕ್ಕೆ ಅವರ ಸಂಪೂರ್ಣ ಬೆಂಬಲವನ್ನು ಅವರು ಒತ್ತಿ ಹೇಳಿದರು. ಯುಎನ್ಎಫ್ ಐಸಿವೈಪಿಗೆ ಭಾರತ ನೀಡಿರುವ ಅಮೂಲ್ಯ ಕೊಡುಗೆಗೆ ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಸೈಪ್ರಸ್ ಗಣರಾಜ್ಯದ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಏಕತೆಗೆ ಭಾರತವು ತನ್ನ ಅಚಲ ಮತ್ತು ಸ್ಥಿರ ಬೆಂಬಲ ಪುನರುಚ್ಚರಿಸಿತು. ಮಾತುಕತೆಯ ಶಾಂತಿಯುತ ಪರಿಹಾರದತ್ತ ಪ್ರಯತ್ನಗಳನ್ನು ದುರ್ಬಲಗೊಳಿಸದಂತೆ, ಸಂಬಂಧಿತ ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಗೌರವಿಸುವ ಅಗತ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.

ಭದ್ರತೆ, ರಕ್ಷಣೆ ಮತ್ತು ಭಯೋತ್ಪಾದನಾ ನಿಗ್ರಹ

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಅಭಿವ್ಯಕ್ತಿಗಳನ್ನು ಇಬ್ಬರೂ ನಾಯಕರು ಸ್ಪಷ್ಟವಾಗಿ, ನಿಸ್ಸಂದಿಗ್ಧವಾಗಿ ಖಂಡಿಸಿದರು. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸೈಪ್ರಸ್ ಒಗ್ಗಟ್ಟು ಮತ್ತು ಅಚಲ ಬೆಂಬಲ ವ್ಯಕ್ತಪಡಿಸಿತು.

2025 ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು 2025 ನವೆಂಬರ್ 10ರಂದು ನವದೆಹಲಿಯ ಕೆಂಪುಕೋಟೆ ಬಳಿ ನಡೆದ ಭಯೋತ್ಪಾದಕ ಘಟನೆಯನ್ನು ಇಬ್ಬರೂ ನಾಯಕರು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದರು. ದಾಳಿಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಭಯೋತ್ಪಾದನೆಯನ್ನು ಸಮಗ್ರ ಮತ್ತು ನಿರಂತರ ರೀತಿಯಲ್ಲಿ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಎದುರಿಸಲು ನಿರ್ಣಾಯಕ ಮತ್ತು ಸಂಘಟಿತ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಇಬ್ಬರೂ ನಾಯಕರು ಕರೆ ನೀಡಿದರು.

ಗಡಿಯಾಚೆಗಿನ ಭಯೋತ್ಪಾದನೆ ಎದುರಿಸಲು ಸಮಗ್ರ, ಸಂಘಟಿತ ಮತ್ತು ನಿರಂತರ ಕಾರ್ಯವಿಧಾನದ ಅಗತ್ಯವನ್ನು ಒತ್ತಿ ಹೇಳಿದ ಅವರು, ದ್ವಿಪಕ್ಷೀಯವಾಗಿ ಮತ್ತು ಬಹುಪಕ್ಷೀಯ ವ್ಯವಸ್ಥೆಯೊಳಗೆ ಸಹಬಾಗಿತ್ವದಲ್ಲಿ ಕೆಲಸ ಮಾಡುವ ಮಹತ್ವಕ್ಕೆ ಒತ್ತು ನೀಡಿದರು.

ಈ ಸಂದರ್ಭದಲ್ಲಿ ಭಯೋತ್ಪಾದನೆ ಎದುರಿಸಲು ಬಹುಪಕ್ಷೀಯ ಪ್ರಯತ್ನಗಳನ್ನು ಬಲಪಡಿಸಲು ಮತ್ತು ವಿಶ್ವಸಂಸ್ಥೆಯ ಮಾರ್ಗಸೂಚಿಯೊಳಗೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಒಪ್ಪಂದವನ್ನು ತ್ವರಿತವಾಗಿ ಅಂತಿಮಗೊಳಿಸಲು ಮತ್ತು ಅಳವಡಿಸಿಕೊಳ್ಳಲು ನಾಯಕರು ಕರೆ ನೀಡಿದರು. 1267 ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಬಂಧ ಸಮಿತಿಯ ಅಡಿಯಲ್ಲಿರುವವರು, ಅವುಗಳ ಸಂಬಂಧಿತ ಪ್ರಾಕ್ಸಿ ಗುಂಪುಗಳು, ಸಹಾಯಕರು, ಪ್ರಾಯೋಜಕರು, ಹಣಕಾಸುದಾರರು ಮತ್ತು ಬೆಂಬಲಿಗರು ಸೇರಿದಂತೆ ಎಲ್ಲಾ ವಿಶ್ವಸಂಸ್ಥೆ ಮತ್ತು ಐರೋಪ್ಯ ಒಕ್ಕೂಟದಿಂದ ಗೊತ್ತುಪಡಿಸಿದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳ ವಿರುದ್ಧ ಬಲವಾದ ಮತ್ತು ಸಂಘಟಿತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಹಿಂಸಾತ್ಮಕ ಉಗ್ರವಾದ ಮತ್ತು ಮೂಲಭೂತವಾದ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ಹಣ ವರ್ಗಾವಣೆ ಎದುರಿಸಲು ಹಾಗೂ ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಶೋಷಣೆ ತಡೆಗಟ್ಟಲು ಮತ್ತು ಭಯೋತ್ಪಾದಕ ನೇಮಕಾತಿಯನ್ನು ತಡೆಯಲು ಸಹಕಾರದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಭಯೋತ್ಪಾದಕ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮೂಲನೆ ಮಾಡಲು ಹಾಗೂ ಭಯೋತ್ಪಾದಕ ಜಾಲಗಳನ್ನು ಅಡ್ಡಿಪಡಿಸಲು ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸಲು ಎರಡೂ ಕಡೆಯವರು ವಿಶ್ವಸಂಸ್ಥೆ ಮತ್ತು ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್‌ಎಟಿಎಫ್)ಗೆ ಕರೆ ನೀಡಿದರು.

ಭಯೋತ್ಪಾದನೆಗೆ ತಮ್ಮ ಶೂನ್ಯ ಸಹಿಷ್ಣುತಾ ವಿಧಾನವನ್ನು ಅವರು ಪುನರುಚ್ಚರಿಸಿದರು, ಯಾವುದೇ ಸಂದರ್ಭಗಳಲ್ಲಿ ದ್ವಿಗುಣ ಮಾನದಂಡಗಳು, ಸರ್ಕಾರ ಪ್ರಾಯೋಜಿತ ಭಯೋತ್ಪಾದನೆ ಮತ್ತು ಅಂತಹ ಕೃತ್ಯಗಳಿಗೆ ಯಾವುದೇ ರೀತಿಯ ಸಮರ್ಥನೆಯನ್ನು ತಿರಸ್ಕರಿಸಿದರು. ಭಯೋತ್ಪಾದನೆ ನಿಗ್ರಹ ಜಂಟಿ ಕಾರ್ಯಪಡೆ (ಜೆಡಬ್ಲ್ಯೂಜಿ) ಸ್ಥಾಪಿಸುವ ಕುರಿತಾದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ಇದು ಮಾಹಿತಿ, ಜ್ಞಾನ ಹಂಚಿಕೆ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಕ ಭಯೋತ್ಪಾದನೆ ನಿಗ್ರಹದಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಒಂದು ಮಾರ್ಗಸೂಚಿ ಒದಗಿಸುತ್ತದೆ, ಜೆಡಬ್ಲ್ಯೂಜಿಯ ಮೊದಲ ಸಭೆಯನ್ನು ಸಾಧ್ಯವಾದಷ್ಟು ಬೇಗ ನಡೆಸಲು ಒಪ್ಪಿಕೊಂಡರು.

ಸೈಬರ್‌ ವಲಯದಲ್ಲಿ ಹೊಸ ಮತ್ತು ಹೊರಹೊಮ್ಮುತ್ತಿರುವ ಬೆದರಿಕೆಗಳನ್ನು ಪರಿಹರಿಸಲು ಎರಡೂ ದೇಶಗಳ ಸಂಬಂಧಿತ ಸಂಸ್ಥೆಗಳ ನಡುವೆ ನಡೆಯುತ್ತಿರುವ ನಿಕಟ ಸಹಕಾರವನ್ನು ಇಬ್ಬರೂ ನಾಯಕರು ಗಮನಿಸಿದರು. ಈ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಸೈಬರ್ ಭದ್ರತಾ ಸಂವಾದ ಸ್ಥಾಪಿಸುವುದನ್ನು ನಾಯಕರು ಸ್ವಾಗತಿಸಿದರು.

ಸೈಬರ್ ಭದ್ರತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ವಿಶೇಷ ಗಮನ ಹರಿಸಿ, ತಮ್ಮ ತಮ್ಮ ರಕ್ಷಣಾ ಕೈಗಾರಿಕೆಗಳ ನಡುವಿನ ಸಹಭಾಗಿತ್ವ ಸೇರಿದಂತೆ ರಕ್ಷಣಾ ಮತ್ತು ಭದ್ರತಾ ಸಹಕಾರ ಆಳಗೊಳಿಸಲು ಅವರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಸೈಪ್ರಸ್ ರಕ್ಷಣಾ ಮತ್ತು ಬಾಹ್ಯಾಕಾಶ ಕೈಗಾರಿಕೆಗಳ ಕ್ಲಸ್ಟರ್(ಸಿವೈಡಿಎಸ್ಐಸಿ) ಮತ್ತು ಭಾರತೀಯ ರಕ್ಷಣಾ ತಯಾರಕರ ಸೊಸೈಟಿ(SIDM) ನಡುವಿನ ಒಪ್ಪಂದಕ್ಕೆ ಸಹಿ ಹಾಕುವುದನ್ನು ನಾಯಕರು ಸ್ವಾಗತಿಸಿದರು.

2026 ಫೆಬ್ರವರಿಯಲ್ಲಿ ಸಹಿ ಹಾಕಲಾದ ಭಾರತ-ಸೈಪ್ರಸ್ ದ್ವಿಪಕ್ಷೀಯ ರಕ್ಷಣಾ ಸಹಕಾರ ಕಾರ್ಯಕ್ರಮವನ್ನು ಸ್ವಾಗತಿಸಿದ ಇಬ್ಬರೂ ನಾಯಕರು, ರಕ್ಷಣಾ ವಲಯದಲ್ಲಿ ಮಹತ್ವದ ಸಹಕಾರದ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಹುಡುಕಾಟ ಮತ್ತು ಪಾರುಗಾಣಿಕಾ(ಎಸ್ಎಆರ್) ವಿಷಯಗಳಲ್ಲಿ ಅಧಿಕೃತ ಸಮನ್ವಯ ಮತ್ತು ಸಹಕಾರ ಸ್ಥಾಪಿಸಲು ತಾಂತ್ರಿಕ ವ್ಯವಸ್ಥೆಗೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು. ಇವು ರಕ್ಷಣಾ ಕೈಗಾರಿಕಾ ಸಹಕಾರ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಉತ್ತೇಜಿಸಲು ಸಾಂಸ್ಥಿಕ ಮಾರ್ಗಸೂಚಿ ಒದಗಿಸುತ್ತವೆ. 2026 ಜನವರಿ 27ರಂದು ಸಹಿ ಹಾಕಲಾದ ಭಾರತ-ಐರೋಪ್ಯ ಒಕ್ಕೂಟದ ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆಯ ಆವೇಗವನ್ನು ನಿರ್ಮಿಸುತ್ತವೆ, ಜತೆಗೆ ವಿನಿಮಯ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಅನುಕೂಲವಾಗುತ್ತವೆ. 2026-2031ರ ಅವಧಿಗೆ ಎರಡೂ ದೇಶಗಳ ರಕ್ಷಣಾ ಸಚಿವಾಲಯಗಳ ನಡುವೆ ದ್ವಿಪಕ್ಷೀಯ ರಕ್ಷಣಾ ಸಹಕಾರ ಮಾರ್ಗಸೂಚಿ ಅಂತಿಮವಾಗುವುದನ್ನು ನಾಯಕರು ಸ್ವಾಗತಿಸಿದರು.

ಭಾರತ ಮತ್ತು ಸೈಪ್ರಸ್ ಆಳವಾದ ನೌಕಾ ಸಂಪ್ರದಾಯಗಳನ್ನು ಹೊಂದಿರುವ ಕಡಲ ರಾಷ್ಟ್ರಗಳಾಗಿರುವುದರಿಂದ, ಇಬ್ಬರೂ ನಾಯಕರು ಭಾರತೀಯ ನೌಕಾ ಹಡಗುಗಳ ನಿಯಮಿತ ಬಂದರು ಭೇಟಿಗಳು ಮತ್ತು ಕಡಲ ಕ್ಷೇತ್ರದ ಅರಿವು ಮತ್ತು ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸಲು ಜಂಟಿ ಕಡಲ ತರಬೇತಿ ಮತ್ತು ವ್ಯಾಯಾಮಗಳಿಗೆ ಅವಕಾಶಗಳನ್ನು ಅನ್ವೇಷಿಸುವುದು ಸೇರಿದಂತೆ ಕಡಲ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸಲು ಪ್ರೋತ್ಸಾಹಿಸಿದರು.

ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆ

ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಗಮನಾರ್ಹ ಸಾಮರ್ಥ್ಯವಿದೆ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು. ವಿಶ್ವಾಸಾರ್ಹ, ನಂಬಿಕೆಯ ಮತ್ತು ಸ್ಥಿಚೇತರಿಕೆಯ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಜತೆಗೆ ಆರ್ಥಿಕ ಭದ್ರತೆ ಕಾಪಾಡಿಕೊಳ್ಳುವಲ್ಲಿ ಸಹಕಾರ ಹೆಚ್ಚಿಸಲು ಅವರು ಒಪ್ಪಿಕೊಂಡರು.

ಸೈಪ್ರಸ್‌ನಿಂದ ಭಾರತಕ್ಕೆ ಹೂಡಿಕೆಗಳ ನಿರಂತರ ಬೆಳವಣಿಗೆಯನ್ನು ನಾಯಕರು ಸ್ವಾಗತಿಸಿದರು, ಇದು ಸೈಪ್ರಸ್ ಅನ್ನು ಭಾರತದಲ್ಲಿ ಹೂಡಿಕೆಯ ಪ್ರಮುಖ ಮೂಲವನ್ನಾಗಿ ಮಾಡಿದೆ. ಸ್ಟಾರ್ಟಪ್‌ಗಳು, ಡಿಜಿಟಲೀಕರಣ, ಎಐ ಮತ್ತು ನಾವೀನ್ಯತೆ-ಚಾಲಿತ ಉದ್ಯಮಗಳ ಮೂಲಕ ಬಳಕೆಯಾಗದ ಆರ್ಥಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಹಣಕಾಸು ಸೇವೆಗಳು, ಸಮುದ್ರ, ಸಂಪರ್ಕ, ಸರಕು ಸಾಗಣೆ, ಸ್ವಚ್ಛ ಮತ್ತು ಹಸಿರು ಇಂಧನ, ತ್ಯಾಜ್ಯ ನಿರ್ವಹಣೆ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಶೋಧನೆ ಮತ್ತು ನಾವೀನ್ಯತೆ ಸೇರಿದಂತೆ ಆದ್ಯತೆಯ ವಲಯಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಸಕ್ರಿಯವಾಗಿ ಅನ್ವೇಷಿಸಲು ಅವರು ಎರಡೂ ದೇಶಗಳಲ್ಲಿನ ವ್ಯಾಪಾರ ಸಮುದಾಯವನ್ನು ಪ್ರೋತ್ಸಾಹಿಸಿದರು. ಈ ವರ್ಷದ ಆರಂಭದಲ್ಲಿ ಮುಕ್ತಾಯಗೊಂಡ ಐತಿಹಾಸಿಕ ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ(ಎಫ್‌ಟಿಎ) ಅನುಷ್ಠಾನದ ಮೂಲಕ ಸೃಷ್ಟಿಯಾಗುವ ಅವಕಾಶಗಳನ್ನು ನಾಯಕರು ಪ್ರಸ್ತಾಪಿಸಿದರು.

ಹಣಕಾಸು ತಂತ್ರಜ್ಞಾನ ಸಂಪರ್ಕದ ಮೂಲಕ, ಗಡಿಯಾಚೆಗಿನ ವಹಿವಾಟುಗಳು ಮಾತ್ರವಲ್ಲದೆ ಗಡಿಯಾಚೆಗಿನ ಸಂಪರ್ಕಗಳನ್ನು ಸಹ ಬಲಪಡಿಸಲಾಗುತ್ತದೆ. 2025ರಲ್ಲಿ ಎನ್‌ಐಪಿಎಲ್ ಮತ್ತು ಯೂರೋಬ್ಯಾಂಕ್ ಸೈಪ್ರಸ್ ನಡುವೆ ಸಹಿ ಹಾಕಲಾದ ಒಪ್ಪಂದ ಸೇರಿದಂತೆ ಹಣಕಾಸು ವಲಯದಲ್ಲಿ ಆರ್ಥಿಕ ತೊಡಗಿಸಿಕೊಳ್ಳುವಿಕೆ ಆಳವಾಗುತ್ತಿರುವುದನ್ನು ನಾಯಕರು ಗಮನಿಸಿದರು. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್(ಇಸಿಬಿ)ನ ಟಾರ್ಗೆಟ್ ಇನ್‌ಸ್ಟಂಟ್ ಪೇಮೆಂಟ್ ಸೆಟಲ್‌ಮೆಂಟ್ ಸಿಸ್ಟಮ್ (ಟಿಐಪಿಎಸ್ ಸಿಸ್ಟಮ್)ನೊಂದಿಗೆ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ)ನ ಪರಸ್ಪರ ಕಾರ್ಯಸಾಧ್ಯತೆಗಾಗಿ ಮಾರ್ಗಸೂಚಿ ರೂಪಿಸುವುದನ್ನು ಅವರು ಸ್ವಾಗತಿಸಿದರು, ಇದು ಎರಡೂ ದೇಶಗಳ ಪ್ರವಾಸಿಗರು ಮತ್ತು ವ್ಯವಹಾರಗಳಿಗೆ ಪ್ರಯೋಜನ ನೀಡುವ, ತಡೆರಹಿತ ಸಾಗರೋತ್ತರ ವಹಿವಾಟುಗಳನ್ನು ಸುಗಮಗೊಳಿಸುತ್ತದೆ.

ತ್ರಿಪಕ್ಷೀಯ ಮತ್ತು ದ್ವಿಪಕ್ಷೀಯ ಆರ್ಥಿಕ ಸಹಕಾರದಲ್ಲಿ ಹೆಚ್ಚುತ್ತಿರುವ ಆವೇಗವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವ್ಯಾಪಾರ-ವ್ಯವಹಾರ ಸಂಪರ್ಕಗಳನ್ನು ಬಲಪಡಿಸಲು, ಹೂಡಿಕೆ ಹರಿವು ಉತ್ತೇಜಿಸಲು ಮತ್ತು 3 ದೇಶಗಳ ನಡುವೆ ಸಹಯೋಗ ಬೆಳೆಸಲು ಭಾರತ-ಗ್ರೀಸ್-ಸೈಪ್ರಸ್ (ಐಜಿಸಿ) ವ್ಯವಹಾರ ಮತ್ತು ಹೂಡಿಕೆ ಮಂಡಳಿಯ ಸ್ಥಾಪನೆಯನ್ನು ಅವರು ಶ್ಲಾಘಿಸಿದರು.

2025 ಜೂನ್ ನಲ್ಲಿ ಲಿಮಾಸೋಲ್‌ನಲ್ಲಿ ನಡೆದ ಭಾರತ-ಸೈಪ್ರಸ್ ಹೂಡಿಕೆದಾರರ ದುಂಡುಮೇಜಿನ ಸಭೆಯಿಂದ ಉಂಟಾದ ತ್ವರಿತ ಬೆಳವಣಿಗೆ ಆಧಾರದ ಮೇಲೆ, ದ್ವಿಪಕ್ಷೀಯ ಆರ್ಥಿಕ ಮತ್ತು ವಾಣಿಜ್ಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಜತೆಗೆ ಸಹಯೋಗದ ಹೊಸ ಮಾರ್ಗಗಳನ್ನು ಬೆಳೆಸುವ ಗುರಿಗೆ ಪೂರಕವಾಗಿ ಮುಂಬೈನಲ್ಲಿ ಭಾರತ-ಸೈಪ್ರಸ್ ವ್ಯಾಪಾರ ವೇದಿಕೆ ಆಯೋಜಿಸಲಾಯಿತು. ಮುಂಬೈನಲ್ಲಿ ನಡೆದ ವ್ಯಾಪಾರ ವೇದಿಕೆಯ ಹೊರತಾಗಿ ಬಿ2ಬಿ ಒಪ್ಪಂದಗಳಿಗೆ ಸಹಿ ಹಾಕುವುದನ್ನು ನಾಯಕರು ಸ್ವಾಗತಿಸಿದರು.

ಎರಡೂ ದೇಶಗಳ ಸ್ಟಾರ್ಟಪ್‌ಗಳು, ಯುನಿಕಾರ್ನ್‌ಗಳು, ನಾವೀನ್ಯತೆ ಪರಿಸರ ವ್ಯವಸ್ಥೆಗಳು ಮತ್ತು ಸಾಹಸೋದ್ಯಮ ಬಂಡವಾಳ ಜಾಲಗಳ ನಡುವಿನ ನಿರಂತರ ಸಹಯೋಗವನ್ನು ನಾಯಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ, ಎರಡೂ ದೇಶಗಳ ಸ್ಟಾರ್ಟಪ್‌ಗಳು, ಇನ್ ಕ್ಯುಬೇಟರ್‌ಗಳು, ವೇಗವರ್ಧಕಗಳು ಮತ್ತು ನಾವೀನ್ಯತೆ ಏಜೆನ್ಸಿಗಳ ನಡುವಿನ ವಿನಿಮಯಕ್ಕೆ ಮಾರ್ಗಸೂಚಿ ಒದಗಿಸುವ ನಾವೀನ್ಯತೆ ಮತ್ತು ತಂತ್ರಜ್ಞಾನ ಕುರಿತಾದ ಒಪ್ಪಂದಕ್ಕೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು.

ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಸಂಪರ್ಕ ಬಲಪಡಿಸುವಲ್ಲಿ ಮತ್ತು ವಿಶ್ವಾಸಾರ್ಹ ಕಡಲ ಪಾಲುದಾರಿಕೆಗಳ ಮೂಲಕ ಇಂಡೋ-ಪೆಸಿಫಿಕ್ ಅನ್ನು ಯುರೋಪ್‌ಗೆ ಸಂಪರ್ಕಿಸುವಲ್ಲಿ ಕಡಲ ಮತ್ತು ಹಡಗು ಸಹಕಾರದ ಮಹತ್ವವನ್ನು ನಾಯಕರು ಗಮನಿಸಿದರು. ಯುರೋಪಿಗೆ ಪ್ರವೇಶ ದ್ವಾರವಾಗಿ ಸೈಪ್ರಸ್‌ನ ಪಾತ್ರವನ್ನು ಮತ್ತು ಸಂಚಾರ, ಸಂಗ್ರಹಣೆ, ವಿತರಣೆ ಮತ್ತು ಸರಕು ಸಾಗಣೆಗಾಗಿ ಪ್ರಾದೇಶಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಗುರುತಿಸಿ, ಪರಸ್ಪರ ಪ್ರಯೋಜನಕ್ಕಾಗಿ ಸೈಪ್ರಸ್ ಮೂಲದ ಮತ್ತು ಭಾರತೀಯ ಕಡಲ ಸೇವಾ ಪೂರೈಕೆದಾರರನ್ನು ಒಳಗೊಂಡ ಜಂಟಿ ಉದ್ಯಮಗಳ ಮೂಲಕ ಕಡಲ ಸಹಕಾರ ಬಲಪಡಿಸುವುದನ್ನು ಅವರು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ, ಅಸ್ತಿತ್ವದಲ್ಲಿರುವ ವ್ಯಾಪಾರಿ ಸಾಗಣೆಯ ದ್ವಿಪಕ್ಷೀಯ ಒಪ್ಪಂದದ ಅಡಿ, ಕಡಲ ಸಹಕಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಮುಂದುವರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

ಸೈಪ್ರಸ್‌ನ ಜಾಗತಿಕವಾಗಿ ಗುರುತಿಸಲ್ಪಟ್ಟ ಕಡಲ ಸೇವೆಗಳ ಪರಿಸರ ವ್ಯವಸ್ಥೆ ಮತ್ತು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಕಡಲ ಮತ್ತು ಬಂದರು ಮೂಲಸೌಕರ್ಯ ಸಾಮರ್ಥ್ಯಗಳ ನಡುವಿನ ಬಲವಾದ ಪೂರಕತೆ ಪರಿಗಣಿಸಿ, ದ್ವಿಪಕ್ಷೀಯ ಪಾಲುದಾರಿಕೆಯ ಕಾರ್ಯತಂತ್ರದ ಆಧಾರಸ್ತಂಭವಾಗಿ ಕಡಲ ವಲಯದಲ್ಲಿ ಸಹಕಾರ ಬಲಪಡಿಸಲು ಇಬ್ಬರು ನಾಯಕರು ಒಪ್ಪಿಕೊಂಡರು.

ಈ ಸಂದರ್ಭದಲ್ಲಿ, ಭಾರತೀಯ ಹಡಗು ಹಿತಾಸಕ್ತಿಗಳಿಗಾಗಿ ಯುರೋಪಿಯನ್ ಕಡಲ ಗೇಟ್‌ವೇ ಮತ್ತು ಕಾರ್ಯಾಚರಣೆಯ ನೆಲೆಯಾಗಿ ಕಾರ್ಯ ನಿರ್ವಹಿಸುವ ಸೈಪ್ರಸ್‌ನ ಸಾಮರ್ಥ್ಯವನ್ನು ಅವರು ಒಪ್ಪಿಕೊಂಡರು. ಭಾರತೀಯ ಕಡಲ ಪಾಲುದಾರರು ಮತ್ತು ಸೈಪ್ರಸ್‌ನ ಹಡಗು ಮತ್ತು ಹಡಗು ನಿರ್ವಹಣಾ ಸಮುದಾಯದ ನಡುವೆ ನಿಕಟ ತೊಡಗಿಸಿಕೊಳ್ಳುವಿಕೆಯನ್ನು ಸ್ವಾಗತಿಸಿದರು. ಪ್ರಾಯೋಗಿಕ ಮತ್ತು ಪರಸ್ಪರ ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯುವ ದೃಷ್ಟಿಯಿಂದ ಕಡಲ ಸೇವೆಗಳು, ಬಂದರು ಸಂಪರ್ಕ, ಜಾರಿ, ಕಡಲ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ, ಹಾಗೆಯೇ ಹಸಿರು ಸಾಗಣೆ ಮತ್ತು ನಿಯಂತ್ರಕ ಅನುಸರಣೆಯಲ್ಲಿ ಸಹಕಾರ ಉತ್ತೇಜಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

ಹವಾಮಾನ ಸಂಬಂಧಿತ ಸವಾಲುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಚೇತರಿಕೆಯ ವಿಪತ್ತು ಮೂಲಸೌಕರ್ಯ ಸಹಕಾರವು ಎರಡೂ ದೇಶಗಳಿಗೆ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಕ್ಷೇತ್ರವಾಗಿದೆ ಎಂದು ನಾಯಕರು ಗಮನಿಸಿದರು. ಈ ಸಂದರ್ಭದಲ್ಲಿ, ವಿಪತ್ತು ಚೇತರಿಕೆ ಮೂಲಸೌಕರ್ಯ ಒಕ್ಕೂಟ (ಸಿಡಿಆರ್‌ಐ) ಸೇರಲು ಸೈಪ್ರಸ್‌ನ ಆಸಕ್ತಿಯನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ತಾಂತ್ರಿಕ ಸಹಕಾರ, ಸಾಮರ್ಥ್ಯ ವೃದ್ಧಿ ಮತ್ತು ಜ್ಞಾನ ಹಂಚಿಕೆ ಮುಂದುವರಿಸಲು ಹಾಗೂ ವಿಪತ್ತು-ಚೇತರಿಕೆ ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಜಾಗತಿಕ ವೇದಿಕೆಯಾಗಿ ಸಿಡಿಆರ್‌ಐನ ಪಾತ್ರವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ

ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪರಿವರ್ತನೀಯ ಸಾಮರ್ಥ್ಯವನ್ನು ಒಪ್ಪಿಕೊಂಡ ನಾಯಕರು, ನಾವೀನ್ಯತೆ ಮತ್ತು ತಂತ್ರಜ್ಞಾನ ಕುರಿತಾದ ಒಪ್ಪಂದವು ಸಂಶೋಧನಾ ಕೇಂದ್ರಗಳು, ನವೋದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗ, ನೈತಿಕ ಮತ್ತು ಜವಾಬ್ದಾರಿಯುತ ಎಐ ಸೇರಿದಂತೆ ಉದಯೋನ್ಮುಖ ಮತ್ತು ಸುಸ್ಥಿರ ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ನಾವೀನ್ಯತೆ ಯೋಜನೆಗಳನ್ನು ಉತ್ತೇಜಿಸುತ್ತದೆ ಎಂದು ಗಮನಿಸಿದರು.

ಜಾಗತಿಕ ಆರ್ಥಿಕ ಪ್ರಗತಿ, ಭದ್ರತೆ, ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಗೆ ಆಧಾರವಾಗಿರುವ ನಿರ್ಣಾಯಕ ಮೂಲಸೌಕರ್ಯವಾಗಿ ಬಾಹ್ಯಾಕಾಶ ಕ್ಷೇತ್ರದ ಪ್ರಾಮುಖ್ಯತೆ ಗುರುತಿಸಿ, ಜಾಗತಿಕ ಸವಾಲುಗಳನ್ನು ಎದುರಿಸಲು ಅಗತ್ಯವಾದ ಪಾಲುದಾರಿಕೆ ಹೊಂದಲು ಎರಡೂ ಕಡೆಯವರು ಆಸಕ್ತಿ ವ್ಯಕ್ತಪಡಿಸಿದರು. ಭಾರತದ ಬಾಹ್ಯಾಕಾಶ ನೀತಿ-2023 ಸರ್ಕಾರೇತರ ಸಂಸ್ಥೆಗಳಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಿಪೂರ್ಣ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಮತ್ತು ಕ್ರಿಯಾತ್ಮಕ ಮಾರ್ಗಸೂಚಿ ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು. ಪರಸ್ಪರ ಪ್ರಯೋಜನಕ್ಕಾಗಿ ಸಹಯೋಗ ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ, ಎರಾಟೋಸ್ಥೆನೆಸ್(ERATOSTHENES) ಶ್ರೇಷ್ಠತಾ ಕೇಂದ್ರ ಮತ್ತು ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಅಂಡ್ ಆಥರೈಸೇಶನ್ ಸೆಂಟರ್(ಇನ್-ಸ್ಪೇಸ್) ನಡುವೆ ನಡೆಯುತ್ತಿರುವ ನಿಶ್ಚಿತಾರ್ಥಗಳನ್ನು ನಾಯಕರು ಸ್ವಾಗತಿಸಿದರು.

ಶಿಕ್ಷಣ, ಚಲನಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ

ವಿದ್ಯಾರ್ಥಿಗಳು ಮತ್ತು ಸಂಶೋಧಕರು ಸೇರಿದಂತೆ ಶೈಕ್ಷಣಿಕ ಮಟ್ಟದಲ್ಲಿ ಬೆಳೆಯುತ್ತಿರುವ ವಿನಿಮಯಗಳನ್ನು ನಾಯಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು, ಇದು ಎರಡೂ ದೇಶಗಳಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ನಿಶ್ಚಿತಾರ್ಥ ಬಲಪಡಿಸಲು, ವಿನಿಮಯ ಹೆಚ್ಚಿಸಲು ಮತ್ತು ಜಂಟಿ ಸಂಶೋಧನಾ ಉಪಕ್ರಮಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಚಲನಶೀಲತೆ ಮತ್ತು ಸಾಂಸ್ಥಿಕ ಪಾಲುದಾರಿಕೆಗಳು ಒಳಗೊಂಡಂತೆ ಸಹಯೋಗಕ್ಕಾಗಿ ಅವಕಾಶಗಳನ್ನು ಅನ್ವೇಷಿಸಲು ಬಲವಾದ ಅಡಿಪಾಯ ಹಾಕುತ್ತದೆ ಎಂದು ಅವರು ಗಮನಿಸಿದರು.

ಸುಷ್ಮಾ ಸ್ವರಾಜ್ ಇನ್ ಸ್ಟಿಟ್ಯೂಟ್ ಆಫ್ ಫಾರಿನ್ ಸರ್ವಿಸ್(ಎಸ್‌ಎಸ್‌ಐಎಫ್‌ಎಸ್) ಮತ್ತು ಸೈಪ್ರಸ್‌ನ ಎಂಒಎಫ್ಎ, ಡಿಪ್ಲೊಮ್ಯಾಟಿಕ್ ಅಕಾಡೆಮಿ ನಡುವೆ ರಾಜತಾಂತ್ರಿಕ ತರಬೇತಿ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು, ಇದು ರಾಜತಾಂತ್ರಿಕರ ತರಬೇತಿಯಲ್ಲಿ ಸಹಕಾರದ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುತ್ತದೆ.

ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದವನ್ನು ಅಂತಿಮಗೊಳಿಸುವ ಉದ್ದೇಶದಿಂದ ನಾಯಕರು ನಿರಂತರ ಮಾತುಕತೆಗಳಿಗೆ ಬದ್ಧರಾಗಿದ್ದಾರೆ. ಇದು ಸುರಕ್ಷಿತ, ನಿಯಮಿತ ಮತ್ತು ಕ್ರಮಬದ್ಧ ವಲಸೆಯ ಸಹಭಾಗಿತ್ವ ಸುಗಮಗೊಳಿಸಲು ಮತ್ತು ಹೆಚ್ಚು ಕೌಶಲ್ಯಪೂರ್ಣ ಕೆಲಸಗಾರರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಸುಸ್ಥಿರ ಕಾರ್ಯಪಡೆಯ ಚಲನಶೀಲತೆ ಬೆಂಬಲಿಸಲು ಒಂದು ಮಾರ್ಗಸೂಚಿ ಒದಗಿಸುತ್ತದೆ. ಸಾಮಾಜಿಕ ಭದ್ರತಾ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಆದಷ್ಟು ಬೇಗ ಪ್ರಾರಂಭಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

ಈ ಸಂದರ್ಭದಲ್ಲಿ, ಇನ್ ಸ್ಠಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮತ್ತು ಇನ್ ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ ಆಫ್ ಸೈಪ್ರಸ್ (ಐಸಿಪಿಎಸಿ) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು, ಇದು ಯುವ ಲೆಕ್ಕ ಪರಿಶೋಧಕರಿಗೆ ವೃತ್ತಿಪರ ಮತ್ತು ನಿಯಂತ್ರಕ ಮಾನದಂಡಗಳನ್ನು ಅಭಿವೃದ್ಧಿಪಡಿಸಲು ಕೊಡುಗೆ ನೀಡಲು, ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕ ಪರಿಶೋಧನೆಯಲ್ಲಿ ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು, ಹಣಕಾಸು ಮತ್ತು ವ್ಯವಹಾರ ಸೇವೆಗಳ ಕ್ಷೇತ್ರಗಳಲ್ಲಿ ಪರಸ್ಪರ ಗುರುತಿಸುವಿಕೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ಉತ್ತಮ ಅವಕಾಶ ಒದಗಿಸುತ್ತದೆ.

ಸಾಂಸ್ಕೃತಿಕ ಸಹಕಾರ, ಜನರಿಂದ ಜನರ ನಡುವಿನ ಸಂಬಂಧಗಳು

ಭಾತ ಮತ್ತು ಸೈಪ್ರಸ್ ನಡುವಿನ ಸಾಂಸ್ಕೃತಿಕ ವಿನಿಮಯ ವಿಸ್ತರಿಸುವ ಅಗತ್ಯವನ್ನು ನಾಯಕರು ಪ್ರಸ್ತಾಪಿಸಿದರು. ದೃಶ್ಯ ಕಲೆಗಳು, ಪ್ರದರ್ಶನ ಕಲೆಗಳು, ಕಲೆಗಳ ಶೈಕ್ಷಣಿಕ ಕಾರ್ಯಕ್ರಮಗಳು, ಪರಂಪರೆ ಸಂರಕ್ಷಣೆ ಮತ್ತು ಸೃಜನಶೀಲ ಕೈಗಾರಿಕೆಗಳಲ್ಲಿ ವಿನಿಮಯ ಸುಗಮಗೊಳಿಸುವ ನಿರೀಕ್ಷೆಯಿರುವ ಸಾಂಸ್ಕೃತಿಕ ಸಹಕಾರ ಕುರಿತಾದ ಒಪ್ಪಂದಕ್ಕೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು. ಜಂಟಿ ಉಪಕ್ರಮಗಳು, ಪ್ರದರ್ಶನಗಳು ಮತ್ತು ಸಾಮರ್ಥ್ಯ ವೃದ್ಧಿ ಪ್ರಯತ್ನಗಳನ್ನು ಉತ್ತೇಜಿಸಲು ವಸ್ತುಸಂಗ್ರಹಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ನಡುವಿನ ನಿಕಟ ಸಹಯೋಗವನ್ನು ನಾಯಕರು ಪ್ರೋತ್ಸಾಹಿಸಿದರು. ಸೈಪ್ರಸ್‌ನಲ್ಲಿ ಯೋಗ, ಆಯುರ್ವೇದ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಶ್ಲಾಘಿಸಿದರು.

ಎರಡೂ ದೇಶಗಳ ಜನರ ನಡುವೆ ಹೆಚ್ಚಿನ ತಿಳಿವಳಿಕೆಯನ್ನು ಬೆಳೆಸಲು ಕೊಡುಗೆ ನೀಡುವ ದ್ವಿಮುಖ ಪ್ರವಾಸೋದ್ಯಮದಲ್ಲಿ ಮತ್ತಷ್ಟು ಬೆಳವಣಿಗೆಯ ಸಾಮರ್ಥ್ಯವನ್ನು ನಾಯಕರು ಗುರುತಿಸಿದರು. ಪ್ರವಾಸೋದ್ಯಮ ಪಾಲುದಾರರ ನಡುವಿನ ಸಹಯೋಗದ ಮೂಲಕ ಎರಡೂ ದಿಕ್ಕುಗಳಲ್ಲಿ ಪ್ರವಾಸಿ ಹರಿವು ವಿಸ್ತರಿಸಲು ಎರಡೂ ಕಡೆಯವರು ಕೆಲಸ ಮಾಡಲು ಒಪ್ಪಿಕೊಂಡರು.

ಜನರ ಹೆಚ್ಚುತ್ತಿರುವ ಚಲನೆ, ಜನರಿಂದ ಜನರ ನಡುವಿನ ಸಂಬಂಧಗಳನ್ನು ವಿಸ್ತರಿಸುವುದರಿಂದ ರಾಯಭಾರಿಗಳ ವಿಷಯಗಳಲ್ಲಿ ಸಹಕಾರವು ಎರಡೂ ದೇಶಗಳಿಗೆ ನಿರಂತರ ಆಸಕ್ತಿಯ ಕ್ಷೇತ್ರವಾಗಿ ಉಳಿದಿದೆ ಎಂದು ನಾಯಕರು ಗಮನಿಸಿದರು. ಈ ಸಂದರ್ಭದಲ್ಲಿ, ರಾಯಭಾರಿಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಹಕಾರ ಬಲಪಡಿಸಲು ಇದು ರಚನಾತ್ಮಕ ಮಾರ್ಗಸೂಚಿ ಒದಗಿಸುತ್ತದೆ ಎಂದು ಗಮನಿಸುತ್ತಾ, ರಾಯಭಾರಿಗಳ ಸಂವಾದ ಆರಂಭಿಸುವುದನ್ನು ಅವರು ಸ್ವಾಗತಿಸಿದರು.

ಭಾರತ-ಐರೋಪ್ಯ ಒಕ್ಕೂಟ ಸಂಬಂಧಗಳು

2026 ಜನವರಿ 27ರಂದು ನಡೆದ ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆ ಸಂದರ್ಭದಲ್ಲಿ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ ಅಂತಿಮವಾಗಿದ್ದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಎರಡೂ ಕಡೆಯವರು 2030ರ ಜಂಟಿ ಭಾರತ-ಇಯು ಸಮಗ್ರ ಕಾರ್ಯತಂತ್ರ ಕಾರ್ಯಸೂಚಿಯನ್ನು ಅನುಮೋದಿಸಿದರು, ಇದು ಎರಡೂ ಪಾಲುದಾರರಿಗೆ ಮತ್ತು ವಿಶಾಲ ಜಗತ್ತಿಗೆ ಪರಸ್ಪರ ಪ್ರಯೋಜನಕಾರಿ, ಸಂಕೀರ್ಣ ಮತ್ತು ಪರಿವರ್ತನೀಯ ಫಲಿತಾಂಶಗಳನ್ನು ನೀಡಲು ಇಯು-ಇಂಡಿಯಾ ಸಹಕಾರ ವಿಸ್ತರಿಸುವ, ಆಳಗೊಳಿಸುವ ಮತ್ತು ಉತ್ತಮವಾಗಿ ಸಂಯೋಜಿಸುವ ಮೂಲಕ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.

ಕಾರ್ಯತಂತ್ರ ಪಾಲುದಾರಿಕೆ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿದ ನಾಯಕರು, ನಿರ್ಣಾಯಕ ಮೌಲ್ಯ ಸರಪಳಿಗಳನ್ನು ವೈವಿಧ್ಯಗೊಳಿಸುವ ಮತ್ತು ಹೊಸ ಮಾರುಕಟ್ಟೆಗಳನ್ನು ತೆರೆಯುವ ಮೂಲಕ ವ್ಯಾಪಾರ ಮತ್ತು ಹೂಡಿಕೆ ಸಹಯೋಗದ ನಿಜವಾದ ಸಾಮರ್ಥ್ಯ ಅರಿತುಕೊಳ್ಳಲು ಅದರ ಆರಂಭಿಕ ಸಹಿ ಮತ್ತು ಸಕಾಲಿಕ ಅನುಷ್ಠಾನಕ್ಕೆ ಕರೆ ನೀಡಿದರು.

ಪ್ರಮುಖ ವ್ಯಾಪಾರ, ತಂತ್ರಜ್ಞಾನ ಮತ್ತು ಆರ್ಥಿಕ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯ(ಟಿಟಿಸಿ) ಕೆಲಸವನ್ನು ಮತ್ತಷ್ಟು ಹೆಚ್ಚಿಸಲು ನಾಯಕರು ಒಪ್ಪಿಕೊಂಡರು, ಜುಲೈನಲ್ಲಿ ನಡೆಯಲಿರುವ ಟಿಟಿಸಿ ಸಚಿವರ ಸಭೆಯ ಫಲಿತಾಂಶಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಭಾರತ-ಐರೋಪ್ಯ ಒಕ್ಕೂಟದ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಗೆ ಸಹಿ ಹಾಕುವುದರಿಂದ ಕಡಲ ಭದ್ರತೆ, ರಕ್ಷಣಾ ಉದ್ಯಮ ಮತ್ತು ತಂತ್ರಜ್ಞಾನ, ಸೈಬರ್ ಮತ್ತು ಹೈಬ್ರಿಡ್ ಬೆದರಿಕೆಗಳು, ಬಾಹ್ಯಾಕಾಶ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಂಚಿಕೆಯ ಹಿತಾಸಕ್ತಿಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಗಾಢವಾಗಿಸುತ್ತದೆ. ಈ ನಿಟ್ಟಿನಲ್ಲಿ ಭಾರತ-ಐರೋಪ್ಯ ಒಕ್ಕೂಟದ ಮಾಹಿತಿ ಭದ್ರತಾ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆಯೂ ಇಬ್ಬರೂ ನಾಯಕರು ಕರೆ ನೀಡಿದರು.

ಚಲನಶೀಲತೆಯ ಸಮಗ್ರ ಮಾರ್ಗಸೂಚಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವುದನ್ನು ಮತ್ತು ಭಾರತದಲ್ಲಿ ಪ್ರಾಯೋಗಿಕ ಐರೋಪ್ಯ ಒಕ್ಕೂಟದ ಕಾನೂನು ಪ್ರವಶ ದ್ವಾರ  ಕಚೇರಿ ಆರಂಭಿಸುವುದನ್ನು ಸ್ವಾಗತಿಸಿದ ನಾಯಕರು, ವೃತ್ತಿಪರರು, ಕೌಶಲ್ಯಪೂರ್ಣ ಕಾರ್ಯಪಡೆ ಮತ್ತು ವಿದ್ಯಾರ್ಥಿಗಳ ಚಲನೆಗೆ ಕಾನೂನು ಮಾರ್ಗಗಳನ್ನು ಉತ್ತೇಜಿಸುವಲ್ಲಿ ಮತ್ತು ಭಾರತ ಮತ್ತು ಇಯು ನಡುವೆ ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸುವಲ್ಲಿ ಅದು ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಇಂಡೋ-ಪೆಸಿಫಿಕ್, ಸಂಪರ್ಕ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು

ಯುಎನ್ ಸಿಎಲ್ಒಎಸ್ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಮುಕ್ತ, ತೆರೆದ, ಶಾಂತಿಯುತ, ಸಮೃದ್ಧ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್ ಉತ್ತೇಜಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ಸೈಪ್ರಸ್ ಸೇರ್ಪಡೆಗೊಂಡಿದ್ದಕ್ಕಾಗಿ ಪ್ರಧಾನಿ ಮೋದಿ ಶ್ಲಾಘಿಸಿದರು, ಕಡಲ ಭದ್ರತೆ ಮತ್ತು ಸಾಗರ  ಸಂಪನ್ಮೂಲಗಳ ಸುಸ್ಥಿರ ಬಳಕೆಯಲ್ಲಿ ಸಹಕಾರ ಗಾಢಗೊಳಿಸುವ ಸಾಮರ್ಥ್ಯವನ್ನು ಒತ್ತಿಹೇಳಿದರು.

ಜಾಗತಿಕ ವ್ಯಾಪಾರ, ಸಂಪರ್ಕ ಮತ್ತು ಸಮೃದ್ಧಿಯನ್ನು ಮರುರೂಪಿಸುವ ಮತ್ತು ಉತ್ತೇಜಿಸುವಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್(ಐ.ಎಂ.ಇ.ಇ.ಸಿ.) ಹೊಂದಿರುವ ಪರಿವರ್ತನೀಯ ಸಾಮರ್ಥ್ಯವನ್ನು ಇಬ್ಬರೂ ನಾಯಕರು ಗುರುತಿಸಿದರು. ಪೂರ್ವ ಮೆಡಿಟರೇನಿಯನ್ ಮತ್ತು ವಿಶಾಲ ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಉತ್ತೇಜಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಭಾರತದಿಂದ ವಿಶಾಲ ಮಧ್ಯಪ್ರಾಚ್ಯದ ಮೂಲಕ ಯುರೋಪ್‌ಗೆ ಆಳವಾದ ತೊಡಗಿಸಿಕೊಳ್ಳುವಿಕೆ ಮತ್ತು ಪರಸ್ಪರ ಸಂಪರ್ಕದ ಕಾರಿಡಾರ್‌ಗಳನ್ನು ಬೆಳೆಸುವ ಮಹತ್ವವನ್ನು ಒತ್ತಿ ಹೇಳಿದರು. ಅವರು ದ್ವಿಪಕ್ಷೀಯ ಸಂಪರ್ಕ ಸಂವಾದದ ಸ್ಥಾಪನೆಯ ಬಗ್ಗೆ ಚರ್ಚಿಸಿದರು.

ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸನ್ನದು ತತ್ವಗಳಿಗೆ ಅನುಸಾರವಾಗಿ ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸಾಧಿಸಲು, ಪ್ರಮುಖ ಪಾಲುದಾರರ ನಡುವೆ ಸಂವಾದ, ರಾಜತಾಂತ್ರಿಕತೆ ಮತ್ತು ರಚನಾತ್ಮಕ ನಿಶ್ಚಿತಾರ್ಥದ ಮೂಲಕ ಉಕ್ರೇನ್‌ನಲ್ಲಿನ ಸಂಘರ್ಷದ ಆರಂಭಿಕ ಪರಿಹಾರಕ್ಕೆ ನಾಯಕರು ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು, ಸಮುದ್ರ ಸಾಗಣೆಯ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಾಗಣೆ ಸೇರಿದಂತೆ ಆಧಾರವಾಗಿರುವ ಸಮಸ್ಯೆಗಳನ್ನು ಶಾಂತಿಯುತ ರೀತಿಯಲ್ಲಿ ಪರಿಹರಿಸಲು ಸಂವಾದ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು.

ಭಾರತವು ಪರಮಾಣು ಪೂರೈಕೆದಾರರ ಗುಂಪಿಗೆ ಸೇರುವ ಮೌಲ್ಯವನ್ನು ಗುರುತಿಸಿ, ಜಾಗತಿಕ ಪ್ರಸರಣ ನಿಷೇಧದ ವಾಸ್ತುಶಿಲ್ಪವನ್ನು ಎತ್ತಿಹಿಡಿಯುವ ಮಹತ್ವ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು.

ಅಂತಿಮ ತೀರ್ಮಾನ(ಸಮಾಪನ)

ಭಾರತ-ಸೈಪ್ರಸ್ ಗಾಢ ಸಂಬಂಧಗಳಿಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಭಾರತ-ಸೈಪ್ರಸ್ ಕಾರ್ಯತಂತ್ರ ಪಾಲುದಾರಿಕೆಯ ಅಡಿ ಸಹಕಾರ ಮುಂದುವರಿಸಲು, ಭಾರತ-ಸೈಪ್ರಸ್ ಜಂಟಿ ಕ್ರಿಯಾಯೋಜನೆ 2025-2029ರ ಸಕಾಲಿಕ ಅನುಷ್ಠಾನಕ್ಕೆ ಕೆಲಸ ಮಾಡುವಂತೆ ಎರಡೂ ಕಡೆಯವರು ನಿರ್ದೇಶನ ನೀಡಿದರು. ಪರಸ್ಪರ ಗೌರವ ಮತ್ತು ಸಹಭಾಗಿತ್ವದ ಹಂಚಿಕೆಯ ಮನೋಭಾವ ನಿರ್ಮಿಸುವ ನಿಯಮಿತ ಸಂವಹನ ಕಾಪಾಡಿಕೊಳ್ಳಲು ನಾಯಕರು ಒಪ್ಪಿಕೊಂಡರು.

ಭಾರತದ ಪ್ರಧಾನಮಂತ್ರಿ ಅವರು ಮತ್ತು ಭಾರತೀಯರು ತಮ್ಮ ಅಧಿಕೃತ ಭೇಟಿ ಸಮಯದಲ್ಲಿ ನೀಡಿದ ಅತ್ಯುತ್ತಮ ಸತ್ಕಾರಕ್ಕೆ ಸೈಪ್ರಸ್ ಅಧ್ಯಕ್ಷರು ಧನ್ಯವಾದಗಳನ್ನು ಅರ್ಪಿಸಿದರು.

ಯುರೋಪ್, ಮೆಡಿಟರೇನಿಯನ್ ಮತ್ತು ಇಂಡೋ-ಪೆಸಿಫಿಕ್ ನಡುವಿನ ಕಾರ್ಯತಂತ್ರ ಪಾಲುದಾರರು ಮತ್ತು ಪ್ರಮುಖ ಸಂಪರ್ಕಕಾರರಾಗಿ ಸೈಪ್ರಸ್ ಮತ್ತು ಭಾರತದ ಬಗ್ಗೆ ತಮ್ಮ ಹಂಚಿಕೆಯ ದೃಷ್ಟಿಕೋನವನ್ನು ನಾಯಕರು ಪುನರುಚ್ಚರಿಸಿದರು, ಶಾಂತಿ, ಸ್ಥಿರತೆ, ಸಂಪರ್ಕ ಮತ್ತು ಸಮೃದ್ಧಿಯನ್ನು ಮುನ್ನಡೆಸಲು ಬದ್ಧರಾಗಿರುವುದಾಗಿ ತಿಳಿಸಿದರು.

ಭಾರತ-ಸೈಪ್ರಸ್ ಜಂಟಿ ಕ್ರಿಯಾಯೋಜನೆ 2025-2029ರ ಅಡಿ ಸ್ಪಷ್ಟ ಫಲಿತಾಂಶಗಳನ್ನು ನೀಡುವ ಮತ್ತು ವಿಶಾಲವಾದ ಭಾರತ-ಯುರೋಪ್ ಕಾರ್ಯತಂತ್ರ ಪಾಲುದಾರಿಕೆಯ ಕ್ರಿಯಾತ್ಮಕ ಆಧಾರಸ್ತಂಭವಾಗಿ ಭಾರತ-ಸೈಪ್ರಸ್ ಸಹಕಾರವನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಐತಿಹಾಸಿಕವಾಗಿ ಬಲಿಷ್ಠ ಸಂಬಂಧವನ್ನು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಹಂತವಾಗಿ ಪರಿವರ್ತಿಸುವಲ್ಲಿ, ಪಾಲುದಾರಿಕೆಯನ್ನು ಹೆಚ್ಚು ಮಹತ್ವಾಕಾಂಕ್ಷೆಯ, ಆಧುನಿಕ, ಕಾರ್ಯತಂತ್ರದ ಮತ್ತು ಭವಿಷ್ಯದ ಆಧಾರಿತ ಸಹಕಾರದ ಮಾರ್ಗಸೂಚಿಯಾಗಿ ಉನ್ನತೀಕರಿಸಲು ಈ ಭೇಟಿಯು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ನಾಯಕರು ಒಪ್ಪಿಕೊಂಡರು.

 

*****

 

 


 

 



 

 


(ಪ್ರಕಟಣೆ ಐ.ಡಿ.: 2264571) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , हिन्दी , Assamese , Manipuri , Bengali , Odia , Tamil , Telugu