ಕೃಷಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಕಳೆದ 35 ವರ್ಷಗಳ ಅನುಭವ ಆಧರಿಸಿ ‘ಅಪ್ನಾಪನ್’ ಪುಸ್ತಕ ರಚಿಸಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಮೇ 26 ರಂದು ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಎಚ್. ಡಿ. ದೇವೇಗೌಡ ಅವರಿಂದ ‘ಅಪ್ನಾಪನ್’ ಲೋಕಾರ್ಪಣೆ
ಪ್ರಧಾನಮಂತ್ರಿ ಶ್ರೀ ಮೋದಿ ಅವರ ನಾಯಕತ್ವ, ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣದ ಸಮರ್ಪಣಾ ಭಾವದ ಬಗ್ಗೆ ದೀರ್ಘ ಒಳನೋಟ ನೀಡಲಿದೆ ‘ಅಪ್ನಾಪನ್’
ಏಕತಾ ಯಾತ್ರೆಯಿಂದ ಇಂದಿನವರೆಗೆ: ಶ್ರೀ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಪಯಣವನ್ನು, ‘ಅಪ್ನಾಪನ್’ನಲ್ಲಿ ದಾಖಲಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
‘ಅಪ್ನಾಪನ್’ ಸಂಘಟನೆ, ಸುಶಾಸನ, ಸಂವೇದನಾಶೀಲತೆ ಮತ್ತು ಸಂಕಲ್ಪದ ದಾಖಲೆಯಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ನೀತಿ ನಿರೂಪಣೆ, ಸಾಂಘಿಕ ಕಾರ್ಯತಂತ್ರ ಮತ್ತು ವಿವಿಧ ರಾಜ್ಯಗಳಲ್ಲಿ ಸಂಪುಟ ಮಟ್ಟದ ನಿರ್ಧಾರಗಳ ಅನುಷ್ಠಾನದ ಪ್ರಮುಖ ಒಳನೋಟಗಳನ್ನು ಸೆರೆಹಿಡಿದಿದೆ ‘ಅಪ್ನಾಪನ್’
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ‘ಅಪ್ನಾಪನ್’ ಮೂರು ದಶಕಗಳ ಸಾರ್ವಜನಿಕ ಜೀವನ ಮತ್ತು ಪ್ರಧಾನಮಂತ್ರಿ ಶ್ರೀ ಮೋದಿ ಅವರೊಂದಿಗಿನ ಒಡನಾಟವನ್ನು ಪ್ರತಿಬಿಂಬಿಸುತ್ತದೆ
ಪ್ರಕಟಣಾ ದಿನಾಂಕ:
14 MAY 2026 4:12PM by PIB Bengaluru
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ತಮ್ಮ ಹೊಸ ಪುಸ್ತಕ ‘ಅಪ್ನಾಪನ್’ ಬಿಡುಗಡೆಯ ಬಗ್ಗೆ ಘೋಷಿಸಿದರು. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗಿನ ಅವರ 35 ವರ್ಷಗಳ ಸುದೀರ್ಘ ಒಡನಾಟ ಮತ್ತು ಅನುಭವಗಳನ್ನು ಒಳಗೊಂಡಿದೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್ ಅವರು, ದಶಕಗಳ ಕಾಲದ ಸಾಂಘಿಕ ಕೆಲಸ, ಸಾರ್ವಜನಿಕ ಸೇವೆ, ಆಡಳಿತ ಮತ್ತು ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಪ್ರಧಾನಮಂತ್ರಿಯವರೊಂದಿಗೆ ಹೊಂದಿದ್ದ ನಿಕಟ ಸಂಬಂಧದ ಅತ್ಯಂತ ವೈಯಕ್ತಿಕ ವಿವರಣೆ ಈ ಪುಸ್ತಕದಲ್ಲಿದೆ ಎಂದು ಬಣ್ಣಿಸಿದರು. ಈ ಪುಸ್ತಕವು ಮೇ 26, 2026 ರಂದು ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಪೂಸಾದಲ್ಲಿರುವ ಎನ್ಎಎಸ್ಸಿ (NASC) ಕಾಂಪ್ಲೆಕ್ಸ್ನಲ್ಲಿ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಎಚ್. ಡಿ. ದೇವೇಗೌಡ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.

ಪುಸ್ತಕದ ಬಗ್ಗೆ ಮಾತನಾಡಿದ ಶ್ರೀ ಚೌಹಾಣ್ ಅವರು, ‘ಅಪ್ನಾಪನ್’ ಓದುಗರಿಗೆ ಪ್ರಧಾನಮಂತ್ರಿ ಮೋದಿ ಅವರ ವ್ಯಕ್ತಿತ್ವ, ನಾಯಕತ್ವದ ಶೈಲಿ, ಸಂವೇದನಾಶೀಲತೆ ಮತ್ತು ಕೆಲಸದ ಸಂಸ್ಕೃತಿಯನ್ನು ಹೆಚ್ಚು ಹತ್ತಿರದಿಂದ ಮತ್ತು ವೈಯಕ್ತಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದರು.
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾತನಾಡಿ, ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡುವಾಗ ತಾವು ಅಚ್ಚಳಿಯದೆ ಉಳಿಸಿಕೊಂಡ ಅನುಭವಗಳು, ಭಾವನೆಗಳು, ಪ್ರೇರಣೆಗಳು ಮತ್ತು ಮೌಲ್ಯಗಳಿಗೆ, ಈ ಪುಸ್ತಕವು ಅಭಿವ್ಯಕ್ತಿ ನೀಡುತ್ತದೆ ಎಂದು ಹೇಳಿದರು. ಪ್ರಧಾನಮಂತ್ರಿಯವರೊಂದಿಗಿನ ತಮ್ಮ ಒಡನಾಟವು ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ್ದಾಗಿದ್ದು, 1991ರ ಏಕತಾ ಯಾತ್ರೆಯೊಂದಿಗೆ ಇದು ಪ್ರಾರಂಭವಾಯಿತು ಎಂದು ಅವರು ಸ್ಮರಿಸಿದರು. ಸಾಂಘಿಕ ಕಾರ್ಯಕರ್ತರ ನಡುವಿನ ಸಂಬಂಧವಾಗಿ ಆರಂಭವಾದದ್ದು, ಕಾಲಾನಂತರದಲ್ಲಿ ಮುಖ್ಯಮಂತ್ರಿಯಾಗಿ ಮತ್ತು ನಂತರ ಕೇಂದ್ರ ಸಚಿವರಾಗಿ ಅವರ ಅಧಿಕಾರಾವಧಿಯ ವಿವಿಧ ಜವಾಬ್ದಾರಿಗಳ ಮೂಲಕ ವಿಕಸನಗೊಂಡಿತು. ಪ್ರಪಂಚವು ಶ್ರೀ ನರೇಂದ್ರ ಮೋದಿಯವರನ್ನು ಒಬ್ಬ ನಿರ್ಣಾಯಕ ಮತ್ತು ಪ್ರಭಾವಶಾಲಿ ನಾಯಕನಾಗಿ ನೋಡಿದರೆ, ತಾವು ವೈಯಕ್ತಿಕವಾಗಿ ಅವರಲ್ಲಿ ಒಬ್ಬ ಸಾಧಕ, ಕರ್ಮಯೋಗಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಂಡ ವ್ಯಕ್ತಿತ್ವದ ಗುಣಗಳನ್ನು ಕಂಡಿದ್ದೇನೆ ಎಂದು ಅವರು ತಿಳಿಸಿದರು. ರಾತ್ರಿ ತಡವಾಗಿ ಕೆಲಸ ಮಾಡಿದರೂ, ಪ್ರಧಾನಿ ಮೋದಿಯವರು ಪ್ರತಿ ಹೊಸ ದಿನವನ್ನೂ ಅಷ್ಟೇ ಶಕ್ತಿ, ಸ್ಪಷ್ಟತೆ ಮತ್ತು ರಾಷ್ಟ್ರದ ಕಡೆಗಿನ ಬದ್ಧತೆಯೊಂದಿಗೆ ಎದುರಿಸುತ್ತಾರೆ ಎಂದು ಅವರು ಉಲ್ಲೇಖಿಸಿದರು.
ಏಕತಾ ಯಾತ್ರೆಯನ್ನು ಸ್ಮರಿಸಿದ ಶ್ರೀ ಚೌಹಾಣ್ ಅವರು, ಆ ಸಮಯದಲ್ಲಿ ಕೆಲವರು ಇದನ್ನು ರಾಜಕೀಯ ಪ್ರಚಾರ ಎಂದು ಪರಿಗಣಿಸಿದರೆ, ಶ್ರೀ ನರೇಂದ್ರ ಮೋದಿಯವರು ಅದನ್ನು ರಾಷ್ಟ್ರೀಯ ಪ್ರಜ್ಞೆಯ ಚಳವಳಿಯನ್ನಾಗಿ ಪರಿವರ್ತಿಸಿದರು ಎಂದು ಹೇಳಿದರು. ಅವರ ಪ್ರಕಾರ, ಶ್ರೀ ಮೋದಿಯವರ ದೃಷ್ಟಿಕೋನವು ಶ್ರೀನಗರದ ಲಾಲ್ ಚೌಕ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ; ಬದಲಾಗಿ ಅದು ದೇಶದ ಯುವಜನತೆಯಲ್ಲಿ ದೇಶಪ್ರೇಮ, ಹೆಮ್ಮೆ ಮತ್ತು ಸಮರ್ಪಣಾ ಮನೋಭಾವವನ್ನು ಪ್ರೇರೇಪಿಸುವುದಾಗಿತ್ತು.
ನಾಯಕತ್ವವು ಕೇವಲ ಭಾಷಣಗಳ ಮೂಲಕ ನಿರ್ಮಾಣವಾಗುವುದಿಲ್ಲ, ಬದಲಿಗೆ ಶಿಸ್ತು, ತ್ಯಾಗ, ಬದ್ಧತೆ ಮತ್ತು ಜನರ ಬಗ್ಗೆ ಇರುವ ಗಾಢವಾದ ಆತ್ಮೀಯತೆಯ ಭಾವನೆಯಿಂದ ರೂಪುಗೊಳ್ಳುತ್ತದೆ ಎಂದು ಆ ಹಂತದಲ್ಲೇ ತಮಗೆ ಅರಿವಾಯಿತು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಈ ಅನುಭವಗಳೇ ಅಂತಿಮವಾಗಿ ಈ ಪುಸ್ತಕದ ಹಿಂದಿನ ಸ್ಫೂರ್ತಿಯಾದವು ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಶ್ರೀ ಮೋದಿ ಅವರ ಸಾಂಘಿಕ ಸಾಮರ್ಥ್ಯಗಳನ್ನು ಉಲ್ಲೇಖಿಸುತ್ತಾ ಮಾತನಾಡಿದ ಚೌಹಾಣ್ ಅವರು, ಸಂಘಟನೆಯನ್ನು ವಿಸ್ತರಿಸುವ, ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವ, ಆಲೋಚನೆಗಳನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಮತ್ತು ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸುವ ಅವರ ಸಾಮರ್ಥ್ಯವು ಅವರ ವಿಶಿಷ್ಟ ಶಕ್ತಿಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಯಾಗಿ, ಸಂಕೀರ್ಣ ಮತ್ತು ದೀರ್ಘಕಾಲದವರೆಗೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ಸಂವಾದ, ಸ್ಪಷ್ಟತೆ ಮತ್ತು ದೃಢನಿಶ್ಚಯದ ಮೂಲಕ ಹೇಗೆ ಪರಿಹರಿಸಬಹುದು ಎಂಬುದನ್ನು ತಾವು ಹತ್ತಿರದಿಂದ ಗಮನಿಸಿರುವುದಾಗಿ ಅವರು ತಿಳಿಸಿದರು.
ಇದರ ಜೊತೆಗೆ, ಪ್ರಧಾನಮಂತ್ರಿ ಶ್ರೀ ಮೋದಿ ಅವರ ವ್ಯಕ್ತಿತ್ವವು ಎಷ್ಟು ಸಂಕಲ್ಪಬದ್ಧವಾಗಿದೆಯೋ ಅಷ್ಟೇ ಸಂವೇದನಾಶೀಲವಾಗಿದೆ ಎಂದೂ ಕೇಂದ್ರ ಸಚಿವರು ತಿಳಿಸಿದರು. ಏಕತಾ ಯಾತ್ರೆಯ ಘಟನೆಯೊಂದನ್ನು ಸ್ಮರಿಸುತ್ತಾ, ಭದ್ರತಾ ಕಾರಣಗಳಿಂದ ಧ್ವಜಾರೋಹಣದ ಸಮಯದಲ್ಲಿ ಹಲವಾರು ಸಮರ್ಪಿತ ಕಾರ್ಯಕರ್ತರು ಲಾಲ್ ಚೌಕ್ ತಲುಪಲು ಸಾಧ್ಯವಾಗದಿದ್ದಾಗ, ಶ್ರೀ ನರೇಂದ್ರ ಮೋದಿ ಅವರು, ಅವರ ನಿರಾಶೆಯ ಮತ್ತು ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಂಡಿದ್ದರು ಎಂದು ಹೇಳಿದರು. ಶ್ರೀ ಚೌಹಾಣ್ ಅವರ ಪ್ರಕಾರ, ಆ ಕ್ಷಣವು ಪ್ರಧಾನಮಂತ್ರಿಯವರ ಭಾವನಾತ್ಮಕ ಆಳ ಮತ್ತು ಪಕ್ಷದ ಕಾರ್ಯಕರ್ತರೊಂದಿಗಿನ ಅವರ ನೈಜ ಒಡನಾಟವನ್ನು ಪ್ರತಿಬಿಂಬಿಸುತ್ತದೆ.
ನಾಯಕತ್ವವನ್ನು ಸಾಮಾನ್ಯವಾಗಿ ಸಾಂಘಿಕ ಕಟ್ಟುನಿಟ್ಟಿನೊಂದಿಗೆ ಮಾತ್ರ ಗುರುತಿಸಲಾಗುತ್ತದೆ, ಆದರೆ ಶ್ರೀ ನರೇಂದ್ರ ಮೋದಿ ಅವರು ಕಾರ್ಯಕರ್ತರು, ಬಡವರು, ರೈತರು, ತಾಯಂದಿರು, ಸಹೋದರಿಯರು ಮತ್ತು ಸಾಲಿನ ಕೊನೆಯಲ್ಲಿ ನಿಂತಿರುವವರ ಬಗ್ಗೆ ಆಳವಾದ ಸಹಾನುಭೂತಿಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ಮಾನವೀಯ ದೃಷ್ಟಿಕೋನವೇ ಪ್ರಧಾನಮಂತ್ರಿಯವರ ನಾಯಕತ್ವವನ್ನು ವಿಶಿಷ್ಟ ಮತ್ತು ದೂರಗಾಮಿ ಮಾಡುತ್ತಿದೆ ಎಂದು ಶ್ರೀ ಚೌಹಾಣ್ ಸೇರಿಸಿದರು. ಅನೇಕ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ತಂತ್ರಜ್ಞಾನವನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸುವ ಮೊದಲೇ ಪ್ರಧಾನಮಂತ್ರಿ ಶ್ರೀ ಮೋದಿ, ಅದರ ಪ್ರಾಮುಖ್ಯತೆಯನ್ನು ಗುರುತಿಸಿದ್ದರು. ಆಡಳಿತ, ಪಾರದರ್ಶಕತೆ, ಸಾರ್ವಜನಿಕ ಸಹಭಾಗಿತ್ವ ಮತ್ತು ಸೇವಾ ವಿತರಣೆಯಲ್ಲಿ ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ಸಂಯೋಜಿಸಲಾಗಿದೆ ಎಂಬುದನ್ನು ದೇಶವು ನಂತರ ಸಾಕ್ಷಿಯಾಯಿತು ಎಂದು ಅವರು ಗಮನಿಸಿದರು.
ಕೋವಿಡ್-19 ಸಾಂಕ್ರಾಮಿಕದ ಸವಾಲಿನ ಅವಧಿಯನ್ನು ಉಲ್ಲೇಖಿಸಿದ ಚೌಹಾಣ್, ದೇಶಾದ್ಯಂತ ವ್ಯಾಪಕ ಅನಿಶ್ಚಿತತೆ ಮತ್ತು ಆತಂಕದ ಸಮಯದಲ್ಲಿಯೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿರ್ಧಾರ ತೆಗೆದುಕೊಳ್ಳುವಲ್ಲಿ ತಾಳ್ಮೆ, ಸಂಯಮ ಮತ್ತು ದೂರದೃಷ್ಟಿಯನ್ನು ಪ್ರದರ್ಶಿಸಿದರು ಎಂದು ಹೇಳಿದರು. ಬಿಕ್ಕಟ್ಟುಗಳು ನಾಯಕತ್ವದ ನಿಜವಾದ ಗುಣವನ್ನು ಬಹಿರಂಗಪಡಿಸುತ್ತವೆ ಮತ್ತು ಆ ಕಠಿಣ ಹಂತದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ನಿರ್ದೇಶನ ಮತ್ತು ಆತ್ಮವಿಶ್ವಾಸ ಎರಡನ್ನೂ ನೀಡಿದರು ಎಂದು ಅವರು ಹೇಳಿದರು.
ಪುಸ್ತಕದ ಸಾರಾಂಶವನ್ನು ಸ್ಪಷ್ಟಪಡಿಸಿದ ಶ್ರೀ ಚೌಹಾಣ್, ‘ಅಪ್ನಾಪನ್’ ಕೇವಲ ಘಟನೆಗಳ ನಿರೂಪಣೆಯಲ್ಲ, ಬದಲಾಗಿ ಭಾರತವನ್ನು ಪರಿವರ್ತಿಸಲು ಧೈರ್ಯ ಮಾಡಿದ, ಆ ಆಲೋಚನೆ, ದೃಷ್ಟಿಕೋನ, ಕಾರ್ಯ ವಿಧಾನ ಮತ್ತು ರಾಷ್ಟ್ರ ನಿರ್ಮಾಣದ ಮನೋಭಾವವನ್ನು ಪ್ರತಿಬಿಂಬಿಸುವ ದಾಖಲೆಯಾಗಿದೆ ಎಂದು ಹೇಳಿದರು. ಸಂಘಟನೆಯಿಂದ ಆಡಳಿತದವರೆಗೆ, ಸಂವೇದನಾಶೀಲತೆಯಿಂದ ನಿರ್ಧಾರ ತೆಗೆದುಕೊಳ್ಳುವವರೆಗೆ ಮತ್ತು ಸಂಕಲ್ಪದಿಂದ ಸಿದ್ಧಿಯವರೆಗಿನ ಪ್ರಯಾಣದ ಆಪ್ತ ನೋಟವನ್ನು ಓದುಗರು ಈ ಪುಸ್ತಕದಲ್ಲಿ ಕಾಣಬಹುದು ಎಂದು ಅವರು ತಿಳಿಸಿದರು.
ಪುಸ್ತಕದ ಪ್ರಭಾವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ‘ಅಪ್ನಾಪನ್’ ವಿಶೇಷವಾಗಿ ಯುವಜನತೆಗೆ ಸ್ಫೂರ್ತಿ ನೀಡಲಿದೆ ಎಂದು ಹೇಳಿದರು. ಅವರ ಪ್ರಕಾರ, ರಾಷ್ಟ್ರವನ್ನು ಪರಿವರ್ತಿಸಲು ಉನ್ನತ ಹುದ್ದೆಯ ಅಗತ್ಯವಿಲ್ಲ, ಬದಲಾಗಿ ದೊಡ್ಡ ಸಂಕಲ್ಪ, ಶಿಸ್ತು, ಸೇವಾ ಮನೋಭಾವ ಮತ್ತು ಜನರೊಂದಿಗೆ ಹೃತ್ಪೂರ್ವಕ ಸಂಬಂಧದ ಅಗತ್ಯವಿದೆ ಎಂಬ ಸಂದೇಶವನ್ನು ಈ ಪುಸ್ತಕ ನೀಡುತ್ತದೆ.
ಜನರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ಚೆನ್ನಾಗಿ ಅರ್ಥಮಾಡಿಕೊಳ್ಳಲಿ ಎಂಬ ಕಾರಣಕ್ಕೆ ತಾವು ಸಮಾಜದೊಂದಿಗೆ ತಮ್ಮ ಕೆಲವು ವೈಯಕ್ತಿಕ ಅನುಭವಗಳನ್ನು ‘ಅಪ್ನಾಪನ್’ ಮೂಲಕ ಹಂಚಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು. ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ ಈ ಪುಸ್ತಕವು ಅಮೂಲ್ಯವಾದ ಆಕರವಾಗಲಿದೆ ಎಂದು ಅವರು ಹೇಳಿದರು.
*****
(ಪ್ರಕಟಣೆ ಐ.ಡಿ.: 2261065)
ವಿಸಿಟರ್ ಕೌಂಟರ್ : 14