ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದ ಎನ್‌ ಡಿ ಆರ್‌ ಎಫ್‌ ನ 'ಪ್ರೆಸಿಡೆಂಟ್ಸ್ ಕಲರ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಭಾಷಣ ಮಾತನಾಡಿದರು


ಬಿಸಿಗಾಳಿ ಸಂಬಂಧಿತ ಸಾವುಗಳನ್ನು ಶೂನ್ಯಕ್ಕೆ ಇಳಿಸಲು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ

ಕಳೆದ 20 ವರ್ಷಗಳಲ್ಲಿ ತಮ್ಮ ಧೈರ್ಯ, ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶದ ವಿಶ್ವಾಸವನ್ನು ಗಳಿಸಿದ ಮತ್ತು ‘ಪ್ರೆಸಿಡೆಂಟ್ಸ್ ಕಲರ್’ ಗೌರವಕ್ಕೆ ಪಾತ್ರರಾದ ಎಲ್ಲಾ ಎನ್‌ ಡಿ ಆರ್‌ ಎಫ್ ಸಿಬ್ಬಂದಿಗೆ ಅಭಿನಂದನೆಗಳು

ಸಿಎಪಿಎಫ್ ಸಿಬ್ಬಂದಿ 7 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ, ಇದು ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ

'ವಸುಧೈವ ಕುಟುಂಬಕಂ' ಎಂಬ ಸ್ಫೂರ್ತಿಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಭಾರತವು ಇಂದು ವಿಪತ್ತು ನಿರ್ವಹಣೆಯಲ್ಲಿ ಜಾಗತಿಕ ನಾಯಕ ಮತ್ತು ಮೊದಲ ಪ್ರತಿಸ್ಪಂದಕನಾಗಿ ಹೊರಹೊಮ್ಮಿದೆ

ಈ ಹಿಂದೆ, ವಿಪತ್ತು ನಿರ್ವಹಣೆಯು ಪ್ರಧಾನವಾಗಿ ಪರಿಹಾರ-ಆಧಾರಿತವಾಗಿತ್ತು, ಆದರೆ ಮೋದಿ ಸರ್ಕಾರವು ಅದನ್ನು 'ಪ್ರತಿಕ್ರಿಯಾತ್ಮಕ' ಬದಲಿಗೆ 'ತಡೆಗಟ್ಟುವಿಕೆ ಮತ್ತು ಉತ್ಪಾದಕ' ಮಾದರಿಯಾಗಿ ಪರಿವರ್ತಿಸಿದೆ

ಮೋದಿ ಸರ್ಕಾರವು ಭಾರತದ ವಿಪತ್ತು ನಿರ್ವಹಣಾ ವಿಧಾನವನ್ನು 'ಕನಿಷ್ಠ ಸಾವುನೋವುಗಳಿಂದ' 'ಶೂನ್ಯ ಸಾವುನೋವುಗಳ' ಕಡೆಗೆ ಕೊಂಡೊಯ್ಯುತ್ತಿದೆ

ವಿಪತ್ತು ನಿರ್ವಹಣೆಯಲ್ಲಿ ಪ್ರಧಾನ ಮಂತ್ರಿ ಮೋದಿಯವರ 10-ಅಂಶಗಳ ಕಾರ್ಯಸೂಚಿ ಮತ್ತು 360-ಡಿಗ್ರಿ ವಿಧಾನವು ವಿಪತ್ತು ಅಪಾಯ ನಿರ್ವಹಣೆಗೆ ಹೊಸ ದಿಕ್ಕನ್ನು ನೀಡಿದೆ

1.5 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಉಳಿಸಿದ ಮತ್ತು 9 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಎನ್‌ ಡಿ ಆರ್‌ ಎಫ್ ಸಿಬ್ಬಂದಿಯನ್ನು ಕಂಡರೆ ಜನರಲ್ಲಿ ಭದ್ರತೆಯ ಬಲವಾದ ಭಾವನೆ ಮತ್ತು ಅಚಲ ವಿಶ್ವಾಸ ಮೂಡುತ್ತದೆ

प्रविष्टि तिथि: 14 MAY 2026 1:40PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್ ಡಿ ಆರ್ ಎಫ್) 'ಪ್ರೆಸಿಡೆಂಟ್ಸ್ ಕಲರ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕರು, ಎನ್ ಡಿ ಆರ್ ಎಫ್ ಮಹಾನಿರ್ದೇಶಕರು ಮತ್ತು ಇತರ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಎನ್ ಡಿ ಆರ್ ಎಫ್ ಗೆ ‘ಪ್ರೆಸಿಡೆಂಟ್ಸ್ ಕಲರ್’ ಗೌರವ ನೀಡುವುದು ಕೇವಲ ಎನ್ ಡಿ ಆರ್ ಎಫ್ ನ ಶ್ಲಾಘನೀಯ ಸೇವೆಯ ಮನ್ನಣೆ ಮಾತ್ರವಲ್ಲದೆ, ಎಸ್‌ ಡಿ ಆರ್‌ ಎಫ್‌ ಗಳು, ಪಂಚಾಯತ್‌ ನಿಂದ ರಾಜ್ಯದವರೆಗಿನ ಸಂಪೂರ್ಣ ಕಾರ್ಯವಿಧಾನ, ಎನ್‌ ಸಿ ಸಿ, ಎನ್‌ ಎಸ್‌ ಎಸ್ ಮತ್ತು ಸೇವೆಯಲ್ಲಿ ತೊಡಗಿರುವ ಸಾವಿರಾರು ವಿಪತ್ತು ಸ್ವಯಂಸೇವಕರ ಕೊಡುಗೆಗಳಿಗೆ ಗೌರವಾನ್ವಿತ ರಾಷ್ಟ್ರಪತಿಯವರು ನೀಡಿದ ಮಾನ್ಯತೆಯಾಗಿದೆ ಎಂದು ಹೇಳಿದರು. ಎನ್ ಡಿ ಆರ್ ಎಫ್ ಸಿಬ್ಬಂದಿ “ಆಪದಾ ಸೇವಾ ಸದೈವ ಸರ್ವತ್ರ” ಎಂಬ ಧ್ಯೇಯವಾಕ್ಯದೊಂದಿಗೆ ದೇಶದ ಎಲ್ಲಿಯಾದರೂ ಹೋಗುತ್ತಾರೆ ಎಂದು ಅವರು ಹೇಳಿದರು. ಭಾರತದಲ್ಲಿ ಅಥವಾ ವಿದೇಶದಲ್ಲಿ, ಎನ್ ಡಿ ಆರ್ ಎಫ್ ಸಿಬ್ಬಂದಿ ಎಲ್ಲಿಗೆ ಹೋದರೂ ಅಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ದೇಶದ ಯಾವುದೇ ಭಾಗದಲ್ಲಿ ವಿಪತ್ತು ಸಂಭವಿಸಿದಾಗ ಅಥವಾ ಸಂಭವಿಸುವ ನಿರೀಕ್ಷೆಯಿದ್ದಾಗ, ಎನ್ ಡಿ ಆರ್ ಎಫ್ ಸಿಬ್ಬಂದಿ ಆಗಮಿಸಿದ ತಕ್ಷಣವೇ ಜನರು ನಿರಾಳರಾಗುತ್ತಾರೆ ಮತ್ತು ಈಗ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಅವರಲ್ಲಿ ಮೂಡುತ್ತದೆ ಎಂದು ಶ್ರೀ ಶಾ ಹೇಳಿದರು. ಕಳೆದ 20 ವರ್ಷಗಳ ಹಿಂದೆ ಸ್ಥಾಪನೆಯಾದಾಗಿನಿಂದ, ಎನ್ ಡಿ ಆರ್ ಎಫ್ ದೇಶಾದ್ಯಂತ ಪ್ರವಾಹ, ಭೂಕಂಪ, ಚಂಡಮಾರುತ ಮತ್ತು ಇತರ ವಿಪತ್ತುಗಳ ಸಮಯದಲ್ಲಿ ತನ್ನ ಯಶಸ್ವಿ ಕಾರ್ಯಾಚರಣೆಗಳ ಮೂಲಕ 140 ಕೋಟಿ ನಾಗರಿಕರ ವಿಶ್ವಾಸವನ್ನು ಗಳಿಸಿದೆ ಎಂದು ಅವರು ಹೇಳಿದರು. 1.5 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಉಳಿಸಿದ ಮತ್ತು 9 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಎನ್ ಡಿ ಆರ್ ಎಫ್ ಸಿಬ್ಬಂದಿಯನ್ನು ಕಂಡರೆ ಭದ್ರತೆ ಮತ್ತು ವಿಶ್ವಾಸದ ಬಲವಾದ ಭಾವನೆ ಮೂಡುತ್ತದೆ ಎಂದು ಅವರು ಹೇಳಿದರು.

ಪ್ರೆಸಿಡೆಂಟ್ಸ್ ಕಲರ್ ಪ್ರಶಸ್ತಿಯು ಸಮಸ್ತ ಎನ್ ಡಿ ಆರ್ ಎಫ್ ನ ಸೇವೆ, ಧೈರ್ಯ, ಪರಾಕ್ರಮ ಮತ್ತು ಸಮರ್ಪಣಾ ಭಾವಕ್ಕೆ ಸಂದ ಮನ್ನಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌‌ ಡಿ ಎಂ ಎ) ಮತ್ತು ಎನ್ ಡಿ ಆರ್ ಎಫ್ ವಿಪತ್ತು ಸ್ಪಂದನಾ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಭೂಪಟದಲ್ಲಿ ಪ್ರಮುಖವಾಗಿ ಸ್ಥಾಪಿಸಿವೆ, ಇದು ಎಲ್ಲಾ ನಾಗರಿಕರಿಗೆ ಹೆಮ್ಮೆಯ ವಿಷಯವಾಗಿದೆ ಮತ್ತು ದೇಶದ ಗೃಹ ಸಚಿವನಾಗಿ ತಮಗೂ ಇದು ವಿಶೇಷ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.

116 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಇಂದು ಉದ್ಘಾಟಿಸಲಾಯಿತು ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಈ ಯೋಜನೆಗಳು ಎಲ್ಲಾ ರೀತಿಯ ವಿಪತ್ತುಗಳಿಂದ ನಾಗರಿಕರನ್ನು ರಕ್ಷಿಸುವ ಎನ್ ಡಿ ಆರ್ ಎಫ್ ನ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, 2014 ರಿಂದ ಭಾರತವು ವಿಪತ್ತು ಅಪಾಯದ ಕಡಿತದತ್ತ ಕೆಲಸ ಮಾಡುವುದಲ್ಲದೆ, ದೇಶವು ಈಗ ಶೂನ್ಯ ಸಾವುನೋವುಗಳ ಗುರಿಯತ್ತ ಸಾಗಬಲ್ಲ ಹಂತವನ್ನು ತಲುಪಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮುನ್ಸೂಚನೆ ಮತ್ತು ಹವಾಮಾನ ಇಲಾಖೆಯ ಮೂಲಕ ವಿಪತ್ತುಗಳ ಬಗ್ಗೆ ಎಲ್ಲಿ ಮುಂಚಿತವಾಗಿಯೇ ಮಾಹಿತಿ ಲಭ್ಯವಿರುತ್ತದೆಯೋ, ಅಲ್ಲಿ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಎನ್‌ ಡಿ ಎಂ ಎ ಹಲವಾರು ನೀತಿ ನಿರ್ಧಾರಗಳನ್ನು ತೆಗೆದುಕೊಂಡಿದೆ, ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ, ಸಾರ್ವಜನಿಕ ಜಾಗೃತಿಯನ್ನು ಯಶಸ್ವಿಯಾಗಿ ಉತ್ತೇಜಿಸಿದೆ ಮತ್ತು ಕ್ರಮೇಣ ವಿಪತ್ತು ಸನ್ನದ್ಧತೆಯನ್ನು ರಾಷ್ಟ್ರೀಯ ಸಂಸ್ಕೃತಿಯನ್ನಾಗಿ ಮಾಡುತ್ತಿದೆ ಎಂದು ಅವರು ಹೇಳಿದರು.

ನಾಗರಿಕರನ್ನು ಮಾತ್ರವಲ್ಲದೆ ಅವರ ಜೊತೆಗಿರುವ ಮೂಕ ಪ್ರಾಣಿಗಳನ್ನು ರಕ್ಷಿಸುವ ಮೂಲಕ ಎನ್‌ ಡಿ ಆರ್‌ ಎಫ್ ಅತ್ಯುತ್ತಮ ಉದಾಹರಣೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ವಿಪತ್ತುಗಳ ಸಮಯದಲ್ಲಿ ಶೂನ್ಯ ಜೀವಹಾನಿ ಮತ್ತು ಆಸ್ತಿಪಾಸ್ತಿಗೆ ಕನಿಷ್ಠ ಹಾನಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ ಎಂದು ಅವರು ಹೇಳಿದರು.

ಬಿಸಿಗಾಳಿಯಂತಹ ಗಂಭೀರ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಗೃಹ ಸಚಿವಾಲಯವು ಸಂಪೂರ್ಣ ಸಜ್ಜಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಿಸಿಗಾಳಿ ಸಂಬಂಧಿತ ಸಾವುಗಳನ್ನು ಶೂನ್ಯಕ್ಕೆ ಇಳಿಸಲು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಗೃಹ ಸಚಿವಾಲಯ ಮತ್ತು ಎನ್‌ ಡಿ ಆರ್‌ ಎಫ್ ಸಾಮರ್ಥ್ಯ ವೃದ್ಧಿ ಮತ್ತು ಸಮುದಾಯದ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡಿವೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಎನ್ ಡಿ ಆರ್ ಎಫ್ 8,500 ಕ್ಕೂ ಹೆಚ್ಚು ಸಿಬ್ಬಂದಿ, 10,000 ಕ್ಕೂ ಹೆಚ್ಚು ನಾಗರಿಕ ರಕ್ಷಣಾ ಕಾರ್ಯಕರ್ತರು ಮತ್ತು 2.20 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರಿಗೆ ತರಬೇತಿ ನೀಡುವ ಬೃಹತ್ ಕಾರ್ಯವನ್ನು ಕೈಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ 10,500 ಕ್ಕೂ ಹೆಚ್ಚು ದೋಣಿ ಚಾಲಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.

ಸಮುದಾಯ ಆಧಾರಿತ ವಿಪತ್ತು ಸ್ಪಂದನೆಯನ್ನು ಬಲಪಡಿಸುವಲ್ಲಿ ಮತ್ತು ಎಲ್ಲಾ ರೀತಿಯ ತುರ್ತು ಸಂದರ್ಭಗಳನ್ನು ಎದುರಿಸುವಲ್ಲಿ ವಿಪತ್ತು ಸ್ವಯಂಸೇವಕರು ಅತ್ಯಂತ ಉಪಯುಕ್ತವಾಗುತ್ತಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಹಿಂದೆ ವಿಪತ್ತು ನಿರ್ವಹಣೆಯು ಪ್ರಧಾನವಾಗಿ ಪರಿಹಾರ-ಆಧಾರಿತವಾಗಿತ್ತು, ಆದರೆ ಮೋದಿ ಸರ್ಕಾರವು ಅದನ್ನು ‘ಪ್ರತಿಕ್ರಿಯಾತ್ಮಕ’ ಬದಲಿಗೆ ‘ತಡೆಗಟ್ಟುವಿಕೆ ಮತ್ತು ಉತ್ಪಾದಕ’ವಾಗಿ ಪರಿವರ್ತಿಸಿದೆ ಎಂದು ಅವರು ಹೇಳಿದರು. ವಿಪತ್ತುಗಳಿಂದ ಜೀವ ಮತ್ತು ಆಸ್ತಿ ನಷ್ಟವನ್ನು ಕಡಿಮೆ ಮಾಡುವ ಪರಿಕಲ್ಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾಗತಿಕ ಮಾದರಿಯಾಗಿ ಸ್ಥಾಪಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ, ವಿಪತ್ತು ಸನ್ನದ್ಧತೆಯು ಕೇವಲ ಒಂದು ವ್ಯವಸ್ಥೆಯಾಗಿರದೆ ಸಂಪೂರ್ಣ ಪರಿಸರ ವ್ಯವಸ್ಥೆಯಾಗಿ ವಿಕಸನಗೊಂಡಿದೆ. ಗ್ರಾಮ ಪಂಚಾಯತ್‌ ಗಳಿಂದ ಹಿಡಿದು ಭಾರತ ಸರ್ಕಾರದವರೆಗೆ, ಐಎಂಡಿ ವಿಜ್ಞಾನಿಗಳಿಂದ ಸಾಮಾನ್ಯ ನಾಗರಿಕರವರೆಗೆ, ಸಾಮಾನ್ಯ ಉದ್ದೇಶದತ್ತ ಸಂಘಟಿತ ಕ್ರಮದ ಹೊಸ ಸಂಸ್ಕೃತಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ಒಡಿಶಾ ಸೂಪರ್ ಸೈಕ್ಲೋನ್, ಗುಜರಾತ್ ಭೂಕಂಪ ಮತ್ತು ಹಿಂದೂ ಮಹಾಸಾಗರದ ಸುನಾಮಿಯಂತಹ ಹಲವಾರು ಭೀಕರ ನೈಸರ್ಗಿಕ ವಿಕೋಪಗಳಿಗೆ ಭಾರತ ಸಾಕ್ಷಿಯಾಗಿದೆ, ಇದು ದೇಶಾದ್ಯಂತ ಜನರ ಜೀವನವನ್ನು ಬೆಚ್ಚಿಬೀಳಿಸಿತ್ತು. ಇದು ದೃಢವಾದ ವಿಪತ್ತು ನಿರ್ವಹಣಾ ಚೌಕಟ್ಟಿನ ಅಗತ್ಯವನ್ನು ಎತ್ತಿ ತೋರಿಸಿತು. ತರುವಾಯ, ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತರಲಾಯಿತು ಮತ್ತು ಎನ್‌ ಡಿ ಎಂ ಎ ಹಾಗೂ ಎನ್ ಡಿ ಆರ್ ಎಫ್ ಅನ್ನು ಸ್ಥಾಪಿಸಲಾಯಿತು. ಇಂದು 16 ಬೆಟಾಲಿಯನ್‌ ಗಳೊಂದಿಗೆ ಎನ್ ಡಿ ಆರ್ ಎಫ್ ಒಂದು ಶಕ್ತಿಯುತ ಪಡೆ ಆಗಿ ಹೊರಹೊಮ್ಮಿದೆ. ತನ್ನ ಕೆಲಸದ ವಿಧಾನಗಳು, ಎಸ್‌ ಡಿ ಆರ್‌ ಎಫ್‌ ಗಳಿಗೆ ತರಬೇತಿ ಬೆಂಬಲ ಮತ್ತು ಜಂಟಿ ಕಾರ್ಯಾಚರಣೆಗಳ ಮೂಲಕ ಎನ್ ಡಿ ಆರ್ ಎಫ್ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಮುನ್ನೆಚ್ಚರಿಕೆ ನಿಯೋಜನೆಯಂತಹ ಕ್ರಮಗಳು ಹಾನಿಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. 2008 ರ ಬಿಹಾರದ ಕೋಸಿ ಪ್ರವಾಹವು ಎನ್‌ ಡಿ ಆರ್‌ ಎಫ್‌ ಗೆ ಒಂದು ದೊಡ್ಡ ಪರೀಕ್ಷೆಯಾಗಿತ್ತು ಎಂದು ಶ್ರೀ ಶಾ ಸ್ಮರಿಸಿದರು. ತರುವಾಯ, ಧರಾಲಿಯಲ್ಲಿನ ಹಠಾತ್ ಪ್ರವಾಹ, ಚಸೋಟಿಯಲ್ಲಿನ ಮೇಘಸ್ಫೋಟ, ಜಮ್ಮು, ಪಂಜಾಬ್ ಮತ್ತು ದೆಹಲಿಯ ಪ್ರವಾಹಗಳು, ಮೊಂಥಾ ಚಂಡಮಾರುತ ಮತ್ತು ದ್ವಿತ್ವಾ ಚಂಡಮಾರುತದಂತಹ ಅನೇಕ ವಿಪತ್ತುಗಳನ್ನು ಎನ್ ಡಿ ಆರ್ ಎಫ್ ಯಶಸ್ವಿಯಾಗಿ ನಿಭಾಯಿಸಿದೆ. ಅಮರನಾಥ ಯಾತ್ರೆ, ಮಹಾಕುಂಭ, ಚಾರ್ ಧಾಮ್ ಯಾತ್ರೆ, ಮಣಿ ಮಹೇಶ್ ಯಾತ್ರೆ, ಶಬರಿಮಲೆ ತೀರ್ಥಯಾತ್ರೆ ಮತ್ತು ಜಗನ್ನಾಥ ರಥಯಾತ್ರೆಯಂತಹ ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿಯೂ ಎನ್ ಡಿ ಆರ್ ಎಫ್ ಸಮಾಜದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಅವರು ಹೇಳಿದರು.

ವಿಪತ್ತು ನಿರ್ವಹಣೆಯಲ್ಲಿ ಪ್ರಧಾನಮಂತ್ರಿ ಮೋದಿಯವರ 10-ಅಂಶಗಳ ಕಾರ್ಯಸೂಚಿ ಮತ್ತು 360-ಡಿಗ್ರಿ ವಿಧಾನವು ವಿಪತ್ತು ಅಪಾಯ ನಿರ್ವಹಣೆಗೆ ಹೊಸ ದಿಕ್ಕನ್ನು ನೀಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದು ಅಪಾಯದ ಮ್ಯಾಪಿಂಗ್, ಮುನ್ನೆಚ್ಚರಿಕೆ ವ್ಯವಸ್ಥೆಗಳು, ಸಮುದಾಯ ಭಾಗವಹಿಸುವಿಕೆ ಮತ್ತು ಮಾರ್ಗಸೂಚಿಗಳ ರೂಪೀಕರಣದಂತಹ ಕ್ಷೇತ್ರಗಳನ್ನು ಬಲಪಡಿಸಿದೆ. ಜಾಗತಿಕವಾಗಿ ಭಾರತವು ವಿಪತ್ತು ನಿರ್ವಹಣೆಯಲ್ಲಿ ನಿರ್ವಿವಾದ ನಾಯಕ ಮತ್ತು ಮೊದಲ ಪ್ರತಿಸ್ಪಂದಕನಾಗಿ ಹೊರಹೊಮ್ಮಿದೆ ಎಂದು ಶ್ರೀ ಶಾ ಹೇಳಿದರು. ‘ವಸುಧೈವ ಕುಟುಂಬಕಂ’ ತತ್ವವನ್ನು ಆಚರಣೆಗೆ ತರಲಾಗಿದೆ ಮತ್ತು ನೆಲಮಟ್ಟದಲ್ಲಿ ಜಾರಿಗೆ ತರಲಾಗಿದೆ. ಪ್ರಧಾನ ಮಂತ್ರಿ ಮೋದಿಯವರಿಂದ ಸ್ಫೂರ್ತಿ ಪಡೆದ ಭಾರತವು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವವನ್ನು ವಹಿಸಿದೆ. ಇಂದು 48 ದೇಶಗಳು 'ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ' (ಸಿ ಡಿ ಆರ್‌ ಐ) ಗೆ ಸೇರ್ಪಡೆಗೊಂಡಿವೆ ಮತ್ತು ಭಾರತದೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.

ದೇಶಾದ್ಯಂತ ಇರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಎಲ್ಲಾ ಸಿಬ್ಬಂದಿಯನ್ನು ಶ್ರೀ ಅಮಿತ್ ಶಾ ಅಭಿನಂದಿಸಿದರು ಮತ್ತು 2021 ರಿಂದ ಸಿಎಪಿಎಫ್ ಸಿಬ್ಬಂದಿ ದೇಶಾದ್ಯಂತ 7 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ ಎಂದು ಹೇಳಿದರು. ಇದು ಎಲ್ಲಾ ಸಿಎಪಿಎಫ್‌‌ ಗಳ ಮಾನವೀಯ ದೃಷ್ಟಿಕೋನ ಮತ್ತು ಪರಿಸರ ಜಾಗೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

 

*****


(रिलीज़ आईडी: 2260997) आगंतुक पटल : 52
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali-TR , Punjabi , Gujarati , Tamil , Telugu , Malayalam