ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

'ವಿಶ್ವ ನವಕಾರ ಮಹಾಮಂತ್ರ ದಿನ'ದ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಪ್ರಪಂಚದ ವಿವಿಧ ಭಾಗಗಳಲ್ಲಿ ಸಂಘರ್ಷದ ಸಂದರ್ಭಗಳು ಮೇಲುಗೈ ಸಾಧಿಸುತ್ತಿರುವ ಸಮಯದಲ್ಲಿ, ಇಡೀ ಪ್ರಪಂಚದ ಕಲ್ಯಾಣಕ್ಕಾಗಿ 'ನವಕಾರ ಮಂತ್ರ'ದ ಸಾಮೂಹಿಕ ಪಠಣವು ಹೆಚ್ಚು ಅರ್ಥಪೂರ್ಣ ಮತ್ತು ಪ್ರಸ್ತುತವಾಗಿದೆ

ಜಗತ್ತಿಗೆ ಶಾಂತಿಯ ಅಗತ್ಯವಿರುವ ಸಮಯದಲ್ಲಿ, ನವಕಾರ ಮಂತ್ರದ ಸಾಮೂಹಿಕ ಪಠಣವು ಪರಿಸರವನ್ನು ಶುದ್ಧೀಕರಿಸಲು ಸಹಾಯ ಮಾಡುವುದಲ್ಲದೆ, ಮನಸ್ಸಿನ  ಅಶಾಂತಿಗಳನ್ನು ಹೋಗಲಾಡಿಸಲು ನೆರವಾಗುತ್ತದೆ

ನವಕಾರ ಮಂತ್ರವು ಸಂಪೂರ್ಣವಾಗಿ ನಿರಾಕಾರ, ನಿಷ್ಪಕ್ಷಪಾತ ಮತ್ತು ಸಾರ್ವತ್ರಿಕ ಪ್ರಾರ್ಥನೆಯಾಗಿದೆ. ಇದರಲ್ಲಿ ಕಾಲ, ಜಾತಿ, ಪ್ರದೇಶ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ

ಜನರು ಸಾಮೂಹಿಕವಾಗಿ ಒಂದೇ ಮಂತ್ರವನ್ನು ಭಕ್ತಿಯಿಂದ ಪಠಿಸಿದಾಗ, ಅದು ವ್ಯಕ್ತಿಗೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಮತ್ತು ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ

ಭಾರತವು ವಿವಿಧ ಪಂಥಗಳು ಮತ್ತು ಧರ್ಮಗಳ ನಾಡು. ಅಲ್ಲಿ ಪ್ರತಿಯೊಂದು ಸಂಪ್ರದಾಯವು ಮಂತ್ರಗಳ ವಿಶೇಷ ಮಹತ್ವ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಒಬ್ಬ ವ್ಯಕ್ತಿಯು ಗೌರವದಿಂದ ನಮಸ್ಕರಿಸಿದಾಗ, ಅದು ಅವರ ಅಹಂಕಾರದ ಕರಗುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ

ಪ್ರಕಟಣಾ ದಿನಾಂಕ: 09 APR 2026 2:07PM by PIB Bengaluru

ನವದೆಹಲಿಯಲ್ಲಿ 'ವಿಶ್ವ ನವಕರ್ ಮಹಾಮಂತ್ರ ದಿವ'ದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ವಿಶ್ವದ ವಿವಿಧ ಭಾಗಗಳು ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸುವ ಪ್ರಯತ್ನಗಳಲ್ಲಿ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿರುವ ಇಂದಿನ ಸಮಯದಲ್ಲಿ, ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಇಲ್ಲಿ ನವಕಾರ ಮಂತ್ರದ ಸಾಮೂಹಿಕ ಪಠಣವು ಹೆಚ್ಚು ಅರ್ಥಪೂರ್ಣ ಮತ್ತು ಪ್ರಸ್ತುತವಾಗಿದೆ ಎಂದು ಹೇಳಿದರು. ಭಾರತವು ವೈವಿಧ್ಯಮಯ ಪಂಥಗಳು ಮತ್ತು ಧರ್ಮಗಳ ದೇಶವಾಗಿದ್ದು, ಪ್ರತಿಯೊಂದು ಸಂಪ್ರದಾಯವು ಮಂತ್ರಗಳ ವಿಶೇಷ ಮಹತ್ವ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಉಲ್ಲೇಖಿಸುತ್ತದೆ ಎಂದು ಹೇಳಿದರು.

ಮಂತ್ರಗಳು ಮಾನವ ಜೀವನವನ್ನು ಉನ್ನತ ಮಾರ್ಗದತ್ತ ಕರೆದೊಯ್ಯುತ್ತವೆ, ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ ಮತ್ತು ಉದಾತ್ತ ಉದ್ದೇಶಗಳನ್ನು ಬಲಪಡಿಸುತ್ತವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಜನರು ಸಾಮೂಹಿಕವಾಗಿ ಒಂದೇ ಮಂತ್ರವನ್ನು ಭಕ್ತಿಯಿಂದ ಪಠಿಸಿದಾಗ, ಅದು ವ್ಯಕ್ತಿಗೆ ಮಾತ್ರವಲ್ಲದೆ ಇಡೀ ರಾಷ್ಟ್ರ ಮತ್ತು ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ನಮ್ಮ ಪ್ರಬುದ್ಧ ಋಷಿಮುನಿಗಳು ತಲೆಮಾರುಗಳಿಂದ ದಣಿವರಿಯದ ತಪಸ್ಸಿನ ಮೂಲಕ ಇಡೀ ಮನುಕುಲದ ಕಲ್ಯಾಣಕ್ಕಾಗಿ ಈ ಮಂತ್ರಗಳನ್ನು ರಚಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾವು ಅವುಗಳನ್ನು ಶ್ರದ್ಧೆಯಿಂದ ಸ್ವೀಕರಿಸಬೇಕು ಮತ್ತು ಅವುಗಳನ್ನು ಆಚರಣೆಯಲ್ಲಿ ಅನುಸರಿಸಬೇಕು. ನವಕಾರ ಮಂತ್ರವು ಸಂಪೂರ್ಣವಾಗಿ ನಿರಾಕಾರ, ನಿಷ್ಪಕ್ಷಪಾತ ಮತ್ತು ಸಾರ್ವತ್ರಿಕ ಪ್ರಾರ್ಥನೆಯಾಗಿದ್ದು, ಇದರಲ್ಲಿ ಕಾಲ, ಜಾತಿ, ಪ್ರದೇಶ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ. ಎಲ್ಲರನ್ನೂ ಒಳಗೊಂಡ ಮತ್ತು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಇಂತಹ ಪ್ರಾರ್ಥನೆ ಜಗತ್ತಿನಲ್ಲಿ ಅತ್ಯಂತ ಅಪರೂಪವಾಗಿದೆ ಎಂದು ಅವರು ಹೇಳಿದರು.

ಈ ಪ್ರಾರ್ಥನೆಯು, ತಮ್ಮ ಕರ್ಮವನ್ನು ಗೆಲ್ಲುವ ಮೂಲಕ ಆತ್ಮಸಾಕ್ಷಾತ್ಕಾರ ಮತ್ತು ವಿಮೋಚನೆಯ ಹಾದಿಯನ್ನು ಕಂಡುಕೊಂಡ ಮಹಾನ್ ಚೇತನಗಳ ಸದ್ಗುಣಗಳಿಗೆ ಗೌರವವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಪವಿತ್ರ ಮಂತ್ರದಲ್ಲಿ, "ನಮೋ" ಎಂಬ ಪದವು ಸಂಪೂರ್ಣ ಶರಣಾಗತಿಯನ್ನು ಸೂಚಿಸುತ್ತದೆ, ಅನ್ವೇಷಕನಿಗೆ ಅಹಂಕಾರವನ್ನು ತ್ಯಜಿಸಲು ಮತ್ತು ಸ್ವಯಂ ಶುದ್ಧೀಕರಣದತ್ತ ಸಾಗಲು ಮಾರ್ಗದರ್ಶನ ನೀಡುತ್ತದೆ ಎಂದರು.

ಒಬ್ಬ ವ್ಯಕ್ತಿಯು ಗೌರವದಿಂದ ತಲೆಬಾಗಿದಾಗ, ಅದು ಅವರ ಅಹಂಕಾರದ ಕರಗುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. "ಅರಿಹಂತ್" ಎಂದರೆ ಆಂತರಿಕ ಶತ್ರುಗಳನ್ನು ("ಅರಿ") ನಾಶಪಡಿಸುವವನು ("ಹಂತ್‌") ಎಂದು ಅವರು ವಿವರಿಸಿದರು. ಈ ಶತ್ರುಗಳು ದೇಹ, ಮನಸ್ಸು, ಭಾವನೆಗಳು, ವರ್ಗನೆ ಮತ್ತು ಸ್ವಭಾವದಲ್ಲಿ ಹುದುಗಿರುವ ಕಲ್ಮಶಗಳು ಅಥವಾ ದುರ್ಗುಣಗಳಾಗಿವೆ. ಇವು ಮೋಕ್ಷದ ಪ್ರಾಪ್ತಿಗೆ ಅಡ್ಡಿಯಾಗುತ್ತವೆ. ಈ ಆಂತರಿಕ ಶತ್ರುಗಳನ್ನು ಜಯಿಸುವ ಅನ್ವೇಷಕನನ್ನು 'ಅರಿಹಂತ್' ಎಂದು ಕರೆಯಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಪರಿಪೂರ್ಣ ಜ್ಞಾನವನ್ನು ಪಡೆದು, ಕೋಪ, ಅಹಂ, ವಂಚನೆ ಮತ್ತು ದುರಾಸೆಯ ವಿರುದ್ಧ ಸಂಪೂರ್ಣ ವಿಜಯವನ್ನು ಸಾಧಿಸಿದ ಹಾಗೂ ಜೈನ ಧರ್ಮಗ್ರಂಥಗಳಲ್ಲಿ ವಿವರಿಸಲಾದ 12 ದೈವಿಕ ಗುಣಗಳನ್ನು ಹೊಂದಿರುವ ವ್ಯಕ್ತಿಯನ್ನು 'ಅರಿಹಂತ್' ಎಂದು ಪರಿಗಣಿಸಲಾಗುತ್ತದೆ. ಅಂತಹ 'ಅರಿಹಂತ'ರಿಗೆ ನಾವು ತಲೆಬಾಗುತ್ತೇವೆ ಎಂದು ಗೃಹ ಸಚಿವರು ಹೇಳಿದರು. ಈ ಮಂತ್ರವು ಸಿದ್ಧರಿಗೆ ಗೌರವ ಸಲ್ಲಿಸುತ್ತದೆ ಎಂದೂ ಅವರು ಹೇಳಿದರು. ಸಂಪೂರ್ಣ ಮುಕ್ತ ಸ್ಥಿತಿಯನ್ನು ಪಡೆದ ಆತ್ಮವನ್ನು 'ಸಿದ್ಧ' ಎಂದು ಕರೆಯಲಾಗುತ್ತದೆ. ಎಂಟು ವಿಧದ ಕರ್ಮಗಳನ್ನು ನಾಶಮಾಡಿದವರು, ಹುಟ್ಟು ಮತ್ತು ಮರಣದ ಚಕ್ರವನ್ನು ಮೀರಿ ಎಂಟು ಶುದ್ಧ ಗುಣಗಳನ್ನು ಪಡೆದವರನ್ನು 'ಸಿದ್ಧರು' ಎಂದು ಕರೆಯಲಾಗುತ್ತದೆ. ಅಂತಹ ಅಸಂಖ್ಯಾತ ಸಿದ್ಧರಿಗೆ ನಾವು ನಮಸ್ಕರಿಸುತ್ತೇವೆ ಮತ್ತು ಅವರ ಆಶೀರ್ವಾದವನ್ನು ಕೋರುತ್ತೇವೆ ಎಂದು ಅವರು ಸಚಿವರು ಹೇಳಿದರು.

ಸನ್ಯಾಸ ವ್ಯವಸ್ಥೆಯ ಮುಖ್ಯಸ್ಥರಾದ ಆಚಾರ್ಯರಿಗೂ ಗೌರವ ಸಲ್ಲಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶಿಸ್ತನ್ನು ಸ್ಥಾಪಿಸುವುದು, ಮಹಾನ್ ವ್ರತಗಳನ್ನು ಪಾಲಿಸುವುದು ಮತ್ತು ಎಲ್ಲಾ ಸಾಧಕರಿಗೆ ಮಾರ್ಗದರ್ಶನ ನೀಡುವುದು ಆಚಾರ್ಯರ ಪ್ರಾಥಮಿಕ ಜವಾಬ್ದಾರಿಗಳಾಗಿವೆ. ಮೋಕ್ಷವನ್ನು ಪಡೆಯಲು ಯಾರ ನಡತೆಯನ್ನು ಅನುಸರಿಸಬಹುದುಯೋ ಅವರನ್ನು 'ಆಚಾರ್ಯ' ಎಂದು ಕರೆಯಲಾಗುತ್ತದೆ. ಜೈನ ಧರ್ಮಗ್ರಂಥಗಳ ಪ್ರಕಾರ, 36 ಗುಣಗಳನ್ನು ಹೊಂದಿರುವ ವ್ಯಕ್ತಿಯು 'ಆಚಾರ್ಯ' ಸ್ಥಾನವನ್ನು ಪಡೆಯುತ್ತಾರೆ. ಅಂತೆಯೇ, ಉಪಾಧ್ಯಾಯರಿಗೆ, ಅಂದರೆ ಶಿಕ್ಷಕ-ಸಂತರಿಗೆ ಗೌರವ ಸಲ್ಲಿಸಲಾಗುತ್ತದೆ. ಧರ್ಮಗ್ರಂಥಗಳ ಆಳವಾದ ಅಧ್ಯಯನವನ್ನು ಕೈಗೊಳ್ಳುವುದು ಮತ್ತು ಆ ಜ್ಞಾನವನ್ನು ವ್ಯಾಪಕವಾಗಿ ಪ್ರಸಾರ ಮಾಡುವುದು ಅವರ ಜವಾಬ್ದಾರಿಯಾಗಿದೆ. ನಿಗದಿತ 25  ಗುಣಗಳನ್ನು ಪಡೆದ ನಂತರವೇ ಅವರು 'ಉಪಾಧ್ಯಾಯ' ಸ್ಥಾನಕ್ಕೆ ಅರ್ಹರಾಗುತ್ತಾರೆ ಎಂದು ಶ್ರೀ ಅಮಿತ್‌ ಶಾ ವಿವರಿಸಿದರು.

ಸಂತರು, ಸನ್ಯಾಸಿಗಳು ಮತ್ತು ಅನ್ವೇಷಕರು ಶಿಸ್ತು, ತ್ಯಾಗ, ಮಹಾನ್ ಸಂಕಲ್ಪ ಹಾಗೂ ತಪಸ್ಸನ್ನು ಅಭ್ಯಾಸ ಮಾಡುವ ಮೂಲಕ ಕ್ರಮೇಣ ತಮ್ಮೊಳಗೆ 27 ಸದ್ಗುಣಗಳನ್ನು  ಬೆಳೆಸಿಕೊಳ್ಳುತ್ತಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅಂತಹ ಗುಣಗಳನ್ನು ಹೊಂದಿರುವ ವ್ಯಕ್ತಿಯನ್ನು ಸಾಧು ಎಂದು ಕರೆಯಲಾಗುತ್ತದೆ. ಈ ಮಂತ್ರವು ಐದು ಸರ್ವೋಚ್ಚ ಜೀವಿಗಳಿಗೆ (ಪಂಚ ಪರಮೇಷ್ಠಿ) ಗೌರವವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ಅದರ ಮೂಲ ತತ್ವಶಾಸ್ತ್ರದ ಪ್ರಕಾರ, ಈ ಐದು ವಿಭಾಗಗಳನ್ನು ಎರಡು ಮುಖ್ಯ ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ವರ್ಗವೆಂದರೆ "ದೇವ್", ಇದು ಸಾಮಾನ್ಯ ಮಾನವ ಅಸ್ತಿತ್ವವನ್ನು ಮೀರಿ 'ಅರಿಹಂತ್' ಮತ್ತು 'ಸಿದ್ಧ' ಸ್ಥಿತಿಗಳನ್ನು ಸಾಧಿಸಿದ ಮಹಾನ್ ವ್ಯಕ್ತಿಗಳನ್ನು ಒಳಗೊಂಡಿದೆ. ಎರಡನೆಯ ವರ್ಗವೆಂದರೆ "ಗುರು", ಇದರಲ್ಲಿ ಆಚಾರ್ಯ, ಉಪಾಧ್ಯಾಯ ಮತ್ತು ಸಾಧು ಸೇರಿದ್ದಾರೆ. ಈ ಎಲ್ಲಾ ಐದು ರೀತಿಯ ಮಹಾನ್ ವ್ಯಕ್ತಿಗಳಿಗೆ ನಮಸ್ಕರಿಸಿ ಅವರ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅವರ ಆಶೀರ್ವಾದವನ್ನು ಪಡೆಯುವುದೇ ನವಕಾರ ಮಂತ್ರದ ಸಾರವಾಗಿದೆ ಎಂದು ಅವರು ಹೇಳಿದರು.

ಅರಿಹಂತ್, ಸಿದ್ಧ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧು - ಇವರಲ್ಲಿ ಸಾಕಾರಗೊಂಡಿರುವ 108 ಸದ್ಗುಣಗಳಿಗೆ ನಾವು ಒಟ್ಟಾಗಿ ನಮಸ್ಕರಿಸುತ್ತೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಮಂತ್ರವು ಬಹಳ ಕಡಿಮೆ ಅವಧಿಯಲ್ಲಿ ಅವರೆಲ್ಲರ ಸದ್ಗುಣಗಳನ್ನು ನೆನಪಿಸಿಕೊಳ್ಳಲು ಮತ್ತು ಪೂಜಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಆಚಾರ್ಯ, ಸನ್ಯಾಸಿ ಅಥವಾ ವಿದ್ವಾಂಸ ಸಂತರ ಮಾರ್ಗದರ್ಶನದಲ್ಲಿ ಮಾತ್ರ ಈ ಮಂತ್ರದ ಆಳವಾದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಆದರೆ, ಇದರ ಅಭ್ಯಾಸವನ್ನು ಎಂದಿಗೂ ನಿಲ್ಲಿಸಬಾರದು ಎಂದು ಅವರು ಯುವಕರನ್ನು ಒತ್ತಾಯಿಸಿದರು.

24 ತೀರ್ಥಂಕರರು ಮತ್ತು ಅವರ ಅನುಯಾಯಿಗಳ ಗಮನಾರ್ಹ ಕೊಡುಗೆಗಳೊಂದಿಗೆ ನವಕಾರ ಮಂತ್ರದ ಸಂಪ್ರದಾಯವು ಸಾವಿರಾರು ವರ್ಷಗಳಿಂದ ಮುಂದುವರೆದಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆರಂಭದಲ್ಲಿ, ಈ ಮಂತ್ರವನ್ನು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ತಲುಪಿಸಲಾಯಿತು; ನಂತರ, ಇದನ್ನು ಶಾಸನಗಳ ಮೂಲಕ ಸಂರಕ್ಷಿಸಲಾಯಿತು ಮತ್ತು ಅಂತಿಮವಾಗಿ ವಿವಿಧ ಧರ್ಮಗ್ರಂಥಗಳಲ್ಲಿ ಇದು ಸ್ಥಾನ ಪಡೆದುಕೊಂಡಿತು. ಈ ಮಂತ್ರದ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಸಮಾಜದ ವಿವಿಧ ವರ್ಗಗಳು ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಭವಿಷ್ಯದ ಪೀಳಿಗೆಗೆ ದೈವತ್ವ ಮತ್ತು ಸಕಾರಾತ್ಮಕತೆಯ ಜೀವನದತ್ತ ಮಾರ್ಗದರ್ಶನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಗತ್ತಿಗೆ ಶಾಂತಿಯ ಅಗತ್ಯವಿರುವ ಸಮಯದಲ್ಲಿ, 'ನವಕಾರ ಮಂತ್ರ'ದ ಸಾಮೂಹಿಕ ಪಠಣವು ಪರಿಸರವನ್ನು ಶುದ್ಧೀಕರಿಸಲು ಮತ್ತು ಮನಸ್ಸಿನ ಅಶಾಂತಿಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಪರಸ್ಪರ ತಿಳಿವಳಿಕೆ, ಸಾಮರಸ್ಯ ಮತ್ತು ಪರಸ್ಪರರ ಬಗೆಗಿನ ಸೂಕ್ಷ್ಮತೆಯನ್ನು ಬಲಪಡಿಸುತ್ತದೆ ಎಂದು ಶ್ರೀ ಅಮಿತ್‌ ಶಾ ಅವರು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2250423) ವಿಸಿಟರ್ ಕೌಂಟರ್ : 26
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Punjabi , Gujarati