ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯದ ಮಾಹಿತಿ ಸಭೆ
ಭಾರತದ ಶೇ. 70 ರಷ್ಟು ಕಚ್ಚಾ ತೈಲ ಆಮದು ಈಗ ಹಾರ್ಮುಜ್ ಜಲಸಂಧಿಯ ಹೊರಗಿನ ಮಾರ್ಗಗಳ ಮೂಲಕ ನಡೆಯುತ್ತಿದೆ; ಇಂಧನ ಪೂರೈಕೆ ಸುರಕ್ಷಿತವಾಗಿದೆ
ಭಾರತವು ತನ್ನ ಎಲ್ ಪಿ ಜಿ ಬಳಕೆಯ ಸುಮಾರು ಶೇಕಡಾ 60 ರಷ್ಟು ಆಮದು ಮಾಡಿಕೊಳ್ಳುತ್ತದೆ ಮತ್ತು ಈ ಆಮದುಗಳಲ್ಲಿ ಸುಮಾರು ಶೇಕಡಾ 90 ರಷ್ಟು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ, ಇದು ಪ್ರಸ್ತುತ ಘಟನೆಗಳಿಂದಾಗಿ ಪ್ರಭಾವಿತವಾಗಿದೆ
ಸರ್ಕಾರದ ಕ್ರಮಗಳ ನಂತರ ದೇಶೀಯ ಎಲ್ ಪಿ ಜಿ ಉತ್ಪಾದನೆಯು ಶೇಕಡಾ 25 ರಷ್ಟು ಹೆಚ್ಚಳವಾಗಿದೆ
ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಮತ್ತು ವಾಣಿಜ್ಯ ಬಳಕೆದಾರರಿಗೆ ಎಲ್ ಪಿಜಿ ಪೂರೈಕೆಯನ್ನು ಪರಿಶೀಲಿಸಲು ಮೂವರು ಸದಸ್ಯರ ಸಮಿತಿ ರಚನೆ
ಪರ್ಷಿಯನ್ ಗಲ್ಫ್ ನಲ್ಲಿರುವ 28 ಭಾರತೀಯ ಧ್ವಜದ ಹಡಗುಗಳ ನಿರಂತರ ಮೇಲ್ವಿಚಾರಣೆ
ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸ್ಥಿರವಾಗಿವೆ; EXIM (ಆಮದು-ರಫ್ತು) ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ
ಜಿಸಿಸಿ (GCC) ದೇಶಗಳಲ್ಲಿರುವ ಒಂದು ಕೋಟಿ ಭಾರತೀಯ ಸಮುದಾಯದ ಕಲ್ಯಾಣಕ್ಕೆ ಆದ್ಯತೆ
ಕಾಳ ಸಂತೆ ಮತ್ತು ಅಕ್ರಮ ದಾಸ್ತಾನು ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರದ ಸೂಚನೆ
ಪ್ರಕಟಣಾ ದಿನಾಂಕ:
11 MAR 2026 7:56PM by PIB Bengaluru
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಅಂತರ-ಸಚಿವಾಲಯದ ಮಾಹಿತಿ ಸಭೆಯನ್ನು ಆಯೋಜಿಸಲಾಗಿತ್ತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಪ್ರದೇಶದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರವು ಕೈಗೊಳ್ಳುತ್ತಿರುವ ಸಿದ್ಧತಾ ಕ್ರಮಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಸಭೆಯು ಇಂಧನ ಪೂರೈಕೆಯ ಸಿದ್ಧತೆ, ಕಡಲ ಸುರಕ್ಷತೆ, ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಕಲ್ಯಾಣ ಮತ್ತು ಸರ್ಕಾರದ ಸಂವಹನ ಕ್ರಮಗಳ ಕುರಿತು ಅಪ್ ಡೇಟ್ ಗಳನ್ನು ಒದಗಿಸಿತು.
ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಯು ಇಂಧನ ಪೂರೈಕೆಯ ಪರಿಸ್ಥಿತಿ ಮತ್ತು ಅಡೆತಡೆಯಿಲ್ಲದ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಧ್ಯಮಗಳಿಗೆ ವಿವರಿಸಿದರು.
ಕಚ್ಚಾ ತೈಲ
• ಭಾರತದ ಕಚ್ಚಾ ತೈಲ ಪೂರೈಕೆಯು ಸುರಕ್ಷಿತವಾಗಿದೆ. ಭಾರತದ ದೈನಂದಿನ ಬಳಕೆಯು ಸುಮಾರು 55 ಲಕ್ಷ ಬ್ಯಾರೆಲ್ ಗಳಷ್ಟಿದೆ ಮತ್ತು ವೈವಿಧ್ಯಮಯ ಸಂಗ್ರಹಣೆಯ ಮೂಲಕ ಈ ಅವಧಿಯಲ್ಲಿ ಸಾಮಾನ್ಯವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ತೈಲವನ್ನು ಈಗ ಸುರಕ್ಷಿತವಾಗಿ ಪಡೆಯಲಾಗಿದೆ.
• ಭಾರತವು ಈಗ ಸುಮಾರು 40 ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ವೈವಿಧ್ಯೀಕರಣದ ಪರಿಣಾಮವಾಗಿ, ಸುಮಾರು 70 ಪ್ರತಿಶತದಷ್ಟು ಕಚ್ಚಾ ತೈಲ ಆಮದುಗಳು ಈಗ ಹಾರ್ಮುಜ್ ಜಲಸಂಧಿಯ ಹೊರಗಿನ ಮಾರ್ಗಗಳ ಮೂಲಕ ಬರುತ್ತಿವೆ, ಈ ಮೊದಲು ಇದು ಸುಮಾರು 55 ಪ್ರತಿಶತದಷ್ಟಿತ್ತು.
• ಎರಡು ಹೆಚ್ಚುವರಿ ಕಚ್ಚಾ ತೈಲದ ಸರಕು ನೌಕೆಗಳು ಈಗಾಗಲೇ ದಾರಿಯಲ್ಲಿವೆ ಮತ್ತು ಮುಂದಿನ ದಿನಗಳಲ್ಲಿ ಬರಲಿವೆ, ಇದು ಕಚ್ಚಾ ತೈಲ ಪೂರೈಕೆಯ ಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತದೆ.
• ದೇಶಾದ್ಯಂತದ ರಿಫೈನರಿಗಳು ಅತಿ ಹೆಚ್ಚಿನ ಸಾಮರ್ಥ್ಯದ ಬಳಕೆಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಕೆಲವು ಸಂದರ್ಭಗಳಲ್ಲಿ 100 ಪ್ರತಿಶತಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬಳಕೆಯಲ್ಲಿಯೂ ಕೆಲಸ ಮಾಡುತ್ತಿವೆ.
ನೈಸರ್ಗಿಕ ಅನಿಲ
• ಭಾರತದ ಒಟ್ಟು ನೈಸರ್ಗಿಕ ಅನಿಲ ಬಳಕೆಯು ಸುಮಾರು 189 MMSCMD ಆಗಿದ್ದು, ಅದರಲ್ಲಿ 97.5 MMSCMD ದೇಶೀಯವಾಗಿ ಉತ್ಪಾದನೆಯಾಗುತ್ತಿದೆ. ಅನಿವಾರ್ಯ ಸಂದರ್ಭಗಳಿಂದಾಗಿ ಸುಮಾರು 47.4 MMSCMD ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
• ಈ ಅಡಚಣೆಯನ್ನು ಸರಿದೂಗಿಸಲು ಪರ್ಯಾಯ ಪೂರೈಕೆದಾರರು ಮತ್ತು ಮಾರ್ಗಗಳ ಮೂಲಕ ಸಂಗ್ರಹಣೆ ಪ್ರಕ್ರಿಯೆ ನಡೆಯುತ್ತಿದೆ. ಅನಿಲ ಕಂಪನಿಗಳು ಹೊಸ ಮೂಲಗಳಿಂದ ಎಲ್ ಎನ್ ಜಿ (LNG) ಸರಕುಗಳನ್ನು ಸಹ ಪಡೆದುಕೊಂಡಿವೆ ಮತ್ತು ಎರಡು ಎಲ್ ಎನ್ ಜಿ ಸರಕು ನೌಕೆಗಳು ದೇಶಕ್ಕೆ ಬರುತ್ತಿವೆ.
• ಅನಿಲ ಪೂರೈಕೆಯನ್ನು ನಿರ್ವಹಿಸಲು ಮತ್ತು ಆದ್ಯತೆಯ ವಲಯಗಳನ್ನು ರಕ್ಷಿಸಲು ಸರ್ಕಾರವು 2026ರ ಮಾರ್ಚ್ 9 ರಂದು ಅಗತ್ಯ ವಸ್ತುಗಳ ಕಾಯ್ದೆ ಅಡಿ 'ನೈಸರ್ಗಿಕ ಅನಿಲ ನಿಯಂತ್ರಣ ಆದೇಶ'ವನ್ನು (Natural Gas Control Order) ಹೊರಡಿಸಿದೆ.
• ಗೃಹಬಳಕೆಯ ಪಿ ಎನ್ ಜಿ (PNG) ಪೂರೈಕೆ ಮತ್ತು ವಾಹನಗಳಿಗೆ ಸಿ ಎನ್ ಜಿ (CNG) ಯಾವುದೇ ಕಡಿತವಿಲ್ಲದೆ 100 ಪ್ರತಿಶತ ಪೂರೈಕೆಯನ್ನು ಪಡೆಯಲಿವೆ.
• ಅನಿಲ ಗ್ರಿಡ್ ಗೆ ಸಂಪರ್ಕ ಹೊಂದಿರುವ ಚಹಾ ಉದ್ಯಮಗಳು, ಉತ್ಪಾದನಾ ಘಟಕಗಳು ಮತ್ತು ಇತರ ಕೈಗಾರಿಕಾ ಗ್ರಾಹಕರು ತಮ್ಮ ಹಿಂದಿನ ಆರು ತಿಂಗಳ ಸರಾಸರಿ ಪೂರೈಕೆಯ ಸುಮಾರು 80 ಪ್ರತಿಶತದಷ್ಟು ಪೂರೈಕೆಯನ್ನು ಪಡೆಯಲಿದ್ದಾರೆ.
• ರಸಗೊಬ್ಬರ ಸ್ಥಾವರಗಳು ಸುಮಾರು 70 ಪ್ರತಿಶತದಷ್ಟು ಪೂರೈಕೆಯನ್ನು ಪಡೆಯುತ್ತವೆ, ಆದರೆ ಹೆಚ್ಚಿನ ಆದ್ಯತೆಯ ವಲಯಗಳನ್ನು ರಕ್ಷಿಸುವ ಉದ್ದೇಶದಿಂದ ರಿಫೈನರಿಗಳು ಮತ್ತು ಪೆಟ್ರೋಕೆಮಿಕಲ್ ಘಟಕಗಳ ಪೂರೈಕೆಯಲ್ಲಿ ಸುಮಾರು 35 ಪ್ರತಿಶತದಷ್ಟು ಕಡಿತವನ್ನು ಮಾಡಲಾಗುತ್ತದೆ.
ಎಲ್ ಪಿ ಜಿ (LPG)
• ಭಾರತವು ತನ್ನ ಎಲ್ಪಿಜಿ ಬಳಕೆಯ ಸುಮಾರು 60 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಈ ಆಮದುಗಳಲ್ಲಿ ಸುಮಾರು 90 ಪ್ರತಿಶತವು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ, ಇದು ಪ್ರಸ್ತುತ ಘಟನೆಗಳಿಂದಾಗಿ ಪ್ರಭಾವಿತವಾಗಿದೆ.
• 2026ರ ಮಾರ್ಚ್ 8ರಂದು, ಪ್ರೊಪೇನ್, ಬ್ಯುಟೇನ್, ಪ್ರೊಪಿಲೀನ್ ಮತ್ತು ಬ್ಯುಟೀನ್ ಸ್ಟ್ರೀಮ್ ಗಳನ್ನು ಎಲ್ ಪಿ ಜಿ ಪೂಲ್ಗೆ ತಿರುಗಿಸುವ ಮೂಲಕ ಎಲ್ ಪಿ ಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಸರ್ಕಾರವು ರಿಫೈನರಿಗಳು ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣಗಳಿಗೆ ಆದೇಶವನ್ನು ಹೊರಡಿಸಿದೆ. ಈ ಕ್ರಮಗಳ ಪರಿಣಾಮವಾಗಿ, ದೇಶೀಯ ಎಲ್ ಪಿ ಜಿ ಉತ್ಪಾದನೆಯು ಸುಮಾರು 25 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಸಂಪೂರ್ಣ ದೇಶೀಯ ಎಲ್ ಪಿ ಜಿ ಉತ್ಪಾದನೆಯನ್ನು ಗೃಹಬಳಕೆಯ ಗ್ರಾಹಕರತ್ತ ತಿರುಗಿಸಲಾಗುತ್ತಿದೆ.
• ಗೃಹೇತರ ಎಲ್ ಪಿ ಜಿಗಾಗಿ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ.
• ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ಹಂಚಿಕೆಯನ್ನು ಪರಿಶೀಲಿಸಲು ಮತ್ತು ಲಭ್ಯವಿರುವ ಎಲ್ ಪಿ ಜಿ ಪೂರೈಕೆಯ ನ್ಯಾಯಯುತ ಮತ್ತು ಪಾರದರ್ಶಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು IOCL, HPCL ಮತ್ತು BPCL ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
• ಇತ್ತೀಚಿನ ₹60 ಹೆಚ್ಚಳದ ನಂತರ ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ನ ಪ್ರಸ್ತುತ ಬೆಲೆ ₹913 ಆಗಿದೆ. PMUY ಫಲಾನುಭವಿಗಳಿಗೆ ಬೆಲೆಯು ಪ್ರತಿ ಸಿಲಿಂಡರ್ ಗೆ ₹613 ಆಗಿಯೇ ಉಳಿದಿದೆ.
• PMUY ಕುಟುಂಬಕ್ಕೆ, ಇತ್ತೀಚಿನ ಹೆಚ್ಚಳವು ದಿನಕ್ಕೆ 80 ಪೈಸೆಗಿಂತ ಕಡಿಮೆಯಾಗಿದೆ.
• ಜುಲೈ 2023 ರಿಂದ ಸೌದಿ ಕಾಂಟ್ರಾಕ್ಟ್ ಬೆಲೆಯು ಸುಮಾರು 41 ಪ್ರತಿಶತದಷ್ಟು ಹೆಚ್ಚಾಗಿದ್ದರೂ, ಸರ್ಕಾರದ ಬೆಂಬಲದಿಂದಾಗಿ ಅದೇ ಅವಧಿಯಲ್ಲಿ PMUY ಬೆಲೆಯು ಸುಮಾರು 32 ಪ್ರತಿಶತದಷ್ಟು ಕುಸಿದಿದೆ.
• ಎಲ್ ಪಿ ಜಿ ಅಂಡರ್-ರಿಕವರಿಗಳಿಗಾಗಿ (under-recoveries) ತೈಲ ಮಾರುಕಟ್ಟೆ ಕಂಪನಿಗಳಿಗೆ ₹30,000 ಕೋಟಿ ಪರಿಹಾರವನ್ನು ಸರ್ಕಾರ ಅನುಮೋದಿಸಿದೆ.
• ಕ್ಷೇತ್ರಮಟ್ಟದ ಪ್ರತಿಕ್ರಿಯೆಯು ಕೆಲವು ಆತಂಕದ ಬುಕಿಂಗ್ (panic booking) ಮತ್ತು ದಾಸ್ತಾನು ಮಾಡುವ ನಡವಳಿಕೆಯನ್ನು ಸೂಚಿಸುತ್ತದೆ. ಆದಾಗ್ಯೂ, ಗೃಹಬಳಕೆಯ ಎಲ್ ಪಿಜಿ ಯ ಸಾಮಾನ್ಯ ವಿತರಣಾ ಚಕ್ರವು ಸುಮಾರು 2.5 ದಿನಗಳಾಗಿದ್ದು, ಗ್ರಾಹಕರು ಸಿಲಿಂಡರ್ ಗಳನ್ನು ಬುಕ್ ಮಾಡಲು ಆತುರಪಡದಂತೆ ಸೂಚಿಸಲಾಗಿದೆ.
• ವಿತರಕರ ಮಟ್ಟದಲ್ಲಿ ಅಕ್ರಮ ವರ್ಗಾವಣೆಯನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ವ್ಯವಸ್ಥೆಯನ್ನು ಸುಮಾರು 90 ಪ್ರತಿಶತ ಗ್ರಾಹಕರಿಗೆ ವಿಸ್ತರಿಸಲಾಗುತ್ತಿದೆ.
• ತಾತ್ಕಾಲಿಕ ಬೇಡಿಕೆ-ನಿರ್ವಹಣಾ ಕ್ರಮವಾಗಿ, ಎಲ್ಪಿಜಿ ಬುಕಿಂಗ್ ಗಳ ನಡುವಿನ ಕನಿಷ್ಠ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ.
• ವಿತರಕರ ಬಾಕಿ ಇರುವ ಆರ್ಡರ್ ಗಳನ್ನು (backlogs) ಪೂರೈಸಲು ಮತ್ತು ಸುಗಮ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಜಾರಿ ತಂಡಗಳು ಕ್ಷೇತ್ರ ಮಟ್ಟದಲ್ಲಿ ಸಮನ್ವಯ ಸಾಧಿಸುತ್ತಿವೆ.
• ಸರ್ಕಾರವು ಜಾಗತಿಕ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಡೆತಡೆಯಿಲ್ಲದ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕುಟುಂಬಗಳು ಹಾಗೂ ಆದ್ಯತೆಯ ವಲಯಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿನ ಪ್ರಚಲಿತ ಕಡಲ ಪರಿಸ್ಥಿತಿ ಮತ್ತು ಭಾರತೀಯ ನಾವಿಕರು, ಹಡಗುಗಳು ಹಾಗೂ ಕಡಲ ವ್ಯಾಪಾರ ಕಾರ್ಯಾಚರಣೆಗಳನ್ನು ರಕ್ಷಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಸಚಿವಾಲಯದ ಪ್ರಕಾರ:
• ಪ್ರಸ್ತುತ, 28 ಭಾರತೀಯ ಧ್ವಜದ ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ, 24 ಹಡಗುಗಳು ಹಾರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ ನೆಲೆಗೊಂಡಿದ್ದು 677 ಭಾರತೀಯ ನಾವಿಕರನ್ನು ಹೊಂದಿವೆ, ಮತ್ತು 4 ಹಡಗುಗಳು ಜಲಸಂಧಿಯ ಪೂರ್ವದಲ್ಲಿದ್ದು 101 ಭಾರತೀಯ ನಾವಿಕರನ್ನು ಹೊಂದಿವೆ. ಅವುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
• ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಹಾಯವನ್ನು ಸಮನ್ವಯಗೊಳಿಸಲು 2026 ರ ಫೆಬ್ರವರಿ 28 ರಿಂದ ಸಚಿವಾಲಯ ಮತ್ತು ಶಿಪ್ಪಿಂಗ್ ಮಹಾನಿರ್ದೇಶನಾಲಯದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ.
• ಶಿಪ್ಪಿಂಗ್ ಮಹಾನಿರ್ದೇಶನಾಲಯವು 2026 ರ ಫೆಬ್ರವರಿ 28 ರಂದು ಸಲಹೆಗಳನ್ನು ಹೊರಡಿಸಿದ್ದು, ಭಾರತೀಯ ಧ್ವಜದ ಹಡಗುಗಳು ಮತ್ತು ಭಾರತೀಯ ನಾವಿಕರು ವರ್ಧಿತ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮತ್ತು ಸಿಬ್ಬಂದಿ ವಿವರಗಳನ್ನು ಸಲ್ಲಿಸುವುದು ಸೇರಿದಂತೆ ವರದಿ ಮಾಡುವ ಪ್ರೋಟೋಕಾಲ್ಗಳನ್ನು ಅನುಸರಿಸಲು ಸೂಚಿಸಿದೆ.
• ಅಧಿಕಾರಿಗಳು, ಹಡಗು ವ್ಯವಸ್ಥಾಪಕರು ಮತ್ತು ನೇಮಕಾತಿ ಏಜೆನ್ಸಿಗಳು ಭಾರತೀಯ ರಾಯಭಾರ ಕಚೇರಿಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ, ಇದು ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ಅಗತ್ಯವಿರುವ ಕಡೆಗಳಲ್ಲಿ ಭಾರತೀಯ ನಾವಿಕರಿಗೆ ಸಹಾಯವನ್ನು ಒದಗಿಸಲು ನೆರವಾಗುತ್ತಿದೆ.
• ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸ್ಥಿರವಾಗಿವೆ ಮತ್ತು ರಫ್ತುದಾರರು ಎದುರಿಸುತ್ತಿರುವ ಸಂಕಷ್ಟಗಳನ್ನು ಕಡಿಮೆ ಮಾಡಲು ಹಾಗೂ EXIM (ಆಮದು-ರಫ್ತು) ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸಲು ಅಗತ್ಯವಾದ ಸಹಾಯವನ್ನು ನೀಡಲು ಬಂದರುಗಳಿಗೆ ಸೂಚಿಸಲಾಗಿದೆ.
• ಪ್ರಮುಖ ಬಂದರುಗಳು ಹಡಗುಗಳ ಚಲನವಲನದ ನಿರಂತರ ಮೇಲ್ವಿಚಾರಣೆ, ಪ್ರದೇಶದ ಬೆಳವಣಿಗೆಗಳ ನೈಜ-ಸಮಯದ ಮೌಲ್ಯಮಾಪನ ಮತ್ತು ಹಡಗು ಹಾಗೂ ಸರಕುಗಳ ಸ್ಥಿತಿಯ ಬಗ್ಗೆ ನಿಯಮಿತವಾಗಿ ವರದಿ ಮಾಡುತ್ತಿವೆ.
• ಸಚಿವಾಲಯವು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ವಿಕಸನಗೊಳ್ಳುತ್ತಿರುವ ಕಡಲ ಪರಿಸ್ಥಿತಿಯನ್ನು ಭಾರತೀಯ ನಾವಿಕರು ಮತ್ತು ಭಾರತೀಯ ಧ್ವಜದ ಹಡಗುಗಳ ಸುರಕ್ಷತೆಯ ಮೇಲೆ ಕೇಂದ್ರೀಕರಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ.
• ಸಚಿವಾಲಯವು ಕಡಲ ವ್ಯಾಪಾರ ಮತ್ತು ನಾವಿಕರಿಗೆ ಅಗತ್ಯ ಬೆಂಬಲವನ್ನು ನೀಡಲು ಉದ್ಯಮದ ಪಾಲುದಾರರೊಂದಿಗೆ ನಿಯಮಿತ ಸಂವಹನವನ್ನು ನಡೆಸುತ್ತಿದೆ.
• ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರವು ಬದ್ಧವಾಗಿದೆ.
ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಪರಿಸ್ಥಿತಿಯ ಕುರಿತು ಅಪ್ ಡೇಟ್ ನೀಡಿತು ಮತ್ತು ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಮಿಷನ್ ಗಳ (ರಾಯಭಾರ ಕಚೇರಿಗಳ) ಮೂಲಕ ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿಸಿತು. ಅದು ಹೀಗೆ ಹೇಳಿದೆ:
• ಜಿಸಿಸಿ (GCC) ದೇಶಗಳಲ್ಲಿ ಭಾರತವು ಸುಮಾರು ಒಂದು ಕೋಟಿ ಜನರ ದೊಡ್ಡ ಅನಿವಾಸಿ ಭಾರತೀಯ ಸಮುದಾಯವನ್ನು ಹೊಂದಿದೆ ಮತ್ತು ಅವರ ಕಲ್ಯಾಣ ಹಾಗೂ ಸುರಕ್ಷತೆಯು ಆದ್ಯತೆಯಾಗಿ ಉಳಿದಿದೆ.
• ಯುಎಇ, ಕತಾರ್, ಸೌದಿ ಅರೇಬಿಯಾ, ಓಮನ್, ಬಹ್ರೇನ್, ಕುವೈತ್, ಜೋರ್ಡಾನ್ ಮತ್ತು ಇಸ್ರೇಲ್ ಸೇರಿದಂತೆ ಹಲವಾರು ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ದೇಶಗಳ ನಾಯಕರೊಂದಿಗೆ ಪ್ರಧಾನಮಂತ್ರಿಯವರು ಮಾತನಾಡಿದ್ದಾರೆ.
• ವಿದೇಶಾಂಗ ವ್ಯವಹಾರಗಳ ಸಚಿವರು ಸಹ ಈ ದೇಶಗಳ ತಮ್ಮ ಸಹವರ್ತಿಗಳೊಂದಿಗೆ ಹಾಗೂ ಇರಾನ್ ಜೊತೆಗೆ ನಿಯಮಿತ ಸಂಪರ್ಕದಲ್ಲಿದ್ದಾರೆ.
• ಈ ಪ್ರದೇಶದಲ್ಲಿರುವ ಭಾರತೀಯ ಮಿಷನ್ ಗಳು ಭಾರತೀಯ ಪ್ರಜೆಗಳಿಗೆ ನಿಯಮಿತವಾಗಿ ಸಲಹೆಗಳನ್ನು ಹೊರಡಿಸುತ್ತಿವೆ.
• ರಾಯಭಾರಿಗಳು ಮತ್ತು ಕಾನ್ಸಲ್ ಜನರಲ್ ಗಳು ಸಮುದಾಯದ ಸದಸ್ಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
• ಮಸ್ಕತ್, ರಿಯಾದ್ ಮತ್ತು ಜೆಡ್ಡಾದಂತಹ ಸ್ಥಳಗಳಿಂದ ಲಭ್ಯವಿರುವ ವಾಣಿಜ್ಯ ವಿಮಾನ ಆಯ್ಕೆಗಳ ಮೂಲಕ ಪ್ರವಾಸಿಗರು ಮತ್ತು ಟ್ರಾನ್ಸಿಟ್ ಪ್ರಯಾಣಿಕರು ಸೇರಿದಂತೆ ಸಿಲುಕಿರುವ ಭಾರತೀಯರು ಮನೆಗೆ ಮರಳಲು ಮಿಷನ್ಗಳು ಸಹಾಯ ಮಾಡಿವೆ.
• ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
• ದಾಳಿಗೆ ಒಳಗಾದ ವ್ಯಾಪಾರಿ ಹಡಗುಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ. ಅವರ ಕುಟುಂಬಗಳಿಗೆ ಸಂತಾಪ ಸೂಚಿಸಲಾಗಿದೆ.
• ಗಾಯಗೊಂಡಿರುವ ಕೆಲವು ಭಾರತೀಯ ಪ್ರಜೆಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಭಾರತೀಯ ಮಿಷನ್ಗಳು ಅವರಿಗೆ ಸಹಾಯ ಮಾಡುತ್ತಿವೆ. ಇಸ್ರೇಲ್ ನಲ್ಲಿ ಗಾಯಗೊಂಡಿರುವ ಒಬ್ಬ ಭಾರತೀಯ ಪ್ರಜೆ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ದುಬೈನಲ್ಲಿ ಗಾಯಗೊಂಡಿರುವ ಮತ್ತೊಬ್ಬರು ಭಾರತೀಯ ಕಾನ್ಸುಲೇಟ್ ನೊಂದಿಗೆ ಸಂಪರ್ಕದಲ್ಲಿದ್ದಾರೆ.
• ಪ್ರಸ್ತುತ ಇರಾನ್ ನಲ್ಲಿ ಸುಮಾರು 9,000 ಭಾರತೀಯ ಪ್ರಜೆಗಳಿದ್ದಾರೆ. ಭಾರತೀಯ ಮಿಷನ್ ಅಲ್ಲಿನ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿದೆ.
• ಭಾರತೀಯ ವಿದ್ಯಾರ್ಥಿಗಳು ಮತ್ತು ಯಾತ್ರಿಕರನ್ನು ಟೆಹ್ರಾನ್ನ ಹೊರಗಿನ ಸುರಕ್ಷಿತ ನಗರಗಳಿಗೆ ಸ್ಥಳಾಂತರಿಸಲಾಗಿದೆ.
• ವ್ಯಕ್ತಿಗಳು ಅಲ್ಲಿಂದ ಭಾರತಕ್ಕೆ ವಾಣಿಜ್ಯ ವಿಮಾನಗಳ ಮೂಲಕ ಮರಳಲು ಅನುಕೂಲವಾಗುವಂತೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ಗೆ ಭೂ ಗಡಿ ದಾಟಲು ಸಹ ಸಹಾಯ ನೀಡಲಾಗುತ್ತಿದೆ.
• ನಿಯಮಿತ ಅಪ್ಡೇಟ್ ಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಮಿಷನ್ ಗಳ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳನ್ನು ಅನುಸರಿಸಲು ನಾಗರಿಕರಿಗೆ ಸೂಚಿಸಲಾಗಿದೆ.
ಸಾರ್ವಜನಿಕ ಸಂವಹನ ಮತ್ತು ಅಗತ್ಯ ವಸ್ತುಗಳ ಪೂರೈಕೆಯ ಮೇಲ್ವಿಚಾರಣೆ
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯು ಸಭೆಯ ಸಮಯದಲ್ಲಿ ಈ ಕೆಳಗಿನ ಅಂಶಗಳನ್ನು ಒತ್ತಿಹೇಳಿದರು:
• ಕೇಂದ್ರ ಗೃಹ ಕಾರ್ಯದರ್ಶಿಯವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿದರು.
• ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಅಗತ್ಯ ವಸ್ತುಗಳ ಅಡೆತಡೆಯಿಲ್ಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಯಿತು.
• ಸಾರ್ವಜನಿಕರಿಗೆ ನಿಯಮಿತ ಮತ್ತು ವಿಶ್ವಾಸಾರ್ಹ ಅಪ್ಡೇಟ್ ಗಳನ್ನು ನೀಡಲು ರಾಜ್ಯ ಮಟ್ಟದ ವಕ್ತಾರರನ್ನು ನೇಮಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಯಿತು.
• ಪರಿಶೀಲಿಸಿದ ಮಾಹಿತಿಯನ್ನು ಅಧಿಕೃತ ಸರ್ಕಾರಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು, ಜಿಲ್ಲಾಡಳಿತಗಳು ಮತ್ತು ಮಾಧ್ಯಮ ಪಾಲುದಾರರ ಮೂಲಕ ಪ್ರಸಾರ ಮಾಡಬೇಕು.
• ಸ್ಥಳೀಯ ಆಡಳಿತವನ್ನು ಸಂವಹನ ವಿಸ್ತಾರಕಗಳಾಗಿ ಬಳಸಿಕೊಳ್ಳಬೇಕು; ಜಿಲ್ಲಾಧಿಕಾರಿಗಳು, ಪೊಲೀಸ್ ಕಮಿಷನರ್ ಗಳು ಮತ್ತು ಪುರಸಭೆಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ವಿಶ್ವಾಸಾರ್ಹ ಮಾಹಿತಿ ಮೂಲಗಳಾಗಿ ಕಾರ್ಯನಿರ್ವಹಿಸಬೇಕು.
ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಭಾರತ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂಬಂಧಪಟ್ಟ ಸಚಿವಾಲಯಗಳು ಹಾಗೂ ಏಜೆನ್ಸಿಗಳ ನಡುವೆ ನಿರಂತರ ಸಮನ್ವಯವನ್ನು ಕಾಯ್ದುಕೊಳ್ಳುತ್ತಿದೆ ಎಂದು ಸಭೆಯು ಒತ್ತಿಹೇಳಿತು. ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳನ್ನು ರಕ್ಷಿಸಲು, ಕಡಲ ಕಾರ್ಯಾಚರಣೆಗಳ ಸುರಕ್ಷತೆಯನ್ನು ಕಾಪಾಡಲು ಮತ್ತು ಅಗತ್ಯ ವಸ್ತುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪುನರುಚ್ಚರಿಸಲಾಯಿತು. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ಭಾರತದ ಹಿತಾಸಕ್ತಿಗಳನ್ನು ರಕ್ಷಿಸಲು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರವು ಬದ್ಧವಾಗಿದೆ.
*****
(ಪ್ರಕಟಣೆ ಐ.ಡಿ.: 2238642)
ವಿಸಿಟರ್ ಕೌಂಟರ್ : 8