ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಪರ್ಕಗಳ ವೃದ್ಧಿ ಮೂಲಕ ಸುಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಸುರಕ್ಷತೆ ಹೆಚ್ಚಳಕ್ಕೆ ಭಾರತ–ಸೆಶೆಲ್ಸ್ ಜಂಟಿ ದೃಷ್ಟಿಕೋನ

ಪ್ರಕಟಣಾ ದಿನಾಂಕ: 09 FEB 2026 3:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಸೆಶೆಲ್ಸ್ ಗಣರಾಜ್ಯದ ಅಧ್ಯಕ್ಷರಾದ ಡಾ.ಪ್ಯಾಟ್ರಿಕ್ ಹರ್ಮಿನಿ ಅವರು 2026ರ ಫೆಬ್ರವರಿ 5 ರಿಂದ 10ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.

ಅಧ್ಯಕ್ಷರಾದ ಹರ್ಮಿನಿ ಅವರ ಅಧಿಕೃತ ಭೇಟಿಯು ಭಾರತ ಮತ್ತು ಸೆಶೆಲ್ಸ್‌ ನಡುವಿನ ದೀರ್ಘಕಾಲೀನ ಮತ್ತು ಬಹುಮುಖಿ ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಪಡಿಸಲು, ವಿಸ್ತರಿಸಲು ಮತ್ತು ಆಳಗೊಳಿಸಲು ಉಭಯ ದೇಶಗಳ ಸಮಾನ ಬದ್ಧತೆಯನ್ನು ಸೂಚಿಸುತ್ತದೆ. ಈ ಸಂಬಂಧ ಹರ್ಮಿನಿ ಅವರು ಪ್ರಸ್ತಾಪಿಸಿದ ಸುಮಾರು 100 ದಿನಗಳ ನಂತರ ಅವರು ಭಾರತಕ್ಕೆ ಆಗಮಿಸಿದ್ದಾರೆ. ಈ ಅಧಿಕೃತ ಭೇಟಿಯು ಸೆಶೆಲ್ಸ್‌ನ ಸ್ವಾತಂತ್ರ್ಯದ 50ನೇ ವರ್ಷ ಮತ್ತು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವರ್ಷದ ಸಂದರ್ಭದ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದೆ.

2026ರ ಫೆಬ್ರವರಿ 9ರಂದು ನಡೆದ ಭೇಟಿಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಹರ್ಮಿನಿ ಅವರು ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಆಯಾಮಗಳ ಬಗ್ಗೆ ಸಮಗ್ರ ಮತ್ತು ಫಲಪ್ರದ ಚರ್ಚೆ ನಡೆಸಿದರು. ಅಕ್ಟೋಬರ್ 2025ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಅಧ್ಯಕ್ಷ ಹರ್ಮಿನಿ ಅವರನ್ನು ಅಭಿನಂದಿಸಿದರು. ಕಡಲ ತೀರದ ನಿಕಟ ನೆರೆಹೊರೆಯ ರಾಷ್ಟ್ರಗಳಾದ ಭಾರತ ಮತ್ತು ಸೆಶೆಲ್ಸ್ ಇತಿಹಾಸ ಮತ್ತು ಬಾಂಧವ್ಯದ ತಳಹದಿಯಲ್ಲಿ ವಿಶೇಷ ಮತ್ತು ದೀರ್ಘಾವಧಿಯ ಸಹಭಾಗಿತ್ವವನ್ನು ಹೊಂದಿವೆ. ಜೊತೆಗೆ, ಪ್ರಜಾಪ್ರಭುತ್ವ ಮತ್ತು ಬಹುತ್ವದ ಹಂಚಿಕೆಯ ಮೌಲ್ಯಗಳಿಂದ ಈ ಸಂಬಂಧವು ಬಲಗೊಂಡಿದೆ ಎಂದು ಉಭಯ ನಾಯಕರು ಪುನರುಚ್ಚರಿಸಿದರು. ಸೆಶೆಲ್ಸ್-ಭಾರತ ಸಂಬಂಧಗಳು ಜನ ಕೇಂದ್ರಿತವಾಗಿವೆ ಮತ್ತು ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸುತ್ತವೆ ಎಂದು ನಾಯಕರು ಸಹಮತಿಸಿದರು. ಭಾರತದ ʻವಿಷನ್‌ ಮಹಾಸಾಗರ್ʼ (ಎಲ್ಲಾ ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಮತ್ತು ಸಮಗ್ರ ಪ್ರಗತಿ) ಉಪಕ್ರಮದಲ್ಲಿ ಸೆಶೆಲ್ಸ್ ಪ್ರಮುಖ ಆಧಾರಸ್ತಂಭವಾಗಿದೆ ಎಂದು ನಾಯಕರು ಪುನರುಚ್ಚರಿಸಿದರು.

ಭಾರತ ಮತ್ತು ಸೆಶೆಲ್ಸ್ ನಡುವೆ ಐತಿಹಾಸಿಕ ಮತ್ತು ಶ್ರೀಮಂತ ಸಂಬಂಧಗಳನ್ನು ಸ್ಮರಿಸಿದ ಇಬ್ಬರೂ ನಾಯಕರು, ಸೆಶೆಲ್ಸ್ ಮತ್ತು ಭಾರತದ ಜನರ ಭದ್ರತೆ, ಸಮೃದ್ಧಿ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳಲ್ಲಿ ನಿಕಟ ತೊಡಗಿಸಿಕೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು.

ಅಧ್ಯಕ್ಷರಾದ ಹರ್ಮಿನಿ ಅವರು ಸೆಶೆಲ್ಸ್ ಮತ್ತು ಆ ಪ್ರದೇಶದ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಪಾತ್ರವನ್ನು ಒತ್ತಿ ಹೇಳಿದರು. ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸಲು ಸೆಶೆಲ್ಸ್‌ಗೆ ನೀಡಿದ ದೀರ್ಘಕಾಲೀನ ನೆರವು ಮತ್ತು ಸಹಕಾರಕ್ಕಾಗಿ ಅವರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು.

ಉಭಯ ರಾಷ್ಟ್ರಗಳ ಪರಸ್ಪರ ಸಾಮರ್ಥ್ಯಗಳು ಮತ್ತು ಸಂಬಂಧದ ಮಹತ್ವವನ್ನು ಗುರುತಿಸಿ, ಉಭಯ ನಾಯಕರು ʻವರ್ಧಿತ ಸಂಪರ್ಕಗಳ ಮೂಲಕ ಸುಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಭದ್ರತೆಗಾಗಿ ಜಂಟಿ ದೃಷ್ಟಿಕೋನʼವನ್ನು (ಎಸ್ಇಎಸ್ಇಎಲ್)  ಘೋಷಿಸಿದರು.

ರಾಜಕೀಯ ವಿನಿಮಯ

ಸೆಶೆಲ್ಸ್ ಮತ್ತು ಭಾರತದ ನಡುವೆ ನಿಯಮಿತವಾಗಿ ಉನ್ನತ ಮಟ್ಟದ ರಾಜಕೀಯ ಸಭೆಗಳು, ಭೇಟಿಗಳು ಮತ್ತು ಸಮಾಲೋಚನೆಗಳ ಮಹತ್ವವನ್ನು ನಾಯಕರು ಒಪ್ಪಿಕೊಂಡರು. ದೇಶಗಳ ಮುಖ್ಯಸ್ಥರು, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ರಾಜಕೀಯ ಮತ್ತು ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳನ್ನು ಹೆಚ್ಚಿಸಲು ಎರಡೂ ಕಡೆಯವರು ಸಮ್ಮತಿಸಿದರು.

ಸಂಸದೀಯ ಕಾರ್ಯಕಲಾಪಗಳು ಮತ್ತು ಸಾಮರ್ಥ್ಯ ವರ್ಧನೆಯ ಉತ್ತಮ ಅಭ್ಯಾಸಗಳ ಪರಸ್ಪರ ವಿನಿಮಯ ಸೇರಿದಂತೆ ಉಭಯ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸಲು ಮತ್ತು ಸಂಸದೀಯ ವಿನಿಮಯವನ್ನು ತೀವ್ರಗೊಳಿಸಲು ಉಭಯ ನಾಯಕರು ಸಹಮತಿಸಿದರು.

ಅಭಿವೃದ್ಧಿ ಪಾಲುದಾರಿಕೆ

ಸೆಶೆಲ್ಸ್‌ನ ಅಭಿವೃದ್ಧಿ ಮತ್ತು ಭದ್ರತಾ ಅಗತ್ಯಗಳಿಗೆ ಸ್ಪಂದನೆ ಹಾಗೂ ದೇಶದ ಆಶೋತ್ತರಗಳಿಗಾಗಿ ಸಾಲ, ಅನುದಾನ, ಸಾಮರ್ಥ್ಯ ವರ್ಧನೆ ಮತ್ತು ಹೆಚ್ಚಿನ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳ (ಎಚ್‌ಐಸಿಡಿಪಿ) ಮೂಲಕ ಭಾರತದ ನೀಡಿದ ದೃಢವಾದ ಬೆಂಬಲಕ್ಕಾಗಿ ಅಧ್ಯಕ್ಷ ಹರ್ಮಿನಿ ಅವರು ಕೃತಜ್ಞತೆ ಸಲ್ಲಿಸಿದರು. ಸುಸ್ಥಿರತೆ, ರಕ್ಷಣೆ ಮತ್ತು ಕಡಲ ಭದ್ರತೆ, ಸಾಮರ್ಥ್ಯವರ್ಧನೆ, ಸದೃಢತೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಮೇಲೆ ನಿರ್ದಿಷ್ಟವಾಗಿ ಗಮನ ಹರಿಸುವ ಮೂಲಕ ಸೆಶೆಲ್ಸ್‌ನ ʻರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿʼಯಲ್ಲಿ ಭಾರತವು ಪ್ರಮುಖ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ ಉಳಿಯುವ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಉಭಯ ದೇಶಗಳ ನಡುವಿನ ಜನ ಕೇಂದ್ರಿತ ಅಭಿವೃದ್ಧಿ ಸಹಭಾಗಿತ್ವವನ್ನು ವಿಸ್ತರಿಸಲು ಮತ್ತು ತೀವ್ರಗೊಳಿಸಲು ನಿಕಟವಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದ ಭಾರತ, 175 ದಶಲಕ್ಷ ಅಮೆರಿಕನ್ ಡಾಲರ್ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿತು. ಇದರಲ್ಲಿ 125 ದಶಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಸಾಲ ಹಾಗೂ ಸಹಕಾರ ಯೋಜನೆಗಳು, ನಾಗರಿಕ ಮತ್ತು ರಕ್ಷಣಾ ಸಿಬ್ಬಂದಿಯ ಸಾಮರ್ಥ್ಯವರ್ಧನೆ, ಕಡಲ ಭದ್ರತೆ ಇತ್ಯಾದಿಗಳಿಗಾಗಿ 50 ದಶಲಕ್ಷ ಅಮೆರಿಕನ್ ಡಾಲರ್ ಅನುದಾನ ನೆರವು ಸೇರಿದೆ.

ಭಾರತದ ಕ್ಷಿಪ್ರ ಡಿಜಿಟಲೀಕರಣವು ಜಾಗತಿಕ ದಕ್ಷಿಣದಲ್ಲಿ ಒಳಿತು ಸಾಧನೆಗೆ ಒಂದು ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಉಭಯ ನಾಯಕರು ಗುರುತಿಸಿದರು. ಡಿಜಿಟಲ್ ಪರಿವರ್ತನೆ ಕ್ಷೇತ್ರದಲ್ಲಿ ನಿಕಟವಾಗಿ ಕೆಲಸ ಮಾಡಲು ಸಮ್ಮತಿಸಿದರು. ಸೆಶೆಲ್ಸ್‌ನ ನಾಗರಿಕರ ಅನುಕೂಲಕ್ಕಾಗಿ ಆಡಳಿತವನ್ನು ಡಿಜಿಟಲೀಕರಣಗೊಳಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಭಾರತವು ಡಿಜಿಟಲ್ ಪಾವತಿ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ನಿರ್ಮಾಣಕ್ಕೆ ಸಮಗ್ರ ಪ್ರಯತ್ನಗಳನ್ನು ಕೈಗೊಳ್ಳಲು ಒಪ್ಪಿಕೊಂಡಿತು.

ಆರೋಗ್ಯ ಮತ್ತು ಅಗತ್ಯ ವಸ್ತುಗಳ ಕ್ಷೇತ್ರಗಳಲ್ಲಿ ಸಹಕಾರ

ಅಧ್ಯಕ್ಷರಾದ ಹರ್ಮಿನಿ ಅವರು 10 ಆಂಬುಲೆನ್ಸ್‌ಗಳನ್ನು (ಬೇಸಿಕ್ ಲೈಫ್ ಸಪೋರ್ಟ್ ಮತ್ತು ಅಡ್ವಾನ್ಸ್ ಲೈಫ್ ಸಪೋರ್ಟ್) ದೇಣಿಗೆ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿದ ಈ ಆಂಬುಲೆನ್ಸ್‌ಗಳು ಸೆಶೆಲ್ಸ್‌ನಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಬೆಂಬಲಿಸಲಿವೆ. ಈ ನಡೆಯು ಭಾರತ-ಸೆಶೆಲ್ಸ್ ಸಹಭಾಗಿತ್ವದ ಜನ ಕೇಂದ್ರಿತ ಉದ್ದೇಶವನ್ನು ಒತ್ತಿಹೇಳುತ್ತದೆ.

ಭಾರತೀಯ ಔಷಧ ಆಯೋಗಕ್ಕೆ ಸೆಶೆಲ್ಸ್‌ನಿಂದ ಮಾನ್ಯತೆ ನೀಡಿರುವುದರಿಂದ ಗುಣಮಟ್ಟದ ಭರವಸೆಯ ಅಗತ್ಯ ಔಷಧಗಳ ಖರೀದಿ ಸುಗಮವಾಗಲಿದೆ. ಜೊತೆಗೆ ಭಾರತದ ʻಜನೌಷಧಿʼ ಉಪಕ್ರಮದ ಅಡಿಯಲ್ಲಿ ಕೈಗೆಟಕುವ ದರದಲ್ಲಿ ಔಷಧಗಳು ಲಭ್ಯವಾಗಲಿವೆ ಎಂದು ಉಭಯ ನಾಯಕರು ಸಮ್ಮತಿಸಿದರು.

ಉಭಯ ನಾಯಕರು ಈ ಕೆಳಗಿನವುಗಳಿಗೆ ಒಪ್ಪಿಗೆ ಸೂಚಿಸಿದರು:

      • ಸಾಂಸ್ಥಿಕ ಸಂಪರ್ಕಗಳ ಮೂಲಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತರಬೇತಿ ಕಾರ್ಯಕ್ರಮಗಳು ಮತ್ತು ಪರಸ್ಪರ ಭೇಟಿಗಳಿಗೆ ಅನುವುಮಾಡಿಕೊಡುವುದು.

• ಸೆಶೆಲ್ಸ್‌ನ ಅಗತ್ಯಗಳನ್ನು ಪೂರೈಸಲು ಭಾರತದಿಂದ ವೈದ್ಯಕೀಯ ತಜ್ಞರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ತಂತ್ರಜ್ಞರ ನೇಮಕಾತಿ ಹಾಗೂ ನಿಯೋಜನೆಗೆ ಬೆಂಬಲ ನೀಡುವುದು.

• ಪರಸ್ಪರ ಭೇಟಿ ಮತ್ತು ಸಾಂಸ್ಥಿಕ ಸಂಪರ್ಕಗಳ ಮೂಲಕ ಸಾರ್ವಜನಿಕ ಆರೋಗ್ಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವುದು.

• ಸೆಶೆಲ್ಸ್‌ನಲ್ಲಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಬೆಂಬಲ ನೀಡಲು ಒಂದಾಗಿ ಶ್ರಮಿಸುವುದು.


ಹೆಚ್ಚಿನ ಜೀವನ ವೆಚ್ಚವು ಸೆಶೆಲ್ಸ್ ಸರ್ಕಾರಕ್ಕೆ ಪ್ರಮುಖ ಕಳವಳವಾಗಿದೆ ಎಂದು ಸಮ್ಮತಿಸಿದ ಉಭಯ ನಾಯಕರು ಈ ಕೆಳಗಿನವುಗಳಿಗೆ ಒಪ್ಪಿಗೆ ಸೂಚಿಸಿದರು:


• ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಲಭ್ಯತೆಯನ್ನು ಹೆಚ್ಚಿಸುವ ಕ್ರಮಗಳು ಸೇರಿದಂತೆ ಸೆಶೆಲ್ಸ್‌ನ ಆರೋಗ್ಯ ಮೂಲಸೌಕರ್ಯಗಳ ದೀರ್ಘಕಾಲೀನ ಅಭಿವೃದ್ಧಿಗೆ ಸಹಯೋಗ.


• ಭಾರತದಿಂದ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವ ಕಾರ್ಯವಿಧಾನವನ್ನು ಸಾಂಸ್ಥಿಕಗೊಳಿಸಲು ಒಟ್ಟಾಗಿ ಕೆಲಸ ಮಾಡುವುದು.


• ಅಧ್ಯಕ್ಷರಾದ ಹರ್ಮಿನಿ ಅವರು ಸೆಶೆಲ್ಸ್‌ಗೆ 1000 ಮೆಟ್ರಿಕ್ ಟನ್ ಧಾನ್ಯಗಳನ್ನು ಕೊಡುಗೆಯಾಗಿ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಆಹಾರ ದೇಣಿಗೆಯು ಸೆಶೆಲ್ಸ್‌ನಲ್ಲಿ ಆಹಾರ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಸೆಶೆಲ್ಸ್ ಜನರ ಆಹಾರ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಸಾಮರ್ಥ್ಯ ವರ್ಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಂಸ್ಥಿಕ ಸಂಪರ್ಕಗಳು

ಸೆಶೆಲ್ಸ್‌ನ ಸಾಂಸ್ಥಿಕ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಭಾರತದ ನಿರಂತರ ಬೆಂಬಲಕ್ಕೆ ಅಧ್ಯಕ್ಷ ಹರ್ಮಿನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ʻಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮʼ(ಐಟಿಇಸಿ), ನಾಗರಿಕ ಸೇವಕರು, ರಕ್ಷಣಾ ಸಿಬ್ಬಂದಿ ಮತ್ತು ಆರೋಗ್ಯ ವೃತ್ತಿಪರರಿಗೆ ತರಬೇತಿ ಕಾರ್ಯಕ್ರಮಗಳು ಸೇರಿದಂತೆ ಸಾಮರ್ಥ್ಯ ವರ್ಧನೆಯಲ್ಲಿ ಬಲವಾದ ಸಹಕಾರವನ್ನು ಎರಡೂ ಕಡೆಯವರು ಒತ್ತಿಹೇಳಿದರು. ಸೆಶೆಲ್ಸ್‌ನ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಪೊಲೀಸಿಂಗ್, ಹಣಕಾಸು, ಕೃಷಿ, ಹವಾಮಾನ ಬದಲಾವಣೆ, ಸಾಗರ ಸಂರಕ್ಷಣೆ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ತರಬೇತಿ ಕಾರ್ಯಕ್ರಮಗಳು ಹಾಗೂ ಸಾಂಸ್ಥಿಕ ಸಂಪರ್ಕಗಳನ್ನು ಅನ್ವೇಷಿಸಲು ನಾಯಕರು ಸಮ್ಮತಿಸಿದರು.
ಶಿಕ್ಷಣ ಮತ್ತು ವೃತ್ತಿ ತರಬೇತಿಯ ವಿಚಾರವಾಗಿ, ನಾಯಕರು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ವಿಸ್ತರಣೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಡಿಜಿಟಲ್ ಶಿಕ್ಷಣ ವೇದಿಕೆಗಳ ನಡುವಿನ ಸಂವಾದಕ್ಕೆ ಶಿಫಾರಸು ಮಾಡಿದರು.

ಉಭಯ ನಾಯಕರು ಈ ಕೆಳಗಿನವುಗಳಿಗೆ ಒಪ್ಪಿಕೊಂಡರು:

• ಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಕೇಂದ್ರ (ಎನ್‌ಸಿಜಿಜಿ) ಮೂಲಕ ಭಾರತದಲ್ಲಿ ಸೆಶೆಲ್ಸ್‌ನ ನಾಗರಿಕ ಸೇವಕರಿಗೆ ವೈಯಕ್ತೀಕರಿಸಿದ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.
• ಸೈಬರ್ ಭದ್ರತೆ ಮತ್ತು ಹಣಕಾಸು ಗುಪ್ತಚರ ಕ್ಷೇತ್ರಗಳಲ್ಲಿ ಸಾಮರ್ಥ್ಯವರ್ಧನೆ, ಸಹಕಾರ ಮತ್ತು ವಿನಿಮಯವನ್ನು ಬಲಪಡಿಸುವುದು.
• ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ನವೀಕರಿಸಬಹುದಾದ ಇಂಧನ, ಕಾನೂನು, ಲೆಕ್ಕಪರಿಶೋಧನೆ, ಕಡಲ ಭದ್ರತೆ, ಹಣಕಾಸು, ಭೂಮಿ ಮತ್ತು ಮೂಲಸೌಕರ್ಯ ಅಭಿವೃದ್ಧಿ, ತೆರಿಗೆ ಆಡಳಿತ, ಮಹಿಳಾ ಸಬಲೀಕರಣ, ಮೀನುಗಾರಿಕೆ ಹಾಗೂ ಪರಸ್ಪರ ಹಿತಾಸಕ್ತಿಯ ಇತರ ಕ್ಷೇತ್ರಗಳಲ್ಲಿ ಸಾಮರ್ಥ್ಯ ವರ್ಧನೆಗೆ ಅವಕಾಶ ನೀಡುವುದು.
• ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಸಾಗರ ವಿಜ್ಞಾನ ಮತ್ತು ಸಂರಕ್ಷಣೆ ಕ್ಷೇತ್ರದಲ್ಲಿ ಭಾರತ ಹಾಗೂ ಸೆಶೆಲ್ಸ್ ನಡುವೆ ಸಾಮರ್ಥ್ಯ ವೃದ್ಧಿ ಮತ್ತು ಸಾಂಸ್ಥಿಕ ಸಂಪರ್ಕ ವೃದ್ಧಿ.
• ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಉತ್ತೇಜನಕ್ಕೆ ಸಹಕಾರ ಮತ್ತು ಸಹಯೋಗ.
• ʻಸುಷ್ಮಾ ಸ್ವರಾಜ್ ವಿದೇಶಾಂಗ ಸೇವಾ ಸಂಸ್ಥೆʼಯ ಸಹಯೋಗದೊಂದಿಗೆ ಸೆಶೆಲ್ಸ್‌ನ ಅಗತ್ಯತೆಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು.

ನವೀಕರಿಸಬಹುದಾದ ಇಂಧನ, ಹವಾಮಾನ ಉಪಕ್ರಮ ಮತ್ತು ಸುಸ್ಥಿರತೆ

ನವೀನ ಶುದ್ಧ ಇಂಧನ ಪರಿಹಾರಗಳ ಮೂಲಕ ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಉಪಕ್ರಮದಲ್ಲಿ ಸಹಕಾರವನ್ನು ಆಳಗೊಳಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಅಧ್ಯಕ್ಷ ಹರ್ಮಿನಿ ಅವರು ನವೀಕರಿಸಬಹುದಾದ ಇಂಧನ ಉದ್ದೇಶಗಳನ್ನು ಸಾಧಿಸಲು ಸೆಶೆಲ್ಸ್‌ಗೆ ಸಹಾಯ ಮಾಡುವಲ್ಲಿ ಭಾರತದ ದೃಢವಾದ ಬೆಂಬಲವನ್ನು ಒಪ್ಪಿಕೊಂಡರು. ʻಅಂತರರಾಷ್ಟ್ರೀಯ ಸೌರ ಒಕ್ಕೂಟʼದ ಆಶ್ರಯದಲ್ಲಿ ಭಾರತ ಸರ್ಕಾರದ ಬೆಂಬಲದೊಂದಿಗೆ ಜಾರಿಗೆ ತರಲಾದ ಸೌರ ವಿದ್ಯುತ್ ಯೋಜನೆಗಳು ಸ್ಪಷ್ಟ ಮತ್ತು ಸಮುದಾಯ ಮಟ್ಟದ ಪ್ರಯೋಜನಗಳನ್ನು ವಿಶೇಷವಾಗಿ ಸೆಶೆಲ್ಸ್‌ನ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನೀಡಿವೆ ಎಂದು ಅವರು ಹೇಳಿದರು.

ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸುವ ಮತ್ತು ಸನ್ನದ್ಧತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢವಾಗಿಸುವ ಸಲುವಾಗಿ, ಉಭಯ ನಾಯಕರು ಸೆಶೆಲ್ಸ್‌ನಲ್ಲಿ ಬಹು-ಅಪಾಯದ ಮುನ್ನೆಚ್ಚರಿಕೆ ವ್ಯವಸ್ಥೆಗಳ ಅನುಷ್ಠಾನವನ್ನು ಬೆಂಬಲಿಸಲು ಒಪ್ಪಿಕೊಂಡರು.

ಹಸಿರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯತ್ತ ದೇಶದ ಪರಿವರ್ತನೆಗೆ ಬೆಂಬಲಿಸುವ ಸಲುವಾಗಿ ʻಪವರ್ ಗ್ರಿಡ್ʼ ನಿರ್ವಹಣೆಯಲ್ಲಿ ಸೆಶೆಲ್ಸ್‌ಗೆ ತಾಂತ್ರಿಕ ನೆರವು ನೀಡಲು ಭಾರತ ಒಪ್ಪಿಕೊಂಡಿದೆ. ಸೆಶೆಲ್ಸ್‌ನ ಅಗತ್ಯತೆಗಳನ್ನು ಪೂರೈಸಲು ಇಂಧನ ಸಂರಕ್ಷಣೆ, ಸುಸ್ಥಿರತೆ, ನವೀಕರಿಸಬಹುದಾದ ಇಂಧನ ಮತ್ತು ಹಸಿರು ಸಾರಿಗೆ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಯೋಜನೆಗಳ ಹೊಸ ಮಾರ್ಗಗಳನ್ನು ಅನ್ವೇಷಿಸಲು ಉಭಯ ದೇಶಗಳು ಒಪ್ಪಿವೆ.

ಸೆಶೆಲ್ಸ್‌ನಂತಹ ʻಅಭಿವೃದ್ಧಿಶೀಲ ಸಣ್ಣ ದ್ವೀಪ ರಾಷ್ಟ್ರʼಗಳಿಗೆ (ಎಸ್ಐಡಿಎಸ್‌) ಹಣಕಾಸು ಲಭ್ಯತೆಯು ಪ್ರಮುಖ ಸವಾಲಾಗಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ʻಬಹು ಆಯಾಮದ ದುರ್ಬಲತೆ ಸೂಚ್ಯಂಕʼ (ಎಂವಿಐ) ಸೇರಿದಂತೆ ಬಹು ಆಯಾಮದ ದುರ್ಬಲತೆಯ ಪರಿಗಣನೆಯನ್ನು ಬೆಂಬಲಿಸಲು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಬಲವಾದ ಮತ್ತು ರಚನಾತ್ಮಕ ಧ್ವನಿಯ ಮೇಲೆ ಅವಲಂಬನೆಯನ್ನು ಸೆಶೆಲ್ಸ್ ಮುಂದುವರಿಸಬಹುದು ಎಂದು ಅಧ್ಯಕ್ಷ ಹರ್ಮಿನಿ ಭರವಸೆ ವ್ಯಕ್ತಪಡಿಸಿದರು. ʼಎಂವಿಐʼ ಪೂರಕ ಮತ್ತು ಪ್ರಮುಖ ವಿಶ್ಲೇಷಣಾತ್ಮಕ ಸಾಧನವಾಗಿದೆ. ಇದೇವೇಳೆ, ಅಭಿವೃದ್ಧಿ ಬ್ಯಾಂಕುಗಳು, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವಿಕೆಯಲ್ಲಿ ಸಮಾನತೆ, ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳು (ಸಿಬಿಡಿಆರ್-ಆರ್‌ಸಿ) ಹಾಗೂ ಬಹುಪಕ್ಷೀಯರೊಂದಿಗೆ ಸಂಬಂಧಿತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯವಾಗಿ ನಿರ್ಧರಿಸಿದ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟʼಕ್ಕೆ (ಸಿಡಿಆರ್‌ಐ) ಸೆಶೆಲ್ಸ್ ಸೇರ್ಪಡೆಯನ್ನು ಉಭಯ ನಾಯಕರು ಒಪ್ಪಿಕೊಂಡರು.

ವ್ಯಾಪಾರ, ಹೂಡಿಕೆ, ಸಂಪರ್ಕ ಮತ್ತು ಪ್ರವಾಸೋದ್ಯಮ

ಭಾರತೀಯ ಕಂಪನಿಗಳು ಮತ್ತು ವಾಣಿಜ್ಯೋದ್ಯಮಗಳು ಸೆಶೆಲ್ಸ್ ಅನ್ನು ಪ್ರಮುಖ ಹೂಡಿಕೆ ಕೇಂದ್ರವಾಗಿ ನೋಡುವ ಅಗತ್ಯವನ್ನು ಅಧ್ಯಕ್ಷರಾದ ಹರ್ಮಿನಿ ಒತ್ತಿ ಹೇಳಿದರು. ಕೈಗೆಟಕುವ ದರದಲ್ಲಿ ವಸತಿ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ, ಹಣಕಾಸು ಸೇವೆಗಳು, ನೀಲಿ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಸೆಶೆಲ್ಸ್ ನೀಡುವ ವ್ಯಾಪಾರ ಮತ್ತು ವಾಣಿಜ್ಯ ಅವಕಾಶಗಳಿಂದ ಅವರು ಪ್ರಯೋಜನ ಪಡೆಯಬೇಕು ಎಂದರು.

ನೇರ ವಿಮಾನ ಸೇವೆಯಿಂದಾಗಿ ಸೆಶೆಲ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ಭಾರತದಿಂದ ಭೇಟಿ ನೀಡುವ ಪ್ರವಾಸಿಗರ ಹೆಚ್ಚಳವು ಸೆಶೆಲ್ಸ್‌ನಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸಿದೆ ಎಂದು ಅವರು ಒತ್ತಿ ಹೇಳಿದರು. ಇದಲ್ಲದೆ, ಉಭಯ ದೇಶಗಳ ನಡುವೆ ವಿಮಾನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡರು.

ಸೆಶೆಲ್ಸ್ ಮತ್ತು ಭಾರತದ ಆರ್ಥಿಕ ಪ್ರಗತಿ ಹಾಗೂ ಸಮೃದ್ಧಿಯ ಹಂಚಿಕೆಯ ಉದ್ದೇಶಕ್ಕಾಗಿ ದ್ವಿಪಕ್ಷೀಯ ವ್ಯಾಪಾರದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವನ್ನು ನಾಯಕರು ಒತ್ತಿಹೇಳಿದರು.

ಜಲಸಂಶೋಧನೆಯಲ್ಲಿ (ಹೈಡ್ರೋಗ್ರಫಿ) ಸಹಕಾರ

ಹೆಚ್ಚಿನ ಜಂಟಿ ಜಲ ಸಮೀಕ್ಷೆಗಳನ್ನು ನಡೆಸುವ ಮೂಲಕ ತನ್ನ ನೀಲಿ ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸುವ ಸೆಶೆಲ್ಸ್‌ನ ಪ್ರಯತ್ನಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಜಲ ಸಂಶೋಧನೆ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಉಭಯ ನಾಯಕರು ಸಮ್ಮತಿಸಿದರು. ಈ ನಿಟ್ಟಿನಲ್ಲಿ, ಭಾರತದ ನೆರವಿನೊಂದಿಗೆ ʻಸೆಶೆಲ್ಸ್ ಹೈಡ್ರೋಗ್ರಾಫಿಕ್ ಘಟಕʼವನ್ನು (ಎಸ್‌ಎಚ್‌ಯು) ಸೆಶೆಲ್ಸ್ ಸ್ಥಾಪಿಸಲಿದೆ. ದ್ವಿಪಕ್ಷೀಯ ಸಹಕಾರದ ಈ ಕ್ಷೇತ್ರಕ್ಕೆ ದಿಕ್ಕು ಮತ್ತು ವೇಗವನ್ನು ನೀಡಲು ಜಲಸಂಶೋಧನೆ ಕುರಿತ 3ನೇ ʻಜೆಸಿಎಂʼ ಅನ್ನು 2026ರ ಆರಂಭದಲ್ಲಿ ಸೆಶೆಲ್ಸ್‌ನಲ್ಲಿ ನಡೆಸಲು ನಿರ್ಧರಿಸಲಾಯಿತು.

ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆ

ಕಡಲ ಭದ್ರತೆ ಮತ್ತು ರಕ್ಷಣೆಯು ದ್ವಿಪಕ್ಷೀಯ ಪಾಲುದಾರಿಕೆಯಲ್ಲಿ ಬಹಳ ಕಾಲದಿಂದಲೂ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಹರ್ಮಿನಿ ಒತ್ತಿ ಹೇಳಿದರು. ಭಾರತದ ʻವಿಷನ್‌ ಮಹಾಸಾಗರ್ʼ (ಎಲ್ಲಾ ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಮತ್ತು ಸಮಗ್ರ ಪ್ರಗತಿ) ಊಪಕ್ರಮದಲ್ಲಿ ಸೆಶೆಲ್ಸ್ ಪ್ರಮುಖ ಕಡಲ ಪಾಲುದಾರ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು. ಇದೇವೇಳೆ, ಸೆಶೆಲ್ಸ್‌ಗೆ ತನ್ನ ಕಡಲ ಭದ್ರತೆ ಮತ್ತು ರಕ್ಷಣಾ ಅಗತ್ಯಗಳನ್ನು ಪೂರೈಸಲು ಭಾರತದ ನಿರಂತರ ಬೆಂಬಲ ಮತ್ತು ಸಹಾಯವನ್ನು ಪುನರುಚ್ಚರಿಸಿದರು.

ಕಡಲ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಬಲವಾದ ಸೆಶೆಲ್ಸ್-ಭಾರತ ಸಹಭಾಗಿತ್ವವು ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಯನ್ನು ಬಲಪಡಿಸುತ್ತದೆ. ಜೊತೆಗೆ ಸೆಶೆಲ್ಸ್ ಮತ್ತು ಭಾರತದ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಮುನ್ನಡೆಸುತ್ತದೆ ಎಂದು ಇಬ್ಬರೂ ನಾಯಕರು ಸಹಮತಿಸಿದರು.

ಅಂತರರಾಷ್ಟ್ರೀಯ ಕಾನೂನಿಗೆ ಗೌರವ, ನೌಕಾಯಾನ ಸ್ವಾತಂತ್ರ್ಯ ಮತ್ತು ನಿಯಮ ಆಧರಿತ ಕಡಲ ನೀತಿ ಆಧಾರದ ಮೇಲೆ ಮುಕ್ತ, ಸುರಕ್ಷಿತ ಮತ್ತು ಸುಭದ್ರ ಹಿಂದೂ ಮಹಾಸಾಗರ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ಸೆಶೆಲ್ಸ್ ಮತ್ತು ಭಾರತ ಬದ್ಧವಾಗಿವೆ ಎಂದು ನಾಯಕರು ಪುನರುಚ್ಚರಿಸಿದರು. ಕಡಲ್ಗಳ್ಳತನ, ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಮಾನವ ಕಳ್ಳಸಾಗಣೆ, ಕಾನೂನುಬಾಹಿರ, ಅನಿಯಂತ್ರಿತ ಮತ್ತು ವರದಿ ಮಾಡದ ಮೀನುಗಾರಿಕೆ ಹಾಗೂ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಗೆ ಹಣಕಾಸು ಸಂಪರ್ಕ ಹೊಂದಿರುವ ಇತರ ಬಹುರಾಷ್ಟ್ರೀಯ ಅಪರಾಧಗಳಂತಹ ಕಡಲ ಸವಾಲುಗಳನ್ನು ಎದುರಿಸಲು ನಿಕಟವಾಗಿ ಕೆಲಸ ಮಾಡುವ ತಮ್ಮ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು. ಕಡಲ ಪ್ರದೇಶದ ಜಾಗೃತಿ ಹೆಚ್ಚಳ, ಮಾಹಿತಿ ಹಂಚಿಕೆ, ಸಾಮರ್ಥ್ಯ ವರ್ಧನೆ ಮತ್ತು ಸಂಘಟಿತ ಕಾರ್ಯಾಚರಣೆಯ ನಿರ್ವಹಣೆ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸಲು ಒಪ್ಪಿದರು. 

ಜಂಟಿ ಕಡಲ ಕಣ್ಗಾವಲು, ಜಲಸಂಶೋಧನೆ ಸಮೀಕ್ಷೆಗಳು, ದ್ವಿಪಕ್ಷೀಯ ಸಮರಾಭ್ಯಾಸ, ಮಾಹಿತಿ ಹಂಚಿಕೆ ಮತ್ತು ಸೆಶೆಲ್ಸ್ ರಕ್ಷಣಾ ಪಡೆಗಳ ಸಾಮರ್ಥ್ಯ ವರ್ಧನೆಗಾಗಿ ಸೆಶೆಲ್ಸ್‌ಗೆ ಬೆಂಬಲ ನೀಡಿದ್ದಕ್ಕಾಗಿ ಅಧ್ಯಕ್ಷ ಹರ್ಮಿನಿ ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದರು. ಕಡಲ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

ಹೆಚ್ಚಿನ ಪರಿಣಾಮಕಾರಿತ್ವ, ಸಮನ್ವಯ ಹೆಚ್ಚಳ ಮತ್ತು ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಂಸ್ಥಿಕ ವಿನಿಮಯವನ್ನು ಹೆಚ್ಚಿಸುವ ಪ್ರಕ್ರಿಯೆ ಪ್ರಾರಂಭಿಸಲು ಉಭಯ ನಾಯಕರು ಸಮ್ಮತಿಸಿದರು.

ಅಧ್ಯಕ್ಷರಾದ ಹರ್ಮಿನಿ ಅವರು ಭಾರತೀಯ ಸಶಸ್ತ್ರ ಪಡೆಗಳ ತುಕಡಿಗಳ ಮೂಲಕ ಸೆಶೆಲ್ಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತದ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು. 50ನೇ ರಾಷ್ಟ್ರೀಯ ದಿನಾಚರಣೆಗಾಗಿ ಈ ಸಂಪ್ರದಾಯವನ್ನು ಮುಂದುವರಿಸಲು ಉಭಯ ನಾಯಕರು ಸಮ್ಮತಿಸಿದರು.

ಅನುದಾನದ ನೆರವಿನ ಮೂಲಕ ʻಪಿಎಸ್ ಜೊರೊಸ್ಟರ್ʼ ನೌಕೆಯನ್ನು ಪುನಶ್ಚೇತನಗೊಳಿಸಲು ನಿರಂತರ ಬೆಂಬಲ ನೀಡಿದ್ದಕ್ಕಾಗಿ ಅಧ್ಯಕ್ಷ ಹರ್ಮಿನಿ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು. ಇತ್ತೀಚೆಗೆ ಸೀಶೆಲ್ಸ್‌ಗೆ 10 ಬಹುಪಯೋಗಿ ವಾಹನಗಳು ಮತ್ತು 5 ಸೆಟ್ ಲೇಸರ್ ರೇಡಿಯಲ್ ದೋಣಿಗಳನ್ನು ದೇಣಿಗೆಯಾಗಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಇದು ಸೆಶೆಲ್ಸ್ ರಕ್ಷಣಾ ಪಡೆಗಳ ಸಾಗಾಟ ಅಗತ್ಯಗಳನ್ನು ಪೂರೈಸುತ್ತದೆ ಎಂದು ಹೇಳಿದರು.

ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ

ಕಡಲ ಭದ್ರತೆಯನ್ನು ಹೆಚ್ಚಿಸುವಲ್ಲಿ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಸಾಮಾನ್ಯ ಸವಾಲುಗಳನ್ನು ಎದುರಿಸುವಲ್ಲಿ ಪ್ರಾದೇಶಿಕ ಕಾರ್ಯವಿಧಾನಗಳ ಪಾತ್ರವನ್ನು ಒಪ್ಪಿಕೊಂಡ ಉಭಯ ನಾಯಕರು, ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಿಕಟವಾಗಿ ಕೆಲಸ ಮಾಡಲು ಸಮ್ಮತಿಸಿದರು.

ʻಕೊಲಂಬೊ ಭದ್ರತಾ ಸಮಾವೇಶʼದ(ಸಿಎಸ್‌ಸಿ) ಪೂರ್ಣ ಸದಸ್ಯತ್ವ ಪಡೆಯುವ ಸೆಶೆಲ್ಸ್ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ವಿವಿಧ ಉಮೇದುವಾರಿಕೆಗಳಿಗಾಗಿ ಸೆಶೆಲ್ಸ್ ಭಾರತಕ್ಕೆ ನೀಡಿದ ಬೆಂಬಲಕ್ಕಾಗಿ ಅವರು ಅಧ್ಯಕ್ಷರಾದ ಹರ್ಮಿನಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಸೆಶೆಲ್ಸ್ ಬೆಂಬಲವನ್ನು ಅಧ್ಯಕ್ಷ ಹರ್ಮಿನಿ ಪುನರುಚ್ಚರಿಸಿದರು.

ಜನರ ನಡುವಿನ ಸಾಂಸ್ಕೃತಿಕ ಬಾಂಧವ್ಯ

ಭಾರತ ಮತ್ತು ಸೆಶೆಲ್ಸ್ ನಡುವಿನ ಆಳವಾದ ಐತಿಹಾಸಿಕ ಬಾಂಧವ್ಯವನ್ನು ಗುರುತಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಹರ್ಮಿನಿ ಅವರು, ಸೆಶೆಲ್ಸ್‌ನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಗೆ ಸೆಶೆಲ್ಸ್‌ನಲ್ಲಿರುವ ಭಾರತೀಯರು ನೀಡಿದ ಕೊಡುಗೆಗಳನ್ನು ಒತ್ತಿ ಹೇಳಿದರು. ಸೆಶೆಲ್ಸ್‌ನ ಆರ್ಥಿಕತೆ ಮತ್ತು ಮೂಲಸೌಕರ್ಯಕ್ಕೆ ಭಾರತೀಯ ವೃತ್ತಿಪರರ ಕೊಡುಗೆಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಸಂಸ್ಕೃತಿ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಯುವ ಪಾಲ್ಗೊಳ್ಳುವಿಕೆ ಕ್ಷೇತ್ರಗಳಲ್ಲಿ ಸಹಕಾರವನ್ನು ಸಾಂಸ್ಥಿಕಗೊಳಿಸಲು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು.

ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಅಂಶಗಳನ್ನು ಒಳಗೊಂಡ ಸಮಗ್ರ ಚರ್ಚೆಗಳ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಹಿಂದೂ ಮಹಾಸಾಗರ ಪ್ರದೇಶದ ಸ್ಥಿರತೆ ಮತ್ತು ಅಭಿವೃದ್ಧಿಗೆ ಸೆಶೆಲ್ಸ್-ಭಾರತ ಸಹಭಾಗಿತ್ವವು ಮೂಲಾಧಾರವಾಗಿದೆ ಎಂಬ ಸಮಾನ ತಿಳಿವಳಿಕೆಯೊಂದಿಗೆ ಅವರು ಸಭೆಯನ್ನು ಮುಕ್ತಾಯಗೊಳಿಸಿದರು. ಇಂದು ಕೈಗೊಂಡ ನಿರ್ಧಾರಗಳು ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೆಚ್ಚಿಸುತ್ತವೆ ಮತ್ತು ಬಲಪಡಿಸುತ್ತವೆ ಜೊತೆಗೆ ಎರಡೂ ರಾಷ್ಟ್ರಗಳ ಜನರಿಗೆ ಸ್ಪಷ್ಟ ಪ್ರಯೋಜನಗಳನ್ನು ನೀಡುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷರಾದ ಹರ್ಮಿನಿ ಅವರು ಭಾರತ ಭೇಟಿ ವೇಳೆ ತಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಅನುಕೂಲಕರ ಸಮಯದಲ್ಲಿ ಸೆಶೆಲ್ಸ್‌ಗೆ ಅಧಿಕೃತ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಅವರು ಆಹ್ವಾನ ನೀಡಿದರು.

 

*****


(ಪ್ರಕಟಣೆ ಐ.ಡಿ.: 2225487) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Assamese , Gujarati , Odia , Telugu