ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2026-27 ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಐದು ಪ್ರಾದೇಶಿಕ ವೈದ್ಯಕೀಯ ಹಬ್‌ ಗಳನ್ನು ಸ್ಥಾಪಿಸುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ


ಅಸ್ತಿತ್ವದಲ್ಲಿರುವ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿ ರಾಷ್ಟ್ರೀಯ ಮಂಡಳಿಯನ್ನು ಮೇಲ್ದರ್ಜೆಗೇರಿಸುವ ಮೂಲಕ ರಾಷ್ಟ್ರೀಯ ಆತಿಥ್ಯ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪ

ಐಕಾನಿಕ್ 20 ಪ್ರವಾಸಿ ತಾಣಗಳಲ್ಲಿ 10,000 ಮಾರ್ಗದರ್ಶಿಗಳಿಗೆ ಪ್ರಮಾಣಿತ, ಉತ್ತಮ ಗುಣಮಟ್ಟದ 12 ವಾರಗಳ ತರಬೇತಿ ಕೋರ್ಸ್ ಮೂಲಕ ಕೌಶಲ್ಯ ವೃದ್ಧಿಸಲು ಪ್ರಾಯೋಗಿಕ ಯೋಜನೆಯ ಪ್ರಸ್ತಾಪ

15 ಪುರಾತತ್ವ ತಾಣಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪ; ಉತ್ಖನನ ಮಾಡಿದ ಭೂದೃಶ್ಯಗಳನ್ನು ಕ್ಯುರೇಟೆಡ್ ವಾಕ್‌ ವೇ ಗಳ ಮೂಲಕ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು

ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಬೌದ್ಧ ಸರ್ಕ್ಯೂಟ್‌ ಗಳ ಅಭಿವೃದ್ಧಿಗಾಗಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ

ಪ್ರಕಟಣಾ ದಿನಾಂಕ: 01 FEB 2026 12:46PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2026-27ರ ಕೇಂದ್ರ ಬಜೆಟ್ ಮಂಡಿಸುತ್ತಾ, “ಭಾರತವನ್ನು ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳ ಹಬ್ ಆಗಿ ಉತ್ತೇಜಿಸಲು, ಖಾಸಗಿ ವಲಯದ ಸಹಭಾಗಿತ್ವದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಹಬ್‌ ಗಳನ್ನು ಸ್ಥಾಪಿಸುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲು ಯೋಜನೆಯೊಂದನ್ನು ಪ್ರಾರಂಭಿಸಲು ನಾನು ಪ್ರಸ್ತಾಪಿಸುತ್ತೇನೆ” ಎಂದು ಹೇಳಿದರು.

ಈ ಹಬ್‌ ಗಳು ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸಂಯೋಜಿಸುವ ಸಮಗ್ರ ಆರೋಗ್ಯ ಸಂಕೀರ್ಣಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ತಿಳಿಸಿದರು. “ಅವುಗಳು ಆಯುಷ್ ಕೇಂದ್ರಗಳು, ವೈದ್ಯಕೀಯ ಮೌಲ್ಯದ ಪ್ರವಾಸೋದ್ಯಮ ಸೌಲಭ್ಯ ಕೇಂದ್ರಗಳು ಮತ್ತು ರೋಗನಿರ್ಣಯ, ನಂತರದ ಆರೈಕೆ ಹಾಗೂ ಪುನರ್ವಸತಿಗಾಗಿ ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ಈ ಹಬ್‌ ಗಳು ವೈದ್ಯರು ಮತ್ತು ಪೂರಕ ಆರೋಗ್ಯ ವೃತ್ತಿಪರರು ಸೇರಿದಂತೆ ಆರೋಗ್ಯ ವೃತ್ತಿಪರರಿಗೆ ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ” ಎಂದು ಅವರು ಹೇಳಿದರು.

ಪ್ರವಾಸೋದ್ಯಮ

“ಪ್ರವಾಸೋದ್ಯಮ ವಲಯವು ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಗಳಿಕೆ ಮತ್ತು ಸ್ಥಳೀಯ ಆರ್ಥಿಕತೆಯನ್ನು ವಿಸ್ತರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಹಣಕಾಸು ಸಚಿವರು ಹೇಳಿದರು.

Para 90-89,71-65,55_Expanding Economy through Strengthening Tourism english 01.jpg

“ಅಸ್ತಿತ್ವದಲ್ಲಿರುವ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿ ರಾಷ್ಟ್ರೀಯ ಮಂಡಳಿಯನ್ನು ಮೇಲ್ದರ್ಜೆಗೇರಿಸುವ ಮೂಲಕ ರಾಷ್ಟ್ರೀಯ ಆತಿಥ್ಯ ಸಂಸ್ಥೆಯನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸುತ್ತೇನೆ. ಇದು ಶೈಕ್ಷಣಿಕ ಕ್ಷೇತ್ರ, ಉದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ತಿಳಿಸಿದರು.

ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆಯ (ಐಐಎಂ) ಸಹಯೋಗದೊಂದಿಗೆ ಹೈಬ್ರಿಡ್ ಮೋಡ್‌ ನಲ್ಲಿ ಪ್ರಮಾಣಿತ, ಉತ್ತಮ ಗುಣಮಟ್ಟದ 12 ವಾರಗಳ ತರಬೇತಿ ಕೋರ್ಸ್ ಮೂಲಕ 20 ಐಕಾನಿಕ್ ಪ್ರವಾಸಿ ತಾಣಗಳಲ್ಲಿ 10,000 ಮಾರ್ಗದರ್ಶಿಗಳನ್ನು ಕೌಶಲ್ಯಗೊಳಿಸುವ ಪ್ರಾಯೋಗಿಕ ಯೋಜನೆಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದರು.

“ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಪರಂಪರೆಯ ಎಲ್ಲಾ ಮಹತ್ವದ ಸ್ಥಳಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ರಾಷ್ಟ್ರೀಯ ತಾಣ ಡಿಜಿಟಲ್ ಜ್ಞಾನ ಗ್ರಿಡ್ ಅನ್ನು ಸ್ಥಾಪಿಸಲಾಗುವುದು. ಈ ಉಪಕ್ರಮವು ಸ್ಥಳೀಯ ಸಂಶೋಧಕರು, ಇತಿಹಾಸಕಾರರು, ವಿಷಯ ರಚನೆಕಾರರು ಮತ್ತು ತಂತ್ರಜ್ಞಾನ ಪಾಲುದಾರರಿಗೆ ಉದ್ಯೋಗಗಳ ಹೊಸ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ” ಎಂದು ಅವರು ತಿಳಿಸಿದರು.

ಭಾರತವು ವಿಶ್ವದರ್ಜೆಯ ಚಾರಣ ಮತ್ತು ಹೈಕಿಂಗ್ ಅನುಭವವನ್ನು ನೀಡುವ ಸಾಮರ್ಥ್ಯ ಮತ್ತು ಅವಕಾಶವನ್ನು ಹೊಂದಿದೆ. ನಾವು (i) ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರ; ಪೂರ್ವ ಘಟ್ಟಗಳ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟಗಳ ಪೋಧಿಗೈ ಮಲೈನಲ್ಲಿ ಪರ್ವತ ಹಾದಿಗಳನ್ನು ಅಭಿವೃದ್ಧಿಪಡಿಸುತ್ತೇವೆ. (ii) ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳ ಪ್ರಮುಖ ಗೂಡುಕಟ್ಟುವ ಸ್ಥಳಗಳಲ್ಲಿ ಆಮೆ ಹಾದಿಗಳು; ಮತ್ತು (iii) ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪುಲಿಕಾಟ್ ಸರೋವರದ ಉದ್ದಕ್ಕೂ ಪಕ್ಷಿ ವೀಕ್ಷಣಾ ಹಾದಿಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಹಣಕಾಸು ಸಚಿವರು ಹೇಳಿದರು.

“ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದರ್ಶಿ ನಾಯಕತ್ವದಲ್ಲಿ, ನಾವು 2024 ರಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಅನ್ನು ಸ್ಥಾಪಿಸಿದ್ದೇವೆ. ಈ ವರ್ಷ, ಭಾರತವು ಮೊದಲ ಬಾರಿಗೆ ಗ್ಲೋಬಲ್ ಬಿಗ್ ಕ್ಯಾಟ್ ಶೃಂಗಸಭೆಯನ್ನು ಆಯೋಜಿಸುತ್ತಿದೆ, ಅಲ್ಲಿ 95 ದೇಶಗಳ ಸರ್ಕಾರದ ಮುಖ್ಯಸ್ಥರು ಮತ್ತು ಸಚಿವರು ಸಂರಕ್ಷಣೆಗಾಗಿ ಸಾಮೂಹಿಕ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ” ಎಂದು ಅವರು ಹೇಳಿದರು.

ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ

ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ವಿಷಯದ ಬಗ್ಗೆ ಪ್ರಸ್ತಾಪಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಲೋಥಲ್, ಧೋಲಾವಿರಾ, ರಾಖಿಗರ್ಹಿ, ಆದಿಚನಲ್ಲೂರು, ಸಾರನಾಥ್, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿದಂತೆ 15 ಪುರಾತತ್ವ ತಾಣಗಳನ್ನು ರೋಮಾಂಚಕ, ಸಾಂಸ್ಕೃತಿಕ ಅನುಭವದ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

“ಉತ್ಖನನ ಮಾಡಿದ ಭೂದೃಶ್ಯಗಳನ್ನು ಕ್ಯುರೇಟೆಡ್ ವಾಕ್‌ ವೇ ಗಳ ಮೂಲಕ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಸಂರಕ್ಷಣಾ ಪ್ರಯೋಗಾಲಯಗಳು, ವ್ಯಾಖ್ಯಾನ ಕೇಂದ್ರಗಳು ಮತ್ತು ಮಾರ್ಗದರ್ಶಿಗಳಿಗೆ ಸಹಾಯ ಮಾಡಲು ತಲ್ಲೀನಗೊಳಿಸುವ ಕಥೆ ಹೇಳುವ ಕೌಶಲ್ಯಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸಲಾಗುವುದು” ಎಂದು ಹೇಳಿದರು.

Para 90-89,71-65,55_Expanding Economy through Strengthening Tourism english 02.jpg

ಪೂರ್ವೋದಯ ರಾಜ್ಯಗಳು ಮತ್ತು ಈಶಾನ್ಯ ಪ್ರದೇಶದ ಮೇಲೆ ಗಮನ

ಪೂರ್ವೋದಯದ ಬಗ್ಗೆ ಮಾತನಾಡುತ್ತಾ ಶ್ರೀಮತಿ ನಿರ್ಮಲಾ ಸೀತಾರಾಮನ್, “ದುರ್ಗಾಪುರದಲ್ಲಿ ಉತ್ತಮ ಸಂಪರ್ಕ ಹೊಂದಿದ ನೋಡ್‌ ನೊಂದಿಗೆ ಸಂಯೋಜಿತ ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ, 5 ಪೂರ್ವೋದಯ ರಾಜ್ಯಗಳಲ್ಲಿ 5 ಪ್ರವಾಸಿ ತಾಣಗಳ ರಚನೆ ಮತ್ತು 4,000 ಇ-ಬಸ್‌ ಗಳ ಒದಗಿಸುವಿಕೆಯನ್ನು ನಾನು ಪ್ರಸ್ತಾಪಿಸುತ್ತೇನೆ” ಎಂದು ತಿಳಿಸಿದರು.

ಈಶಾನ್ಯ ವಲಯದ ಬೌದ್ಧ ತಾಣಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಈಶಾನ್ಯ ವಲಯವು ಥೇರವಾಡ ಮತ್ತು ಮಹಾಯಾನ/ವಜ್ರಯಾನ ಸಂಪ್ರದಾಯಗಳ ನಾಗರಿಕ ಸಂಗಮವಾಗಿದೆ ಎಂದು ಹೇಳಿದರು.

ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಬೌದ್ಧ ಸರ್ಕ್ಯೂಟ್‌ ಗಳ ಅಭಿವೃದ್ಧಿಗಾಗಿ ಯೋಜನೆಯನ್ನು ಪ್ರಾರಂಭಿಸಲು ಅವರು ಪ್ರಸ್ತಾಪಿಸಿದರು. ಈ ಯೋಜನೆಯು ದೇವಾಲಯಗಳು ಮತ್ತು ಬೌದ್ಧ ವಿಹಾರ ಕೇಂದ್ರಗಳ ಸಂರಕ್ಷಣೆ, ತೀರ್ಥಕ್ಷೇತ್ರ ವ್ಯಾಖ್ಯಾನ ಕೇಂದ್ರಗಳು, ಸಂಪರ್ಕ ಮತ್ತು ಯಾತ್ರಿಕರ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

 

*****

 


(ಪ್ರಕಟಣೆ ಐ.ಡಿ.: 2221535) ವಿಸಿಟರ್ ಕೌಂಟರ್ : 55