ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಪರಾಕ್ರಮ್ ದಿವಸ್ʼ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ


ನೇತಾಜಿ ಬೋಸ್ ಅವರ ಅದಮ್ಯ ಧೈರ್ಯ ಮತ್ತು ನಿರಂತರ ಸ್ಫೂರ್ತಿಯನ್ನು ಸ್ಮರಿಸಿದ ಪ್ರಧಾನಮಂತ್ರಿ

ನೇತಾಜಿ ಅವರೊಂದಿಗೆ ನಂಟು ಹೊಂದಿರುವ ಹರಿಪುರದಿಂದ ʻಇ-ಗ್ರಾಮ ವಿಶ್ವಗ್ರಾಮʼ ಯೋಜನೆ ಪ್ರಾರಂಭಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ

ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಪರಂಪರೆಯನ್ನು ಜನಪ್ರಿಯಗೊಳಿಸುವ ಮತ್ತು ಅವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸುವ ಪ್ರಯತ್ನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ

ನೇತಾಜಿ ಬೋಸ್ ಅವರ ಜನ್ಮದಿನವನ್ನು ʻಪರಾಕ್ರಮ್ ದಿವಸ್ʼ ಎಂದು ಘೋಷಿಸಿದ್ದನ್ನು ಮತ್ತು ನೇತಾಜಿ ಭವನಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ

प्रविष्टि तिथि: 23 JAN 2026 8:18AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ನೇತಾಜಿ ಅವರ ಅದಮ್ಯ ಧೈರ್ಯ, ಅಚಲ ಸಂಕಲ್ಪ ಮತ್ತು ರಾಷ್ಟ್ರಕ್ಕೆ ಅವರು ನೀಡಿದ ಸಾಟಿಯಿಲ್ಲದ ಕೊಡುಗೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ನೇತಾಜಿ ಅವರ ನಿರ್ಭೀತ ನಾಯಕತ್ವ ಮತ್ತು ಆಳವಾದ ದೇಶಭಕ್ತಿಯು ಬಲಿಷ್ಠ ಭಾರತವನ್ನು ನಿರ್ಮಿಸಲು ಮುಂದಿನ ತಲೆಮಾರುಗಳಿಗೂ ಸ್ಫೂರ್ತಿ ನೀಡುತ್ತಿದೆ ಎಂದು ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸದಾ ತಮಗೆ ಅಗಾಧ ಪ್ರೇರಣೆ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. 2009ರ ಜನವರಿ 23ರಂದು ಗುಜರಾತ್‌ನ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಕ್ರಾಂತಿಕಾರಿ ಯೋಜನೆಯಾದ ʻಇ-ಗ್ರಾಮ್ ವಿಶ್ವಗ್ರಾಮʼ ಯೋಜನೆಯನ್ನು ಪ್ರಾರಂಭಿಸಿದ್ದನ್ನು ಅವರು ಸ್ಮರಿಸಿದರು. ನೇತಾಜಿ ಬೋಸ್ ಅವರ ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಹರಿಪುರದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಮೋದಿ ಹೇಳಿದರು. ಹರಿಪುರದ ಜನರು ನೀಡಿದ ಆತ್ಮೀಯ ಸ್ವಾಗತ ಮತ್ತು ಒಮ್ಮೆ ನೇತಾಜಿ ಬೋಸ್ ಅವರು ಪ್ರಯಾಣಿಸಿದ ಅದೇ ರಸ್ತೆಯಲ್ಲಿ ಮೆರವಣಿಗೆಯನ್ನು ಆಯೋಜಿಸಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದರು.

2012ರಲ್ಲಿ ಅಹ್ಮದಾಬಾದ್‌ನಲ್ಲಿ ʻಆಜಾದ್ ಹಿಂದ್ ಫೌಜ್ʼ ದಿನದ ಅಂಗವಾಗಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದರು. ಈ ಕಾರ್ಯಕ್ರಮದಲ್ಲಿ ನೇತಾಜಿ ಬೋಸ್ ಅವರಿಂದ ಪ್ರೇರಿತರಾದ ಲೋಕಸಭಾ ಸ್ಪೀಕರ್ ಶ್ರೀ ಪಿ.ಎ. ಸಂಗ್ಮಾ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು ಎಂದು ಅವರು ಉಲ್ಲೇಖಿಸಿದರು.

ಇತಿಹಾಸದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ದಶಕಗಳ ಕಾಲ ದೇಶವನ್ನು ಆಳಿದ ಹಿಂದಿನ ಸರ್ಕಾರಗಳ ಕಾರ್ಯಸೂಚಿಗೆ ನೇತಾಜಿ ಬೋಸ್ ಅವರ ಅದ್ಭುತ ಕೊಡುಗೆಯನ್ನು ಸ್ಮರಿಸುವುದು ಹೊಂದಿಕೆಯಾಗಲಿಲ್ಲ. ಹಾಗಾಗಿ ಅವರನ್ನು ಮರೆಯಲು ಪ್ರಯತ್ನಿಸಲಾಯಿತು ಎಂದು ಹೇಳಿದರು. ಪ್ರಸ್ತುತ ಸರ್ಕಾರದ ನಂಬಿಕೆ ವಿಭಿನ್ನವಾಗಿದೆ ಮತ್ತು ಸಾಧ್ಯವಿರುವ ಪ್ರತಿಯೊಂದು ಹಂತದಲ್ಲೂ ನೇತಾಜಿ ಬೋಸ್ ಅವರ ಜೀವನ ಮತ್ತು ಆದರ್ಶಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಡತಗಳು ಮತ್ತು ದಾಖಲೆಗಳ ಬಹಿರಂಗಪಡಿಸುವಿಕೆಯು ಈ ನಿಟ್ಟಿನಲ್ಲಿ ಒಂದು ಹೆಗ್ಗುರುತಿನ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

2018 ಎರಡು ಕಾರಣಗಳಿಗಾಗಿ ಹೆಗ್ಗುರುತಿನ ವರ್ಷವಾಗಿತ್ತು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ʻಆಜಾದ್ ಹಿಂದ್ ಸರ್ಕಾರʼದ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು ಕೆಂಪು ಕೋಟೆಯಲ್ಲಿ ಆಚರಿಸಲಾಯಿತು, ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಅವಕಾಶ ತಮಗೆ ಸಿಕ್ಕಿತು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ʻಐಎನ್ಎʼ ಹಿರಿಯ ನಾಯಕ ಲಲ್ತಿ ರಾಮ್ ಜಿ ಅವರೊಂದಿಗಿನ ಸಂವಾದವನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀವಿಜಯಪುರಂನಲ್ಲಿ (ಆಗಿನ ಪೋರ್ಟ್ ಬ್ಲೇರ್) ಸುಭಾಷ್ ಚಂದ್ರಬೋಸ್‌ ಅವರಿಂದ ರಾಷ್ಟ್ರಧ್ವಜಾರೋಹಣದ 75ನೇ ವಾರ್ಷಿಕೋತ್ಸವದ ಅಂಗವಾಗಿ ತಾವು ತ್ರಿವರ್ಣ ಧ್ವಜವನ್ನು ಹಾರಿಸಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾದ ರಾಸ್ ದ್ವೀಪ ಸೇರಿದಂತೆ ಮೂರು ಪ್ರಮುಖ ದ್ವೀಪಗಳ ಮರುನಾಮಕರಣದ ಬಗ್ಗೆ ಪ್ರಧಾನಮಂತ್ರಿ ಗಮನ ಸೆಳೆದರು.

ಕೆಂಪು ಕೋಟೆಯ ʻಕ್ರಾಂತಿ ಮಂದಿರʼ ವಸ್ತುಸಂಗ್ರಹಾಲಯವು ನೇತಾಜಿ ಅವರು ಧರಿಸಿದ್ದ ಟೋಪಿ ಸೇರಿದಂತೆ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆಗೆ ಸಂಬಂಧಿಸಿದ ಗಣನೀಯ ಐತಿಹಾಸಿಕ ವಸ್ತುಗಳನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ನೇತಾಜಿ ಬೋಸ್ ಅವರ ಐತಿಹಾಸಿಕ ಕೊಡುಗೆಯ ಜ್ಞಾನವನ್ನು ಸಂರಕ್ಷಿಸುವ ಮತ್ತು ಆಳಗೊಳಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಶ್ರೀ ಮೋದಿ ಹೇಳಿದರು.

ನೇತಾಜಿ ಬೋಸ್ ಅವರ ಗೌರವಾರ್ಥ ಅವರ ಜನ್ಮದಿನವನ್ನು ʻಪರಾಕ್ರಮ್ ದಿವಸ್ʼ ಎಂದು ಘೋಷಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕುವ ಸಂಕಲ್ಪ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೇಲಿನ ಗೌರವದ ಉಜ್ವಲ ಉದಾಹರಣೆಯನ್ನು ಎತ್ತಿ ತೋರಿದ ಪ್ರಧಾನಮಂತ್ರಿಯವರು, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ʻಇಂಡಿಯಾ ಗೇಟ್ʼ ಪಕ್ಕದಲ್ಲಿ ನೇತಾಜಿ ಬೋಸ್ ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರವನ್ನು ಸ್ಮರಿಸಿದರು. ಈ ಪ್ರತಿಮೆ ಮುಂದಿನ ಪೀಳಿಗೆಯ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು.

ಸರಣಿ ʻಎಕ್ಸ್‌ʼ ಪೋಸ್ಟ್‌ಗಳಲ್ಲಿ, ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

"ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಸ್ಮರಿಸಲಾಗುತ್ತದೆ. ಅವರ ಅದಮ್ಯ ಧೈರ್ಯ, ಸಂಕಲ್ಪ ಮತ್ತು ರಾಷ್ಟ್ರಕ್ಕೆ ಸಾಟಿಯಿಲ್ಲದ ಕೊಡುಗೆಯನ್ನು ನಾವು ಸ್ಮರಿಸುತ್ತೇವೆ. ಅವರು ನಿರ್ಭೀತ ನಾಯಕತ್ವ ಮತ್ತು ಅಚಲ ದೇಶಭಕ್ತಿಯ ಮೂರ್ತರೂಪವಾಗಿದ್ದರು. ಅವರ ಆದರ್ಶಗಳು ಬಲಿಷ್ಠ ಭಾರತವನ್ನು ನಿರ್ಮಿಸಲು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ."

"ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸದಾ ನನಗೆ ನನಗೆ ಅಗಾಧ ಸ್ಫೂರ್ತಿ ನೀಡಿದ್ದಾರೆ. ಜನವರಿ 23, 2009 ರಂದು, ʻಇ-ಗ್ರಾಮ ವಿಶ್ವಗ್ರಾಮʼ ಯೋಜನೆಯನ್ನು ಪ್ರಾರಂಭಿಸಲಾಯಿತು. ಗುಜರಾತ್‌ನ ಐಟಿ ವಲಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಕ್ರಾಂತಿಕಾರಿ ಯೋಜನೆ ಇದಾಗಿದೆ. ನೇತಾಜಿ ಬೋಸ್ ಅವರ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದ ಹರಿಪುರದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಹರಿಪುರದ ಜನರು ನನ್ನನ್ನು ಸ್ವಾಗತಿಸಿದ ರೀತಿ ಮತ್ತು ನೇತಾಜಿ ಬೋಸ್ ಅವರು ಪ್ರಯಾಣಿಸಿದ ಅದೇ ರಸ್ತೆಯಲ್ಲಿ ಮೆರವಣಿಗೆಯನ್ನು ಆಯೋಜಿಸಿದ ರೀತಿಯನ್ನು ನಾನು ಎಂದಿಗೂ ಮರೆಯಲಾಗದು".

"2012 ರಲ್ಲಿ, ಆಜಾದ್ ಹಿಂದ್ ಫೌಜ್ ದಿನದ ಅಂಗವಾಗಿ ಅಹಮದಾಬಾದ್‌ನಲ್ಲಿ ಬೃಹತ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೇತಾಜಿ ಬೋಸ್ ಅವರಿಂದ ಪ್ರೇರಿತರಾದ ಲೋಕಸಭಾ ಸ್ಪೀಕರ್ ಶ್ರೀ ಪಿ.ಎ.ಸಂಗ್ಮಾ ಸೇರಿದಂತೆ ಹಲವು ಪ್ರಮುಖರು ಇದರಲ್ಲಿ ಭಾಗವಹಿಸಿದ್ದರು."

"ನೇತಾಜಿ ಬೋಸ್ ಅವರ ಅದ್ಭುತ ಕೊಡುಗೆಯನ್ನು ನೆನಪಿಸಿಕೊಳ್ಳುವುದು ದಶಕಗಳ ಕಾಲ ದೇಶವನ್ನು ಆಳಿದವರ ಕಾರ್ಯಸೂಚಿಗೆ ಒಗ್ಗಲಿಲ್ಲ. ಆದ್ದರಿಂದ, ಅವರನ್ನು ಮರೆಯಲು ಪ್ರಯತ್ನಿಸಲಾಯಿತು. ಆದರೆ ನಮ್ಮ ನಂಬಿಕೆ ಬೇರೆ. ಸಾಧ್ಯವಿರುವ ಪ್ರತಿಯೊಂದು ಹಂತದಲ್ಲೂ, ನಾವು ಅವರ ಜೀವನ ಮತ್ತು ಆದರ್ಶಗಳನ್ನು ಜನಪ್ರಿಯಗೊಳಿಸಿದ್ದೇವೆ. ಅವರಿಗೆ ಸಂಬಂಧಿಸಿದ ಕಡತಗಳು ಮತ್ತು ದಾಖಲೆಗಳನ್ನು ಬಹಿರಂಗಪಡಿಸುವುದು ಒಂದು ಹೆಗ್ಗುರುತಿನ ಹೆಜ್ಜೆಯಾಗಿದೆ”

"2018 ಎರಡು ಕಾರಣಗಳಿಗಾಗಿ ಹೆಗ್ಗುರುತಿನ ವರ್ಷವಾಗಿತ್ತು:

ಕೆಂಪುಕೋಟೆಯಲ್ಲಿ ನಾವು ಆಜಾದ್ ಹಿಂದ್ ಸರಕಾರ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು ಆಚರಿಸಿದೆವು. ತ್ರಿವರ್ಣ ಧ್ವಜವನ್ನು ಹಾರಿಸುವ ಅವಕಾಶವೂ ನನಗೆ ಸಿಕ್ಕಿತು. ಐಎನ್ಎ ಹಿರಿಯ ನಾಯಕ ಲಲ್ತಿ ರಾಮ್ ಜೀ ಅವರೊಂದಿಗಿನ ನನ್ನ ಸಂವಾದವೂ ಅಷ್ಟೇ ಸ್ಮರಣೀಯವಾಗಿತ್ತು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀವಿಜಯಪುರಂನಲ್ಲಿ (ಆಗಿನ ಪೋರ್ಟ್ ಬ್ಲೇರ್) ಸುಭಾಷ್ ಬಾಬು ತ್ರಿವರ್ಣ ಧ್ವಜವನ್ನು ಹಾರಿಸಿದ 75ನೇ ವಾರ್ಷಿಕೋತ್ಸವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪವಾಗಿ ಮರುನಾಮಕರಣ ಮಾಡಲಾದ ರಾಸ್ ದ್ವೀಪ ಸೇರಿದಂತೆ ಮೂರು ಪ್ರಮುಖ ದ್ವೀಪಗಳನ್ನು ಮರುನಾಮಕರಣ ಮಾಡಲಾಯಿತು.

"ಕೆಂಪು ಕೋಟೆಯಲ್ಲಿ, ʻಕ್ರಾಂತಿ ಮಂದಿರʼ ವಸ್ತುಸಂಗ್ರಹಾಲಯದಲ್ಲಿ ನೇತಾಜಿ ಬೋಸ್ ಧರಿಸಿದ್ದ ಟೋಪಿ ಸೇರಿದಂತೆ ನೇತಾಜಿ ಬೋಸ್ ಮತ್ತು ಐಎನ್ಎಗೆ ಸಂಬಂಧಿಸಿದ ಸಾಕಷ್ಟು ಐತಿಹಾಸಿಕ ವಸ್ತುಗಳನ್ನು ಇರಿಸಲಾಗಿದೆ. ಇದು ಅವರ ಐತಿಹಾಸಿಕ ಕೊಡುಗೆಯ ಜ್ಞಾನವನ್ನು ಸಂರಕ್ಷಿಸುವ ಮತ್ತು ಆಳಗೊಳಿಸುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ.".

"ನೇತಾಜಿ ಬೋಸ್ ಅವರ ಗೌರವಾರ್ಥ, ಅವರ ಜನ್ಮದಿನವನ್ನು ʻಪರಾಕ್ರಮ್ ದಿವಸ್ʼ ಎಂದು ಘೋಷಿಸಲಾಗಿದೆ. 2021ರಲ್ಲಿ, ನಾನು ಕೋಲ್ಕತ್ತಾದ ನೇತಾಜಿ ಭವನಕ್ಕೆ ಭೇಟಿ ನೀಡಿದ್ದೆ, ನೇತಾಜಿ ಅವರ ಮಹಾ ಪಾರು ಪ್ರಾರಂಭವಾದದ್ದು ಅಲ್ಲಿಂದಲೇ!"

"ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕುವ ನಮ್ಮ ಪ್ರಯತ್ನಗಳು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ನಮ್ಮ ಗೌರವಕ್ಕೆ ಒಂದು ಜ್ವಲಂತ ಉದಾಹರಣೆಯನ್ನು ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್ ಪಕ್ಕದಲ್ಲಿ ನೇತಾಜಿ ಅವರ ಭವ್ಯ ಪ್ರತಿಮೆ ಸ್ಥಾಪಿಸುವ ನಮ್ಮ ನಿರ್ಧಾರದಲ್ಲಿ ಕಾಣಬಹುದು! ಈ ಭವ್ಯ ಪ್ರತಿಮೆಯು ಮುಂದಿನ ಪೀಳಿಗೆಗೆ ಜನರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ!"

 

*****


(रिलीज़ आईडी: 2217595) आगंतुक पटल : 4
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Bengali , Assamese , Gujarati , Tamil