ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜ್ಯಸಭಾ ಅಧ್ಯಕ್ಷರಾದ ಶ್ರೀ ಸಿ ಪಿ ರಾಧಾಕೃಷ್ಣನ್ ಅವರ ಸನ್ಮಾನ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅವತರಣಿಕೆ

प्रविष्टि तिथि: 01 DEC 2025 1:13PM by PIB Bengaluru

ಮಾನ್ಯ ಅಧ್ಯಕ್ಷರೇ,

(ಸಂಸತ್ತಿನ) ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ, ಮತ್ತು ಇಂದು ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಹೆಮ್ಮೆಯ ಕ್ಷಣವಾಗಿದೆ. ನಿಮ್ಮನ್ನು ಸ್ವಾಗತಿಸುತ್ತಾ, ನಿಮ್ಮ ಮಾರ್ಗದರ್ಶನದಲ್ಲಿ ಸದನದ ಮೂಲಕ ಪ್ರಮುಖ ವಿಷಯಗಳನ್ನು ಚರ್ಚಿಸಲು, ರಾಷ್ಟ್ರವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಅಮೂಲ್ಯ ಮಾರ್ಗದರ್ಶನವನ್ನು ಪಡೆಯಲು ನಮಗೆಲ್ಲರಿಗೂ ಇದು ಒಂದು ಉತ್ತಮ ಅವಕಾಶವಾಗಿದೆ. ಸದನದ ಪರವಾಗಿ ಮತ್ತು ನನ್ನ ಪರವಾಗಿ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ನನ್ನ ಶುಭ ಹಾರೈಕೆಗಳನ್ನು ಅರ್ಪಿಸುತ್ತೇನೆ. ಈ ಸದನದಲ್ಲಿರುವ ಎಲ್ಲಾ ಗೌರವಾನ್ವಿತ ಸದಸ್ಯರು ಮೇಲ್ಮನೆಯ ಘನತೆಯನ್ನು ಸದಾ ಎತ್ತಿಹಿಡಿಯುತ್ತಾರೆ, ನಿಮ್ಮ ಘನತೆಯನ್ನು ಸದಾ ಗೌರವಿಸುತ್ತಾರೆ ಮತ್ತು ಎತ್ತಿಹಿಡಿಯುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ನಿಮಗೆ ನನ್ನ ಭರವಸೆ.

ನಮ್ಮ ಸಭಾಧ್ಯಕ್ಷರು ಸಾಮಾನ್ಯ ಕುಟುಂಬದಿಂದ ಬಂದವರು, ರೈತ ಕುಟುಂಬದಿಂದ ಬಂದವರು. ಅವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಸಮಾಜ ಸೇವೆಯೇ ಅವರ ನಿರಂತರ ಮಾರ್ಗ. ರಾಜಕೀಯವು ಅದರ ಒಂದು ಅಂಶವಾಗಿದೆ, ಆದರೆ ಅವರ ಜೀವನದ ಮುಖ್ಯವಾಹಿನಿ ಸದಾ ಸಮಾಜ ಸೇವೆಯಾಗಿದೆ. ಅವರ ಯೌವನದಿಂದ ಇಲ್ಲಿಯವರೆಗೆ, ಅವರು ಸಮಾಜದ ಕಡೆಗೆ ಸಂಪೂರ್ಣ ಸಮರ್ಪಣಾಭಾವದಿಂದ ಕೆಲಸ ಮಾಡಿದ್ದಾರೆ. ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ನಮಗೆಲ್ಲರಿಗೂ, ಅವರು ಸ್ಫೂರ್ತಿ ಮತ್ತು ಮಾರ್ಗದರ್ಶಕ ಬೆಳಕು. ಸಾಮಾನ್ಯ ಕುಟುಂಬದಿಂದ ಬಂದವರು, ಸಾಮಾನ್ಯ ಸಮಾಜ, ಬದಲಾಗುತ್ತಿರುವ ರಾಜಕೀಯ ಭೂದೃಶ್ಯವನ್ನು ನಿಭಾವಣೆ ಮಾಡುವುದು, ಮತ್ತು   ಸ್ಥಾನವನ್ನು ತಲುಪುವುದು ಹಾಗು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುವುದು ಭಾರತದ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ. ನಾನು ನಿಮ್ಮನ್ನು ಬಹಳ ಸಮಯದಿಂದ ತಿಳಿದಿದ್ದೇನೆ ಮತ್ತು ಸಾರ್ವಜನಿಕ ಜೀವನದಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಇಲ್ಲಿ ಪ್ರಧಾನ ಮಂತ್ರಿಯಾಗಿ ಜವಾಬ್ದಾರಿಗಳನ್ನು ಪಡೆದಾಗ ಮತ್ತು ವಿವಿಧ ಪಾತ್ರಗಳಲ್ಲಿ ನಿಮ್ಮ ಕೆಲಸವನ್ನು ವೀಕ್ಷಿಸಿದಾಗ, ಅದರ ಬಗ್ಗೆ ನನಗೆ ಆಳವಾದ ಸಕಾರಾತ್ಮಕ ಭಾವನೆ ಮೂಡುವುದು ಸಹಜ.

ನಾರು (ಕಾಯರ್)  ಮಂಡಳಿಯ ಅಧ್ಯಕ್ಷರಾಗಿ, ನೀವು ಸಂಸ್ಥೆಯನ್ನು ಐತಿಹಾಸಿಕವಾಗಿ ಅತಿ ಹೆಚ್ಚು ಲಾಭ ಗಳಿಸುವ ಸಂಸ್ಥೆಯಾಗಿ ಪರಿವರ್ತಿಸಿದ್ದೀರಿ. ಒಬ್ಬ ವ್ಯಕ್ತಿಯು ಒಂದು ಸಂಸ್ಥೆಗೆ ಸಮರ್ಪಿತನಾದಾಗ ಎಷ್ಟು ಅಭಿವೃದ್ಧಿ ಸಾಧ್ಯ ಮತ್ತು ಜಾಗತಿಕವಾಗಿ ಅದರ ಗುರುತನ್ನು ಹೇಗೆ ಉನ್ನತೀಕರಿಸಬಹುದು ಎಂಬುದನ್ನು ನೀವು ತೋರಿಸಿದ್ದೀರಿ. ಭಾರತದಲ್ಲಿ ಅನೇಕ ಪ್ರದೇಶಗಳಲ್ಲಿ/ವಲಯಗಳಲ್ಲಿ ಬಹಳ ಕಡಿಮೆ ಜನರಿಗೆ ಅಂತಹ ಅವಕಾಶಗಳು ಸಿಗುತ್ತವೆ. ನೀವು ಜಾರ್ಖಂಡ್, ಮಹಾರಾಷ್ಟ್ರ, ತೆಲಂಗಾಣ ಮತ್ತು ಪುದುಚೇರಿಯಲ್ಲಿ ಗವರ್ನರ್ ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಿ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದೀರಿ. ವಿಶೇಷವಾಗಿ ಜಾರ್ಖಂಡ್‌ನಲ್ಲಿ, ನೀವು ಬುಡಕಟ್ಟು ಸಮುದಾಯಗಳೊಂದಿಗೆ ಆಳವಾದ ಸಂಪರ್ಕವನ್ನು ಹೇಗೆ ನಿರ್ಮಿಸಿದ್ದೀರಿ ಎಂಬುದನ್ನು ನಾನು ನೋಡಿದ್ದೇನೆ. ನೀವು ಚಿಕ್ಕ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದಿರಿ. ನಾವು ಭೇಟಿಯಾದಾಗಲೆಲ್ಲಾ ಅಲ್ಲಿನ ಮುಖ್ಯಮಂತ್ರಿ ಇದನ್ನು ಹೆಮ್ಮೆಯಿಂದ ಉಲ್ಲೇಖಿಸುತ್ತಿದ್ದರು. ಮತ್ತು ಕೆಲವೊಮ್ಮೆ, ಹೆಲಿಕಾಪ್ಟರ್ ಲಭ್ಯವಿದೆಯೇ ಅಥವಾ ಇಲ್ಲವೇ ಎಂದು ಚಿಂತಿಸದೆ ನೀವು ಪ್ರಯಾಣಿಸುತ್ತಿದ್ದುದರಿಂದ ಅಲ್ಲಿನ ರಾಜಕಾರಣಿಗಳು ಕಳವಳಗೊಂಡಿದ್ದರು.  ನೀವು ಅಲ್ಲಿದ್ದ ಯಾವುದಾದರು ವಾಹನವನ್ನು ತೆಗೆದುಕೊಂಡು ನಿರಂತರವಾಗಿ ಪ್ರಯಾಣಿಸುತ್ತಿದ್ದಿರಿ. ಮತ್ತು ಸಣ್ಣ ಸ್ಥಳಗಳಲ್ಲಿ ರಾತ್ರಿಯಿಡೀ ತಂಗುತ್ತಿದ್ದಿರಿ. ಇದು ಸೇವೆಯ ಸ್ಪೂರ್ತಿ ಮತ್ತು ಉತ್ಸಾಹ. ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದಾಗಲೂ ನೀವು ಎತ್ತಿಹಿಡಿದ ಸೇವಾ ಮನೋಭಾವ ಮತ್ತು ಪಾತ್ರಕ್ಕೆ/ಸ್ಥಾನಕ್ಕೆ  ನೀವು ನೀಡಿದ ಹೊಸ ಎತ್ತರಗಳು ನಮಗೆಲ್ಲರಿಗೂ ತಿಳಿದಿವೆ.

ನಿಮ್ಮನ್ನು ಒಬ್ಬ ಕಾರ್ಯಕರ್ತನಾಗಿ, ನಾನು ಜೊತೆಗೆ ಕೆಲಸ ಮಾಡಿದ ಸಹೋದ್ಯೋಗಿಯಾಗಿ ನೋಡಿದ್ದೇನೆ. ನೀವು ಹುದ್ದೆಯನ್ನು ತಲುಪುವ ಮೊದಲು ನಾನು ನಿಮ್ಮನ್ನು ಸಂಸತ್ ಸದಸ್ಯರಾಗಿ ಮತ್ತು ಇತರ ವಿವಿಧ ಹುದ್ದೆಗಳಲ್ಲಿ ನೋಡಿದ್ದೇನೆ. ಆದರೆ ನಾನು ಸದಾ ಅನುಭವಿಸಿದ ಒಂದು ವಿಷಯವೆಂದರೆ, ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿ, ಜನರು ಉನ್ನತ ಹುದ್ದೆಯನ್ನು ತಲುಪಿದಾಗ, ಅವರು ಕೆಲವೊಮ್ಮೆ ಸ್ಥಾನದ ಭಾರವನ್ನು/ಹೆಮ್ಮೆಯನ್ನು ಅನುಭವಿಸುತ್ತಾರೆ ಅಥವಾ ಶಿಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆದರೆ ನಿಮಗೆ ಶಿಷ್ಟಾಚಾರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಾನು ನೋಡಿದ್ದೇನೆ. ನೀವು ಸದಾ ಶಿಷ್ಟಾಚಾರವನ್ನು ಮೀರಿ ಬದುಕಿದ್ದೀರಿ. ಮತ್ತು ಸಾರ್ವಜನಿಕ ಜೀವನದಲ್ಲಿ, ಶಿಷ್ಟಾಚಾರವನ್ನು ಮೀರಿ ಬದುಕುವುದರಲ್ಲಿ ಒಂದು ವಿಶಿಷ್ಟ ಶಕ್ತಿ ಇದೆ ಎಂದು ನಾನು ನಂಬುತ್ತೇನೆ ಮತ್ತು ನಾವು ಸದಾ ನಿಮ್ಮಲ್ಲಿ ಶಕ್ತಿಯನ್ನು ಅನುಭವಿಸಿದ್ದೇವೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.

ಗೌರವಾನ್ವಿತ ಶ್ರೀ ಅಧ್ಯಕ್ಷರಾದ ಮಹೋದಯರೇ,

ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವ ಸೇವೆ, ಸಮರ್ಪಣೆ ಮತ್ತು ಸಂಯಮದ ಗುಣಗಳ ಬಗ್ಗೆ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ನೀವು ತನ್ನದೇ ಆದ ಗುರುತಿಸುವಿಕೆಯನ್ನು ಹೊಂದಿರುವ "ಡಾಲರ್ ಸಿಟಿ"ಯಲ್ಲಿ ಜನಿಸಿದರೂ, ನೀವು ಈಗಲೂ ನಿಮ್ಮ ಜೀವನವನ್ನು ಅಂತ್ಯೋದಯಕ್ಕೆ ಅರ್ಪಿಸಲು ಆಯ್ಕೆ ಮಾಡಿಕೊಂಡಿದ್ದೀರಿ. ಡಾಲರ್ ಸಿಟಿಯಲ್ಲಿಯೂ ಸಹ, ನೀವು ನಿರಂತರ ತುಳಿತಕ್ಕೊಳಗಾದ, ವಂಚಿತ ಮತ್ತು ಹೆಣಗಾಡುತ್ತಿರುವ ಕುಟುಂಬಗಳ ಬಗ್ಗೆ ಕಾಳಜಿ ವಹಿಸಿದ್ದೀರಿ.

ಗೌರವಾನ್ವಿತ ಮಾನ್ಯ ಅಧ್ಯಕ್ಷರೇ,

ನಿಮ್ಮಿಂದ ಮತ್ತು ನಿಮ್ಮ ಕುಟುಂಬ ಸದಸ್ಯರಿಂದ ನಾನು ಒಮ್ಮೆ ಕೇಳಿದ್ದ ಮತ್ತು ನಿಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರಿದ ಎರಡು ಘಟನೆಗಳನ್ನು ನಾನು ಉಲ್ಲೇಖಿಸಲೇಬೇಕು. ಮೊದಲನೆಯದು ನಿಮ್ಮ ಬಾಲ್ಯದಲ್ಲಿ, ನೀವು ಅವಿನಾಶಿ ದೇವಾಲಯದ ಕೊಳದಲ್ಲಿ ಮುಳುಗುವ ಹಂತದಲ್ಲಿದ್ದಾಗ. ನಿಮಗೆ, ತಾನು ಮುಳುಗುತ್ತಿದ್ದೇನೆ ಎಂಬುದು ನಿಗೂಢವಾಗಿಯೇ ಉಳಿಯಿತು; ತನ್ನನ್ನು ಯಾರು ಉಳಿಸಿದರು, ನಾನು ಹೇಗೆ ರಕ್ಷಿಸಲ್ಪಟ್ಟೆ? ನನಗೆ ಗೊತ್ತಿಲ್ಲ, ಆದರೆ ನಾನು ಬದುಕುಳಿದೆ. ನಿಮ್ಮ ಕುಟುಂಬವು ಸದಾ ನಿಮ್ಮ ಮೇಲಿನ ದೈವಿಕ ಅನುಗ್ರಹದ ಭಾವನೆಯಿಂದ ಇದನ್ನು ನೆನಪಿಸಿಕೊಳ್ಳುತ್ತದೆ. ಎರಡನೆಯ ಘಟನೆ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿರುವ ವಿಷಯ. ಲಾಲ್ ಕೃಷ್ಣ ಅಡ್ವಾಣಿ ಜೀ ಅವರ ಯಾತ್ರೆ ಕೊಯಮತ್ತೂರಿನಲ್ಲಿ ನಡೆಯುವುದಕ್ಕೆ ಸ್ವಲ್ಪ ಮೊದಲು, ಒಂದು ಭಯಾನಕ ಬಾಂಬ್ ಸ್ಫೋಟ ಸಂಭವಿಸಿದೆ. ಸುಮಾರು 60-70 ಜನರು ಕೊಲ್ಲಲ್ಪಟ್ಟರು. ಅದು ವಿನಾಶಕಾರಿ ಬಾಂಬ್ ಸ್ಫೋಟವಾಗಿತ್ತು. ಮತ್ತು ಸಮಯದಲ್ಲಿ, ನೀವು ಕೂದಲೆಳೆ ಅಂತರದಲ್ಲಿ ಪಾರಾದಿರಿ. ನೀವು ಎರಡೂ ಘಟನೆಗಳನ್ನು ದೈವಿಕ ಹಸ್ತಕ್ಷೇಪದ ಚಿಹ್ನೆಗಳು ಎಂದು ಅರ್ಥೈಸಿದಾಗ ಮತ್ತು ಸಮಾಜದ ಸೇವೆಗೆ ನಿಮ್ಮನ್ನು ಇನ್ನಷ್ಟು ಸಂಪೂರ್ಣವಾಗಿ ಅರ್ಪಿಸಿಕೊಳ್ಳಲು ನಿರ್ಧರಿಸಿದಾಗ, ಅದು ಆಳವಾದ ಸಕಾರಾತ್ಮಕ ಚಿಂತನೆಯಿಂದ ರೂಪುಗೊಂಡ ಜೀವನದ ಪ್ರತಿಬಿಂಬವಾಯಿತು.

ಗೌರವಾನ್ವಿತ ಮಾನ್ಯ ಅಧ್ಯಕ್ಷರೇ,

ನನಗೆ ಮೊದಲು ತಿಳಿದಿರದ ಒಂದು ವಿಷಯವಿದೆ, ಆದರೆ ಇತ್ತೀಚೆಗೆ ನನಗೆ ತಿಳಿಯಿತು. ಬಹುಶಃ ನೀವು ಉಪ ರಾಷ್ಟ್ರಪತಿಯಾದ ನಂತರ, ನೀವು ಕಾಶಿಗೆ ಹೋದಾಗ, ನಾನು ಸಂಸತ್ ಸದಸ್ಯನಾಗಿ ಕಾಶಿಯನ್ನು ಪ್ರತಿನಿಧಿಸುವುದರಿಂದ ಅಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ ಎಂದು ನನಗೆ ಸ್ವಾಭಾವಿಕವಾಗಿ ಅನಿಸಿತು. ಆದರೆ ನೀವು ಅಲ್ಲಿ ನನಗೆ ಹೊಸದನ್ನು ಪ್ರಸ್ತಾಪಿಸಿದ್ದೀರಿ. ನೀವು ಮೊದಲು ನಿಯಮಿತವಾಗಿ ಮಾಂಸಾಹಾರ ಸೇವಿಸುತ್ತಿದ್ದಿರಿ, ಆದರೆ ನೀವು ನಿಮ್ಮ ಜೀವನದಲ್ಲಿ ಮೊದಲ ಬಾರಿಗೆ ಕಾಶಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ಮಾ ಗಂಗೆಯ ಆಶೀರ್ವಾದ ಪಡೆದಾಗ, ನಿಮ್ಮೊಳಗೆ ಏನೋ ಬದಲಾವಣೆಯಾಗಿದೆ ಎಂದು ನೀವು ಹೇಳಿದ್ದೀರಿ. ಆ ದಿನದಿಂದಲೇ, ನೀವು ಇನ್ನು ಮುಂದೆ ಮಾಂಸಾಹಾರ ಸೇವಿಸುವುದಿಲ್ಲ ಎಂದು ನಿರ್ಧರಿಸಿದ್ದೀರಿ. ಈಗ, ಮಾಂಸಾಹಾರ ತಿನ್ನುವುದು ಕೆಟ್ಟದು ಅಥವಾ ಅದನ್ನು ತಿನ್ನುವವರು ತಪ್ಪು ಮಾಡುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಕಾಶಿಯ ಪವಿತ್ರ ಮಣ್ಣಿನಲ್ಲಿ ನಿಮ್ಮ ಮನಸ್ಸಿನಲ್ಲಿ ಹುಟ್ಟಿದ ಆಲೋಚನೆಯು ಕಾಶಿಯ ಸಂಸತ್ ಸದಸ್ಯನಾಗಿ ನಾನು ಸಹ ಸದಾ ನೆನಪಿಸಿಕೊಳ್ಳುತ್ತೇನೆ. ಈ ದಿಕ್ಕಿನಲ್ಲಿ ಕೆಲವು ಆಂತರಿಕ ಆಧ್ಯಾತ್ಮಿಕ ಭಾವನೆಯು ನಿಮ್ಮನ್ನು ಪ್ರೇರೇಪಿಸಿತು ಎಂಬುದು ನಿಜಕ್ಕೂ ಗಮನಾರ್ಹವಾಗಿದೆ.

ಗೌರವಾನ್ವಿತ ಮಾನ್ಯ ಅಧ್ಯಕ್ಷರೇ,

ನಿಮ್ಮ ವಿದ್ಯಾರ್ಥಿ ದಿನಗಳಿಂದಲೂ ನೀವು ಬಲಿಷ್ಠವಾದ  ನಾಯಕತ್ವದ ಸಾಮರ್ಥ್ಯವನ್ನು ಹೊಂದಿದ್ದೀರಿ. ಇಂದು, ರಾಷ್ಟ್ರೀಯ ನಾಯಕತ್ವದ ಹಾದಿಯಲ್ಲಿ ನಮಗೆ ಮಾರ್ಗದರ್ಶನ ನೀಡಲು ನೀವು ಇಲ್ಲಿ ಕುಳಿತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ಗೌರವಾನ್ವಿತ ಮಾನ್ಯ ಅಧ್ಯಕ್ಷರೇ,

ಪ್ರಜಾಪ್ರಭುತ್ವದ ರಕ್ಷಕರಾಗಿ, ಹೆಚ್ಚಿನ ಯುವಜನರು ಸುಲಭ ಮಾರ್ಗವನ್ನು ಹುಡುಕುವ ವಯಸ್ಸಿನಲ್ಲಿ, ನೀವು ಸರಳ ಮಾರ್ಗವನ್ನು ಆರಿಸಿಕೊಳ್ಳಲಿಲ್ಲ. ನೀವು ಹೋರಾಟದ ಮಾರ್ಗವನ್ನು ಆರಿಸಿಕೊಂಡಿದ್ದೀರಿ. ಪ್ರಜಾಪ್ರಭುತ್ವದ ಎದುರು ಉದ್ಭವಿಸಿದ ಬಿಕ್ಕಟ್ಟನ್ನು ಎದುರಿಸಲು ನೀವು ಆಯ್ಕೆ ಮಾಡಿಕೊಂಡಿದ್ದೀರಿ. ತುರ್ತು ಪರಿಸ್ಥಿತಿಯ ಸಮಯದಲ್ಲಿ, ನೀವು ಪ್ರಜಾಪ್ರಭುತ್ವದ ನಿಜವಾದ ಸೈನಿಕನಂತೆ ಹೋರಾಡಿದ್ದೀರಿ. ಸಂಪನ್ಮೂಲಗಳಿಗೆ ಮಿತಿಗಳಿದ್ದವು, ನಿರ್ಬಂಧಗಳಿದ್ದವು, ಆದರೆ ನಿಮ್ಮ ಮನೋಭಾವವು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಇಂದಿಗೂ, ನಿಮ್ಮ ಪ್ರದೇಶದ ಪೀಳಿಗೆಯ ಎಲ್ಲಾ ಯುವಜನರು ತುರ್ತು ಪರಿಸ್ಥಿತಿಯ ವಿರುದ್ಧದ ನಿಮ್ಮ ಹೋರಾಟವನ್ನು ನೆನಪಿಸಿಕೊಳ್ಳುತ್ತಾರೆ. ಸಾರ್ವಜನಿಕ ಜಾಗೃತಿಯನ್ನು ಹರಡಲು ನೀವು ಕೈಗೊಂಡ ಕಾರ್ಯಕ್ರಮಗಳು, ನೀವು ಜನರನ್ನು ಪ್ರೇರೇಪಿಸಿದ ರೀತಿ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಸರ್ವರಿಗೂ ಶಾಶ್ವತ ಸ್ಫೂರ್ತಿಯ ಮೂಲವಾಗಿ ಉಳಿದಿದೆ. ನೀವು ಅತ್ಯುತ್ತಮ ಸಂಘಟಕರಾಗಿದ್ದೀರಿ; ಇದು ನನಗೆ ಚೆನ್ನಾಗಿ ತಿಳಿದಿದೆ. ಸಂಸ್ಥೆಯೊಳಗೆ ನಿಮಗೆ ನೀಡಲಾದ ಪ್ರತಿಯೊಂದು ಜವಾಬ್ದಾರಿಯಲ್ಲೂ, ನಿಮ್ಮ ಕಠಿಣ ಪರಿಶ್ರಮದಿಂದ ನೀವು ಪಾತ್ರದ ಘನತೆಯನ್ನು ಹೆಚ್ಚಿಸಿದ್ದೀರಿ. ನೀವು ಸದಾ ಜನರನ್ನು ಒಟ್ಟುಗೂಡಿಸಲು, ಹೊಸ ಆಲೋಚನೆಗಳನ್ನು ಸ್ವೀಕರಿಸಲು, ಹೊಸ ಪೀಳಿಗೆಗೆ ಅವಕಾಶಗಳನ್ನು ಒದಗಿಸಲು ಪ್ರಯತ್ನಿಸಿದ್ದೀರಿ. ಇದು ನಿಮ್ಮ ಸಂಘಟನಾ ಕಾರ್ಯದ ವಿಶಿಷ್ಟ ಲಕ್ಷಣವಾಗಿದೆ. ಕೊಯಮತ್ತೂರಿನ ಜನರು ನಿಮ್ಮನ್ನು ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಲು ಇಲ್ಲಿಗೆ ಕಳುಹಿಸಿದ್ದಾರೆ, ಮತ್ತು ಆಗಲೂ ಸಹ, ನೀವು ಸದನದ ಮುಂದೆ ನಿಮ್ಮ ಪ್ರದೇಶದ ಸಮಸ್ಯೆಗಳನ್ನು ಹೆಚ್ಚಿನ ಒತ್ತು ನೀಡಿ ನಿರಂತರವಾಗಿ ಪ್ರಸ್ತಾಪಿಸಿದ್ದೀರಿ. ಈ ಸದನದ ಅಧ್ಯಕ್ಷರಾಗಿ ಮತ್ತು ರಾಷ್ಟ್ರದ ಉಪರಾಷ್ಟ್ರಪತಿಯಾಗಿ ನಿಮ್ಮ ಅಪಾರ ಅನುಭವವು ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನಮಗೆ ಮಾರ್ಗದರ್ಶನ ನೀಡುತ್ತದೆ. ನಾನು ಭಾವಿಸಿದಂತೆ, ಈ ಸದನದ ಎಲ್ಲಾ ಸದಸ್ಯರು ಹೆಮ್ಮೆಯ ಕ್ಷಣವನ್ನು ಆಳವಾದ ಜವಾಬ್ದಾರಿಯೊಂದಿಗೆ ಮುನ್ನಡೆಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ಈ ಭಾವನೆಯೊಂದಿಗೆ, ನನ್ನ ಪರವಾಗಿ ಮತ್ತು ಸದನದ ಪರವಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

 

*****


(रिलीज़ आईडी: 2197316) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Assamese , Gujarati