ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಹಿಮಾಚಲ ಪ್ರದೇಶದ ಪ್ರವಾಹ ಮತ್ತು ಮಳೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡರು


ಕಾಂಗ್ರಾದಲ್ಲಿ ಪರಿಶೀಲನೆ ಮತ್ತು ಹಾನಿಯ ಅಂದಾಜು ಸಭೆ ನಡೆಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಹಿಮಾಚಲ ಪ್ರದೇಶದ ಪ್ರವಾಹ ಮತ್ತು ಮಳೆ ಪೀಡಿತ ಪ್ರದೇಶಗಳಿಗೆ 1500 ಕೋಟಿ ರೂ.ಗಳ ಆರ್ಥಿಕ ನೆರವನ್ನು ಘೋಷಿಸಿದರು

ಮೃತರ ಹತ್ತಿರದ ಸಂಬಂಧಿಕರಿಗೆ ರೂ.2 ಲಕ್ಷ ಮತ್ತು ಗಾಯಾಳುಗಳಿಗೆ ರೂ.50,000 ಪರಿಹಾರವನ್ನು ಘೋಷಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಂತಾಪ ಸೂಚಿಸಿದರು

ಎನ್‌.ಡಿ.ಆರ್‌.ಎಫ್, ಎಸ್‌.ಡಿ.ಆರ್‌.ಎಫ್ ಮತ್ತು ಆಪದಾ ಮಿತ್ರ ಸ್ವಯಂಸೇವಕರ ಸಿಬ್ಬಂದಿಯನ್ನು ಭೇಟಿ ಮಾಡಿ, ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಮರುಸ್ಥಾಪನೆ ಮತ್ತು ಪುನರ್ ನಿರ್ಮಾಣಕ್ಕೆ ಸಾಧ್ಯವಾಗುವ ಎಲ್ಲಾ ಸಹಾಯವನ್ನು ಕೇಂದ್ರ ಸರ್ಕಾರವು ನೀಡುವುದಾಗಿ ಭರವಸೆ ನೀಡಿದರು

Posted On: 09 SEP 2025 3:01PM by PIB Bengaluru

ಹಿಮಾಚಲ ಪ್ರದೇಶದ ಪ್ರವಾಹ ಪರಿಸ್ಥಿತಿ ಮತ್ತು ಮೇಘಸ್ಫೋಟ, ಮಳೆ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 9, 2025 ರಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದರು.

ಪ್ರಧಾನಮಂತ್ರಿ ಅವರು ಮೊದಲಿಗೆ ಹಿಮಾಚಲ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ತದನಂತರ, ಪ್ರಧಾನಮಂತ್ರಿ ಮೋದಿ ಅವರು ಕಾಂಗ್ರಾದಲ್ಲಿ ಅಧಿಕೃತ ಸಭೆ ನಡೆಸಿ, ಹಿಮಾಚಲ ಪ್ರದೇಶದಲ್ಲಿ ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಪರಿಶೀಲಿಸಿ ಹಾನಿಯನ್ನು ನಿರ್ಣಯಿಸಿದ ಅವರು ಹಿಮಾಚಲ ಪ್ರದೇಶಕ್ಕೆ 1500 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ಎಸ್‌.ಡಿ.ಆರ್‌.ಎಫ್ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಎರಡನೇ ಕಂತಿನ ಮುಂಗಡ ಬಿಡುಗಡೆಯನ್ನು ಕೂಡ ಪ್ರಧಾನಮಂತ್ರಿ ಮೋದಿಯವರು ಘೋಷಿಸಿದ್ದಾರೆ.

ಇಡೀ ಪ್ರದೇಶ ಮತ್ತು ಜನರನ್ನು ಮೂಲಸ್ಥಿತಿಗೆ ತರಲು ಬಹು ಆಯಾಮದ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕೆಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಮನೆಗಳ ಪುನರ್ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ಮರುಸ್ಥಾಪನೆ, ಶಾಲೆಗಳ ಪುನರ್ ನಿರ್ಮಾಣ, ಪಿ.ಎಂ.ಎನ್‌.ಆರ್‌.ಎಫ್ ಅಡಿಯಲ್ಲಿ ಪರಿಹಾರ ಒದಗಿಸುವುದು ಮತ್ತು ಜಾನುವಾರುಗಳಿಗೆ ಮಿನಿ ಕಿಟ್‌ಗಳನ್ನು ಬಿಡುಗಡೆ ಮಾಡುವಂತಹ ಬಹು ಆಯಾಮಗಳಡಿಯಲ್ಲಿ ಇದನ್ನು ಮಾಡಲಾಗುವುದು.

ಕೃಷಿ ಸಮುದಾಯವನ್ನು ಬೆಂಬಲಿಸುವ ನಿರ್ಣಾಯಕ ನಿಟ್ಟಿನಲ್ಲಿ, ಪ್ರಸ್ತುತ ವಿದ್ಯುತ್ ಸಂಪರ್ಕವಿಲ್ಲದ ರೈತರನ್ನು ಗುರಿಯಾಗಿಟ್ಟುಕೊಂಡು ಹೆಚ್ಚುವರಿ ಸಹಾಯವನ್ನು ನೀಡಲಾಗುವುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಹಾನಿಗೊಳಗಾದ ಮನೆಗಳ ಜಿಯೋಟ್ಯಾಗಿಂಗ್ ಮಾಡಲಾಗುತ್ತಿದ್ದು, ಇದು ನಿಖರವಾದ ಹಾನಿಯ ಮೌಲ್ಯಮಾಪನ ಮತ್ತು ಪೀಡಿತರಿಗೆ ಸಹಾಯವನ್ನು ವೇಗವಾಗಿ ತಲುಪಿಸಲು ಸಹಾಯ ಮಾಡುತ್ತದೆ.

ಅಡೆತಡೆಯಿಲ್ಲದ ಶಿಕ್ಷಣ ಮುಂದುವರಿಕೆಗಾಗಿ, ಶಾಲೆಗಳು ಹಾನಿಯನ್ನು ವರದಿ ಮಾಡಿ, ಜಿಯೋಟ್ಯಾಗಿಂಗ್ ಮಾಡಲು ಸಾಧ್ಯವಾಗುತ್ತಿದ್ದು, ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ ಸಕಾಲಿಕ ಸಹಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಮಳೆನೀರಿನ ಸಂಗ್ರಹಣ ಕಾರ್ಯಕ್ಕೆ ಸಹಾಯ ಮಾಡಲು ನೀರಿನ ಕೊಯ್ಲುಗಾಗಿ ಪುನರ್ಭರ್ತಿ ರಚನೆಗಳ ನಿರ್ಮಾಣವನ್ನು ಮಾಡಲಾಗುವುದು. ಈ ಪ್ರಯತ್ನಗಳು ಅಂತರ್ಜಲ ಮಟ್ಟವನ್ನು ಸುಧಾರಿಸುವುದಲ್ಲದೆ, ಉತ್ತಮ ನೀರಿನ ನಿರ್ವಹಣೆಯನ್ನು ಬೆಂಬಲಿಸುತ್ತವೆ.

ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು ಈಗಾಗಲೇ ಅಂತರ-ಸಚಿವಾಲಯ ಕೇಂದ್ರ ತಂಡಗಳನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಿದ್ದು, ಅವರ ವಿವರವಾದ ವರದಿಯ ಆಧಾರದ ಮೇಲೆ ಹೆಚ್ಚಿನ ಸಹಾಯವನ್ನು ಪರಿಗಣಿಸಲಾಗುವುದು.

ಪ್ರಧಾನಮಂತ್ರಿ ಅವರು ವಿಪತ್ತಿನಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಿ, ಜೀವ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ ತಮ್ಮ ಸಂತಾಪ ಮತ್ತು ತೀವ್ರ ದುಃಖವನ್ನು ವ್ಯಕ್ತಪಡಿಸಿದರು. ಈ ಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸುವುದಲ್ಲದೆ, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಪ್ರವಾಹ ಮತ್ತು ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಹತ್ತಿರದ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಕೂಡಾ ಪ್ರಧಾನಮಂತ್ರಿ ಮೋದಿ ಅವರು ಘೋಷಿಸಿದರು.

ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿಯಲ್ಲಿ ಸಮಗ್ರ ಬೆಂಬಲವನ್ನು ನೀಡಲಾಗುವುದು ಎಂದು ಪ್ರಧಾನಮಂತ್ರಿಯವರು ಘೋಷಿಸಿದರು. ಇದು ಅವರ ದೀರ್ಘಕಾಲೀನ ಕಲ್ಯಾಣದ ಪ್ರತೀಕವಾಗಿದೆ.

ರಾಜ್ಯಗಳಿಗೆ ಮುಂಗಡ ವಿತರಣೆ ಸೇರಿದಂತೆ ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಎಲ್ಲಾ ಸಹಾಯವನ್ನು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ತುರ್ತು ಪರಿಹಾರ ಮತ್ತು ಪ್ರತಿಕ್ರಿಯಾ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ಎನ್‌.ಡಿ.ಆರ್‌.ಎಫ್, ಎಸ್‌.ಡಿ.ಆರ್‌.ಎಫ್, ಸೇನೆ, ರಾಜ್ಯ ಆಡಳಿತ ಮತ್ತು ಇತರ ಸೇವಾ-ಆಧಾರಿತ ಸಂಸ್ಥೆಗಳ ಸಿಬ್ಬಂದಿಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ರಾಜ್ಯ ಪತ್ರ ಮತ್ತು ಕೇಂದ್ರ ತಂಡಗಳ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಮೌಲ್ಯಮಾಪನವನ್ನು ಮತ್ತಷ್ಟು ಪರಿಶೀಲಿಸಲಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಿದ ಪ್ರಧಾನಮಂತ್ರಿ ಅವರು, ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಭರವಸೆ ನೀಡಿದರು.

 

*****
 


(Release ID: 2164992) Visitor Counter : 2