ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2025ನೇ ಸಾಲಿನ ʻರಾಷ್ಟ್ರೀಯ ಬಾಹ್ಯಾಕಾಶ ದಿನʼದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


ʻರಾಷ್ಟ್ರೀಯ ಬಾಹ್ಯಾಕಾಶ ದಿನʼವು ಭಾರತದ ಯುವಕರಿಗೆ ಉತ್ಸಾಹ ಮತ್ತು ಸ್ಫೂರ್ತಿಯ ಸಂದರ್ಭವಾಗಿದೆ, ಇದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ; ಈ ಸಂದರ್ಭದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರಿಗೂ - ವಿಜ್ಞಾನಿಗಳು ಮತ್ತು ಯುವ ನಾಗರಿಕರಿಗೆ ನಾನು ಶುಭ ಕೋರುತ್ತೇನೆ: ಪ್ರಧಾನಮಂತ್ರಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದರ ನಂತರ ಒಂದರಂತೆ ಮೈಲುಗಲ್ಲುಗಳನ್ನು ಸಾಧಿಸುವುದು ಈಗ ಭಾರತ ಮತ್ತು ಅದರ ವಿಜ್ಞಾನಿಗಳ ಸ್ವಾಭಾವಿಕ ಗುಣವಾಗಿದೆ: ಪ್ರಧಾನಮಂತ್ರಿ

ಸೆಮಿ-ಕ್ರಯೋಜೆನಿಕ್ ಎಂಜಿನ್ ಗಳು ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್ ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ಭಾರತವು ವೇಗವಾಗಿ ಮುಂದುವರಿಯುತ್ತಿದೆ, ಮತ್ತು ಶೀಘ್ರದಲ್ಲೇ, ನಮ್ಮ ವಿಜ್ಞಾನಿಗಳ ಸಮರ್ಪಿತ ಪ್ರಯತ್ನಗಳೊಂದಿಗೆ, ಭಾರತವು ಗಗನಯಾನ ಮಿಷನ್ ಅನ್ನು ಪ್ರಾರಂಭಿಸಲಿದೆ; ಮತ್ತು ಮುಂಬರುವ ವರ್ಷಗಳಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ: ಪ್ರಧಾನಮಂತ್ರಿ

ಬೆಳೆ ವಿಮಾ ಯೋಜನೆಗಳಲ್ಲಿ ಉಪಗ್ರಹ ಆಧಾರಿತ ಮೌಲ್ಯಮಾಪನಗಳಾಗಿರಲಿ, ಮೀನುಗಾರರಿಗೆ ಉಪಗ್ರಹ-ಶಕ್ತ ಮಾಹಿತಿಯಾಗಿರಲಿ ಮತ್ತು ಸುರಕ್ಷತೆ, ವಿಪತ್ತು ನಿರ್ವಹಣಾ ಪ್ರಯತ್ನಗಳು ಅಥವಾ ʻಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼನಲ್ಲಿ ಜಿಯೋಸ್ಪೇಷಿಯಲ್ ಡೇಟಾದ ಬಳಕೆಯಾಗಿರಲಿ ಹೀಗೆ ಬಾಹ್ಯಾಕಾಶ ತಂತ್ರ ಎಂಜಿನು ಭಾರತದಲ್ಲಿ ಆಡಳಿತದ ಒಂದು ಭಾಗವಾಗುತ್ತಿದೆ: ಪ್ರಧಾನಮಂತ್ರಿ

ಬಾಹ್ಯಾಕಾಶದಲ್ಲಿ ಭಾರತದ ಪ್ರಗತಿಯು ಈಗ ಸಾಮಾನ್ಯ ನಾಗರಿಕರ ಜೀವನವನ್ನು ಸುಲಭಗೊಳಿಸಲು ನೇರವಾಗಿ ಕೊಡುಗೆ ನೀಡುತ್ತಿದೆ: ಪ್ರಧಾನಮಂತ್ರಿ

Posted On: 23 AUG 2025 11:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ರಾಷ್ಟ್ರೀಯ ಬಾಹ್ಯಾಕಾಶ ದಿನ- 2025’ರ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿಯವರು, "ಆರ್ಯಭಟದಿಂದ ಗಗನಯಾನದವರೆಗೆ" ಎಂಬ ಈ ವರ್ಷದ ಧ್ಯೇಯವಾಕ್ಯವು ಭಾರತದ ಗತಕಾಲದ ವಿಶ್ವಾಸ ಮತ್ತು ಅದರ ಭವಿಷ್ಯದ ಸಂಕಲ್ಪ ಎರಡನ್ನೂ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅತ್ಯಲ್ಪ ಕಾಲದಲ್ಲಿ, ʻರಾಷ್ಟ್ರೀಯ ಬಾಹ್ಯಾಕಾಶ ದಿನʼವು ಭಾರತದ ಯುವಕರಿಗೆ ಉತ್ಸಾಹ ಮತ್ತು ಆಕರ್ಷಣೆಯ ಸಂದರ್ಭವಾಗಿ ಮಾರ್ಪಟ್ಟಿದೆ, ಇದು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. ವಿಜ್ಞಾನಿಗಳು ಮತ್ತು ಯುವಕರು ಸೇರಿದಂತೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳಿಗೆ ಅವರು ಶುಭಾಶಯಗಳನ್ನು ತಿಳಿಸಿದರು. ಭಾರತವು ಪ್ರಸ್ತುತ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕುರಿತ ಅಂತಾರಾಷ್ಟ್ರೀಯ ಒಲಿಂಪಿಯಾಡ್ಗೆ ಆತಿಥ್ಯ ವಹಿಸುತ್ತಿದ್ದು, ಅರವತ್ತಕ್ಕೂ ಹೆಚ್ಚು ದೇಶಗಳ ಸುಮಾರು 300 ಯುವ ಸ್ಪರ್ಧಿಗಳು ಅದರಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಈ ಸ್ಪರ್ಧೆಯಲ್ಲಿ ಅನೇಕ ಭಾರತೀಯ ಸ್ಪರ್ಧಿಗಳು ಪದಕಗಳನ್ನು ಗೆದ್ದಿರುವುದಕ್ಕೆ ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಈ ಒಲಿಂಪಿಯಾಡ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಉದಯೋನ್ಮುಖ ಜಾಗತಿಕ ನಾಯಕತ್ವದ ಸಂಕೇತವಾಗಿದೆ ಎಂದು ಅವರು ಹೇಳಿದರು. ಯುವಜನರಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಲು, ʻಭಾರತೀಯ ಬಾಹ್ಯಾಕಾಶ ಹ್ಯಾಕಥಾನ್ʼ ಮತ್ತು ʻರೊಬೊಟಿಕ್ಸ್ ಚಾಲೆಂಜ್ʼ ನಂತಹ ಉಪಕ್ರಮಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ʻಇಸ್ರೋʼ) ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಸಂತೋಷ ವ್ಯಕ್ತಪಡಿಸಿದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಜೇತರನ್ನು ಅವರು ಅಭಿನಂದಿಸಿದರು.

"ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲುಗಲ್ಲುಗಳ ನಂತರ ಮೈಲಿಗಲ್ಲುಗಳನ್ನು ಸಾಧಿಸುವುದು ಭಾರತ ಮತ್ತು ದೇಶದ ವಿಜ್ಞಾನಿಗಳ ಸ್ವಾಭಾವಿಕ ಗುಣವಾಗಿದೆ," ಎಂದು ಶ್ರೀ ಮೋದಿ ಉದ್ಗರಿಸಿದರು. ಎರಡು ವರ್ಷಗಳ ಹಿಂದೆ, ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು ಎಂದು ಸ್ಮರಿಸಿದ ಪ್ರಧಾನಮಂತ್ರಿ, ಬಾಹ್ಯಾಕಾಶದಲ್ಲಿ ʻಡಾಕಿಂಗ್-ಅನ್ಡಾಕಿಂಗ್ʼ ಸಾಮರ್ಥ್ಯಗಳನ್ನು ಹೊಂದಿರುವ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಒತ್ತಿ ಹೇಳಿದರು. ಕೇವಲ ಮೂರು ದಿನಗಳ ಹಿಂದೆ, ʻಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣʼದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿಯಾಗಿದ್ದಾಗಿ ಅವರು ಮಾಹಿತಿ ಹಂಚಿಕೊಂಡರು. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹಾರಿಸಲಾದ ತ್ರಿವರ್ಣ ಧ್ವಜವನ್ನು ತಮಗೆ ತೋರಿಸಿದಾಗ, ಅದನ್ನು ಸ್ಪರ್ಶಿಸುವ ಭಾವನೆಯು ಪದಗಳಿಗೆ ಮೀರಿದ್ದಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರೊಂದಿಗಿನ ಸಂವಾದ ವೇಳೆ  ತಾವು ನವ ಭಾರತದ ಯುವಜನರ ಅಪರಿಮಿತ ಧೈರ್ಯ ಮತ್ತು ಅನಂತ ಕನಸುಗಳಿಗೆ ಸಾಕ್ಷಿಯಾಗಿದ್ದೇನೆ ಎಂದು ಶ್ರೀ ಮೋದಿ ಹೇಳಿದರು. ಈ ಕನಸುಗಳನ್ನು ನನಸಾಗಿಸಲು, ಭಾರತವು "ಗಗನಯಾತ್ರಿ ಪೂಲ್" ಸಿದ್ಧಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು. ಬಾಹ್ಯಾಕಾಶ ದಿನದಂದು, ಅವರು ಯುವ ನಾಗರಿಕರನ್ನು ಈ ʻಪೂಲ್ʼಗೆ ಸೇರಲು ಮತ್ತು ಭಾರತದ ಆಕಾಂಕ್ಷೆಗಳಿಗೆ ರೆಕ್ಕೆ ನೀಡಲು ಸಹಾಯ ಮಾಡುವಂತೆ ಆಹ್ವಾನಿಸಿದರು.

"ಸೆಮಿ-ಕ್ರಯೋಜೆನಿಕ್ ಎಂಜಿನ್ ಗಳು ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್ ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ಭಾರತವು ವೇಗವಾಗಿ ಮುಂದುವರಿಯುತ್ತಿದೆ. ಶೀಘ್ರದಲ್ಲೇ, ಭಾರತವು ಗಗನಯಾನ ಮಿಷನ್ ಅನ್ನು ಪ್ರಾರಂಭಿಸಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುತ್ತದೆ - ಭಾರತೀಯ ವಿಜ್ಞಾನಿಗಳ ದಣಿವರಿಯದ ಪ್ರಯತ್ನಗಳಿಗೆ ಧನ್ಯವಾದಗಳು," ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತವು ಈಗಾಗಲೇ ಚಂದ್ರ ಮತ್ತು ಮಂಗಳ ಗ್ರಹವನ್ನು ತಲುಪಿದೆ ಮತ್ತು ಈಗ ಬಾಹ್ಯಾಕಾಶದ ಆಳವಾದ ಪ್ರದೇಶಗಳನ್ನು ಅನ್ವೇಷಿಸಬೇಕು ಎಂದು ಅವರು ಹೇಳಿದರು. ಈ ಅನ್ವೇಷಿಸದ ಪ್ರದೇಶಗಳು ಮಾನವಕುಲದ ಭವಿಷ್ಯಕ್ಕಾಗಿ ಮಹತ್ವದ ರಹಸ್ಯಗಳನ್ನು ಹೊಂದಿರಬಹುದು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, "ಗ್ಯಾಲಕ್ಸಿಗಳ ಆಚೆಗೆ ನಮ್ಮ ದಿಗಂತವಿದೆ!" ಎಂದು ಹೇಳಿದರು.

ಯಾವುದೇ ಗಮ್ಯಸ್ಥಾನವು ಎಂದಿಗೂ ಅಂತಿಮವಲ್ಲ ಎಂದು ಬಾಹ್ಯಾಕಾಶದ ಅನಂತ ವಿಸ್ತಾರವು ನಮಗೆ ನಿರಂತರವಾಗಿ ನೆನಪಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಅಂತೆಯೇ, ಬಾಹ್ಯಾಕಾಶ ಕ್ಷೇತ್ರದಲ್ಲಿ ನೀತಿ ಮಟ್ಟದ ಪ್ರಗತಿಯಲ್ಲಿ ಯಾವುದೇ ಅಂತ್ಯ ಇರಬಾರದು ಎಂದು ಅವರು ಒತ್ತಿ ಹೇಳಿದರು. ಕೆಂಪು ಕೋಟೆಯಿಂದ ತಾವು ಮಾಡಿದ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಭಾರತದ ಮಾರ್ಗವು ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ಮಾರ್ಗವಾಗಿದೆ ಎಂದು ಪುನರುಚ್ಚರಿಸಿದರು. ಕಳೆದ ಹನ್ನೊಂದು ವರ್ಷಗಳಲ್ಲಿ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು. ಬಾಹ್ಯಾಕಾಶದಂತಹ ಭವಿಷ್ಯದ ಕ್ಷೇತ್ರಗಳು ಹಲವಾರು ನಿರ್ಬಂಧಗಳಿಗೆ ಗುರಿಯಾಗಿದ್ದ ಸಮಯವಿತ್ತು ಎಂದು ಹೇಳಿದ ಶ್ರೀ ಮೋದಿ, ಈ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾಗವಹಿಸಲು ಖಾಸಗಿ ವಲಯಕ್ಕೆ ಅನುಮತಿ ನೀಡಲಾಗಿದೆ ಎಂದು ದೃಢಪಡಿಸಿದರು. ಇಂದು, 350ಕ್ಕೂ ಹೆಚ್ಚು ನವೋದ್ಯಮಗಳು ಇಂದಿನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಾವೀನ್ಯತೆ ಮತ್ತು ವೇಗವರ್ಧನೆಯ ಎಂಜಿನ್ಗಳಾಗಿ ಹೊರಹೊಮ್ಮುತ್ತಿವೆ ಎಂದು ಅವರು ಒತ್ತಿ ಹೇಳಿದರು. ಖಾಸಗಿ ವಲಯ ನಿರ್ಮಿಸಿದ ಮೊದಲ ʻಪಿ ಎಸ್ ಎಲ್ ವಿʼ ರಾಕೆಟ್ ಅನ್ನು ಶೀಘ್ರದಲ್ಲೇ ಉಡಾವಣೆ ಮಾಡಲಾಗುವುದು ಎಂದು ಪ್ರಧಾನಮಂತ್ರಿ ಘೋಷಿಸಿದರು. ಭಾರತದ ಮೊದಲ ಖಾಸಗಿ ಸಂವಹನ ಉಪಗ್ರಹವೂ ಅಭಿವೃದ್ಧಿ ಹಂತದಲ್ಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ʻಭೂ ವೀಕ್ಷಣಾ ಉಪಗ್ರಹ ಪುಂಜʼವನ್ನು ಉಡಾವಣೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು. "ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯುವಕರಿಗೆ ಅಪಾರ ಸಂಖ್ಯೆಯ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ," ಎಂದು ಪ್ರಧಾನಮಂತ್ರಿ ತಿಳೀಸಿದರು.

2025ರ ಆಗಸ್ಟ್ 15ರಂದು ಕೆಂಪುಕೋಟೆಯಿಂದ ಮಾಡಿದ ತಮ್ಮ ಭಾಷಣದಲ್ಲಿ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಮಹತ್ವವನ್ನು ಒತ್ತಿ ಹೇಳಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಭಾರತದ ಬಾಹ್ಯಾಕಾಶ ನವೋದ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, "ಮುಂದಿನ ಐದು ವರ್ಷಗಳಲ್ಲಿ ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಐದು ಯುನಿಕಾರ್ನ್ಗಳನ್ನು ನಿರ್ಮಿಸಬಹುದೇ?" ಎಂದು ಪ್ರಶ್ನಿಸಿದರು. ಪ್ರಸ್ತುತ, ಭಾರತವು ತನ್ನ ನೆಲದಿಂದ ವಾರ್ಷಿಕವಾಗಿ 5-6 ಪ್ರಮುಖ ಉಡಾವಣೆಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಭಾರತವು ಪ್ರತಿವರ್ಷ 50 ರಾಕೆಟ್ ಗಳನ್ನು ಉಡಾವಣೆ ಮಾಡುವ ಹಂತವನ್ನು ತಲುಪಲು ಖಾಸಗಿ ವಲಯವು ಮುಂದೆ ಬರಬೇಕು ಎಂಬ ಆಶಯವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಈ ದೃಷ್ಟಿಕೋನವನ್ನು ಸಾಧಿಸಲು ಅಗತ್ಯವಿರುವ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಜಾರಿಗೆ ತರುವ ಉದ್ದೇಶ ಮತ್ತು ಇಚ್ಛಾಶಕ್ತಿ ಎರಡನ್ನೂ ಸರ್ಕಾರ ಹೊಂದಿದೆ ಎಂದು ಅವರು ದೃಢಪಡಿಸಿದರು. ಪ್ರತಿ ಹಂತದಲ್ಲೂ ಸರ್ಕಾರ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಪ್ರಧಾನಮಂತ್ರಿ ಬಾಹ್ಯಾಕಾಶ ಸಮುದಾಯಕ್ಕೆ ಭರವಸೆ ನೀಡಿದರು.

ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ವೈಜ್ಞಾನಿಕ ಅನ್ವೇಷಣೆಯ ಸಾಧನವಾಗಿ ಮಾತ್ರವಲ್ಲದೆ ಜೀವನವನ್ನು ಸುಲಭಗೊಳಿಸುವ ಸಾಧನವಾಗಿಯೂ ನೋಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಬೆಳೆ ವಿಮಾ ಯೋಜನೆಗಳಲ್ಲಿ ಉಪಗ್ರಹ ಆಧಾರಿತ ಮೌಲ್ಯಮಾಪನ, ಮೀನುಗಾರರಿಗೆ ಉಪಗ್ರಹ-ಶಕ್ತ ಮಾಹಿತಿ; ]ಸುರಕ್ಷತೆ, ವಿಪತ್ತು ನಿರ್ವಹಣಾ ಅನ್ವಯಿಕೆಗಳು ಮತ್ತು ʻಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼನಲ್ಲಿ ಜಿಯೋಸ್ಪೇಷಿಯಲ್ ದತ್ತಾಂಶದ ಬಳಕೆಯಂತಹ ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು "ಬಾಹ್ಯಾಕಾಶ-ತಂತ್ರಜ್ಞಾನವು ಭಾರತದಲ್ಲಿ ಆಡಳಿತದ ಅವಿಭಾಜ್ಯ ಅಂಗವಾಗುತ್ತಿದೆ" ಎಂದು ಹೇಳಿದರು. ಬಾಹ್ಯಾಕಾಶದಲ್ಲಿ ಭಾರತದ ಪ್ರಗತಿಯು ತನ್ನ ನಾಗರಿಕರಿಗೆ ದೈನಂದಿನ ಜೀವನವನ್ನು ಸುಲಭಗೊಳಿಸಲು ನೇರವಾಗಿ ಕೊಡುಗೆ ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಾದ್ಯಂತ ಬಾಹ್ಯಾಕಾಶ-ತಂತ್ರಜ್ಞಾನದ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು, ನಿನ್ನೆ ʻರಾಷ್ಟ್ರೀಯ ಮೀಟ್ 2.0ʼ ಅನ್ನು ಆಯೋಜಿಸಲಾಗಿತ್ತು ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಇಂತಹ ಉಪಕ್ರಮಗಳನ್ನು ಮುಂದುವರಿಸುವ ಮತ್ತು ವಿಸ್ತರಿಸುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು. ಸಾರ್ವಜನಿಕ ಸೇವೆಯನ್ನು ಗುರಿಯಾಗಿಟ್ಟುಕೊಂಡು ಹೊಸ ಪರಿಹಾರಗಳು ಮತ್ತು ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲು ಬಾಹ್ಯಾಕಾಶ ನವೋದ್ಯಮಗಳಿಗೆ ಪ್ರಧಾನಮಂತ್ರಿ ಕರೆ ನೀಡಿದರು. ಮುಂಬರುವ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಭಾರತದ ಪ್ರಯಾಣವು ಹೊಸ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸದೊಂದಿಗೆ ಅವರು ತಮ್ಮ ಮಾತು ಮುಗಿಸಿದರು. ಇದೇ ವೇಳೆ ಮತ್ತೊಮ್ಮೆ ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಎಲ್ಲರಿಗೂ ಶುಭ ಕೋರಿದರು.

ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, ಇಸ್ರೋ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

 

*****

 


(Release ID: 2160083)