ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಮೋದಿ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣ: ಸುಧಾರಣೆ, ಸ್ವಾವಲಂಬನೆ ಮತ್ತು ಪ್ರತಿಯೊಬ್ಬ ಭಾರತೀಯನ ಸಬಲೀಕರಣದ ಮುನ್ನೋಟ

Posted On: 15 AUG 2025 10:23AM by PIB Bengaluru

79ನೇ ಸ್ವಾತಂತ್ರ್ಯ ದಿನಾಚರಣೆಯಂದು, ಪ್ರಧಾನಮಂತ್ರಿ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು, ಭಾರತದ ಸ್ವಾವಲಂಬನೆ ಮತ್ತು ಪರಿವರ್ತನೆಯ ಪ್ರಯಾಣವನ್ನು ಎತ್ತಿ ತೋರಿದರು. ಕಳೆದ ದಶಕದಲ್ಲಿ, ಭಾರತವು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯನ್ನು ಕೈಗೊಂಡಿದೆ. ಆದರೆ ಈಗ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಮುಂದುವರಿಯುವ ಸಮಯ ಬಂದಿದೆ ಎಂದು ಅವರು ಹೇಳಿದರು. ಕಾನೂನುಗಳು, ನಿಬಂಧನೆಗಳು ಮತ್ತು ಪ್ರಕ್ರಿಯೆಗಳನ್ನು ಸರಳೀಕರಿಸುವ, ಉದ್ಯಮಶೀಲತೆಯನ್ನು ಉತ್ತೇಜಿಸುವ ಆಧುನಿಕ, ದಕ್ಷ ಮತ್ತು ನಾಗರಿಕ ಸ್ನೇಹಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಬದ್ಧವಾಗಿದೆ. ಜೊತೆಗೆ, ಪ್ರತಿಯೊಬ್ಬ ಭಾರತೀಯರೂ ವಿಕಸಿತ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬಹುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಕಾನೂನುಗಳು ಮತ್ತು ಅನುಸರಣೆಗಳ ಸರಳೀಕರಣ

ಪ್ರಧಾನಮಂತ್ರಿ ಮೋದಿ ಅವರು ತಮ್ಮ ಭಾಷಣದ ಆರಂಭದಲ್ಲಿ, ಕಳೆದ ಹಲವು ವರ್ಷಗಳಲ್ಲಿ ಸರ್ಕಾರವು ಐತಿಹಾಸಿಕ ಸುಧಾರಣೆಗಳ ಅಲೆಯನ್ನು ಕೈಗೊಂಡಿದೆ. 40,000ಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ರದ್ದುಗೊಳಿಸಿದೆ ಮತ್ತು 1,500ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಹತ್ತಾರು ಇತರ ಕಾನೂನುಗಳನ್ನು ಸರಳೀಕರಿಸಲಾಯಿತು, ಸದಾ ನಾಗರಿಕರ ಹಿತಾಸಕ್ತಿಗಳನ್ನು ಮುಂಚೂಣಿಯಲ್ಲಿರಿಸಲಾಯಿತು ಎಂದು ಹೇಳಿದರು.

ಇತ್ತೀಚಿನ ಅಧಿವೇಶನದಲ್ಲಿ, 280ಕ್ಕೂ ಹೆಚ್ಚು ನಿಬಂಧನೆಗಳನ್ನು ತೆಗೆದುಹಾಕಲಾಗಿದೆ, ಇದು ಆಡಳಿತವನ್ನು ಸರಳ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಹೆಚ್ಚು ಪ್ರವೇಶಸಾಧ್ಯವಾಗಿಸಿದೆ. ಸುಧಾರಣೆ ಕೇವಲ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ, ಅದು ನಾಗರಿಕರ ದೈನಂದಿನ ಜೀವನವನ್ನು ಪರಿವರ್ತಿಸುವ ಕುರಿತಾದದ್ದು ಎಂದು ಪ್ರಧಾನಮಂತ್ರಿ ಮೋದಿ ಒತ್ತಿ ಹೇಳಿದರು.

ಪ್ರಮುಖ ಸಾಧನೆಗಳ ಪೈಕಿ ಮೋದಿ ಅವರು ಇವುಗಳನ್ನು ಎತ್ತಿ ತೋರಿದರು:

  • ಆದಾಯ ತೆರಿಗೆ ಸುಧಾರಣೆ ಮತ್ತು ಮುಖರಹಿತ ಮೌಲ್ಯಮಾಪನವು ವ್ಯವಸ್ಥೆಯನ್ನು ಪಾರದರ್ಶಕ ಮತ್ತು ದಕ್ಷವಾಗಿಸುತ್ತದೆ.
  • 12 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯಕ್ಕೆ ಶೂನ್ಯ ತೆರಿಗೆ, ಇದು ಕೆಲವು ವರ್ಷಗಳ ಹಿಂದೆ ಅನೇಕರಿಗೆ ಊಗೆಗೂ ನಿಲುಕದ ಪ್ರಯೋಜನವಾಗಿದೆ.
  • ಹಳೆಯ ಕ್ರಿಮಿನಲ್ ಕಾನೂನುಗಳ ಸ್ಥಾನದಲ್ಲಿ ಭಾರತೀಯ ನ್ಯಾಯ ಸಂಹಿತೆ ಜಾರಿಗೊಳಿಸಲಾಗಿದೆ, ನ್ಯಾಯ ಮತ್ತು ಕಾನೂನಿನ ಕಾರ್ಯವಿಧಾನಗಳನ್ನು ಸರಳೀಕರಣಗೊಳಿಸಲಾಗಿದೆ.

ಸುಧಾರಣೆಗಳು ಆಧುನಿಕ, ನಾಗರಿಕ ಕೇಂದ್ರಿತ ಸರ್ಕಾರವನ್ನು ಪ್ರತಿಬಿಂಬಸುತ್ತವೆ. ಅಲ್ಲಿ ಸಾಮಾನ್ಯ ಜನರು ಸುಲಭ, ನ್ಯಾಯಸಮ್ಮತತೆ ಮತ್ತು ಸಬಲೀಕರಣಕ್ಕೆ ಸಾಕ್ಷಿಯಾಗಬಹುದಾಗಿದೆ. ರಚನಾತ್ಮಕ, ನಿಯಂತ್ರಕ, ನೀತಿ, ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನದ ಸುಧಾರಣೆಗಳಿಗೆ ಭಾರತ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಒತ್ತಿಹೇಳಿದರು, ಆಡಳಿತವು ಜನರಿಗಾಗಿ ಕೆಲಸ ಮಾಡುವ ರಾಷ್ಟ್ರವನ್ನು ನಿರ್ಮಿಸುತ್ತದೆ ಎಂದರು.

ಉದ್ಯಮಿಗಳು ಮತ್ತು ʻಎಂ.ಎಸ್.ಎಂ.ʼಗಳ ಸಬಲೀಕರಣ

ಸರ್ಕಾರದ ಸುಧಾರಣೆಗಳು ನವೋದ್ಯಮಗಳು, ʻಎಂ.ಎಸ್.ಎಂ.ಇʼಗಳು ಮತ್ತು ಉದ್ಯಮಿಗಳಿಗೆ ಅನುಸರಣೆ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಇದೇ ವೇಳೆ, ಈ ಸುಧಾರಣೆಗಳು ಹಳೆಯ ಕಾನೂನು ನಿಬಂಧನೆಗಳ ಭಯದಿಂದ ಸ್ವಾತಂತ್ರ್ಯ ಪಡೆಯುವುದನ್ನು ಖಚಿತಪಡಿಸುತ್ತವೆ. ಇದು ವ್ಯಾಪಾರ ಬೆಳವಣಿಗೆಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ, ನಾವೀನ್ಯತೆ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಮುಂದಿನ ಪೀಳಿಗೆಯ ಸುಧಾರಣೆಗಳು ಮತ್ತು ಕಾರ್ಯಪಡೆ

ಮುಂದಿನ ಪೀಳಿಗೆಯ ಸುಧಾರಣೆಗಳಿಗಾಗಿ ಕಾರ್ಯಪಡೆಯನ್ನು ರಚಿಸುವುದಾಗಿ ಪಿ.ಎಂ. ಮೋದಿ ಘೋಷಿಸಿದರು. ಇದು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಸ್ತುತ ಕಾನೂನುಗಳು, ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಮೌಲ್ಯಮಾಪನ ಮಾಡುತ್ತದೆ. ಕಾರ್ಯಪಡೆಯು ಕೆಳಗಿನ ವಿಚಾರಗಳಲ್ಲಿ ನಿಗದಿತ ಕಾಲಮಿತಿಯೊಳಗೆ ಕೆಲಸ ಮಾಡುತ್ತದೆ:

  •  ನವೋದ್ಯಮಗಳು, ಎಂ.ಎಸ್‌.ಎಂ.ಇಗಳು ಮತ್ತು ಉದ್ಯಮಿಗಳಿಗೆ ಅನುಸರಣೆ ವೆಚ್ಚವನ್ನು ಕಡಿಮೆ ಮಾಡುವುದು
  • ಅನಿಯಂತ್ರಿತ ಕಾನೂನು ಕ್ರಮಗಳ ಭಯದಿಂದ ಸ್ವಾತಂತ್ರ್ಯವನ್ನು ಒದಗಿಸುವುದು
  • ವ್ಯಾಪಾರವನ್ನು ಸುಲಭಗೊಳಿಸಲು ಕಾನೂನುಗಳನ್ನು ಸುವ್ಯವಸ್ಥಿತಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು

ಸುಧಾರಣೆಗಳು ನಾವೀನ್ಯತೆ, ಉದ್ಯಮಶೀಲತೆ ಮತ್ತು ಆರ್ಥಿಕ ಬೆಳವಣಿಗೆಗೆ ಬೆಂಬಲಿಸುವಂತಹ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.

ಮುಂದಿನ ಪೀಳಿಗೆಯ ಜಿ.ಎಸ್‌.ಟಿ ಸುಧಾರಣೆಗಳು

ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೀಪಾವಳಿಯ ವೇಳೆಗೆ ಮುಂದಿನ ಪೀಳಿಗೆಯ ಜಿ.ಎಸ್‌.ಟಿ ಸುಧಾರಣೆಗಳನ್ನು ಪರಿಚಯಿಸುವುದಾಗಿ ಪಿ.ಎಂ. ಮೋದಿ ಘೋಷಿಸಿದರು. "ಸರ್ಕಾರವು ಮುಂದಿನ ಪೀಳಿಗೆಯ ಜಿ.ಎಸ್‌.ಟಿ ಸುಧಾರಣೆಗಳನ್ನು ತರಲಿದ್ದು, ಇದು ಸಾಮಾನ್ಯ ಜನರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ನಿಮಗೆ ದೀಪಾವಳಿ ಉಡುಗೊರೆಯಾಗಲಿದೆ," ಎಂದು ಅವರು ಹೇಳಿದರು. ಈ ಸುಧಾರಣೆಗಳು ನಾಗರಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತವೆ ಮತ್ತು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತವೆ ಎಂದು ತಿಳಿಸಿದರು.

ಭವಿಷ್ಯದ ದೃಷ್ಟಿಕೋನ

ಇತರರ ಮಿತಿಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು, ಭಾರತವು ತನ್ನದೇ ಆದ ಪ್ರಗತಿಯ ಮಾರ್ಗವನ್ನು ವಿಸ್ತರಿಸಬೇಕು ಎಂದು ಪ್ರಧಾನಮಂತ್ರಿ ಮೋದಿ ಪುನರುಚ್ಚರಿಸಿದರು. ಹೆಚ್ಚುತ್ತಿರುವ ಆರ್ಥಿಕ ಸ್ವಹಿತಾಸಕ್ತಿಯ ಜಗತ್ತಿನಲ್ಲಿ, ಭಾರತದ ಸಾಮರ್ಥ್ಯಗಳನ್ನು ಬಲಪಡಿಸುವುದು, ಅವಕಾಶಗಳನ್ನು ವಿಸ್ತರಿಸುವುದು ಮತ್ತು ನಾಗರಿಕರನ್ನು ಸಬಲೀಕರಣಗೊಳಿಸುವತ್ತ ಗಮನ ಹರಿಸಬೇಕು. ಈ ಸುಧಾರಣೆಗಳು ವೇಗವರ್ಧಿತ ಆಡಳಿತ ಪರಿವರ್ತನೆಯ ಹಂತದ ಆರಂಭವನ್ನು ಸೂಚಿಸುತ್ತವೆ, ಭಾರತವು ಹೆಚ್ಚು ಸ್ಥಿತಿಸ್ಥಾಪಕ, ಎಲ್ಲರನ್ನೂ ಒಳಗೊಂಡ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗುವುದನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

 

*****


(Release ID: 2156724)