ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ


ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು: ಪ್ರಧಾನಮಂತ್ರಿ

ವಿಜ್ಞಾನ ಮತ್ತು ಆಧ್ಯಾತ್ಮಿಕತೆ, ಎರಡೂ ನಮ್ಮ ರಾಷ್ಟ್ರದ ಶಕ್ತಿ: ಪ್ರಧಾನಮಂತ್ರಿ

ಚಂದ್ರಯಾನದ ಯಶಸ್ಸಿನಿಂದ ದೇಶದ ಮಕ್ಕಳು ಮತ್ತು ಯುವಕರಲ್ಲಿ ವಿಜ್ಞಾನದ ಬಗ್ಗೆ ಹೊಸ ಆಸಕ್ತಿ ಮೂಡಿದೆ, ಬಾಹ್ಯಾಕಾಶವನ್ನು ಅನ್ವೇಷಿಸುವ ಉತ್ಸಾಹ ಹೆಚ್ಚಿದೆ. ಈಗ ನಿಮ್ಮ ಈ ಐತಿಹಾಸಿಕ ಪಯಣವು ಆ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ ನೀಡುತ್ತಿದೆ: ಪ್ರಧಾನಮಂತ್ರಿ

ನಾವು 'ಮಿಷನ್ ಗಗನಯಾನ'ವನ್ನು ಮುನ್ನಡೆಸಬೇಕು, ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಬೇಕು ಮತ್ತು ಚಂದ್ರನ ಮೇಲೆ ಭಾರತೀಯ ಗಗನಯಾತ್ರಿಯನ್ನು ಇಳಿಸಬೇಕು: ಪ್ರಧಾನಮಂತ್ರಿ

ಇಂದು ನಾನು ವಿಶ್ವಾಸದಿಂದ ಹೇಳಬಲ್ಲೆ, ಇದು ಭಾರತದ ಗಗನಯಾನ ಮಿಷನ್‌ ನ ಯಶಸ್ಸಿನ ಮೊದಲ ಅಧ್ಯಾಯ. ನಿಮ್ಮ ಐತಿಹಾಸಿಕ ಪಯಣ ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗಿಲ್ಲ, ಇದು ನಮ್ಮ 'ವಿಕಸಿತ ಭಾರತ'ದ ಪಯಣಕ್ಕೆ ವೇಗ ಮತ್ತು ಹೊಸ ಚೈತನ್ಯವನ್ನು ನೀಡಲಿದೆ: ಪ್ರಧಾನಮಂತ್ರಿ

ಭಾರತವು ಜಗತ್ತಿಗಾಗಿ ಬಾಹ್ಯಾಕಾಶದ ಹೊಸ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯಲಿದೆ: ಪ್ರಧಾನಮಂತ್ರಿ

Posted On: 28 JUN 2025 8:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, "ಶುಭಾಂಶು ಅವರು ಪ್ರಸ್ತುತ ಭಾರತದ ಮಾತೃಭೂಮಿಯಿಂದ ಅತಿ ದೂರದಲ್ಲಿದ್ದರೂ, ಅವರು ಸಮಸ್ತ ಭಾರತೀಯರ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದಾರೆ," ಎಂದು ಬಣ್ಣಿಸಿದರು. "ಶುಭಾಂಶು ಎಂಬ ಹೆಸರೇ ಶುಭ ಸೂಚಕವಾಗಿದ್ದು, ಅವರ ಈ ಪಯಣವು ಒಂದು ನವಯುಗದ ಆರಂಭಕ್ಕೆ ಮುನ್ನುಡಿಯಾಗಿದೆ," ಎಂದು ಶ್ರೀ ಮೋದಿ ನುಡಿದರು. "ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆಯಾಗಿದ್ದರೂ, ಇದರಲ್ಲಿ 140 ಕೋಟಿ ಭಾರತೀಯರ ಭಾವನೆಗಳು ಮತ್ತು ಉತ್ಸಾಹ ಅಡಗಿದೆ. ಶುಭಾಂಶು ಅವರೊಂದಿಗೆ ಮಾತನಾಡುತ್ತಿರುವ ಈ ಧ್ವನಿಯು, ಇಡೀ ರಾಷ್ಟ್ರದ ಸಾಮೂಹಿಕ ಹುಮ್ಮಸ್ಸು ಮತ್ತು ಹೆಮ್ಮೆಯನ್ನು ಹೊತ್ತಿದೆ," ಎಂದು ಅವರು ಹೇಳಿದರು. ಬಾಹ್ಯಾಕಾಶದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕಾಗಿ ಶುಭಾಂಶು ಅವರಿಗೆ ಪ್ರಧಾನಿಯವರು ಹೃತ್ಪೂರ್ವಕ ಅಭಿನಂದನೆಗಳನ್ನು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದರು. ಕೊನೆಯಲ್ಲಿ, ಪ್ರಧಾನಿಯವರು ಶುಭಾಂಶು ಅವರ ಯೋಗಕ್ಷೇಮವನ್ನು ವಿಚಾರಿಸಿದರು ಮತ್ತು ಬಾಹ್ಯಾಕಾಶ ನಿಲ್ದಾಣದಲ್ಲಿ ಎಲ್ಲವೂ ಸುಸೂತ್ರವಾಗಿದೆಯೇ ಎಂದು ಕೇಳಿದರು.

ಪ್ರಧಾನಮಂತ್ರಿಗಳಿಗೆ ಪ್ರತಿಕ್ರಿಯಿಸಿದ ಗಗನಯಾತ್ರಿ ಶುಭಾಂಶು ಶುಕ್ಲಾ, 140 ಕೋಟಿ ಭಾರತೀಯರ ಪರವಾಗಿ ಶುಭ ಹಾರೈಕೆಗಳಿಗೆ ಧನ್ಯವಾದ ಸಲ್ಲಿಸಿದರು. ತಾವು ಉತ್ತಮ ಆರೋಗ್ಯದಿಂದಿರುವುದಾಗಿ ತಿಳಿಸಿದ ಅವರು, ದೊರೆತ ಪ್ರೀತಿ ಮತ್ತು ಆಶೀರ್ವಾದದಿಂದ ತೀವ್ರವಾಗಿ ಭಾವುಕರಾಗಿದ್ದಾಗಿ ನುಡಿದರು. ಕಕ್ಷೆಯಲ್ಲಿ ಕಳೆದ ತಮ್ಮ ಸಮಯವನ್ನು "ಅತ್ಯಂತ ಆಳವಾದ ಮತ್ತು ನವೀನ ಅನುಭವ" ಎಂದು ವಿವರಿಸಿದ ಶುಕ್ಲಾ, ಇದು ತಮ್ಮ ವೈಯಕ್ತಿಕ ಯಾತ್ರೆಯನ್ನು ಮಾತ್ರವಲ್ಲದೆ, ಭಾರತ ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂಬುದನ್ನೂ ಪ್ರತಿಬಿಂಬಿಸುತ್ತದೆ ಎಂದು ನುಡಿದರು. ಭೂಮಿಯಿಂದ ಕಕ್ಷೆಗೆ ತಮ್ಮ 400 ಕಿಲೋಮೀಟರ್ ಪ್ರಯಾಣವು ಅಸಂಖ್ಯಾತ ಭಾರತೀಯರ ಆಕಾಂಕ್ಷೆಗಳ ಸಂಕೇತವಾಗಿದೆ ಎಂದು ಗಗನಯಾತ್ರಿ ಶುಕ್ಲಾ ತಿಳಿಸಿದರು. ತಮ್ಮ ಬಾಲ್ಯವನ್ನು ನೆನಪಿಸಿಕೊಂಡ ಶುಭಾಂಶು, ತಾನು ಎಂದಿಗೂ ಗಗನಯಾತ್ರಿಯಾಗುತ್ತೇನೆ ಎಂದು ಊಹಿಸಿರಲಿಲ್ಲ, ಆದರೆ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ, ಇಂದಿನ ಭಾರತವು ಅಂತಹ ಕನಸುಗಳನ್ನು ನನಸಾಗಿಸಲು ಸಾಧ್ಯವಾಗಿಸಿದೆ ಎಂದು ಹೇಳಿದರು. ಇದನ್ನು ಒಂದು ದೊಡ್ಡ ಸಾಧನೆ ಎಂದು ಕರೆದ ಶುಭಾಂಶು, ಬಾಹ್ಯಾಕಾಶದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಅಪಾರ ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಗುತ್ತಾ, "ಶುಭಾಂಶು ಅವರು ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲಿದ್ದರೂ, ಅವರು ಎಷ್ಟು ಭೂಮಿಗೆ ಹತ್ತಿರವಾಗಿದ್ದಾರೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನೂ ನೋಡಬಹುದು" ಎಂದು ಹೇಳಿದರು. "ಭಾರತದಿಂದ ತೆಗೆದುಕೊಂಡು ಹೋಗಿದ್ದ ಕ್ಯಾರೆಟ್‌ ಹಲ್ವಾವನ್ನು ತಮ್ಮ ಸಹ ಗಗನಯಾತ್ರಿಗಳೊಂದಿಗೆ ಹಂಚಿಕೊಂಡಿದ್ದೀರಾ?" ಎಂದು ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಶುಭಾಂಶು ಶುಕ್ಲಾ ಅವರು, ತಾವು ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಹಲವು ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ತಂದಿರುವುದಾಗಿ ಹಂಚಿಕೊಂಡರು. ಇದರಲ್ಲಿ ಕ್ಯಾರೆಟ್‌ ಹಲ್ವಾ, ಹೆಸರುಬೇಳೆ ಹಲ್ವಾ ಮತ್ತು ಆಮ್ ರಸ್ ಸೇರಿದ್ದವು. ಭಾರತದ ಶ್ರೀಮಂತ ಪಾಕಶಾಲಾ ಪರಂಪರೆಯ ರುಚಿಯನ್ನು ತಮ್ಮ ಅಂತರರಾಷ್ಟ್ರೀಯ ಸಹೋದ್ಯೋಗಿಗಳಿಗೆ ಉಣಬಡಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದ ಅವರು, "ನಾವೆಲ್ಲರೂ ಒಟ್ಟಿಗೆ ಕುಳಿತು ಆ ಖಾದ್ಯಗಳನ್ನು ಸವಿದೆವು, ಮತ್ತು ಅವೆಲ್ಲವೂ ಅವರಿಗೆ ಬಹಳ ಇಷ್ಟವಾದವು," ಎಂದರು. ತಮ್ಮ ಸಹ ಗಗನಯಾತ್ರಿಗಳಿಗೆ ಆ ರುಚಿ ಎಷ್ಟೊಂದು ಹಿಡಿಸಿತೆಂದರೆ, ಅವರಲ್ಲಿ ಕೆಲವರು ಭವಿಷ್ಯದಲ್ಲಿ ಭಾರತದ ನೆಲದಲ್ಲಿಯೇ ಈ ಖಾದ್ಯಗಳನ್ನು ಸವಿಯಲು ಭಾರತಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಶುಭಾಂಶು ಸಂತಸದಿಂದ ತಿಳಿಸಿದರು.

ಪರಿಕ್ರಮ (ಪ್ರದಕ್ಷಿಣೆ)ವು ಶತಮಾನಗಳಿಂದಲೂ ಭಾರತದ ಪೂಜನೀಯ ಸಂಪ್ರದಾಯವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, "ಶುಭಾಂಶು ಅವರಿಗೆ ಈಗ ಸ್ವತಃ ಭೂ ತಾಯಿಯ ಪರಿಕ್ರಮ ಮಾಡುವ ಅಪರೂಪದ ಗೌರವ ಲಭಿಸಿದೆ," ಎಂದು ಹೇಳಿದರು. ಆ ಕ್ಷಣದಲ್ಲಿ ತಾವು ಭೂಮಿಯ ಯಾವ ಭಾಗದ ಮೇಲೆ ಪರಿಭ್ರಮಿಸುತ್ತಿರಬಹುದು ಎಂದು ಅವರು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಗಗನಯಾತ್ರಿ ಶುಭಾಂಶು ಶುಕ್ಲಾ, ಆ ಕ್ಷಣಕ್ಕೆ ನಿಖರ ಸ್ಥಳ ನೆನಪಿಲ್ಲ. ಆದರೆ, ಸ್ವಲ್ಪ ಹೊತ್ತಿಗೆ ಮೊದಲು ಹವಾಯಿ ದ್ವೀಪಗಳ ಮೇಲೆ ಹೋಗುತ್ತಿದ್ದದ್ದನ್ನು ಕಿಟಕಿಯಿಂದ ನೋಡಿದೆ ಎಂದು ಹೇಳಿದರು. ದಿನಕ್ಕೆ 16 ಬಾರಿ ಭೂಮಿಯನ್ನು ಸುತ್ತುತ್ತೇವೆ. ಅಂದರೆ, ಬಾಹ್ಯಾಕಾಶದಿಂದಲೇ 16 ಬಾರಿ ಸೂರ್ಯ ಹುಟ್ಟುವುದನ್ನೂ ಮತ್ತು 16 ಬಾರಿ ಸೂರ್ಯ ಮುಳುಗುವುದನ್ನೂ ನೋಡುತ್ತೇವೆ. ಈ ಅನುಭವ ನನಗೆ ಈಗಲೂ ಅಚ್ಚರಿ ತರುತ್ತಿದೆ ಎಂದು ಹಂಚಿಕೊಂಡರು. ಈಗ ನಾವು ಗಂಟೆಗೆ ಸುಮಾರು 28,000 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದ್ದೇವೆ. ಆದರೆ, ಈ ವೇಗ ಬಾಹ್ಯಾಕಾಶ ನೌಕೆಯ ಒಳಗೆ ಗೊತ್ತಾಗುವುದಿಲ್ಲ ಎಂದು ಅವರು ತಿಳಿಸಿದರು. ಆದರೂ, ಈ ಭಾರೀ ವೇಗವು ಇಂದು ನಮ್ಮ ಭಾರತ ದೇಶ ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂಬುದಕ್ಕೆ ಒಂದು ಸಂಕೇತವಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಗಳಿಗೆ ಉತ್ತರಿಸಿದ ಶುಭಾಂಶು ಶುಕ್ಲಾ, ಕಕ್ಷೆಯನ್ನು ಪ್ರವೇಶಿಸಿ ಆ ಅನಂತ ವಿಸ್ತಾರದ ಬಾಹ್ಯಾಕಾಶವನ್ನು ನೋಡಿದಾಗ, ಅವರಿಗೆ ಮೊಟ್ಟ ಮೊದಲಿಗೆ ಹೊಳೆದದ್ದು ಭೂಮಿಯ ದೃಶ್ಯವೇ ಎಂದು ಹೇಳಿದರು. ಬಾಹ್ಯಾಕಾಶದಿಂದ ನೋಡಿದಾಗ ಯಾವುದೇ ಗಡಿ ರೇಖೆಗಳು ಕಾಣುವುದಿಲ್ಲ – ದೇಶಗಳ ನಡುವೆ ಯಾವುದೇ ಪ್ರತ್ಯೇಕ ವಿಭಾಗಗಳಿರುವುದಿಲ್ಲ. ಅಲ್ಲಿ ಅತ್ಯಂತ ಸ್ಪಷ್ಟವಾಗಿ ಎದ್ದು ಕಾಣುವುದು ಈ ಗ್ರಹದ ಅಖಂಡ ಏಕತೆ ಎಂದು ಅವರು ತಿಳಿಸಿದರು. "ನಾವು ನಕ್ಷೆಗಳಲ್ಲಿ ನೋಡುವಾಗ, ಮೂರು ಆಯಾಮಗಳ ಜಗತ್ತನ್ನು ಕಾಗದದ ಮೇಲೆ ಚಪ್ಪಟೆಗೊಳಿಸುವುದರಿಂದ, ಭಾರತವೂ ಸೇರಿದಂತೆ ದೇಶಗಳ ಗಾತ್ರದ ವಿಕೃತ ಚಿತ್ರಣವನ್ನು ಕಾಣುತ್ತೇವೆ. ಆದರೆ ಬಾಹ್ಯಾಕಾಶದಿಂದ ನೋಡಿದಾಗ, ಭಾರತವು ನಿಜಕ್ಕೂ ಭವ್ಯವಾಗಿ, ಗಾತ್ರದಲ್ಲಿ ಮತ್ತು ಚೈತನ್ಯದಲ್ಲಿ ಗರಿಮೆಭರಿತವಾಗಿ ಗೋಚರಿಸುತ್ತದೆ," ಎಂದು ಶುಭಾಂಶು ನುಡಿದರು. ತಾವು ಅನುಭವಿಸಿದ ಏಕತೆಯ ಅಗಾಧ ಭಾವನೆಯನ್ನು ವಿವರಿಸಿದ ಅವರು, "ಈ ಬಲವಾದ ಅರಿವು, ಭಾರತದ 'ವಿವಿಧತೆಯಲ್ಲಿ ಏಕತೆ' ಎಂಬ ನಾಗರಿಕತೆಯ ಧ್ಯೇಯವಾಕ್ಯಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ," ಎಂದರು. "ಮೇಲಿನಿಂದ ನೋಡಿದಾಗ, ಭೂಮಿಯು ಎಲ್ಲರೂ ಹಂಚಿಕೊಂಡಿರುವ ಒಂದೇ ಮನೆಯಂತೆ ಕಾಣುತ್ತದೆ. ಇದು ಮಾನವಕುಲವು ಸಹಜವಾಗಿ ಹಂಚಿಕೊಂಡಿರುವ ಸಾಮರಸ್ಯ ಮತ್ತು ಅವಿನಾಭಾವ ಸಂಬಂಧವನ್ನು ನಮಗೆ ನೆನಪಿಸುತ್ತದೆ," ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ ಅವರನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ಭೂಮಿಯ ಮೇಲಿನ ಅವರ ಕಠಿಣ ತರಬೇತಿಗೂ ಮತ್ತು ಬಾಹ್ಯಾಕಾಶ ನಿಲ್ದಾಣದೊಳಗಿನ ನಿಜವಾದ ಪರಿಸ್ಥಿತಿಗಳಿಗೂ ಇರುವ ವ್ಯತ್ಯಾಸದ ಬಗ್ಗೆ ಪ್ರಧಾನಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಗನಯಾತ್ರಿ ಶುಭಾಂಶು ಶುಕ್ಲಾ, ಶೂನ್ಯ ಗುರುತ್ವಾಕರ್ಷಣೆ ಮತ್ತು ಅಲ್ಲಿನ ಪ್ರಯೋಗಗಳ ಸ್ವರೂಪದ ಬಗ್ಗೆ ಮೊದಲೇ ತಿಳಿದಿದ್ದರೂ, ಕಕ್ಷೆಯಲ್ಲಿನ ವಾಸ್ತವವು ಸಂಪೂರ್ಣವಾಗಿ ಭಿನ್ನವಾಗಿತ್ತು ಎಂದು ಹೇಳಿದರು. ಮಾನವ ದೇಹವು ಗುರುತ್ವಾಕರ್ಷಣೆಗೆ ಎಷ್ಟು ಒಗ್ಗಿಕೊಳ್ಳುತ್ತದೆ ಎಂದರೆ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ (microgravity) ಚಿಕ್ಕ ಕೆಲಸಗಳೂ ಅನಿರೀಕ್ಷಿತವಾಗಿ ಕ್ಲಿಷ್ಟವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಸಂಭಾಷಣೆಯ ವೇಳೆ ತಮ್ಮ ಕಾಲುಗಳನ್ನು ಕಟ್ಟಿಹಾಕಿಕೊಳ್ಳಬೇಕಾಯಿತು - ಇಲ್ಲದಿದ್ದರೆ ತೇಲಿ ಹೋಗುತ್ತಿದ್ದೆ ಎಂದು ಅವರು ಹಾಸ್ಯಭರಿತವಾಗಿ ಹೇಳಿದರು. ನೀರು ಕುಡಿಯುವುದು ಅಥವಾ ಮಲಗುವಂತಹ ಸರಳ ಕಾರ್ಯಗಳೂ ಬಾಹ್ಯಾಕಾಶದಲ್ಲಿ ದೊಡ್ಡ ಸವಾಲುಗಳಾಗುತ್ತವೆ ಎಂದು ಅವರು ವಿವರಿಸಿದರು.

ಧ್ಯಾನ ಮತ್ತು ಏಕಾಗ್ರತೆಯಿಂದ ತನಗೆ ಪ್ರಯೋಜನವಾಗಿದೆಯೇ ಎಂದು ಕೇಳಿದಾಗ, ಶುಭಾಂಶು ಶುಕ್ಲಾ ಅವರು ಪ್ರಧಾನ ಮಂತ್ರಿಗಳ 'ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಭಾರತದ ಶಕ್ತಿಯ ಅವಳಿ ಸ್ತಂಭಗಳು' ಎಂಬ ಅಭಿಪ್ರಾಯವನ್ನು ಸಂಪೂರ್ಣವಾಗಿ  ಒಪ್ಪಿಕೊಂಡರು. ಭಾರತವು ಈಗಾಗಲೇ ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದೆ ಮತ್ತು ತಮ್ಮ ಈ ಮಿಷನ್ ದೊಡ್ಡ ರಾಷ್ಟ್ರೀಯ ಪಯಣದಲ್ಲಿ ಮೊದಲ ಹೆಜ್ಜೆ ಮಾತ್ರ ಎಂದು ಅವರು ದೃಢಪಡಿಸಿದರು. ಮುಂದಿನ ದಿನಗಳಲ್ಲಿ, ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣಗಳನ್ನು ಸ್ಥಾಪಿಸುವುದು ಸೇರಿದಂತೆ ಅನೇಕ ಭಾರತೀಯರು ಬಾಹ್ಯಾಕಾಶವನ್ನು ತಲುಪುವ ಕನಸನ್ನು ಅವರು ಕಂಡರು. ಅಂತಹ ವಾತಾವರಣದಲ್ಲಿ ಏಕಾಗ್ರತೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಶುಭಾಂಶು ಒತ್ತಿ ಹೇಳಿದರು. ಕಠಿಣ ತರಬೇತಿಯ ಸಮಯದಲ್ಲಿರಲಿ ಅಥವಾ ಉಡಾವಣೆಯ ಹೆಚ್ಚಿನ ಒತ್ತಡದ ಕ್ಷಣಗಳಲ್ಲಿರಲಿ, ಏಕಾಗ್ರತೆಯು ಆಂತರಿಕ ಶಾಂತಿ ಮತ್ತು ಸ್ಪಷ್ಟತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾಹ್ಯಾಕಾಶದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾನಸಿಕವಾಗಿ ಸ್ಥಿರವಾಗಿರುವುದು ಬಹಳ ಮುಖ್ಯ ಎಂದು ಅವರು ಹೇಳಿದರು. ಒಂದು ಆಳವಾದ ಭಾರತೀಯ ಗಾದೆಯನ್ನು ಉಲ್ಲೇಖಿಸಿದ ಅವರು, ಓಡುತ್ತಾ ಊಟ ಮಾಡಲು ಸಾಧ್ಯವಿಲ್ಲ - ಶಾಂತವಾಗಿದ್ದಷ್ಟೂ ಉತ್ತಮ ಆಯ್ಕೆಗಳನ್ನು ಮಾಡಬಹುದು ಎಂದು ಒತ್ತಿ ಹೇಳಿದರು. ವಿಜ್ಞಾನ ಮತ್ತು ಏಕಾಗ್ರತೆಯನ್ನು ಒಟ್ಟಾಗಿ ಅಭ್ಯಾಸ ಮಾಡಿದಾಗ, ಅವು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಂತಹ ಸವಾಲಿನ ಪರಿಸರಕ್ಕೆ ಹೊಂದಿಕೊಳ್ಳಲು ಬಹಳ ಸಹಾಯ ಮಾಡುತ್ತವೆ ಎಂದು ಶುಭಾಂಶು ಹೇಳಿದರು.

ಪ್ರಸ್ತುತ ನಡೆಸಲಾಗುತ್ತಿರುವ ಬಾಹ್ಯಾಕಾಶ ಪ್ರಯೋಗಗಳು ಭವಿಷ್ಯದಲ್ಲಿ ಕೃಷಿ ಅಥವಾ ಆರೋಗ್ಯ ಕ್ಷೇತ್ರಕ್ಕೆ ಪ್ರಯೋಜನಕಾರಿಯಾಗಬಹುದೇ ಎಂದು ಪ್ರಧಾನಮಂತ್ರಿಯವರು ಕೇಳಿದರು. ಇದಕ್ಕೆ ಉತ್ತರಿಸಿದ ಶುಭಾಂಶು ಶುಕ್ಲಾ ಅವರು, ಇದೇ ಮೊದಲ ಬಾರಿಗೆ ಭಾರತೀಯ ವಿಜ್ಞಾನಿಗಳು ಏಳು ವಿಶಿಷ್ಟ ಪ್ರಯೋಗಗಳನ್ನು ವಿನ್ಯಾಸಗೊಳಿಸಿದ್ದು, ಅವುಗಳನ್ನು ತಾವು ಬಾಹ್ಯಾಕಾಶ ನಿಲ್ದಾಣಕ್ಕೆ ತಂದಿರುವುದಾಗಿ ತಿಳಿಸಿದರು. ಅಂದೇ ನಿಗದಿಯಾಗಿದ್ದ ಮೊದಲ ಪ್ರಯೋಗವು "ಸ್ಟೆಮ್ ಸೆಲ್" (ಮೂಲಕೋಶ)ಗಳ ಕುರಿತಾಗಿತ್ತು. "ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ ದೇಹವು ಸ್ನಾಯು ನಷ್ಟವನ್ನು ಅನುಭವಿಸುವುದರಿಂದ, ನಿರ್ದಿಷ್ಟ ಪೂರಕಗಳು (supplements) ಈ ನಷ್ಟವನ್ನು ತಡೆಯಬಲ್ಲವೇ ಅಥವಾ ವಿಳಂಬಗೊಳಿಸಬಲ್ಲವೇ ಎಂಬುದನ್ನು ಪರೀಕ್ಷಿಸುವುದು ಈ ಪ್ರಯೋಗದ ಉದ್ದೇಶ," ಎಂದು ಅವರು ವಿವರಿಸಿದರು. ಈ ಅಧ್ಯಯನದ ಫಲಿತಾಂಶವು, ಭೂಮಿಯ ಮೇಲೆ ವಯೋಸಹಜ ಸ್ನಾಯು ಕ್ಷೀಣತೆಯನ್ನು ಎದುರಿಸುತ್ತಿರುವ ವಯೋವೃದ್ಧರಿಗೆ ನೇರವಾಗಿ ಸಹಾಯ ಮಾಡಬಲ್ಲದು ಎಂದು ಅವರು ಒತ್ತಿ ಹೇಳಿದರು. ಮತ್ತೊಂದು ಪ್ರಯೋಗವು "ಮೈಕ್ರೋಆಲ್ಗೆ" (ಸೂಕ್ಷ್ಮ ಪಾಚಿ)ಗಳ ಬೆಳವಣಿಗೆಯ ಮೇಲೆ ಗಮನಹರಿಸುತ್ತದೆ ಎಂದು ಶುಭಾಂಶು ಮುಂದುವರಿಸಿದರು. ಈ ಸೂಕ್ಷ್ಮ ಪಾಚಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅತ್ಯಂತ ಪೌಷ್ಟಿಕಾಂಶಯುಕ್ತವಾಗಿವೆ. ಬಾಹ್ಯಾಕಾಶದ ಸಂಶೋಧನೆಗಳ ಆಧಾರದ ಮೇಲೆ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ವಿಧಾನಗಳನ್ನು ಅಭಿವೃದ್ಧಿಪಡಿಸಿದರೆ, ಅದು ಭೂಮಿಯ ಮೇಲಿನ ಆಹಾರ ಭದ್ರತೆಗೆ ಗಣನೀಯವಾಗಿ ಸಹಾಯ ಮಾಡಬಲ್ಲದು ಎಂದು ಅವರು ಹೇಳಿದರು. "ಬಾಹ್ಯಾಕಾಶದಲ್ಲಿ ಪ್ರಯೋಗಗಳನ್ನು ನಡೆಸುವುದರ ಒಂದು ಪ್ರಮುಖ ಪ್ರಯೋಜನವೆಂದರೆ, ಅಲ್ಲಿ ಜೈವಿಕ ಪ್ರಕ್ರಿಯೆಗಳು ವೇಗವರ್ಧಿತ ಗತಿಯಲ್ಲಿ ನಡೆಯುತ್ತವೆ. ಇದು ಸಂಶೋಧಕರಿಗೆ ಭೂಮಿಗಿಂತ ಹೆಚ್ಚು ವೇಗವಾಗಿ ಫಲಿತಾಂಶಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ," ಎಂದು ಅವರು ಒತ್ತಿ ಹೇಳಿದರು.

ಚಂದ್ರಯಾನದ ಯಶಸ್ಸಿನ ನಂತರ, ಭಾರತದ ಮಕ್ಕಳು ಮತ್ತು ಯುವಕರಲ್ಲಿ ವಿಜ್ಞಾನದ ಬಗ್ಗೆ ಹೊಸ ಆಸಕ್ತಿ ಮತ್ತು ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಹೆಚ್ಚು ಉತ್ಸಾಹ ಮೂಡಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. "ಶುಭಾಂಶು ಶುಕ್ಲಾ ಅವರ ಈ ಐತಿಹಾಸಿಕ ಪಯಣವು ಆ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇಂದಿನ ಮಕ್ಕಳು ಕೇವಲ ಆಕಾಶವನ್ನು ನೋಡುವುದಿಲ್ಲ, ಬದಲಿಗೆ ತಾವೂ ಅದನ್ನು ತಲುಪಬಲ್ಲೆವು ಎಂದು ನಂಬುತ್ತಾರೆ," ಎಂದು ಶ್ರೀ ಮೋದಿ ನುಡಿದರು. "ಈ ಮನೋಭಾವ ಮತ್ತು ಆಕಾಂಕ್ಷೆಯೇ ಭಾರತದ ಭವಿಷ್ಯದ ಬಾಹ್ಯಾಕಾಶ ಯಾನಗಳ ನಿಜವಾದ ಬುನಾದಿಯಾಗಿದೆ," ಎಂದು ಅವರು ಒತ್ತಿ ಹೇಳಿದರು. ಭಾರತದ ಯುವಜನತೆಗೆ ತಾವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ ಎಂದು ಪ್ರಧಾನಮಂತ್ರಿಯವರು ಶುಭಾಂಶು ಶುಕ್ಲಾ ಅವರನ್ನು ಕೇಳಿದರು. 

ಪ್ರಧಾನಮಂತ್ರಿಯವರ ಮಾತಿಗೆ ಪ್ರತಿಕ್ರಿಯಿಸಿದ ಶುಭಾಂಶು ಶುಕ್ಲಾ ಅವರು, ಭಾರತದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶವು ಸಾಗುತ್ತಿರುವ ಧೈರ್ಯಶಾಲಿ ಮತ್ತು ಮಹತ್ವಾಕಾಂಕ್ಷೆಯ ದಿಕ್ಕನ್ನು ಅವರು ಶ್ಲಾಘಿಸಿದರು. "ಈ ಕನಸುಗಳನ್ನು ನನಸಾಗಿಸಲು ಪ್ರತಿಯೊಬ್ಬ ಯುವ ಭಾರತೀಯನ ಭಾಗವಹಿಸುವಿಕೆ ಮತ್ತು ಬದ್ಧತೆ ಅತ್ಯಗತ್ಯ," ಎಂದು ಅವರು ಒತ್ತಿ ಹೇಳಿದರು. "ಯಶಸ್ಸಿಗೆ ಒಂದೇ ಮಾರ್ಗವಿಲ್ಲ, ಪ್ರತಿಯೊಬ್ಬರೂ ವಿಭಿನ್ನ ಹಾದಿಗಳಲ್ಲಿ ನಡೆಯಬಹುದು, ಆದರೆ ಎಲ್ಲರಲ್ಲೂ ಇರಬೇಕಾದ ಸಾಮಾನ್ಯ ಅಂಶವೆಂದರೆ ಪರಿಶ್ರಮ," ಎಂದು ಅವರು ನುಡಿದರು. "ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ನೀವು ಎಲ್ಲೇ ಇರಿ, ಯಾವ ಮಾರ್ಗವನ್ನೇ ಆರಿಸಿಕೊಳ್ಳಿ, ಸೋಲೊಪ್ಪಿಕೊಳ್ಳದಿರುವ ಮನೋಭಾವವು, ಬೇಗ ಅಥವಾ ತಡವಾಗಿ ಯಶಸ್ಸನ್ನು ಖಚಿತಪಡಿಸುತ್ತದೆ," ಎಂದು ಅವರು ಯುವಕರಿಗೆ ಕರೆ ನೀಡಿದರು.

ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಮಾತುಗಳು ಭಾರತದ ಯುವಜನತೆಯನ್ನು ಹೆಚ್ಚು ಪ್ರೇರೇಪಿಸಲಿವೆ ಎಂದು ತಮಗೆ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಎಂದಿನಂತೆ, ತಾವು ಯಾವುದೇ ಸಂಭಾಷಣೆಯನ್ನು ಕೆಲವು 'ಮನೆಕೆಲಸ' (ಹೋಮ್‌ ವರ್ಕ್) ನೀಡದೆ ಮುಗಿಸುವುದಿಲ್ಲ ಎಂದು ಅವರು ನುಡಿದರು. ಭಾರತವು ಗಗನಯಾನ ಯೋಜನೆಯೊಂದಿಗೆ ಮುನ್ನಡೆಯಬೇಕು, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಬೇಕು, ಮತ್ತು ಭಾರತೀಯ ಗಗನಯಾತ್ರಿಯೊಬ್ಬರನ್ನು ಚಂದ್ರನ ಮೇಲೆ ಇಳಿಸುವ ಗುರಿಯನ್ನು ಸಾಧಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಶುಭಾಂಶು ಅವರ ಬಾಹ್ಯಾಕಾಶ ಅನುಭವಗಳು ಈ ಭವಿಷ್ಯದ ಯೋಜನೆಗಳಿಗೆ ಅತ್ಯಮೂಲ್ಯವಾಗಿವೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಶುಭಾಂಶು ಅವರು ತಮ್ಮ ಮಿಷನ್ ಸಮಯದಲ್ಲಿ ತಮ್ಮ ಅವಲೋಕನಗಳು ಮತ್ತು ಕಲಿಕೆಗಳನ್ನು ಶ್ರದ್ಧೆಯಿಂದ ದಾಖಲಿಸುತ್ತಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿಗಳಿಗೆ ಉತ್ತರಿಸಿದ ಶುಭಾಂಶು ಶುಕ್ಲಾ, ತಮ್ಮ ತರಬೇತಿ ಮತ್ತು ಪ್ರಸ್ತುತ ಮಿಷನ್ ಉದ್ದಕ್ಕೂ ತಾವು ಪ್ರತಿಯೊಂದು ಕಲಿಕೆಯನ್ನೂ ಸ್ಪಂಜಿನಂತೆ ಹೀರಿಕೊಂಡಿರುವುದಾಗಿ ದೃಢಪಡಿಸಿದರು. ಈ ಅನುಭವದಿಂದ ಪಡೆದ ಪಾಠಗಳು ಭಾರತದ ಮುಂಬರುವ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಮೌಲ್ಯಯುತ ಮತ್ತು ಮುಖ್ಯವಾಗಿವೆ ಎಂದು ಅವರು ತಿಳಿಸಿದರು. ಹಿಂದಿರುಗಿದ ನಂತರ, ಈ ಒಳನೋಟಗಳನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಮಿಷನ್‌ ಗಳ ಅನುಷ್ಠಾನವನ್ನು ವೇಗಗೊಳಿಸಲು ಅನ್ವಯಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಿಷನ್‌ ನಲ್ಲಿರುವ ತಮ್ಮ ಅಂತರರಾಷ್ಟ್ರೀಯ ಸಹೋದ್ಯೋಗಿಗಳು ಗಗನಯಾನದಲ್ಲಿ ಭಾಗವಹಿಸುವ ಸಾಧ್ಯತೆಗಳ ಬಗ್ಗೆ ವಿಚಾರಿಸಿದ್ದರು. ಇದು ತಮಗೆ ಉತ್ತೇಜನಕಾರಿಯಾಗಿತ್ತು. ಅದಕ್ಕೆ ತಾವು "ತುಂಬಾ ಬೇಗ" ಎಂದು ಭರವಸೆಯಿಂದ ಉತ್ತರಿಸಿದ್ದಾಗಿ ಹೇಳಿದರು. ಈ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಶುಭಾಂಶು ಪುನರುಚ್ಚರಿಸಿದರು. ಅದನ್ನು ತ್ವರಿತವಾಗಿ ಸಾಧಿಸಲು ತಮ್ಮ ಕಲಿಕೆಗಳನ್ನು ನೂರಕ್ಕೆ ನೂರು ಪ್ರತಿಶತ ಅನ್ವಯಿಸಲು ತಾವು ಸಂಪೂರ್ಣವಾಗಿ ಬದ್ಧನಾಗಿರುವುದಾಗಿ ಹೇಳಿದರು.

ಶುಭಾಂಶು ಶುಕ್ಲಾ ಅವರ ಸಂದೇಶವು ಭಾರತದ ಯುವಜನತೆಗೆ ಸ್ಫೂರ್ತಿ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು, ಈ ಯಾತ್ರೆಗೆ ಮುನ್ನ ಶುಭಾಂಶು ಮತ್ತು ಅವರ ಕುಟುಂಬವನ್ನು ಭೇಟಿಯಾದ ಕ್ಷಣವನ್ನು ಪ್ರೀತಿಯಿಂದ ಸ್ಮರಿಸಿದರು. ಅವರ ಕುಟುಂಬದವರೂ ಕೂಡ ಭಾವನೆ ಮತ್ತು ಉತ್ಸಾಹದಿಂದ ತುಂಬಿದ್ದರು ಎಂದು ಅವರು ನೆನಪಿಸಿಕೊಂಡರು. ಶುಭಾಂಶು ಅವರೊಂದಿಗೆ ಮಾತನಾಡಿದ್ದು ತಮಗೆ ಅತೀವ ಸಂತಸ ತಂದಿದೆ ಎಂದ ಅವರು, ವಿಶೇಷವಾಗಿ ಗಂಟೆಗೆ 28,000 ಕಿಲೋಮೀಟರ್ ವೇಗದಲ್ಲಿ ಕಾರ್ಯನಿರ್ವಹಿಸುವಾಗ ಅವರು ಹೊತ್ತಿರುವ ಗುರುತರ ಜವಾಬ್ದಾರಿಗಳನ್ನು ಶ್ಲಾಘಿಸಿದರು. "ಇದು ಭಾರತದ 'ಗಗನಯಾನ' ಮಿಷನ್‌ ನ ಯಶಸ್ಸಿನ ಮೊದಲ ಅಧ್ಯಾಯವನ್ನು ಬರೆದಿದೆ," ಎಂದು ಪ್ರಧಾನಮಂತ್ರಿಯವರು ದೃಢಪಡಿಸಿದರು. ಶುಭಾಂಶು ಅವರ ಐತಿಹಾಸಿಕ ಪಯಣವು ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗಿಲ್ಲ, ಬದಲಿಗೆ, ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಪ್ರಗತಿಗೆ ಇದು ವೇಗ ಮತ್ತು ಶಕ್ತಿಯನ್ನು ನೀಡಲಿದೆ ಎಂದು ಅವರು ಹೇಳಿದರು. "ಭಾರತವು ಜಗತ್ತಿಗಾಗಿ ಬಾಹ್ಯಾಕಾಶದಲ್ಲಿ ಹೊಸ ದಿಗಂತಗಳನ್ನು ತೆರೆಯುತ್ತಿದೆ, ಮತ್ತು ನಮ್ಮ ದೇಶವು ಇನ್ನು ಮುಂದೆ ಕೇವಲ ಹಾರಾಟ ನಡೆಸುವುದಲ್ಲ, ಬದಲಿಗೆ ಭವಿಷ್ಯದ ಹಾರಾಟಗಳಿಗೆ ಉಡಾವಣಾ ವೇದಿಕೆಗಳನ್ನು (launchpads) ಸಹ ನಿರ್ಮಿಸಲಿದೆ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಕೊನೆಯಲ್ಲಿ, ಪ್ರಶ್ನೆಗಳಿಗೆ ಉತ್ತರಿಸುವ ಬದಲು, ತಮ್ಮ ಮನಸ್ಸಿನಲ್ಲಿರುವ ಯಾವುದೇ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಶುಭಾಂಶು ಅವರಿಗೆ ಪ್ರಧಾನಿಗಳು ಆಹ್ವಾನ ನೀಡಿದರು. ತಾವು ಮತ್ತು ಇಡೀ ದೇಶವು ಅದನ್ನು ಕೇಳಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

ಪ್ರಧಾನಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ ಶುಭಾಂಶು ಶುಕ್ಲಾ, ತಮ್ಮ ತರಬೇತಿ ಮತ್ತು ಬಾಹ್ಯಾಕಾಶ ಪಯಣದುದ್ದಕ್ಕೂ ತಾವು ಕಲಿತ ಪಾಠಗಳ ಅಗಾಧತೆಯನ್ನು ನೆನಪಿಸಿಕೊಂಡರು. ಇದು ತಮ್ಮ ವೈಯಕ್ತಿಕ ಸಾಧನೆಯಾಗಿದ್ದರೂ, ವಾಸ್ತವದಲ್ಲಿ ಇದು ಇಡೀ ದೇಶದ ಬೃಹತ್ ಸಾಮೂಹಿಕ ಸಾಧನೆ ಎಂದು ಅವರು ಒತ್ತಿ ಹೇಳಿದರು. ವೀಕ್ಷಿಸುತ್ತಿರುವ ಪ್ರತಿಯೊಂದು ಮಗು ಮತ್ತು ಯುವಕರನ್ನು ಉದ್ದೇಶಿಸಿ, "ನಿಮ್ಮದೇ ಆದ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವುದು, ಭಾರತದ ಭವಿಷ್ಯವನ್ನೂ ಉಜ್ವಲಗೊಳಿಸಿದಂತೆ" ಎಂದು ನಂಬುವಂತೆ ಅವರು ಉತ್ತೇಜಿಸಿದರು. "ಆಕಾಶ ಎಂದಿಗೂ ಮಿತಿಯಲ್ಲ" – ನನಗಾಗಲೀ, ನಿಮಗಾಗಲೀ, ಅಥವಾ ಭಾರತಕ್ಕಾಗಲೀ – ಎಂದು ಶುಭಾಂಶು ಘೋಷಿಸಿದರು. ಈ ನಂಬಿಕೆಯನ್ನು ದೃಢವಾಗಿ ಹಿಡಿದುಕೊಳ್ಳುವಂತೆ ಯುವಜನರಿಗೆ ಅವರು ಕರೆ ನೀಡಿದರು. ಏಕೆಂದರೆ ಇದು ಅವರ ಮತ್ತು ದೇಶದ ಭವಿಷ್ಯವನ್ನು ಬೆಳಗಲು ಮಾರ್ಗದರ್ಶಿಯಾಗುತ್ತದೆ ಎಂದು ಹೇಳಿದರು. ಪ್ರಧಾನಮಂತ್ರಿಗಳೊಂದಿಗೆ – ಮತ್ತು ಅವರ ಮೂಲಕ 140 ಕೋಟಿ ನಾಗರಿಕರೊಂದಿಗೆ – ಮಾತನಾಡಲು ಅವಕಾಶ ಸಿಕ್ಕಿದ್ದು ತನಗೆ ಅತೀವ ಭಾವೋದ್ವೇಗ ಮತ್ತು ಸಂತಸ ತಂದಿದೆ ಎಂದು ಶುಭಾಂಶು ಹೃತ್ಪೂರ್ವಕವಾಗಿ ತಿಳಿಸಿದರು. ಒಂದು ಹೃತ್ಪೂರ್ವಕ ವಿವರವನ್ನು ಹಂಚಿಕೊಂಡ ಶುಭಾಂಶು, ತಮ್ಮ ಹಿಂಭಾಗದಲ್ಲಿ ಕಾಣುತ್ತಿರುವ ಭಾರತದ ತ್ರಿವರ್ಣ ಧ್ವಜವು ಈ ಮೊದಲು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿಲ್ಲ. ತಾನು ಆಗಮಿಸಿದ ನಂತರವಷ್ಟೇ ಅದನ್ನು ಅಲ್ಲಿ ಹಾರಿಸಲಾಗಿದೆ. ಇದು ಈ ಕ್ಷಣವನ್ನು ಅತ್ಯಂತ ಗಹನ ಮತ್ತು ಭಾವಪೂರ್ಣವಾಗಿಸಿದೆ ಎಂದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತದ ಈ ಉಪಸ್ಥಿತಿಯನ್ನು ಕಂಡು ತಮಗೆ ಅಪಾರ ಹೆಮ್ಮೆ ಎನಿಸುತ್ತಿದೆ ಎಂದು ಅವರು ನುಡಿದರು.

ಶ್ರೀ ಮೋದಿ ಅವರು ಶುಭಾಂಶು ಶುಕ್ಲಾ ಮತ್ತು ಅವರ ಎಲ್ಲ ಸಹ ಗಗನಯಾತ್ರಿಗಳಿಗೆ ಅವರ ಯಾತ್ರೆಯ ಯಶಸ್ಸಿಗಾಗಿ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು. "ಶುಭಾಂಶು ಅವರ ವಾಪಸಾತಿಗಾಗಿ ಇಡೀ ರಾಷ್ಟ್ರವೇ ಕಾಯುತ್ತಿದೆ. ತಾವು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ," ಎಂದು ಅವರು ತಿಳಿಸಿದರು. "ಭಾರತ ಮಾತೆಯ ಗೌರವವನ್ನು ಹೀಗೆಯೇ ಎತ್ತಿ ಹಿಡಿಯುವುದನ್ನು ಮುಂದುವರಿಸಿ," ಎಂದು ಪ್ರೋತ್ಸಾಹಿಸಿದ ಪ್ರಧಾನಿಯವರು, 140 ಕೋಟಿ ನಾಗರಿಕರ ಪರವಾಗಿ ಅಸಂಖ್ಯಾತ ಶುಭ ಹಾರೈಕೆಗಳನ್ನು ಸಲ್ಲಿಸಿದರು. ಕೊನೆಯಲ್ಲಿ, ಶುಭಾಂಶು ಅವರನ್ನು ಇಂತಹ ಎತ್ತರಕ್ಕೆ ತಂದ ಅವರ ಅಪಾರ ಪರಿಶ್ರಮ ಮತ್ತು ಸಮರ್ಪಣಾ ಭಾವಕ್ಕಾಗಿ ತಮ್ಮ  ಕೃತಜ್ಞತೆಯನ್ನು ವ್ಯಕ್ತಪಡಿಸಿ ಪ್ರಧಾನಮಂತ್ರಿಯವರು ಸಂವಾದವನ್ನು ಮುಕ್ತಾಯಗೊಳಿಸಿದರು.

 

 

*****


(Release ID: 2140537)