ಪ್ರಧಾನ ಮಂತ್ರಿಯವರ ಕಛೇರಿ
ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
21 JUN 2025 8:49AM by PIB Bengaluru
ಆಂಧ್ರ ಪ್ರದೇಶ ರಾಜ್ಯಪಾಲರಾದ ಸೈಯದ್ ಅಬ್ದುಲ್ ನಜೀರ್ ಜಿ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ, ನನ್ನ ಆತ್ಮೀಯ ಗೆಳೆಯ ಚಂದ್ರಬಾಬು ನಾಯ್ಡು ಗಾರು, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಕೆ. ರಾಮಮೋಹನ್ ನಾಯ್ಡು ಜಿ, ಪ್ರತಾಪರಾವ್ ಜಾಧವ್ ಜಿ, ಚಂದ್ರಶೇಖರ್ ಜಿ, ಭೂಪತಿ ರಾಜು ಶ್ರೀನಿವಾಸ್ ವರ್ಮಾ ಗಾರು, ರಾಜ್ಯದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗಾರು, ಇಲ್ಲಿರುವ ಇತರೆ ಗಣ್ಯರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ! ನಿಮ್ಮೆಲ್ಲರಿಗೂ ನಮಸ್ಕಾರ!
ಅಂತಾರಾಷ್ಟ್ರೀಯ ಯೋಗ ದಿನದಂದು ದೇಶ ಮತ್ತು ವಿಶ್ವಾದ್ಯಂತದ ಎಲ್ಲರಿಗೂ ನಮಸ್ಕಾರ. ಜೂನ್ 21ರಂದು 11ನೇ ಬಾರಿಗೆ ಇಡೀ ಜಗತ್ತು ಒಟ್ಟಾಗಿ ಯೋಗ ಮಾಡುತ್ತಿದೆ. ಯೋಗ ಎಂದರೆ ಸಂಪರ್ಕ ಸಾಧಿಸುವುದು ಎಂದರ್ಥ, ಯೋಗವು ಇಡೀ ಜಗತ್ತನ್ನು ಹೇಗೆ ಸಂಪರ್ಕಿಸಿದೆ ಎಂಬುದನ್ನು ನೋಡುವುದೇ ಒಂದು ಅದ್ಭುತವಾಗಿದೆ. ಕಳೆದ ದಶಕದಲ್ಲಿ ನಡೆದ ಯೋಗದ ಪ್ರಯಾಣವನ್ನು ನಾನು ಹಿಂತಿರುಗಿ ನೋಡಿದಾಗ, ನನಗೆ ಅನೇಕ ವಿಷಯಗಳು ನೆನಪಾಗುತ್ತವೆ. ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಗುರುತಿಸಲು ಭಾರತವು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ ದಿನ ಮತ್ತು ನಂತರ ಅತಿ ಕಡಿಮೆ ಸಮಯದಲ್ಲಿ ವಿಶ್ವದ 175 ದೇಶಗಳು ನಮ್ಮ ಪ್ರಸ್ತಾಪದೊಂದಿಗೆ ಎದ್ದು ನಿಂತವು. ಇಂದಿನ ಜಗತ್ತಿನಲ್ಲಿ ಅಂತಹ ಒಗ್ಗಟ್ಟು ಮತ್ತು ಬೆಂಬಲ ಸಾಮಾನ್ಯ ಘಟನೆಯೇನಲ್ಲ. ಇದು ಕೇವಲ ಒಂದು ಪ್ರಸ್ತಾವನೆಗೆ ಬೆಂಬಲ ನೀಡುವುದಲ್ಲ, ಮಾನವತೆಯ ಒಳಿತಿಗಾಗಿ ಜಗತ್ತಿನ ಸಾಮೂಹಿಕ ಪ್ರಯತ್ನ ಅದಾಗಿತ್ತು. ಇಂದು 11 ವರ್ಷಗಳ ನಂತರ, ಯೋಗವು ವಿಶ್ವಾದ್ಯಂತದ ಲಕ್ಷಾಂತರ ಜನರ ಜೀವನಶೈಲಿಯ ಭಾಗವಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ನಮ್ಮ ದಿವ್ಯಾಂಗ ಸ್ನೇಹಿತರು ಬ್ರೈಲ್ನಲ್ಲಿ ಯೋಗ ಶಾಸ್ತ್ರಗಳನ್ನು ಓದುತ್ತಾರೆ, ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಯೋಗ ಮಾಡುತ್ತಾರೆ, ಹಳ್ಳಿಗಳ ಯುವ ಸ್ನೇಹಿತರು ಯೋಗ ಒಲಿಂಪಿಯಾಡ್ನಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ನಾನು ನೋಡಿದಾಗ ಹೆಮ್ಮೆಯಾಗುತ್ತದೆ. ಇಲ್ಲಿ ನೋಡಿ, ಎಲ್ಲಾ ನೌಕಾಪಡೆಯ ಹಡಗುಗಳಲ್ಲಿ ಬಹಳ ಅದ್ಭುತವಾದ ಯೋಗ ಕಾರ್ಯಕ್ರಮ ನಡೆಯುತ್ತಿದೆ. ಅದು ಸಿಡ್ನಿ ಒಪೇರಾ ಹೌಸ್ನ ಮೆಟ್ಟಿಲುಗಳಾಗಲಿ, ಅಥವಾ ಎವರೆಸ್ಟ್ ಶಿಖರವಾಗಲಿ, ಅಥವಾ ಸಾಗರದ ವಿಸ್ತಾರವಾಗಲಿ, ಎಲ್ಲೆಡೆ ಸಂದೇಶ ಒಂದೇ ಆಗಿದೆ - ಯೋಗವು ಎಲ್ಲರಿಗೂ ಸೇರಿದ್ದು, ಮತ್ತು ಎಲ್ಲರಿಗೂ ಸೇರಿದೆ. ಯೋಗವು ಎಲ್ಲರಿಗೂ, ಎಲ್ಲಾ ಗಡಿಗಳನ್ನು ದಾಟಿ, ಹಿನ್ನೆಲೆಗಳನ್ನು ಮೀರಿ, ವಯಸ್ಸು ಅಥವಾ ಸಾಮರ್ಥ್ಯವನ್ನು ಮೀರಿ ಮುನ್ನಡೆದಿದೆ.
ಸ್ನೇಹಿತರೆ,
ಇಂದು ನಾವೆಲ್ಲರೂ ವಿಶಾಖಪಟ್ಟಣದಲ್ಲಿದ್ದೇವೆ ಎಂಬುದು ನನಗೆ ಸಂತೋಷವಾಗಿದೆ. ಈ ನಗರವು ಪ್ರಕೃತಿ ಮತ್ತು ಪ್ರಗತಿ ಎರಡರ ಸಂಗಮವಾಗಿದೆ. ಇಲ್ಲಿನ ಜನರು ಈ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಆಯೋಜಿಸಿದ್ದಾರೆ. ಚಂದ್ರಬಾಬು ನಾಯ್ಡು ಗಾರು ಮತ್ತು ಪವನ್ ಕಲ್ಯಾಣ್ ಗಾರು ಅವರನ್ನು ನಾನು ಅಭಿನಂದಿಸುತ್ತೇನೆ, ನಿಮ್ಮ ನೇತೃತ್ವದಲ್ಲಿ ಆಂಧ್ರ ಪ್ರದೇಶವು ಯೋಗಾಂಧ್ರ ಅಭಿಯಾನದ ಒಂದು ದೊಡ್ಡ ಉಪಕ್ರಮವನ್ನು ತೆಗೆದುಕೊಂಡಿದೆ. ನರ ಲೋಕೇಶ್ ಗಾರು ಅವರ ಪ್ರಯತ್ನಗಳನ್ನು ನಾನು ವಿಶೇಷವಾಗಿ ಶ್ಲಾಘಿಸಲು ಬಯಸುತ್ತೇನೆ. ಯೋಗದ ಸಾಮಾಜಿಕ ಆಚರಣೆ ಹೇಗಿರಬೇಕು, ಸಮಾಜದ ಪ್ರತಿಯೊಂದು ವರ್ಗವನ್ನು ಹೇಗೆ ಸಂಪರ್ಕಿಸಬೇಕು, ಕಳೆದ ಒಂದೂವರೆ ತಿಂಗಳ ಯೋಗಾಂಧ್ರ ಅಭಿಯಾನದಲ್ಲಿ ಅವರು ಇದನ್ನು ತೋರಿಸಿದ್ದಾರೆ, ಇದಕ್ಕಾಗಿ ಸಹೋದರ ಲೋಕೇಶ್ ಅವರು ಅನೇಕ ಅಭಿನಂದನೆಗಳಿಗೆ ಅರ್ಹರು. ಸಹೋದರ ಲೋಕೇಶ್ ಮಾಡಿದ ಕೆಲಸವನ್ನು, ಅಂತಹ ಅವಕಾಶಗಳನ್ನು ಸಾಮಾಜಿಕ ಮಟ್ಟಕ್ಕೆ ಹೇಗೆ ಆಳವಾಗಿ ಕೊಂಡೊಯ್ಯಬಹುದು ಎಂಬುದಕ್ಕೆ ಉದಾಹರಣೆಯಾಗಿ ನೋಡಬೇಕು ಎಂದು ನಾನು ನನ್ನ ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.
ಸ್ನೇಹಿತರೆ,
2 ಕೋಟಿಗೂ ಹೆಚ್ಚು ಜನರು ಯೋಗಾಂಧ್ರ ಅಭಿಯಾನದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಇದು ಅಭಿವೃದ್ಧಿ ಹೊಂದಿದ ಭಾರತದ ಮುಖ್ಯ ಆಧಾರಸ್ತಂಭವಾಗಿರುವ ಸಾರ್ವಜನಿಕ ಭಾಗವಹಿಸುವಿಕೆಯ ಮನೋಭಾವವಾಗಿದೆ. ಸಾರ್ವಜನಿಕರು ಸ್ವತಃ ಮುಂದೆ ಬಂದು ಅಭಿಯಾನವನ್ನು ಕೈಗೆತ್ತಿಕೊಂಡಾಗ, ಗುರಿ ಹಾಕಿಕೊಂಡಾಗ, ಆ ಗುರಿ ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಜನರ ಈ ಸದ್ಭಾವನೆ ಮತ್ತು ನಿಮ್ಮ ಪ್ರಯತ್ನಗಳು ಈ ಕಾರ್ಯಕ್ರಮದಲ್ಲಿ ಎಲ್ಲೆಡೆ ಗೋಚರಿಸುತ್ತಿದೆ.
ಸ್ನೇಹಿತರೆ,
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ವಿಷಯ 'ಒಂದು ಭೂಮಿಗೆ ಒಂದು ಆರೋಗ್ಯಕ್ಕೆ ಯೋಗ'. ಈ ವಿಷಯವು ಆಳವಾದ ಸತ್ಯವನ್ನು ಪ್ರತಿಬಿಂಬಿಸುತ್ತದೆ. ಭೂಮಿಯ ಮೇಲಿನ ಪ್ರತಿಯೊಂದು ಅಸ್ತಿತ್ವದ ಆರೋಗ್ಯವು ಪರಸ್ಪರ ಸಂಬಂಧ ಹೊಂದಿದೆ. ಮಾನವ ಯೋಗಕ್ಷೇಮವು ನಮ್ಮ ಆಹಾರವನ್ನು ಬೆಳೆಸುವ ಮಣ್ಣಿನ ಆರೋಗ್ಯದ ಮೇಲೆ, ನಮಗೆ ನೀರು ನೀಡುವ ನದಿಗಳ ಮೇಲೆ, ನಮ್ಮ ಪರಿಸರ ವ್ಯವಸ್ಥೆಗಳನ್ನು ಹಂಚಿಕೊಳ್ಳುವ ಪ್ರಾಣಿಗಳ ಆರೋಗ್ಯದ ಮೇಲೆ, ನಮ್ಮನ್ನು ಪೋಷಿಸುವ ಸಸ್ಯಗಳ ಮೇಲೆ ಅವಲಂಬಿತವಾಗಿದೆ. ಯೋಗವು ಈ ಅಂತರ್-ಸಂಪರ್ಕಕ್ಕೆ ನಮ್ಮನ್ನು ಜಾಗೃತಗೊಳಿಸುತ್ತದೆ. ಯೋಗವು ಪ್ರಪಂಚದೊಂದಿಗೆ ಏಕತೆಯತ್ತ ಪ್ರಯಾಣಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ನಾವು ಪ್ರತ್ಯೇಕ ವ್ಯಕ್ತಿಗಳಲ್ಲ ಆದರೆ ಪ್ರಕೃತಿಯ ಭಾಗ ಎಂಬುದನ್ನು ಅದು ನಮಗೆ ಕಲಿಸುತ್ತದೆ. ಆರಂಭದಲ್ಲಿ ನಾವು ನಮ್ಮ ಸ್ವಂತ ಆರೋಗ್ಯ ಮತ್ತು ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳಲು ಕಲಿಯುತ್ತೇವೆ. ಕ್ರಮೇಣ, ನಮ್ಮ ಕಾಳಜಿ ನಮ್ಮ ಪರಿಸರ, ಸಮಾಜ ಮತ್ತು ಗ್ರಹಕ್ಕೂ ವಿಸ್ತರಿಸುತ್ತದೆ. ಯೋಗವು ಒಂದು ದೊಡ್ಡ ವೈಯಕ್ತಿಕ ಶಿಸ್ತು. ಅದೇ ಸಮಯದಲ್ಲಿ, ಇದು ನಮ್ಮನ್ನು ನನ್ನಿಂದ ನಾವು ಎಂಬ ಸಂದೇಶಕ್ಕೆ ಕರೆದೊಯ್ಯುವ ವ್ಯವಸ್ಥೆಯಾಗಿದೆ.
ಸ್ನೇಹಿತರೆ,
‘ನಾನು - ನಾವು’ ಎಂಬ ಈ ಭಾವನೆ ಭಾರತದ ಆತ್ಮದ ಸಾರವಾಗಿದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ಹಿತಾಸಕ್ತಿಗಳಿಗಿಂತ ಸಮಾಜದ ಬಗ್ಗೆ ಯೋಚಿಸಿದಾಗ ಮಾತ್ರ ಇಡೀ ಮಾನವತೆಗೆ ಪ್ರಯೋಜನವಾಗುತ್ತದೆ. ಭಾರತೀಯ ಸಂಸ್ಕೃತಿ ನಮಗೆ, ಸರ್ವೇ ಭವಂತು ಸುಖಿನ, ಅಂದರೆ, ಎಲ್ಲರ ಕಲ್ಯಾಣ ನನ್ನ ಕರ್ತವ್ಯ ಎಂದು ಕಲಿಸುತ್ತದೆ. ‘ನಾನು’ ಯಿಂದ ‘ನಾವು’ಗೆ ಈ ಪ್ರಯಾಣವು ಸೇವೆ, ಸಮರ್ಪಣೆ ಮತ್ತು ಸಹಬಾಳ್ವೆಯ ಆಧಾರಸ್ತಂಭವಾಗಿದೆ. ಈ ಚಿಂತನೆಯು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ.
ಸ್ನೇಹಿತರೆ,
ದುರದೃಷ್ಟವಶಾತ್, ಇಂದು ಇಡೀ ಜಗತ್ತು ಒಂದು ರೀತಿಯ ಉದ್ವಿಗ್ನತೆ ಎದುರಿಸುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಅಶಾಂತಿ ಮತ್ತು ಅಸ್ಥಿರತೆ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಯೋಗವು ನಮಗೆ ಶಾಂತಿಯ ನಿರ್ದೇಶನವನ್ನು ನೀಡುತ್ತದೆ. ಯೋಗವು ಸಂಪೂರ್ಣ ಲಾಭವಾಗಲು ಸಮತೋಲನವನ್ನು ಉಸಿರಾಡಲು ಮಾನವತೆಯು ಉಸಿರಾಡಬೇಕಾದ ವಿರಾಮ ಸ್ಥಿತಿಯಾಗಿದೆ.
ಈ ಮಹತ್ವದ ಸಂದರ್ಭದಲ್ಲಿ ನಾನು ವಿಶ್ವ ಸಮುದಾಯಕ್ಕೆ ಮನವಿ ಮಾಡಲು ಬಯಸುತ್ತೇನೆ. ಈ ಯೋಗ ದಿನವು ಮಾನವತೆಗಾಗಿ ಯೋಗ 2.O ಯ ಆರಂಭವನ್ನು ಗುರುತಿಸಲಿ, ಅಲ್ಲಿ ಆಂತರಿಕ ಶಾಂತಿಯು ಜಾಗತಿಕ ನೀತಿಯಾಗುತ್ತದೆ. ಇಲ್ಲಿ ಯೋಗವು ಕೇವಲ ವೈಯಕ್ತಿಕ ಅಭ್ಯಾಸವಲ್ಲ, ಆದರೆ ಜಾಗತಿಕ ಪಾಲುದಾರಿಕೆಯ ಮಾಧ್ಯಮವಾಗುತ್ತದೆ. ಪ್ರತಿಯೊಂದು ದೇಶ, ಪ್ರತಿಯೊಂದು ಸಮಾಜವು ಯೋಗವನ್ನು ಜೀವನಶೈಲಿ ಮತ್ತು ಸಾರ್ವಜನಿಕ ನೀತಿಯ ಭಾಗವಾಗಿಸುತ್ತದೆ. ಅಲ್ಲಿ ನಾವು ಒಟ್ಟಾಗಿ ಶಾಂತಿಯುತ, ಸಮತೋಲಿತ ಮತ್ತು ಸುಸ್ಥಿರ ಜಗತ್ತಿಗೆ ಉತ್ತೇಜನ ನೀಡುತ್ತೇವೆ. ಅಲ್ಲಿ ಯೋಗವು ಜಗತ್ತನ್ನು ಸಂಘರ್ಷದಿಂದ ಸಹಕಾರಕ್ಕೆ ಮತ್ತು ಉದ್ವಿಗ್ನತೆಯಿಂದ ಪರಿಹಾರಕ್ಕೆ ಕರೆದೊಯ್ಯುತ್ತದೆ.
ಸ್ನೇಹಿತರೆ,
ಜಗತ್ತಿಗೆ ಯೋಗವನ್ನು ಹರಡಲು, ಭಾರತವು ಆಧುನಿಕ ಸಂಶೋಧನೆಯ ಮೂಲಕ ಯೋಗ ವಿಜ್ಞಾನವನ್ನು ಮತ್ತಷ್ಟು ಬಲಪಡಿಸುತ್ತಿದೆ. ದೇಶದ ಪ್ರಮುಖ ವೈದ್ಯಕೀಯ ಸಂಸ್ಥೆಗಳು ಯೋಗದ ಕುರಿತು ಸಂಶೋಧನೆಯಲ್ಲಿ ತೊಡಗಿವೆ. ಯೋಗದ ವೈಜ್ಞಾನಿಕ ಸ್ವರೂಪವು ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದ ನಮ್ಮ ಪ್ರಯತ್ನವಾಗಿದೆ. ದೇಶದ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಯೋಗ ಕ್ಷೇತ್ರದಲ್ಲಿ ಪುರಾವೆ ಆಧಾರಿತ ಚಿಕಿತ್ಸೆಯನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ. ದೆಹಲಿಯ ಏಮ್ಸ್ ಸಹ ಈ ದಿಕ್ಕಿನಲ್ಲಿ ಉತ್ತಮ ಕೆಲಸ ಮಾಡಿದೆ. ಹೃದಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಮತ್ತು ಮಹಿಳೆಯರ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದಲ್ಲಿ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಏಮ್ಸ್ ಸಂಶೋಧನೆ ಬಹಿರಂಗಪಡಿಸಿದೆ.
ಸ್ನೇಹಿತರೆ,
ರಾಷ್ಟ್ರೀಯ ಆಯುಷ್ ಮಿಷನ್ ಮೂಲಕ ಯೋಗ ಮತ್ತು ಸ್ವಾಸ್ಥ್ಯದ ಮಂತ್ರವನ್ನು ಸಹ ಪ್ರಚಾರ ಮಾಡಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನವು ಇದರಲ್ಲಿ ದೊಡ್ಡ ಪಾತ್ರ ವಹಿಸಿದೆ. ಯೋಗ ಪೋರ್ಟಲ್ ಮತ್ತು ಯೋಗಾಂಧ್ರ ಪೋರ್ಟಲ್ ಮೂಲಕ, ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೋಂದಾಯಿಸಲಾಗಿದೆ. ಇಂದು ದೇಶದ ಮೂಲೆ ಮೂಲೆಗಳಲ್ಲಿ ಹಲವು ಕಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದು ಯೋಗದ ವ್ಯಾಪ್ತಿ ಎಷ್ಟು ವಿಸ್ತರಿಸುತ್ತಿದೆ ಎಂಬುದನ್ನು ತೋರಿಸುತ್ತದೆ.
ಸ್ನೇಹಿತರೆ,
ಇಂದು ಭಾರತದಲ್ಲಿ ಗುಣಪಡಿಸುವ ಮಂತ್ರವು ಇಡೀ ವಿಶ್ವದಲ್ಲೇ ಬಹಳ ಜನಪ್ರಿಯವಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಭಾರತವು ಜಗತ್ತಿಗೆ ಗುಣಪಡಿಸುವ ಅತ್ಯುತ್ತಮ ತಾಣವಾಗುತ್ತಿದೆ. ಇದರಲ್ಲಿ ಯೋಗವು ದೊಡ್ಡ ಪಾತ್ರ ವಹಿಸುತ್ತದೆ. ಯೋಗಕ್ಕಾಗಿ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ರೂಪಿಸಲಾಗಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಯೋಗ ಪ್ರಮಾಣೀಕರಣ ಮಂಡಳಿಯ 6.5 ಲಕ್ಷಕ್ಕೂ ಹೆಚ್ಚು ತರಬೇತಿ ಪಡೆದ ಸ್ವಯಂಸೇವಕರು, ಸುಮಾರು 130 ಮಾನ್ಯತೆ ಪಡೆದ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 10 ದಿನಗಳ ಯೋಗ ಮಾಡ್ಯೂಲ್, ಇಂತಹ ಅನೇಕ ಪ್ರಯತ್ನಗಳು ಸಮಗ್ರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿವೆ. ದೇಶಾದ್ಯಂತ ನಮ್ಮ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತರಬೇತಿ ಪಡೆದ ಯೋಗ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಭಾರತದ ಈ ಸ್ವಾಸ್ಥ್ಯ ಪರಿಸರ ವ್ಯವಸ್ಥೆಯಿಂದ ವಿಶ್ವಾದ್ಯಂತದ ಜನರು ಪ್ರಯೋಜನ ಪಡೆಯುವಂತೆ ವಿಶೇಷ ಇ-ಆಯುಷ್ ವೀಸಾಗಳನ್ನು ನೀಡಲಾಗುತ್ತಿದೆ.
ಸ್ನೇಹಿತರೆ,
ಇಂದು ಯೋಗ ದಿನದಂದು, ನಾನು ಮತ್ತೊಮ್ಮೆ ಸ್ಥೂಲಕಾಯದ ಕಡೆಗೆ ಎಲ್ಲರ ಗಮನ ಸೆಳೆಯಲು ಬಯಸುತ್ತೇನೆ. ಬೊಜ್ಜು ಹೆಚ್ಚಾಗುವುದು ಇಡೀ ಜಗತ್ತಿಗೆ ದೊಡ್ಡ ಸವಾಲಾಗಿದೆ. ನಾನು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಇದನ್ನು ವಿವರವಾಗಿ ಚರ್ಚಿಸಿದ್ದೆ. ಇದಕ್ಕಾಗಿ, ನಮ್ಮ ಆಹಾರದಲ್ಲಿ ಶೇಕಡ 10ರಷ್ಟು ಎಣ್ಣೆಯನ್ನು ಕಡಿಮೆ ಮಾಡುವ ಸವಾಲನ್ನು ಸಹ ನಾನು ಹೇಳಿದ್ದೆ. ಈ ಸವಾಲಿನಲ್ಲಿ ಭಾಗವಹಿಸಲು ನಾನು ಮತ್ತೊಮ್ಮೆ ದೇಶವಾಸಿಗಳು ಮತ್ತು ವಿಶ್ವಾದ್ಯಂತದ ಜನರಿಗೆ ಮನವಿ ಮಾಡುತ್ತೇನೆ. ನಮ್ಮ ಆಹಾರದಲ್ಲಿ ಎಣ್ಣೆ ಸೇವನೆಯನ್ನು ಕನಿಷ್ಠ 10 ಪ್ರತಿಶತದಷ್ಟು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ನಾವು ಜಾಗೃತಿ ಮೂಡಿಸಬೇಕಾಗಿದೆ. ಎಣ್ಣೆ ಸೇವನೆಯನ್ನು ಕಡಿಮೆ ಮಾಡುವುದು, ಅನಾರೋಗ್ಯಕರ ಆಹಾರ ತಪ್ಪಿಸುವುದು ಮತ್ತು ಯೋಗ ಮಾಡುವುದು ಉತ್ತಮ ದೇಹದಾರ್ಢ್ಯ(ಫಿಟ್ನೆಸ್)ಕ್ಕೆ ಪ್ರಮುಖವಾಗಿದೆ.
ಸ್ನೇಹಿತರೆ,
ಯೋಗವನ್ನು ಒಟ್ಟಾಗಿ ಒಂದು ಸಾಮೂಹಿಕ ಚಳುವಳಿಯನ್ನಾಗಿ ಮಾಡೋಣ. ಜಗತ್ತನ್ನು ಶಾಂತಿ, ಆರೋಗ್ಯ ಮತ್ತು ಸಾಮರಸ್ಯದ ಕಡೆಗೆ ಕೊಂಡೊಯ್ಯುವ ಒಂದು ಆಂದೋಲನ. ಪ್ರತಿಯೊಬ್ಬ ವ್ಯಕ್ತಿಯು ಯೋಗದೊಂದಿಗೆ ದಿನ ಪ್ರಾರಂಭಿಸುವ ಮತ್ತು ಜೀವನದಲ್ಲಿ ಸಮತೋಲನ ಕಂಡುಕೊಳ್ಳುವ ಸ್ಥಳವಾಗಬೇಕು. ಪ್ರತಿಯೊಂದು ಸಮಾಜವು ಯೋಗಕ್ಕೆ ಸಂಪರ್ಕ ಹೊಂದಿದ ಮತ್ತು ಒತ್ತಡದಿಂದ ಮುಕ್ತವಾಗಿರುವ ಸ್ಥಳವನ್ನು ಕಂಡುಕೊಳ್ಳಬೇಕು. ಯೋಗವು ಮಾನವತೆಯನ್ನು ಒಟ್ಟಿಗೆ ಬಂಧಿಸುವ ಮಾಧ್ಯಮವಾಗಬೇಕು. 'ಒಂದು ಭೂಮಿಗಾಗಿ ಒಂದು ಆರೋಗ್ಯಕ್ಕಾಗಿ ಯೋಗ'ವು ಜಾಗತಿಕ ನಿರ್ಣಯವಾಗಬೇಕು. ಮತ್ತೊಮ್ಮೆ, ಆಂಧ್ರದ ನಾಯಕತ್ವವನ್ನು ಅಭಿನಂದಿಸುತ್ತಾ, ಆಂಧ್ರದ ಜನರನ್ನು ಅಭಿನಂದಿಸುತ್ತಾ ಮತ್ತು ವಿಶ್ವಾದ್ಯಂತ ಹರಡಿರುವ ಯೋಗಾಭ್ಯಾಸ ಪಟುಗಳು ಮತ್ತು ಯೋಗ ಪ್ರಿಯರನ್ನು ಅಭಿನಂದಿಸುತ್ತಾ, ನಿಮ್ಮೆಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ಕೋರುತ್ತೇನೆ.
ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(Release ID: 2138564)