ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನಗರ ಬೆಳವಣಿಗೆಯ 20 ವರ್ಷಗಳ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


ಭಯೋತ್ಪಾದಕ ಚಟುವಟಿಕೆಗಳು ಕೇವಲ ಪರೋಕ್ಷ ಯುದ್ಧವಲ್ಲ, ಅವುಗಳು ಯೋಜಿತ ತಂತ್ರಗಳಾಗಿವೆ, ಆದ್ದರಿಂದ ಪ್ರತಿಕ್ರಿಯೆಯೂ ಅದೇ ರೀತಿಯಲ್ಲಿ ಇರುತ್ತದೆ: ಪ್ರಧಾನಮಂತ್ರಿ

ನಾವು 'ವಸುಧೈವ ಕುಟುಂಬಕಂ' ಅನ್ನು ನಂಬುತ್ತೇವೆ, ನಾವು ಯಾರೊಂದಿಗೂ ಶತ್ರುತ್ವವನ್ನು ಬಯಸುವುದಿಲ್ಲ, ನಾವು ಪ್ರಗತಿ ಹೊಂದಲು ಬಯಸುತ್ತೇವೆ, ಇದರಿಂದ ನಾವು ಜಾಗತಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡಬಹುದು: ಪ್ರಧಾನಮಂತ್ರಿ

ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು, ಯಾವುದೇ ರಾಜಿ ಇಲ್ಲ, ಇಡೀ ಜಗತ್ತು 'ವಿಕಸಿತ ಭಾರತ' ವನ್ನು ಕೊಂಡಾಡುವ ರೀತಿಯಲ್ಲಿ ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುತ್ತೇವೆ: ಪ್ರಧಾನಮಂತ್ರಿ

ನಗರ ಪ್ರದೇಶಗಳು ನಮ್ಮ ಬೆಳವಣಿಗೆ ಕೇಂದ್ರಗಳಾಗಿವೆ, ನಾವು ನಗರ ಸಂಸ್ಥೆಗಳನ್ನು ಆರ್ಥಿಕತೆಯ ಬೆಳವಣಿಗೆ ಕೇಂದ್ರಗಳನ್ನಾಗಿ ಮಾಡಬೇಕಾಗಿದೆ: ಪ್ರಧಾನಮಂತ್ರಿ

ಇಂದು ನಾವು ಸುಮಾರು ಎರಡು ಲಕ್ಷ ಸ್ಟಾರ್ಟ್ಅಪ್ ಗಳನ್ನು ಹೊಂದಿದ್ದೇವೆ, ಅವುಗಳಲ್ಲಿ ಹೆಚ್ಚಿನವು ಟೈರ್ 2 ಮತ್ತು ಟೈರ್ 3 ನಗರಗಳಲ್ಲಿವೆ ಮತ್ತು ನಮ್ಮ ಹೆಣ್ಣುಮಕ್ಕಳಿಂದ ಮುನ್ನಡೆಸಲ್ಪಡುತ್ತಿವೆ: ಪ್ರಧಾನಮಂತ್ರಿ

ನಮ್ಮ ದೇಶವು ದೊಡ್ಡ ಬದಲಾವಣೆಯನ್ನು ತರುವ ಅಪಾರ ಸಾಮರ್ಥ್ಯವನ್ನು ಹೊಂದಿದೆ, 'ಆಪರೇಷನ್ ಸಿಂಧೂರ್' ಈಗ 140 ಕೋಟಿ ನಾಗರಿಕರ ಜವಾಬ್ದಾರಿಯಾಗಿದೆ: ಪ್ರಧಾನಮಂತ್ರಿ

ನಮ್ಮ 'ಮೇಡ್ ಇನ್ ಇಂಡಿಯಾ' ಬ್ರ್ಯಾಂಡ್ ಬಗ್ಗೆ ನಾವು ಹೆಮ್ಮೆ ಪಡಬೇಕು: ಪ್ರಧಾನಮಂತ್ರಿ

Posted On: 27 MAY 2025 2:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಗುಜರಾತ್ ನಗರ ವಿಕಾಸದ 20 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, 'ನಗರ ಅಭಿವೃದ್ಧಿ ವರ್ಷ 2005'ರ 20 ವರ್ಷಗಳ ನೆನಪಿಗಾಗಿ "ನಗರ ಅಭಿವೃದ್ಧಿ ವರ್ಷ 2025" ಅನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಲ್ಲಿ ವಡೋದರ, ದಹೋದ್, ಭುಜ್, ಅಹಮದಾಬಾದ್ ಮತ್ತು ಗಾಂಧಿನಗರಕ್ಕೆ ಭೇಟಿ ನೀಡಿದಾಗ, ಆಪರೇಷನ್ ಸಿಂಧೂರ್ನ ಯಶಸ್ಸಿನ ಘೋಷಣೆಗಳು ಮತ್ತು ಹಾರಾಡುತ್ತಿದ್ದ ತ್ರಿವರ್ಣ ಧ್ವಜಗಳೊಂದಿಗೆ ದೇಶಭಕ್ತಿಯ ಉತ್ಸಾಹವನ್ನು ಅನುಭವಿಸಿದೆ. ಈ ದೃಶ್ಯ ಅದ್ಭುತವಾಗಿತ್ತು ಮತ್ತು ಈ ಭಾವನೆ ಕೇವಲ ಗುಜರಾತ್ ನಲ್ಲಿ ಮಾತ್ರವಲ್ಲ, ಭಾರತದ ಮೂಲೆಮೂಲೆಯಲ್ಲೂ ಮತ್ತು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಇತ್ತು. "ಭಾರತವು ಭಯೋತ್ಪಾದನೆಯ ಮುಳ್ಳನ್ನು ಕಿತ್ತೊಗೆಯಲು ನಿರ್ಧರಿಸಿತ್ತು ಮತ್ತು ಅದನ್ನು ದೃಢ ಸಂಕಲ್ಪದಿಂದ ಸಾಧಿಸಿತು" ಎಂದು ಪ್ರಧಾನಮಂತ್ರಿಗಳು ನುಡಿದರು.

ಭಾರತದ ವಿಭಜನೆಯಾಗಿ ಮೂರು ಭಾಗಗಳಾದ ತಕ್ಷಣ, 1947ರಲ್ಲಿ ಭಾರತದ ಮೇಲೆ ನಡೆದ ಮೊದಲ ಭಯೋತ್ಪಾದಕ ದಾಳಿಯನ್ನು ಸ್ಮರಿಸಿದ ಶ್ರೀ ಮೋದಿಯವರು, ಒಂದು ಭಾಗವನ್ನು ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನವು ಕಬಳಿಸಿತು ಎಂದು ಹೇಳಿದರು. ಸರ್ದಾರ್ ಪಟೇಲರ ದೂರದೃಷ್ಟಿಯನ್ನು ನೆನಪಿಸಿಕೊಂಡ ಅವರು, ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಪಡೆಯುವವರೆಗೂ ಭಾರತೀಯ ಸೇನೆ ನಿಲ್ಲಬಾರದಿತ್ತು ಎಂದು ಪಟೇಲರು ಪ್ರತಿಪಾದಿಸಿದ್ದನ್ನು ಒತ್ತಿ ಹೇಳಿದರು. ಆದಾಗ್ಯೂ, ಪಟೇಲರ ಸಲಹೆಯನ್ನು ಪಾಲಿಸಲಿಲ್ಲ ಎಂದು ಅವರು ವಿಷಾದಿಸಿದರು. ಕಳೆದ 75 ವರ್ಷಗಳಿಂದ ಭಯೋತ್ಪಾದನೆಯ ಈ ಪರಂಪರೆ ಮುಂದುವರೆದಿದೆ, ಮತ್ತು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಅದರ ಮತ್ತೊಂದು ಭೀಕರ ರೂಪವಾಗಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ರಾಜತಾಂತ್ರಿಕ ಆಟಗಳನ್ನು ಆಡಿದರೂ, ಪಾಕಿಸ್ತಾನವು ಯುದ್ಧದಲ್ಲಿ ಭಾರತದ ಮಿಲಿಟರಿ ಶಕ್ತಿಯನ್ನು ಪದೇ ಪದೇ ಎದುರಿಸಿದೆ ಎಂದು ಅವರು ದೃಢವಾಗಿ ನುಡಿದರು. ಮೂರು ಸಂದರ್ಭಗಳಲ್ಲಿ, ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿದವು, ಇದು ಪಾಕಿಸ್ತಾನವು ನೇರ ಮಿಲಿಟರಿ ಸಂಘರ್ಷದಲ್ಲಿ ಜಯಗಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ತನ್ನ ಮಿತಿಗಳನ್ನು ಪಾಕಿಸ್ತಾನವು ಅರಿತುಕೊಂಡಿದೆ ಎಂದು ಹೇಳಿದ ಶ್ರೀ ಮೋದಿ, ನೆರೆಯ ರಾಷ್ಟ್ರವು ಪರೋಕ್ಷ ಯುದ್ಧಕ್ಕೆ ಮೊರೆ ಹೋಯಿತು ಎಂದು ತಿಳಿಸಿದರು. ವ್ಯವಸ್ಥಿತ ಮಿಲಿಟರಿ ತರಬೇತಿ ಪಡೆದ ಉಗ್ರರನ್ನು ಭಾರತಕ್ಕೆ ನುಗ್ಗಿಸಲಾಯಿತು, ಶಾಂತಿಯುತ ಯಾತ್ರೆ ಕೈಗೊಳ್ಳುವವರೂ ಸೇರಿದಂತೆ ಮುಗ್ಧ ಮತ್ತು ನಿರಾಯುಧ ನಾಗರಿಕರನ್ನು ಗುರಿಯಾಗಿಸುವುದು ಇದರ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.

ಭಾರತದ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇಡೀ ವಿಶ್ವವನ್ನೇ ಒಂದು ಕುಟುಂಬವೆಂದು ಪರಿಗಣಿಸುವ 'ವಸುಧೈವ ಕುಟುಂಬಕಂ' ತತ್ವವನ್ನು ಒತ್ತಿಹೇಳಿದರು. ಭಾರತವು ಈ ಪರಂಪರೆಯನ್ನು ಶತಮಾನಗಳಿಂದ ಪಾಲಿಸಿಕೊಂಡು ಬಂದಿದೆ ಮತ್ತು ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿಯುತ ಹಾಗೂ ಸೌಹಾರ್ದಯುತ ಸಂಬಂಧಗಳನ್ನು ಮುಂದುವರಿಸಲು ಬಯಸುತ್ತದೆ ಎಂದು ತಿಳಿಸಿದರು. ಭಾರತವು ಸದಾ ಶಾಂತಿ ಮತ್ತು ಸ್ಥಿರತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದರೂ, ತನ್ನ ಸಾಮರ್ಥ್ಯಕ್ಕೆ ಪದೇ ಪದೇ ಸವಾಲುಗಳು ಎದುರಾದಾಗ ದೃಢವಾದ ಉತ್ತರಗಳನ್ನು ನೀಡಬೇಕಾಯಿತು ಎಂದು ಪ್ರಧಾನಮಂತ್ರಿಯವರು ಹೇಳಿದರು. ಹಿಂದೆ ಪರೋಕ್ಷ ಯುದ್ಧ ಎಂದು ಕರೆಯಲ್ಪಡುತ್ತಿದ್ದದ್ದು ಈಗ ಬದಲಾಗಿದೆ, ಅದರಲ್ಲೂ ಮೇ 6ರ ಘಟನೆಗಳ ನಂತರ ಪರಿಸ್ಥಿತಿ ಭಿನ್ನವಾಗಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಇಂತಹ ಕೃತ್ಯಗಳನ್ನು ಕೇವಲ ಪರೋಕ್ಷ ಯುದ್ಧ ಎಂದು ಕರೆಯುವುದು ಸರಿಯಲ್ಲ ಎಂದು ಅವರು ಖಚಿತವಾಗಿ ನುಡಿದರು. ಕೇವಲ 22 ನಿಮಿಷಗಳಲ್ಲಿ ಗುರುತಿಸಲಾದ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ದೇಶೀಯವಾಗಿ ಯಾವುದೇ ಸಾಕ್ಷ್ಯವನ್ನು ಪ್ರಶ್ನಿಸಲು ಸಾಧ್ಯವಾಗದಂತೆ, ಕ್ಯಾಮೆರಾ ಸಾಕ್ಷ್ಯದ ಮೂಲಕ ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸಲಾಗಿದೆ. ಇತ್ತೀಚಿನ ಘಟನೆಗಳು ಕೇವಲ ಪರೋಕ್ಷ ಯುದ್ಧವಲ್ಲ, ಬದಲಿಗೆ ಪಾಕಿಸ್ತಾನದ ಒಂದು ಉದ್ದೇಶಪೂರ್ವಕ ಮತ್ತು ಯೋಜಿತ ಮಿಲಿಟರಿ ತಂತ್ರ ಎಂದು ಪ್ರಧಾನ ಮಂತ್ರಿ ಖಚಿತವಾಗಿ ನುಡಿದರು. ಮೇ 6 ರ ಕಾರ್ಯಾಚರಣೆಯ ನಂತರ, ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗಳನ್ನು ಪೂರ್ಣ ಗೌರವಗಳೊಂದಿಗೆ ನಡೆಸಲಾಯಿತು, ಅವರ ಶವಪೆಟ್ಟಿಗೆಗಳನ್ನು ರಾಷ್ಟ್ರೀಯ ಧ್ವಜಗಳಿಂದ ಹೊದಿಸಲಾಗಿತ್ತು ಮತ್ತು ಪಾಕಿಸ್ತಾನದ ಸೈನ್ಯದಿಂದ ವಂದನೆಗಳನ್ನು ಸ್ವೀಕರಿಸಲಾಯಿತು - ಇವು ಕೇವಲ ಪ್ರತ್ಯೇಕ ಉಗ್ರಗಾಮಿ ಕೃತ್ಯಗಳಲ್ಲ, ಬದಲಿಗೆ ಒಂದು ವ್ಯವಸ್ಥಿತ ಯುದ್ಧೋಪಾಯದ ಭಾಗ ಎಂಬುದಕ್ಕೆ ಸ್ಪಷ್ಟ ಸಂಕೇತಗಳಾಗಿವೆ ಎಂದು ಅವರು ಹೇಳಿದರು. ಇಂತಹ ತಂತ್ರಗಳನ್ನು ಬಳಸಿದರೆ, ಅದಕ್ಕೆ ಸರಿಸಮಾನವಾದ ಮತ್ತು ನಿರ್ಣಾಯಕ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

ಭಾರತ ಸದಾ ಪ್ರಗತಿ ಮತ್ತು ಸರ್ವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ, ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನೆರವಿನ ಹಸ್ತ ಚಾಚುತ್ತಲೇ ಬಂದಿದೆ. ಆದಾಗ್ಯೂ, ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ, ನಮ್ಮ ರಾಷ್ಟ್ರವು ಪದೇ ಪದೇ ಹಿಂಸಾತ್ಮಕ ಪ್ರತೀಕಾರಕ್ಕೆ ಗುರಿಯಾಗಿದೆ ಎಂದು ವಿಷಾದದಿಂದ ಪ್ರಸ್ತಾಪಿಸಿದರು. ಯುವ ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಶಕಗಳಿಂದ ಈ ದೇಶದ ಅಡಿಪಾಯವನ್ನೇ ಹೇಗೆ ವ್ಯವಸ್ಥಿತವಾಗಿ ಶಿಥಿಲಗೊಳಿಸಲಾಗಿದೆ ಎಂಬುದನ್ನು ಅವರು ಅರಿಯಬೇಕೆಂದು ಕರೆ ನೀಡಿದರು. ತಾತ್ಕಾಲಿಕವಾಗಿ ತಡೆಹಿಡಿಯಲ್ಪಟ್ಟಿದ್ದ ಸಿಂಧೂ ಜಲ ಒಪ್ಪಂದದ ಕುರಿತು ಪ್ರಸ್ತಾಪಿಸುತ್ತಾ, , ಪ್ರಧಾನಮಂತ್ರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿನ ಜಲಸಂಪನ್ಮೂಲಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸಿದರು. ನದಿಗಳ ಮೇಲೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದರೂ, ಅರವತ್ತು ವರ್ಷಗಳಿಂದ ಸರಿಯಾದ ನಿರ್ವಹಣೆ ಮತ್ತು ಹೂಳೆತ್ತುವಿಕೆಯನ್ನು ನಿರ್ಲಕ್ಷಿಸಲಾಗಿತ್ತು ಎಂದು ಅವರು ಗಮನಸೆಳೆದರು. ನೀರಿನ ನಿಯಂತ್ರಣಕ್ಕಾಗಿ ನಿರ್ಮಿಸಲಾದ ಗೇಟುಗಳನ್ನು ತೆರೆಯದೆ ಬಿಟ್ಟಿದ್ದರಿಂದ, ಸಂಗ್ರಹ ಸಾಮರ್ಥ್ಯವು ಪೂರ್ಣ ಬಳಕೆಯಿಂದ ಕೇವಲ ಎರಡರಿಂದ ಮೂರು ಪ್ರತಿಶತಕ್ಕೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಭಾರತೀಯರು ತಮ್ಮ ನ್ಯಾಯಯುತವಾದ ನೀರಿನ ಪಾಲನ್ನು ಪಡೆಯಲೇಬೇಕು ಮತ್ತು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇನ್ನೂ ಇಡಬೇಕಾಗಿದ್ದರೂ, ಆರಂಭಿಕ ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

ಭಾರತವು ಯಾವುದೇ ರಾಷ್ಟ್ರದೊಂದಿಗೆ ವೈರತ್ವವನ್ನು ಬಯಸದೆ, ಶಾಂತಿ ಮತ್ತು ಸಮೃದ್ಧಿಯನ್ನೇ ಆಕಾಂಕ್ಷಿಸುತ್ತದೆ ಎಂದು ವಿಶೇಷವಾಗಿ ಪ್ರತಿಪಾದಿಸಿದ ಶ್ರೀ ನರೇಂದ್ರ ಮೋದಿಯವರು, ರಾಷ್ಟ್ರದ ಪ್ರಗತಿಯ ಬದ್ಧತೆ ಮತ್ತು ವಿಶ್ವಕಲ್ಯಾಣಕ್ಕೆ ತನ್ನ ಕೊಡುಗೆಯನ್ನು ನೀಡುವ ದೃಢ ನಿಲುವನ್ನು ಪುನರುಚ್ಚರಿಸಿದರು. ಅಚಲವಾದ ಸಂಕಲ್ಪದೊಂದಿಗೆ ಭಾರತವು ತನ್ನ ಪ್ರಜೆಗಳ ಸರ್ವತೋಮುಖ ಹಿತಕ್ಕಾಗಿ ಸಂಪೂರ್ಣವಾಗಿ ಮುಡಿಪಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಮೇ 26 ರ ದಿನವನ್ನು ನೆನಪಿಸಿಕೊಳ್ಳುತ್ತಾ, 2014 ರಲ್ಲಿ ತಾವು ಪ್ರಧಾನಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಸ್ಮರಣೀಯ ವಾರ್ಷಿಕೋತ್ಸವ ಇದಾಗಿದೆ ಎಂದು ಶ್ರೀ ಮೋದಿಯವರು ಉಲ್ಲೇಖಿಸಿದರು. ಅಂದಿನ ದಿನಗಳಲ್ಲಿ, ಭಾರತವು ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ 11ನೇ ಸ್ಥಾನದಲ್ಲಿತ್ತು. ಕೋವಿಡ್-19 ಮಹಾಮಾರಿಯ ವಿರುದ್ಧದ  ಕಠಿಣ ಹೋರಾಟ, ನೆರೆಯ ರಾಷ್ಟ್ರಗಳೊಂದಿಗಿನ ಸವಾಲುಗಳು ಹಾಗೂ ನೈಸರ್ಗಿಕ ವಿಕೋಪಗಳು ಸೇರಿದಂತೆ ದೇಶವು ಎದುರಿಸಿದ ಅನೇಕ ಅಗ್ನಿಪರೀಕ್ಷೆಗಳನ್ನು ಅವರು ವಿವರಿಸಿದರು. ಈ ಎಲ್ಲಾ ವಿಷಮಕಾರಿ ಅಡೆತಡೆಗಳ ನಡುವೆಯೂ, ಭಾರತವು ಜಾಗತಿಕವಾಗಿ 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿಯುವ ಮೂಲಕ ದಾಖಲಿಸಿದ ನಾಗಾಲೋಟದ ಆರ್ಥಿಕ ಪ್ರಗತಿಯನ್ನು ಅವರು ಹೆಮ್ಮೆಯಿಂದ ಪ್ರಸ್ತಾಪಿಸಿದರು. ಪ್ರಧಾನಮಂತ್ರಿಯವರು, ದೇಶದ ಅಭಿವೃದ್ಧಿಯ ದೂರದೃಷ್ಟಿ ಮತ್ತು ಪ್ರಗತಿಯ ಪಥದಲ್ಲಿ ಮುನ್ನಡೆಯುವ ಅದರ ಅಚಲವಾದ ಬದ್ಧತೆಯನ್ನು ಮತ್ತೊಮ್ಮೆ ದೃಢೀಕರಿಸಿದರು. ತಾವು ಬೆಳೆದು ಬಂದ ಗುಜರಾತಿನ ನೆಲ, ಅಲ್ಲಿನ ಸಂಸ್ಕಾರದಿಂದ ತಾವು ಮೈಗೂಡಿಸಿಕೊಂಡ ಜೀವನಪಾಠಗಳು ಮತ್ತು ಮೌಲ್ಯಗಳನ್ನು ಅವರು ಭಾವನಾತ್ಮಕವಾಗಿ ಸ್ಮರಿಸಿಕೊಂಡರು. ನಾಡಿನ ಜನತೆ ತಮ್ಮ ಮೇಲೆ ಇರಿಸಿರುವ ಅಪಾರ ವಿಶ್ವಾಸ, ಅವರ ಆಶೋತ್ತರಗಳು ಮತ್ತು ಕನಸುಗಳಿಗೆ ಶಿರಬಾಗಿ ನಮಿಸಿದ ಅವರು, ಅವರ ಏಳಿಗೆಗಾಗಿ ತಮ್ಮನ್ನು ತಾವು ನಿರಂತರವಾಗಿ ಪುನರ್ ಸಮರ್ಪಿಸಿಕೊಳ್ಳುವುದಾಗಿ ವಾಗ್ದಾನ ಮಾಡಿದರು.

ನಗರಾಭಿವೃದ್ಧಿ ಕ್ಷೇತ್ರದಲ್ಲಿ ಗುಜರಾತ್ ಸರ್ಕಾರದ ಅಚಲ ಬದ್ಧತೆಯ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ರಾಜ್ಯ ಸರ್ಕಾರವು ಈ ಮಹತ್ತರವಾದ ಉಪಕ್ರಮಕ್ಕೆ 2005 ರಲ್ಲೇ ನಾಂದಿ ಹಾಡಿ, ಇದೀಗ ಎರಡು ದಶಕಗಳ ಯಶೋಗಾಥೆಯನ್ನು ಪೂರೈಸಿರುವುದನ್ನು ಶ್ಲಾಘಿಸಿದರು. ಕೇವಲ ಹಿಂದಿನ ಸಾಧನೆಗಳನ್ನು ಸಂಭ್ರಮಿಸುವುದಕ್ಕಷ್ಟೇ ತೃಪ್ತಿಪಡದೆ, ಕಳೆದ ಇಪ್ಪತ್ತು ವರ್ಷಗಳ ಅನುಭವದಿಂದ ಗಳಿಸಿದ ಅಮೂಲ್ಯ ಕಲಿಕೆಗಳನ್ನು ಮೈಗೂಡಿಸಿಕೊಂಡು, ಮುಂದಿನ ಪೀಳಿಗೆಯ ಅಗತ್ಯಗಳನ್ನು ಪೂರೈಸುವಂತಹ ಭವಿಷ್ಯೋನ್ಮುಖ ನಗರ ಅಭಿವೃದ್ಧಿಯ ಸಮಗ್ರ ಮಾರ್ಗನಕ್ಷೆಯನ್ನು ಸರ್ಕಾರವು ರೂಪಿಸಿರುವುದನ್ನು ಅವರು ವಿಶೇಷವಾಗಿ ಕೊಂಡಾಡಿದರು. ಗುಜರಾತಿನ ಜನತೆಗೆ ಇದೀಗ ಅನಾವರಣಗೊಳಿಸಿರುವ ಈ ಮಾರ್ಗನಕ್ಷೆಯು, ಸುಸ್ಥಿರ ಪ್ರಗತಿಯ ಒಂದು ಸುಸಂಘಟಿತ ಹಾಗೂ ವ್ಯವಸ್ಥಿತವಾದ ದೂರದೃಷ್ಟಿಯ ದ್ಯೋತಕವಾಗಿದೆ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು. ಇಂತಹ ಮುನ್ನೋಟದ ನಗರ ವಿಕಾಸ ಕಾರ್ಯತಂತ್ರವನ್ನು ಸಾಕಾರಗೊಳಿಸುವಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಅವರ ತಂಡದ ಅವಿರತ ಪ್ರಯತ್ನ ಮತ್ತು ಸಮರ್ಪಣಾ ಭಾವವನ್ನು ಅವರು ಅಭಿನಂದಿಸಿದರು.

ಭಾರತದ ಗಮನಾರ್ಹ ಆರ್ಥಿಕ ಮುನ್ನಡೆಯನ್ನು ವಿಶೇಷವಾಗಿ ಒತ್ತಿಹೇಳಿದ ಶ್ರೀ ನರೇಂದ್ರ ಮೋದಿಯವರು, ಜಾಗತಿಕ ರಂಗದಲ್ಲಿ ಪ್ರತಿಸ್ಪರ್ಧಿಗಳನ್ನು ಮೀರಿ ಮುಂಚೂಣಿಗೆ ಬರುವುದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿಯೆಂದು ಪ್ರತಿಪಾದಿಸಿದರು. ಭಾರತವು ವಿಶ್ವ ಆರ್ಥಿಕ ಶ್ರೇಯಾಂಕದಲ್ಲಿ ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿದಾಗ ನಾಗರಿಕರಲ್ಲಿ, ಅದರಲ್ಲೂ ವಿಶೇಷವಾಗಿ ಯುವಶಕ್ತಿಯಲ್ಲಿದ್ದ ಅಭೂತಪೂರ್ವ ಸಂಭ್ರಮ ಮತ್ತು ಅಪಾರ ಉತ್ಸಾಹವನ್ನು ಅವರು ಸ್ಮರಿಸಿಕೊಂಡರು. ಒಂದು ಕಾಲದಲ್ಲಿ ನಮ್ಮನ್ನಾಳಿದ ವಸಾಹತುಶಾಹಿ ಶಕ್ತಿಯಾದ ಯುನೈಟೆಡ್ ಕಿಂಗ್ಡಮ್ ಅನ್ನು ಭಾರತವು ಆರ್ಥಿಕತೆಯಲ್ಲಿ ಮೀರಿಸಿ ನಿಂತದ್ದು ಒಂದು ಐತಿಹಾಸಿಕ ಪರ್ವವೆಂದು ಅವರು ಬಣ್ಣಿಸಿದರು.  ಭಾರತವು ಪ್ರಸ್ತುತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದರೂ, ಮೂರನೇ ಸ್ಥಾನವನ್ನು ತಲುಪಬೇಕೆಂಬ ಒತ್ತಡವು ತೀವ್ರಗೊಳ್ಳುತ್ತಿದೆ ಎಂದು ಶ್ರೀ ಮೋದಿಯವರು ನುಡಿದರು. 2047 ರ ವೇಳೆಗೆ, ಭಾರತವು ಸ್ವಾತಂತ್ರ್ಯದ ಅಮೂಲ್ಯ 100 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ, ಸಮೃದ್ಧಿಯುತ, ಶಕ್ತಿಶಾಲಿ ರಾಷ್ಟ್ರವೆಂಬ ಜಾಗತಿಕ ಮನ್ನಣೆಯೊಂದಿಗೆ ಪರಿಪೂರ್ಣ ವಿಕಸಿತ ರಾಷ್ಟ್ರವಾಗಿ ರೂಪುಗೊಳ್ಳಲೇಬೇಕೆಂದು ಅವರು ತಮ್ಮ ದೃಢ ಸಂಕಲ್ಪವನ್ನು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನಪಿಗೆ ತಂದುಕೊಂಡ ಅವರು, ಭಗತ್ ಸಿಂಗ್, ರಾಜಗುರು, ನೇತಾಜಿ ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್, ಶ್ಯಾಮ್ ಜಿ ಕೃಷ್ಣ ವರ್ಮಾ, ಮಹಾತ್ಮ ಗಾಂಧಿ ಹಾಗೂ ಸರ್ದಾರ್ ಪಟೇಲ್ ಅವರಂತಹ ಅಪ್ರತಿಮ ನಾಯಕರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿದರು. ಆ ಕಾಲಘಟ್ಟದಲ್ಲಿ ಕೇವಲ 25-30 ಕೋಟಿಗಳಷ್ಟಿದ್ದ ಜನಸಂಖ್ಯೆಯು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅಚಲವಾದ ಸಂಕಲ್ಪವನ್ನು ತೋರದಿದ್ದಲ್ಲಿ, 1947ರಲ್ಲಿ ಸ್ವಾತಂತ್ರ್ಯದ ಸೂರ್ಯೋದಯವನ್ನು ಕಾಣಲು ಬಹುಶಃ ಸಾಧ್ಯವಾಗುತ್ತಿರಲಿಲ್ಲವೇನೋ ಎಂದು ಅವರು ಸ್ಮರಿಸಿದರು. ನಮ್ಮ ಹಿಂದಿನ ಪೀಳಿಗೆಯು ಕೇವಲ 20-35 ವರ್ಷಗಳ ಅವಧಿಯಲ್ಲಿ ದಾಸ್ಯದ ಸಂಕೋಲೆಗಳನ್ನು ಕಿತ್ತೊಗೆಯಲು ಶಕ್ತರಾಗಿದ್ದರೆ, ಇಂದಿನ 140 ಕೋಟಿ ಭಾರತೀಯರು ಮುಂದಿನ 25 ವರ್ಷಗಳಲ್ಲಿ ವಿಕಸಿತ ಭಾರತದ ಮಹಾನ್ ಕನಸನ್ನು ನನಸಾಗಿಸುವ ಸಾಮರ್ಥ್ಯವನ್ನು ಖಂಡಿತವಾಗಿಯೂ ಹೊಂದಿದ್ದಾರೆ ಎಂದು ಅವರು ಅಚಲ ವಿಶ್ವಾಸ ವ್ಯಕ್ತಪಡಿಸಿದರು. 2035 ರತ್ತ ದೃಷ್ಟಿ ಹರಿಸಿದ ಶ್ರೀ ಮೋದಿಯವರು, ಗುಜರಾತ್ ರಾಜ್ಯೋತ್ಸವದ ಅಮೃತ ಮಹೋತ್ಸವಕ್ಕಾಗಿ (75ನೇ ವಾರ್ಷಿಕೋತ್ಸವ) ಯೋಜಿಸುವ ಮಹತ್ವವನ್ನು ಒತ್ತಿ ಹೇಳಿದರು. ಕೈಗಾರಿಕೆ, ಕೃಷಿ, ಶಿಕ್ಷಣ ಮತ್ತು ಕ್ರೀಡೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ರಾಜ್ಯದ ಭವ್ಯ ಭವಿಷ್ಯವನ್ನು ನಿರ್ಮಿಸಲು ಈಗಿನಿಂದಲೇ ಸಿದ್ಧತೆಗಳು ಆರಂಭವಾಗಬೇಕೆಂದು ಅವರು ಸ್ಪಷ್ಟಪಡಿಸಿದರು. ಗುಜರಾತಿನ ಪ್ರಗತಿಯು ದೇಶದ ವಿಕಾಸ ಯಾತ್ರೆಯೊಂದಿಗೆ, ದೇಶದ ಪ್ರಗತಿಯ ರಥದೊಂದಿಗೆ ಹೆಜ್ಜೆ ಹಾಕುವುದನ್ನು ಖಚಿತಪಡಿಸಿಕೊಳ್ಳಲು ಒಗ್ಗಟ್ಟಿನ ಸಂಕಲ್ಪಕ್ಕೆ ಅವರು ಕರೆ ನೀಡಿದರು. ಅಲ್ಲದೆ, 2036 ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಮಹತ್ತರ ಆಕಾಂಕ್ಷೆಗಳನ್ನೂ ಅವರು ಪ್ರಸ್ತಾಪಿಸುತ್ತಾ, ಜಾಗತಿಕ ನೇತೃತ್ವ ವಹಿಸಲು ರಾಷ್ಟ್ರವು ಸಜ್ಜಾಗಿರುವುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಗುಜರಾತ್ ರಾಜ್ಯ ಸ್ಥಾಪನೆಯಾದಂದಿನಿಂದ ಅದು ಕ್ರಮಿಸಿದ ಅದ್ವಿತೀಯ ವಿಕಾಸಯಾತ್ರೆಯನ್ನು ಪ್ರಧಾನಮಂತ್ರಿಯವರು ಅವಲೋಕಿಸಿದರು. ಅದರ ಉದಯೋನ್ಮುಖ ದಿನಗಳಲ್ಲಿ, ರಾಜ್ಯದ ಭೌಗೋಳಿಕ ಹಾಗೂ ಆರ್ಥಿಕ ಮಿತಿಗಳನ್ನು ಮುಂದೊಡ್ಡಿ, ಅನೇಕರು ಅದರ ಅಭಿವೃದ್ಧಿಯ ಸಾಮರ್ಥ್ಯದ ಕುರಿತು ಅನುಮಾನದ ಕರಿನೆರಳನ್ನು ಹರಡಿದ್ದನ್ನು ಅವರು ನೆನಪಿಸಿಕೊಂಡರು. ಆದಾಗ್ಯೂ, ಕೇವಲ ಉಪ್ಪು ಉತ್ಪಾದನೆಗೆ ಹೆಸರಾಗಿದ್ದ ನೆಲದಿಂದ, ವಜ್ರದ ಉದ್ಯಮದಲ್ಲಿ ವಿಶ್ವದ ಅಗ್ರಗಣ್ಯ ಶಕ್ತಿಯಾಗಿ ಗುಜರಾತ್ ಸಾಧಿಸಿದ ಕಲ್ಪನಾತೀತ ಪರಿವರ್ತನೆಯನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಅಭೂತಪೂರ್ವ ಯಶೋಗಾಥೆಯ ಸಂಪೂರ್ಣ ಶ್ರೇಯವನ್ನು ವ್ಯವಸ್ಥಿತ ನೀಲನಕ್ಷೆ ಹಾಗೂ ದಾರ್ಶನಿಕ ಮುನ್ನೋಟದ ಕ್ರಿಯಾಯೋಜನೆಗಳಿಗೆ ಅವರು ಅರ್ಪಿಸಿದರು. ಇದೇ ಹೊತ್ತಿನಲ್ಲಿ, ಆಡಳಿತ ನಿರ್ವಹಣೆಯ ಕ್ಲಿಷ್ಟಕರ ಸವಾಲುಗಳತ್ತಲೂ ಗಮನ ಸೆಳೆದ ಪ್ರಧಾನಮಂತ್ರಿಗಳು, ತಮ್ಮ ತಮ್ಮ ಪರಿಧಿಗಷ್ಟೇ ಸೀಮಿತಗೊಂಡು, ವಿಘಟಿತ ಮನೋಭಾವದಿಂದ ಕಾರ್ಯನಿರ್ವಹಿಸುವ ಸರ್ಕಾರಿ ಇಲಾಖೆಗಳು ಹಲವೊಮ್ಮೆ ಪ್ರಗತಿಯ ರಥಕ್ಕೆ ಅಡ್ಡಗಾಲು ಹಾಕುವ ಅಥವಾ ಅದರ ಗತಿಯನ್ನು ಕುಂಠಿತಗೊಳಿಸುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ವಿವಿಧ ಸಚಿವಾಲಯಗಳ ನಡುವೆ ಅನ್ಯೋನ್ಯ ಸಹಕಾರ ಮತ್ತು ಸಮನ್ವಯದಿಂದ, ಅತ್ಯಂತ ದಕ್ಷತೆಯಿಂದ ಕಾರ್ಯೋನ್ಮುಖವಾಗುವ ‘ಸಮಗ್ರ-ಸರ್ಕಾರದ’ (whole-of-government approach) ಕಾರ್ಯಶೈಲಿಯ ಮಹತ್ವವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಒಂದೊಂದು ನಿರ್ದಿಷ್ಟ ಕ್ಷೇತ್ರಕ್ಕೆ ಒಂದೊಂದು ವರ್ಷವನ್ನು ಸಮರ್ಪಿಸಿ, ಆಳವಾದ ಗಮನ ಹರಿಸುವ ಗುಜರಾತಿನ ಅನನ್ಯ ಕಾರ್ಯಶೈಲಿಯನ್ನು ಪ್ರಧಾನಮಂತ್ರಿಗಳು ಉದಾಹರಿಸಿದರು – ಉದಾಹರಣೆಗೆ, 2005 ರಲ್ಲಿ ನಗರ ಅಭಿವೃದ್ಧಿಗೆ, ಮತ್ತೊಂದು ವರ್ಷದಲ್ಲಿ ಬಾಲಕಿಯರ ಶಿಕ್ಷಣಕ್ಕೆ, ಹಾಗೂ ಇನ್ನೊಂದು ಘಟ್ಟದಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಿದ್ದು. “ಕುಚ್ ದಿನ್ ತೋ ಗುಜಾರೋ ಗುಜರಾತ್ ಮೇಂ” ಎಂಬ ಪ್ರಖ್ಯಾತ ಪ್ರಚಾರಾಂದೋಲನವನ್ನು ಅವರು ನೆನಪಿಸಿಕೊಂಡರು; ಇದು ಪ್ರವಾಸೋದ್ಯಮದ ನಾಗಾಲೋಟಕ್ಕೆ ಕಾರಣವಾಗಿ, ಸೋಮನಾಥ, ದ್ವಾರಕಾ ಮತ್ತು ಅಂಬಾಜಿಯಂತಹ ಪುಣ್ಯಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳ ಅಭೂತಪೂರ್ವ ಅಭಿವೃದ್ಧಿಗೆ ದಾರಿಮಾಡಿಕೊಟ್ಟಿತು. ಪ್ರಧಾನಮಂತ್ರಿಯವರು ನಗರ ಅಭಿವೃದ್ಧಿಯಲ್ಲಿ, ವಿಶೇಷವಾಗಿ ಅಹಮದಾಬಾದ್ ನಲ್ಲಿ ತಾವು ಎದುರಿಸಿದ ಸವಾಲುಗಳು ಮತ್ತು ಗಳಿಸಿದ ಅನುಭವಗಳನ್ನು ಮತ್ತಷ್ಟು ಹಂಚಿಕೊಂಡರು. ಅಲ್ಲಿ, ಸಾರಿಗೆ ಜಾಲದ ವಿಸ್ತರಣೆಯಂತಹ ಯೋಜನೆಗಳು ಆರಂಭದಲ್ಲಿ ತೀವ್ರ ವಿರೋಧವನ್ನು ಎದುರಿಸಿದ್ದವು. ಅಹಮದಾಬಾದಿನ ಕೆಂಪು ಬಸ್ಸುಗಳನ್ನು ನಗರದ ಎಲ್ಲೆ ಮೀರಿ ವಿಸ್ತರಿಸುವ ತಮ್ಮ ಆರಂಭಿಕ ಪ್ರಯತ್ನಗಳು ಅಧಿಕಾರಶಾಹಿಯ ಜಟಿಲತೆಗಳು ಮತ್ತು ರಾಜಕೀಯ ಅಡ್ಡಿಆತಂಕಗಳಿಂದ ಹೇಗೆ ತಡೆಯಲ್ಪಟ್ಟಿದ್ದವು, ಆದರೆ ಛಲಬಿಡದ ಪ್ರಯತ್ನಗಳು ಅಂತಿಮವಾಗಿ ಮೂಲಭೂತ ಸೌಕರ್ಯಗಳ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಹೇಗೆ ತಂದವು ಎಂಬುದನ್ನು ಅವರು ಸ್ವಾರಸ್ಯಕರವಾಗಿ ವಿವರಿಸಿದರು. ಅದೇ ರೀತಿ, ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸುವಂತಹ ಕಠಿಣ ಸವಾಲುಗಳನ್ನು ಅವರು ಉಲ್ಲೇಖಿಸುತ್ತಾ, ಜನರು ಅದರ ಸತ್ಫಲಗಳನ್ನು ಕಣ್ಣಾರೆ ಕಂಡೊಡನೆಯೇ, ಆರಂಭದಲ್ಲಿದ್ದ ವಿರೋಧವು ಜನಸಾಮಾನ್ಯರ ಅಭೂತಪೂರ್ವ ಬೆಂಬಲವಾಗಿ ಪರಿವರ್ತನೆಗೊಂಡ ರೋಚಕ ಪ್ರಸಂಗಗಳನ್ನು ಅವರು ಮೆಲುಕು ಹಾಕಿದರು.

ಗುಜರಾತಿನಲ್ಲಿ ನಗರ ಪುನರುಜ್ಜೀವನದ ಕ್ರಾಂತಿಕಾರಿ ಪ್ರಯತ್ನಗಳಿಗೆ, ಅದರಲ್ಲೂ ವಿಶೇಷವಾಗಿ ರಾಜಕೀಯ ಪ್ರತಿಸ್ಪರ್ಧಿಗಳಿಂದ ಹಾಗೂ ಮಾಧ್ಯಮಗಳ ಸೂಕ್ಷ್ಮ ಅವಲೋಕನ ಮತ್ತು ಕಟುಟೀಕೆಗಳಿಂದ ಎದುರಾದ ತೀವ್ರ ಸ್ವರೂಪದ ವಿರೋಧದ ಅಲೆಗಳನ್ನು ಪ್ರಧಾನಮಂತ್ರಿಯವರು ಮೆಲುಕು ಹಾಕಿದರು. ಆದಾಗ್ಯೂ, ನಾಯಕರು ಸಾರ್ವಜನಿಕ ಹಿತಾಸಕ್ತಿಯನ್ನು ಪರಮೋದ್ದೇಶವಾಗಿಟ್ಟುಕೊಂಡು, ನಿರ್ಮಲವಾದ ಮನಸ್ಸಿನಿಂದ ನಿರ್ಣಯಗಳನ್ನು ಕೈಗೊಂಡಾಗ, ಕಾಲಾಂತರದಲ್ಲಿ ಲಭಿಸುವ ಸತ್ಫಲಗಳೇ ಆ ನಿರ್ಧಾರಗಳ ಯಥಾರ್ಥತೆಯನ್ನು ಜಗತ್ತಿಗೆ ಸಾರಿ ಹೇಳುತ್ತವೆ ಎಂದು ಅವರು ಒತ್ತಿ ನುಡಿದರು. ಚುನಾವಣೆಗಳಲ್ಲಿ ಹಿನ್ನಡೆಯುಂಟಾದೀತೇನೋ ಎಂಬ ಆರಂಭಿಕ ಆತಂಕಗಳಿದ್ದಾಗ್ಯೂ, ಸರ್ಕಾರವು ಕೈಗೊಂಡ ನಗರ ನವನಿರ್ಮಾಣದ ಕ್ರಾಂತಿಕಾರಿ ಯೋಜನೆಗಳು ಚುನಾವಣಾ ವಿಜಯಗಳಲ್ಲದೆ, ಜನತೆಯಿಂದ ಅಭೂತಪೂರ್ವ ಶ್ಲಾಘನೆಗೂ ಪಾತ್ರವಾದವು ಎಂಬುದನ್ನು ಅವರು ಉಲ್ಲೇಖಿಸಿದರು. ನಿರಂತರ ಪ್ರಗತಿಯ ಪಥದಲ್ಲಿ ಮುನ್ನಡೆಯುವ ಭಾರತದ ಅಚಲವಾದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಭಾರತವು ವಿಶ್ವದ ನಾಲ್ಕನೇ ಬೃಹತ್ ಆರ್ಥಿಕ ಶಕ್ತಿಯ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿಯಬೇಕೆಂಬ ದೇಶವಾಸಿಗಳ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ತಾವು ಅರಿತಿರುವುದಾಗಿ ತಿಳಿಸಿದ ಅವರು, ಈ ಬೃಹತ್ ಆಶಯಗಳನ್ನು ಅಚಲವಾದ ಛಲ ಮತ್ತು ದೃಢವಾದ ಬದ್ಧತೆಯಿಂದ ಸಾಕಾರಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಜನಸಂಖ್ಯೆಯ ಹೆಚ್ಚಳದಿಂದಾಗಿ ನಗರ ಕೇಂದ್ರಗಳು ಕೇವಲ ವಿಸ್ತರಿಸುವ ಬದಲು ಆರ್ಥಿಕ ಬೆಳವಣಿಗೆಯ ಕೇಂದ್ರಗಳಾಗಿ ವಿಕಸನಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಮೋದಿ, "ನಗರಗಳು ಆರ್ಥಿಕ ಚಟುವಟಿಕೆಯ ಕ್ರಿಯಾತ್ಮಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಮತ್ತು ಪುರಸಭೆಗಳು ಅವುಗಳ ಪರಿವರ್ತನೆಗಾಗಿ ಸಕ್ರಿಯವಾಗಿ ಯೋಜಿಸಬೇಕು" ಎಂದು ಹೇಳಿದರು. ತಮ್ಮ ನಗರಗಳಿಗೆ ಆರ್ಥಿಕ ಬೆಳವಣಿಗೆಯ ಗುರಿಗಳನ್ನು ನಿಗದಿಪಡಿಸುವಂತೆ ಅವರು ದೇಶಾದ್ಯಂತದ ಪುರಸಭೆಗಳು ಮತ್ತು ಮಹಾನಗರ ಪ್ರಾಧಿಕಾರಗಳನ್ನು ಒತ್ತಾಯಿಸಿದರು. ತಮ್ಮ ಸ್ಥಳೀಯ ಆರ್ಥಿಕತೆಯ ಪ್ರಸ್ತುತ ಸ್ಥಿತಿಯನ್ನು ನಿರ್ಣಯಿಸಲು ಮತ್ತು ಒಂದು ವರ್ಷದೊಳಗೆ ಅದನ್ನು ಹೆಚ್ಚಿಸುವ ಮಾರ್ಗಗಳನ್ನು ರೂಪಿಸಲು, ತಯಾರಿಸಿದ ಸರಕುಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಮಾರ್ಗಗಳನ್ನು ಗುರುತಿಸಲು ಶ್ರೀ ಮೋದಿ ಪ್ರೋತ್ಸಾಹಿಸಿದರು. ಕೇವಲ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸುವುದಕ್ಕಿಂತ ಹೆಚ್ಚಾಗಿ, ನಗರ ಆಡಳಿತ ಮಂಡಳಿಗಳು ಕೃಷಿ ಆಧಾರಿತ ಕೈಗಾರಿಕೆಗಳಿಗೆ ಬೆಂಬಲ ನೀಡಲು ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ಮೌಲ್ಯವರ್ಧಿತ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೂಲಂಕಷವಾದ ಅಧ್ಯಯನಗಳನ್ನು ನಡೆಸಬೇಕು ಎಂದು ಅವರು ತಿಳಿಸಿದರು. ಸಾಮಾನ್ಯವಾಗಿ ದೊಡ್ಡ ಕೈಗಾರಿಕೆಗಳು ಮಹಾನಗರಗಳ ಸುತ್ತ ಬೆಳೆದಿದ್ದರೂ, ಸುಮಾರು ಎರಡು ಲಕ್ಷ ಸ್ಟಾರ್ಟ್ಅಪ್ ಗಳು - ಅವುಗಳಲ್ಲಿ ಬಹುಪಾಲು ಟೈರ್-2 ಮತ್ತು ಟೈರ್-3 ನಗರಗಳಲ್ಲಿವೆ - ಮಹತ್ವದ ಬದಲಾವಣೆಯನ್ನು ತೋರಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಈ ಉದ್ಯಮಗಳಲ್ಲಿ ಅನೇಕವನ್ನು ಮಹಿಳೆಯರು ಮುನ್ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇದು ಆರ್ಥಿಕ ಮತ್ತು ಉದ್ಯಮಶೀಲತೆಯ ಹೊಸ ಕ್ರಾಂತಿಯ ಸಂಕೇತವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇದೇ ರೀತಿಯ ಪ್ರಗತಿಯನ್ನು ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲೂ ಕಾಣಬಹುದು ಎಂದು ಶ್ರೀ ಮೋದಿ ಅವರು ಹೇಳಿದರು. ನಗರ ಆರ್ಥಿಕತೆಯ ರೂಪಾಂತರದ ಮೇಲೆ ಭಾರತವು ಗಮನಹರಿಸುವುದರಿಂದ, ದೇಶವು ನಾಲ್ಕನೇ ಸ್ಥಾನದಿಂದ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗುವ ಪಯಣವು ವೇಗಗೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಗುರಿಯನ್ನು ಸಾಧಿಸಲು ಸ್ಥಳೀಯ ಆರ್ಥಿಕತೆಗಳನ್ನು ಬಲಪಡಿಸುವುದು ಪ್ರಮುಖವಾಗಿರುತ್ತದೆ ಎಂದರು.

ಒಂದು ಬಲಿಷ್ಠ ಆಡಳಿತ ಮಾದರಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕೆಲವು ಆಳವಾಗಿ ಬೇರೂರಿರುವ ಮನೋಭಾವಗಳು ಐತಿಹಾಸಿಕವಾಗಿ ಭಾರತದ ಸಾಮರ್ಥ್ಯವನ್ನು ಕುಂದಿಸಲು ಪ್ರಯತ್ನಿಸಿವೆ ಎಂದು ಹೇಳಿದರು. ಸೈದ್ಧಾಂತಿಕ ವಿರೋಧವು ಆಗಾಗ್ಗೆ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯುಂಟುಮಾಡಿದೆ ಮತ್ತು ಉಪಕ್ರಮಗಳನ್ನು ಟೀಕಿಸುವುದು ಒಂದು ಸಾಮಾನ್ಯ ವಿಷಯವಾಗಿತ್ತು ಎಂದು ಅವರು ವಿವರಿಸಿದರು. ನಗರ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಮತ್ತು ಆಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮವನ್ನು ಅಧಿಕಾರಶಾಹಿ ತೊಡಕುಗಳನ್ನು ನಿವಾರಿಸಲು ಹೇಗೆ ಪ್ರಾರಂಭಿಸಲಾಯಿತು ಎಂದು ತಿಳಿಸಿದರು. ಸುಮಾರು 40 ಅಭಿವೃದ್ಧಿ ಸೂಚಕಗಳ ಆಧಾರದ ಮೇಲೆ ಸುಮಾರು 100 ಜಿಲ್ಲೆಗಳನ್ನು ಗುರುತಿಸಲಾಯಿತು ಮತ್ತು ದೀರ್ಘಕಾಲೀನ ಯೋಜನೆಯೊಂದಿಗೆ ಸಮರ್ಪಿತ ಅಧಿಕಾರಿಗಳನ್ನು ನೇಮಿಸಲಾಯಿತು ಎಂದು ಅವರು ಹೇಳಿದರು. ಈ ಉಪಕ್ರಮವು ಈಗ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಒಂದು ಮಾದರಿಯಾಗಿದ್ದು, ಪರಿಣಾಮಕಾರಿ ಆಡಳಿತದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗುಜರಾತಿನ ಪರಿವರ್ತನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರವಾಸೋದ್ಯಮದ ಮಹತ್ವವನ್ನು ಒತ್ತಿ ಹೇಳಿದರು. ಒಂದು ಕಾಲದಲ್ಲಿ ಮರುಭೂಮಿಯ ಪ್ರದೇಶವೆಂದು ನಿರ್ಲಕ್ಷಿಸಲ್ಪಟ್ಟಿದ್ದ ಕಚ್ ಇಂದು ಹೇಗೆ ಜನಪ್ರಿಯ ಪ್ರವಾಸಿ ತಾಣವಾಗಿದೆ ಎಂದು ಅವರು ಹೇಳಿದರು. ವಿಶ್ವದ ಅತಿ ಎತ್ತರದ ಪ್ರತಿಮೆಯಂತಹ ದೊಡ್ಡ ಯೋಜನೆಗಳು ಹೇಗೆ ಜನರ ಕಲ್ಪನೆಯನ್ನು ಮರುರೂಪಿಸಿವೆ ಮತ್ತು ಪ್ರಾದೇಶಿಕ ಆರ್ಥಿಕತೆಗಳನ್ನು ಬಲಪಡಿಸಿವೆ ಎಂದು ಅವರು ಹೇಳಿದರು. ಇದಲ್ಲದೆ, ವಡ್ನಗರದಂತಹ ಐತಿಹಾಸಿಕ ಸ್ಥಳಗಳ ಪ್ರಾಮುಖ್ಯತೆಯನ್ನು ಅವರು ಮತ್ತಷ್ಟು ವಿವರಿಸಿದರು, ಅದರ ವಸ್ತುಸಂಗ್ರಹಾಲಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪರಂಪರೆಯ ಕೇಂದ್ರವೆಂದು ಬಣ್ಣಿಸಿದರು. ಭಾರತದ ಸಾಗರ ಪರಂಪರೆಯನ್ನು ಸ್ಮರಿಸಿದ ಶ್ರೀ ಮೋದಿ ಅವರು, ಲೋಥಲ್ನಲ್ಲಿ ಇಂದು ವಿಶ್ವದ ಅತಿದೊಡ್ಡ ಸಾಗರ ವಸ್ತುಸಂಗ್ರಹಾಲಯಗಳಲ್ಲಿ ಒಂದು ತಲೆ ಎತ್ತಿದೆ ಎಂದು ತಿಳಿಸಿದರು. GIFT ಸಿಟಿ ಕಲ್ಪನೆಯ ಆರಂಭಿಕ ಸಂದೇಹಗಳನ್ನು ನೆನಪಿಸಿಕೊಂಡ ಅವರು, ಅದು ಇಂದು ಹಣಕಾಸು ಕೇಂದ್ರಗಳಿಗೆ ಒಂದು ಮಾನದಂಡವಾಗಿದೆ ಎಂದು ಹೇಳಿದರು. ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲು, ನವೀನ ಆಲೋಚನೆಗಳನ್ನು ದೃಢಸಂಕಲ್ಪದಿಂದ ಕಾರ್ಯಗತಗೊಳಿಸಬೇಕು ಎಂದು ಅವರು ಒತ್ತಿ ಹೇಳಿದರು. ಸಬರಮತಿ ನದಿ ದಂಡೆ ಅಭಿವೃದ್ಧಿ, ವಿಶ್ವದ ಅತಿದೊಡ್ಡ ಕ್ರೀಡಾಂಗಣ ನಿರ್ಮಾಣ ಮತ್ತು ಏಕತಾ ಪ್ರತಿಮೆಯಂತಹ ಹಲವಾರು ಯಶಸ್ವಿ ಬೃಹತ್ ಯೋಜನೆಗಳನ್ನು ಉಲ್ಲೇಖಿಸಿದ ಅವರು, ಪರಿವರ್ತನೆಯ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಭಾರತದ ಸಾಮರ್ಥ್ಯದ ಬಗ್ಗೆ ತಮ್ಮ ಅಚಲ ವಿಶ್ವಾಸವನ್ನು ಪುನರುಚ್ಚರಿಸಿದ ಅವರು, ದೇಶವು ಮಹತ್ವದ ಪ್ರಗತಿಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಉಪಕ್ರಮಗಳನ್ನು ಮರುಪರಿಶೀಲಿಸುವ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ಅವರು ಗುಜರಾತ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಭಾರತದ ಅಭಿವೃದ್ಧಿಯಲ್ಲಿ ಗುಜರಾತ್ ನ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ರಾಷ್ಟ್ರಕ್ಕೆ ಉನ್ನತ ಮಾನದಂಡಗಳನ್ನು ನಿಗದಿಪಡಿಸುವುದನ್ನು ಮುಂದುವರಿಸುವಂತೆ ಅವರು ರಾಜ್ಯವನ್ನು ಒತ್ತಾಯಿಸಿದರು ಮತ್ತು ಭಾರತದ ಉಜ್ವಲ ಭವಿಷ್ಯದ ಬಗ್ಗೆ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು.

ಮೇ 6 ರಂದು ಆರಂಭಗೊಂಡ 'ಆಪರೇಷನ್ ಸಿಂಧೂರ್' ನ ಮಹತ್ವವನ್ನು ಎತ್ತಿ ಹಿಡಿದ ಶ್ರೀ ಮೋದಿ ಅವರು, ಇದು ಕೇವಲ ಆರಂಭಿಕ ಉದ್ದೇಶಕ್ಕೆ ಸೀಮಿತವಾಗದೆ, ರಾಷ್ಟ್ರದ ಪ್ರಗತಿಗೆ ಜೀವನಪರ್ಯಂತದ ಬದ್ಧತೆಯನ್ನು ಸೂಚಿಸುತ್ತದೆ ಎಂದು ತಿಳಿಸಿದರು. 2047 ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಲು ಸಜ್ಜಾಗುತ್ತಿರುವ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ತನ್ನ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು. ನಾಲ್ಕನೇ ಅತಿದೊಡ್ಡ ಆರ್ಥಿಕತೆಯಿಂದ ಮೂರನೇ ಸ್ಥಾನಕ್ಕೆ ಏರುವ ಭಾರತದ ಗುರಿಯನ್ನು ಅವರು ಒತ್ತಿ ಹೇಳಿದರು, ವಿದೇಶಿ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಅತ್ಯಗತ್ಯ ಎಂದರು. ಪ್ರತಿಯೊಬ್ಬ ನಾಗರಿಕನು ತನ್ನ ದಿನನಿತ್ಯದ ಬಳಕೆಯನ್ನು ಅವಲೋಕಿಸಿ, ವಿದೇಶಿ ಉತ್ಪನ್ನಗಳನ್ನು ಗುರುತಿಸಿ, ಅವುಗಳ ಬದಲು ದೇಶೀಯವಾಗಿ ತಯಾರಾದ ವಸ್ತುಗಳನ್ನು ಬಳಸಬೇಕೆಂದು ಶ್ರೀ ಮೋದಿ ಕರೆ ನೀಡಿದರು. ಧಾರ್ಮಿಕ ಹಬ್ಬಗಳಿಗೆ ಬಳಸುವ ವಿಗ್ರಹಗಳಂತಹ ಸಾಂಪ್ರದಾಯಿಕ ಪೂಜಾ ಸಾಮಗ್ರಿಗಳನ್ನೂ ಆಮದು ಮಾಡಿಕೊಳ್ಳಲಾಗುತ್ತಿರುವ ಉದಾಹರಣೆಗಳನ್ನು ನೀಡಿದ ಅವರು, ಸ್ವದೇಶಿ ಉತ್ಪಾದನೆಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. "'ಆಪರೇಷನ್ ಸಿಂಧೂರ್' ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಲ್ಲ, ಇದು ಪ್ರತಿಯೊಬ್ಬ ಭಾರತೀಯನೂ ಹಂಚಿಕೊಳ್ಳಬೇಕಾದ ಹೊಣೆಗಾರಿಕೆ" ಎಂದು ಪುನರುಚ್ಚರಿಸಿದ ಶ್ರೀ ಮೋದಿ ಅವರು, ಆರ್ಥಿಕ ಸ್ವಾವಲಂಬನೆಯ ಮಹತ್ವವನ್ನು ಪ್ರತಿಪಾದಿಸಿದರು ಮತ್ತು ಸ್ಥಳೀಯ ಉತ್ಪಾದನೆ ಹಾಗೂ ದೇಶೀಯ ಕೈಗಾರಿಕೆಗಳನ್ನು ಉತ್ತೇಜಿಸಲು 'ಒಂದು ಜಿಲ್ಲೆ, ಒಂದು ಉತ್ಪನ್ನ' ಎಂಬ ಕಾರ್ಯತಂತ್ರವನ್ನು ಬೆಂಬಲಿಸಿದರು. ಹಿಂದೆ ವಿದೇಶಿ ವಸ್ತುಗಳಿಗೆ ಎಷ್ಟೊಂದು ಬೇಡಿಕೆ ಇತ್ತು ಎಂಬುದನ್ನು ನೆನಪಿಸಿದ ಅವರು, ಇಂದು ಭಾರತವು ವಿಶ್ವದರ್ಜೆಯ ಉತ್ಪನ್ನಗಳನ್ನು ನಮ್ಮ ದೇಶದಲ್ಲೇ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ರಾಷ್ಟ್ರೀಯ ಅಭಿಮಾನವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದ ಪ್ರಧಾನಮಂತ್ರಿಯವರು, 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳ ಬಗ್ಗೆ ಹೆಮ್ಮೆ ಪಡಬೇಕು ಮತ್ತು ದೇಶದ ಸಾಧನೆಗಳನ್ನು ಸಂಭ್ರಮಿಸಬೇಕು ಎಂದು ನಾಗರಿಕರಿಗೆ ಕರೆ ನೀಡಿದರು. ತಮ್ಮ ಭಾಷಣದ ಕೊನೆಯಲ್ಲಿ, ಪ್ರತಿಯೊಬ್ಬ ಭಾರತೀಯನೂ ದೇಶದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಜಾಗತಿಕವಾಗಿ ಅದರ ಸ್ಥಾನವನ್ನು ಭದ್ರಪಡಿಸಲು ಕೊಡುಗೆ ನೀಡಬೇಕು ಎಂದು ಪುನರುಚ್ಚರಿಸಿದರು. ನಗರ ಅಭಿವೃದ್ಧಿಯಲ್ಲಿನ ಮುಂಚೂಣಿಯ ಪಾತ್ರ ಮತ್ತು ರಾಷ್ಟ್ರದ ಮೂಲಸೌಕರ್ಯ ಅಭಿವೃದ್ಧಿಗೆ ಮಾರ್ಗದರ್ಶಕವಾಗಿರುವ ಗುಜರಾತ್ ಸರ್ಕಾರಕ್ಕೆ ಅವರು ಕೃತಜ್ಞತೆಗಳನ್ನು ತಿಳಿಸಿದರು.

ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಹಾಗೂ ಶ್ರೀ ಸಿ.ಆರ್. ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಗುಜರಾತ್ ನ ನಗರ ಪ್ರದೇಶದ ಚಿತ್ರಣವನ್ನು ಯೋಜಿತ ಮೂಲಸೌಕರ್ಯ, ಉತ್ತಮ ಆಡಳಿತ ಮತ್ತು ನಗರ ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವ ಮೂಲಕ ಪರಿವರ್ತಿಸುವ ಗುರಿಯೊಂದಿಗೆ, ಅಂದಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2005 ರಲ್ಲಿ 'ನಗರ ಅಭಿವೃದ್ಧಿ ವರ್ಷ 2005' ಎಂಬ ಮಹತ್ವದ ಯೋಜನೆಯನ್ನು ಪ್ರಾರಂಭಿಸಿದರು. 'ನಗರ ಅಭಿವೃದ್ಧಿ ವರ್ಷ 2005' ರ 20 ವರ್ಷಗಳನ್ನು ಗುರುತಿಸಿ, ಪ್ರಧಾನಮಂತ್ರಿಯವರು ಗಾಂಧಿನಗರದಲ್ಲಿ ಗುಜರಾತ್ ನ ನಗರ ಅಭಿವೃದ್ಧಿ ಯೋಜನೆ 'ನಗರ ಅಭಿವೃದ್ಧಿ ವರ್ಷ 2025' ಮತ್ತು ರಾಜ್ಯ ಸ್ವಚ್ಛ ವಾಯು ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅವರು ನಗರ ಅಭಿವೃದ್ಧಿ, ಆರೋಗ್ಯ ಮತ್ತು ನೀರು ಸರಬರಾಜಿಗೆ ಸಂಬಂಧಿಸಿದ ಬಹು ಯೋಜನೆಗಳನ್ನು ಉದ್ಘಾಟಿಸಿ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಅವರು ಪಿಎಂಎವೈ ಅಡಿಯಲ್ಲಿ 22,000 ಕ್ಕೂ ಹೆಚ್ಚು ವಸತಿ ಘಟಕಗಳನ್ನು ಸಮರ್ಪಿಸಿದರು. ಅಲ್ಲದೆ, ಅವರು "ಸ್ವರ್ಣಿಮ ಜಯಂತಿ ಮುಖ್ಯಮಂತ್ರಿ ಶಹೇರಿ ವಿಕಾಸ ಯೋಜನೆ" ಅಡಿಯಲ್ಲಿ ಗುಜರಾತ್ ನ ನಗರ ಸ್ಥಳೀಯ ಸಂಸ್ಥೆಗಳಿಗೆ (ನಗರ ಪಾಲಿಕೆಗಳು/ಪುರಸಭೆಗಳಿಗೆ) ₹3,300 ಕೋಟಿ ರೂಪಾಯಿಗಳ ನಿಧಿಯನ್ನು ಬಿಡುಗಡೆ ಮಾಡಿದರು.

 

 

*****


(Release ID: 2131776)