ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪರಿಕಲ್ಪನೆಯಾದ ವೇವ್ಸ್, ಮನರಂಜನಾ ಉದ್ಯಮಕ್ಕೆ ಒಂದು ಮಹತ್ವದ ವೇದಿಕೆಯಾಗಿದೆ: ಶಾರುಖ್ ಖಾನ್
ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೆ ಕೈಗೆಟುಕುವ ಸಿನಿಮಾ ಅನುಭವವನ್ನು ಒದಗಿಸುವ ಸಮಯ ಇದಾಗಿದೆ: ಶಾರುಖ್ ಖಾನ್
ಎಲ್ಲಾ ಮಾಧ್ಯಮ ವೇದಿಕೆಗಳನ್ನು ಒಗ್ಗೂಡಿಸುವ ವೇವ್ಸ್, ಒಂದು ಸಕಾಲಿಕ ಉಪಕ್ರಮವಾಗಿದೆ: ದೀಪಿಕಾ ಪಡುಕೋಣೆ
ಮುಂಬರುವ ವರ್ಷಗಳಲ್ಲಿ ವೇವ್ಸ್ ನೊಂದಿಗೆ ಭಾರತದ ಮೃದು ಶಕ್ತಿ ಮುಂದಿನ ಹಂತಕ್ಕೆ ಜಿಗಿಯಲು ಸಜ್ಜಾಗಿದೆ: ಕರಣ್ ಜೋಹರ್
Posted On:
01 MAY 2025 6:50PM
|
Location:
PIB Bengaluru
ಮನರಂಜನಾ ಉದ್ಯಮವನ್ನು ಇನ್ನಷ್ಟು ಬಲಪಡಿಸುವ ಸಾಮರ್ಥ್ಯವಿರುವ ವೇವ್ಸ್ ಶೃಂಗಸಭೆಯನ್ನು ರೂಪಿಸಿ, ಆಯೋಜಿಸಿದ್ದಕ್ಕಾಗಿ, ನಟ ಮತ್ತು ಚಲನಚಿತ್ರ ನಿರ್ಮಾಪಕ ಶಾರುಖ್ ಖಾನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಚಿತ್ರರಂಗದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ವೇದಿಕೆಯು ಉದ್ಯಮಕ್ಕೆ ಎಷ್ಟು ಸೂಕ್ತವಾಗಿದೆ ಮತ್ತು ಸರ್ಕಾರದಿಂದ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಾದ ಸಹಕಾರ ಹಾಗೂ ಬೆಂಬಲವನ್ನು ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಚಲನಚಿತ್ರ ಚಿತ್ರೀಕರಣಕ್ಕೆ ಒಂದು ಬೃಹತ್ ಅವಕಾಶಗಳ ತಾಣವಾಗಿರುವುದನ್ನು ಕುರಿತು ಮಾತನಾಡಿದ ಖಾನ್ ಅವರು, ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರು 'ಶೂಟ್ ಇನ್ ಇಂಡಿಯಾ'ವನ್ನು ತಮ್ಮ ಮುಂದಿನ ನೆಚ್ಚಿನ ತಾಣವಾಗಿ ಪರಿಗಣಿಸಬಹುದು ಎಂದು ಹೇಳಿದರು. ಅಲ್ಲದೆ, ಅಂತರರಾಷ್ಟ್ರೀಯ ಚಲನಚಿತ್ರ ಸಂಸ್ಥೆಗಳು ಮತ್ತು ಉದ್ಯಮಗಳೊಂದಿಗೆ ಮಾಡಿಕೊಳ್ಳುವ ವಿವಿಧ ಸ್ವರೂಪದ ಒಪ್ಪಂದಗಳು ಭಾರತದ ಮನರಂಜನಾ ವಲಯವನ್ನು ರೂಪಿಸುವಲ್ಲಿ ಮತ್ತು ಬಲಪಡಿಸುವಲ್ಲಿ ದೂರಗಾಮಿ ಪರಿಣಾಮ ಬೀರಬಲ್ಲವು ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸಿದರು.
ಎರಡನೇ ಮತ್ತು ಮೂರನೇ ಹಂತದ ನಗರಗಳ ಪ್ರೇಕ್ಷಕರಿಗೆ ಭಾರತೀಯ ಸಿನೆಮಾ ಇನ್ನಷ್ಟು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವ ಮಹತ್ವವನ್ನು ಖಾನ್ ಅವರು ಒತ್ತಿ ಹೇಳಿದರು. ಅಷ್ಟೇ ಅಲ್ಲದೆ, ಈ ನಗರಗಳಿಗೆ ಏಕಪರದೆ (single-screen) ಚಿತ್ರಮಂದಿರಗಳ ಅನುಭವವನ್ನು ಮರಳಿ ತರುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಚಲನಚಿತ್ರಗಳನ್ನು ತಲುಪಿಸಲು ಸಹಕಾರಿಯಾಗಲಿದೆ ಎಂದರು.

ನಟಿ ದೀಪಿಕಾ ಪಡುಕೋಣೆ ಕೂಡ ವೇವ್ಸ್ ನ ಮಹತ್ವದ ಕುರಿತು ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇದು ಮಾಧ್ಯಮ ಮತ್ತು ಮನರಂಜನಾ ಉದ್ಯಮದ ವಿವಿಧ ಪ್ರಕಾರಗಳನ್ನು ಒಂದುಗೂಡಿಸುವ ಸಕಾಲಿಕ ಉಪಕ್ರಮ ಎಂದು ಬಣ್ಣಿಸಿದರು. ಈ ವಲಯದ ಅನೇಕ ವಿಭಾಗಗಳು ಈವರೆಗೆ ಪರಸ್ಪರ ಬೆರೆಯದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ವೇವ್ಸ್ ವಿಶಾಲವಾದ ಅವಕಾಶಗಳನ್ನು ಹೊಂದಿದ್ದು, ಚಲನಚಿತ್ರಗಳು, OTT, ಅನಿಮೇಷನ್, ಕೃತಕ ಬುದ್ಧಿಮತ್ತೆ (AI), ಮತ್ತು ಇತರ ತಲ್ಲೀನಗೊಳಿಸುವ ತಂತ್ರಜ್ಞಾನಗಳನ್ನು ಒಟ್ಟಾಗಿ ಬೆಸೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ವೇವ್ಸ್ ಶೃಂಗಸಭೆಯ ಮೊದಲ ದಿನದ ಸಂದರ್ಭದಲ್ಲಿ ಮಾತನಾಡುತ್ತಿದ್ದ ನಟರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರು ನಿರ್ದೇಶಕ ಕರಣ್ ಜೋಹರ್ ಅವರೊಂದಿಗೆ 'ದಿ ಜರ್ನಿ: ಫ್ರಮ್ ಔಟ್ಸೈಡರ್ ಟು ರೂಲರ್' (The Journey: From Outsider to Ruler) ಎಂಬ ಕಿಕ್ಕಿರಿದು ತುಂಬಿದ್ದ ಗೋಷ್ಠಿಯಲ್ಲಿ ಆಳವಾದ ಸಂವಾದ ನಡೆಸಿದರು. ಚಿತ್ರರಂಗದಲ್ಲಿನ ತಮ್ಮ ಪಯಣ ಮತ್ತು ತಾವು ಹೇಗೆ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿಕೊಂಡರು ಎಂಬುದರ ಕುರಿತು ಅವರು ಆಲೋಚನೆಗಳನ್ನು ಹಂಚಿಕೊಂಡರು. ಶಾರುಖ್ ಖಾನ್ ಅವರು 'ಹೊರಗಿನವರು-ಒಳಗಿನವರು' (outsider-insider) ಎಂಬ ಹಣೆಪಟ್ಟಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಮತ್ತು ಯುವಜನರು ಚಿತ್ರರಂಗವನ್ನು ಇತರ ಯಾವುದೇ ವೃತ್ತಿಯಂತೆ ಪರಿಗಣಿಸಬೇಕು, ಅಲ್ಲಿ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಕ್ಕೆ ಯಾವುದೇ ಬದಲಿ ಇಲ್ಲ ಎಂದು ಕರೆ ನೀಡಿದರು.
ಸಾಮಾಜಿಕ ಮಾಧ್ಯಮ ಮತ್ತು ವ್ಯಕ್ತಿತ್ವ ನಿರ್ವಹಣೆಯ ಈ ಕಾಲದಲ್ಲಿ ಮನರಂಜನಾ ಉದ್ಯಮದ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಮಾತನಾಡಿದ ಖಾನ್ ಅವರು, ಹೊಸಬರು ಕೇವಲ ತಮ್ಮ ವ್ಯಕ್ತಿತ್ವದ ಮೇಲೆ ಗಮನ ಕೇಂದ್ರೀಕರಿಸುವ ಬದಲು ತಮ್ಮ ಕೌಶಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಪಡುಕೋಣೆ ಅವರು ಮಾತನಾಡುತ್ತ, ತಮ್ಮ ವಿಶಿಷ್ಟ ಸಾಮರ್ಥ್ಯಗಳು ಮತ್ತು ಅರ್ಹತೆಗಳ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಸಮಯ ಇದಾಗಿದೆ ಎಂದು ಹೇಳಿದರು.
ತಮ್ಮ ಸಮಾರೋಪ ನುಡಿಗಳಲ್ಲಿ, ನಿರ್ದೇಶಕ ಕರಣ್ ಜೋಹರ್ ಅವರು ಭಾರತವನ್ನು ಒಂದು ಮೃದು ಶಕ್ತಿ ಎಂದು ಬಣ್ಣಿಸಿದರು, ಅದು ಮುಂಬರುವ ವರ್ಷಗಳಲ್ಲಿ ವೇವ್ಸ್ ನೊಂದಿಗೆ ಮುಂದಿನ ಮಹತ್ತರವಾದ ಬೆಳವಣಿಗೆಯನ್ನು ಸಾಧಿಸಲು ಸಜ್ಜಾಗಿದೆ ಎಂದು ಹೇಳಿದರು.
*****
Release ID:
(Release ID: 2125969)
| Visitor Counter:
32