ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಸಂಪರ್ಕ ಅಭಿಯಾನ "ಜಲಾನಯನ ಯಾತ್ರೆ" (ವಾಟರ್‌ ಶೆಡ್‌ ಯಾತ್ರಾ) ಗೆ ಚಾಲನೆ ನೀಡಿದರು


ಶ್ರೀ ಚೌಹಾಣ್ ಅವರು ಜನರ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ ಯೋಜನೆಗಳ ಪರಿಣಾಮಕಾರಿ ಮತ್ತು ಯಶಸ್ವಿ ಅನುಷ್ಠಾನದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಒತ್ತಿಹೇಳಿದರು


ಜನರು ಯಾತ್ರೆಯಲ್ಲಿ ಮನಃಪೂರ್ವಕವಾಗಿ ಭಾಗವಹಿಸಿ ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ ಅನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಚೌಹಾಣ್ ಅವರು ಕೋರಿದರು


ಶ್ರೀ ಚೌಹಾಣ್ ಅವರು 2025 ಮತ್ತು 2026ನೇ ಸಾಲಿನ ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ 2.0 ಅಡಿಯಲ್ಲಿ ‘ಜಲಾನಯನ - ಜನಭಾಗೀದಾರಿ ಪ್ರತಿಯೋಗಿತಾʼಘೋಷಿಸಿದರು

Posted On: 05 FEB 2025 6:50PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ (ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ 2.0) ಯೋಜನಾ ಪ್ರದೇಶಗಳ ಜಲಾನಯನ ಅಭಿವೃದ್ಧಿ ಘಟಕದ ಅಡಿಯಲ್ಲಿ ಕೈಗೊಂಡಿರುವ ಜಲಾನಯನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಜಾಗೃತಿ ಮೂಡಿಸಲು ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಸಂಪರ್ಕ ಅಭಿಯಾನ “ಜಲಾನಯನ ಯಾತ್ರೆ” (ವಾಟರ್‌ ಶೆಡ್‌ ಯಾತ್ರಾ) ಗೆ ಹೈಬ್ರಿಡ್ ಮೋಡ್‌  ನಲ್ಲಿ ಇಂದು ಚಾಲನೆ ನೀಡಿದರು. ಜಲಾನಯನ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಮತ್ತು ಶ್ರೀ ಕಮಲೇಶ್ ಪಾಸ್ವಾನ್ ಅವರು ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ ಅನುಷ್ಠಾನಕ್ಕೆ ಸಂಬಂಧಿಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸಂಬಂಧಪಟ್ಟ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಅಧಿಕಾರಿಗಳು ತಮ್ಮ ರಾಜ್ಯಗಳಿಂದ  ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ತಮ್ಮ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ ಯಾತ್ರೆಗೆ ಚಾಲನೆ ನೀಡಿದರು. ಜಲಾನಯನ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಟ್ಟು 800 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದರು.

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಜನರ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮತ್ತು ದೇಶಾದ್ಯಂತ ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ ಯೋಜನೆಗಳ ಪರಿಣಾಮಕಾರಿ ಮತ್ತು ಯಶಸ್ವಿ ಅನುಷ್ಠಾನದಲ್ಲಿ ಸಮುದಾಯದ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಅದರಂತೆ, ಜನರು ಯಾತ್ರೆಯಲ್ಲಿ ಮನಃಪೂರ್ವಕವಾಗಿ ಭಾಗವಹಿಸಿ ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ ಅನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು. ಯಾತ್ರೆಯು “ಸಮುದಾಯ ಚಾಲಿತ ವಿಧಾನವನ್ನು”ಸಾಧಿಸಲು ವೇದಿಕೆಯನ್ನು ಒದಗಿಸುತ್ತದೆ, ಕ್ಷೇತ್ರ ಮಟ್ಟದಲ್ಲಿ  ಅನುಷ್ಠಾನ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಮತ್ತು ಕೃಷಿ ಉತ್ಪಾದಕತೆ, ಜೀವನೋಪಾಯಗಳು ಮತ್ತು ಪರಿಸರವನ್ನು ಸುಧಾರಿಸಲು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಜಲಾನಯನ ಯಾತ್ರೆಯಲ್ಲಿ ಕೈಗೊಳ್ಳಬೇಕಾದ ಹೊಸ ಕಾಮಗಾರಿಗಳ ಭೂಮಿಪೂಜೆ, ಪೂರ್ಣಗೊಂಡ ಕಾಮಗಾರಿಗಳ ಲೋಕಾರ್ಪಣೆ, ಜಲಾನಯನ ಮಹೋತ್ಸವ, ಜಲಾನಯನದ ಪಂಚಾಯಿತಿ, ಯೋಜನಾ ಪ್ರದೇಶದಲ್ಲಿರುವ ಜಲಾನಯನ ಮಾರ್ಗದರ್ಶಕರಿಗೆ ಪ್ರಶಸ್ತಿ ಮತ್ತು ಪುರಸ್ಕಾರ, ಭೂಮಿ-ಜಲ್ ಪಿಚ್ ಮತ್ತು ಶ್ರಮದಾನ ಮುಂತಾದ ಕಾರ್ಯಗಳು ಸಾಮಾನ್ಯ ಜನರಿಗೆ ಸುಸ್ಥಿರ ಸಂಪನ್ಮೂಲ ನಿರ್ವಹಣೆಯ ಸಂದೇಶವನ್ನು ತಲುಪಿಸುತ್ತವೆ ಎಂದು ಅವರು ಹೇಳಿದರು.

ಯಾತ್ರೆಯ ಉದ್ಘಾಟನೆಯ ಸಂದರ್ಭದಲ್ಲಿ, ಶ್ರೀ ಚೌಹಾಣ್ ಅವರು 2025 ಮತ್ತು 2026 ರ ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ 2.0 ಅಡಿಯಲ್ಲಿ 'ಜಲಾನಯನ-ಜನಭಾಗೀದಾರಿ ಪ್ರತಿಯೋಗಿತಾ' ವನ್ನು ಘೋಷಿಸಿದರು. ‘ಸಾರ್ವಜನಿಕ-ಖಾಸಗಿ-ಜನರ ಸಹಭಾಗಿತ್ವ (4 ಪಿ)’ ಅನ್ನು ಒಳಗೊಂಡಿರುವ ಸಮುದಾಯ ನೇತೃತ್ವದ ಜಲಾನಯನ ನಿರ್ವಹಣೆಯ ತತ್ವಗಳ ಆಧಾರದ ಮೇಲೆ ಇದು ವಿಶಿಷ್ಟ ಮಾದರಿಯಾಗಿದೆ ಎಂದು ಅವರು ಹೇಳಿದರು. ಇದರ ಅಡಿಯಲ್ಲಿ, ಸರ್ಕಾರದ ಅನುದಾನ ಮತ್ತು ಸಾರ್ವಜನಿಕ ಸಹಭಾಗಿತ್ವದ ಮೂಲಕ ಯೋಜನಾ ಪ್ರದೇಶಗಳಲ್ಲಿ ಮಾಡಿದ ಕೆಲಸಗಳನ್ನು ರಾಜ್ಯ ಮಟ್ಟದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅತ್ಯುತ್ತಮ ಮತ್ತು ಗಮನಾರ್ಹ ಕೆಲಸ ಮಾಡುವ ಯೋಜನೆಗಳಿಗೆ ಪ್ರತಿ ಯೋಜನೆಗೆ ರೂ 20 ಲಕ್ಷ ಹೆಚ್ಚುವರಿ ಬಹುಮಾನವನ್ನು ನೀಡಲಾಗುತ್ತದೆ. ಇದಕ್ಕಾಗಿ ಒಟ್ಟು 70.80 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಪ್ರತಿ ವರ್ಷ 177 ಯೋಜನೆಗಳಿಗೆ ಅನುಕೂಲವಾಗಲಿದೆ. ಈ ವರ್ಷದ ಸ್ಪರ್ಧೆಯ ಯೋಜನೆಗಳ ಮೌಲ್ಯಮಾಪನವನ್ನು ಏಪ್ರಿಲ್ ತಿಂಗಳಲ್ಲಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಈ ಸ್ಪರ್ಧೆಯು ಇಲಾಖಾ ಕಾರ್ಯಗಳನ್ನು ವೇಗಗೊಳಿಸುವುದಲ್ಲದೆ, ಶ್ರಮದಾನ ಇತ್ಯಾದಿಗಳ ಮೂಲಕ ನೀರು ಕೊಯ್ಲು ರಚನೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಸಾರ್ವಜನಿಕರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಸ್ಪರ್ಧೆಯ ಮುಖ್ಯ ಉದ್ದೇಶವೆಂದರೆ ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಆರೋಗ್ಯಕರ ಸ್ಪರ್ಧೆ, ಸಾರ್ವಜನಿಕ ಜಾಗೃತಿ, ಸಾರ್ವಜನಿಕ ಸಹಭಾಗಿತ್ವ ಮತ್ತು ಸಾರ್ವಜನಿಕರಲ್ಲಿ ತಮಗೆ ಸೇರಿದ್ದು ಎಂಬ ಭಾವನೆಯನ್ನು ಮೂಡಿಸುವುದು, ಇದರಿಂದ ಭವಿಷ್ಯದಲ್ಲಿ ಗ್ರಾಮಸ್ಥರು ಈ ರಚನೆಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.

ಜಲಾನಯನ ಯಾತ್ರೆಯು 805 ಯೋಜನೆಗಳಾದ್ಯಂತ ಸುಮಾರು 60-90 ದಿನಗಳವರೆಗೆ ವಾಹನ ಚಲನೆಯನ್ನು ಒಳಗೊಂಡಿರುತ್ತದೆ, ಇದು 26 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 6673 ಗ್ರಾಮ ಪಂಚಾಯಿತಿಗಳನ್ನು (13587 ಹಳ್ಳಿಗಳು) ಒಳಗೊಂಡಿದೆ. ಜಲಾನಯನ ಕಿ ಪಂಚಾಯತ್‌ ಚಟುವಟಿಕೆಯಡಿಯಲ್ಲಿ, ಸುಸ್ಥಿರ ಮಣ್ಣು ಮತ್ತು ನೀರು ನಿರ್ವಹಣಾ ಅಭ್ಯಾಸಗಳ ಕುರಿತು ತಜ್ಞರಿಂದ ಚರ್ಚೆಯನ್ನು ಆಯೋಜಿಸಲಾಗುವುದು ಮತ್ತು ವಿವಿಧ ಯೋಜನಾ ಪ್ರದೇಶಗಳಲ್ಲಿ ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ ಕಾಮಗಾರಿಗಳ ಅನುಷ್ಠಾನಕ್ಕೆ ಕೊಡುಗೆ ನೀಡಿದ ಸುಮಾರು 8,000 ವ್ಯಕ್ತಿಗಳನ್ನು ಗೌರವಿಸಲಾಗುವುದು, ಇದು ಜಲಾನಯನ ಸಮುದಾಯಗಳನ್ನು ಮತ್ತಷ್ಟು ಪ್ರೇರೇಪಿಸುತ್ತದೆ.

ಇಲಾಖೆಯು ಜಲಾನಯನ ಅಭಿವೃದ್ಧಿಯ ಕುರಿತು ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು (ಎಲ್‌ ಎಂ ಎಸ್) ಅಭಿವೃದ್ಧಿಪಡಿಸಿದೆ ಮತ್ತು ಅದನ್ನು ಭೂ ಸಂಪನ್ಮೂಲಗಳ ಇಲಾಖೆ (DoLR) ಜಾಲತಾಣದಲ್ಲಿ ಪ್ರಕಟಿಸಿದೆ, ಇದನ್ನು ಯುವಕರ ಮತ್ತಷ್ಟು ತೊಡಗಿಸಿಕೊಳ್ಳುವಿಕೆಗಾಗಿ ಮೈ ಭಾರತ್ ಪೋರ್ಟಲ್‌ ಗೆ ಲಿಂಕ್ ಮಾಡಲಾಗಿದೆ. ಭಾಗವಹಿಸುವ ಯುವಕ/ಯುವತಿಯರಿಗೆ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಇದು ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತದೆ.

ದೇಶಾದ್ಯಂತ ಯುವಕರನ್ನು ಸಂಪರ್ಕಿಸಲು ಮತ್ತು ಒಳಗೊಳ್ಳಲು 'ಮೈ ಭಾರತ್ ಪೋರ್ಟಲ್' ನಲ್ಲಿ "ಜಲಾನಯನ ಯಾತ್ರೆ" ಗಾಗಿ ಒಂದು ಮೆಗಾ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ಶ್ರಮದಾನದಂತಹ ಚಟುವಟಿಕೆಗಳಿಗೆ ಯುವ ಸ್ವಯಂಸೇವಕರನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ, ಜಲಾನಯನ ಯೋಜನೆಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ ಮತ್ತು ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ 2.0 ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಸಹಾಯ ಮಾಡುತ್ತದೆ. ಇದು ಜಲಾನಯನ ಕಾರ್ಮಿಕರು ಮತ್ತು ಮುಖಂಡರ ಸಮುದಾಯವನ್ನು ರಚಿಸಲು ಸಹಾಯ ಮಾಡುತ್ತದೆ.

 

*****


(Release ID: 2100154)