ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ದೆಹಲಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಕನ್ನಡ ಅನುವಾದ

Posted On: 02 OCT 2024 9:22PM by PIB Bengaluru

ಪ್ರಧಾನ ಮಂತ್ರಿಗಳು: ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳು ಯಾವುವು?

ವಿದ್ಯಾರ್ಥಿ: ಸರ್, ಇದರಿಂದ ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ, ಮತ್ತು ನಾವು ಯಾವಾಗಲೂ ಸ್ವಚ್ಛವಾಗಿರುತ್ತೇವೆ. ಇದಲ್ಲದೆ, ನಮ್ಮ ದೇಶವು ಸ್ವಚ್ಛವಾಗಿದ್ದರೆ, ಪರಿಸರವನ್ನು ಅಚ್ಚುಕಟ್ಟಾಗಿಡುವ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ.

ಪ್ರಧಾನ ಮಂತ್ರಿಗಳು: ಶೌಚಾಲಯವಿಲ್ಲದಿದ್ದರೆ ಏನಾಗುತ್ತದೆ?

ವಿದ್ಯಾರ್ಥಿ: ಸರ್, ರೋಗಗಳು ಹರಡುತ್ತವೆ.

ಪ್ರಧಾನ ಮಂತ್ರಿಗಳು: ನಿಜವಾಗಿಯೂ ರೋಗಗಳು ಹರಡುತ್ತವೆ. ಶೌಚಾಲಯಗಳ ಕೊರತೆಯಿದ್ದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ, 100ರಲ್ಲಿ 60 ಮನೆಗಳಲ್ಲಿ ಶೌಚಾಲಯಗಳಿರಲಿಲ್ಲ. ಜನರು ಬಯಲು ಮಲವಿಸರ್ಜನೆಯಲ್ಲಿ ತೊಡಗುತ್ತಿದ್ದರು. ಇದು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗುತ್ತಿತ್ತು. ಮಹಿಳೆಯರು, ವಿಶೇಷವಾಗಿ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದರು. ʻಸ್ವಚ್ಛ ಭಾರತ ಅಭಿಯಾನʼವನ್ನು ಪ್ರಾರಂಭಿಸಿದಾಗ, ನಾವು ಮೊದಲು ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆವು, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳು ಇರುವುದನ್ನು ಖಾತರಿಪಡಿಸಿದೆವು. ಇದರ ಪರಿಣಾಮವಾಗಿ, ಶಾಲೆ ಬಿಡುವ ಬಾಲಕಿಯರ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ. ಈಗ ಅವರೆಲ್ಲರೂ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಹಾಗಾದರೆ, ಸ್ವಚ್ಛತೆಯು ಪ್ರಯೋಜನಕಾರಿ ಎಂದು ಸಾಬೀತಾಗಿಲ್ಲವೇ?

ವಿದ್ಯಾರ್ಥಿ: ಹೌದು ಸರ್.

ಪ್ರಧಾನ ಮಂತ್ರಿಗಳು : ನಾವು ಇಂದು ಯಾರ ಜಯಂತಿಯನ್ನು ಆಚರಿಸುತ್ತಿದ್ದೇವೆ?

ವಿದ್ಯಾರ್ಥಿ: ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಗಳ ಜಯಂತಿ ಸರ್.

ಪ್ರಧಾನ ಮಂತ್ರಿಗಳು: ಸರಿ, ನಿಮ್ಮಲ್ಲಿ ಯಾರಾದರೂ ಯೋಗಾಭ್ಯಾಸ ಮಾಡುತ್ತೀರಾ?... ಓಹ್, ಅದ್ಭುತ, ನಿಮ್ಮಲ್ಲಿ ಬಹಳಷ್ಟು ಮಂದಿ ಮಾಡುತ್ತೀರಿ. ಆಸನಗಳನ್ನು ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುವು?

ವಿದ್ಯಾರ್ಥಿ: ಸರ್, ಇದು ನಮ್ಮ ದೇಹವನ್ನು ಹೆಚ್ಚು ನಮ್ಯವಾಗಿಸುತ್ತದೆ.

ಪ್ರಧಾನ ಮಂತ್ರಿಗಳು: ನಮ್ಯತೆ, ಮತ್ತು?

ವಿದ್ಯಾರ್ಥಿ: ಸರ್, ಇದು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಉತ್ತಮ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.

ಪ್ರಧಾನ ಮಂತ್ರಿಗಳು: ಒಳ್ಳೆಯದು. ಈಗ, ನೀವು ಮನೆಯಲ್ಲಿ ಏನು ತಿನ್ನಲು ಇಷ್ಟಪಡುತ್ತೀರಿ? ತರಕಾರಿಗಳನ್ನು ತಿನ್ನಲು ಮತ್ತು ಹಾಲು ಕುಡಿಯಲು ನಿಮ್ಮ ತಾಯಿ ನಿಮ್ಮನ್ನು ಕೇಳಿದಾಗ, ನಿಮ್ಮಲ್ಲಿ ಎಷ್ಟು ಜನರು ಅದಕ್ಕೆ ವಿರೋಧಿಸುತ್ತೀರಿ ಅಥವಾ ಬೇಡವೆಂದು ವಾದಿಸುತ್ತೀರಿ?

ವಿದ್ಯಾರ್ಥಿ: ನಾವು ಎಲ್ಲಾ ತರಕಾರಿಗಳನ್ನು ತಿನ್ನುತ್ತೇವೆ.

ಪ್ರಧಾನ ಮಂತ್ರಿಗಳು: ಹಾಗಲಕಾಯಿ ಸೇರಿದಂತೆ ಎಲ್ಲರೂ ಎಲ್ಲಾ ತರಕಾರಿಗಳನ್ನು ತಿನ್ನುತ್ತೀರಾ?

ವಿದ್ಯಾರ್ಥಿ: ಹೌದು, ಆದರೆ, ಹಾಗಲಕಾಯಿ ಹೊರತುಪಡಿಸಿ.

ಪ್ರಧಾನ ಮಂತ್ರಿಗಳು: ಓಹ್, ಹಾಗಲಕಾಯಿ ಹೊರತುಪಡಿಸಿ.

ಪ್ರಧಾನ ಮಂತ್ರಿಗಳು: ʻಸುಕನ್ಯಾ ಸಮೃದ್ಧಿ ಯೋಜನೆʼ ಎಂದರೇನು ಎಂದು ನಿಮಗೆ ತಿಳಿದಿದೆಯೇ?

ವಿದ್ಯಾರ್ಥಿ: ಹೌದು ಸರ್.

ಪ್ರಧಾನ ಮಂತ್ರಿಗಳು: ಏನದು?

ವಿದ್ಯಾರ್ಥಿ: ಸರ್, ಇದು ನೀವು ಪರಿಚಯಿಸಿದ ಯೋಜನೆ, ಇದು ಅನೇಕ ಹುಡುಗಿಯರಿಗೆ ಪ್ರಯೋಜನಕಾರಿಯಾಗಿದೆ. ಈ ಯೋಜನೆಯಡಿ ನಾವು 10 ವರ್ಷದವರಾಗುವವರೆಗೂ ಖಾತೆಯನ್ನು ತೆರೆಯಬಹುದು. ನಾವು 18 ವರ್ಷ ವಯಸ್ಸಾದಾಗ, ಅದು ನಮ್ಮ ಶಿಕ್ಷಣಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ. ನಾವು ಖಾತೆಯಿಂದ ಹಣವನ್ನು ಹಿಂಪಡೆಯಬಹುದು.

ಪ್ರಧಾನ ಮಂತ್ರಿಗಳು: ಹೌದು. ಹೆಣ್ಣು ಮಗು ಜನಿಸಿದ ಕೂಡಲೇ ʻಸುಕನ್ಯಾ ಸಮೃದ್ಧಿ ಖಾತೆʼಯನ್ನು ತೆರೆಯಬಹುದು. ಪೋಷಕರು ಪ್ರತಿ ವರ್ಷ 1,000 ರೂ.ಗಳನ್ನು ಠೇವಣಿ ಮಾಡಬಹುದು, ಅಂದರೆ ತಿಂಗಳಿಗೆ ಸುಮಾರು 80-90 ರೂ. 18 ವರ್ಷಗಳ ನಂತರ, ಉನ್ನತ ಶಿಕ್ಷಣಕ್ಕಾಗಿ ಅವಳಿಗೆ ಹಣದ ಅಗತ್ಯವಿದೆ ಎಂದು ಭಾವಿಸೋಣ- ಆ ಉದ್ದೇಶಕ್ಕಾಗಿ ಅರ್ಧದಷ್ಟು ಮೊತ್ತವನ್ನು ಹಿಂಪಡೆಯಬಹುದು. ಮತ್ತು, ಅವಳು 21ನೇ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದರೆ, ಆ ಉದ್ದೇಶಕ್ಕಾಗಿ ಹಣವನ್ನು ಹಿಂಪಡೆಯಬಹುದು. 1,000 ರೂ.ಗಳನ್ನು ನಿಯಮಿತವಾಗಿ ಠೇವಣಿ ಇಟ್ಟರೆ, ಹಿಂತೆಗೆದುಕೊಳ್ಳುವ ಸಮಯದಲ್ಲಿ, ಅವರು ಸುಮಾರು 50,000 ರೂ.ಗಳನ್ನು ಪಡೆಯುತ್ತಾರೆ, ಸುಮಾರು 30,000-35,000 ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತಾರೆ. ಹೆಣ್ಣುಮಕ್ಕಳಿಗೆ ಬಡ್ಡಿದರವು 8.2% ಆಗಿದ್ದು, ಇದು ಸಾಮಾನ್ಯ ದರಕ್ಕಿಂತ ಹೆಚ್ಚಾಗಿದೆ.

ವಿದ್ಯಾರ್ಥಿ: ನಾವು ಶಾಲೆಯನ್ನು ಸ್ವಚ್ಛಗೊಳಿಸಬೇಕೆಂದು ಸೂಚಿಸುವ ಚಾರ್ಟ್ ಇದೆ, ಮತ್ತು ಅದು ಮಕ್ಕಳು ಸ್ವಚ್ಛತೆ ಕಾರ್ಯದಲ್ಲಿ ನಿರತರಾಗಿರುವುದನ್ನು ತೋರಿಸುತ್ತದೆ.

ಪ್ರಧಾನ ಮಂತ್ರಿಗಳು: ಒಮ್ಮೆ ನಾನು ಗುಜರಾತಿನಲ್ಲಿದ್ದೆ, ಒಂದು ಶಾಲೆಯಲ್ಲಿ ಶಿಕ್ಷಕರೊಬ್ಬರು ತುಂಬಾ ಗಮನಾರ್ಹವಾದ ಕೆಲಸ ಮಾಡಿದ್ದರು. ಶಾಲೆಯು ಕರಾವಳಿ ಪ್ರದೇಶದಲ್ಲಿತ್ತು, ಅಲ್ಲಿ ನೀರು ಉಪ್ಪಿನಂಶದಿಂದ ಕೂಡಿತ್ತು, ಮತ್ತು ಭೂಮಿ ಬರಡಾಗಿತ್ತು, ಮರಗಳು ಅಥವಾ ಹಸಿರು ಇರಲಿಲ್ಲ. ಶಿಕ್ಷಕರು ಏನು ಮಾಡಿದರು? ಅವರು ಪ್ರತಿ ವಿದ್ಯಾರ್ಥಿಗೆ ಖಾಲಿ ಬಿಸ್ಲೆರಿ ಬಾಟಲಿಯನ್ನು ನೀಡಿದರು, ಸ್ವಚ್ಛಗೊಳಿಸಿದ ಎಣ್ಣೆ ಕ್ಯಾನ್‌ಗಳನ್ನು ಕೈಗಿತ್ತರು. ಊಟದ ನಂತರ ತಮ್ಮ ತಾಯಂದಿರು ಪಾತ್ರೆಗಳನ್ನು ತೊಳೆಯಲು ಬಳಸುವ ನೀರನ್ನು ಸಂಗ್ರಹಿಸಿ ಪ್ರತಿದಿನ ಬಾಟಲಿಗಳಲ್ಲಿ ಶಾಲೆಗೆ ತರುವಂತೆ ಅವರು ಮಕ್ಕಳಿಗೆ ಸೂಚಿಸಿದರು. ಅವರು ಪ್ರತಿ ಮಗುವಿಗೆ ಒಂದು ಮರವನ್ನು ನಿಗದಿಪಡಿಸಿದರು ಮತ್ತು ಅವರು ಮನೆಯಿಂದ ತಂದ ನೀರನ್ನು ಅವರ ಮರವನ್ನು ಪೋಷಿಸಲು ಬಳಸಬೇಕೆಂದು ಹೇಳಿದರು. 5-6 ವರ್ಷಗಳ ನಂತರ ನಾನು ಶಾಲೆಗೆ ಭೇಟಿ ನೀಡಿದಾಗ, ಇಡೀ ಶಾಲೆಯು ಯಾರೂ ಊಹಿಸಲಾಗದಷ್ಟು ಹಸಿರಿನಿಂದ ಸಮೃದ್ಧವಾಗಿತ್ತು.

ವಿದ್ಯಾರ್ಥಿ: ಇದು ಒಣ ತ್ಯಾಜ್ಯ. ನಾವು ಒಣ ಮತ್ತು ಹಸಿ ತ್ಯಾಜ್ಯವನ್ನು ರೀತಿ ಬೇರ್ಪಡಿಸಿದರೆ, ಅದು ಮಿಶ್ರಗೊಬ್ಬರವನ್ನು ತಯಾರಿಸಲು ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿಗಳು: ಹಾಗಾದರೆ, ನೀವೆಲ್ಲರೂ ಮನೆಯಲ್ಲಿ ಅಭ್ಯಾಸವನ್ನು ಪಾಲಿಸುತ್ತೀರಾ?

ಪ್ರಧಾನ ಮಂತ್ರಿಗಳು: ನಿಮ್ಮ ತಾಯಿ ತರಕಾರಿ ಮತ್ತು ಸೊಪ್ಪು ಖರೀದಿಸಲು ಬರಿಗೈಯಲ್ಲಿ ಹೋಗಿ, ಬರುವಾಗ ಅವರು ಅವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತರುತ್ತಾರೆಯೇ? ನಿಮ್ಮಲ್ಲಿ ಯಾರಾದರೂ ಅವರನ್ನು ಕುರಿತು, "ಅಮ್ಮಾ, ಮನೆಯಿಂದ ಒಂದು ಚೀಲವನ್ನು ತೆಗೆದುಕೊಂಡು ಹೋಗಿ. ನೀವು ಪ್ಲಾಸ್ಟಿಕ್ ಅನ್ನು ಮನೆಗೆ ಏಕೆ ತರುತ್ತೀರಿ? ಅಂತಹ ತ್ಯಾಜ್ಯವನ್ನು ಮನೆಗೆ ಏಕೆ ತರಬೇಕು ಎಂದು ವಾದಿಸುತ್ತೀರಾ? ನಿಮ್ಮಲ್ಲಿ ಯಾರಾದರೂ ಇದನ್ನು ಅವರಿಗೆ ನೆನಪಿಸುತ್ತೀರಾ?

ವಿದ್ಯಾರ್ಥಿ: ಹೌದು ಸರ್‌, ಬಟ್ಟೆಯ ಚೀಲ( ತೆಗೆದುಕೊಂಡು ಹೋಗುವಂತೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ).

ಪ್ರಧಾನ ಮಂತ್ರಿಗಳು: ಹಾಗಾದರೆ ನೀವು ಅವರಿಗೆ ಹೇಳುತ್ತೀರಾ?

ವಿದ್ಯಾರ್ಥಿ: ಹೌದು ಸರ್.

ಪ್ರಧಾನ ಮಂತ್ರಿ: ಸರಿ, ಹಾಗಾದರೆ.

ಪ್ರಧಾನ ಮಂತ್ರಿಗಳು: ಏನಿದು? ಇವು ಗಾಂಧೀಜಿಯವರ ಕನ್ನಡಕಗಳು. ನೀವು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೀರೋ ಇಲ್ಲವೋ ಎಂಬುದನ್ನು ಗಾಂಧೀಜಿ ಗಮನಿಸುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ? ಗಾಂಧೀಜಿಯವರು ತಮ್ಮ ಇಡೀ ಜೀವನವನ್ನು ಸ್ವಚ್ಛತೆಗಾಗಿ ಮುಡಿಪಾಗಿಟ್ಟಿದ್ದರು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರು ವಸ್ತುಗಳನ್ನು ಸ್ವಚ್ಛವಾಗಿಡುತ್ತಾರೆ ಮತ್ತು ಯಾರು ಇಟ್ಟುಕೊಳ್ಳುವುದಿಲ್ಲ ಎಂಬುದನ್ನು ಅವನು ಸದಾ ಗಮನಿಸುತ್ತಾನೆ. ಸ್ವಾತಂತ್ರ್ಯ ಮತ್ತು ಸ್ವಚ್ಛತೆಯ ನಡುವೆ ಆಯ್ಕೆ ಮಾಡಬೇಕಾಗಿ ಬಂದರೆ, ತಾವು ಸ್ವಚ್ಛತೆಯನ್ನೇ ಆಯ್ಕೆ ಮಾಡುವುದಾಗಿ ಒಮ್ಮೆ ಅವರು ಹೇಳಿದ್ದರು. ಸ್ವಾತಂತ್ರ್ಯಕ್ಕಿಂತ ಹೆಚ್ಚಾಗಿ ಸ್ವಚ್ಛತೆಗೆ ಅವರು ಎಷ್ಟು ಪ್ರಾಮುಖ್ಯತೆ ನೀಡಿದರು ಎಂಬುದನ್ನು ಇದು ತೋರಿಸುತ್ತದೆ. ಈಗ ಹೇಳಿ, ನಮ್ಮ ಸ್ವಚ್ಛತಾ ಅಭಿಯಾನ ಮುಂದುವರಿಯಬೇಕೇ?

ವಿದ್ಯಾರ್ಥಿ: ಹೌದು ಸರ್, ನಾವು ಅದನ್ನು ಮುಂದುವರಿಸಬೇಕು.

ಪ್ರಧಾನ ಮಂತ್ರಿಗಳು: ಹಾಗಾದರೆ, ಸ್ವಚ್ಛತೆಯು ಕೇವಲ ಒಂದು ಕಾರ್ಯಕ್ರಮವಾಗಬೇಕೇ ಅಥವಾ ಅದು ಅಭ್ಯಾಸವಾಗಬೇಕೆಂದು ನೀವು ಭಾವಿಸುವಿರಾ?

ವಿದ್ಯಾರ್ಥಿ: ಅದೊಂದು ಅಭ್ಯಾಸವಾಗಬೇಕು.

ಪ್ರಧಾನ ಮಂತ್ರಿ: ಚೆನ್ನಾಗಿ ಹೇಳಿದಿರಿ. ಈ ಸ್ವಚ್ಛತಾ ಅಭಿಯಾನವು ಮೋದಿಜಿಯವರ ಕಾರ್ಯಕ್ರಮ ಎಂದು ಕೆಲವರು ನಂಬುತ್ತಾರೆ, ಆದರೆ ಸತ್ಯವೆಂದರೆ ಸ್ವಚ್ಛತೆಯು ಒಂದು ದಿನದ ಕಾರ್ಯವಲ್ಲ, ಅಥವಾ ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಜವಾಬ್ದಾರಿಯಲ್ಲ. ಇದು ಇಡೀ ಜೀವಮಾನದ ಬದ್ಧತೆಯಾಗಿದೆ- ನಾವು ಬದುಕಿರುವವರೆಗೂ ವರ್ಷದಲ್ಲಿ 365 ದಿನಗಳು. ಇದಕ್ಕಾಗಿ ನಮಗೆ ಏನು ಬೇಕು? ನಮಗೆ ಮನಸ್ಥಿತಿ ಬೇಕು, ಸ್ವಚ್ಛತೆಯೇ ಮಂತ್ರವಾಗಬೇಕು. ದೇಶದ ಪ್ರತಿಯೊಬ್ಬ ನಾಗರಿಕನು ಕಸವನ್ನು ಸೃಷ್ಟಿಸದಿರಲು ನಿರ್ಧರಿಸಿದರೆ ಪರಿಣಾಮ ಏನಾಗಬಹುದು? ಊಹಿಸಿ.

ವಿದ್ಯಾರ್ಥಿ: ಆಗ ಸ್ವಚ್ಛತೆ ತಾನಾಗಿಯೇ ನೆಲೆಸುತ್ತದೆ.

ಪ್ರಧಾನ ಮಂತ್ರಿಗಳು: ಹೌದು. ಆದ್ದರಿಂದ, ನೀವು ಈಗ ಯಾವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು? ಕಸ ಹಾಕದಿರುವ ಅಭ್ಯಾಸ- ಇದು ಮೊದಲ ಹೆಜ್ಜೆ. ಅರ್ಥವಾಯಿತೇ?

ವಿದ್ಯಾರ್ಥಿ: ಹೌದು ಸರ್.

 

*****



(Release ID: 2061889) Visitor Counter : 9