ಪ್ರಧಾನ ಮಂತ್ರಿಯವರ ಕಛೇರಿ

ಮಲೇಷ್ಯಾ ಪ್ರಧಾನಮಂತ್ರಿಯವರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆ 

Posted On: 20 AUG 2024 4:45PM by PIB Bengaluru

ಪ್ರಧಾನ ಮಂತ್ರಿ ಡಾಟೋ ಸೆರಿ ಅನ್ವರ್ ಇಬ್ರಾಹಿಂ,
ಎರಡೂ ನಿಯೋಗಗಳ ಸದಸ್ಯರು,
ನಮ್ಮ ಮಾಧ್ಯಮದ  ಸ್ನೇಹಿತರು,
ನಮಸ್ಕಾರ !

ಪ್ರಧಾನ ಮಂತ್ರಿಯಾದ ನಂತರ ಅನ್ವರ್ ಇಬ್ರಾಹಿಂ ಅವರ ಮೊದಲ ಭಾರತ ಭೇಟಿ ಇದಾಗಿದೆ. ನನ್ನ ಮೂರನೇ ಅವಧಿಯ ಆರಂಭದಲ್ಲಿ ನಿಮ್ಮನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ.

ಸ್ನೇಹಿತರೇ,

ಭಾರತ ಮತ್ತು ಮಲೇಷಿಯಾ ನಡುವಿನ ಸುಧಾರಿತ ಸ್ಟ್ರಾಟೆಜಿಕ್ ಪಾಲುದಾರಿಕೆಯು ದಶಕ ಪೂರೈಸಿದ್ದು, ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರ ನಾಯಕತ್ವದಲ್ಲಿ ಕಳೆದ ಎರಡು ವರ್ಷಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಇಂದು ನಡೆದ ಸಮಗ್ರ ಸಂವಾದದಲ್ಲಿ ದ್ವಿಪಕ್ಷೀಯ ಸಹಕಾರದ ಎಲ್ಲಾ ಆಯಾಮಗಳನ್ನು ವಿಸ್ತೃತವಾಗಿ ಚರ್ಚಿಸಲಾಯಿತು. ದ್ವಿಪಕ್ಷೀಯ ವ್ಯಾಪಾರವು ಸ್ಥಿರ ಪ್ರಗತಿಯನ್ನು ಕಂಡಿರುವುದು ಸಂತೋಷದ ಸಂಗತಿಯಾಗಿದೆ. ಭಾರತ ಮತ್ತು ಮಲೇಷಿಯಾ ನಡುವಿನ ವ್ಯಾಪಾರವನ್ನು ಭಾರತೀಯ ರೂಪಾಯಿ (INR) ಮತ್ತು ಮಲೇಷಿಯನ್ ರಿಂಗಿಟ್ (MYR) ಗಳಲ್ಲಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಮಲೇಷಿಯಾದಿಂದ ಭಾರತಕ್ಕೆ 5 ಬಿಲಿಯನ್ ಡಾಲರ್ ಗಳ ಹೂಡಿಕೆಯಾಗಿದೆ. ಇಂದು ನಾವು ನಮ್ಮ ಪಾಲುದಾರಿಕೆಯನ್ನು "ಸಮಗ್ರ ತಂತ್ರಾತ್ಮಕ ಪಾಲುದಾರಿಕೆ" ಗೆ ಏರಿಸಲು ನಿರ್ಧರಿಸಿದ್ದೇವೆ. ಆರ್ಥಿಕ ಸಹಕಾರದಲ್ಲಿ ಇನ್ನೂ ಹೆಚ್ಚಿನ ಸಾಧ್ಯತೆಗಳಿವೆ ಎಂದು ನಾವು ನಂಬುತ್ತೇವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸಬೇಕು. ನಾವು ಸೆಮಿಕಂಡಕ್ಟರ್ ಗಳು ಫಿನ್ಟೆಕ್, ರಕ್ಷಣಾ ಉದ್ಯಮ, ಎ.ಐ. ಮತ್ತು ಕ್ವಾಂಟಂ ನಂತಹ ಹೊಸ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ನಮ್ಮ ಪರಸ್ಪರ ಸಹಕಾರವನ್ನು ಹೆಚ್ಚಿಸಬೇಕು. ಭಾರತ ಮತ್ತು ಮಲೇಷ್ಯಾ ನಡುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಪರಿಶೀಲನೆಯನ್ನು ಹೆಚ್ಚಿಸುವುದರ ಮೇಲೆ ನಾವು ಒತ್ತು ನೀಡಿದ್ದೇವೆ. ಡಿಜಿಟಲ್ ಕೌನ್ಸಿಲ್ ಅನ್ನು ಸ್ಥಾಪಿಸಲು ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಸಹಕಾರಕ್ಕಾಗಿ ಸ್ಟಾರ್ಟ್-ಅಪ್ ಅಲಯನ್ಸ್ ಅನ್ನು ರಚಿಸಲು ನಿರ್ಧರಿಸಲಾಗಿದೆ. ಭಾರತದ UPI ಮತ್ತು ಮಲೇಷ್ಯಾದ ಪೇನೆಟ್ (Paynet) ಅನ್ನು ಸಂಪರ್ಕಿಸುವ ಕೆಲಸವನ್ನು ಸಹ ಮಾಡಲಾಗುವುದು. ಇಂದಿನ CEO ಫೋರಂನ ಸಭೆಯು ಹೊಸ ಸಾಧ್ಯತೆಗಳನ್ನು ಮುಂದಿಟ್ಟಿದೆ. ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರದ ಹೊಸ ಸಾಧ್ಯತೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧದ ಹೋರಾಟದಲ್ಲಿ ನಾವು ಸಂಕಲ್ಪಬದ್ಧರಾಗಿದ್ದೇವೆ.

ಭಾರತ ಮತ್ತು ಮಲೇಷಿಯಾಗಳ ಸಂಬಂಧಗಳು ಶತಮಾನಗಳಷ್ಟು ಹಳೆಯದ್ದು. ಮಲೇಷಿಯಾದಲ್ಲಿ ವಾಸಿಸುವ ಸುಮಾರು 30 ಲಕ್ಷ ಭಾರತೀಯ ವಲಸಿಗರು ಎರಡು ದೇಶಗಳ ನಡುವಿನ ಜೀವಂತ ಸೇತುವೆಯಾಗಿದ್ದಾರೆ. ಭಾರತೀಯ ಸಂಗೀತ, ಆಹಾರ, ಹಬ್ಬಗಳು ಮತ್ತು ಮಲೇಷಿಯಾದಲ್ಲಿನ "ತೋರಣ ದ್ವಾರ" (Toran Gate) ದವರೆಗೆ ನಮ್ಮ ಜನರು ಈ ಸ್ನೇಹವನ್ನು ಉಳಿಸಿಕೊಂಡಿದ್ದಾರೆ . ಕಳೆದ ವರ್ಷ ಮಲೇಷ್ಯಾದಲ್ಲಿ ಆಚರಿಸಲಾದ ' PIO ಡೇ ' ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಕಾರ್ಯಕ್ರಮವಾಗಿತ್ತು ನಮ್ಮ ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಿದಾಗ ಆ ಸ್ಮರಣೀಯ ಕ್ಷಣದ ಉತ್ಸಾಹ ಮಲೇಷಿಯಾದಲ್ಲೂ ಕಂಡುಬಂದಿತ್ತು. ಇಂದು ನಡೆದ ಕಾರ್ಮಿಕರ ನೇಮಕಾತಿ ಕುರಿತ ಒಪ್ಪಂದವು ಭಾರತದಿಂದ ಕಾರ್ಮಿಕರ ನೇಮಕಾತಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಜನರ ಸಂಚಾರವನ್ನು ಸುಗಮಗೊಳಿಸಲು ನಾವು ವೀಸಾ ಕಾರ್ಯವಿಧಾನಗಳನ್ನು ಸರಳಗೊಳಿಸಿದ್ದೇವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು ಮತ್ತು ಸರ್ಕಾರಿ ಅಧಿಕಾರಿಗಳ ತರಬೇತಿಯ ಮೇಲೆ ಒತ್ತು ನೀಡಲಾಗುತ್ತಿದೆ. ಈಗ ಸೈಬರ್ ಸುರಕ್ಷತೆ ಮತ್ತು ಕೃತಕ ಬುದ್ಧಿಮತ್ತೆ ಮುಂತಾದ ಅತ್ಯಾಧುನಿಕ ಕೋರ್ಸ್ ಗಳಿಗೆ ITEC ವಿದ್ಯಾರ್ಥಿ ವೇತನಗಳ ಅಡಿಯಲ್ಲಿ ಮಲೇಷಿಯಾಕ್ಕೆ ಮಾತ್ರ 100 ಸ್ಥಾನಗಳನ್ನು ಮೀಸಲಿಡಲಾಗುವುದು. ಮಲೇಷಿಯಾದ "ಟುಂಕು ಅಬ್ದುಲ್ ರೆಹಮಾನ್ ಯೂನಿವರ್ಸಿಟಿ" (Universiti Tunku Abdul Rahman) ಯಲ್ಲಿ ಆಯುರ್ವೇದ ಪೀಠವನ್ನು ಸ್ಥಾಪಿಸಲಾಗುತ್ತಿದೆ. ಇದಲ್ಲದೆ, ಮಲಯ ವಿಶ್ವವಿದ್ಯಾಲಯದಲ್ಲಿ ತಿರುವಳ್ಳುವರ್ ಪೀಠವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ . ಈ ಎಲ್ಲಾ ವಿಶೇಷ ಕ್ರಮಗಳಲ್ಲಿ ಸಹಕಾರ ನೀಡಿದ ಪ್ರಧಾನಿ ಅನ್ವರ್ ಮತ್ತು ಅವರ ತಂಡಕ್ಕೆ ನಾನು ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ .

ಸ್ನೇಹಿತರೇ, 

ಮಲೇಷ್ಯಾ ಆಸಿಯಾನ್ ಮತ್ತು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಪ್ರಮುಖ ಪಾಲುದಾರ. ಭಾರತವು ಆಸಿಯಾನ್ ಕೇಂದ್ರೀಯತೆಗೆ ಆದ್ಯತೆ ನೀಡುತ್ತದೆ. ಭಾರತ ಮತ್ತು ಆಸಿಯಾನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಪರಿಶೀಲನೆ ಸಮಯೋಚಿತವಾಗಿ ಪೂರ್ಣಗೊಳ್ಳಬೇಕೆಂದು ನಾವು ಒಪ್ಪುತ್ತೇವೆ. 2025 ರಲ್ಲಿ ಮಲೇಷಿಯಾದ ಯಶಸ್ವಿ ಆಸಿಯಾನ್ ಅಧ್ಯಕ್ಷತೆಗೆ ಭಾರತ ಸಂಪೂರ್ಣ ಬೆಂಬಲ ನೀಡುತ್ತದೆ. ಅಂತರಾಷ್ಟ್ರೀಯ ಕಾನೂನುಗಳಿಗೆ ಅನುಸಾರವಾಗಿ ನ್ಯಾವಿಗೇಷನ್ ಮತ್ತು ಓವರ್ ಫ್ಲೈಟ್ ಸ್ವಾತಂತ್ರ್ಯಕ್ಕೆ ನಾವು ಬದ್ಧರಾಗಿದ್ದೇವೆ. ಮತ್ತು , ನಾವು ಎಲ್ಲಾ ವಿವಾದಗಳ ಶಾಂತಿಯುತ ಇತ್ಯರ್ಥವನ್ನು ಪ್ರತಿಪಾದಿಸುತ್ತೇವೆ .

ಮಾನ್ಯರೇ,

ನಿಮ್ಮ ಸ್ನೇಹ ಮತ್ತು ಭಾರತದೊಂದಿಗಿನ ಸಂಬಂಧಗಳಿಗೆ ನಿಮ್ಮ ಬದ್ಧತೆಗೆ ನಾವು ಕೃತಜ್ಞರಾಗಿದ್ದೇವೆ. ನಿಮ್ಮ ಭೇಟಿಯು ಮುಂದಿನ ದಶಕಕ್ಕೆ ನಮ್ಮ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡಿದೆ. ಮತ್ತೊಮ್ಮೆ, ಎಲ್ಲರಿಗೂ ತುಂಬಾ ಧನ್ಯವಾದಗಳು.


ಸೂಚನೆ - ಇದು ಪ್ರಧಾನಿಯವರ ಭಾಷಣದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****



(Release ID: 2047093) Visitor Counter : 17