ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುಂಬೈನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 13 JUL 2024 8:28PM by PIB Bengaluru

ಮಹಾರಾಷ್ಟ್ರ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಜಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ ಜಿ, ರಾಮದಾಸ್ ಅಥಾವಳೆ ಜಿ, ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಜಿ, ಅಜಿತ್ ದಾದಾ ಪವಾರ್ ಜಿ, ರಾಜ್ಯ ಸರ್ಕಾರದ ಸಚಿವರಾದ ಮಂಗಲ್ ಪ್ರಭಾತ್ ಜಿ, ದೀಪಕ್ ಕೇಸರ್ಕರ್ ಜಿ, ಮತ್ತು ಇಲ್ಲಿ ನೆರೆದಿರುವ ಎಲ್ಲಾ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೇ!

ಮಹಾರಾಷ್ಟ್ರದ ನನ್ನೆಲ್ಲಾ ಸಹೋದರ, ಸಹೋದರಿಯರಿಗೆ ಶುಭಾಶಯಗಳು!

ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ 30,000 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುವ ಅವಕಾಶ ನನಗಿಂದು ಸಿಕ್ಕಿದೆ. ಈ ಯೋಜನೆಗಳು ಮುಂಬೈ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ರಸ್ತೆ ಮತ್ತು ರೈಲು ಯೋಜನೆಗಳ ಜತೆಗೆ, ಮಹಾರಾಷ್ಟ್ರದಲ್ಲಿ ಯುವಕರ ಕೌಶಲ್ಯ ಅಭಿವೃದ್ಧಿಯ ಪ್ರಮುಖ ಯೋಜನೆಯೂ ಇದೆ, ಇದು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ನೀವು ಇದನ್ನು ಪತ್ರಿಕೆಗಳಲ್ಲಿ ಓದಿರಬಹುದು ಅಥವಾ ಟಿವಿಯಲ್ಲಿ ನೋಡಿರಬಹುದು. 2-3 ವಾರಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಮಹಾರಾಷ್ಟ್ರದ ವಧಾವನ್ ಬಂದರು ಅಭಿವೃದ್ಧಿಗೆ ಅನುಮೋದನೆ ನೀಡಿತ್ತು. 76,000 ಕೋಟಿ ರೂ. ಮೊತ್ತದ ಈ ಯೋಜನೆಯು ಈ ಪ್ರದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ.

ಸ್ನೇಹಿತರೆ,

ಕಳೆದ 1 ತಿಂಗಳಿಂದ ಮುಂಬೈ ಮಹಾನಗರಿಯು ಭಾರತ ಮತ್ತು ವಿದೇಶಿ ಹೂಡಿಕೆದಾರರ ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಹೂಡಿಕೆದಾರರು, ದೊಡ್ಡವರೇ ಇರಲಿ ಅಥವಾ ಚಿಕ್ಕವರೇ ಇರಲಿ, ನಮ್ಮ ಸರ್ಕಾರದ 3ನೇ ಅವಧಿಯನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ. ಎನ್‌ಡಿಎ ಸರ್ಕಾರ ಮಾತ್ರ ಸ್ಥಿರತೆ ನೀಡಬಲ್ಲದು ಎಂಬುದನ್ನು ಜನರು ಗುರುತಿಸಿದ್ದಾರೆ. 3ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ನಂತರ, ಈ 3ನೇ ಅವಧಿಯಲ್ಲಿ ಎನ್‌ಡಿಎ ಸರ್ಕಾರವು 3 ಪಟ್ಟು ವೇಗವಾಗಿ ಕೆಲಸ ಮಾಡಲಿದೆ ಎಂದು ನಾನು ಸಂಕಲ್ಪ ತೊಟ್ಟಿದ್ದೇನೆ. ಇಂದು ಈ ಭರವಸೆ ಕಾರ್ಯರೂಪಕ್ಕೆ ಬರುವುದನ್ನು ನಾವು ನೋಡುತ್ತಿದ್ದೇವೆ.

ಸ್ನೇಹಿತರೆ,

ಮಹಾರಾಷ್ಟ್ರವು ಭವ್ಯವಾದ ಇತಿಹಾಸ, ದೃಢವಾದ ವರ್ತಮಾನ ಮತ್ತು ಸಮೃದ್ಧ ಭವಿಷ್ಯದ ಕನಸು ಹೊಂದಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ಮಹಾರಾಷ್ಟ್ರ ಮಹತ್ವದ ಪಾತ್ರ ವಹಿಸಲಿದೆ. ಇದು ಕೈಗಾರಿಕಾ ಶಕ್ತಿ, ಕೃಷಿ ಶಕ್ತಿ ಮತ್ತು ಅಸಾಧಾರಣವಾದ ಆರ್ಥಿಕ ವಲಯವನ್ನು ಹೊಂದಿದೆ. ಈ ಶಕ್ತಿಯು ಮುಂಬೈಯನ್ನು ದೇಶದ ಆರ್ಥಿಕ ಕೇಂದ್ರವನ್ನಾಗಿ ಸ್ಥಾಪಿಸಿದೆ. ಮಹಾರಾಷ್ಟ್ರವನ್ನು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡಲು ಮತ್ತು ಮುಂಬೈಯನ್ನು ವಿಶ್ವದ ಹಣಕಾಸು ತ್ತ್ರಜ್ಞಾನ ರಾಜಧಾನಿಯನ್ನಾಗಿ ಪರಿವರ್ತಿಸಲು ಈ ಶಕ್ತಿಯನ್ನು ಬಳಸಿಕೊಳ್ಳುವುದು ನನ್ನ ಗುರಿಯಾಗಿದೆ. ಪ್ರವಾಸೋದ್ಯಮದಲ್ಲಿ ಮಹಾರಾಷ್ಟ್ರವು ಭಾರತದ ಅಗ್ರ ರಾಜ್ಯವಾಗಬೇಕೆಂದು ನಾನು ಬಯಸುತ್ತೇನೆ. ಇದು ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯಕ್ಕೆ ಸಾಕ್ಷಿಯಾಗುವ ಭವ್ಯವಾದ ಕೋಟೆಗಳನ್ನು ಹೊಂದಿದೆ, ಕೊಂಕಣದ ಮೋಡಿ ಮಾಡುವ ಕಡಲತೀರಗಳು ಮತ್ತು ಸಹ್ಯಾದ್ರಿ ಬೆಟ್ಟಗಳ ಸಾಲಿನ ರೋಮಾಂಚಕ ಪ್ರಯಾಣಗಳು ಇಲ್ಲಿವೆ. ಇಲ್ಲಿ ಕಾನ್ಫರೆನ್ಸ್ ಪ್ರವಾಸೋದ್ಯಮ(ಉದ್ಯಮ ವ್ಯವಹಾರಕ್ಕಾಗಿ ಕೈಗೊಳ್ಳುವ ಪ್ರವಾಸೋದ್ಯಮ) ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿವೆ. ಭಾರತದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲು ಮಹಾರಾಷ್ಟ್ರ ಸಜ್ಜಾಗಿದೆ, ನಾವೆಲ್ಲರೂ ಈ ಪ್ರಯಾಣದ ಭಾಗವಾಗಿದ್ದೇವೆ. ಇಂದಿನ ಕಾರ್ಯಕ್ರಮವು ಮಹಾಮೈತ್ರಿ(ಮಹಾಯುತಿ) ಸರ್ಕಾರದ ಈ ಗುರಿಗಳಿಗೆ ಸಮರ್ಪಿಸಲಾಗಿದೆ.

ಸ್ನೇಹಿತರೆ,

21ನೇ ಶತಮಾನದ ಭಾರತದ ಆಕಾಂಕ್ಷೆಗಳು ಪ್ರಸ್ತುತ ಸಾರ್ವಕಾಲಿಕ ಉತ್ತುಂಗದಲ್ಲಿವೆ. ಈ ಶತಮಾನದ ಸುಮಾರು 25 ವರ್ಷಗಳು ಪೂರ್ಣಗೊಂಡಿವೆ, ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ನಮ್ಮ ದೇಶದ ಜನರು ತ್ವರಿತ ಅಭಿವೃದ್ಧಿಗಾಗಿ ಉತ್ಸುಕರಾಗಿದ್ದಾರೆ. ಈ ಪ್ರಯತ್ನದಲ್ಲಿ ವಿಶೇಷವಾಗಿ ಮುಂಬೈ ಮತ್ತು ಸಾಮಾನ್ಯವಾಗಿ ಮಹಾರಾಷ್ಟ್ರವು ಮಹತ್ವದ ಪಾತ್ರ ವಹಿಸುತ್ತದೆ. ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುವುದು ನಮ್ಮ ಗುರಿಯಾಗಿದೆ. ಆದ್ದರಿಂದ, ಮುಂಬೈ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಪರ್ಕ ಹೆಚ್ಚಿಸಲು ನಾವು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಮುಂಬೈನ ಕರಾವಳಿ ರಸ್ತೆ ಮತ್ತು ಅಟಲ್ ಸೇತು ಈಗ ಪೂರ್ಣಗೊಂಡಿದೆ. ಅಟಲ್ ಸೇತುವೆ ನಿರ್ಮಾಣದ ಸಮಯದಲ್ಲಿ ಸಾಕಷ್ಟು ವಿರೋಧದ ನಡುವೆ, ಅದನ್ನು ವಿಳಂಬಗೊಳಿಸುವ ಪ್ರಯತ್ನಗಳು ನಡೆದಿದ್ದು ನಿಮಗೆ ನೆನಪಿರಬಹುದು. ಆದಾಗ್ಯೂ, ಇಂದು ಪ್ರತಿಯೊಬ್ಬರೂ ಅದರ ಅದ್ಭುತ ಅಥವಾ ಪ್ರಚಂಡ ಪ್ರಯೋಜನಗಳನ್ನು ನೋಡಬಹುದು. ಪ್ರತಿದಿನ ಸುಮಾರು 20,000 ವಾಹನಗಳು ಇದನ್ನು ಬಳಸುತ್ತಿದ್ದು, ಪ್ರತಿದಿನ ಅಂದಾಜು 20-25 ಲಕ್ಷ ರೂಪಾಯಿ ಮೌಲ್ಯದ ಇಂಧನ ಉಳಿತಾಯವಾಗುತ್ತಿದೆ ಎಂದು ನನಗೆ ತಿಳಿದುಬಂದಿದೆ. ಇದಲ್ಲದೆ, ಈಗ ಪನ್ವೆಲ್ ತಲುಪಲು ಸುಮಾರು 45 ನಿಮಿಷ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಸಮಯದ ಉಳಿತಾಯ ಮತ್ತು ಪರಿಸರ ಪ್ರಯೋಜನಗಳು ಸಿಗುತ್ತಿವೆ. ಇದೇ ವಿಧಾನದಲ್ಲಿ ನಾವು ಮುಂಬೈ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುತ್ತಿದ್ದೇವೆ. ಮುಂಬೈ ಮೆಟ್ರೋದ ವಿಸ್ತರಣೆ ಕೂಡ ವೇಗವಾಗಿ ನಡೆಯುತ್ತಿದೆ. 10 ವರ್ಷಗಳ ಹಿಂದೆ ಮುಂಬೈ ಕೇವಲ 8 ಕಿಮೀ ಮೆಟ್ರೋ ಮಾರ್ಗ ಹೊಂದಿತ್ತು, ಆದರೆ ಇಂದು ಅದು ಸುಮಾರು 80 ಕಿಮೀ ವ್ಯಾಪಿಸಿದೆ. ಹೆಚ್ಚುವರಿಯಾಗಿ, ಮುಂಬೈನಲ್ಲಿ ಸರಿಸುಮಾರು 200 ಕಿ.ಮೀ. ಮೆಟ್ರೋ ಜಾಲದ ಕೆಲಸ ಭರದಿಂದ ಸಾಗಿದೆ.

ಸ್ನೇಹಿತರೆ,

ಭಾರತೀಯ ರೈಲ್ವೆಯ ಪರಿವರ್ತನೆಯು ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ನಾಗ್ಪುರ ಮತ್ತು ಅಜ್ನಿ ನಿಲ್ದಾಣಗಳ ಪುನರಾಭಿವೃದ್ಧಿ ತ್ವರಿತವಾಗಿ ಪ್ರಗತಿಯಲ್ಲಿದೆ. ಇಂದು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಲೋಕಮಾನ್ಯ ತಿಲಕ್ ನಿಲ್ದಾಣದಲ್ಲಿ ಹೊಸ ವೇದಿಕೆಗಳನ್ನು ಉದ್ಘಾಟಿಸಲಾಗಿದೆ. ಈ ಎಲ್ಲಾ ನಿಲ್ದಾಣಗಳಿಂದ 24 ಕೋಚ್‌ಗಳೊಂದಿಗೆ ದೀರ್ಘ ರೈಲುಗಳ ಕಾರ್ಯಾಚರಣೆಯನ್ನು ಇದು ಸಕ್ರಿಯಗೊಳಿಸುತ್ತದೆ.

ಸ್ನೇಹಿತರೆ,

ಕಳೆದ 1 ದಶಕದಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ 3 ಪಟ್ಟು ಹೆಚ್ಚಾಗಿದೆ. ಗೋರೆಗಾಂವ್-ಮುಲುಂಡ್ ಸಂಪರ್ಕ ರಸ್ತೆ ಯೋಜನೆಯು ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಾಮರಸ್ಯಕ್ಕೆ ಉದಾಹರಣೆಯಾಗಿದೆ. ಇಂದು ಥಾಣೆಯಿಂದ ಬೊರಿವಲಿಗೆ ಅವಳಿ ಸುರಂಗ ಯೋಜನೆಯ ಕೆಲಸವೂ ಪ್ರಾರಂಭವಾಗಿದೆ. ಇದು ಈ 2 ಸ್ಥಳಗಳ ನಡುವಿನ ಪ್ರಯಾಣ ಸಮಯವನ್ನು ಕೆಲವೇ ನಿಮಿಷಗಳಿಗೆ ಕಡಿಮೆ ಮಾಡಲಿದೆ. ಎನ್ ಡಿಎ ಸರ್ಕಾರವು ನಮ್ಮ ಯಾತ್ರಾ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಮತ್ತು ಯಾತ್ರಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಹೆಚ್ಚಿಸಲು ಸತತವಾಗಿ ಶ್ರಮಿಸುತ್ತಿದೆ. ಪ್ರಸ್ತುತ, ಪಂಢರಪುರ ವಾರಿಯಲ್ಲಿ ಲಕ್ಷಾಂತರ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಪುಣೆಯಿಂದ ಪಂಢರಪುರದವರೆಗೆ ಪ್ರಯಾಣ ಸುಗಮವಾಗಿಸಲು ಮತ್ತು ಭಕ್ತರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದನ್ನು ಎನ್‌ಡಿಎ ಸರ್ಕಾರ ಖಚಿತಪಡಿಸಿದೆ. ಸಂತ ಜ್ಞಾನೇಶ್ವರ್ ಪಾಲ್ಖಿ ಮಾರ್ಗದಲ್ಲಿ ಸುಮಾರು 200 ಕಿಮೀ ಉದ್ದದ ಕಾಮಗಾರಿ ಪೂರ್ಣಗೊಂಡಿದ್ದು, ಸಂತ ತುಕಾರಾಂ ಪಾಲ್ಖಿ ಮಾರ್ಗದ 110 ಕಿಮೀ ಈ ಎರಡೂ ಮಾರ್ಗಗಳು ಶೀಘ್ರದಲ್ಲೇ ಯಾತ್ರಿಗಳಿಗೆ ಸೇವೆ ನೀಡಲು ಸಂಪೂರ್ಣ ಸಿದ್ಧವಾಗಲಿದೆ.

ಸಹೋದರ ಸಹೋದರಿಯರೆ,

ಇಂತಹ ಸಂಪರ್ಕ ಮೂಲಸೌಕರ್ಯವು ಪ್ರವಾಸೋದ್ಯಮ, ಕೃಷಿ ಮತ್ತು ಕೈಗಾರಿಕಾ ವಲಯಕ್ಕೆ ಹಲವು ಪ್ರಯೋಜನ ನೀಡುತ್ತಿದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಸುಧಾರಿತ ಸಂಪರ್ಕವು ಮಹಿಳೆಯರಿಗೆ ಅನುಕೂಲ ಮತ್ತು ಭದ್ರತೆ ಒದಗಿಸುವ ಜತೆಗೆ, ಅವರ ಘನತೆಯನ್ನು ಹೆಚ್ಚಿಸುತ್ತದೆ. ಎನ್‌ಡಿಎ ಸರ್ಕಾರದ ಈ ಉಪಕ್ರಮಗಳು ಬಡವರು, ರೈತರು, ಮಹಿಳೆಯರು ಮತ್ತು ಯುವಕರನ್ನು ಸಬಲೀಕರಣಗೊಳಿಸುತ್ತಿವೆ. ಮಹಾರಾಷ್ಟ್ರದ ಮಹಾಮೈತ್ರಿ ಸರ್ಕಾರವು ಅದೇ ಬದ್ಧತೆಯನ್ನು ಹಂಚಿಕೊಳ್ಳುತ್ತದೆ. ಮಹಾರಾಷ್ಟ್ರ ಸರ್ಕಾರವು ಪ್ರತಿ ವರ್ಷ 10 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ವಾಗ್ದಾನ ಮಾಡಿರುವುದು ನನಗೆ ಸಂತಸ ತಂದಿದೆ. ಪ್ರಧಾನ ಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆಯಡಿ ತರಬೇತಿ ಸಮಯದಲ್ಲಿ ವಿದ್ಯಾರ್ಥಿವೇತನವನ್ನು ಸಹ ನೀಡಲಾಗುತ್ತದೆ.

ಸ್ನೇಹಿತರೆ,

ಭಾರತಕ್ಕೆ ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್ ಪ್ರಮಾಣದ ಉದ್ಯೋಗ ಅತ್ಯಗತ್ಯ. ಈ ಗುರಿಗಳತ್ತ ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಕಳೆದ 4-5 ವರ್ಷಗಳಲ್ಲಿ ಕೋವಿಡ್-19ನಂತಹ ದೊಡ್ಡ ಬಿಕ್ಕಟ್ಟು ಎದುರಿಸಿದರೂ, ಭಾರತವು ದಾಖಲೆ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಉದ್ಯೋಗ ಕುರಿತು ವಿಸ್ತೃತ ವರದಿ ಬಿಡುಗಡೆ ಮಾಡಿದ್ದು, ಕಳೆದ 3-4 ವರ್ಷಗಳಲ್ಲಿ ದೇಶದಲ್ಲಿ ಸರಿಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದೆ. ಈ ಅಂಕಿಅಂಶಗಳು ಉದ್ಯೋಗದ ಬಗ್ಗೆ ಸುಳ್ಳು ನಿರೂಪಣೆಗಳನ್ನು ಹರಡುವವರನ್ನು ಮೌನಗೊಳಿಸಿವೆ. ಇಂತಹ ಸುಳ್ಳು ನಿರೂಪಣೆಗಳು ಅಥವಾ ಹೇಳಿಕೆಗಳು ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಭಾರತದ ಪ್ರಗತಿಗೆ ಹಾನಿಕಾರಕ. ಅವರ ಪ್ರತಿಯೊಂದು ನೀತಿಯೂ ಯುವಕರಿಗೆ ದ್ರೋಹ ಬಗೆಯುವುದು ಮತ್ತು ಉದ್ಯೋಗಕ್ಕೆ ಅಡ್ಡಿಪಡಿಸುವ ಗುರಿ ಹೊಂದಿವೆ. ಆದಾಗ್ಯೂ, ಅವರ ನಿಜವಾದ ಉದ್ದೇಶಗಳು ಈಗ ಬಹಿರಂಗಗೊಳ್ಳುತ್ತಿವೆ. ಭಾರತದ ಜನರು ಬುದ್ಧಿವಂತರಾಗಿದ್ದಾರೆ, ಆದ್ದರಿಂದ ಅವರ ಸುಳ್ಳು ಮತ್ತು ವಂಚನೆಗಳನ್ನು ತಿರಸ್ಕರಿಸುತ್ತಿದ್ದಾರೆ. ಸೇತುವೆ ನಿರ್ಮಿಸಿದಾಗ, ರೈಲ್ವೆ ಹಳಿ ಹಾಕಿದಾಗ, ರಸ್ತೆ ನಿರ್ಮಿಸಿದಾಗ ಅಥವಾ ಸ್ಥಳೀಯ ರೈಲು ಕೋಚ್ ತಯಾರಿಸಿದಾಗ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವೇಗ ಹೆಚ್ಚಾದಂತೆ ಉದ್ಯೋಗ ಸೃಷ್ಟಿಯ ಪ್ರಮಾಣವೂ ಸಹ ಹೆಚ್ಚುತ್ತದೆ. ಮುಂಬರುವ ದಿನಗಳಲ್ಲಿ ಹೊಸ ಹೂಡಿಕೆಗಳೊಂದಿಗೆ, ಈ ಅವಕಾಶಗಳು ಮತ್ತಷ್ಟು ಬೆಳೆಯಲಿವೆ.

ಸ್ನೇಹಿತರೆ,

ಎನ್‌ಡಿಎ ಸರ್ಕಾರದ ಅಭಿವೃದ್ಧಿ ಮಾದರಿಯು ಸಮಾಜದ ವಂಚಿತ ವರ್ಗಕ್ಕೆ ಆದ್ಯತೆ ನೀಡಲಿದೆ. ದಶಕಗಳಿಂದ ಸಾಮಾಜಿಕ ಸವಲತ್ತುಗಳಿಂದ ವಂಚಿತರಾದವರಿಗೆ ನಾವು ಗಮನ ಹರಿಸುತ್ತೇವೆ. ನೂತನ ಸರಕಾರ ಅಧಿಕಾರ ಸ್ವೀಕರಿಸಿದ ಕೂಡಲೇ ಬಡವರಿಗೆ ಪಕ್ಕಾ ಮನೆಗಳ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ, ರೈತರ ಕಲ್ಯಾಣಕ್ಕಾಗಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ. ಇದುವರೆಗೆ 4 ಕೋಟಿ ಬಡವರು ಪಕ್ಕಾ ಮನೆಗಳನ್ನು ಪಡೆದಿದ್ದಾರೆ. ಮುಂಬರುವ ವರ್ಷಗಳಲ್ಲಿ ಮಹಾರಾಷ್ಟ್ರದ ಲಕ್ಷಾಂತರ ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳು ಸೇರಿದಂತೆ ಇನ್ನೂ 3 ಕೋಟಿ ಬಡ ಕುಟುಂಬಗಳು ಪಕ್ಕಾ ಮನೆಗಳನ್ನು ಪಡೆಯಲಿವೆ. ಒಳ್ಳೆಯ ಮನೆ ಪ್ರತಿ ಕುಟುಂಬಕ್ಕೂ ಅಗತ್ಯ ಮಾತ್ರವಲ್ಲ, ಘನತೆಯ ವಿಷಯವೂ ಆಗಿದೆ. ಆದ್ದರಿಂದ, ನಗರಗಳಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆಯ ಕನಸನ್ನು ನನಸಾಗಿಸಲು ನಾವು ಶ್ರಮಿಸುತ್ತಿದ್ದೇವೆ.

ಸ್ನೇಹಿತರೆ,

ಬೀದಿ ಬದಿ ವ್ಯಾಪಾರಿಗಳು ಗೌರವಯುತ ಜೀವನ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಸ್ವನಿಧಿ ಯೋಜನೆಯು ಈ ನಿಟ್ಟಿನಲ್ಲಿ ಅಪಾರ ಪ್ರಯೋಜನಕಾರಿಯಾಗಿದೆ. ಈ ಯೋಜನೆಯಡಿ ಇದುವರೆಗೆ 90 ಲಕ್ಷ ಸಾಲ ಮಂಜೂರಾಗಿದ್ದು, ಇದರಲ್ಲಿ ಸುಮಾರು 13 ಲಕ್ಷ ಸಾಲ ಮಹಾರಾಷ್ಟ್ರದ ಬೀದಿ ಬದಿ ವ್ಯಾಪಾರಿಗಳಿಗೆ ಹೋಗುತ್ತಿದೆ. ಮುಂಬೈಯೊಂದರಲ್ಲೇ 1.5 ಲಕ್ಷ ಬೀದಿಬದಿ ವ್ಯಾಪಾರಿಗಳು ಸ್ವನಿಧಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಸ್ವನಿಧಿ ಯೋಜನೆ ಮೂಲಕ ಬ್ಯಾಂಕ್‌ಗಳ ಬೆಂಬಲವು ಅವರ ವ್ಯವಹಾರಗಳನ್ನು ಬಲಪಡಿಸುತ್ತಿದೆ ಮತ್ತು ಈ ಯೋಜನೆಯ ಫಲಾನುಭವಿಗಳ ಮಾಸಿಕ ಆದಾಯವು ಸರಿಸುಮಾರು 2,000 ರೂಪಾಯಿ ಹೆಚ್ಚಾಗಿದೆ ಎಂದು ಅಧ್ಯಯನಗಳು ತಿಳಿಸುತ್ತಿವೆ. ವಾರ್ಷಿಕವಾಗಿ ಅವರು ಹೆಚ್ಚುವರಿ 20,000-25,000 ರೂಪಾಯಿ ಆದಾಯ ಸಂಪಾದಿಸುತ್ತಿದ್ದಾರೆ.

ಸ್ನೇಹಿತರೆ,

ಸ್ವನಿಧಿ ಯೋಜನೆಯ ಇನ್ನೊಂದು ಪ್ರಮುಖ ಅಂಶದ ಮೇಲೆ ಬೆಳಕು ಚೆಲ್ಲಲು ನಾನು ಬಯಸುತ್ತೇನೆ. ಈ ಸಾಲಗಳನ್ನು ಪಡೆದವರು ಶ್ರದ್ಧೆಯಿಂದ ಮತ್ತು ಪ್ರಾಮಾಣಿಕವಾಗಿ ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಮಾಡುತ್ತಿದ್ದಾರೆ. ಇದು ನನ್ನ ಬಡ ಸಹೋದರ ಸಹೋದರಿಯರ ಸ್ವಾಭಿಮಾನ ಮತ್ತು ಸಮಗ್ರತೆಯನ್ನು ಪ್ರತಿಬಿಂಬಿಸುತ್ತಿದೆ. ಗಮನಾರ್ಹವಾಗಿ, ಸ್ವನಿಧಿ ಫಲಾನುಭವಿಗಳು ಇಲ್ಲಿಯವರೆಗೆ 3.25 ಲಕ್ಷ ಕೋಟಿ ರೂ. ಮೌಲ್ಯದ ಡಿಜಿಟಲ್ ವಹಿವಾಟು ನಡೆಸಿದ್ದಾರೆ. ಇದು ಡಿಜಿಟಲ್ ಇಂಡಿಯಾವನ್ನು ಸಶಕ್ತಗೊಳಿಸುವುದಲ್ಲದೆ, ನಮ್ಮ ರಾಷ್ಟ್ರಕ್ಕೆ ಹೊಸ ಗುರುತು ನೀಡುತ್ತದೆ.

ಸ್ನೇಹಿತರೆ,

ಭಾರತದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಜ್ಞೆಗೆ ಮಹಾರಾಷ್ಟ್ರ ಗಣನೀಯ ಕೊಡುಗೆ ನೀಡಿದೆ. ಛತ್ರಪತಿ ಶಿವಾಜಿ ಮಹಾರಾಜ್, ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಅಣ್ಣಾಭಾವು ಸಾಠೆ, ಲೋಕಮಾನ್ಯ ತಿಲಕ್ ಮತ್ತು ವೀರ್ ಸಾವರ್ಕರ್ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಪರಂಪರೆಗೆ ಈ ಭೂಮಿ ನೆಲೆಯಾಗಿದೆ. ಈ ಸುಪ್ರಸಿದ್ಧ ವ್ಯಕ್ತಿಗಳು ರೂಪಿಸಿದ ಸಾಮರಸ್ಯ ಸಮಾಜ ಮತ್ತು ಬಲಿಷ್ಠ ರಾಷ್ಟ್ರದ ಕಡೆಗೆ ನಾವು ಶ್ರಮಿಸಬೇಕು. ಸಮೃದ್ಧಿಯ ಹಾದಿಯು ಸಾಮರಸ್ಯ ಮತ್ತು ಸದ್ಭಾವನೆಯಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಭಾವನೆಯೊಂದಿಗೆ, ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(Release ID: 2033999)