ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರದ ಮುಂಬೈಯಲ್ಲಿ 29,400 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಥಾಣೆ ಬೋರಿವಲಿ ಅವಳಿ ಸುರಂಗ ಯೋಜನೆ ಮತ್ತು ಗೋರೆಗಾಂವ್ ಮುಲುಂಡ್ ಲಿಂಕ್ ರಸ್ತೆ ಯೋಜನೆಯ ಸುರಂಗ ಕಾಮಗಾರಿಗೆ ಶಂಕುಸ್ಥಾಪನೆ

ನವೀ ಮುಂಬೈಯಲ್ಲಿ ಕಲ್ಯಾಣ್ ಯಾರ್ಡ್ ಮರುನಿರ್ಮಾಣ ಮತ್ತು ಗತಿ ಶಕ್ತಿ ಬಹು ಮಾದರಿ ಸರಕು ಟರ್ಮಿನಲ್ ಗೆ ಶಂಕುಸ್ಥಾಪನೆ

ಲೋಕಮಾನ್ಯ ತಿಲಕ್ ಟರ್ಮಿನಸ್ ನಲ್ಲಿ ಹೊಸ ಪ್ಲಾಟ್ ಫಾರ್ಮ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ 10 ಮತ್ತು 11 ರ ವಿಸ್ತರಣೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು

ಸುಮಾರು 5600 ಕೋಟಿ ರೂ.ಗಳ ವೆಚ್ಚದಲ್ಲಿ ಮುಖ್ಯಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆಗೆ ಚಾಲನೆ

"ಹೂಡಿಕೆದಾರರು ಸರ್ಕಾರದ ಮೂರನೇ ಅವಧಿಯನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ"

"ಮಹಾರಾಷ್ಟ್ರದ ಶಕ್ತಿಯನ್ನು ಬಳಸಿಕೊಂಡು ಅದನ್ನು ವಿಶ್ವದ ಆರ್ಥಿಕ ಶಕ್ತಿಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ನಾನು ಹೊಂದಿದ್ದೇನೆ; ಮುಂಬೈಯನ್ನು ವಿಶ್ವದ ಫಿನ್ ಟೆಕ್ ರಾಜಧಾನಿಯನ್ನಾಗಿ ಮಾಡುವ ಗುರಿ ಇದೆ

"ದೇಶದ ಜನರು ನಿರಂತರ ಕ್ಷಿಪ್ರ ಅಭಿವೃದ್ಧಿಯನ್ನು ಬಯಸುತ್ತಾರೆ ಮತ್ತು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಬಯಸುತ್ತಾರೆ"

"ಕೌಶಲ್ಯ ಅಭಿವೃದ್ಧಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವು ಭಾರತದ ಈ ಸಮಯದ ಅಗತ್ಯವಾಗಿದೆ"

"ವಂಚಿತರಿಗೆ ಆದ್ಯ

Posted On: 13 JUL 2024 7:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಮುಂಬೈಯಲ್ಲಿ 29,400 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ರಸ್ತೆ, ರೈಲ್ವೆ ಮತ್ತು ಬಂದರು ವಲಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳ ನಡುವೆ ರಸ್ತೆ ಮತ್ತು ರೈಲು ಸಂಪರ್ಕವನ್ನು ಸುಧಾರಿಸಲು 29,400 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮತ್ತು ರಾಷ್ಟ್ರಕ್ಕೆ ಸಮರ್ಪಿಸುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮಹಾರಾಷ್ಟ್ರದ ಯುವಜನರಿಗಾಗಿ ಬೃಹತ್ ಕೌಶಲ್ಯ ಅಭಿವೃದ್ಧಿ ಯೋಜನೆಯ ಬಗ್ಗೆಯೂ ಅವರು ಮಾತನಾಡಿದರು, ಇದು ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು. ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮೋದಿಸಿದ ವಾಧವನ್ ಬಂದರನ್ನು ಪ್ರಧಾನಿ ಉಲ್ಲೇಖಿಸಿದರು. "76,000 ಕೋಟಿ ರೂ.ಗಳ ಯೋಜನೆಯು 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಅವರು ಹೇಳಿದರು.

ಕಳೆದ ಒಂದು ತಿಂಗಳಲ್ಲಿ ಮುಂಬೈಯಲ್ಲಿ ಹೂಡಿಕೆದಾರರ ಮನಸ್ಥಿತಿಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಸಣ್ಣ ಮತ್ತು ದೊಡ್ಡ ಹೂಡಿಕೆದಾರರು ಸರ್ಕಾರದ ಮೂರನೇ ಅವಧಿಯನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ ಎಂದರು. ಸ್ಥಿರ ಸರ್ಕಾರವು ತನ್ನ ಮೂರನೇ ಅವಧಿಯಲ್ಲಿ ತ್ರಿವಳಿ ವೇಗದಲ್ಲಿ ಕೆಲಸ ಮಾಡುತ್ತದೆ ಎಂದು ಅವರು ನುಡಿದರು.

ಮಹಾರಾಷ್ಟ್ರವು ಅದ್ಭುತ ಇತಿಹಾಸ, ಸಶಕ್ತ ವರ್ತಮಾನ ಮತ್ತು ಸಮೃದ್ಧ ಭವಿಷ್ಯದ ಕನಸುಗಳನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಮಹಾರಾಷ್ಟ್ರ ರಾಜ್ಯದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕೈಗಾರಿಕೆ, ಕೃಷಿ ಮತ್ತು ಹಣಕಾಸು ಕ್ಷೇತ್ರದ ಶಕ್ತಿ ಮುಂಬೈಯನ್ನು ದೇಶದ ಆರ್ಥಿಕ ಕೇಂದ್ರವನ್ನಾಗಿ ಮಾಡಿದೆ ಎಂದರು. "ಮಹಾರಾಷ್ಟ್ರದ ಶಕ್ತಿಯನ್ನು ಬಳಸಿಕೊಂಡು ಅದನ್ನು ವಿಶ್ವದ ಆರ್ಥಿಕ ಶಕ್ತಿಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ನಾನು ಹೊಂದಿದ್ದೇನೆ; ಮುಂಬೈಯನ್ನು ವಿಶ್ವದ ಫಿನ್ಟೆಕ್ ರಾಜಧಾನಿಯನ್ನಾಗಿ ಮಾಡಬೇಕು” ಎಂದೂ ಅವರು ಹೇಳಿದರು. ಮಹಾರಾಷ್ಟ್ರದ ಶಿವಾಜಿ ಮಹಾರಾಜರ ಭವ್ಯ ಕೋಟೆಗಳು, ಕೊಂಕಣ ಕರಾವಳಿ ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿಯ ಬಗ್ಗೆ ಬೆಳಕು ಚೆಲ್ಲಿದ ಶ್ರೀ ಮೋದಿ, ಪ್ರವಾಸೋದ್ಯಮದಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನಕ್ಕೆ ಏರುವ ಆಶಯವನ್ನು ವ್ಯಕ್ತಪಡಿಸಿದರು. ವೈದ್ಯಕೀಯ ಪ್ರವಾಸೋದ್ಯಮ ಮತ್ತು ಸಮ್ಮೇಳನ ಪ್ರವಾಸೋದ್ಯಮದಲ್ಲಿ ರಾಜ್ಯದ ಸಾಮರ್ಥ್ಯದ ಬಗ್ಗೆಯೂ ಅವರು ಮಾತನಾಡಿದರು. "ಮಹಾರಾಷ್ಟ್ರವು ಭಾರತದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯಲಿದೆ, ಮತ್ತು ನಾವು ಅದರ ಸಹ-ಪ್ರಯಾಣಿಕರು" ಎಂದೂ ಪ್ರಧಾನ ಮಂತ್ರಿ  ಮೋದಿ ಹೇಳಿದರು.  ಇಂದಿನ ಕಾರ್ಯಕ್ರಮವು ಅಂತಹ ನಿರ್ಣಯಗಳಿಗೆ/ನಿರ್ಧಾರಗಳಿಗೆ ಸರ್ಕಾರದ ಬದ್ಧತೆಯಾಗಿದೆ ಎಂದು ಒತ್ತಿಹೇಳಿದರು.

21 ನೇ ಶತಮಾನದಲ್ಲಿ ಭಾರತೀಯ ನಾಗರಿಕರ ಉನ್ನತ ಆಕಾಂಕ್ಷೆಗಳನ್ನು ವಿವರಿಸಿದ ಪ್ರಧಾನ ಮಂತ್ರಿ ಮೋದಿ, ಮುಂದಿನ 25 ವರ್ಷಗಳಲ್ಲಿ ವಿಕ್ಷಿತ್ ಭಾರತ್ ನಿರ್ಮಾಣದ ರಾಷ್ಟ್ರೀಯ ಸಂಕಲ್ಪವನ್ನು ಪುನರುಚ್ಚರಿಸಿದರು. ಈ ಪ್ರಯಾಣದಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ಪಾತ್ರವನ್ನು ಅವರು ಒತ್ತಿ ಹೇಳಿದರು. "ಮುಂಬೈ ಮತ್ತು ಮಹಾರಾಷ್ಟ್ರದ ಪ್ರತಿಯೊಬ್ಬರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಮುಂಬೈಯ ಹತ್ತಿರದ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ " ಎಂದು ಅವರು ಹೇಳಿದರು. ಕರಾವಳಿ ರಸ್ತೆ ಮತ್ತು ಅಟಲ್ ಸೇತು ಪೂರ್ಣಗೊಂಡಿರುವುದನ್ನು ಅವರು ಉಲ್ಲೇಖಿಸಿದರು. ಪ್ರತಿದಿನ ಸುಮಾರು 20 ಸಾವಿರ ವಾಹನಗಳು ಅಟಲ್ ಸೇತುವನ್ನು ಬಳಸುತ್ತಿದ್ದು, ಅಂದಾಜು 20-25 ಲಕ್ಷ ರೂಪಾಯಿ ಮೌಲ್ಯದ ಇಂಧನವನ್ನು ಉಳಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಮೆಟ್ರೋ ಮಾರ್ಗದ ಉದ್ದವು ಒಂದು ದಶಕದ ಹಿಂದೆ 8 ಕಿ.ಮೀ ಇದ್ದದ್ದು ಇಂದು 80 ಕಿ.ಮೀ.ಗೆ ಏರಿದೆ ಮತ್ತು 200 ಕಿ.ಮೀ ಮೆಟ್ರೋ ಜಾಲದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮುಂಬೈಯಲ್ಲಿ ಮೆಟ್ರೋ ವ್ಯವಸ್ಥೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಹೇಳಿದರು.

ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ನಾಗ್ಪುರ ನಿಲ್ದಾಣದ ಪುನರಾಭಿವೃದ್ಧಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, "ಭಾರತೀಯ ರೈಲ್ವೆಯ ಪರಿವರ್ತನೆಯು ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ದೊಡ್ಡ ರೀತಿಯಲ್ಲಿ ಪ್ರಯೋಜನವನ್ನು ತರುತ್ತಿದೆ" ಎಂದು ಹೇಳಿದರು. "ಇಂದು ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಲೋಕಮಾನ್ಯ ತಿಲಕ್ ನಿಲ್ದಾಣದಲ್ಲಿ ಹೊಸ ಪ್ಲಾಟ್ಫಾರ್ಮ್ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದ್ದು, ಇದರಿಂದ 24 ಬೋಗಿಗಳ ಉದ್ದದ ರೈಲುಗಳು ಇಲ್ಲಿಂದ ಚಲಿಸಲು ಅನುಕೂಲತೆಗಳು  ಲಭಿಸುತ್ತವೆ" ಎಂದು ಅವರು ಹೇಳಿದರು. 

ಕಳೆದ 10 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಗೋರೆಗಾಂವ್ ಮುಲುಂಡ್ ಲಿಂಕ್ ರಸ್ತೆ (ಜಿಎಂಎಲ್ಆರ್) ಯೋಜನೆ ಪ್ರಕೃತಿ ಮತ್ತು ಪ್ರಗತಿಗೆ ಉತ್ತಮ ಉದಾಹರಣೆಯಾಗಿದೆ ಎಂದರು. ಥಾಣೆ ಬೋರಿವಲಿ ಅವಳಿ ಸುರಂಗ ಯೋಜನೆಯು ಥಾಣೆ ಮತ್ತು ಬೋರಿವಲಿ ನಡುವಿನ ದೂರವನ್ನು ಕೆಲವು ನಿಮಿಷಗಳಿಗೆ ಇಳಿಸುತ್ತದೆ. ಪ್ರಯಾಣವನ್ನು ಸುಲಭಗೊಳಿಸುವ ಮತ್ತು ಯಾತ್ರಾರ್ಥಿಗಳಿಗೆ ಸೇವೆಗಳನ್ನು ವಿಸ್ತರಿಸುವ ಜೊತೆಗೆ ರಾಷ್ಟ್ರದ ಯಾತ್ರಾ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಸರ್ಕಾರದ ಪ್ರಯತ್ನವನ್ನು ಪ್ರಧಾನಿ ಪುನರುಚ್ಚರಿಸಿದರು. ಪಂಢರಪುರ ವಾರಿಯಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಭಾಗವಹಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಯಾತ್ರಾರ್ಥಿಗಳಿಗೆ ಪ್ರಯಾಣವನ್ನು ಸುಲಭಗೊಳಿಸಲು ಸುಮಾರು 200 ಕಿ.ಮೀ ಸಂತ ಜ್ಞಾನೇಶ್ವರ ಪಾಲ್ಖಿ ಮಾರ್ಗ ಮತ್ತು ಸುಮಾರು 110 ಕಿ.ಮೀ. ಸಂತ ತುಕಾರಾಮ್ ಪಾಲ್ಖಿ ಮಾರ್ಗ ನಿರ್ಮಾಣವನ್ನು ಪ್ರಸ್ತಾಪಿಸಿದರು. ಈ ಎರಡು ರಸ್ತೆಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸಂಪರ್ಕ ಮೂಲಸೌಕರ್ಯವು ಪ್ರವಾಸೋದ್ಯಮ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಹಾಯ ಮಾಡುತ್ತಿದೆ, ಉದ್ಯೋಗವನ್ನು ಸುಧಾರಿಸುತ್ತಿದೆ ಮತ್ತು ಮಹಿಳೆಯರಿಗೆ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು. "ಎನ್ಡಿಎ ಸರ್ಕಾರದ ಕಾರ್ಯಗಳು ಬಡವರು, ರೈತರು, ಮಹಿಳಾ ಶಕ್ತಿ ಮತ್ತು ಯುವ ಶಕ್ತಿಯನ್ನು ಸಬಲೀಕರಣಗೊಳಿಸುತ್ತಿವೆ" ಎಂದು ಅವರು ನುಡಿದರು. 10 ಲಕ್ಷ ಯುವಜನರಿಗೆ ಕೌಶಲ್ಯ ಮತ್ತು ಮುಖ್ಯಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆ ಅಡಿಯಲ್ಲಿ ವಿದ್ಯಾರ್ಥಿವೇತನದಂತಹ ಉಪಕ್ರಮಗಳಿಗಾಗಿ ಡಬಲ್ ಇಂಜಿನ್ ಸರ್ಕಾರವನ್ನು ಶ್ಲಾಘಿಸಿದರು. 

"ಕೌಶಲ್ಯ ಅಭಿವೃದ್ಧಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವು ಭಾರತದ ಈ ಸಮಯದ ಅಗತ್ಯವಾಗಿದೆ" ಎಂದು ಪ್ರಧಾನಿ ಹೇಳಿದರು, ಕೋವಿಡ್ ಸಾಂಕ್ರಾಮಿಕ ರೋಗದ ಹೊರತಾಗಿಯೂ ಕಳೆದ 4-5 ವರ್ಷಗಳಲ್ಲಿ ಭಾರತದಲ್ಲಿ ದಾಖಲೆಯ ಉದ್ಯೋಗ ಸೃಷ್ಟಿಯಾಗಿರುವುದನ್ನು ಅವರು ಉಲ್ಲೇಖಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ಉದ್ಯೋಗದ ಕುರಿತ ವಿಸ್ತೃತ ವರದಿಯ ಬಗ್ಗೆ ಬೆಳಕು ಚೆಲ್ಲಿದ ಶ್ರೀ ಮೋದಿ, ಕಳೆದ 3-4 ವರ್ಷಗಳಲ್ಲಿ ಸರಿಸುಮಾರು 8 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಮಾಹಿತಿ ನೀಡಿದರು. ಭಾರತದ ಅಭಿವೃದ್ಧಿಯ ವಿರುದ್ಧ ಹೆಣೆಯಲಾಗುತ್ತಿರುವ ಸುಳ್ಳು ನಿರೂಪಣೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಪ್ರಧಾನಿ ನಾಗರಿಕರಿಗೆ ಕರೆ ನೀಡಿದರು. ಸೇತುವೆಗಳನ್ನು ನಿರ್ಮಿಸಿದಾಗ, ರೈಲ್ವೆ ಹಳಿಗಳನ್ನು ಹಾಕಿದಾಗ, ರಸ್ತೆಗಳನ್ನು ನಿರ್ಮಿಸಿದಾಗ ಮತ್ತು ಸ್ಥಳೀಯ ರೈಲುಗಳನ್ನು ತಯಾರಿಸಿದಾಗ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದರು. ದೇಶದಲ್ಲಿ ಉದ್ಯೋಗದ ದರವು ಮೂಲಸೌಕರ್ಯ ಅಭಿವೃದ್ಧಿಗೆ ನೇರವಾದ ಅನುಪಾತದಲ್ಲಿರುತ್ತದೆ ಎಂಬುದರತ್ತ  ಅವರು ಬೆಟ್ಟು ಮಾಡಿದರು. 

"ವಂಚಿತರಿಗೆ ಆದ್ಯತೆ ನೀಡುವುದು ಎನ್ಡಿಎ ಸರ್ಕಾರದ ಅಭಿವೃದ್ಧಿ ಮಾದರಿಯಾಗಿದೆ" ಎಂದು ಒತ್ತಿ ಹೇಳಿದ ಪ್ರಧಾನಿ, ಬಡವರಿಗಾಗಿ 3 ಕೋಟಿ ಮನೆಗಳನ್ನು ನಿರ್ಮಿಸುವ ಹೊಸ ಸರ್ಕಾರದ ಮೊದಲ ನಿರ್ಧಾರವನ್ನು ಉಲ್ಲೇಖಿಸಿದರು. ಈಗಾಗಲೇ 4 ಕೋಟಿ ಕುಟುಂಬಗಳಿಗೆ ಮನೆ ಸಿಕ್ಕಿದೆ. ಮಹಾರಾಷ್ಟ್ರದ ಲಕ್ಷಾಂತರ ದಲಿತರು ಮತ್ತು ವಂಚಿತರು ಆವಾಸ್ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. "ನಗರಗಳಲ್ಲಿ ವಾಸಿಸುವ ಬಡವರು ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಮನೆ ಹೊಂದುವ ಕನಸನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ" ಎಂದೂ ಅವರು ಹೇಳಿದರು.

ಬೀದಿ ಬದಿ ವ್ಯಾಪಾರಿಗಳ ಜೀವನದಲ್ಲಿ ಘನತೆಯನ್ನು ಪುನಃಸ್ಥಾಪಿಸುವಲ್ಲಿ ಸ್ವನಿಧಿ ಯೋಜನೆ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಅವರು ಮಾತನಾಡಿದರು. ಮಹಾರಾಷ್ಟ್ರದಲ್ಲಿ 13 ಲಕ್ಷ ಮತ್ತು ಮುಂಬೈಯಲ್ಲಿ 1.5 ಲಕ್ಷ ಸೇರಿದಂತೆ ಸುಮಾರು 90 ಲಕ್ಷ ಸಾಲಗಳನ್ನು ಯೋಜನೆಯಡಿ ಅನುಮೋದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಯೋಜನೆಯು ಬೀದಿ ಬದಿ ಮಾರಾಟಗಾರರ ಆದಾಯದಲ್ಲಿ ಮಾಸಿಕ 2 ಸಾವಿರ ರೂಪಾಯಿಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳುವ ಅಧ್ಯಯನವನ್ನು ಅವರು ಉಲ್ಲೇಖಿಸಿದರು.

ಸ್ವನಿಧಿ ಯೋಜನೆಯ ವಿಶೇಷತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವಿಶೇಷವಾಗಿ ಯೋಜನೆಯಡಿ ಬ್ಯಾಂಕ್ ಸಾಲಗಳನ್ನು ಪಡೆದ ಮತ್ತು ಅದನ್ನು ಸಕಾಲದಲ್ಲಿ ಮರುಪಾವತಿ ಮಾಡಿದ ದೇಶದ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಬಡವರ ಆತ್ಮಗೌರವ ಮತ್ತು ಶಕ್ತಿಯನ್ನು ಉಲ್ಲೇಖಿಸಿದರು. ಸ್ವನಿಧಿ ಯೋಜನೆಯ ಫಲಾನುಭವಿಗಳು ಈವರೆಗೆ 3.25 ಲಕ್ಷ ಕೋಟಿ ರೂ.ಗಳ ಡಿಜಿಟಲ್ ವಹಿವಾಟು ನಡೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

"ಮಹಾರಾಷ್ಟ್ರವು ಭಾರತದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಪ್ರಸಾರ ಮಾಡಿದೆ" ಎಂದ ಪ್ರಧಾನಮಂತ್ರಿಯವರು ಛತ್ರಪತಿ ಶಿವಾಜಿ ಮಹಾರಾಜ್, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮಾ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಅಣ್ಣಾಭಾವು ಸಾಥೆ, ಲೋಕಮಾನ್ಯ ತಿಲಕ್ ಮತ್ತು ವೀರ್ ಸಾವರ್ಕರ್ ಅವರು ಬಿಟ್ಟುಹೋದ ಪರಂಪರೆಯನ್ನು ಉಲ್ಲೇಖಿಸಿದರು. ಸಾಮರಸ್ಯದ ಸಮಾಜ ಮತ್ತು ಬಲಿಷ್ಟ ರಾಷ್ಟ್ರದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮುಂದೆ ಸಾಗುವಂತೆ ಪ್ರಧಾನಮಂತ್ರಿಯವರು ನಾಗರಿಕರನ್ನು ಪ್ರೇರೇಪಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಪ್ರಧಾನಮಂತ್ರಿಯವರು, ಸಮೃದ್ಧಿಯ ಹಾದಿಯು ಸಾಮರಸ್ಯ ಮತ್ತು ಸೌಹಾರ್ದತೆಯಲ್ಲಿ ಅಡಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ನಾಗರಿಕರಿಗೆ  ಮನವಿ ಮಾಡಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಹಾಗು ಸಬಲೀಕರಣ ಸಹಾಯಕ ಸಚಿವ ಶ್ರೀ ರಾಮದಾಸ್ ಅಠಾವಳೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು 16,600 ಕೋಟಿ ರೂಪಾಯಿ ಮೌಲ್ಯದ ಥಾಣೆ ಬೋರಿವಲಿ ಸುರಂಗ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಥಾಣೆ ಮತ್ತು ಬೋರಿವಲಿ ಜೋಡಣೆಯ ನಡುವಿನ ಅವಳಿ ಕೊಳವೆ ಸುರಂಗವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಡಿಭಾಗದಲ್ಲಿ ಹಾದುಹೋಗುತ್ತದೆ. ಇದು ಬೋರಿವಲಿ ಬದಿಯಲ್ಲಿ ವೆಸ್ಟರ್ನ್ ಎಕ್ಸ್ ಪ್ರೆಸ್ ಹೆದ್ದಾರಿ (ಪಶ್ಚಿಮ ಎಕ್ಸ್ ಪ್ರೆಸ್ ಹೆದ್ದಾರಿ)  ಮತ್ತು ಥಾಣೆ ಕಡೆಯಿಂದ ಥಾಣೆ ಘೋಡ್ ಬಂದರ್ ರಸ್ತೆ ನಡುವೆ ನೇರ ಸಂಪರ್ಕವನ್ನು ಸೃಷ್ಟಿಸುತ್ತದೆ. ಯೋಜನೆಯ ಒಟ್ಟು ಉದ್ದ 11.8 ಕಿ.ಮೀ. ಇದು ಥಾಣೆಯಿಂದ ಬೋರಿವಲಿಗೆ ಪ್ರಯಾಣವನ್ನು 12 ಕಿ.ಮೀ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಸುಮಾರು 1 ಗಂಟೆಯಷ್ಟನ್ನು ಉಳಿಸುತ್ತದೆ.

ಪ್ರಧಾನಮಂತ್ರಿಯವರು 6300 ಕೋಟಿ ರೂಪಾಯಿ ಮೌಲ್ಯದ ಗೋರೆಗಾಂವ್ ಮುಲುಂಡ್ ಲಿಂಕ್ ರಸ್ತೆ (ಜಿಎಂಎಲ್ಆರ್) ಯೋಜನೆಯಲ್ಲಿ ಸುರಂಗ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜಿಎಂಎಲ್ಆರ್ ಯೋಜನೆಯು ಗೋರೆಗಾಂವ್ ನಲ್ಲಿಯ  ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯಿಂದ ಮುಲುಂಡಿನ  ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸುತ್ತದೆ. ಜಿಎಂಎಲ್ಆರ್ ನ  ಒಟ್ಟು ಉದ್ದ ಸುಮಾರು 6.65 ಕಿಲೋಮೀಟರ್ ಮತ್ತು ಅದು ನವೀ ಮುಂಬೈ ಹಾಗು ಪುಣೆ ಮುಂಬೈ ಎಕ್ಸ್ಪ್ರೆಸ್ ವೇಯಲ್ಲಿ ಹೊಸ ಉದ್ದೇಶಿತ ವಿಮಾನ ನಿಲ್ದಾಣದೊಂದಿಗೆ ಪಶ್ಚಿಮ ಉಪನಗರಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರು ನವೀ ಮುಂಬೈಯ ತುರ್ಭೆಯಲ್ಲಿ ಕಲ್ಯಾಣ್ ಯಾರ್ಡ್ ಮರುನಿರ್ಮಾಣ ಮತ್ತು ಗತಿ ಶಕ್ತಿ ಬಹು ಮಾದರಿ ಸರಕು ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಕಲ್ಯಾಣ್ ಯಾರ್ಡ್ ದೂರದ ಮತ್ತು ಉಪನಗರ ಸಂಚಾರವನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಮರುನಿರ್ಮಾಣವು ಹೆಚ್ಚಿನ ರೈಲುಗಳನ್ನು ನಿರ್ವಹಿಸುವುದಕ್ಕೆ  ಯಾರ್ಡ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈಲು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತದೆ. ನವೀ ಮುಂಬೈಯಲ್ಲಿ ಗತಿ ಶಕ್ತಿ ಬಹುಮಾದರಿ ಸರಕು ಟರ್ಮಿನಲ್ (ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್) ಅನ್ನು 32600 ಚದರ ಮೀಟರ್ ಗಿಂತ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾಗುವುದು. ಇದು ಸ್ಥಳೀಯ ಜನರಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು ಸಿಮೆಂಟ್ ಹಾಗು ಇತರ ಸರಕುಗಳನ್ನು ನಿರ್ವಹಿಸಲು ಹೆಚ್ಚುವರಿ ಟರ್ಮಿನಲ್ ಆಗಿ ಕಾರ್ಯನಿರ್ವಹಿಸುತ್ತದೆ.

ಪ್ರಧಾನಮಂತ್ರಿಯವರು ಲೋಕಮಾನ್ಯ ತಿಲಕ್ ಟರ್ಮಿನಸ್ ನಲ್ಲಿ ಹೊಸ ಪ್ಲಾಟ್ ಫಾರಂಗಳನ್ನು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 10 ಮತ್ತು 11ರ ವಿಸ್ತರಣೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಲೋಕಮಾನ್ಯ ತಿಲಕ್ ಟರ್ಮಿನಸ್ನಲ್ಲಿನ ಹೊಸ ಉದ್ದದ ಪ್ಲಾಟ್ಫಾರ್ಮ್ಗಳು ಉದ್ದವಾದ ರೈಲುಗಳಿಗೆ ಸ್ಥಳಾವಕಾಶ ಕಲ್ಪಿಸಬಲ್ಲವು, ಮತ್ತು ಆ ಮೂಲಕ ಪ್ರತಿ ರೈಲಿಗೆ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಮಾಡಿಕೊಡಬಲ್ಲವು ಹಾಗು  ಹೆಚ್ಚಿನ ಸಂಚಾರ ದಟ್ಟಣೆಯನ್ನು ನಿಭಾಯಿಸುವ ನಿಲ್ದಾಣದ ಸಾಮರ್ಥ್ಯವನ್ನು ಸುಧಾರಿಸಬಲ್ಲವು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 10 ಮತ್ತು 11 ಕವರ್ ಶೆಡ್ ಮತ್ತು ತೊಳೆಯಬಹುದಾದ ಏಪ್ರನ್ ನೊಂದಿಗೆ 382 ಮೀಟರ್ ವಿಸ್ತರಿಸಲಾಗಿದೆ. ಇದು 24 ಬೋಗಿಗಳವರೆಗಿನ ರೈಲುಗಳನ್ನು ಕಾರ್ಯಾಚರಿಸಲು ಸಹಾಯ ಮಾಡುತ್ತದೆ, ಹಾಗು ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ.

ಸುಮಾರು 5600 ಕೋಟಿ ರೂ.ಗಳ ವೆಚ್ಚದ ಮುಖ್ಯಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆಗೆ ಪ್ರಧಾನ ಮಂತ್ರಿ ಅವರು ಚಾಲನೆ ನೀಡಿದರು. ಇದು ಪರಿವರ್ತಕ ಇಂಟರ್ನ್ಶಿಪ್ ಕಾರ್ಯಕ್ರಮವಾಗಿದ್ದು, 18 ರಿಂದ 30 ವರ್ಷ ವಯಸ್ಸಿನ ಯುವಕರಿಗೆ ಕೌಶಲ್ಯ ವರ್ಧನೆ ಮತ್ತು ಉದ್ಯಮಗಳಿಗೆ ತೆರೆದುಕೊಳ್ಳುವ  ಅವಕಾಶಗಳನ್ನು ಒದಗಿಸುವ ಮೂಲಕ ಯುವಜನರ  ನಿರುದ್ಯೋಗವನ್ನು ಪರಿಹರಿಸುವ ಆಶಯವನ್ನು ಹೊಂದಿದೆ.

 

 

******



(Release ID: 2033164) Visitor Counter : 9