ಪ್ರಧಾನ ಮಂತ್ರಿಯವರ ಕಛೇರಿ

ಒಡಿಶಾದ ಚಂಡಿಖೋಲೆಯಲ್ಲಿ 19,600 ಕೋಟಿ ರೂ. ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ


ಪಾರಾದೀಪ್ ರಿಫೈನರಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮೊನೊ ಎಥಿಲೀನ್ ಗ್ಲೈಕಾಲ್ ಯೋಜನೆ ಉದ್ಘಾಟನೆ

ಪಾರಾದೀಪ್‌ನಲ್ಲಿ 0.6 ಎಂಎಂಟಿಪಿಎ ಎಲ್ಪಿಜಿ ಆಮದು ಸೌಲಭ್ಯ ಮತ್ತು ಪಾರಾದೀಪ್‌ನಿಂದ ಹಲ್ದಿಯಾಗೆ ಹಾದುಹೋಗುವ 344 ಕಿಮೀ ಉದ್ದದ ಉತ್ಪನ್ನ ಪೈಪ್‌ಲೈನ್ ಯೋಜನೆ ಉದ್ಘಾಟನೆ

ಐಆರ್‌ಇಎಲ್ (ಐ) ಲಿಮಿಟೆಡ್‌ನ ಒಡಿಶಾ ಸ್ಯಾಂಡ್ಸ್ ಕಾಂಪ್ಲೆಕ್ಸ್‌ನಲ್ಲಿ 5 ಎಂಎಲ್‌ಡಿ ಸಾಮರ್ಥ್ಯದ ಸಮುದ್ರದ ನೀರಿನ ಡಸಲೀಕರಣ ಘಟಕ ಉದ್ಘಾಟನೆ

ಬಹು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ

ಬಹು ರಸ್ತೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಶ್ರೀ ಮೋದಿ

"ಇಂದಿನ ಯೋಜನೆಗಳು ದೇಶದಲ್ಲಿ ಬದಲಾಗುತ್ತಿರುವ ಕೆಲಸದ ಸಂಸ್ಕೃತಿಯನ್ನು ಬಿಂಬಿಸುತ್ತಿವೆ"

"ಇಂದು ದೇಶದಲ್ಲಿ ಸರ್ಕಾರವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಸ್ವೀಕರಿಸುವ ಮೂಲಕ ಪ್ರಸ್ತುತ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ"

"ಕೇಂದ್ರ ಸರ್ಕಾರವು ಒಡಿಶಾದಲ್ಲಿ ಆಧುನಿಕ ಸಂಪರ್ಕ ಬಲಪಡಿಸಲು ಗಮನ ಕೇಂದ್ರೀಕರಿಸುತ್ತಿದೆ, ಇದರಿಂದ ಸ್ಥಳೀಯ ಸಂಪನ್ಮೂಲಗಳು ರಾಜ್ಯದ ಆರ್ಥಿಕತೆಯನ್ನು ಸುಧಾರಿಸುತ್ತವೆ"

Posted On: 05 MAR 2024 4:12PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಚಂಡಿಖೋಲೆಯಲ್ಲಿಂದು 19,600 ಕೋಟಿ ರೂ. ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು. ಯೋಜನೆಗಳು ತೈಲ ಮತ್ತು ಅನಿಲ, ರೈಲ್ವೆ, ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಪರಮಾಣು ಶಕ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿವೆ.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಗವಾನ್ ಜಗನ್ನಾಥ ಮತ್ತು ಮಾತೆ ಬಿರ್ಜಾ ಅವರ ಆಶೀರ್ವಾದದಿಂದ ಇಂದು ಜಾಜ್‌ಪುರ ಮತ್ತು ಒಡಿಶಾದಲ್ಲಿ ಅಭಿವೃದ್ಧಿಯ ಹೊಸ ಹೊಳೆ ಹರಿಯಲು ಪ್ರಾರಂಭಿಸಿತು. ಶ್ರೀ ಬಿಜು ಪಟ್ನಾಯಕ್ ಅವರ ಜಯಂತಿಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು, ರಾಷ್ಟ್ರ ಮತ್ತು ಒಡಿಶಾಕ್ಕೆ ಪಟ್ನಾಯಕ್ ಅವರು ನೀಡಿದ ಅನುಪಮ ಕೊಡುಗೆಯನ್ನು ಸ್ಮರಿಸಿದರು.

ಇಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪರಮಾಣು ಶಕ್ತಿ, ರಸ್ತೆ ಮಾರ್ಗಗಳು, ರೈಲ್ವೆ ಮತ್ತು ಸಂಪರ್ಕ ವಲಯಗಳಲ್ಲಿ ಸುಮಾರು 20,000 ಕೋಟಿ ರೂಪಾಯಿ ಮೊತ್ತದ ಬೃಹತ್ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಈ ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.. ಇಂದಿನ ಅಭಿವೃದ್ಧಿ ಯೋಜನೆಗಳಿಂದ ಹೊಸ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಇದಕ್ಕಾಗಿ ಒಡಿಶಾದ ಜನತೆಗೆ ಅಭಿನಂದನೆಗಳು ಎಂದರು.

ವಿಕ್ಷಿತ್ ಭಾರತ್ ನಿರ್ಣಯಕ್ಕಾಗಿ ಕೆಲಸ ಮಾಡುವಾಗ ರಾಷ್ಟ್ರದ ಪ್ರಸ್ತುತ ಅಗತ್ಯಗಳನ್ನು ನೋಡಿಕೊಳ್ಳುವ ಸರ್ಕಾರದ ಕಾರ್ಯವಿಧಾನವನ್ನು ಮುಂದಿಟ್ಟರು. ಇಂಧನ ಕ್ಷೇತ್ರದಲ್ಲಿ ಪೂರ್ವ ರಾಜ್ಯಗಳ ಸರ್ಕಾರದ ಸಾಮರ್ಥ್ಯಗಳನ್ನು ಅವರು ಪ್ರಸ್ತಾಪಿಸಿದರು. ಉರ್ಜ ಗಣಗ ಯೋಜನೆಯಡಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದ 5 ದೊಡ್ಡ ರಾಜ್ಯಗಳಲ್ಲಿ ನೈಸರ್ಗಿಕ ಅನಿಲ ಪೂರೈಕೆಗಾಗಿ ಪ್ರಮುಖ ಯೋಜನೆಗಳು ನಡೆಯುತ್ತಿವೆ. ಒಡಿಶಾದ ಪರದೀಪ್‌ನಿಂದ ಪಶ್ಚಿಮ ಬಂಗಾಳದ ಹಲ್ದಿಯಾವರೆಗೆ 344 ಕಿಮೀ ಉದ್ದದ ಉತ್ಪನ್ನ ಪೈಪ್‌ಲೈನ್ ಉದ್ಘಾಟಿಸಲಾಗಿದೆ. ಪಾರಾದೀಪ್ ರಿಫೈನರಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮೊನೊ ಎಥಿಲೀನ್ ಗ್ಲೈಕಾಲ್ ಯೋಜನೆ ಮತ್ತು ಪೂರ್ವ ಭಾರತದ ಪಾಲಿಯೆಸ್ಟರ್ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ 0.6 ಎಂಎಂಟಿಪಿಎ ಎಲ್‌ಪಿಜಿ ಆಮದು ಸೌಲಭ್ಯವನ್ನು ಪ್ರಧಾನಿ ಉದ್ಘಾಟಿಸಿದರು. ಇದು ಭದ್ರಕ್ ಮತ್ತು ಪಾರಾದೀಪ್‌ನಲ್ಲಿರುವ ಜವಳಿ ಪಾರ್ಕ್‌ಗೆ ಕಚ್ಚಾ ವಸ್ತುಗಳನ್ನು ಸಹ ಒದಗಿಸುತ್ತದೆ ಎಂದರು.

 

ಇಂದಿನ ಸಂದರ್ಭವು ದೇಶದಲ್ಲಿ ಬದಲಾಗುತ್ತಿರುವ ಕಾರ್ಮಿಕ ಸಂಸ್ಕೃತಿಯ ಸಂಕೇತವಾಗಿದೆ. ಹಿಂದಿನ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಎಂದಿಗೂ ಆಸಕ್ತಿ ವಹಿಸಲಿಲ್ಲ. ಅದು ಕೇವಲ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿತ್ತು. ಆದರೆ 2014ರ ನಂತರ ಪೂರ್ಣಗೊಂಡ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ, 2002ರಲ್ಲಿ ಚರ್ಚೆಯ ವಿಷಯವಾಗಿದ್ದ ಪಾರಾದೀಪ್ ಸಂಸ್ಕರಣಾಗಾರವನ್ನು ಪ್ರಧಾನಿ ಪ್ರಸ್ತಾಪಿಸಿದರು. ಪ್ರಸ್ತುತ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬರುವ ತನಕ ಯಾವುದೇ ಕೆಲಸಗಳು ನೆರವೇರಲಿಲ್ಲ. ಪಾರಾದೀಪ್ - ಹೈದರಾಬಾದ್ ಯೋಜನೆಯ ಉದ್ಘಾಟನೆ ಪ್ರಸ್ತಾಪಿಸಿದ ಪ್ರಧಾನಿ, ನಿನ್ನೆ ತೆಲಂಗಾಣದ ಸಂಗಾರೆಡ್ಡಿಯಲ್ಲಿ ಪೈಪ್‌ಲೈನ್ ಮತ್ತು 3 ದಿನಗಳ ಹಿಂದೆ ಪಶ್ಚಿಮ ಬಂಗಾಳದ ಆರಾಂಬಾಗ್‌ನ ಹಲ್ದಿಯಾದಿಂದ ಬರೌನಿಗೆ 500 ಕಿ.ಮೀ ಉದ್ದದ ಕಚ್ಚಾ ತೈಲ ಪೈಪ್‌ಲೈನ್ ಉದ್ಘಾಟಿಸಲಾಗಿದೆ ಎಂದರು.

ಒಡಿಶಾದ ಅಭಿವೃದ್ಧಿಗಾಗಿ ಪೂರ್ವ ಭಾರತದಲ್ಲಿ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಕೇಂದ್ರ ಬಳಸಿಕೊಳ್ಳುತ್ತಿದೆ. ಗಂಜಾಂ ಜಿಲ್ಲೆಯಲ್ಲಿ ಪ್ರತಿನಿತ್ಯ ಸುಮಾರು 50 ಲಕ್ಷ ಲೀಟರ್ ಲವಣಯುಕ್ತ ನೀರನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾಗಿಸುವ ಡಸಲೀಕರಣ ಘಟಕ ಉದ್ಘಾಟಿಸಲಾಗಿದೆ ಎಂದರು.

ಸ್ಥಳೀಯ ಸಂಪನ್ಮೂಲಗಳಿಂದ ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಒಡಿಶಾದಲ್ಲಿ ಆಧುನಿಕ ಸಂಪರ್ಕ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸುತ್ತಿದೆ. ಕಳೆದ 10 ವರ್ಷಗಳಲ್ಲಿ 3,000 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ರೈಲ್ವೆ ಬಜೆಟ್ ಅನ್ನು 12 ಪಟ್ಟು ಹೆಚ್ಚಿಸಲಾಗಿದೆ. ರೈಲು-ಹೆದ್ದಾರಿ-ಬಂದರು ಸಂಪರ್ಕ ಸುಧಾರಿಸುವ ಸಲುವಾಗಿ, ಜಾಜ್‌ಪುರ, ಭದ್ರಕ್, ಜಗತ್‌ಸಿಂಗ್‌ಪುರ, ಮಯೂರ್‌ಭಂಜ್, ಖೋರ್ಡಾ, ಗಂಜಾಂ, ಪುರಿ ಮತ್ತು ಕೆಂಡುಜಾರ್‌ಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಲಾಗುತ್ತಿದೆ. ಹೊಸ ಅಂಗುಲ್ ಸುಕಿಂದಾ ರೈಲು ಮಾರ್ಗವು ಕಳಿಂಗ ನಗರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ತೆರೆದುಕೊಳ್ಳುತ್ತದೆ ಎಂದರು.

ಬಿಜು ಪಟ್ನಾಯಕ್ ಜಿ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪ್ರಧಾನಿ ಭಾಷಣ ಮುಕ್ತಾಯಗೊಳಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ನಾಗರಿಕರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಒಡಿಶಾದ ರಾಜ್ಯಪಾಲ ಶ್ರೀ ರಘುಬರ್ ದಾಸ್, ಒಡಿಶಾ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಮತ್ತು ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಪಾರಾದೀಪ್ ರಿಫೈನರಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಮೊನೊ ಎಥಿಲೀನ್ ಗ್ಲೈಕಾಲ್ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದರು, ಇದು ಭಾರತದ ಆಮದು ಅವಲಂಬನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಡಿಶಾದ ಪಾರಾದೀಪ್‌ನಿಂದ ಪಶ್ಚಿಮ ಬಂಗಾಳದ ಹಲ್ದಿಯಾವರೆಗೆ 344 ಕಿಮೀ ಉದ್ದದ ಉತ್ಪನ್ನ ಪೈಪ್‌ಲೈನ್ ಅನ್ನು ಪ್ರಧಾನಿ ಉದ್ಘಾಟಿಸಿದರು. ಭಾರತದ ಪೂರ್ವ ಕರಾವಳಿಯಲ್ಲಿ ಆಮದು ಮೂಲಸೌಕರ್ಯ ಹೆಚ್ಚಿಸಲು, ಪ್ರಧಾನ ಮಂತ್ರಿ ಅವರು ಪರದೀಪ್‌ನಲ್ಲಿ 0.6 ಎಂಎಂಟಿಪಿಎ ಎಲ್ಪಿಜಿ ಆಮದು ಸೌಲಭ್ಯವನ್ನು ಉದ್ಘಾಟಿಸಿದರು.

ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯ ಹೆಚ್ಚಿಸುವ ಸಲುವಾಗಿ, ಪ್ರಧಾನ ಮಂತ್ರಿ ಅವರು ಎನ್ಎಚ್-49ರ ಬಿಂಜಾಬಹಲ್ ವಿಭಾಗದಿಂದ ಸಿಂಘರಾದ ಚತುಷ್ಪಥ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಎನ್ಎಚ್-49ರ ಬಿಂಜಾಬಹಾಲ್‌ನಿಂದ ತಿಲಿಬಾನಿ ವಿಭಾಗದಿಂದ 4 ಲೇನಿಂಗ್, ಎನ್ಎಚ್-18ರ ಬಾಲಸೋರ್-ಜಾರ್ಪೋಖಾರಿಯಾ ವಿಭಾಗದ 4 ಲೇನಿಂಗ್ ಮತ್ತು ಎನ್ಎಚ್-16 ರ ತಂಗಿ-ಭುವನೇಶ್ವರ್ ವಿಭಾಗದ 4 ಲೇನಿಂಗ್,  ಚಂಡಿಖೋಲೆ - ಪಾರಾದೀಪ್ ವಿಭಾಗದಲ್ಲಿ ಯಲ್ಲಿ 8 ಲೇನಿಂಗ್ ರಸ್ತೆ ನಿರ್ಮಾಣಕ್ಕೆ ಶುಂಕುಸ್ಥಾಪನೆ ನೆರವೇರಿಸಿದರು.

162 ಕಿಮೀ ಬನ್ಸಪಾನಿ - ದೈತಾರಿ - ಟೋಮ್ಕಾ - ಜಖಾಪುರ ರೈಲು ಮಾರ್ಗವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು, ಇದು ಅಸ್ತಿತ್ವದಲ್ಲಿರುವ ಸಂಚಾರ ಸೌಲಭ್ಯದ ಸಾಮರ್ಥ್ಯ ಹೆಚ್ಚಿಸುವುದಲ್ಲದೆ, ಕಿಯೋಂಜಾರ್ ಜಿಲ್ಲೆಯಿಂದ ಹತ್ತಿರದ ಬಂದರುಗಳು ಮತ್ತು ಉಕ್ಕಿನ ಸ್ಥಾವರಗಳಿಗೆ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಸಮರ್ಥವಾಗಿ ಸಾಗಿಸಲು ಅನುಕೂಲವಾಗುತ್ತದೆ. ಇದು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತದೆ. ಕಳಿಂಗ ನಗರದಲ್ಲಿ CONCOR ಕಂಟೈನರ್ ಡಿಪೋ ಉದ್ಘಾಟನೆ ನೆರವೇರಿಸಲಾಗಿದ್ದು, ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಉತ್ತೇಜಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ನಾರ್ಲಾದಲ್ಲಿ ಎಲೆಕ್ಟ್ರಿಕ್ ಲೋಕೊ ಪಿರಿಯಾಡಿಕಲ್ ಓವರ್‌ಹೌಲಿಂಗ್ ವರ್ಕ್‌ಶಾಪ್, ಕಾಂತಾಬಂಜಿಯಲ್ಲಿ ವ್ಯಾಗನ್ ಆವರ್ತಕ ಕೂಲಂಕುಷ ಕಾರ್ಯಾಗಾರ ಮತ್ತು ಬಾಗುಪಾಲ್‌ನಲ್ಲಿ ನಿರ್ವಹಣಾ ಸೌಲಭ್ಯಗಳ ಉನ್ನತೀಕರಣ ಮತ್ತು ಬಲವರ್ಧನೆ ಸೌಲಭ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇತರ ರೈಲ್ವೆ ಯೋಜನೆಗಳು ಹೊಸ ರೈಲು ಸೇವೆಗಳಿಗೆ ಹಸಿರುನಿಶಾನೆ ತೋರಲಾಯಿತು.

ಐಆರ್‌ಇಎಲ್ (ಐ) ಲಿಮಿಟೆಡ್‌ನ ಒಡಿಶಾ ಸ್ಯಾಂಡ್ಸ್ ಕಾಂಪ್ಲೆಕ್ಸ್‌ನಲ್ಲಿ 5 ಎಂಎಲ್‌ಡಿ ಸಾಮರ್ಥ್ಯದ ಸಮುದ್ರದ ನೀರಿನ ನಿರ್ಲವಣೀಕರಣ ಘಟಕವನ್ನು ಪ್ರಧಾನಿ ಉದ್ಘಾಟಿಸಿದರು. ಈ ಯೋಜನೆಯನ್ನು ಭಾಭಾ ಪರಮಾಣು ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿದ ಸ್ಥಳೀಯ ಡೆಸಲೀಕರಣ ತಂತ್ರಜ್ಞಾನಗಳ ಕ್ಷೇತ್ರ ಅನ್ವಯಗಳ ಭಾಗವಾಗಿ ನಿರ್ಮಿಸಲಾಗಿದೆ.

 

***



(Release ID: 2012577) Visitor Counter : 42