ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ಮಧುರೈನಲ್ಲಿ ನಡೆದ 'ಡಿಜಿಟಲ್ ಮೊಬಿಲಿಟಿ – ಆಟೋಮೋಟಿವ್ ಎಂಎಸ್‌ಎಂಇ ಉದ್ಯಮಿಗಳಿಗೆ ಭವಿಷ್ಯ ಸೃಷ್ಟಿʼ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿಗಳು


ಭಾರತೀಯ ವಾಹನ ಉದ್ಯಮದಲ್ಲಿ ʻಎಂಎಸ್ಎಂಇʼಗಳನ್ನು ಬೆಂಬಲಿಸಲು ಮತ್ತು ಉನ್ನತೀಕರಿಸಲು ವಿನ್ಯಾಸಗೊಳಿಸಲಾದ ಎರಡು ಪ್ರಮುಖ ಉಪಕ್ರಮಗಳಿಗೆ ಚಾಲನೆ

" ವಾಹನ ಉದ್ಯಮವನ್ನು ಮುನ್ನಡೆಸುವಲ್ಲಿ ʻಎಂಎಸ್ಎಂಇʼಗಳು ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿವೆ"

ವಾಹನ ಉದ್ಯಮವು ಆರ್ಥಿಕತೆಯ ಶಕ್ತಿ ಕೇಂದ್ರವಾಗಿದೆ

"ಇಂದು ನಮ್ಮ ʻಎಂಎಸ್ಎಂʼಇಗಳು ಜಾಗತಿಕ ಪೂರೈಕೆ ಸರಪಳಿಯ ಬಲವಾದ ಭಾಗವಾಗಲು ಉತ್ತಮ ಅವಕಾಶವನ್ನು ಹೊಂದಿವೆ"

"ದೇಶವು ʻಎಂಎಸ್ಎಂಇʼಯ ಭವಿಷ್ಯವನ್ನು ದೇಶದ ʻಎಂಎಸ್ಎಂಇʼಯಾಗಿ ನೋಡುತ್ತಿದೆ"

"ಭಾರತ ಸರ್ಕಾರವು ಇಂದು ಪ್ರತಿಯೊಂದು ಉದ್ಯಮದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ"

"ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಮುಂದೆ ಕೊಂಡೊಯ್ಯಿರಿ. ಸರ್ಕಾರ ಸಂಪೂರ್ಣವಾಗಿ ನಿಮ್ಮೊಂದಿಗಿದೆ.

Posted On: 27 FEB 2024 7:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಮಧುರೈನಲ್ಲಿ ನಡೆದ ' ಡಿಜಿಟಲ್ ಮೊಬಿಲಿಟಿ – ಟೋಮೋಟಿವ್ ಎಂಎಸ್‌ಎಂಇ ಉದ್ಯಮಿಗಳಿಗೆ ಭವಿಷ್ಯ ಸೃಷ್ಟಿʼ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಮತ್ತು ವಾಹನ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಗಾಂಧಿಗ್ರಾಮದಲ್ಲಿ ತರಬೇತಿ ಪಡೆದ ಮಹಿಳಾ ಉದ್ಯಮಿಗಳು ಮತ್ತು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದ ವ್ಯಕ್ತಿಗಳ ನಡುವೆ ಉಪಸ್ಥಿತರಿರುವುದು ಒಂದು ಸಂತೋಷದಾಯಕ ಅನುಭವವಾಗಿದೆ ಮತ್ತು ಭವಿಷ್ಯವನ್ನು ರೂಪಿಸುವ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಭಾವನೆ ಮೂಡುತ್ತಿದೆ ಎಂದರು. ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ವಿಶೇಷವಾಗಿ ವಾಹನ ಕ್ಷೇತ್ರದಲ್ಲಿ ತಮಿಳುನಾಡು ಜಾಗತಿಕ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಅವರು ಒತ್ತಿಹೇಳಿದರು. ' ಡಿಜಿಟಲ್ ಮೊಬಿಲಿಟಿ - ಆಟೋಮೋಟಿವ್ ಎಂಎಸ್ಎಂಇ ಉದ್ಯಮಿಗಳಿಗೆ ಭವಿಷ್ಯ ಸೃಷ್ಟಿ' ಕಾರ್ಯಕ್ರಮದ ವಿಷಯದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು ಮತ್ತು ಎಲ್ಲಾ ʻಎಂಎಸ್ಎಂಇʼಗಳು ಹಾಗೂ ಮಹತ್ವಾಕಾಂಕ್ಷೆಯ ಯುವಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದ್ದಕ್ಕಾಗಿ ʻಟಿವಿಎಸ್ʼ ಕಂಪನಿಯನ್ನು ಅಭಿನಂದಿಸಿದರು. ವಾಹನ ಉದ್ಯಮದ ಜೊತೆಗೆ ʻವಿಕಸಿತ ಭಾರತʼ ಅಭಿವೃದ್ಧಿಗೆ ಅಗತ್ಯವಾದ ಉತ್ತೇಜನ ಸಿಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

ದೇಶದ ಜಿಡಿಪಿಯ ಶೇಕಡಾ 7 ರಷ್ಟು ವಾಹನ ಉದ್ಯಮದಿಂದ ಬರುತ್ತದೆ, ಇದು ರಾಷ್ಟ್ರದ ಸ್ವಾಯತ್ತತೆಯ ಪ್ರಮುಖ ಭಾಗವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಉತ್ಪಾದನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಆಟೋಮೊಬೈಲ್ ಉದ್ಯಮದ ಪಾತ್ರವನ್ನು ಪ್ರಧಾನಿ ವಿವರಿಸಿದರು.

ಭಾರತಕ್ಕೆ ವಾಹನ ಉದ್ಯಮ ನೀಡುತ್ತಿರುವ ಕೊಡುಗೆಗಳು, ಆಟೋಮೊಬೈಲ್ ಉದ್ಯಮಕ್ಕೆ ʻಎಂಎಸ್ಎಂಇʼಗಳು ನೀಡುತ್ತಿರುವ ಕೊಡುಗೆಗಳಂತೆಯೇ ಇವೆ ಎಂದು ಬಣಣಿಸಿದ ಪ್ರಧಾನಿ, ಭಾರತದಲ್ಲಿ ಪ್ರತಿವರ್ಷ 45 ಲಕ್ಷಕ್ಕೂ ಹೆಚ್ಚು ಕಾರುಗಳು, 2 ಕೋಟಿ ದ್ವಿಚಕ್ರ ವಾಹನಗಳು, 10 ಲಕ್ಷ ವಾಣಿಜ್ಯ ವಾಹನಗಳು ಮತ್ತು 8.5 ಲಕ್ಷ ತ್ರಿಚಕ್ರ ವಾಹನಗಳನ್ನು ಉತ್ಪಾದಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಪ್ರತಿ ಪ್ರಯಾಣಿಕರ ವಾಹನದಲ್ಲಿ 3000-4000 ವಿವಿಧ ಬಿಡಿ ಭಾಗಗಳ ಬಳಕೆಯನ್ನು ಅವರು ಉಲ್ಲೇಖಿಸಿದರು ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಪ್ರತಿದಿನ ಅಂತಹ ಲಕ್ಷಾಂತರ ಭಾಗಗಳನ್ನು ಬಳಸಲಾಗುತ್ತದೆ ಎಂದು ಹೇಳಿದರು. "ಭಾರತದ ʻಎಂಎಸ್ಎಂಇʼಗಳು ಈ ಬಿಡಿಭಾಗಗಳ ತಯಾರಿಕೆಯ ಹೊಣೆ ಹೊತ್ತಿವೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಭಾರತದ ಬಹುತೇಕ ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳಲ್ಲಿ ಇಂತಹ ಉದ್ಯಮಗಳ ಉಪಸ್ಥಿತಿ ಇದೆ ಎಂದು ಉಲ್ಲೇಖಿಸಿದರು. "ವಿಶ್ವದ ಅನೇಕ ಕಾರುಗಳು ಭಾರತೀಯ ʻಎಂಎಸ್ಎಂಇʼಗಳು ತಯಾರಿಸಿದ ಘಟಕಗಳನ್ನು ಬಳಸುತ್ತವೆ," ಎಂದು ಪ್ರಧಾನಿ ಹೇಳಿದರು. ಜಾಗತಿಕ ಸಾಧ್ಯತೆಗಳು ನಮ್ಮ ಬಾಗಿಲು ತಟ್ಟುತ್ತವೆ ಎಂದು ಒತ್ತಿ ಹೇಳಿದರು.

"ಇಂದು ನಮ್ಮ ʻಎಂಎಸ್ಎಂಇʼಗಳು ಜಾಗತಿಕ ಪೂರೈಕೆ ಸರಪಳಿಯ ಬಲವಾದ ಭಾಗವಾಗಲು ಉತ್ತಮ ಅವಕಾಶವನ್ನು ಹೊಂದಿವೆ" ಎಂದು ಪ್ರಧಾನಿ ಹೇಳಿದರು, ಗುಣಮಟ್ಟ ಮತ್ತು ಬಾಳಿಕೆ ವಿಚಾರವಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಗುಣಮಟ್ಟ ಮತ್ತು ಪರಿಸರ ಸುಸ್ಥಿರತೆಯನ್ನು ಒಳಗೊಂಡ 'ಶೂನ್ಯ ದೋಷ-ಶೂನ್ಯ ಪರಿಣಾಮ' ತತ್ವವನ್ನು ಪುನರುಚ್ಚರಿಸಿದರು.

ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಭಾರತದ ʻಎಂಎಸ್ಎಂಇʼಗಳ ಸಾಮರ್ಥ್ಯವನ್ನು ಪ್ರಧಾನಿ ಶ್ಲಾಘಿಸಿದರು. "ದೇಶವು ʻಎಂಎಸ್ಎಂಇʼಯ ಭವಿಷ್ಯವನ್ನು ದೇಶದ ʻಎಂಎಸ್ಎಂಇʼಯಾಗಿ ನೋಡುತ್ತಿದೆ" ಎಂದು ಅವರು ಹೇಳಿದರು. ʻಎಂಎಸ್ಎಂಇʼಗೆ ಸರ್ಕಾರದ ಬಹುಮುಖಿ ಉತ್ತೇಜನವನ್ನು ವಿವರಿಸಿದ ಪ್ರಧಾನಮಂತ್ರಿಯವರು, ʻಪ್ರಧಾನಮಂತ್ರಿ ಮುದ್ರಾ ಯೋಜನೆʼ ಮತ್ತು ʻಪಿಎಂ ವಿಶ್ವಕರ್ಮʼ ಯೋಜನೆಯನ್ನು ಉಲ್ಲೇಖಿಸಿದರು. ಇದಲ್ಲದೆ, ʻಎಂಎಸ್ಎಂಇ ಸಾಲ ಖಾತರಿ ಯೋಜನೆʼಯು ಸಾಂಕ್ರಾಮಿಕ ಸಮಯದಲ್ಲಿ ಈ ಉದ್ಯಮಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಉಳಿಸಿದೆ ಎಂದರು.

ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ʻಎಂಎಸ್ಎಂಇʼಗಳಿಗೆ ಕಡಿಮೆ ಬಡ್ಡಿದರದ ಸಾಲಗಳು ಮತ್ತು ದುಡಿಯುವ ಬಂಡವಾಳದ ಸೌಲಭ್ಯಗಳನ್ನು ಖಾತ್ರಿಪಡಿಸಲಾಗುತ್ತಿದೆ. ಆ ಮೂಲಕ ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ದೇಶದ ಸಣ್ಣ ಉದ್ಯಮಗಳ ಉನ್ನತೀಕರಣಕ್ಕೆ ಸರ್ಕಾರ ನೀಡುತ್ತಿರುವ ಒತ್ತು, ಅವುಗಳನ್ನು ಬಲಪಡಿಸುವ ಪ್ರಮುಖ ಅಂಶವೆಂದು ಸಾಬೀತಾಗಿದೆ ಎಂದು ಅವರು ಗಮನ ಸೆಳೆದರು. "ಇಂದಿನ ಸರ್ಕಾರವು ʻಎಂಎಸ್ಎಂಇʼಗಳಿಗೆ ಹೊಸ ತಂತ್ರಜ್ಞಾನ ಮತ್ತು ಕೌಶಲ್ಯಗಳ ಅಗತ್ಯವನ್ನು ಪೂರೈಸುತ್ತಿದೆ," ಎಂದು ದೇಶದಲ್ಲಿ ನಡೆಯುತ್ತಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಧಾನಿ ಎತ್ತಿ ತೋರಿದರು. ಭವಿಷ್ಯವನ್ನು ರೂಪಿಸುವಲ್ಲಿ ಕೌಶಲ್ಯ ಅಭಿವೃದ್ಧಿಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕೌಶಲ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಮತ್ತು ತಾವು ಅಧಿಕಾರಕ್ಕೆ ಬಂದ ನಂತರ ಇದಕ್ಕಾಗಿ ಹೊಸ ಸಚಿವಾಲಯವನ್ನು ರಚಿಸಲಾಗಿದೆ ಎಂದರು. "ಉನ್ನತೀಕರಣಕ್ಕೆ ಅವಕಾಶವಿರುವ ಸುಧಾರಿತ ಕೌಶಲ್ಯ ವಿಶ್ವವಿದ್ಯಾಲಯಗಳು ಭಾರತಕ್ಕೆ ಈಗಿನ ತುರ್ತು ಅಗತ್ಯವಾಗಿದೆ," ಎಂದು ಅವರು ಹೇಳಿದರು.

ವಿದ್ಯುತ್‌ ಚಾಲಿತ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಪ್ರಧಾನಿ ಉದ್ಯಮಿಗಳಿಗೆ ಮನವಿ ಮಾಡಿದರು. ಮೇಲ್ಛಾವಣಿ ಸೌರಶಕ್ತಿಗಾಗಿ ಇತ್ತೀಚೆಗೆ ಪ್ರಾರಂಭಿಸಲಾದ ʻಪಿಎಂ ಸೂರ್ಯಘರ್ ಯೋಜನೆʼಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಇದು ಫಲಾನುಭವಿಗಳಿಗೆ ಉಚಿತ ವಿದ್ಯುತ್ ಮತ್ತು ಹೆಚ್ಚುವರಿ ಆದಾಯವನ್ನು ಒದಗಿಸುತ್ತದೆ. ಇಂತಹ 1 ಕೋಟಿ ಮನೆಗಳ ಆರಂಭಿಕ ಗುರಿಯೊಂದಿಗೆ, ʻಇವಿ ವಾಹನʼಗಳಿಗೆ ಮನೆಗಳಲ್ಲಿ ಮತ್ತಷ್ಟು ಸುಗಮವಾದ ಚಾರ್ಜಿಂಗ್ ಕೇಂದ್ರಗಳ ಲಭ್ಯತೆ ಇರಲಿದೆ ಎಂದು ಪ್ರಧಾನಿ ಹೇಳಿದರು.

ವಾಹನ ಮತ್ತು ವಾಹನ ಬಿಡಿಭಾಗಗಳಿಗಾಗಿ 26,000 ಕೋಟಿ ರೂ.ಗಳ ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ(ಪಿಎಲ್ಐ) ಯೋಜನೆಯ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಇದು ಉತ್ಪಾದನೆಯ ಜೊತೆಗೆ ಹೈಡ್ರೋಜನ್ ವಾಹನಗಳನ್ನು ಉತ್ತೇಜಿಸುತ್ತಿದೆ. ಇದರ ಮೂಲಕ 100ಕ್ಕೂ ಹೆಚ್ಚು ಸುಧಾರಿತ ವಾಹನ ತಂತ್ರಜ್ಞಾನಗಳನ್ನು ಉತ್ತೇಜಿಸಲಾಗುತ್ತಿದೆ ಎಂದರು. "ದೇಶದಲ್ಲಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದಾಗ, ಆ ತಂತ್ರಜ್ಞಾನಗಳಲ್ಲಿ ಜಾಗತಿಕ ಹೂಡಿಕೆಯೂ ಭಾರತಕ್ಕೆ ಬರುತ್ತದೆ" ಎಂದು ಪ್ರಧಾನಿ ಹೇಳಿದರು. ಉದ್ಯಮಿಗಳು ತಮ್ಮ ಸಾಮರ್ಥ್ಯ ವಿಸ್ತರಿಸಬೇಕು ಮತ್ತು ಹೊಸ ಕ್ಷೇತ್ರಗಳನ್ನು ಅನ್ವೇಷಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.

ಅವಕಾಶಗಳ ಜೊತೆಗೆ ಸವಾಲುಗಳೂ ಇರುವುದನ್ನು ಒಪ್ಪಿಕೊಂಡ ಪ್ರಧಾನಮಂತ್ರಿಯವರು, ಡಿಜಿಟಲೀಕರಣ, ವಿದ್ಯುದ್ದೀಕರಣ, ಪರ್ಯಾಯ ಇಂಧನ ವಾಹನಗಳು ಮತ್ತು ಮಾರುಕಟ್ಟೆ ಬೇಡಿಕೆಯ ಏರಿಳಿತಗಳು ಪ್ರಮುಖ ಈ ನಿಟ್ಟಿನಲ್ಲಿ ಪ್ರಮುಖ ವಿಚಾರಗಳಾಗಿವೆ ಎಂದು ಉಲ್ಲೇಖಿಸಿದರು. ಇವುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಸರಿಯಾದ ಕಾರ್ಯತಂತ್ರದೊಂದಿಗೆ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ʻಎಂಎಸ್ಎಂಇʼಗಳ ವ್ಯಾಖ್ಯಾನದಲ್ಲಿ ತಿದ್ದುಪಡಿ, ʻಎಂಎಸ್ಎಂಇʼಗಳ ಗಾತ್ರದ ಬೆಳವಣಿಗೆಗೆ ದಾರಿ ಮಾಡಿಕೊಡುವುದು ಮುಂತಾದ ʻಎಂಎಸ್ಎಂಇʼಗಳ ಔಪಚಾರಿಕೀಕರಣದ ನಿಟ್ಟಿನಲ್ಲಿನ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಿ ಗಮನಸೆಳೆದರು.

"ಭಾರತ ಸರ್ಕಾರವು ಇಂದು ಪ್ರತಿಯೊಂದು ಉದ್ಯಮದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ" ಎಂದು ಪ್ರಧಾನಿ ಮೋದಿ ಹೇಳಿದರು. ಈ ಹಿಂದೆ, ಅದು ಉದ್ಯಮವಾಗಿರಲಿ ಅಥವಾ ವ್ಯಕ್ತಿಯಾಗಿರಲಿ ಸಣ್ಣ ಕೆಲಸಗಳಿಗೂ ಸಹ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿತ್ತು. ಆದರೆ ಇಂದಿನ ಸರ್ಕಾರವು ಪ್ರತಿಯೊಂದು ವಲಯ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುತ್ತಿದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ 40,000ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಲಾಗಿದೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಸಣ್ಣ ತಪ್ಪುಗಳನ್ನು ಅಪರಾಧಮುಕ್ತಗೊಳಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.

"ಅದು ಹೊಸ ಸರಕುಸಾಗಣೆ ನೀತಿಯಾಗಿರಲಿ ಅಥವಾ ʻಜಿಎಸ್‌ಟಿʼ ಆಗಿರಲಿ, ಇವೆಲ್ಲವೂ ವಾಹನ ಕ್ಷೇತ್ರದ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸಹಾಯ ಮಾಡಿವೆ," ಎಂದು ಪ್ರಧಾನಿ ಹೇಳಿದರು. ʻಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಮೂಲಕ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ದಾರಿ ಮಾಡಿದೆ. ಇದರ ಅಡಿಯಲ್ಲಿ, ಒಂದೂವರೆ ಸಾವಿರಕ್ಕೂ ಹೆಚ್ಚು ಪದರಗಳಲ್ಲಿ ಡೇಟಾವನ್ನು ಸಂಸ್ಕರಿಸುವ ಮೂಲಕ ಭವಿಷ್ಯದ ಮೂಲಸೌಕರ್ಯವನ್ನು ರಚಿಸಲಾಗುತ್ತಿದೆ ಎಂದು ಅವರು ಒತ್ತಿಹೇಳಿದರು. ಪ್ರತಿ ಉದ್ಯಮಕ್ಕೆ ಬೆಂಬಲ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಅವರು ಒತ್ತು ನೀಡಿದರು ಮತ್ತು ವಾಹನ ʻಎಂಎಸ್ಎಂಇʼ ವಲಯದ ಮಧ್ಯಸ್ಥಗಾರರು ಈ ಬೆಂಬಲ ಕಾರ್ಯವಿಧಾನದ ಲಾಭವನ್ನು ಪಡೆಯಬೇಕೆಂದು ಒತ್ತಾಯಿಸಿದರು. "ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಮುಂದೆ ಕೊಂಡೊಯ್ಯಿರಿ. ಸರ್ಕಾರ ಸಂಪೂರ್ಣವಾಗಿ ನಿಮ್ಮೊಂದಿಗಿದೆ ಎಂದರು. ʻಟಿವಿಎಸ್ʼನ ಈ ಪ್ರಯತ್ನವು ಈ ದಿಕ್ಕಿನಲ್ಲಿ ನಿಮಗೆ ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ", ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಸರ್ಕಾರದ ʻಸ್ಕ್ರ್ಯಾಪಿಂಗ್ʼ ನೀತಿಯ ಬಗ್ಗೆಯೂ ಪ್ರಸ್ತಾಪಿಸಿದರು ಮತ್ತು ಎಲ್ಲಾ ಹಳೆಯ ವಾಹನಗಳನ್ನು ಹೊಸ ಆಧುನೀಕರಿಸಿದ ವಾಹನಗಳೊಂದಿಗೆ ಬದಲಾಯಿಸುವ ಬಯಕೆಯನ್ನು ವ್ಯಕ್ತಪಡಿಸಿದರು, ಇದರ ಗರಿಷ್ಠ ಲಾಭವನ್ನು ಪಡೆದುಕೊಳ್ಳುವಂತೆ ಮಧ್ಯಸ್ಥಗಾರರನ್ನು ಒತ್ತಾಯಿಸಿದರು. ಹಡಗು ತಯಾರಿಕೆಯ ನವೀನ ಮತ್ತು ಯೋಜಿತ ಮಾರ್ಗಗಳು ಮತ್ತು ಅದರ ಭಾಗಗಳನ್ನು ಮರುಬಳಕೆ ಮಾಡುವ ಮಾರುಕಟ್ಟೆಯ ಬಗ್ಗೆಯೂ ಅವರು ಮಾತನಾಡಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಚಾಲಕರು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಬೆಳಕು ಚೆಲ್ಲಿದರು ಮತ್ತು ಹೆದ್ದಾರಿಯಲ್ಲಿ ಚಾಲಕರಿಗೆ ಸೌಲಭ್ಯಗಳಿಗಾಗಿ 1,000 ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದರು. ಪ್ರಧಾನಮಂತ್ರಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅವರ ಯೋಜನೆಗಳಲ್ಲಿ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ ಎಂದು ಭರಾವಾಸೆ ನೀಡಿದರು.

ಕೇಂದ್ರ ರಾಜ್ಯ ಸಚಿವ ಡಾ.ಎಲ್.ಮುರುಗನ್ ಮತ್ತು ʻಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಲಿಮಿಟೆಡ್ʼನ ಅಧ್ಯಕ್ಷ ಶ್ರೀ ಆರ್. ದಿನೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಮಧುರೈನಲ್ಲಿ ಪ್ರಧಾನಮಂತ್ರಿಯವರು 'ಡಿಜಿಟಲ್ ಮೊಬಿಲಿಟಿ – ಆಟೋಮೋಟಿ ಎಂಎಸ್ಎಂಇ ಉದ್ಯಮಿಗಳಿಗೆ ಭವಿಷ್ಯ  ಸೃಷ್ಟಿ' ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ವಾಹನ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು(ಎಂಎಸ್ಎಂಇ) ಉದ್ದೇಶಿಸಿ ಮಾತನಾಡಿದರು. ಭಾರತೀಯ ವಾಹನ ಉದ್ಯಮದಲ್ಲಿ ʻಎಂಎಸ್ಎಂಇʼಗಳನ್ನು ಬೆಂಬಲಿಸಲು ಮತ್ತು ಉನ್ನತೀಕರಿಸಲು ವಿನ್ಯಾಸಗೊಳಿಸಲಾದ ಎರಡು ಪ್ರಮುಖ ಉಪಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಿದರು. ಈ ಉಪಕ್ರಮಗಳಲ್ಲಿ ʻಟಿವಿಎಸ್ ಓಪನ್ ಮೊಬಿಲಿಟಿ ಪ್ಲಾಟ್‌ಫಾರ್ಮ್ʼ ಮತ್ತು ʻಟಿವಿಎಸ್ ಮೊಬಿಲಿಟಿ-ಸಿಐಐ ಸೆಂಟರ್ ಆಫ್ ಎಕ್ಸಲೆನ್ಸ್ʼ ಸೇರಿವೆ. ಈ ಉಪಕ್ರಮಗಳು ದೇಶದಲ್ಲಿ ʻಎಂಎಸ್ಎಂಇʼಗಳ ಬೆಳವಣಿಗೆಯನ್ನು ಬೆಂಬಲಿಸುವ ಮತ್ತು ಕಾರ್ಯಾಚರಣೆಗಳನ್ನು ಔಪಚಾರಿಕಗೊಳಿಸಲು, ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸಲು ಮತ್ತು ಸ್ವಾವಲಂಬಿಗಳಾಗಲು ಸಹಾಯ ಮಾಡುವ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎನಿಸಿವೆ.

*****



(Release ID: 2010104) Visitor Counter : 38