ಪ್ರಧಾನ ಮಂತ್ರಿಯವರ ಕಛೇರಿ

ಕೇರಳದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಭೇಟಿ




ಸುಮಾರು 1800 ಕೋಟಿ ಮೊತ್ತದ ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ

ಗಗನಯಾನದ ಪ್ರಗತಿ ಮತ್ತು ಗಗನಯಾನಕ್ಕೆ ನಿಯೋಜಿತರಿಗೆ ನೀಡಲಿರುವ ರೆಕ್ಕೆಗಳ ಅಭಿವೃದ್ಧಿ ಪರಿಶೀಲನೆ

“ಹೊಸ ಕಾಲಚಕ್ರದಲ್ಲಿ ಭಾರತ ಜಾಗತಿಕ ವ್ಯವಸ್ಥೆಯಲ್ಲಿ ನಿರಂತರವಾಗಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ ಮತ್ತು ಇದು ನಮ್ಮ ಬಾಹ್ಯಾಕಾಶ ಕಾರ್ಯುಕ್ರಮದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ’’

“ಗಗನಯಾನಕ್ಕೆ ನಿಯೋಜಿಸಿರುವ ನಾಲ್ವರು ಗಗನಯಾತ್ರಿಗಳ ಹೆಸರು ಅಥವಾ ವ್ಯಕ್ತಿಗಳಲ್ಲ, ಅವರು 140 ಕೋಟಿ ಭಾರತೀಯರ ಆಶೋತ್ತರಗಳನ್ನು ಗಗನಕ್ಕೆ ಕೊಂಡೊಯ್ಯುತ್ತಿರುವ ನಾಲ್ಕು ‘ಶಕ್ತಿಗಳು’’

“ಗಗನಯಾನಕ್ಕೆ ನಿಯೋಜಿತ ನಾಲ್ವರು ಯಾತ್ರಿಗಳು ಭಾರತದ ಇಂದಿನ ನಂಬಿಕೆ, ಧೈರ್ಯ, ಸ್ಥೈರ್ಯ ಮತ್ತು ಶಿಸ್ತಿನ ಸಂಕೇತವಾಗಿದ್ದಾರೆ’’

“40 ವರ್ಷಗಳ ನಂತರ ಭಾರತೀಯರು ಗಗನಯಾನ ಕೈಗೊಳ್ಳುತ್ತಿದ್ದಾರೆ. ಆದರೆ ಇದೀಗ ಕ್ಷಣಗಣನೆ ಆರಂಭವಾಗಿದೆ ಮತ್ತು ರಾಕೆಟ್  ನಮ್ಮದಾಗಿದೆ’’

“ಭಾರತವು ವಿಶ್ವದ ಮೂರನೇ ಅಗ್ರ ಆರ್ಥಿಕತೆಯಾಗಲಿದೆ, ಅದೇ ಸಮಯದಲ್ಲಿ ದೇಶದ ಗಗನಯಾನ ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ"

“ಬಾಹ್ಯಾಕಾಶ ವಲಯದಲ್ಲಿ ಭಾರತದ ನಾರಿಶಕ್ತಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ’’

“ಭಾರತದ ಬಾಹ್ಯಾಕಾಶ ವಲಯದ ಯಶಸ್ಸು ದೇಶದ ಯುವಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವದ ಬೀಜವನ್ನು ಬಿತ್ತುತ್ತಿದೆ’’

Posted On: 27 FEB 2024 1:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ ಎಸ್ ಸಿ)ಗೆ ಭೇಟಿ ನೀಡಿದ್ದರು ಮತ್ತು ಸುಮಾರು 1800 ಕೋಟಿ ರೂ. ಮೌಲ್ಯದ ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಯೋಜನೆಗಳಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎಸ್ ಎಲ್ ವಿ ಇಂಟಿಗ್ರೇಷನ್ ಫೆಸಿಲಿಟಿ (ಪಿಐಎಫ್ ); ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಹೊಸ 'ಸೆಮಿ-ಕ್ರಯೋಜೆನಿಕ್ಸ್ ಇಂಟಿಗ್ರೇಟೆಡ್ ಇಂಜಿನ್ ಮತ್ತು ಸ್ಟೇಜ್ ಟೆಸ್ಟ್ ಸೌಲಭ್ಯ'; ಮತ್ತು ತಿರುವನಂತಪುರಂನ ವಿಎಸ್ ಎಸ್ ಸಿಯಲ್ಲಿ ‘ಟ್ರೈಸಾನಿಕ್ ವಿಂಡ್ ಟನಲ್’ ಒಳಗೊಂಡಿವೆ. ಶ್ರೀ ನರೇಂದ್ರ ಮೋದಿ ಅವರು ಗಗನಯಾನ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ನಾಲ್ಕು ಗಗನಯಾತ್ರಿಗಳಿಗೆ 'ಗಗನಯಾತ್ರಿ ರೆಕ್ಕೆಗಳನ್ನು' ನೀಡಿದರು. ಆ ಗಗನಯಾತ್ರಿಗಳೆಂದರೆ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ.

ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆ ಮೊಳಗುತ್ತಿದ್ದ ಸಭಾಂಗಣದಲ್ಲಿ ನಿಯೋಜಿತ ಗಗನಯಾತ್ರಿಗಳನ್ನು ಎಲ್ಲರೂ ಎದ್ದು ನಿಂತು ಅಭಿನಂದಿಸುವಂತೆ ಸೂಚಿಸಿದರು.

ಪ್ರತಿಯೊಂದು ರಾಷ್ಟ್ರದ ಅಭಿವೃದ್ಧಿ ಪಯಣವು ವರ್ತಮಾನವನ್ನು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯನ್ನು ವ್ಯಾಖ್ಯಾನಿಸುವ ವಿಶೇಷ ಕ್ಷಣಗಳನ್ನು ಹೊಂದಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಇಂದಿನ ಪೀಳಿಗೆಯು ಭೂಮಿ, ಗಾಳಿ, ನೀರು ಮತ್ತು ಬಾಹ್ಯಾಕಾಶದಲ್ಲಿ ಆಗುವ ರಾಷ್ಟ್ರದ ಐತಿಹಾಸಿಕ ಸಾಧನೆಗಳ ಬಗ್ಗೆ ಹೆಮ್ಮೆ ಪಡುವಂತಹ ಸಂದರ್ಭವಾಗಿದೆ ಎಂದು ಹೇಳಿದರು. ಅಯೋಧ್ಯೆಯಿಂದ ಆರಂಭವಾಗಿರುವ ಹೊಸ ‘ಕಾಲ ಚಕ್ರ’ದ  ಕುರಿತು ತಮ್ಮ ಹೇಳಿಕೆಯನ್ನು ಸ್ಮರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಭಾರತವು ಜಾಗತಿಕ ಕ್ರಮದಲ್ಲಿ ತನ್ನ ನೆಲೆಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಮತ್ತು ಅದರ ನೋಟವನ್ನು ದೇಶದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ರಾಷ್ಟ್ರವಾಯಿತು ಎಂದು ಭಾರತದ ಚಂದ್ರಯಾನ ಯಶಸ್ಸನ್ನು ಪ್ರಧಾನಿ ಸ್ಮರಿಸಿದರು. "ಇಂದು ಶಿವ-ಶಕ್ತಿ ಪಾಯಿಂಟ್ ಭಾರತೀಯ ಪರಾಕ್ರಮವನ್ನು ಇಡೀ ಜಗತ್ತಿಗೆ ಪರಿಚಯಿಸುತ್ತಿದೆ" ಎಂದು ಅವರು ಹೇಳಿದರು. ನಾಲ್ಕು ಗಗನಯಾನ ಪ್ರಯಾಣಿಕರನ್ನು, ಗಗನಯಾತ್ರಿ-ನಿಯೋಜಿತರನ್ನು ಪರಿಚಯಿಸುವುದನ್ನು ಅವರು ಐತಿಹಾಸಿಕ ಸಂದರ್ಭವೆಂದು ಬಣ್ಣಿಸಿದರು. "ಅವರು ಕೇವಲ ನಾಲ್ಕು ಹೆಸರುಗಳು ಅಥವಾ ವ್ಯಕ್ತಿಗಳಲ್ಲ, ಅವರು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಸಾಗಿಸುವ ನಾಲ್ಕು ಶಕ್ತಿ" ಎಂದು ಪ್ರಧಾನಿ ಹೇಳಿದರು. 40 ವರ್ಷಗಳ ನಂತರ ಭಾರತೀಯರೊಬ್ಬರು ಬಾಹ್ಯಾಕಾಶಕ್ಕೆ ತೆರಳುತ್ತಿದ್ದಾರೆ ಎಂದು ಅವರು ಹೇಳಿದರು. ಆದಾಗ್ಯೂ, ಈಗ, ಸಮಯ, ಕ್ಷಣಗಣನೆ ಮತ್ತು ರಾಕೆಟ್ ನಮಗೆ ಸೇರಿದೆ. ಗಗನಯಾತ್ರಿಗಳನ್ನು ರಾಷ್ಟ್ರಕ್ಕೆ ಪರಿಚಯಿಸಲು ಮತ್ತು ಅವರನ್ನು ಭೇಟಿ ಮಾಡಲು ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು ಇಡೀ ರಾಷ್ಟ್ರದ ಪರವಾಗಿ ಅವರಿಗೆ ಶುಭ ಹಾರೈಸಿದರು.

“ಗಗನಯಾತ್ರಿಗಳು ಕೇವಲ ನಾಲ್ಕು ಹೆಸರುಗಳು ಅಥವಾ ವ್ಯಕ್ತಿಗಳಲ್ಲ, ಅವರು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ನಾಲ್ಕು ಶಕ್ತಿ" ಎಂದು ಪ್ರಧಾನಿ ಹೇಳಿದರು. ಅಲ್ಲದೆ, ಅವರು 40 ವರ್ಷಗಳ ನಂತರ ಭಾರತೀಯರೊಬ್ಬರು ಬಾಹ್ಯಾಕಾಶಕ್ಕೆ ತೆರಳುತ್ತಿದ್ದಾರೆ ಎಂದು ಹೇಳಿದರು. ಆದರೂ ಇದೀಗ ಕ್ಷಣಗಣನೆ ಆರಂಭವಾಗಿದೆ ಮತ್ತು ರಾಕೆಟ್ ನಮಗೆ ಸೇರಿದ್ದಾಗಿದೆ ಎಂದರು. ಗಗನಯಾತ್ರಿಗಳನ್ನು ರಾಷ್ಟ್ರಕ್ಕೆ ಪರಿಚಯಿಸಲು ಮತ್ತು ಅವರನ್ನು ಭೇಟಿ ಮಾಡಲು ಸಂತೋಷವಾಗುತ್ತಿದೆ ಎಂದ ಪ್ರಧಾನಮಂತ್ರಿ ಅವರು ಇಡೀ ರಾಷ್ಟ್ರದ ಪರವಾಗಿ ಅವರಿಗೆ ಶುಭ ಹಾರೈಸಿದರು.

ನಿಯೋಜಿತ ಗಗನಯಾತ್ರಿಗಳನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ, ಅವರ ಹೆಸರುಗಳು ಭಾರತದ ಯಶಸ್ಸಿನೊಂದಿಗೆ ಸೇರಿಕೊಂಡಿವೆ ಮತ್ತು ಅವು ಇಂದಿನ ಭಾರತದ ನಂಬಿಕೆ, ಧೈರ್ಯ, ಶೌರ್ಯ ಮತ್ತು ಶಿಸ್ತಿನ ಸಂಕೇತವಾಗಿದೆ ಎಂದು ಹೇಳಿದರು. ತರಬೇತಿಗಾಗಿ ಅವರ ಬದ್ಧತೆ ಮತ್ತು ಮನೋಭಾವವನ್ನು ಅವರು ಶ್ಲಾಘಿಸಿದರು ಮತ್ತು ಅವರು ಎಂದಿಗೂ ಎದೆಗುಂದದ ಭಾರತದ ಅಮೃತ ಪೀಳಿಗೆಯ ಪ್ರತಿನಿಧಿಗಳು ಮತ್ತು ಎಲ್ಲಾ ಪ್ರತಿಕೂಲಗಳನ್ನು ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿಯನ್ನು ತೋರಿಸುತ್ತಾರೆ ಎಂದು ಹೇಳಿದರು. ಈ ಮಿಷನ್‌ಗಾಗಿ ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮನಸ್ಸಿನ ಅಗತ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ತರಬೇತಿ ಮಾದರಿಯ ಭಾಗವಾಗಿ ಯೋಗದ ಪಾತ್ರವನ್ನು ಪ್ರಧಾನಿ ಉಲ್ಲೇಖಿಸಿದರು. “ಇಡೀ ದೇಶದ ಶುಭಾಶಯಗಳು ಮತ್ತು ಆಶೀರ್ವಾದಗಳು ನಿಮ್ಮ ಮೇಲಿವೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗಗನಯಾನ ಯೋಜನೆಗೆ ಸಂಬಂಧಿಸಿದ ಇಸ್ರೋದ ಎಲ್ಲಾ ಸಿಬ್ಬಂದಿ ತರಬೇತುದಾರರಿಗೆ ಪ್ರಧಾನಿ ತಮ್ಮ ಶುಭಾಶಯಗಳನ್ನು ತಿಳಿಸಿದರು.

ನಾಲ್ವರು ಗಗನಯಾತ್ರಿಗಳು ಸೆಲೆಬ್ರಿಟಿಗಳಂತಾಗಿದ್ದು, ಅದು ಅವರಿಗೆ ತರಬೇತಿಯಲ್ಲಿ ಅಡಚಣೆ ಉಂಟು ಮಾಡಬಹುದೆಂದು ಪ್ರಧಾನಿ ಅವರು ಕಳವಳ ವ್ಯಕ್ತಪಡಿಸಿದರು. ಗಗನಯಾತ್ರಿಗಳು ಯಾವುದೇ ಅಡ್ಡಿಆತಂಕವಿಲ್ಲದೆ ತರಬೇತಿಯನ್ನು ಮುಂದುವರಿಸಲು ನಿಯೋಜಿತರಿಗೆ ಮತ್ತು  ಅವರ ಕುಟುಂಬಗಳಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಪ್ರಧಾನಮಂತ್ರಿ ಅವರು ಗಗನಯಾನದ ಕುರಿತು ಮಾಹಿತಿ ನೀಡಿದರು. ಗಗನಯಾನದಲ್ಲಿನ ಬಹುತೇಕ ಸಾಧನಗಳು ಭಾರತದಲ್ಲಿಯೇ ತಯಾರಿಸಿರುವುದ( ಮೇಡ್ ಇನ್ ಇಂಡಿಯಾ)ಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ಭಾರತದ ವಿಶ್ವದ ಮೂರನೇ ಅಗ್ರ  ಆರ್ಥಿಕ ರಾಷ್ಟ್ರವಾಗುವ ವೇಳೆಗೆ ಗಗನಯಾನದ  ಸಿದ್ಧತೆಯೂ ನಡೆಯುತ್ತಿರುವುದು ಕಾಕತಾಳೀಯವಾಗಿ ಸಂತೋಷದ ಸಂಗತಿ ಎಂದು ಉಲ್ಲೇಖಿಸಿದರು. ಇಂದು ಲೋಕಾರ್ಪಣೆಗೊಂಡ ಯೋಜನೆಗಳು ಹೊಸ ಉದ್ಯೋಗಗಳಿಗೆ ಕಾರಣವಾಗುತ್ತವೆ ಮತ್ತು ಭಾರತದ ಕೀರ್ತಿಯನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.

ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ನಾರಿ ಶಕ್ತಿಯ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ, “ಚಂದ್ರಯಾನ ಅಥವಾ ಗಗನಯಾನ ಆಗಿರಲಿ, ಮಹಿಳಾ ವಿಜ್ಞಾನಿಗಳಿಲ್ಲದೆ ಅಂತಹ ಯಾವುದೇ ಯೋಜನೆಗಳನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ’’ ಎಂದು ಹೇಳಿದರು. ಇಸ್ರೋದಲ್ಲಿ 500ಕ್ಕೂ ಅಧಿಕ ಮಹಿಳೆಯರು ನಾಯಕತ್ವ ಹುದ್ದೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತದ ಬಾಹ್ಯಾಕಾಶ ವಲಯದ ಪ್ರಮುಖ ಕೊಡುಗೆ ದೇಶದ ಯುವಪೀಳಿಗೆಯ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವದ ಬೀಜವನ್ನು ಬಿತ್ತುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಿ, ಇಸ್ರೋ ಘಟಕಗಳು ಸಾಧಿಸಿರುವ ಯಶಸ್ಸಿನಿಂದಾಗಿ ಇಂದಿನ ಮಕ್ಕಳು ಬೆಳೆಯುತ್ತಾ ವಿಜ್ಞಾನಿಗಳಾಗುವತ್ತ ಆಲೋಚಿಸುವಂತೆ ಮಾಡಿದೆ ಎಂದರು. “ರಾಕೆಟ್ ಗಳಿಗೆ ಕ್ಷಣಗಣನೆ ಆರಂಭವಾಗಿರುವುದು ಭಾರತದಲ್ಲಿ ಲಕ್ಷಾಂತರ ಮಕ್ಕಳಿಗೆ ಸ್ಫೂರ್ತಿಯನ್ನು ನೀಡಲಿದೆ ಮತ್ತು ಇಂದು ಕಾಗದದಲ್ಲಿ ವಿಮಾನಗಳ ಕನಸು ಕಾಣುತ್ತಿರುವವರು ಮುಂದೆ ನಿಮ್ಮಂತೆ ವಿಜ್ಞಾನಿಗಳಾಗಲಿದ್ದಾರೆ’’ ಎಂದು ಪ್ರಧಾನಿ ಹರ್ಷದಿಂದ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಯುವಕರ ಇಚ್ಛಾಶಕ್ತಿಯು ರಾಷ್ಟ್ರದ ಸಂಪತ್ತಿಗೆ ಕಾರಣವಾಗುತ್ತದೆ ಎಂದು ಉಲ್ಲೇಖಿಸಿದರು. ಚಂದ್ರಯಾನ 2 ಲ್ಯಾಂಡಿಂಗ್ ಸಮಯ ದೇಶದ ಪ್ರತಿ ಮಗುವಿಗೆ ಕಲಿಕೆಯ ಅನುಭವವಾಗಿದೆ ಎಂದು ಅವರು ಹೇಳಿದರು, ಆದರೆ ಕಳೆದ ವರ್ಷ ಆ.23 ರಂದು ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಯುವಜನರಲ್ಲಿ ಹೊಸ ಚೈತನ್ಯವನ್ನು ತುಂಬಿತು. "ಈ ದಿನವನ್ನು ಈಗ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುತ್ತದೆ" ಎಂದು ಅವರು ಮಾಹಿತಿ ನೀಡಿದರು, ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶವು ಮಾಡಿದ ವಿವಿಧ ದಾಖಲೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ದೇಶದ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, ಒಂದೇ ಕಾರ್ಯಾಚರಣೆಯಲ್ಲಿ 100 ಕ್ಕೂ ಅಧಿಕ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು ಮತ್ತು ಆದಿತ್ಯ ಎಲ್ 1 ಸೋಲಾರ್ ಪ್ರೋಬ್ ಅನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿಸಲಾಗಿದೆ ಎಂದ ಪ್ರಧಾನಿ,  ಕೆಲವೇ ರಾಷ್ಟ್ರಗಳು ಅಂತಹ ಸಾಧನೆಗಳನ್ನು ಮಾಡಿವೆ ಎಂದು ಹೇಳಿದರು. 2024ರ ಮೊದಲ ಕೆಲವು ವಾರಗಳಲ್ಲಿ ಸಾಧಿಸಿದ ಎಕ್ಸ್‌ಪೋ-ಸ್ಯಾಟ್ ಮತ್ತು ಇನ್ಸಾಟ್-3ಡಿಎಸ್ ನ ಇತ್ತೀಚಿನ ಯಶಸ್ಸನ್ನು ಸಹ ಅವರು ಉಲ್ಲೇಖಿಸಿದರು.

“ನೀವೆಲ್ಲರೂ ಭವಿಷ್ಯದ ಸಾಧ್ಯತೆಗಳ ಹೊಸ ಬಾಗಿಲುಗಳನ್ನು ತೆರೆಯುತ್ತಿದ್ದೀರಿ" ಎಂದು ಪ್ರಧಾನಿ ಮೋದಿ ಇಸ್ರೋ ತಂಡಕ್ಕೆ ಹೇಳಿದರು. ಒಂದು ಅಂದಾಜಿನ ಪ್ರಕಾರ ಮುಂದಿನ 10 ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆಯು ಐದು ಪಟ್ಟು ಬೆಳೆಯುತ್ತದೆ ಮತ್ತು 44 ಬಿಲಿಯನ್ ಡಾಲರ್‌ ತಲುಪಲಿದೆ ಎಂದು ಪ್ರಧಾನಿ ಹೇಳಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಜಾಗತಿಕ ವಾಣಿಜ್ಯ ಕೇಂದ್ರವಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಭಾರತ ಮತ್ತೊಮ್ಮೆ ಚಂದ್ರನತ್ತ ಹೋಗಲಿದೆ. ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಹಿಂಪಡೆಯುವ ಹೊಸ ಮಹತ್ವಾಕಾಂಕ್ಷೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು. ರಾಡಾರ್‌ನಲ್ಲಿ ಶುಕ್ರ ಕೂಡ ಇದೆ ಎಂದು ಅವರು ಹೇಳಿದರು. 2035ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನೆಲೆಯನ್ನು ಹೊಂದಲಿದೆ ಎಂದು ಅವರು ಹೇಳಿದರು. ಅಲ್ಲದೆ, ಈ ಅಮೃತ ಕಾಲದಲ್ಲಿ ಭಾರತೀಯ ಗಗನಯಾತ್ರಿ ಭಾರತೀಯ ರಾಕೆಟ್‌ನಲ್ಲಿ ಚಂದ್ರನ ಮೇಲೆ ಇಳಿಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

2014 ರ ಹಿಂದಿನ ದಶಕದೊಂದಿಗೆ ಕಳೆದ 10 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಸಾಧನೆಗಳನ್ನು ಹೋಲಿಸಿದ ಪ್ರಧಾನಿ ಅಗ ಕೇವಲ 33  ಉಪಗ್ರಹಗಳ ಉಡಾವಣೆ ಮಾಡಲಾಗಿತ್ತು, ಇದೀಗ ಸುಮಾರು 400 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಮತ್ತು ಯುವ-ಚಾಲಿತ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯಲ್ಲಿ ಎರಡು ಅಥವಾ ಮೂರರಿಂದ 200ಕ್ಕಿಂತ ಅಧಿಕ ನವೋದ್ಯಮಗಳು ಬೆಳದಿವೆ ಎಂದು ಪ್ರಸ್ತಾಪಿಸಿದರು. ಇಂದು ಅವರ ಉಪಸ್ಥಿತಿಯನ್ನು ಶ್ಲಾಘಿಸಿದ ಪ್ರಧಾನಿ, ಅವರ ದೂರದೃಷ್ಟಿ, ಪ್ರತಿಭೆ ಮತ್ತು ಅವರ ಉದ್ಯಮಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ಕೈಗೊಂಡಿರುವ ಬಾಹ್ಯಾಕಾಶ ಸುಧಾರಣೆಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದರು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲು ಇತ್ತೀಚೆಗೆ ಅನುಮೋದಿಸಲಾದ ಎಫ್‌ಡಿಐ ನೀತಿಯನ್ನು ಪ್ರಸ್ತಾಪಿಸಿದರು. ಈ ಸುಧಾರಣೆಯೊಂದಿಗೆ, ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆಗಳು ಈಗ ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಯುವಕರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಬಹುದು ಎಂದು ಪ್ರಧಾನಿ ಹೇಳಿದರು.

ವಿಕಸಿತ ಭಾರತ ನಿರ್ಮಾಣಕ್ಕೆ ಕೈಗೊಂಡಿರುವ ಸಂಕಲ್ಪವನ್ನು ಉಲ್ಲೇಖಿಸಿದ ಪ್ರಧಾನಿ, ಬಾಹ್ಯಾಕಾಶ ಕ್ಷೇತ್ರದ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಬಾಹ್ಯಾಕಾಶ ವಿಜ್ಞಾನವು ಕೇವಲ ರಾಕೆಟ್ ವಿಜ್ಞಾನವಲ್ಲ, ಆದರೆ ಇದು ಅತಿದೊಡ್ಡ ಸಾಮಾಜಿಕ ವಿಜ್ಞಾನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಾಹ್ಯಾಕಾಶ ತಂತ್ರಜ್ಞಾನದಿಂದ ಸಮಾಜವು ಹೆಚ್ಚು ಪ್ರಯೋಜನ ಪಡೆಯುತ್ತದೆ. ಕೃಷಿ, ಹವಾಮಾನ ಸಂಬಂಧಿತ, ವಿಪತ್ತು ಮುನ್ಸೂಚನೆ, ನೀರಾವರಿ-ಸಂಬಂಧಿತ, ನ್ಯಾವಿಗೇಷನ್ ನಕ್ಷೆಗಳು ಮತ್ತು ಮೀನುಗಾರರಿಗೆ ನಾವಿಕ್ ವ್ಯವಸ್ಥೆಯಂತಹ ಇತರ ಬಳಕೆಗಳನ್ನು ಅವರು ಪ್ರಸ್ತಾಪಿಸಿದರು. ಗಡಿ ಸುರಕ್ಷತೆ, ಶಿಕ್ಷಣ, ಆರೋಗ್ಯ ಮತ್ತು ಇನ್ನೂ ಅನೇಕ ಬಾಹ್ಯಾಕಾಶ ವಿಜ್ಞಾನದ ಇತರ ಬಳಕೆಗಳ ಬಗ್ಗೆ ಅವರು ಮಾತು ಮುಂದುವರಿಸಿ ಮತ್ತು ಆ ಕುರಿತು ವಿವರಿಸಿದರು. “ನೀವೆಲ್ಲರೂ, ಇಸ್ರೋ ಮತ್ತು ಇಡೀ ಬಾಹ್ಯಾಕಾಶ ಕ್ಷೇತ್ರವು ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಬಹುದೊಡ್ಡ ಪಾತ್ರವನ್ನು ಹೊಂದಿದ್ದೀರಿ’’ ಎಂದು ಪ್ರಧಾನಮಂತ್ರಿ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್, ಕೇರಳದ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಶ್ರೀ ವಿ.ಮುರಳೀಧರನ್, ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಶ್ರೀ ಸೋಮನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ತಿರುವನಂತಪುರದಲ್ಲಿನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಇದರಿಂದ ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಅದರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಕ್ಷೇತ್ರದಲ್ಲಿ ತಾಂತ್ರಿಕ ಮತ್ತು ಸಂಶೋಧನಾ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಸಾಮರ್ಥ್ಯವನ್ನು ಹೆಚ್ಚಿಸುವ ಅವರ ಬದ್ಧತೆಯನ್ನು ಸುಧಾರಿಸುವ ಪ್ರಧಾನಮಂತ್ರಿ ಅವರು ದೂರದೃಷ್ಟಿಯು ಸಾಕಾರವಾಗುತ್ತಿದೆ. ಯೋಜನೆಗಳಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪಿಎಸ್ ಎಲ್ ವಿ ಇಂಟಿಗ್ರೇಷನ್ ಫೆಸಿಲಿಟಿ (ಪಿಐಎಫ್); ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಹೊಸ 'ಸೆಮಿ-ಕ್ರಯೋಜೆನಿಕ್ಸ್ ಇಂಟಿಗ್ರೇಟೆಡ್ ಇಂಜಿನ್ ಮತ್ತು ಸ್ಟೇಜ್ ಟೆಸ್ಟ್ ಸೌಲಭ್ಯ'; ಮತ್ತು ತಿರುವನಂತಪುರಂನ ವಿಎಸ್ ಎಸ್ ಸಿಯಲ್ಲಿ ‘ಟ್ರೈಸಾನಿಕ್ ವಿಂಡ್ ಟನಲ್’  ಒಳಗೊಂಡಿದೆ. ಬಾಹ್ಯಾಕಾಶ ವಲಯದಲ್ಲಿ ವಿಶ್ವದರ್ಜೆಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ಈ ಮೂರು ಯೋಜನೆಗಳನ್ನು ಸುಮಾರು ಒಟ್ಟಾರೆ 1800 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಪಿಎಸ್‌ಎಲ್‌ವಿ ಇಂಟಿಗ್ರೇಷನ್ ಫೆಸಿಲಿಟಿ (ಪಿಐಎಫ್), ಪಿಎಸ್‌ಎಲ್‌ವಿ ಉಡಾವಣೆಗಳ ಆವರ್ತನವನ್ನು ವರ್ಷಕ್ಕೆ 6 ರಿಂದ 15 ಕ್ಕೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಅತ್ಯಾಧುನಿಕ ಸೌಲಭ್ಯವು ಖಾಸಗಿ ಬಾಹ್ಯಾಕಾಶ ಕಂಪನಿಗಳು ವಿನ್ಯಾಸಗೊಳಿಸಿದ ಎಸ್ ಎಸ್ ಎಲ್ ವಿ ಮತ್ತು ಇತರ ಸಣ್ಣ ಉಡಾವಣಾ ವಾಹನಗಳ ಉಡಾವಣೆಗಳನ್ನು ಸಹ ಪೂರೈಸುತ್ತದೆ.

ಐಪಿಆರ್ ಸಿ ಮಹೇಂದ್ರಗಿರಿಯಲ್ಲಿನ ಹೊಸ 'ಸೆಮಿ-ಕ್ರಯೋಜೆನಿಕ್ಸ್ ಇಂಟಿಗ್ರೇಟೆಡ್ ಎಂಜಿನ್ ಮತ್ತು ಸ್ಟೇಜ್ ಟೆಸ್ಟ್ ಸೌಲಭ್ಯ' ಅರೆ-ಕ್ರಯೋಜೆನಿಕ್ ಎಂಜಿನ್ ಮತ್ತು ಹಂತಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ, ಇದು ಪ್ರಸ್ತುತ ಉಡಾವಣಾ ವಾಹನಗಳ ಪೇಲೋಡ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಸೌಲಭ್ಯವು 200 ಟನ್‌ಗಳಷ್ಟು ಒತ್ತಡದ ಎಂಜಿನ್‌ಗಳನ್ನು ಪರೀಕ್ಷಿಸಲು ದ್ರವ ಆಮ್ಲಜನಕ ಮತ್ತು ಸೀಮೆಎಣ್ಣೆ ಪೂರೈಕೆ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದೆ.

ವಾಯುಮಂಡಲದಲ್ಲಿ ಹಾರಾಟದ ಸಮಯದಲ್ಲಿ ರಾಕೆಟ್‌ಗಳು ಮತ್ತು ವಿಮಾನಗಳ ಗುಣಲಕ್ಷಣಗಳಿಗಾಗಿ ವಾಯುಬಲ ವೈಜ್ಞಾನಿಕ ಪರೀಕ್ಷೆಗೆ ವಿಂಡ್ ಟನಲ್ಸ್ ಅತ್ಯಗತ್ಯ. ವಿಎಸ್ ಎಸ್ ಸಿ ಯಲ್ಲಿ "ಟ್ರೈಸಾನಿಕ್ ವಿಂಡ್ ಟನಲ್" ಉದ್ಘಾಟನೆಗೊಳ್ಳುತ್ತಿರುವುದು ಒಂದು ಸಂಕೀರ್ಣವಾದ ತಾಂತ್ರಿಕ ವ್ಯವಸ್ಥೆಯಾಗಿದ್ದು, ಅದು ನಮ್ಮ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿ ಅಗತ್ಯತೆಗಳನ್ನು ಪೂರೈಸುತ್ತದೆ.

ಪ್ರಧಾನಿ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ಗಗನಯಾನ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಗಗನಯಾತ್ರಿ-ನಿಯೋಜಿತರಿಗೆ 'ಗಗನಯಾತ್ರಿ ರೆಕ್ಕೆಗಳನ್ನು' ನೀಡಿದರು. ಗಗನಯಾನ ಮಿಷನ್ ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾಗಿದ್ದು, ವಿವಿಧ ಇಸ್ರೋ ಕೇಂದ್ರಗಳಲ್ಲಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.

***



(Release ID: 2009693) Visitor Counter : 57