ಪ್ರಧಾನ ಮಂತ್ರಿಯವರ ಕಛೇರಿ

​​​​​​​ರೋಜ್‌ಗಾರ್ ಮೇಳದ ಅಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳ ವಿತರಣೆ ವೇಳೆ ಪ್ರಧಾನಮಂತ್ರಿಯವರ ಭಾಷಣ

Posted On: 12 FEB 2024 12:14PM by PIB Bengaluru

ನನ್ನ ಪ್ರೀತಿಯ ಯುವ ಸ್ನೇಹಿತರೇ,

ಇಂದು, 1 ಲಕ್ಷಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ನೀಡಲಾಗಿದೆ. ನಿಮ್ಮ ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಈ ಸಾಧನೆಗೆ ಕಾರಣವಾಗಿದೆ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರದಲ್ಲಿ ಯುವಕರಿಗೆ ಉದ್ಯೋಗ ಒದಗಿಸುವ ಉಪಕ್ರಮವು ವೇಗವಾಗಿ ಪ್ರಗತಿಯಲ್ಲಿದೆ. ಈ ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಉದ್ಯೋಗ ಜಾಹೀರಾತು, ನೇಮಕಾತಿ ಪತ್ರಗಳನ್ನು ನೀಡುವ ವೇಳೆ ಲಂಚ ನೀಡಲೇಬೇಕಾಗಿತ್ತು. ನಾವು ಈಗ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇವೆ, ದಕ್ಷತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ. ನೇಮಕಾತಿ ಪ್ರಕ್ರಿಯೆಯು ನಿಗದಿತ ಸಮಯಾವಧಿಗೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಸರ್ಕಾರವು ಬದ್ದವಾಗಿದೆ. ಪ್ರತಿಯೊಬ್ಬ ಯುವಕರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಮಾನ ಅವಕಾಶವನ್ನು ನೀಡುತ್ತದೆ. ಈಗ ಯುವಕರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ತಮಗಾಗಿ ಒಂದು ಪುಟ್ಟ ಗೂಡು ಕಟ್ಟಬಹುದು ಎಂಬ ವಿಶ್ವಾಸ ಹೊಂದಿದ್ದಾರೆ. 2014 ರಿಂದ, ಯುವಕರನ್ನು ಕೇಂದ್ರ ಸರ್ಕಾರದೊಂದಿಗೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಯತ್ನಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಬಿಜೆಪಿ ಸರ್ಕಾರ ತನ್ನ ಹತ್ತು ವರ್ಷಗಳಲ್ಲಿ ಸುಮಾರು ಒಂದೂವರೆ ಪಟ್ಟು ಹೆಚ್ಚು ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ. ಇಂದು, ನಾವು ದೆಹಲಿಯಲ್ಲಿ ಸಮಗ್ರ ತರಬೇತಿ ಸಂಕೀರ್ಣಕ್ಕೆ ಅಡಿಪಾಯ ಹಾಕಿದ್ದೇವೆ, ಇದು ನಮ್ಮ ಸಾಮರ್ಥ್ಯ-ವರ್ಧನೆಯ ಪ್ರಯತ್ನಗಳನ್ನು ಹೆಚ್ಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಸರ್ಕಾರದ ಪ್ರಯತ್ನಗಳು ಶ್ಲಾಘನೀಯ. ದೇಶದಲ್ಲಿ ಯುವಕರಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ. ಈ ವಲಯಗಳಲ್ಲಿ ಸರ್ಕಾರವು ಪ್ರಾರಂಭಿಸಿದ ವಿವಿಧ ಅಭಿಯಾನಗಳು ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಹಲವಾರು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಇತ್ತೀಚಿನ ಬಜೆಟ್‌ನಲ್ಲಿ ನೋಡಿದಂತೆ, ಒಂದು ಕೋಟಿ ಕುಟುಂಬಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆಯನ್ನು ಪರಿಚಯಿಸಲಾಗಿದೆ. ತಮ್ಮ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವವರು ಎರಡು ಪ್ರಯೋಜನಗಳನ್ನು ಪಡೆಯುತ್ತಾರೆ: ಶೂನ್ಯ ವಿದ್ಯುತ್ ಬಿಲ್ಲುಗಳು ಮತ್ತು ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದ ಹೆಚ್ಚುವರಿ ಆದಾಯ. ಈ ಬೃಹತ್ ಮೇಲ್ಛಾವಣಿ ಸೌರ ಯೋಜನೆಯು ವಿವಿಧ ಕ್ಷೇತ್ರಗಳಲ್ಲಿ ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸೋಲಾರ್ ಪ್ಯಾನಲ್ ಅಳವಡಿಕೆಯಿಂದ ಹಿಡಿದು ಬ್ಯಾಟರಿ ಸಂಬಂಧಿತ ವ್ಯವಹಾರಗಳು ಮತ್ತು ವೈರಿಂಗ್ ಕೆಲಸದವರೆಗೆ, ಈ ಯೋಜನೆಯು ಬಹು ಹಂತಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ನನ್ನ ಯುವ ಗೆಳೆಯರೇ,

ಇಂದು, ಭಾರತ ಜಾಗತಿಕವಾಗಿ ಮೂರನೇ-ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಸುಮಾರು 1.25 ಲಕ್ಷ ತಲುಪಿದೆ. ಈ ಸ್ಟಾಟ್೯ಅಪ್‌ಗಳ ಗಮನಾರ್ಹ ಭಾಗವು ಜಿಲ್ಲಾ ಕೇಂದ್ರಗಳಲ್ಲದೆ ಸಣ್ಣ-ಶ್ರೇಣಿಯ 2 ಮತ್ತು ಶ್ರೇಣಿ 3 ನಗರಗಳಲ್ಲಿ ಹೊರಹೊಮ್ಮುತ್ತಿದೆ ಎಂಬುದನ್ನು ಗಮನಿಸುವುದು ಹರ್ಷದಾಯಕವಾಗಿದೆ. ಈ ಸ್ಟಾರ್ಟಪ್‌ಗಳು ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಇದಲ್ಲದೆ, ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯಿತಿಗಳನ್ನು ವಿಸ್ತರಿಸುವ ಇತ್ತೀಚಿನ ಬಜೆಟ್ ಘೋಷಣೆಯು ನಮ್ಮ ಯುವಕರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಹೆಚ್ಚುವರಿಯಾಗಿ, 1 ಲಕ್ಷ ಕೋಟಿ ಮೌಲ್ಯದ ಹೊಸ ಸಂಶೋಧನೆ ಮತ್ತು ನಾವೀನ್ಯತೆ ನಿಧಿಯನ್ನು ಸ್ಥಾಪಿಸುವ ಯೋಜನೆಗಳನ್ನು ಒಳಗೊಂಡಿದೆ.

ಸ್ನೇಹಿತರೇ,

ಭಾರತೀಯ ರೈಲ್ವೇಸ್ ಸಹ ನೇಮಕಾತಿಗಾಗಿ ಈ ರೋಜ್‌ಗಾರ್‌ ಮೇಳದಲ್ಲಿ ಭಾಗವಹಿಸುತ್ತಿದೆ. ವಿವಿಧ ಪ್ರಯಾಣದ ಆಯ್ಕೆಗಳ ಲಭ್ಯತೆಯ ಹೊರತಾಗಿಯೂ, ಭಾರತೀಯ ರೈಲ್ವೆಯು ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಅನೇಕ ಕುಟುಂಬಗಳಿಗೆ ಆದ್ಯತೆಯ ಆಯ್ಕೆಯಾಗಿ ಉಳಿದಿದೆ. ಭಾರತೀಯ ರೈಲ್ವೇಯು ಪ್ರಸ್ತುತ ಬೃಹತ್ ಪರಿವರ್ತನೆಗೆ ಒಳಗಾಗುತ್ತಿದೆ ಮತ್ತು ಈ ದಶಕದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ನವೀಕರಿಸಲಾಗುವುದು. 2014 ರ ಮೊದಲು ರೈಲ್ವೆಯ ಸ್ಥಿತಿಯನ್ನು ಪ್ರತಿಬಿಂಬಿಸುವಾಗ, ಹಿಂದಿನ ಸರ್ಕಾರಗಳು ವಿದ್ಯುದ್ದೀಕರಣ, ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯಗಳಂತಹ ನಿರ್ಣಾಯಕ ಅಂಶಗಳನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ. ಹಿಂದಿನ ಸರ್ಕಾರಗಳು ಸಾಮಾನ್ಯ ಭಾರತೀಯರ ಸಮಸ್ಯೆಗಳ ಬಗ್ಗೆ ಅಸಡ್ಡೆ ಹೊಂದಿದ್ದವು. ಆದಾಗ್ಯೂ, 2014 ರಿಂದ, ನಮ್ಮ ರೈಲ್ವೇ ಮೂಲಸೌಕರ್ಯವನ್ನು ಆಧುನೀಕರಿಸುವ ಮತ್ತು ನವೀಕರಿಸುವ ಮೂಲಕ ಸಂಪೂರ್ಣ ರೈಲು ಪ್ರಯಾಣದ ಅನುಭವವನ್ನು ಮರುಶೋಧಿಸಲು ನಾವು ಸಮಗ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ಇತ್ತೀಚಿನ ಬಜೆಟ್ ಘೋಷಣೆಯು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೋಲುವ 40,000 ಆಧುನಿಕ ಬೋಗಿಗಳನ್ನು ಸಾಮಾನ್ಯ ರೈಲುಗಳಲ್ಲಿ ಪರಿಚಯಿಸುವ ಯೋಜನೆಗಳನ್ನು ಒಳಗೊಂಡಿದೆ, ಇದು ಪ್ರಯಾಣಿಕರ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ.

ಸ್ನೇಹಿತರೇ,

ಸುಧಾರಿತ ಸಂಪರ್ಕವು ಪ್ರಯಾಣವನ್ನು ಸುಗಮಗೊಳಿಸುತ್ತದೆ, ಹೊಸ ಮಾರುಕಟ್ಟೆಗಳನ್ನು ರಚಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಹೊಸ ವ್ಯವಹಾರಗಳ ಹೊರಹೊಮ್ಮುವಿಕೆಯನ್ನು ಉತ್ತೇಜಿಸುತ್ತದೆ, ಹೀಗೆ ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅಂದರೆ ಉತ್ತಮ ಸಂಪರ್ಕವು ದೇಶದ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಗುತ್ತಿದೆ. ಇತ್ತೀಚಿನ ಬಜೆಟ್ ಮೂಲಸೌಕರ್ಯ ಅಭಿವೃದ್ಧಿಗೆ ರೂ 11 ಲಕ್ಷ ಕೋಟಿಗಳ ಗುರಿಯ ಹೂಡಿಕೆಯನ್ನು ವಿವರಿಸುತ್ತದೆ, ಇದು ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಮೆಟ್ರೋ ವ್ಯವಸ್ಥೆಗಳು ಮತ್ತು ಇತರೆ ಯೋಜನೆಗಳನ್ನು ವೇಗಗೊಳಿಸುತ್ತದೆ, ಪರಿಣಾಮವಾಗಿ ಉದ್ಯೋಗಕ್ಕೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ.

ಸ್ನೇಹಿತರೇ,

ಇಂದು, ನೇಮಕಾತಿ ಪತ್ರಗಳನ್ನು ಪಡೆದ ಗಮನಾರ್ಹ ಸಂಖ್ಯೆಯ ಯುವಕರು ಅರೆಸೇನಾ ಪಡೆಗೆ ಸೇರಲು ಸಜ್ಜಾಗಿದ್ದಾರೆ, ಅವರಲ್ಲಿ ಪ್ರಮುಖ ಆಕಾಂಕ್ಷೆಯನ್ನು ಈಡೇರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಅರೆಸೇನಾ ಪಡೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ಪರಿಚಯಿಸಲಾಗಿದೆ. ಈ ವರ್ಷದ ಜನವರಿಯಿಂದ ಜಾರಿಗೆ ಬಂದ ಒಂದು ಮಹತ್ವದ ಬದಲಾವಣೆಯೆಂದರೆ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಭಾಷೆಗಳಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸುವ ನಿರ್ಧಾರವಾಗಿದೆ. ಅಭ್ಯರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಸಮಾನ ಅವಕಾಶಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಗಡಿಯಲ್ಲಿರುವ ಜಿಲ್ಲೆಗಳು ಮತ್ತು ಸೂಕ್ಷ್ಮ ಜಿಲ್ಲೆಗಳ ಕೋಟಾವನ್ನು ಹೆಚ್ಚಿಸಲಾಗಿದೆ.

ಸ್ನೇಹಿತರೇ,

ಅಭಿವೃದ್ಧಿ ಹೊಂದಿದ ಭಾರತದೆಡೆಗಿನ ಪಯಣದಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂದು ನಮ್ಮೊಂದಿಗೆ ಸೇರುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಈ ಪ್ರಯಾಣಕ್ಕೆ ಹೊಸ ಚೈತನ್ಯ ಮತ್ತು ವೇಗವನ್ನು ತುಂಬುತ್ತಾರೆ. ನೀವು ಯಾವ ಇಲಾಖೆಗೆ ನಿಯೋಜಿಸಿದ್ದರೂ, ಪ್ರತಿ ದಿನವೂ ರಾಷ್ಟ್ರ ನಿರ್ಮಾಣಕ್ಕಾಗಿ ಮೀಸಲಿಡಬೇಕು ಎಂಬುದನ್ನು ನೆನಪಿಡಿ. ಎಲ್ಲಾ ಸರ್ಕಾರಿ ನೌಕರರ ಸಾಮರ್ಥ್ಯ ನಿರ್ಮಾಣಕ್ಕಾಗಿ, ಕೇಂದ್ರ ಸರ್ಕಾರವು ಕರ್ಮಯೋಗಿ ಭಾರತ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ, ವಿವಿಧ ವಿಷಯಗಳ ಕುರಿತು 800 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ನೀಡುತ್ತದೆ. ಈಗಾಗಲೇ 30 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿರುವುದರಿಂದ, ನಿಮ್ಮ ಕೌಶಲ್ಯಗಳನ್ನು ವಿಸ್ತರಿಸಲು ಈ ಪೋರ್ಟಲ್ ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ನಿಮ್ಮೆಲ್ಲರನ್ನು ಪ್ರೋತ್ಸಾಹಿಸುತ್ತೇನೆ. ಮತ್ತೊಮ್ಮೆ, ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನಿಮ್ಮ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ನೀವು ದೇಶದ ಪ್ರಗತಿಗೆ ಕೊಡುಗೆ ನೀಡುವ ಮೂಲಕ ನಿಮಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಮುನ್ನಡೆಯಿರಿ. ನಿಮ್ಮ ಕುಟುಂಬದ ಸದಸ್ಯರಿಗೂ ನನ್ನ ಶುಭಾಶಯಗಳು. ತುಂಬ ಧನ್ಯವಾದಗಳು.

ಹಕ್ಕು ಸ್ವಾಮಿ: ಇದು ಪ್ರಧಾನಿ ಭಾಷಣದ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****



(Release ID: 2005854) Visitor Counter : 65