ಪ್ರಧಾನ ಮಂತ್ರಿಯವರ ಕಛೇರಿ

ವಿಕಸಿತ ಭಾರತ-ವಿಕಸಿತ ಗೋವಾ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 06 FEB 2024 4:57PM by PIB Bengaluru

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಗೋವಾ ರಾಜ್ಯಪಾಲರಾದ ಪಿ.ಎಸ್. ಶ್ರೀಧರನ್ ಪಿಳ್ಳೈ ಜಿ, ಯುವ ಮುಖ್ಯಮಂತ್ರಿ, ಪ್ರಮೋದ್ ಸಾವಂತ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಇತರೆ ಗಣ್ಯರೆ ಮತ್ತು ಗೋವಾದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ. ಎಲ್ಲಾ ಗೋವಾ ವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು! ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇರಲಿ!

ಸ್ನೇಹಿತರೆ,

ಗೋವಾ ತನ್ನ ಸುಂದರವಾದ ಕಡಲತೀರಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರಿಗೆ ಇದು ನೆಚ್ಚಿನ ರಜಾ ತಾಣವಾಗಿದೆ. ಯಾವುದೇ ಋತುವಿನಲ್ಲಿ ಇಲ್ಲಿ ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಚೈತನ್ಯವನ್ನು ಅನುಭವಿಸಬಹುದು. ಇದರೊಂದಿಗೆ ಗೋವಾಗೆ ಮತ್ತೊಂದು ಗುರುತಿದೆ. ಗೋವಾದ ಈ ನೆಲವು ಅನೇಕ ಮಹಾನ್ ಸಂತರು, ಪ್ರಸಿದ್ಧ ಕಲಾವಿದರು ಮತ್ತು ವಿದ್ವಾಂಸರಿಗೆ ಜನ್ಮ ನೀಡಿದೆ. ಇಂದು ನಾನು ಅವರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಸಂತ ಸೋಹಿರೋಬನಾಥ್ ಅಂಬಿಯೆ, ದೈತ್ಯ ನಾಟಕಕಾರ ಕೃಷ್ಣ ಭಟ್ ಬಂಧ್ಕರ್, ಸುರಶ್ರೀ ಕೇಸರಬಾಯಿ ಕೇರ್ಕರ್, ಆಚಾರ್ಯ ಧರ್ಮಾನಂದ್ ಕೋಸಾಂಬಿ, ಮತ್ತು ರಘುನಾಥ್ ಮಾಶೇಲ್ಕರ್ ಅವರಂತಹ ವ್ಯಕ್ತಿಗಳು ಗೋವಾದ ಗುರುತನ್ನು ಶ್ರೀಮಂತಗೊಳಿಸಿದ್ದಾರೆ. ಭಾರತರತ್ನ ಲತಾ ಮಂಗೇಶ್ಕರ್ ಜಿ ಅವರು ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಮಂಗೇಶಿ ದೇವಸ್ಥಾನದೊಂದಿಗೆ ಆಳವಾದ ಸಂಪರ್ಕ ಹೊಂದಿದ್ದರು. ಇಂದು ಲತಾ ದೀದಿಯವರ ಪುಣ್ಯತಿಥಿ. ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಇಲ್ಲಿ ಮಡಗಾಂವ್‌ನ ದಾಮೋದರ್ ಸಾಲ್‌ನಲ್ಲಿ ಸ್ವಾಮಿ ವಿವೇಕಾನಂದರು ಹೊಸ ಸ್ಫೂರ್ತಿ ಪಡೆದಿದ್ದರು. ಗೋವಾದ ಜನರು ದೇಶಕ್ಕಾಗಿ ಏನೇ ಆದರೂ ಮಾಡಲು ಬಿಡುವುದಿಲ್ಲ ಎಂಬುದಕ್ಕೆ ಇಲ್ಲಿನ ಐತಿಹಾಸಿಕ ಲೋಹಿಯಾ ಮೈದಾನ ಸಾಕ್ಷಿಯಾಗಿದೆ. ಕನ್ಕೊಲಿಮ್‌ನಲ್ಲಿರುವ ಮುಖ್ಯಸ್ಥರ ಸ್ಮಾರಕವು ಗೋವಾದ ಶೌರ್ಯದ ಸಂಕೇತವಾಗಿದೆ.

ಸ್ನೇಹಿತರೆ,

ಈ ವರ್ಷ ಒಂದು ಮಹತ್ವದ ಘಟನೆ ನಡೆಯಲಿದೆ. ಈ ವರ್ಷ, "ಗೋಯೆಂಚೋ ಸೈಬ್" ಎಂದು ಕರೆಯಲ್ಪಡುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಅವಶೇಷಗಳ ಪ್ರದರ್ಶನವಿದೆ. ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಈ ಪ್ರದರ್ಶನವು ನಮಗೆ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ನೀಡುತ್ತದೆ. ಮನ್ ಕಿ ಬಾತ್‌ನಲ್ಲಿ ಜಾರ್ಜಿಯಾದ ಸೇಂಟ್ ಕ್ವೀನ್ ಕೇತೆವನ್‌ನ ಬಗ್ಗೆ ಪ್ರಸ್ತಾಪಿಸಿದ್ದು ನನಗೆ ನೆನಪಿದೆ. ನಮ್ಮ ವಿದೇಶಾಂಗ ಸಚಿವರು ಸಂತ ರಾಣಿ ಕೇತೆವನ್ ಅವರ ಪವಿತ್ರ ಅವಶೇಷಗಳನ್ನು ಜಾರ್ಜಿಯಾಕ್ಕೆ ತೆಗೆದುಕೊಂಡು ಹೋದಾಗ, ಇಡೀ ದೇಶವೇ ಬೀದಿಗೆ ಬಂದಂತೆ ತೋರುತ್ತಿತ್ತು. ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ಗೋವಾದಲ್ಲಿ ಕ್ರೈಸ್ತ ಸಮುದಾಯ ಮತ್ತು ಇತರ ಧರ್ಮದ ಜನರು ಒಟ್ಟಿಗೆ ವಾಸಿಸುವ ರೀತಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ಗೆ ಅದ್ಭುತ ಉದಾಹರಣೆಯಾಗಿದೆ.

ಸ್ನೇಹಿತರೆ,

ಗೋವಾಕ್ಕೆ 1,300 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವು ಸ್ವಲ್ಪ ಸಮಯದ ಹಿಂದೆ ನಡೆಯಿತು. ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಸೇರಿದ ಈ ಯೋಜನೆಗಳು ಗೋವಾದ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತವೆ. ಇಂದು ಇಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಕ್ಯಾಂಪಸ್‌ಗಳ ಉದ್ಘಾಟನೆ ನಡೆದಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲ ಹೆಚ್ಚಿಸುತ್ತದೆ. ಸಮಗ್ರ ತ್ಯಾಜ್ಯ ನಿರ್ವಹಣೆ ಸೌಲಭ್ಯದ ಉದ್ಘಾಟನೆಯು ಗೋವಾವನ್ನು ಸ್ವಚ್ಛವಾಗಿಡಲು ಸಹಕಾರಿಯಾಗಲಿದೆ. ಇಂದು 1,900ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗಕ್ಕಾಗಿ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಈ ಕಲ್ಯಾಣ ಉಪಕ್ರಮಗಳಿಗಾಗಿ ನಾನು ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ.

ನನ್ನ ಕುಟುಂಬದ ಸದಸ್ಯರೆ,

ಭೌಗೋಳಿಕ ವಿಸ್ತೀರ್ಣ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಗೋವಾ ಚಿಕ್ಕದಾಗಿರಬಹುದು, ಆದರೆ ಸಾಮಾಜಿಕ ವೈವಿಧ್ಯತೆಯ ದೃಷ್ಟಿಯಿಂದ ನಮ್ಮ ಗೋವಾ ವಿಶಾಲವಾಗಿದೆ. ವಿವಿಧ ಸಮುದಾಯಗಳಿಗೆ ಸೇರಿದ ಜನರು, ವಿವಿಧ ಧರ್ಮಗಳಿಗೆ ಬದ್ಧರಾಗಿ, ಇಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ, ತಲೆಮಾರುಗಳಿಂದ ಹರಡಿದ್ದಾರೆ. ಹಾಗಾಗಿ ಗೋವಾದ ಜನತೆ ಪದೇಪದೆ ಬಿಜೆಪಿ ಸರಕಾರವನ್ನು ಆಯ್ಕೆ ಮಾಡಿದಾಗ ಇಡೀ ದೇಶಕ್ಕೆ ಸಂದೇಶ ರವಾನೆಯಾಗುತ್ತದೆ. ಬಿಜೆಪಿಯ ಮಂತ್ರ “ಸಬ್ಕಾ ಸಾಥ್, ಸಬ್ಕಾ ವಿಕಾಸ್”. ದೇಶದ ಕೆಲವು ಪಕ್ಷಗಳು ಯಾವಾಗಲೂ ಜನರಲ್ಲಿ ಭಯ ಮತ್ತು ಸುಳ್ಳುಗಳನ್ನು ಹರಡುವುದರಲ್ಲಿ ತೊಡಗಿವೆ. ಆದರೆ ಗೋವಾ ಇಂತಹ ಪಕ್ಷಗಳಿಗೆ ಮತ್ತೆ ಮತ್ತೆ ತಕ್ಕ ಉತ್ತರ ನೀಡಿದೆ.

ಸ್ನೇಹಿತರೆ,

ಇಷ್ಟು ವರ್ಷಗಳ ಕಾಲ ಗೋವಾದ ಆಡಳಿತಾರೂಢ ಬಿಜೆಪಿ ಸರ್ಕಾರ ಉತ್ತಮ ಆಡಳಿತದ ಮಾದರಿಯನ್ನು ಅಭಿವೃದ್ಧಿಪಡಿಸಿದೆ. "ಸ್ವಯಂಪೂರ್ಣ ಗೋವಾ" ಅಭಿಯಾನಕ್ಕೆ ಗೋವಾ ವೇಗ ನೀಡುತ್ತಿರುವ ರೀತಿ ನಿಜಕ್ಕೂ ಅಭೂತಪೂರ್ವ. ಇದರ ಫಲವಾಗಿ ಇಂದು ಗೋವಾದ ಜನರು ದೇಶದ ಅತ್ಯಂತ ಸಂತುಷ್ಟ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಡಬಲ್ ಎಂಜಿನ್ ಸರ್ಕಾರದಿಂದಾಗಿ, ಗೋವಾದ ಅಭಿವೃದ್ಧಿಯು ವೇಗವಾಗಿ ಪ್ರಗತಿಯಲ್ಲಿದೆ. 100ರಷ್ಟು ಕುಟುಂಬಗಳು ಪೈಪ್‌ಲೈನ್‌ನಲ್ಲಿ ನೀರು ಪಡೆಯುವ ರಾಜ್ಯವಾಗಿದೆ ಗೋವಾ. 100ರಷ್ಟು ಮನೆಗಳು ವಿದ್ಯುತ್ ಸಂಪರ್ಕ ಹೊಂದಿರುವ ರಾಜ್ಯ ಗೋವಾವಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಂಪರ್ಕ ಶೇಕಡ 100ರಷ್ಟು ತಲುಪಿದ ರಾಜ್ಯ ಗೋವಾ. ಗೋವಾ ಸಂಪೂರ್ಣ ಸೀಮೆಎಣ್ಣೆ ಮುಕ್ತ ರಾಜ್ಯವಾಗಿದೆ. ಗೋವಾ ಸಂಪೂರ್ಣ ಬಯಲು ಶೌಚಮುಕ್ತ ರಾಜ್ಯವಾಗಿದೆ. ಕೇಂದ್ರ ಸರ್ಕಾರದ ಹಲವು ಪ್ರಮುಖ ಯೋಜನೆಗಳಲ್ಲಿ ಗೋವಾ ಶೇಕಡ 100ರಷ್ಟು ಪರಿಪೂರ್ಣತೆ ಸಾಧಿಸಿದೆ.

ಮತ್ತು ನಮಗೆಲ್ಲರಿಗೂ ತಿಳಿದಿದೆ, ಪರಿಪೂರ್ಣತೆ ಸಂಭವಿಸಿದಾಗ, ತಾರತಮ್ಯ ಕೊನೆಗೊಳ್ಳುತ್ತದೆ. ಪರಿಪೂರ್ಣತೆ ಮತ್ತು ಸಂತೃಪ್ತ ಮಟ್ಟ ತಲುಪಿದಾಗ, ಪ್ರತಿಯೊಬ್ಬ ಫಲಾನುಭವಿಯು ಸಂಪೂರ್ಣ ಪ್ರಯೋಜನ ಪಡೆಯುತ್ತಾನೆ. ಪರಿಪೂರ್ಣತೆ ಸಂಭವಿಸಿದಾಗ, ಜನರು ತಮ್ಮ ಹಕ್ಕುಗಳನ್ನು ಪಡೆಯಲು ಲಂಚ ನೀಡಬೇಕಾಗಿಲ್ಲ. ಅದಕ್ಕೇ ನಾನು ಪದೇಪದೆ ಹೇಳುವುದು ಪರಿಪೂರ್ಣತೆಯೇ ನಿಜವಾದ ಜಾತ್ಯತೀತತೆ.  ಶುದ್ಧತ್ವ ಅಥವಾ ಪರಿಪೂರ್ಣತೆ ನಿಜವಾದ ಸಾಮಾಜಿಕ ನ್ಯಾಯ. ಈ ಸತ್ವವು ಗೋವಾಕ್ಕೆ ಮತ್ತು ದೇಶಕ್ಕೆ ಮೋದಿ ಗ್ಯಾರಂಟಿ. ಶುದ್ಧತ್ವದ ಅದೇ ಗುರಿಗಾಗಿ, ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಲ್ಲಿ ಪ್ರಾರಂಭಿಸಲಾಯಿತು. ಗೋವಾದಲ್ಲಿಯೂ 30,000ಕ್ಕೂ ಹೆಚ್ಚು ಜನರು ಈ ಅಭಿಯಾನದಲ್ಲಿ ಭಾಗಿಯಾಗಿದ್ದರು. ಇನ್ನೂ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದವರು ಕೂಡ ಮೋದಿ ಅವರ ಖಾತರಿಯ ವಾಹನದಿಂದ ಹೆಚ್ಚು ಪ್ರಯೋಜನ ಪಡೆದಿದ್ದಾರೆ.

ಸಹೋದರ ಸಹೋದರಿಯರೆ,

ಕೆಲವು ದಿನಗಳ ಹಿಂದೆ, ಅನಾವರಣಗೊಂಡ ಬಜೆಟ್ ಕೂಡ ನಮ್ಮ ಬದ್ಧತೆಯನ್ನು ಬಲಪಡಿಸಿದೆ. ಬಡವರಲ್ಲಿ ಬಡವರಿಗೆ ಸೇವೆ ಸಲ್ಲಿಸುತ್ತದೆ. 4 ಕೋಟಿ ಬಡ ಕುಟುಂಬಗಳಿಗೆ ಪಕ್ಕಾ ಮನೆ ನೀಡುವ ಗುರಿಯನ್ನು ನಾವು ಈಗಾಗಲೇ ಈಡೇರಿಸಿದ್ದೇವೆ ಎಂಬುದು ನಿಮಗೆ ತಿಳಿದಿದೆ. ಇನ್ನು 2 ಕೋಟಿ ಕುಟುಂಬಗಳಿಗೆ ಮನೆ ನೀಡುತ್ತೇವೆ ಎಂಬುದು ನಮ್ಮ ಭರವಸೆ. ನಾನು ಸಹ ನನ್ನ ಸಹವರ್ತಿ ಗೋವಾದವರಿಗೆ ಹೇಳುತ್ತೇನೆ, ನಿಮ್ಮ ಹಳ್ಳಿಯಲ್ಲಿ, ನಿಮ್ಮ ಪ್ರದೇಶದಲ್ಲಿ ಯಾವುದೇ ಕುಟುಂಬವು ಇನ್ನೂ ಗುಡಿಸಲಿನಲ್ಲಿ ವಾಸಿಸುತ್ತಿದ್ದರೆ, ಅವರಿಗೆ ಹೇಳಿ, ಮೋದಿ ಜೀ ಬಂದರು ಮತ್ತು ಮೋದಿ ಜೀ ಅವರಿಂದ ನಿಮ್ಮ ಮನೆಯೂ ಪಕ್ಕಾ ಆಗುವುದು ಗ್ಯಾರಂಟಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವಿಸ್ತರಣೆಯನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿದೆ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಯೋಜನೆಯನ್ನೂ ನಾವು ವಿಸ್ತರಿಸಿದ್ದೇವೆ. ಇದೀಗ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ ಉಚಿತ ಚಿಕಿತ್ಸೆ ದೊರೆಯುವ ಭರವಸೆ ನೀಡಲಾಗಿದೆ.

ಸ್ನೇಹಿತರೆ,

ಈ ವರ್ಷದ ಬಜೆಟ್‌ನಲ್ಲಿ ನಮ್ಮ ಮೀನುಗಾರ ಮಿತ್ರರಿಗೂ ಹೆಚ್ಚಿನ ಗಮನ ನೀಡಲಾಗಿದೆ. ಮತ್ಸ್ಯ ಸಂಪದ ಯೋಜನೆಯಡಿ ಸಹಾಯವನ್ನು ಈಗ ಮತ್ತಷ್ಟು ಹೆಚ್ಚಿಸಲಾಗುವುದು. ಇದರಿಂದ ಮೀನುಗಾರರಿಗೆ ಹೆಚ್ಚಿನ ಸೌಲಭ್ಯ ಮತ್ತು ಸಂಪನ್ಮೂಲ ದೊರೆಯಲಿದೆ. ಇದು ಸಮುದ್ರಾಹಾರ ರಫ್ತಿನಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ. ಜತೆಗೆ, ಮೀನುಗಾರರು ಹೆಚ್ಚಿನ ಹಣ ಗಳಿಸುತ್ತಾರೆ. ಇಂತಹ ಪ್ರಯತ್ನಗಳು ಮೀನುಗಾರಿಕಾ ಕ್ಷೇತ್ರದಲ್ಲಿ ಲಕ್ಷಗಟ್ಟಲೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಸ್ನೇಹಿತರೆ,

ಮೀನುಗಾರರ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಮಾಡಿರುವ ಕೆಲಸ ಅಪ್ರತಿಮವಾಗಿದೆ. ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಇಲಾಖೆ ರಚಿಸಿದವರು ನಾವೇ. ಮೀನುಗಾರರಿಗೆ ರೈತ ಕ್ರೆಡಿಟ್ ಕಾರ್ಡ್ ಸೌಲಭ್ಯ ಕಲ್ಪಿಸಿದವರು ನಾವೇ. ನಮ್ಮ ಸರ್ಕಾರ ಮೀನುಗಾರರ ವಿಮೆ ಮೊತ್ತವನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಅವರ ದೋಣಿಗಳನ್ನು ಆಧುನೀಕರಿಸಲು ನಮ್ಮ ಸರ್ಕಾರವು ಸಹಾಯಧನ ನೀಡುತ್ತಿದೆ.

ಸಹೋದರ ಸಹೋದರಿಯರೆ,

ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ಪ್ರಮುಖ ಯೋಜನೆಗಳನ್ನು ನಡೆಸುತ್ತಿದೆ. ಮಾತ್ರವಲ್ಲದೆ, ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ. ದೇಶದಲ್ಲಿ ರಸ್ತೆಗಳು, ರೈಲ್ವೆಗಳು ಮತ್ತು ವಿಮಾನ ನಿಲ್ದಾಣಗಳು ಎಷ್ಟು ವೇಗವಾಗಿ ವಿಸ್ತರಿಸುತ್ತಿವೆ ಎಂಬುದನ್ನು ನೀವೇ ನೋಡಬಹುದು. ಈ ವರ್ಷದ ಬಜೆಟ್ ಈ ಉದ್ದೇಶಕ್ಕಾಗಿ 11 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ, ಆದರೆ ಕೇವಲ 10 ವರ್ಷಗಳ ಹಿಂದೆ ಮೂಲಸೌಕರ್ಯಕ್ಕೆ 2 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆ ವೆಚ್ಚ ಮಾಡಲಾಗಿದೆ. ಎಲ್ಲೆಲ್ಲಿ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆಯೋ ಅಲ್ಲೆಲ್ಲಾ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಪ್ರತಿಯೊಬ್ಬರಿಗೂ ಆದಾಯ ಹೆಚ್ಚುತ್ತಿದೆ.

ಸ್ನೇಹಿತರೆ,

ನಮ್ಮ ಸರ್ಕಾರವು ಗೋವಾದಲ್ಲಿ ಸಂಪರ್ಕ ಸುಧಾರಿಸಲು ಮಾತ್ರ ಕೆಲಸ ಮಾಡುತ್ತಿಲ್ಲ,  ಆದರೆ ರಾಜ್ಯವನ್ನು ಸರಕು ಸಾಗಣೆಯ ಗಮ್ಯತಾಣವಾಗಿ ಮಾಡಲು ಶ್ರಮಿಸುತ್ತಿದೆ. ಗೋವಾದಲ್ಲಿ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಯು ನಿರಂತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ಸುಗಮಗೊಳಿಸಿದೆ. ಕಳೆದ ವರ್ಷ, ದೇಶದ 2ನೇ ಅತಿ ಉದ್ದದ ಕೇಬಲ್ ಸೇತುವೆಯಾದ ನ್ಯೂ ಜುವಾರಿ ಸೇತುವೆಯ ಉದ್ಘಾಟನೆ ನಡೆಯಿತು. ಹೊಸ ರಸ್ತೆಗಳು, ಸೇತುವೆಗಳು, ರೈಲ್ವೆ ಮಾರ್ಗಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಗೋವಾದಲ್ಲಿ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯು ಈ ಪ್ರದೇಶದ ಅಭಿವೃದ್ಧಿಯ ವೇಗ ಹೆಚ್ಚಿಸಲಿದೆ.

ಸ್ನೇಹಿತರೆ,

ಭಾರತವು ಯಾವಾಗಲೂ ಪ್ರಕೃತಿ, ಸಂಸ್ಕೃತಿ ಮತ್ತು ಪರಂಪರೆಯ ವಿಷಯದಲ್ಲಿ ಶ್ರೀಮಂತವಾಗಿದೆ. ಪ್ರಪಂಚದಾದ್ಯಂತ ವಿವಿಧ ರೀತಿಯ ಪ್ರವಾಸೋದ್ಯಮಕ್ಕಾಗಿ ಜನರು ವಿವಿಧ ದೇಶಗಳಿಗೆ ಪ್ರಯಾಣಿಸುತ್ತಾರೆ. ಒಂದು ವೀಸಾದಲ್ಲಿ ಭಾರತದಲ್ಲಿ ಎಲ್ಲಾ ರೀತಿಯ ಪ್ರವಾಸೋದ್ಯಮ ಲಭ್ಯವಿದೆ. ಆದರೆ 2014ರ ಮೊದಲು ಅಧಿಕಾರದಲ್ಲಿದ್ದ ಸರಕಾರ ಇದೆಲ್ಲದರ ಬಗ್ಗೆ ಗಮನ ಹರಿಸಿರಲಿಲ್ಲ. ಹಿಂದಿನ ಸರ್ಕಾರಗಳು ಪ್ರವಾಸಿ ತಾಣಗಳ ಅಭಿವೃದ್ಧಿ, ನಮ್ಮ ಕರಾವಳಿ ಪ್ರದೇಶಗಳು ಅಥವಾ ದ್ವೀಪಗಳ ಅಭಿವೃದ್ಧಿಗೆ ದೂರದೃಷ್ಟಿ ಹೊಂದಿರಲಿಲ್ಲ. ಉತ್ತಮ ರಸ್ತೆಗಳು, ರೈಲುಗಳು ಮತ್ತು ವಿಮಾನ ನಿಲ್ದಾಣಗಳ ಕೊರತೆಯಿಂದಾಗಿ ಅನೇಕ ಪ್ರವಾಸಿ ತಾಣಗಳು ಜನರಿಗೆ ತಿಳಿದಿಲ್ಲ. ಕಳೆದ 10 ವರ್ಷಗಳಲ್ಲಿ ಈ ಎಲ್ಲಾ ನ್ಯೂನತೆಗಳನ್ನು ನೀಗಿಸುವ ಪ್ರಯತ್ನ ಮಾಡಿದ್ದೇವೆ. ಗೋವಾದ ಡಬಲ್ ಎಂಜಿನ್ ಸರ್ಕಾರವು ಇಲ್ಲಿ ಪ್ರವಾಸೋದ್ಯಮ ಅವಕಾಶಗಳನ್ನು ವಿಸ್ತರಿಸುತ್ತಿದೆ. ಗೋವಾದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸುವುದು ನಮ್ಮ ಪ್ರಯತ್ನವಾಗಿದೆ. ಇದರಿಂದ ಆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ನೇರವಾಗಿ ಅನುಕೂಲವಾಗಲಿದೆ. ಪ್ರವಾಸಿಗರು ಗೋವಾದ ಹಳ್ಳಿಗಳನ್ನು ತಲುಪಿದಾಗ ಅಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ. ಪಣಜಿಯಿಂದ ರೀಸ್ ಮಾಗೋಸ್‌ಗೆ ಸಂಪರ್ಕ ಕಲ್ಪಿಸುವ ರೋಪ್‌ವೇ ನಿರ್ಮಾಣದ ನಂತರ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಈ ಯೋಜನೆಯೊಂದಿಗೆ ಆಧುನಿಕ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಲಾಗುವುದು. ಫುಡ್ ಕೋರ್ಟ್‌ಗಳು, ರೆಸ್ಟೋರೆಂಟ್‌ಗಳು, ವೇಟಿಂಗ್ ರೂಮ್‌ಗಳಂತಹ ಸೌಲಭ್ಯಗಳು ಗೋವಾದಲ್ಲಿ ಹೊಸ ಆಕರ್ಷಣೆ ಕೇಂದ್ರವಾಗಲಿವೆ.

ಸ್ನೇಹಿತರೆ,

ನಮ್ಮ ಸರ್ಕಾರ ಈಗ ಗೋವಾವನ್ನು ಹೊಸ ರೀತಿಯ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಪಡಿಸುತ್ತಿದೆ. ಇದನ್ನು ಕಾನ್ಫರೆನ್ಸ್ ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ. ಇವತ್ತು ಬೆಳಗ್ಗೆಯಷ್ಟೇ, ನಾನು ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮವೊಂದರಲ್ಲಿದ್ದೆ. ಗೋವಾ ಜಿ-20ರ ಹಲವಾರು ಪ್ರಮುಖ ಸಭೆಗಳನ್ನು ಸಹ ಆಯೋಜಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಗೋವಾ ಪ್ರಮುಖ ರಾಜತಾಂತ್ರಿಕ ಸಭೆಗಳನ್ನು ಸಹ ಆಯೋಜಿಸಿದೆ. ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್, ವಿಶ್ವ ಬೀಚ್ ವಾಲಿಬಾಲ್ ಪ್ರವಾಸ, ಫಿಫಾ ಅಂಡರ್-17 ಮಹಿಳಾ ಫುಟ್‌ಬಾಲ್ ವಿಶ್ವಕಪ್, 37ನೇ ರಾಷ್ಟ್ರೀಯ ಕ್ರೀಡಾಕೂಟ... ಈ ಎಲ್ಲಾ ಕಾರ್ಯಕ್ರಮಗಳನ್ನು ಗೋವಾದಲ್ಲೇ ಆಯೋಜಿಸಲಾಗಿತ್ತು. ಇಂತಹ ಪ್ರತಿಯೊಂದು ಘಟನೆಯಿಂದ ಗೋವಾದ ಹೆಸರು ಮತ್ತು ಗುರುತು ಇಡೀ ಜಗತ್ತನ್ನು ತಲುಪುತ್ತಿದೆ. ಡಬಲ್ ಇಂಜಿನ್ ಸರ್ಕಾರವು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಗೋವಾವನ್ನು ಪ್ರಮುಖ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದೆ. ನಿಮಗೆ ತಿಳಿದಿರುವಂತೆ, ಅಂತಹ ಪ್ರತಿಯೊಂದು ಘಟನೆಯೊಂದಿಗೆ, ಗೋವಾದ ಜನರು ಉದ್ಯೋಗವನ್ನು ಪಡೆಯುತ್ತಾರೆ ಮತ್ತು ಅವರ ಆದಾಯವು ಹೆಚ್ಚಾಗುತ್ತದೆ.

ಸ್ನೇಹಿತರೆ,

ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಗೋವಾದಲ್ಲಿ ಅಭಿವೃದ್ಧಿಪಡಿಸಲಾದ ಆಧುನಿಕ ಕ್ರೀಡಾ ಮೂಲಸೌಕರ್ಯವು ಇಲ್ಲಿನ ಕ್ರೀಡಾಪಟುಗಳು ಮತ್ತು ಸ್ಪರ್ಧಿಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಗೋವಾದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಗೋವಾದ ಕ್ರೀಡಾಪಟುಗಳನ್ನು ಸಹ ಗೌರವಿಸಲಾಯಿತು ಎಂದು ನನಗೆ ತಿಳಿಸಲಾಗಿದೆ. ಹಾಗಾಗಿ, ಗೋವಾದ ಪ್ರತಿಯೊಬ್ಬ ಯುವ ಕ್ರೀಡಾಪಟುವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ಮತ್ತು ಸ್ನೇಹಿತರೆ,

ನಾವು ಕ್ರೀಡೆಯ ಬಗ್ಗೆ ಮಾತನಾಡುವಾಗ, ಗೋವಾದಲ್ಲಿ ಫುಟ್‌ಬಾಲ್ ಯಾರು ಮರೆಯುತ್ತಾರೆ? ಇಂದಿಗೂ ಗೋವಾದ ಫುಟ್‌ಬಾಲ್ ಆಟಗಾರರು, ಇಲ್ಲಿನ ಫುಟ್ ಬಾಲ್ ಕ್ಲಬ್ ಗಳು ದೇಶ, ವಿಶ್ವದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿದ್ದಾರೆ. ಫುಟ್‌ಬಾಲ್‌ನಂತಹ ಕ್ರೀಡೆಗಳಿಗೆ ಅಮೂಲ್ಯ ಕೊಡುಗೆಗಳಿಗಾಗಿ, ನಮ್ಮ ಸರ್ಕಾರವು 2  ವರ್ಷಗಳ ಹಿಂದೆ ಬ್ರಹ್ಮಾನಂದ ಸಂಖ್ವಾಲ್ಕರ್ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿತು. ಇಂದು ನಮ್ಮ ಸರ್ಕಾರವು ಖೇಲೋ ಇಂಡಿಯಾದಂತಹ ಉಪಕ್ರಮಗಳ ಮೂಲಕ ಗೋವಾದಲ್ಲಿ ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಉತ್ತೇಜಿಸುತ್ತಿದೆ.

ಸ್ನೇಹಿತರೆ,

ಕ್ರೀಡೆ ಮತ್ತು ಪ್ರವಾಸೋದ್ಯಮದ ಜತೆಗೆ, ಗೋವಾ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಮತ್ತೊಂದು ಗುರುತು ಗಳಿಸಿದೆ. ನಮ್ಮ ಸರ್ಕಾರವು ಗೋವಾವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಉತ್ತೇಜಿಸುತ್ತಿದೆ. ಇಲ್ಲಿರುವ ಹಲವಾರು ಸಂಸ್ಥೆಗಳು ದೇಶದಾದ್ಯಂತದ ವಿದ್ಯಾರ್ಥಿಗಳಿಗೆ ಕನಸಿನ ಸಂಸ್ಥೆಗಳಾಗಿವೆ. ಇಂದು ಪ್ರಾರಂಭವಾದ ಹೊಸ ಸಂಸ್ಥೆಗಳು ಗೋವಾದ ಯುವಕರನ್ನು ದೇಶದಲ್ಲಿ ಹೊರಹೊಮ್ಮುವ ಹೊಸ ಅವಕಾಶಗಳಿಗೆ ಸಿದ್ಧಗೊಳಿಸುತ್ತವೆ. ನಮ್ಮ ಸರ್ಕಾರವೂ ಬಜೆಟ್‌ನಲ್ಲಿ ಯುವಕರಿಗಾಗಿ ಮಹತ್ವದ ಘೋಷಣೆ ಮಾಡಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಮೊತ್ತದ ನಿಧಿ ಸ್ಥಾಪಿಸಲಾಗುವುದು. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆ ಉತ್ತೇಜಿಸುತ್ತದೆ, ಉದ್ಯಮ ಮತ್ತು ನಮ್ಮ ಯುವಕರಿಗೆ ಪ್ರಯೋಜನ ನೀಡುತ್ತದೆ.

ನನ್ನ ಸಹೋದರ ಸಹೋದರಿಯರೆ,

ಗೋವಾದ ಕ್ಷಿಪ್ರ ಅಭಿವೃದ್ಧಿಗೆ ‘ಸಬ್ಕಾ ಪ್ರಯಾಸ್’ (ಎಲ್ಲರ ಪ್ರಯತ್ನ) ಅಗತ್ಯ. ಗೋವಾದ ಎಲ್ಲಾ ಕುಟುಂಬಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮೋದಿ ಅವರ ಗ್ಯಾರಂಟಿಯಿಂದ ಗೋವಾದ ಪ್ರತಿಯೊಂದು ಕುಟುಂಬದ ಜೀವನವೂ ಸುಧಾರಿಸುತ್ತದೆ ಎಂದು ನಾನು ನಂಬುತ್ತೇನೆ. ಈ ಅಭಿವೃದ್ಧಿ ಕಾರ್ಯಗಳಿಗಾಗಿ ಮತ್ತೊಮ್ಮೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ತುಂಬು ಧನ್ಯವಾದಗಳು!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

 ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

 

***

 



(Release ID: 2003560) Visitor Counter : 73