ಪ್ರಧಾನ ಮಂತ್ರಿಯವರ ಕಛೇರಿ

​​​​​​​ದಿಲ್ಲಿಯ ಕೆಂಪು ಕೋಟೆಯಲ್ಲಿ ಪರಾಕ್ರಮ ದಿವಸ್ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ರಾಷ್ಟ್ರದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುವ  ಭಾರತ್ ಪರ್ವ್ ಗೆ ಚಾಲನೆ

"ಪರಾಕ್ರಮ ದಿವಸದಂದು, ನೇತಾಜಿ ಅವರ ಆದರ್ಶಗಳನ್ನು ಈಡೇರಿಸುವ ಮತ್ತು ಅವರ ಕನಸಿನ ಭಾರತವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ"

"ನೇತಾಜಿ ಸುಭಾಷ್ ಅವರು ದೇಶದ ಸಮರ್ಥ ಅಮೃತ್ ಪೀಳಿಗೆಗೆ ಬಹಳ ದೊಡ್ಡ ಮಾದರಿಯಾಗಿದ್ದಾರೆ"

"ನೇತಾಜಿ ಅವರ ಜೀವನವು ಕಠಿಣ ಪರಿಶ್ರಮ ಮಾತ್ರವಲ್ಲ, ಶೌರ್ಯದ ಪರಾಕಾಷ್ಠೆಯ ಶಿಖರವಾಗಿದೆ"

"ನೇತಾಜಿ ಅವರು ವಿಶ್ವದ ಮುಂದೆ ಪ್ರಜಾಪ್ರಭುತ್ವದ ಮಾತೆ ಎಂಬ ಭಾರತದ ಹಕ್ಕನ್ನು ಬಲವಾಗಿ ಪ್ರದರ್ಶಿಸಿ ಪ್ರತಿಪಾದಿಸಿದರು”

"ಯುವಕರನ್ನು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸಲು ನೇತಾಜಿ ಕೆಲಸ ಮಾಡಿದರು"

"ಇಂದು, ಭಾರತದ ಯುವ ಜನತೆ ತಮ್ಮ ಸಂಸ್ಕೃತಿ, ಅವರ ಮೌಲ್ಯಗಳು, ಅವರ ಭಾರತೀಯತೆಯ ಬಗ್ಗೆ ಹೆಮ್ಮೆ ಪಡುತ್ತಿರುವ ರೀತಿ ಅಭೂತಪೂರ್ವವಾಗಿದೆ"

"ನಮ್ಮ ಯುವಜನತೆ  ಮತ್ತು ಮಹಿಳಾ ಶಕ್ತಿ ಮಾತ್ರ ದೇಶದ ರಾಜಕೀಯವನ್ನು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಕೆಡುಕುಗಳಿಂದ ಮುಕ್ತಗೊಳಿಸಬಹುದು"

"ಭಾರತವನ್ನು ಆರ್ಥಿಕವಾಗಿ ಸಮೃದ್ಧ, ಸಾಂಸ್ಕೃತಿಕವಾಗಿ ಬಲಿಷ್ಠವಾದ ಮತ್ತು ವ್ಯೂಹಾತ್ಮಕವಾಗಿ ಸಮರ್ಥವಾದ ದೇಶವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ"

" ಅಮೃತ್ ಕಾಲದ ಪ್ರತಿ ಕ್ಷಣವನ್ನೂ ನಾವು ರಾಷ್ಟ್ರೀಯ ಹಿತಾಸಕ್ತಿಗಾಗಿ ಬಳಸಬೇಕು"

Posted On: 23 JAN 2024 9:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯ ಕೆಂಪು ಕೋಟೆಯಲ್ಲಿ ನಡೆದ ಪರಾಕ್ರಮ ದಿವಸ್ ಆಚರಣೆಯಲ್ಲಿ ಪಾಲ್ಗೊಂಡರು. ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ರಾಷ್ಟ್ರದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುವ ಭಾರತ್ ಪರ್ವ್ ಗೆ ಅವರು ಚಾಲನೆ ನೀಡಿದರು. ನೇತಾಜಿ ಕುರಿತ ಛಾಯಾಚಿತ್ರಗಳು, ವರ್ಣಚಿತ್ರಗಳು, ಪುಸ್ತಕಗಳು ಮತ್ತು ಶಿಲ್ಪಗಳನ್ನು ಒಳಗೊಂಡ ರಾಷ್ಟ್ರೀಯ ಪತ್ರಾಗಾರದ ತಂತ್ರಜ್ಞಾನ ಆಧಾರಿತ ಸಂವಾದಾತ್ಮಕ ಪ್ರದರ್ಶನವನ್ನು ಪ್ರಧಾನಿ ವೀಕ್ಷಿಸಿದರು ಮತ್ತು ರಾಷ್ಟ್ರೀಯ ನಾಟಕ ಶಾಲೆ ಪ್ರಸ್ತುತಪಡಿಸಿದ ನೇತಾಜಿ ಅವರ ಜೀವನವನ್ನು ಕುರಿತ ಪ್ರೊಜೆಕ್ಷನ್ ಮ್ಯಾಪಿಂಗ್ ನೊಂದಿಗೆ ಸಂಯೋಜಿಸಿ ಮಾಡಿದ ನಾಟಕಕ್ಕೆ ಸಾಕ್ಷಿಯಾದರು. ಐಎನ್ಎ ನಿವೃತ್ತ ಲೆಫ್ಟಿನೆಂಟ್ ಆರ್.ಮಾಧವನ್ ಅವರನ್ನು ಪ್ರಧಾನ ಮಂತ್ರಿ ಸನ್ಮಾನಿಸಿದರು. ಮಾಧವನ್ ಅವರು ಬದುಕಿರುವ ಏಕೈಕ ಐ.ಎನ್.ಎ. ಹಿರಿಯರಾಗಿದ್ದಾರೆ.  ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಗಣ್ಯರ ಕೊಡುಗೆಯನ್ನು ಗೌರವಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, 2021 ರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಂದು ಪರಾಕ್ರಮ್ ದಿವಸ್ ಆಚರಿಸಲಾಗುತ್ತಿದೆ. 

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಜಯಂತಿಯಂದು ಆಚರಿಸಲಾಗುವ ಪರಾಕ್ರಮ ದಿವಸ್ ಸಂದರ್ಭದಲ್ಲಿ ಶುಭ ಹಾರೈಸಿದರು. ಒಂದು ಕಾಲದಲ್ಲಿ ಆಜಾದ್ ಹಿಂದ್ ಫೌಜ್ ಶೌರ್ಯ ಮತ್ತು ವೀರತ್ವಕ್ಕೆ  ಸಾಕ್ಷಿಯಾಗಿದ್ದ ಕೆಂಪು ಕೋಟೆ ಮತ್ತೊಮ್ಮೆ ಹೊಸ ಶಕ್ತಿಯಿಂದ ತುಂಬಿದೆ ಎಂದು ಅವರು ಹೇಳಿದರು. ಆಜಾದಿ ಕಾ ಅಮೃತ್ ಕಾಲ್ ಆರಂಭಿಕ ಅವಧಿಯನ್ನು ಸಂಕಲ್ಪದ ಮೂಲಕ ಸಾಧನೆಯ ಆಚರಣೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಿನ್ನೆಯ ಘಟನೆಯನ್ನು ಇಡೀ ಜಗತ್ತು ಭಾರತದಲ್ಲಿ ಸಾಂಸ್ಕೃತಿಕ ಪ್ರಜ್ಞೆ ಜಾಗೃತಿಯಾಗುತ್ತಿರುವುದಕ್ಕೆ  ಸಾಕ್ಷಿಯಾದ ಬಗೆಯನ್ನು ನೆನಪಿಸಿಕೊಂಡರಲ್ಲದೆ   ಕ್ಷಣವನ್ನು ಅಭೂತಪೂರ್ವ ಎಂದು ಬಣ್ಣಿಸಿದರು. ನೇತಾಜಿ ಸುಭಾಷ್ ಅವರ ಜನ್ಮ ದಿನದ ಆಚರಣೆಗಳು ಇಂದು ನಡೆಯುತ್ತಿರುವ ಸಂದರ್ಭದಲ್ಲಿ "ಪ್ರಾಣ ಪ್ರತಿಷ್ಠೆಯ  ಶಕ್ತಿ ಮತ್ತು ನಂಬಿಕೆಯನ್ನು ಇಡೀ ಮನುಕುಲ ಮತ್ತು ಜಗತ್ತು ಅನುಭವಿಸಿದೆ" ಎಂದು ಪ್ರಧಾನಿ ಹೇಳಿದರು. ಪರಾಕ್ರಮ ದಿವಸ್ ಘೋಷಣೆಯ ನಂತರ, ಜನವರಿ 23 ರಿಂದ ಜನವರಿ 30 ರಂದು ಮಹಾತ್ಮ ಗಾಂಧಿಯವರ ಪುಣ್ಯತಿಥಿಯವರೆಗೆ ಗಣರಾಜ್ಯೋತ್ಸವ ಆಚರಣೆಗಳನ್ನು ಅದು ವಿಸ್ತರಿಸುತ್ತದೆ ಮತ್ತು ಈಗ ಜನವರಿ 22 ರ ಶುಭ ಹಬ್ಬ ಕೂಡಾ  ಪ್ರಜಾಪ್ರಭುತ್ವದ ಹಬ್ಬದ ಒಂದು ಭಾಗವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಜನವರಿಯ ಕೊನೆಯ ಕೆಲವು ದಿನಗಳು ಭಾರತದ ನಂಬಿಕೆ, ಸಾಂಸ್ಕೃತಿಕ ಪ್ರಜ್ಞೆ, ಪ್ರಜಾಪ್ರಭುತ್ವ ಮತ್ತು ದೇಶಭಕ್ತಿಗೆ ಸ್ಫೂರ್ತಿದಾಯಕವಾಗಿವೆ" ಎಂದು ಪ್ರಧಾನಿ ತಮ್ಮ ಶುಭಾಶಯಗಳನ್ನು ಹೇಳುತ್ತಾ ನುಡಿದರು.   

ಕಾರ್ಯಕ್ರಮದ ಸಂಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಪ್ರಧಾನಿ ಶ್ಲಾಘಿಸಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ ಯುವಜನರೊಂದಿಗೆ ಸಂವಾದ ನಡೆಸಿದರು. "ನಾನು ಭಾರತದ ಯುವ ಪೀಳಿಗೆಯನ್ನು ಭೇಟಿಯಾದಾಗಲೆಲ್ಲಾ, ವಿಕ್ಷಿತ್ ಭಾರತದ ಕನಸಿನಲ್ಲಿ ನನ್ನ ವಿಶ್ವಾಸವು ಮತ್ತಷ್ಟು ಬಲಗೊಳ್ಳುತ್ತದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ದೇಶದ ಅಮೃತ್ ಪೀಳಿಗೆಗೆ ದೊಡ್ಡ ಮಾದರಿಯಾಗಿದ್ದಾರೆ" ಎಂದೂ  ಪ್ರಧಾನ ಮಂತ್ರಿ  ಮೋದಿ ಹೇಳಿದರು.   

ಪ್ರಧಾನಮಂತ್ರಿಯವರು ತಾವು ಇಂದು ಚಾಲನೆ ನೀಡಿದ ಭಾರತ್ ಪರ್ವ್ ಬಗ್ಗೆಯೂ ಪ್ರಸ್ತಾಪಿಸಿದರು ಮತ್ತು ಮುಂದಿನ 9 ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಹಾಗು ಪ್ರದರ್ಶನಗಳ ಬಗ್ಗೆ ಮಾಹಿತಿ ನೀಡಿದರು. "ಭಾರತ್ ಪರ್ವ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳ ಪ್ರತಿಬಿಂಬವಾಗಿದೆ. ಇದು 'ವೋಕಲ್ ಫಾರ್ ಲೋಕಲ್' ಅನ್ನು ಅಳವಡಿಸಿಕೊಳ್ಳುವ, ಪ್ರವಾಸೋದ್ಯಮವನ್ನು ಉತ್ತೇಜಿಸುವ, ವೈವಿಧ್ಯತೆಯನ್ನು ಗೌರವಿಸುವ ಮತ್ತು 'ಏಕ್ ಭಾರತ್ ಶ್ರೇಷ್ಠ ಭಾರತ್' ಗೆ ಹೊಸ ಎತ್ತರವನ್ನು ನೀಡುವ 'ಪರ್ವ್' ಆಗಿದೆ ಎಂದು ಅವರು ಹೇಳಿದರು. 

ಇದೇ  ಕೆಂಪು ಕೋಟೆಯಲ್ಲಿ ಐಎನ್ಎಯ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, "ನೇತಾಜಿ ಅವರ ಜೀವನವು ಕಠಿಣ ಪರಿಶ್ರಮ ಮತ್ತು ಶೌರ್ಯದ ಪರಾಕಾಷ್ಠೆಯಾಗಿತ್ತು" ಎಂದು ಹೇಳಿದರು.  ನೇತಾಜಿ ಅವರ ತ್ಯಾಗವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅವರು ಬ್ರಿಟಿಷರನ್ನು ವಿರೋಧಿಸಿದ್ದಲ್ಲದೆ, ಭಾರತೀಯ ನಾಗರಿಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಜನರಿಗೆ ಸೂಕ್ತ ಉತ್ತರ ನೀಡಿದ್ದರು ಎಂದರು. ಭಾರತವು ಪ್ರಜಾಪ್ರಭುತ್ವದ ಮಾತೆ  ಎಂದು  ನೇತಾಜಿ ಅವರು ಭಾರತದ ಚಿತ್ರಣವನ್ನು ವಿಶ್ವದ ಮುಂದೆ ಪ್ರದರ್ಶಿಸಿದರು ಎಂದೂ  ಶ್ರೀ ಮೋದಿ ಮುಂದುವರಿದು ನುಡಿದರು.   

ಗುಲಾಮಗಿರಿಯ ಮನಸ್ಥಿತಿಯ ವಿರುದ್ಧ ನೇತಾಜಿ ಅವರ ಹೋರಾಟವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇಂದಿನ ಭಾರತದ ಯುವ ಪೀಳಿಗೆಯಲ್ಲಿ ವ್ಯಾಪಿಸಿರುವ ಹೊಸ ಪ್ರಜ್ಞೆ ಮತ್ತು ಹೆಮ್ಮೆಯ ಬಗ್ಗೆ ನೇತಾಜಿಯವರೇ ಹೆಮ್ಮೆ ಪಡುತ್ತಿದ್ದರು ಎಂದು ಹೇಳಿದರು. ಈ ಹೊಸ ಅರಿವು ವಿಕ್ಷಿತ ಭಾರತವನ್ನು ರಚಿಸುವ ಶಕ್ತಿಯಾಗಿದೆ. ಇಂದಿನ ಯುವಕರು ಪಂಚಪ್ರಾಣವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬರುತ್ತಿದ್ದಾರೆ ಎಂದೂ  ಅವರು ಹೇಳಿದರು.  "ನೇತಾಜಿ ಅವರ ಜೀವನ ಮತ್ತು ಅವರ ಕೊಡುಗೆಗಳು ಭಾರತದ ಯುವಕರಿಗೆ ಸ್ಫೂರ್ತಿಯಾಗಿದೆ" ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರಲ್ಲದೆ, ಈ ಸ್ಫೂರ್ತಿ/ಪ್ರೇರಣೆ ಸದಾ  ಮುಂದಕ್ಕೆ ಸಾಗುವ ಆಶಾವಾದವನ್ನು ವ್ಯಕ್ತಪಡಿಸಿದರು. ಈ ನಂಬಿಕೆಯಲ್ಲಿ, ಕಳೆದ 10 ವರ್ಷಗಳಲ್ಲಿ ಸರ್ಕಾರ ಕೈಗೊಂಡ  ಪ್ರಯತ್ನಗಳನ್ನು ಎತ್ತಿ ತೋರಿಸಿದ ಪ್ರಧಾನಿ, ಕರ್ತವ್ಯ ಪಥದಲ್ಲಿ ನೇತಾಜಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಅರ್ಹ ಗೌರವವನ್ನು ನೀಡಿರುವುದನ್ನೂ ಉಲ್ಲೇಖಿಸಿದರು, ಇದು ಪ್ರತಿಯೊಬ್ಬ ನಾಗರಿಕನಿಗೂ ಅವರ ಕರ್ತವ್ಯ ಸಮರ್ಪಣೆಯನ್ನು ನೆನಪಿಸುತ್ತದೆ ಎಂದ ಅವರು  ಆಜಾದ್ ಹಿಂದ್ ಫೌಜ್ ಮೊದಲು ತ್ರಿವರ್ಣ ಧ್ವಜವನ್ನು ಹಾರಿಸಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮರುನಾಮಕರಣ, ನೇತಾಜಿಗೆ ಸಮರ್ಪಿತವಾದ ಸ್ಮಾರಕದ ಅಭಿವೃದ್ಧಿ, ಕೆಂಪು ಕೋಟೆಯಲ್ಲಿ ನೇತಾಜಿ ಮತ್ತು ಆಜಾದ್ ಹಿಂದ್ ಫೌಜ್ ಗೆ  ಮೀಸಲಾದ ವಸ್ತುಸಂಗ್ರಹಾಲಯ ಮತ್ತು ನೇತಾಜಿ ಹೆಸರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ಪ್ರಶಸ್ತಿಯನ್ನು ಘೋಷಿಸುವುದನ್ನು ಅವರು ಉಲ್ಲೇಖಿಸಿದರು. "ಸ್ವತಂತ್ರ ಭಾರತದ ಇತರ ಯಾವುದೇ ಸರ್ಕಾರಗಳಿಗಿಂತ ಪ್ರಸ್ತುತ ಸರ್ಕಾರವು ಆಜಾದ್ ಹಿಂದ್ ಫೌಜ್ ಗೆ ಸಮರ್ಪಿತವಾದ ಹೆಚ್ಚಿನ ಕೆಲಸಗಳನ್ನು ಮಾಡಿದೆ ಮತ್ತು ಇದು ನಮಗೆ ಆಶೀರ್ವಾದವೆಂದು ನಾನು ಪರಿಗಣಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು

ಭಾರತದ ಸವಾಲುಗಳ ಬಗ್ಗೆ ನೇತಾಜಿ ಅವರ ಆಳವಾದ ತಿಳುವಳಿಕೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಜಾಪ್ರಭುತ್ವವಾದಿ ಸಮಾಜದ ಅಡಿಪಾಯದ ಮೇಲೆ ಭಾರತದ ರಾಜಕೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವ ಬಗ್ಗೆ ಅವರ ನಂಬಿಕೆಯನ್ನು ಸ್ಮರಿಸಿದರು. ಆದಾಗ್ಯೂ, ಸ್ವಾತಂತ್ರ್ಯದ ನಂತರ ನೇತಾಜಿ ಅವರ ಸಿದ್ಧಾಂತದ ಮೇಲಿನ ದಾಳಿಯ ಬಗ್ಗೆ ವಿಷಾದಿಸಿದ ಪ್ರಧಾನಿ, ಸ್ವಜನಪಕ್ಷಪಾತ ಮತ್ತು ಪಕ್ಷಪಾತದ ಕೆಡುಕುಗಳು/ದುಷ್ಕೃತ್ಯಗಳು ಭಾರತೀಯ ಪ್ರಜಾಪ್ರಭುತ್ವಕ್ಕೆ ನುಸುಳುತ್ತಿವೆ, ಇದು ಅಂತಿಮವಾಗಿ ಭಾರತದ ನಿಧಾನಗತಿಯ ಅಭಿವೃದ್ಧಿಗೆ ಕಾರಣವಾಯಿತು ಎಂದು ಹೇಳಿದರು. ಸಮಾಜದ ಒಂದು ದೊಡ್ಡ ವರ್ಗವು ಅವರ ಉನ್ನತಿಗಾಗಿ ಮೀಸಲಾಗಿರುವ ಅವಕಾಶಗಳು ಮತ್ತು ಮೂಲಭೂತ ಅವಶ್ಯಕತೆಗಳಿಂದ ವಂಚಿತವಾಗಿದೆ ಎಂಬುದರತ್ತ ಗಮನಸೆಳೆದ ಶ್ರೀ ಮೋದಿ, ರಾಜಕೀಯ, ಆರ್ಥಿಕ ಮತ್ತು ಅಭಿವೃದ್ಧಿ ನೀತಿಗಳಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳ ಪ್ರಭಾವವನ್ನು ಎತ್ತಿ ತೋರಿಸಿದರು ಮತ್ತು ಇದರಿಂದ  ದೇಶದ ಮಹಿಳೆಯರು ಮತ್ತು ಯುವಜನರು ಭಾರಿ ನಷ್ಟವನ್ನು ಅನುಭವಿಸಬೇಕಾಯಿತು ಎಂದು ಹೇಳಿದರು. ಆ ಕಾಲದ ಮಹಿಳೆಯರು ಮತ್ತು ಯುವಕರು ಎದುರಿಸಿದ ತೊಂದರೆಗಳನ್ನು ಸ್ಮರಿಸಿದ ಅವರು, 2014 ರಲ್ಲಿ ಪ್ರಸ್ತುತ ಸರ್ಕಾರ ಆಯ್ಕೆಯಾದ ನಂತರ ಜಾರಿಗೆ ತರಲಾದ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಸ್ಫೂರ್ತಿಯನ್ನು ಒತ್ತಿ ಹೇಳಿದರು. "ಕಳೆದ 10 ವರ್ಷಗಳ ಫಲಿತಾಂಶಗಳನ್ನು ಎಲ್ಲರೂ ನೋಡಬಹುದು" ಎಂದು ಶ್ರೀ ಮೋದಿ ಹೇಳಿದರು, ಬಡ ಕುಟುಂಬಗಳ ಗಂಡು ಮಕ್ಕಳು  ಮತ್ತು ಹೆಣ್ಣು ಮಕ್ಕಳಿಗೆ  ಇಂದು ಲಭ್ಯವಾಗುತ್ತಿರುವ  ವಿಪುಲ ಅವಕಾಶಗಳ ಬಗ್ಗೆಯೂ  ವಿಶ್ವಾಸ ವ್ಯಕ್ತಪಡಿಸಿದರು. ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ನಾರಿ ಶಕ್ತಿ ವಂದನ್ ಅಧಿನಿಯಮ್ ಅಂಗೀಕಾರವನ್ನು ಉಲ್ಲೇಖಿಸಿದ ಪ್ರಧಾನಿ, ಸರ್ಕಾರವು ತಮ್ಮ ಸಣ್ಣ ಅಗತ್ಯಗಳ ಬಗ್ಗೆ ಸಂವೇದನಾಶೀಲವಾಗಿದೆ ಎಂಬ ಬಗ್ಗೆ ಭಾರತದ ಮಹಿಳೆಯರಲ್ಲಿ ಮೂಡಿರುವ ವಿಶ್ವಾಸದ ಬಗ್ಗೆಯೂ ಗಮನ ಸೆಳೆದರು. ಅಮೃತ್ ಕಾಲ್ ಶೌರ್ಯವನ್ನು ಪ್ರದರ್ಶಿಸಲು ಮತ್ತು ದೇಶದ ರಾಜಕೀಯ ಭವಿಷ್ಯವನ್ನು ಮರುರೂಪಿಸಲು ಅವಕಾಶವನ್ನು ತನ್ನೊಂದಿಗೆ ತಂದಿದೆ ಎಂಬುದನ್ನು  ಅವರು ಪುನರುಚ್ಚರಿಸಿದರು. "ವಿಕ್ಷಿತ್ ಭಾರತದ ರಾಜಕೀಯವನ್ನು ಬದಲಾಯಿಸುವಲ್ಲಿ ಯುವ ಶಕ್ತಿ ಮತ್ತು ನಾರಿ ಶಕ್ತಿ ದೊಡ್ಡ ಪಾತ್ರ ವಹಿಸಬಹುದು ಮತ್ತು ನಿಮ್ಮ ಶಕ್ತಿಯು ದೇಶದ ರಾಜಕೀಯವನ್ನು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ದುಷ್ಕೃತ್ಯಗಳಿಂದ ಮುಕ್ತಗೊಳಿಸಬಹುದು" ಎಂದೂ ಪ್ರಧಾನಿ ಹೇಳಿದರು. ರಾಜಕೀಯದಲ್ಲಿ ಈ ಕೆಡುಕುಗಳನ್ನು/ಕುಕೃತ್ಯಗಳನ್ನು ಕೊನೆಗಾಣಿಸಲು ಧೈರ್ಯ ತೋರಿಸಬೇಕಾದ ಅಗತ್ಯವನ್ನು ಪ್ರಧಾನ ಮಂತ್ರಿ ಅವರು ಒತ್ತಿ ಹೇಳಿದರು.

ರಾಮ ಕಾಜ್ ನಿಂದ ಹಿಡಿದು ರಾಷ್ಟ್ರ ಕಾಜ್ ವರೆಗೆ –ರಾಮನ  ಕೆಲಸದಿಂದ ರಾಷ್ಟ್ರದ ಕೆಲಸದವರೆಗೆ ರಾಷ್ಟ್ರ ನಿರ್ಮಾಣಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಸಮಯ ಇದು ಎಂದು ಪ್ರಾಣ ಪ್ರತಿಷ್ಠೆಯಲ್ಲಿ ತಾವು ನೀಡಿದ ಉಪದೇಶವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಭಾರತದಿಂದ ಜಗತ್ತು ಎದುರು ನೋಡುತ್ತಿರುವ  ನಿರೀಕ್ಷೆಗಳನ್ನು ಒತ್ತಿ ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಭಾರತವನ್ನು ಆರ್ಥಿಕವಾಗಿ ಸಮೃದ್ಧ, ಸಾಂಸ್ಕೃತಿಕವಾಗಿ ಬಲಿಷ್ಠವಾದ ಮತ್ತು ಕಾರ್ಯತಂತ್ರದ ಸಾಮರ್ಥ್ಯದ ರಾಷ್ಟ್ರವನ್ನಾಗಿ  ಮಾಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ, ಮುಂಬರುವ 5 ವರ್ಷಗಳಲ್ಲಿ ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವುದು ಮುಖ್ಯವಾಗಿದೆ. ಮತ್ತು ಗುರಿ ನಮ್ಮ ವ್ಯಾಪ್ತಿಯಿಂದ ದೂರವಿಲ್ಲ. ಕಳೆದ 10 ವರ್ಷಗಳಲ್ಲಿ, ಇಡೀ ದೇಶದ ಪ್ರಯತ್ನಗಳು ಮತ್ತು ಪ್ರೋತ್ಸಾಹದಿಂದಾಗಿ, ಸುಮಾರು 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ. ಈ ಹಿಂದೆ ಸಾಧಿಸಬಹುದೆಂದು ಕಲ್ಪಿಸಲೂ ಸಾಧ್ಯವಿಲ್ಲದಂತಹ  ಗುರಿಗಳನ್ನು ಭಾರತ ಇಂದು ಸಾಧಿಸುತ್ತಿದೆ", ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದ ರಕ್ಷಣಾ ಸ್ವಾವಲಂಬನೆಗಾಗಿ  ಕಳೆದ 10 ವರ್ಷಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಿ ವಿವರಿಸಿದರು. ನೂರಾರು ಮದ್ದುಗುಂಡುಗಳು ಮತ್ತು ಸಲಕರಣೆಗಳ ನಿಷೇಧ ಮತ್ತು ರೋಮಾಂಚಕ ದೇಶೀಯ ರಕ್ಷಣಾ ಉದ್ಯಮದ ಸೃಷ್ಟಿಯನ್ನು ಉಲ್ಲೇಖಿಸಿದ ಪ್ರಧಾನಿ, "ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ರಕ್ಷಣಾ ಆಮದುದಾರನಾಗಿದ್ದ ಭಾರತವು ಈಗ ವಿಶ್ವದ ಅತಿದೊಡ್ಡ ರಕ್ಷಣಾ ರಫ್ತುದಾರರ ಪಟ್ಟಿಯಲ್ಲಿ ಸೇರುತ್ತಿದೆ" ಎಂದೂ ಹೇಳಿದರು.

ಇಂದಿನ ಭಾರತವು ಇಡೀ ಜಗತ್ತನ್ನು 'ವಿಶ್ವ ಮಿತ್ರ' (ವಿಶ್ವದ ಸ್ನೇಹಿತ) ಆಗಿ ಜೋಡಿಸುವಲ್ಲಿ ನಿರತವಾಗಿದೆ ಮತ್ತು ವಿಶ್ವದ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಒಂದೆಡೆ, ಭಾರತವು ಜಗತ್ತಿಗೆ ಯುದ್ಧಕ್ಕೆ ಬದಲು ಶಾಂತಿಯ ಹಾದಿಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದರೆ, ರಾಷ್ಟ್ರವು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲೂ  ಸಿದ್ಧವಾಗಿದೆ ಎಂಬುದನ್ನೂ ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಅದರ ಜನರಿಗಾಗಿರುವ ಮುಂದಿನ 25 ವರ್ಷಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅಮೃತ್ ಕಾಲದ ಪ್ರತಿ ಕ್ಷಣವನ್ನು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಮರ್ಪಿಸುವಂತೆ ಒತ್ತಿ ಹೇಳಿದರು. "ನಾವು ಕಷ್ಟಪಟ್ಟು ಕೆಲಸ ಮಾಡಬೇಕು, ಮತ್ತು ನಾವು ಧೈರ್ಯಶಾಲಿಗಳಾಗಿರಬೇಕು. ವಿಕ್ಷಿತ ಭಾರತವನ್ನು ನಿರ್ಮಿಸಲು ಇದು ನಿರ್ಣಾಯಕವಾಗಿದೆ. ಪರಾಕ್ರಮ ದಿವಸ್ ಪ್ರತಿ ವರ್ಷ ಸಂಕಲ್ಪವನ್ನು ನಮಗೆ ನೆನಪಿಸುತ್ತದೆ", ಎಂದು ಪ್ರಧಾನಿ ಮುಕ್ತಾಯಗೊಳಿಸಿದರು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ, ಕೇಂದ್ರ ಸಂಸ್ಕೃತಿ ಸಹಾಯಕ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಕೇಂದ್ರ ರಕ್ಷಣಾ ಮತ್ತು ಪ್ರವಾಸೋದ್ಯಮ ಸಹಾಯಕ ಸಚಿವರಾದ ಶ್ರೀ  ಅಜಯ್ ಭಟ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಐಎನ್ಎ ಟ್ರಸ್ಟ್ ಅಧ್ಯಕ್ಷ ಬ್ರಿಗೇಡಿಯರ್ (ನಿವೃತ್ತ) ಆರ್.ಎಸ್.ಚಿಕಾರಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಗಣ್ಯರ ಕೊಡುಗೆಯನ್ನು ಗೌರವಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಪ್ರಧಾನಿಯವರ ಚಿಂತನೆ/ದೃಷ್ಟಿಕೋನಕ್ಕೆ ಅನುಗುಣವಾಗಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು 2021 ರಿಂದ ಪರಾಕ್ರಮ ದಿವಸ್ ಎಂದು ಆಚರಿಸಲಾಗುತ್ತಿದೆ. ಈ ವರ್ಷ ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವು ಐತಿಹಾಸಿಕ ಪ್ರತಿಬಿಂಬಗಳು ಮತ್ತು ರೋಮಾಂಚಕ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಒಟ್ಟುಗೂಡಿಸುವ ಬಹುಮುಖಿ ಆಚರಣೆಯಾಗಿದೆ. ಈ ಚಟುವಟಿಕೆಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಆಜಾದ್ ಹಿಂದ್ ಫೌಜ್ ನ ಆಳವಾದ ಪರಂಪರೆಯನ್ನು ಅವಲೋಕಿಸುತ್ತವೆ. ನೇತಾಜಿ ಮತ್ತು ಆಜಾದ್ ಹಿಂದ್ ಫೌಜ್ ನ  ಗಮನಾರ್ಹ ಪ್ರಯಾಣವನ್ನು ನಿರೂಪಿಸುವ ಅಪರೂಪದ ಛಾಯಾಚಿತ್ರಗಳು ಮತ್ತು ದಾಖಲೆಗಳನ್ನು ಪ್ರದರ್ಶಿಸುವ ಆರ್ಕೈವ್ ಪ್ರದರ್ಶನಗಳ ಮೂಲಕ ಸಂದರ್ಶಕರಿಗೆ ಇದು ಅದ್ಭುತ ಅನುಭವನ್ನು  ಪಡೆಯಲು ಅವಕಾಶ ಒದಗಿಸುತ್ತದೆ. ಈ ಆಚರಣೆಗಳು 2024 ರ ಜನವರಿ 31 ರವರೆಗೆ ಮುಂದುವರಿಯುತ್ತವೆ.

ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಜನವರಿ 23 ರಿಂದ 31 ರವರೆಗೆ ನಡೆಯಲಿರುವ ಭಾರತ್ ಪರ್ವ್ ಗೆ ಚಾಲನೆ ನೀಡಿದರು. ಇದು ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ದೇಶದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ, ಇದು 26 ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಯತ್ನಗಳನ್ನು ಒಳಗೊಂಡಿದೆ, ನಾಗರಿಕ ಕೇಂದ್ರಿತ ಉಪಕ್ರಮಗಳನ್ನು ಇದು ಪ್ರಮುಖವಾಗಿ ಎತ್ತಿ ತೋರಿಸುತ್ತದೆ, ಸ್ಥಳೀಯ, ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಗೆ (ವೋಕಲ್ ಫಾರ್ ಲೋಕಲ್)  ಧ್ವನಿ ನೀಡುತ್ತದೆ. ಇಷ್ಟಲ್ಲದೆ ಇತರ ವಿಷಯಗಳನ್ನೂ ಅದು ಒಳಗೊಂಡಿದೆ.  ಇದು ಕೆಂಪು ಕೋಟೆಯ ಮುಂಭಾಗದ ರಾಮ್ ಲೀಲಾ ಮೈದಾನ ಮತ್ತು ಮಾಧವ್ ದಾಸ್ ಉದ್ಯಾನವನದಲ್ಲಿ ನಡೆಯುತ್ತದೆ.

 

***

 

 

 



(Release ID: 1999162) Visitor Counter : 55