ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 20-21ರಂದು ತಮಿಳುನಾಡಿನ ಹಲವು ದೇವಾಲಯಗಳಿಗೆ ಭೇಟಿ ನೀಡಲಿರುವ ಪ್ರಧಾನಿ


ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಪ್ರಧಾನಿ; ಈ ದೇವಾಲಯದಲ್ಲಿ ವಿದ್ವಾಂಸರು ಕಂಬ ರಾಮಾಯಣದ ಶ್ಲೋಕಗಳನ್ನು ಪಠಿಸುವುದನ್ನು ಕೇಳಲಿರುವ ಪ್ರಧಾನಮಂತ್ರಿ

ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಪ್ರಧಾನಿ; ಅನೇಕ ಭಾಷೆಗಳಲ್ಲಿ ರಾಮಾಯಣದ ಪಠಣವನ್ನು ವೀಕ್ಷಿಸಿ ಮತ್ತು ಭಜನಾ ಸಂಧ್ಯಾದಲ್ಲಿ ಪಾಲ್ಗೊಳ್ಳಲಿದ್ದಾರೆ

ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೂ ಪ್ರಧಾನಮಂತ್ರಿ ಭೇಟಿ; ಅರಿಚಲ್ ಮುನೈಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

Posted On: 18 JAN 2024 6:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜನವರಿ 20-21ರಂದು ತಮಿಳುನಾಡಿನ ವಿವಿಧ ಮಹತ್ವದ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಜನವರಿ 20 ರಂದು ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಈ ದೇವಾಲಯದಲ್ಲಿ ವಿವಿಧ ವಿದ್ವಾಂಸರು ಕಂಬ ರಾಮಾಯಣದ ಶ್ಲೋಕಗಳನ್ನು ಪಠಿಸುವುದನ್ನು ಪ್ರಧಾನಿ ಕೇಳಲಿದ್ದಾರೆ.

ನಂತರ ಮಧ್ಯಾಹ್ನ 2 ಗಂಟೆಗೆ ರಾಮೇಶ್ವರಂ ತಲುಪಲಿದ್ದು, ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರಧಾನಿಯವರು ಅನೇಕ ದೇವಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ಅಭ್ಯಾಸವನ್ನು ಮುಂದುವರಿಸಿ, ಈ ದೇವಾಲಯದಲ್ಲಿ ಅವರು ವಿವಿಧ ಭಾಷೆಗಳಲ್ಲಿ (ಮರಾಠಿ, ಮಲಯಾಳಂ ಮತ್ತು ತೆಲುಗು) ರಾಮಾಯಣ ಪಠಣದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ, ಎಂಟು ವಿಭಿನ್ನ ಸಾಂಪ್ರದಾಯಿಕ ಮಂಡಳಿಗಳು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬಂಗಾಳಿ, ಮೈಥಿಲಿ ಮತ್ತು ಗುಜರಾತಿ ರಾಮಕಥೆಗಳನ್ನು ಪಠಿಸುತ್ತವೆ (ಶ್ರೀ ರಾಮನು ಅಯೋಧ್ಯೆಗೆ ಮರಳಿದ ಪ್ರಸಂಗವನ್ನು ವಿವರಿಸುತ್ತದೆ). ಇದು 'ಏಕ್ ಭಾರತ್ ಶ್ರೇಷ್ಠ ಭಾರತ್' ನ ಕೇಂದ್ರಬಿಂದುವಾಗಿರುವ ಭಾರತೀಯ ಸಾಂಸ್ಕೃತಿಕ ನೀತಿಗಳು ಮತ್ತು ಬಂಧಕ್ಕೆ ಅನುಗುಣವಾಗಿದೆ. ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನದಲ್ಲಿ, ಪ್ರಧಾನಮಂತ್ರಿ ಅವರು ಭಜನಾ ಸಂಧ್ಯಾದಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಸಂಜೆ ದೇವಾಲಯದ ಸಂಕೀರ್ಣದಲ್ಲಿ ಅನೇಕ ಭಕ್ತಿಗೀತೆಗಳನ್ನು ಹಾಡಲಾಗುವುದು.

ಜನವರಿ 21 ರಂದು ಪ್ರಧಾನಮಂತ್ರಿ ಅವರು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ. ಧನುಷ್ಕೋಡಿ ಬಳಿ ಪ್ರಧಾನಮಂತ್ರಿ ಅವರು ರಾಮ ಸೇತು ನಿರ್ಮಿಸಿದ ಸ್ಥಳವೆಂದು ಹೇಳಲಾಗುವ ಅರಿಚಲ್ ಮುನೈಗೂ ಭೇಟಿ ನೀಡಲಿದ್ದಾರೆ.

ಶ್ರೀ ರಂಗನಾಥಸ್ವಾಮಿ ದೇವಾಲಯ

ತಿರುಚ್ಚಿಯ ಶ್ರೀರಂಗಂನಲ್ಲಿರುವ ಈ ದೇವಾಲಯವು ದೇಶದ ಅತ್ಯಂತ ಪ್ರಾಚೀನ ದೇವಾಲಯ ಸಂಕೀರ್ಣಗಳಲ್ಲಿ ಒಂದಾಗಿದೆ ಮತ್ತು ಪುರಾಣಗಳು ಮತ್ತು ಸಂಗಮ್ ಯುಗದ ಪಠ್ಯಗಳು ಸೇರಿದಂತೆ ವಿವಿಧ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇದು ವಾಸ್ತುಶಿಲ್ಪದ ಭವ್ಯತೆ ಮತ್ತು ಅದರ ಹಲವಾರು ಅಪ್ರತಿಮ ಗೋಪುರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪೂಜಿಸಲ್ಪಡುವ ಮುಖ್ಯ ದೇವತೆ ಶ್ರೀ ರಂಗನಾಥ ಸ್ವಾಮಿ, ಇದು ಭಗವಾನ್ ವಿಷ್ಣುವಿನ ಮಲಗುವ ರೂಪವಾಗಿದೆ. ಈ ದೇವಾಲಯದಲ್ಲಿ ಪೂಜಿಸಲ್ಪಡುವ ವಿಗ್ರಹಕ್ಕೂ ಅಯೋಧ್ಯೆಗೂ ಇರುವ ಸಂಬಂಧವನ್ನು ವೈಷ್ಣವ ಧರ್ಮಗ್ರಂಥಗಳು ಉಲ್ಲೇಖಿಸುತ್ತವೆ. ಶ್ರೀ ರಾಮ ಮತ್ತು ಅವರ ಪೂರ್ವಜರು ಪೂಜಿಸುತ್ತಿದ್ದ ವಿಷ್ಣುವಿನ ಚಿತ್ರವನ್ನು ಲಂಕೆಗೆ ಕೊಂಡೊಯ್ಯಲು ಅವರು ವಿಭೀಷಣನಿಗೆ ನೀಡಿದರು ಎಂದು ನಂಬಲಾಗಿದೆ. ದಾರಿಯಲ್ಲಿ, ಈ ವಿಗ್ರಹವನ್ನು ಶ್ರೀರಂಗಂನಲ್ಲಿ ಸ್ಥಾಪಿಸಲಾಗಿದೆ.

ಮಹಾನ್ ತತ್ವಜ್ಞಾನಿ ಮತ್ತು ಸಂತ ಶ್ರೀ ರಾಮಾನುಜಾಚಾರ್ಯರು ಸಹ ಈ ದೇವಾಲಯದ ಇತಿಹಾಸದೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ. ಇದಲ್ಲದೆ, ಈ ದೇವಾಲಯದಲ್ಲಿ ಹಲವಾರು ಪ್ರಮುಖ ಸ್ಥಳಗಳಿವೆ - ಉದಾಹರಣೆಗೆ, ಪ್ರಸಿದ್ಧ ಕಂಬ ರಾಮಾಯಣವನ್ನು ಮೊದಲು ತಮಿಳು ಕವಿ ಕಂಬನ್ ಈ ಸಂಕೀರ್ಣದ ನಿರ್ದಿಷ್ಟ ಸ್ಥಳದಲ್ಲಿ ಸಾರ್ವಜನಿಕವಾಗಿ ಪ್ರಸ್ತುತಪಡಿಸಿದರು.

ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ಈ ದೇವಾಲಯದಲ್ಲಿ ಪೂಜಿಸಲ್ಪಡುವ ಮುಖ್ಯ ದೇವತೆ ಶ್ರೀ ರಾಮನಾಥಸ್ವಾಮಿ, ಇದು ಭಗವಾನ್ ಶಿವನ ಒಂದು ರೂಪವಾಗಿದೆ. ಈ ದೇವಾಲಯದಲ್ಲಿನ ಮುಖ್ಯ ಲಿಂಗವನ್ನು ಶ್ರೀ ರಾಮ ಮತ್ತು ಸೀತಾ ಮಾತೆ ಸ್ಥಾಪಿಸಿದರು ಮತ್ತು ಪೂಜಿಸಿದರು ಎಂದು ವ್ಯಾಪಕವಾಗಿ ನಂಬಲಾಗಿದೆ. ಈ ದೇವಾಲಯವು ಅತಿ ಉದ್ದದ ದೇವಾಲಯದ ಕಾರಿಡಾರ್ ಒಂದನ್ನು ಹೊಂದಿದೆ, ಇದು ಸುಂದರವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು ಚಾರ್ ಧಾಮ್ ಗಳಲ್ಲಿ ಒಂದಾಗಿದೆ - ಬದರೀನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ. ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಕೋದಂಡರಾಮಸ್ವಾಮಿ ದೇವಸ್ಥಾನ, ಧನುಷ್ಕೋಡಿ

ಈ ದೇವಾಲಯವು ಶ್ರೀ ಕೋದಂಡರಾಮ ಸ್ವಾಮಿಗೆ ಸಮರ್ಪಿತವಾಗಿದೆ. ಕೋದಂಡರಾಮ ಎಂಬ ಹೆಸರಿನ ಅರ್ಥ ಬಿಲ್ಲು ಹೊಂದಿರುವ ರಾಮ ಎಂದರ್ಥ. ಇದು ಧನುಷ್ಕೋಡಿ ಎಂಬ ಸ್ಥಳದಲ್ಲಿದೆ. ಇಲ್ಲಿಯೇ ವಿಭೀಷಣನು ಶ್ರೀ ರಾಮನನ್ನು ಮೊದಲು ಭೇಟಿಯಾಗಿ ಆಶ್ರಯ ಕೇಳಿದನು ಎಂದು ಹೇಳಲಾಗುತ್ತದೆ. ಕೆಲವು ದಂತಕಥೆಗಳು ಶ್ರೀ ರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಇದು ಎಂದು ಹೇಳುತ್ತವೆ.

****
 



(Release ID: 1997749) Visitor Counter : 76