ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸ್ವರ್ವೇದ್ ಮಹಾಮಂದಿರ ಉದ್ಘಾಟಿಸಿದ ಪ್ರಧಾನ ಮಂತ್ರಿ


ಕಾಶಿಯ ಪುನರುಜ್ಜೀವನಕ್ಕಾಗಿ ಸರ್ಕಾರ, ಸಮಾಜ ಮತ್ತು ಸಾಧು ಸಂತರು ಒಟ್ಟಾಗಿ ಶ್ರಮಿಸುತ್ತಿದ್ದಾರೆ

"ಸ್ವರ್ವೇದ್ ಮಹಾಮಂದಿರವು ಭಾರತದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಆಧುನಿಕ ಸಂಕೇತವಾಗಿದೆ"

"ಆಧ್ಯಾತ್ಮಿಕ ರಚನೆಗಳ ಸುತ್ತ ಭಾರತದ ವಾಸ್ತುಶಿಲ್ಪ ವಿಜ್ಞಾನ, ಯೋಗವು ಊಹಿಸಲಾಗದ ಎತ್ತರಕ್ಕೆ ತಲುಪಿದೆ"

"ಕಾಲದ ಚಕ್ರಗಳು ಇಂದು ಮರುಕಳಿಸಿವೆ. ಭಾರತವು ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಿದೆ ಮತ್ತು ಗುಲಾಮಗಿರಿಯ ಮನಸ್ಥಿತಿಯಿಂದ ಸ್ವಾತಂತ್ರ್ಯ ಘೋಷಿಸುತ್ತಿದೆ"

"ಈಗ ಬನಾರಸ್‌ನ ಅರ್ಥವೆಂದರೆ-ಅಭಿವೃದ್ಧಿ, ನಂಬಿಕೆ ಮತ್ತು ಶುಚಿತ್ವ ಮತ್ತು ಪರಿವರ್ತನೆಯ ಜತೆಗೆ ಆಧುನಿಕ ಸೌಲಭ್ಯಗಳು"

ಪ್ರಮುಖ 9 ನಿರ್ಣಯ(ಸಂಕಲ್ಪ)ಗಳನ್ನು ಜನರ ಮುಂದಿಟ್ಟ ಪ್ರಧಾನಿ

Posted On: 18 DEC 2023 12:47PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿಂದು ಉಮರಹಾದಲ್ಲಿ ಸ್ವರ್ವೇದ್ ಮಹಾಮಂದಿರ ಉದ್ಘಾಟಿಸಿದರು. ನಂತರ ಅವರು ಮಹರ್ಷಿ ಸದಾಫಲ್ ದೇವ್ ಜಿ ಮಹಾರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದೇವಾಲಯದ ಸಂಕೀರ್ಣ ವೀಕ್ಷಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಇಂದು ಕಾಶಿಗೆ ಭೇಟಿ ನೀಡುತ್ತಿರುವ ಎರಡನೇ ದಿನವಾಗಿದೆ. ಕಾಶಿಯಲ್ಲಿ ಕಳೆದ ಪ್ರತಿ ಕ್ಷಣವೂ ಅಭೂತಪೂರ್ವ ಅನುಭವಗಳಿಂದ ತುಂಬಿದೆ. 2 ವರ್ಷಗಳ ಹಿಂದೆ ಅಖಿಲ ಭಾರತೀಯ ವಿಹಂಗಮ ಯೋಗ ಸಂಸ್ಥಾನದ ವಾರ್ಷಿಕ ಆಚರಣೆ ನೆನಪಿಸಿಕೊಂಡ ಪ್ರಧಾನಿ, ಈ ವರ್ಷದ ಶತಮಾನೋತ್ಸವ ಆಚರಣೆಯ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಹಂಗಮ ಯೋಗ ಸಾಧನವು 100 ವರ್ಷಗಳ ಅವಿಸ್ಮರಣೀಯ ಪ್ರಯಾಣ ಸಾಧಿಸಿದೆ. ಹಿಂದಿನ ಶತಮಾನದಲ್ಲಿ ಜ್ಞಾನ ಮತ್ತು ಯೋಗದ ಕಡೆಗೆ ಮಹರ್ಷಿ ಸದಾಫಲ್ ದೇವ್ ಜೀ ಅವರ ಕೊಡುಗೆಗಳನ್ನು ಸ್ಮರಿಸಿದರು. ದೈವಿಕ ಬೆಳಕು ವಿಶ್ವಾದ್ಯಂತ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ. ಈ ಸುಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು 25,000 ಕುಂಡಿಯ ಸ್ವರ್ವೇದ್ ಜ್ಞಾನ ಮಹಾಯಜ್ಞದ ಸಂಘಟನೆ ಗಮನಿಸಿ, ಮಹಾಯಜ್ಞದ ಪ್ರತಿ ಅರ್ಪಣೆಯೂ ವಿಕ್ಷಿತ್ ಭಾರತ್ ಸಂಕಲ್ಪವನ್ನು ಬಲಪಡಿಸುತ್ತದೆ. ಮಹರ್ಷಿ ಸದಾಫಲ್ ದೇವ್ ಜೀ ಅವರ ಮುಂದೆ ತಲೆಬಾಗಿ ತಮ್ಮ ದರ್ಶನ ಪಡೆದ ಎಲ್ಲಾ ಸಂತರಿಗೆ ನಮನ ಸಲ್ಲಿಸಿದರು.

ಕಾಶಿಯ ಪರಿವರ್ತನೆಯಲ್ಲಿ ಸರ್ಕಾರ, ಸಮಾಜ ಮತ್ತು ಸಾಧು ಸಂತರ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಸ್ವರ್ವೇದ್ ಮಹಾಮಂದಿರವು ಈ ಸಾಮೂಹಿಕ ಮನೋಭಾವದ ಧ್ಯೋತಕವಾಗಿದೆ. ಈ ದೇವಾಲಯವು ದೈವಿಕತೆ ಹಾಗೂ ಭವ್ಯತೆಯ ಮನಮೋಹಕ ಉದಾಹರಣೆಯಾಗಿದೆ. "ಸ್ವರ್ವೆಡ್ ಮಹಾಮಂದಿರವು ಭಾರತದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಆಧುನಿಕ ಸಂಕೇತವಾಗಿದೆ". ದೇವಾಲಯದ ಸೌಂದರ್ಯ ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ವಿವರಿಸಿದ ಪ್ರಧಾನ ಮಂತ್ರಿ, ಇದನ್ನು 'ಯೋಗ ಮತ್ತು ಜ್ಞಾನತೀರ್ಥ' ಎಂದೂ ಕರೆದರು.

ಭಾರತದ ಆರ್ಥಿಕ ವಸ್ತು ಮತ್ತು ಆಧ್ಯಾತ್ಮಿಕ ವೈಭವವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಭಾರತ ಎಂದಿಗೂ ಭೌತಿಕ ಪ್ರಗತಿಯನ್ನು ಭೌಗೋಳಿಕ ವಿಸ್ತರಣೆ ಅಥವಾ ಶೋಷಣೆಯ ಮಾಧ್ಯಮವಾಗಲು ಬಿಡುವುದಿಲ್ಲ. "ನಾವು ಆಧ್ಯಾತ್ಮಿಕ ಮತ್ತು ಮಾನವೀಯ ಸಂಕೇತಗಳ ಮೂಲಕ ಭೌತಿಕ ಪ್ರಗತಿಯನ್ನು ಅನುಸರಿಸಿದ್ದೇವೆ". ರೋಮಾಂಚಕ ಕಾಶಿ, ಕೋನಾರ್ಕ್ ದೇವಾಲಯ, ಸಾರನಾಥ, ಗಯಾ ಸ್ತೂಪಗಳು ಮತ್ತು ನಳಂದಾ ಮತ್ತು ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳ ಉದಾಹರಣೆ ನಮ್ಮ ಮುಂದಿವೆ. "ಈ ಆಧ್ಯಾತ್ಮಿಕ ರಚನೆಗಳ ಸುತ್ತಲೂ ಭಾರತದ ವಾಸ್ತುಶಿಲ್ಪವು ಊಹಿಸಲಾಗದ ಎತ್ತರ ತಲುಪಿದೆ" ಎಂದು ಪ್ರಧಾನಿ ಮೋದಿ ತಿಳಿಸಿದರು.

ಭಾರತದ ನಂಬಿಕೆಯ ಪ್ರತೀಕಗಳು ವಿದೇಶಿ ದಾಳಿಕೋರರಿಗೆ ಗುರಿಯಾಗಿದ್ದವು.  ಸ್ವಾತಂತ್ರ್ಯಾ ನಂತರ ಅವುಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ನಡೆಯುವ ಅಗತ್ಯವಿತ್ತು. ಒಂದು ಪರಂಪರೆಯ ಬಗ್ಗೆ ಹೆಮ್ಮೆ ಪಡದಿರುವ ಹಿಂದಿನ ಚಿಂತನಾ ಕ್ರಮದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪ್ರಧಾನಿ, ಸ್ವಾತಂತ್ರ್ಯದ ನಂತರ ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ಸೋಮನಾಥ ದೇವಾಲಯದ ಉದಾಹರಣೆ ನೀಡಿದ ಅವರು, ಅಂತಹ ಚಿಹ್ನೆಗಳ ಪುನರುಜ್ಜೀವನವು ದೇಶದ ಏಕತೆ ಬಲಪಡಿಸಲು ಕಾರಣವಾಗುತ್ತದೆ. ಇದು ದೇಶವು ಕೀಳು ಭಾವನೆಗೆ ಜಾರಲು ಕಾರಣವಾಯಿತು. "ಕಾಲದ ಚಕ್ರಗಳು ಇಂದು ಮತ್ತೆ ತಿರುಗಿವೆ, ಭಾರತವು ತನ್ನ ಪರಂಪರೆಯಲ್ಲಿ ಹೆಮ್ಮೆಪಡುತ್ತಿದೆ. ಗುಲಾಮಗಿರಿಯ ಮನಸ್ಥಿತಿಯಿಂದ ಸ್ವಾತಂತ್ರ್ಯ ಘೋಷಿಸುತ್ತಿದೆ". ಸೋಮನಾಥದಲ್ಲಿ ಆರಂಭವಾದ ಕಾರ್ಯ ಈಗ ಪೂರ್ಣ ಪ್ರಮಾಣದ ಪ್ರಚಾರವಾಗಿ ಮಾರ್ಪಟ್ಟಿದೆ. ಕಾಶಿ ವಿಶ್ವನಾಥ ದೇಗುಲ, ಮಹಾಕಾಲ್ ಮಹಾಲೋಕ, ಕೇದಾರನಾಥ ಧಾಮ, ಬುದ್ಧ ಸರ್ಕ್ಯೂಟ್‌ಗಳನ್ನು ಉದಾಹರಣೆಯಾಗಿ ನೀಡಿದರು. ರಾಮ್ ಸರ್ಕ್ಯೂಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಶೀಘ್ರದಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ ಎಂದು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

ರಾಷ್ಟ್ರವು ತನ್ನ ಸಾಮಾಜಿಕ ವಾಸ್ತವತೆಗಳು ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ಮೈಗೂಡಿಸಿಕೊಂಡಾಗ ಸಮಗ್ರ ಅಭಿವೃದ್ಧಿ ಸಾಧ್ಯ. "ಅದಕ್ಕಾಗಿಯೇ, ಇಂದು, ನಮ್ಮ ಪುಣ್ಯ ಕ್ಷೇತ್ರಗಳ ಪುನರುಜ್ಜೀವನ ನಡೆಯುತ್ತಿದೆ. ಭಾರತವು ಆಧುನಿಕ ಮೂಲಸೌಕರ್ಯ ಸೃಷ್ಟಿಯಲ್ಲಿ ಹೊಸ ದಾಖಲೆ ಮಾಡುತ್ತಿದೆ". ಕಳೆದ ವಾರ 2 ವರ್ಷ ಪೂರೈಸಿದ ಹೊಸ ಕಾಶಿ ವಿಶ್ವನಾಥ ಧಾಮ ಆವರಣವು ನಗರದ ಆರ್ಥಿಕತೆ ಮತ್ತು ಉದ್ಯೋಗಗಳಿಗೆ ಹೊಸ ವೇಗ ನೀಡಿದೆ. "ಈಗ ಬನಾರಸ್‌ ಅರ್ಥವೆಂದರೆ - ಅಭಿವೃದ್ಧಿ, ನಂಬಿಕೆ ಮತ್ತು ಶುಚಿತ್ವ ಮತ್ತು ಪರಿವರ್ತನೆಯ ಜತೆಗೆ ಆಧುನಿಕ ಸೌಲಭ್ಯಗಳಾಗಿವೆ". 4-6 ಲೇನಿಂಗ್ ರಸ್ತೆಗಳು, ರಿಂಗ್ ರಸ್ತೆ, ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ, ಹೊಸ ರೈಲುಗಳು, ಮೀಸಲಾದ ಸರಕು ಸಾಗಣೆ ಕಾರಿಡಾರ್, ಗಂಗಾ ಘಾಟ್‌ಗಳ ನವೀಕರಣ, ಗಂಗಾ ಕ್ರೂಸ್, ಆಧುನಿಕ ಆಸ್ಪತ್ರೆಗಳು, ಹೊಸ ಮತ್ತು ಆಧುನಿಕ ಡೇರಿ, ಗಂಗಾ ನದಿಯ ಉದ್ದಕ್ಕೂ ನೈಸರ್ಗಿಕ ಕೃಷಿ, ಯುವಕರಿಗೆ ತರಬೇತಿ ಸಂಸ್ಥೆಗಳನ್ನು ಸ್ಥಾಪಸಲಾಗಿದೆ. ಸಂಸದ್ ರೋಜ್‌ಗಾರ್ ಮೇಳಗಳ ಮೂಲಕ ಉದ್ಯೋಗಗಳನ್ನು ಸೃಷ್ಟಿಲಾಗುತ್ತಿದೆ ಎಂದರು.

ಆಧ್ಯಾತ್ಮಿಕ ಪ್ರಯಾಣವನ್ನು ಹೆಚ್ಚು ಸುಲಭವಾಗಿಸುವಲ್ಲಿ ಆಧುನಿಕ ಅಭಿವೃದ್ಧಿಯ ಪಾತ್ರವನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ವಾರಾಣಸಿ ನಗರದ ಹೊರಗಿರುವ ಸ್ವರ್ವೇದ ದೇವಾಲಯಕ್ಕೆ ಅತ್ಯುತ್ತಮ ಸಂಪರ್ಕ ಒದಗಿಸಲಾಗಿದೆ. ಬನಾರಸ್‌ಗೆ ಬರುವ ಭಕ್ತರಿಗೆ ಇದು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಆ ಮೂಲಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವ್ಯಾಪಾರ ಮತ್ತು ಉದ್ಯೋಗದ ಅವಕಾಶಗಳನ್ನು ತೆರೆಯುತ್ತದೆ  ಎಂದರು.

"ವಿಹಂಗಮ ಯೋಗ ಸಂಸ್ಥಾನವು ಆಧ್ಯಾತ್ಮಿಕ ಕಲ್ಯಾಣಕ್ಕೆ ಸಮರ್ಪಿತವಾಗಿದೆ, ಅದು ಸಮಾಜಕ್ಕೆ ಸೇವೆ ಸಲ್ಲಿಸಲು ಸಮರ್ಪಿಸಲಾಗಿದೆ". ಮಹರ್ಷಿ ಸದಾಫಲ್ ದೇವ್ ಜಿ ಅವರು ಯೋಗ ಸಾಧಕ, ಭಕ್ತ ಸಂತ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ. ಆಜಾದಿ ಕಾ ಅಮೃತ್ ಕಾಲ್‌ನಲ್ಲಿ ತಮ್ಮ ನಿರ್ಣಯಗಳನ್ನು ಮುಂದುವರಿಸುವ ಅಗತ್ಯವಿದೆ. ಅದಕ್ಕಾಗಿ ಪ್ರಧಾನಿ ಅವರು 9 ನಿರ್ಣಯ(ಸಂಕಲ್ಪ)ಗಳನ್ನು ಮಂಡಿಸಿದರು, ಅವುಗಳನ್ನು ಪಾಲಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಿದರು. ಮೊದಲನೆಯದಾಗಿ, ನೀರನ್ನು ಉಳಿಸುವುದು ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು, ಎರಡನೆಯದು - ಡಿಜಿಟಲ್ ವಹಿವಾಟಿನ ಬಗ್ಗೆ ಜಾಗೃತಿ ಮೂಡಿಸುವುದು, ಮೂರನೆಯದು - ಗ್ರಾಮಗಳು, ಪ್ರದೇಶಗಳು ಮತ್ತು ನಗರಗಳಲ್ಲಿ ಸ್ವಚ್ಛತೆಯ ಪ್ರಯತ್ನಗಳನ್ನು ಹೆಚ್ಚಿಸುವುದು, ನಾಲ್ಕನೆಯದಾಗಿ - ಸ್ವದೇಶಿ ನಿರ್ಮಿತ ಉತ್ಪನ್ನಗಳ ಪ್ರಚಾರ ಮತ್ತು ಬಳಕೆ, ಐದನೆಯದು - ಭಾರತ ಪ್ರವಾಸ ಮತ್ತು ಅನ್ವೇಷಣೆ, ಆರನೆಯದು - ರೈತರಲ್ಲಿ ನೈಸರ್ಗಿಕ ಕೃಷಿಯ ಬಗ್ಗೆ ಜಾಗೃತಿ ಹೆಚ್ಚಿಸುವುದು, ಏಳನೆಯದು - ನಿಮ್ಮ ದೈನಂದಿನ ಜೀವನದಲ್ಲಿ ಸಿರಿಧಾನ್ಯ ಅಥವಾ ಶ್ರೀ ಅನ್ನ ಸೇರಿದಂತೆ, ಎಂಟನೆಯದು - ಕ್ರೀಡೆ, ಫಿಟ್‌ನೆಸ್ ಅಥವಾ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿಸುವುದು ಮತ್ತು ಕೊನೆಯದಾಗಿ ಕನಿಷ್ಠ ಒಂದು ಬಡ ಕುಟುಂಬವನ್ನು ಬೆಂಬಲಿಸಿ, ಭಾರತದಲ್ಲಿ ಬಡತನವನ್ನು ಕಿತ್ತುಹಾಕಿ ಎಂದು ಪ್ರಧಾನಿ ಕರೆ ನೀಡಿದರು.

ನಿನ್ನೆ ಸಂಜೆ ಮತ್ತು ನಂತರ ಇಂದು ಪ್ರಧಾನ ಮಂತ್ರಿ ಅವರ ಭಾಗವಹಿಸುವಿಕೆಗೆ ಸಾಕ್ಷಿಯಾದ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಮೇಲೆ ಬೆಳಕು ಚೆಲ್ಲುವ ಮೂಲಕ, ಈ ಪ್ರಯಾಣದ ಬಗ್ಗೆ ಜಾಗೃತಿ ಮೂಡಿಸುವಂತೆ ಪ್ರಧಾನಿ ಪ್ರತಿಯೊಬ್ಬ ಧಾರ್ಮಿಕ ಮುಖಂಡರನ್ನು ಒತ್ತಾಯಿಸಿದರು. "ಇದು ನಮ್ಮ ವೈಯಕ್ತಿಕ ನಿಸಂಕಲ್ಪವಾಗಬೇಕು" ಎಂದು ಪ್ರಧಾನಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಶ್ರೀ ನರೇಂದ್ರ ನಾಥ್ ಪಾಂಡೆ, ಸದ್ಗುರು ಆಚಾರ್ಯ ಶ್ರೀ ಸ್ವತಂತ್ರದೇವ್ ಜಿ ಮಹಾರಾಜ್ ಮತ್ತು ಸಂತ ಪ್ರವರ್ ಶ್ರೀ ವಿಜ್ಞಾನದೇವೋ ಜಿ ಮಹಾರಾಜ್ ಉಪಸ್ಥಿತರಿದ್ದರು.

 

***



(Release ID: 1987797) Visitor Counter : 89