ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಪ್ರದೇಶದ ಬಿನಾದಲ್ಲಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 14 SEP 2023 3:26PM by PIB Bengaluru

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಹರ್ದೀಪ್ ಸಿಂಗ್ ಪುರಿ ಅವರೇ, ಮಧ್ಯಪ್ರದೇಶದ ಇತರ ಸಚಿವರೇ, ಸಂಸತ್ ಸದಸ್ಯರೇ, ಶಾಸಕರೇ ಮತ್ತು ನನ್ನ ಪ್ರೀತಿಯ ಕುಟುಂಬ ಸದಸ್ಯರೇ!

ಬುಂದೇಲ್‌ಖಂಡದ ಈ ಭೂಮಿಯು ಕೆಚ್ಚೆದೆಯ ಕಲಿಗಳ ಭೂಮಿ, ವೀರ ಯೋಧರ ಭೂಮಿ. ಈ ಭೂಮಿಯು ಬೀನಾ ಮತ್ತು ಬೆಟ್ವಾ ನದಿಗಳಿಂದ ಆಶೀರ್ವದಿಸಲ್ಪಟ್ಟಿದೆ. ಮತ್ತು ನನಗೆ, ಈ ತಿಂಗಳಲ್ಲಿ ಎರಡನೇ ಬಾರಿಗೆ ಸಾಗರದಲ್ಲಿ ನಿಮ್ಮೆಲ್ಲರನ್ನೂ ನೋಡುವ ಅವಕಾಶ ಸಿಕ್ಕಿರುವುದು ಒಂದು ಸೌಭಾಗ್ಯವೇ ಸರಿ. ಇಂದು ನಿಮ್ಮೆಲ್ಲರ ನಡುವೆ ಇರಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಶ್ರೀ ಶಿವರಾಜ್ ಅವರ ಸರ್ಕಾರವನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಅರ್ಪಿಸುತ್ತೇನೆ. ನಾನು ಕೊನೆಯ ಬಾರಿಗೆ ನಿಮ್ಮ ನಡುವೆ ಇದ್ದದ್ದು ಸಂತ ರವಿದಾಸ್ ಜೀ ಅವರ ಭವ್ಯ ಸ್ಮಾರಕದ ಭೂಮಿ ಪೂಜೆ ಸಮಾರಂಭಕ್ಕಾಗಿ. ಇಂದು, ಮಧ್ಯಪ್ರದೇಶದ ಅಭಿವೃದ್ಧಿಗೆ ಹೊಸ ಆವೇಗವನ್ನು ತರುವ ಹಲವಾರು ಯೋಜನೆಗಳ ಭೂಮಿ ಪೂಜೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿದೆ. ಈ ಯೋಜನೆಗಳು ಈ ಪ್ರದೇಶದ ಕೈಗಾರಿಕಾ ಅಭಿವೃದ್ಧಿಗೆ ಹೊಸ ಶಕ್ತಿಯನ್ನು ನೀಡುತ್ತವೆ. ಈ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ 50,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಐವತ್ತು ಸಾವಿರ ಕೋಟಿಗಳ ಅರ್ಥವೇನೆಂದು ನೀವು ಊಹಿಸಬಲ್ಲಿರಾ? ನಮ್ಮ ದೇಶದ ಅನೇಕ ರಾಜ್ಯಗಳ ಸಂಪೂರ್ಣ ವಾರ್ಷಿಕ ಬಜೆಟ್‌ಗಿಂತಲೂ ಹೆಚ್ಚಿನ ಮೊತ್ತವನ್ನು ಇಂದು ಭಾರತ ಸರ್ಕಾರವು ಕೇವಲ ಒಂದು ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿದೆ. ಮಧ್ಯಪ್ರದೇಶದ ಬಗ್ಗೆ ನಮ್ಮ ಬದ್ಧತೆ ಎಷ್ಟು ದೊಡ್ಡದಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಎಲ್ಲಾ ಯೋಜನೆಗಳು ಮುಂಬರುವ ದಿನಗಳಲ್ಲಿ ಮಧ್ಯಪ್ರದೇಶದ ಸಾವಿರಾರು ಯುವಕರಿಗೆ ಉದ್ಯೋಗವನ್ನು ಒದಗಿಸುತ್ತವೆ. ಈ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕನಸುಗಳನ್ನು ಈಡೇರಿಸಲಿವೆ. ಬಿನಾ ಸಂಸ್ಕರಣಾಗಾರದ ವಿಸ್ತರಣೆಗಾಗಿ ಮತ್ತು ಹಲವು ಹೊಸ ಸೌಲಭ್ಯಗಳ ಉದ್ಘಾಟನೆಗಾಗಿ ನಾನು ಮಧ್ಯಪ್ರದೇಶದ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಪ್ರತಿಯೊಬ್ಬ ಭಾರತೀಯರೂ ಸ್ವಾತಂತ್ರ್ಯದ ಈ 'ಅಮೃತ ಕಾಲ'ದಲ್ಲಿ ತನ್ನ ಭಾರತವನ್ನು ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿದ್ದಾರೆ. ಈ ಸಂಕಲ್ಪವನ್ನು ಸಾಧಿಸಲು, ಭಾರತವು ಸ್ವಾವಲಂಬಿಯಾಗುವುದು ಅತ್ಯಗತ್ಯ, ಮತ್ತು ನಾವು ವಿದೇಶಿ ಆಮದಿನ ಮೇಲಿನ ನಮ್ಮ ಅವಲಂಬನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತೇವೆ. ಇಂದು, ಭಾರತವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆಮದು ಮಾಡಿಕೊಳ್ಳುವುದಲ್ಲದೆ, ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಇತರ ದೇಶಗಳನ್ನು ಅವಲಂಬಿಸಿದೆ. ಇಂದು ಬಿನಾದಲ್ಲಿ ಪೆಟ್ರೋಕೆಮಿಕಲ್ ಸಂಕೀರ್ಣದ ಶಿಲಾನ್ಯಾಸ ಸಮಾರಂಭವು ಅಂತಹ ವಸ್ತುಗಳ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಪ್ಲಾಸ್ಟಿಕ್ ಪೈಪ್‌ಗಳು, ಸ್ನಾನಗೃಹದ ಬಕೆಟ್‌ಗಳು, ಮಗ್‌ಗಳು, ಪ್ಲಾಸ್ಟಿಕ್ ಟ್ಯಾಪ್‌ಗಳು, ಪ್ಲಾಸ್ಟಿಕ್ ಕುರ್ಚಿಗಳು, ಟೇಬಲ್‌ಗಳು, ಮನೆ ಬಣ್ಣ, ಕಾರ್ ಬಂಪರ್‌ಗಳು, ಡ್ಯಾಶ್ ಬೋರ್ಡ್‌ಗಳು, ಪ್ಯಾಕೇಜಿಂಗ್ ವಸ್ತುಗಳು, ವೈದ್ಯಕೀಯ ಉಪಕರಣಗಳು, ಗ್ಲೂಕೋಸ್ ಬಾಟಲಿಗಳು, ವೈದ್ಯಕೀಯ ಸಿರಿಂಜ್‌ಗಳು ಮತ್ತು ವಿವಿಧ ರೀತಿಯ ಕೃಷಿ ಉಪಕರಣಗಳನ್ನು ತಯಾರಿಸುವಲ್ಲಿ ಪೆಟ್ರೋಕೆಮಿಕಲ್ಸ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಈಗ, ಬಿನಾದಲ್ಲಿ ಸ್ಥಾಪಿಸಲಾಗುತ್ತಿರುವ ಆಧುನಿಕ ಪೆಟ್ರೋಕೆಮಿಕಲ್ ಸಂಕೀರ್ಣವು ಈ ಇಡೀ ಪ್ರದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ನಾನು ನಿಮಗೆ ಈ ಭರವಸೆ ನೀಡಬಲ್ಲೆ. ಇದು ಇಲ್ಲಿ ಹೊಸ ಕೈಗಾರಿಕೆಗಳನ್ನು ತರುತ್ತದೆ, ಸ್ಥಳೀಯ ರೈತರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ನಮ್ಮ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ಇಂದಿನ   ʻನವ ಭಾರತʼದಲ್ಲಿ ಉತ್ಪಾದನಾ ವಲಯವೂ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ. ದೇಶದ ಅಗತ್ಯಗಳು ಹೆಚ್ಚುತ್ತಿರುವುದರಿಂದ ಮತ್ತು ವಿಕಸನಗೊಳ್ಳುತ್ತಿರುವುದರಿಂದ, ಉತ್ಪಾದನಾ ವಲಯವನ್ನು ಆಧುನೀಕರಿಸುವುದು ಅಷ್ಟೇ ಮುಖ್ಯವಾಗಿದೆ. ಈ ದೃಷ್ಟಿಕೋನದೊಂದಿಗೆ, ಈ ಕಾರ್ಯಕ್ರಮದ ಭಾಗವಾಗಿ ಮಧ್ಯಪ್ರದೇಶದಲ್ಲಿ 10 ಹೊಸ ಕೈಗಾರಿಕಾ ಯೋಜನೆಗಳ ಕೆಲಸ ಪ್ರಾರಂಭವಾಗಿದೆ. ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ನರ್ಮದಾಪುರಂನ ಉತ್ಪಾದನಾ ವಲಯ, ಇಂದೋರ್‌ನಲ್ಲಿ ಎರಡು ಹೊಸ ಐಟಿ ಪಾರ್ಕ್‌ಗಳು ಮತ್ತು ರತ್ಲಾಮ್‌ನಲ್ಲಿ ಮೆಗಾ ಕೈಗಾರಿಕಾ ಪಾರ್ಕ್ ಇವೆಲ್ಲವೂ ಮಧ್ಯಪ್ರದೇಶದ ಕೈಗಾರಿಕಾ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮಧ್ಯಪ್ರದೇಶದ ಕೈಗಾರಿಕಾ ಶಕ್ತಿ ಹೆಚ್ಚಾದಾಗ, ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ. ಯುವಕರು, ರೈತರು ಮತ್ತು ಸಣ್ಣ ಉದ್ಯಮಿಗಳು ತಮ್ಮ ಆದಾಯದಲ್ಲಿ ಹೆಚ್ಚಳವನ್ನು ನೋಡುತ್ತಾರೆ ಮತ್ತು ಪ್ರತಿಯೊಬ್ಬರಿಗೂ ಹೆಚ್ಚಿನ ಅವಕಾಶಗಳು ಸಿಗುತ್ತವೆ.

ನನ್ನ ಕುಟುಂಬ ಸದಸ್ಯರೇ,

ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಗಾಗಿ, ಆಡಳಿತವು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸುವುದು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸುವುದು ನಿರ್ಣಾಯಕವಾಗಿದೆ. ಮಧ್ಯಪ್ರದೇಶದ ಇಂದಿನ ಪೀಳಿಗೆಗೆ ನೆನಪಿಲ್ಲದಿರಬಹುದು, ಆದರೆ ಮಧ್ಯಪ್ರದೇಶವು ದೇಶದ ಅತ್ಯಂತ ಶಿಥಿಲಗೊಂಡ ರಾಜ್ಯಗಳಲ್ಲಿ ಒಂದೆಂಬ ಕುಖ್ಯಾತಿಗೆ ಒಳಗಾಗಿದ್ದ ಸಮಯವಿತ್ತು. ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ದೀರ್ಘಕಾಲ ಆಳಿದವರು ಅಪರಾಧ ಮತ್ತು ಭ್ರಷ್ಟಾಚಾರವನ್ನು ಹೊರತುಪಡಿಸಿ ರಾಜ್ಯಕ್ಕೆ ಏನನ್ನೂ ನೀಡಲಿಲ್ಲ. ಆ ಸಮಯದಲ್ಲಿ, ಮಧ್ಯಪ್ರದೇಶವು ಅಪರಾಧ ಚಟುವಟಿಕೆಗಳಿಗೆ ಹೆಸರುವಾಸಿಯಾಗಿತ್ತು ಮತ್ತು ಜನರಿಗೆ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ನಂಬಿಕೆ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಧ್ಯಪ್ರದೇಶದಲ್ಲಿ ಕೈಗಾರಿಕೆಗಳನ್ನು ಹೇಗೆ ತಾನೆ ಸ್ಥಾಪಿಸಲು ಸಾ‍ಧ್ಯ? ವ್ಯಾಪಾರಕ್ಕಾಗಿ ಇಲ್ಲಿಗೆ ಬರಲು ಯಾರು ತಾನೆ ಧೈರ್ಯ ಮಾಡುತ್ತಾರೆ? ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಮ್ಮ ಸಹೋದ್ಯೋಗಿಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಮಧ್ಯಪ್ರದೇಶದ ಹಣೆಬರಹವನ್ನು ಬದಲಾಯಿಸಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ಮಧ್ಯಪ್ರದೇಶವನ್ನು ಭಯದಿಂದ ಮುಕ್ತಗೊಳಿಸಿದ್ದೇವೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿದ್ದೇವೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಿದ್ದೇವೆ. ಕಾಂಗ್ರೆಸ್ ಬುಂದೇಲ್‌ಖಂಡ ಪ್ರದೇಶವನ್ನು ಹೇಗೆ ನಿರ್ಲಕ್ಷಿಸಿತು, ರಸ್ತೆಗಳು, ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳಿಂದ ಈ ಪ್ರದೇಶ ವಂಚಿತವಾಗಿತ್ತು ಎಂಬುದನ್ನು ಹಿಂದಿನ ಪೀಳಿಗೆಯ ಜನರು ನೆನಪಿಸಿಕೊಳ್ಳುತ್ತಾರೆ. ಇಂದು, ಬಿಜೆಪಿ ಸರ್ಕಾರದ ಅಡಿಯಲ್ಲಿ, ಪ್ರತಿ ಹಳ್ಳಿಗಳೂ ರಸ್ತೆಗಳನ್ನು ನೋಡುತ್ತಿವೆ. ವಿದ್ಯುತ್ ಪ್ರತಿ ಮನೆಯನ್ನು ತಲುಪುತ್ತಿದೆ. ಸಂಪರ್ಕವು ಸುಧಾರಿಸಿದಾಗ, ಕೈಗಾರಿಕೆಗಳು ಮತ್ತು ವ್ಯವಹಾರಗಳಿಗೆ ಅನುಕೂಲಕರ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಬಹುದು. ಇಂದು, ಉನ್ನತ ಹೂಡಿಕೆದಾರರು ಮಧ್ಯಪ್ರದೇಶಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ, ಮತ್ತು ಅವರು ಇಲ್ಲಿ ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲು ಬಯಸುತ್ತಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಮಧ್ಯಪ್ರದೇಶವು ಕೈಗಾರಿಕಾ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಲಿದೆ ಎಂದು ನಾನು ನಂಬುತ್ತೇನೆ.

ನನ್ನ ಕುಟುಂಬ ಸದಸ್ಯರೇ,

ಇಂದಿನ ʻನವ ಭಾರತʼವು ಕ್ಷಿಪ್ರ ಪರಿವರ್ತನೆಗೆ ಒಳಗಾಗುತ್ತಿದೆ. ಗುಲಾಮ ಮನಸ್ಥಿತಿಯಿಂದ ಮುಕ್ತಿ ಹೊಂದುವ ಬಗ್ಗೆ ಮತ್ತು 'ಸಬ್‌ ಕಾ ಪ್ರಯಾಸ್' (ಎಲ್ಲರ ಪ್ರಯತ್ನಗಳು) ಮಹತ್ವದ ಬಗ್ಗೆ ನಾನು ಕೆಂಪು ಕೋಟೆಯಿಂದ ವಿವರವಾಗಿ ಚರ್ಚಿಸಿದ್ದು ನಿಮಗೆ ನೆನಪಿರಬಹುದು. ಭಾರತವು ಗುಲಾಮ ಮನಸ್ಥಿತಿಯನ್ನು ಮೀರಿ ತನ್ನ ಸ್ವಾತಂತ್ರ್ಯದ ಬಗ್ಗೆ ಹೆಮ್ಮೆಯ ಭಾವನೆಯೊಂದಿಗೆ ಪ್ರಗತಿ ಸಾಧಿಸಲು ಪ್ರಾರಂಭಿಸಿದೆ ಎಂದು ನೋಡಲು ನಾನು ಇಂದು ತುಂಬಾ ಹೆಮ್ಮೆಪಡುತ್ತೇನೆ. ಯಾವುದೇ ದೇಶವು ಅಂತಹ ನಿರ್ಧಾರವನ್ನು ಮಾಡಿದಾಗ, ಅದರ ರೂಪಾಂತರ ಪ್ರಾರಂಭವಾಗುತ್ತದೆ. ಜಿ-20 ಶೃಂಗಸಭೆಯಲ್ಲಿ ನೀವು ಇದರ ಒಂದು ನೋಟವನ್ನು ನೋಡಿದ್ದೀರಿ. 'ಜಿ 20' ಎಂಬ ಪದವು ಪ್ರತಿ ಹಳ್ಳಿಯ ಮಕ್ಕಳಲ್ಲಿ ಹೆಮ್ಮೆಯಿಂದ ಪ್ರತಿಧ್ವನಿಸುತ್ತಿದೆ. ಜಿ-20 ಶೃಂಗಸಭೆಯನ್ನು ಭಾರತ ಹೇಗೆ ಯಶಸ್ವಿಯಾಗಿ ಆಯೋಜಿಸಿತು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಈಗ ಹೇಳಿ, ನನ್ನ ಸ್ನೇಹಿತರೇ, ನಿಮ್ಮ ಕೈಗಳನ್ನು ಎತ್ತಿ ನನಗೆ ಉತ್ತರಿಸಿ, ಹಿಂದೆ ಇರುವವರು ಸಹ ಪ್ರತಿಕ್ರಿಯಿಸುತ್ತಾರೆ. ಜಿ 20 ಶೃಂಗಸಭೆಯ ಯಶಸ್ಸಿನ ಬಗ್ಗೆ ನಿಮಗೆ ಹೆಮ್ಮೆ ಇದೆಯೇ ಅಥವಾ ಇಲ್ಲವೇ? ನಿಮಗೆ ಹೆಮ್ಮೆ ಎನಿಸಿದೆಯೇ ಅಥವಾ ಇಲ್ಲವೇ? ದೇಶ ಹೆಮ್ಮೆ ಪಡುತ್ತಿದೆಯೇ ಅಥವಾ ಇಲ್ಲವೇ? ನಿಮ್ಮ ತಲೆಯನ್ನು ಮೇಲೆತ್ತಿ ನಡೆಯುವಂತಾಗಿದೆಯೇ ಅಥವಾ ಇಲ್ಲವೇ? ನಿಮ್ಮ ಎದೆ ಹೆಮ್ಮೆಯಿಂದ ಉಬ್ಬಿದೆಯೇ ಅಥವಾ ಇಲ್ಲವೇ?

ನನ್ನ ಪ್ರೀತಿಯ ಕುಟುಂಬ ಸದಸ್ಯರೇ,

ಇಂದು ನೀವು ಹೊಂದಿರುವ ಸಾಧನೆಯ ಪ್ರಜ್ಞೆ ಇಡೀ ದೇಶದ ಭಾವನೆಯಾಗಿದೆ. ಜಿ-20 ಶೃಂಗಸಭೆಯ ಯಶಸ್ಸು, ಈ ಮಹತ್ವದ ಸಾಧನೆ, ಇದು ಯಾರಿಗೆ ಸೇರಿದೆ? ಇದು ಯಾರ ಶ್ರೇಯಸ್ಸು? ಅದು ಯಾರಿಗೆ ಸೇರಿದೆ? ಅದನ್ನು ಪ್ರದರ್ಶಿಸಿದವರು ಯಾರು? ಅದನ್ನು ತೋರಿಸಿದವರು ಯಾರು? ಇದು ಮೋದಿ ಮಾತ್ರವಲ್ಲ, ನೀವೆಲ್ಲರೂ. ಅದು ನಿಮ್ಮ ಸಾಮರ್ಥ್ಯ. ಇದು 1.4 ಶತಕೋಟಿ ಭಾರತೀಯರ ಯಶಸ್ಸು. ಇದು ಭಾರತದ ಸಾಮೂಹಿಕ ಶಕ್ತಿಗೆ ಪುರಾವೆಯಾಗಿದೆ. ಈ ಶೃಂಗಸಭೆಯ ಸಮಯದಲ್ಲಿ, ಪ್ರಪಂಚದಾದ್ಯಂತದ ವಿದೇಶಿ ಅತಿಥಿಗಳು ಭಾರತಕ್ಕೆ ಬಂದರು, ಮತ್ತು ಅವರು ಈ ರೀತಿಯ ಕಾರ್ಯಕ್ರಮವನ್ನಜು ಹಿಂದೆಂದೂ ನೋಡಿಲ್ಲ ಎಂದು ಹೇಳುತ್ತಿದ್ದರು. ಭಾರತವು ದೇಶದ ವಿವಿಧ ನಗರಗಳಲ್ಲಿ ವಿದೇಶಿ ಅತಿಥಿಗಳನ್ನು ಸ್ವಾಗತಿಸಿತು, ಅವರಿಗೆ ಭಾರತದ ಸ್ಥಳಗಳನ್ನು ತೋರಿಸಿತು ಮತ್ತು ಅವರು ಭಾರತದ ವೈವಿಧ್ಯತೆ, ಪರಂಪರೆ ಮತ್ತು ಸಮೃದ್ಧಿಯಿಂದ ಆಳವಾಗಿ ಪ್ರಭಾವಿತರಾದರು. ಮಧ್ಯಪ್ರದೇಶದಲ್ಲಿಯೂ ನಾವು ಭೋಪಾಲ್, ಇಂದೋರ್ ಮತ್ತು ಖಜುರಾಹೊದಲ್ಲಿ ಜಿ-20 ಸಭೆಗಳನ್ನು ನಡೆಸಿದ್ದೇವೆ, ಮತ್ತು ಆ ಸಭೆಗಳಲ್ಲಿ ಭಾಗವಹಿಸಿದ ಜನರು ನಿಮ್ಮನ್ನು ಹೊಗಳುತ್ತಿದ್ದಾರೆ ಮತ್ತು ಅವರು ನಿಮ್ಮ ಸ್ತುತಿಯನ್ನು ಹಾಡುತ್ತಿದ್ದಾರೆ. ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನೀವು ಮಧ್ಯಪ್ರದೇಶದ ಸಾಂಸ್ಕೃತಿಕ, ಪ್ರವಾಸೋದ್ಯಮ, ಕೃಷಿ ಮತ್ತು ಕೈಗಾರಿಕಾ ಸಾಮರ್ಥ್ಯಗಳನ್ನು ಜಗತ್ತಿಗೆ ಪ್ರದರ್ಶಿಸಿದ್ದೀರಿ. ಇದು ಜಾಗತಿಕ ವೇದಿಕೆಯಲ್ಲಿ ಮಧ್ಯಪ್ರದೇಶದ ಚಿತ್ರಣವನ್ನು ಉತ್ತಮಗೊಳಿಸಿದೆ. ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಾನು ಶಿವರಾಜ್ ಅವರು ಮತ್ತು ಅವರ ಇಡೀ ತಂಡವನ್ನು ಶ್ಲಾಘಿಸುತ್ತೇನೆ.

ನನ್ನ ಕುಟುಂಬ ಸದಸ್ಯರೇ,

ಒಂದೆಡೆ, ಇಂದಿನ ಭಾರತವು ವಿಶ್ವದೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ನಮ್ಮ ಭಾರತವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ 'ವಿಶ್ವಮಿತ್ರ'ನಾಗಿ (ಜಾಗತ್ತಿನ ಸ್ನೇಹಿತ) ಹೊರಹೊಮ್ಮುತ್ತಿದೆ. ಮತ್ತೊಂದೆಡೆ, ದೇಶ ಮತ್ತು ಸಮಾಜವನ್ನು ವಿಭಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆಲವು ಗುಂಪುಗಳಿವೆ. ಅವರು ʻಇಂಡಿಯಾʼ ಮೈತ್ರಿಕೂಟವನ್ನು ರಚಿಸಿದ್ದಾರೆ. ಕೆಲವರು ಈ ʻಇಂಡಿಯಾʼ ಮೈತ್ರಿಕೂಟವನ್ನು 'ಘಮಾಂಡಿಯಾ ಘಟಬಂಧನ್' (ದುರಹಂಕಾರಿ ಒಕ್ಕೂಟ) ಎಂದು ಕರೆಯುತ್ತಾರೆ. ಅವರ ನಾಯಕ ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ, ಮತ್ತು ನಾಯಕತ್ವದ ಬಗ್ಗೆ ಗೊಂದಲವಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಅವರು ಮುಂಬೈನಲ್ಲಿ ಸಭೆ ನಡೆಸಿದರು. ಆ ಸಭೆಯಲ್ಲಿ, ಈ ʻಘಮಾಂಡಿಯಾ ಘಟಬಂಧನ್' ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಅವರು ತಮ್ಮ ಕಾರ್ಯತಂತ್ರ ಮತ್ತು ತಂತ್ರಗಳನ್ನು ರೂಪಿಸಿದ್ದಾರೆ ಎಂದು ತಿಳಿದಿದ್ದೇನೆ. ಅವರು ಗುಪ್ತ ಕಾರ್ಯಸೂಚಿಯನ್ನು ಸಹ ಸಿದ್ಧಪಡಿಸಿದ್ದಾರೆ, ಮತ್ತು ಈ ಕಾರ್ಯಸೂಚಿಯಾದರೂ ಏನು? ಇದು ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡುವುದು 'ಘಮಾಂಡಿಯಾ ಘಟಬಂಧನ್' ನೀತಿಯಾಗಿದೆ, ʻಇಂಡಿಯಾʼ ಮೈತ್ರಿಕೂಟದ ನೀತಿಯಾಗಿದೆ. ಭಾರತೀಯ ಜನರ ನಂಬಿಕೆಯ ಮೇಲೆ ದಾಳಿ ಮಾಡುವುದು ಇಂಡಿಯಾ ಮೈತ್ರಿಕೂಟದ ನಿರ್ಧಾರವಾಗಿದೆ. ಸಾವಿರಾರು ವರ್ಷಗಳಿಂದ ಭಾರತವು ಸಂಪರ್ಕ ಹೊಂದಿರುವ ಮೌಲ್ಯಗಳು, ಅದರ ಸಂಸ್ಕೃತಿ ಮತ್ತು ಅದರ ಸಂಪ್ರದಾಯಗಳನ್ನು ನಾಶಪಡಿಸುವುದು ʻಇಂಡಿಯಾʼ  ಮೈತ್ರಿಕೂಟದ ಉದ್ದೇಶವಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು, ಮಹಿಳೆಯರ ಉನ್ನತಿಗಾಗಿ ಅಭಿಯಾನವನ್ನು ಪ್ರಾರಂಭಿಸಲು ಮತ್ತು ರಾಷ್ಟ್ರದ ಪರಂಪರೆಯನ್ನು ರಕ್ಷಿಸಲು ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರನ್ನು ಪ್ರೇರೇಪಿಸಿದ ಪ್ರಾಚೀನ ಸಂಸ್ಕೃತಿಯನ್ನು ಕೊನೆಗೊಳಿಸಲು ಈ ಇಂಡಿಯಾ ಮೈತ್ರಿಕೂಟ, ಈ 'ಘಮಾಂಡಿಯಾ ಘಟಬಂಧನ್' ದೃಢನಿಶ್ಚಯ ಮಾಡಿದೆ. ಈ 'ಘಮಾಂಡಿಯಾ ಘಟಬಂಧನ್', ಈ ʻಇಂಡಿಯಾʼ ಮೈತ್ರಿಕೂಟವು ಕಾಲಾತೀತ ಸನಾತನ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಕೊನೆಗೊಳಿಸುವ ಸಂಕಲ್ಪದೊಂದಿಗೆ ರಚನೆಗೊಂಡಿದೆ.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ತನ್ನ ಝಾನ್ಸಿಯನ್ನು ಬ್ರಿಟಿಷರಿಗೆ ಬಿಟ್ಟುಕೊಡುವುದಿಲ್ಲ ಎಂದು ಘೋಷಿಸಿದಾಗ ಅದು ಸನಾತನ ಮೌಲ್ಯಗಳ ಶಕ್ತಿಯಾಗಿತ್ತು. ತಮ್ಮ ಜೀವನದುದ್ದಕ್ಕೂ ಸನಾತನವನ್ನು ಅಪ್ಪಿಕೊಂಡ ಮತ್ತು ಭಗವಾನ್ ಶ್ರೀ ರಾಮನಿಂದ ಸ್ಫೂರ್ತಿ ಪಡೆದ ಮಹಾತ್ಮ ಗಾಂಧಿಯವರ ಕೊನೆಯ ಮಾತುಗಳು "ಹೇ ರಾಮ್!" ಅಸ್ಪೃಶ್ಯತೆಯ ವಿರುದ್ಧ ಆಜೀವ ಚಳವಳಿಯನ್ನು ಮುನ್ನಡೆಸಲು ಅವರನ್ನು ಪ್ರೇರೇಪಿಸಿದ್ದು ಅದೇ ಸನಾತನ. ಆದರೂ, ಈ ಇಂಡಿಯಾ ಮೈತ್ರಿಕೂಟದ ವ್ಯಕ್ತಿಗಳು, ಈ 'ಘಮಾಂಡಿಯಾ ಘಟಬಂಧನ್'ನ ವ್ಯಕ್ತಿಗಳು ಆ ಸನಾತನ ಸಂಪ್ರದಾಯವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ವಿವಿಧ ಸಾಮಾಜಿಕ ದುಷ್ಕೃತ್ಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಲು ಸ್ವಾಮಿ ವಿವೇಕಾನಂದರನ್ನು ಪ್ರೇರೇಪಿಸಿದ ಸನಾತನ ಮೌಲ್ಯಗಳು ಈಗ ʻಇಂಡಿಯಾʼ ಮೈತ್ರಿಕೂಟದ ಗುರಿಯಾಗಿವೆ. ಭಾರತದ ಸ್ವಾತಂತ್ರ್ಯದ ಧ್ವಜವನ್ನು ಎತ್ತಿ ಹಿಡಿಯಲು, ಗಣೇಶ ಪೂಜೆಯನ್ನು ಸ್ವಾತಂತ್ರ್ಯ ಚಳವಳಿಯೊಂದಿಗೆ ಸಂಪರ್ಕಿಸಲು ಮತ್ತು ಸಾರ್ವಜನಿಕ ಗಣೇಶ ಹಬ್ಬಗಳ ಸಂಪ್ರದಾಯವನ್ನು ಸ್ಥಾಪಿಸಲು ಲೋಕಮಾನ್ಯ ತಿಲಕರನ್ನು ಪ್ರೇರೇಪಿಸಿದ ಅದೇ ಸನಾತನ ಮೌಲ್ಯಗಳನ್ನು ನಾಶಪಡಿಸಲು ಈ ʻಇಂಡಿಯಾʼ ಮೈತ್ರಿಕೂಟ ಬದ್ದವಾಗಿದೆ.

ಸ್ನೇಹಿತರೇ,

ಇವು ನಮ್ಮ ಸನಾತನ ಮೌಲ್ಯಗಳ ಶಕ್ತಿಗಳು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನೇಣುಗಂಬವನ್ನು ಎದುರಿಸಿದ ಧೈರ್ಯಶಾಲಿ ಆತ್ಮಗಳು, "ನನ್ನ ಮುಂದಿನ ಜನ್ಮದಲ್ಲಿ, ನಾನು ಮತ್ತೆ ಭಾರತ ಮಾತೆಯ ಮಡಿಲಲ್ಲಿ ಜನಿಸಲು ಬಯಸುತ್ತೇನೆ" ಎಂದು ಹೇಳುತ್ತಿದ್ದರು. ಮಹರ್ಷಿ ವಾಲ್ಮೀಕಿಯ ಅಡಿಪಾಯವಾದ ಮತ್ತು ಸಾವಿರಾರು ವರ್ಷಗಳಿಂದ ಭಾರತವನ್ನು ಹಿಡಿದಿಟ್ಟಿರುವ ಸಂತ ರವಿದಾಸರನ್ನು ಪ್ರತಿನಿಧಿಸುವ ಅದೇ ಸನಾತನ ಮೌಲ್ಯಗಳು ಮಹರ್ಷಿ ಶಬರಿಯನ್ನು ಸೂಚಿಸುತ್ತವೆ. ಆದರೂ, ಇಂಡಿಯಾ ಮೈತ್ರಿಕೂಟವಾಗಿ ಒಗ್ಗೂಡಿದ ಈ ಜನರು ಈ ಸನಾತನ ಮೌಲ್ಯಗಳನ್ನು ತೊಡೆದುಹಾಕಲು ಬಯಸುತ್ತಿದ್ದಾರೆ. ಇಂದು, ಈ ವ್ಯಕ್ತಿಗಳು ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ, ಮತ್ತು ಅವರು ಬಹಿರಂಗವಾಗಿ ದಾಳಿಯನ್ನು ಪ್ರಾರಂಭಿಸಿದ್ದಾರೆ. ಭವಿಷ್ಯದಲ್ಲಿ, ಅವರು ನಮ್ಮ ಮೇಲೆ ತಮ್ಮ ದಾಳಿಯನ್ನು ಹೆಚ್ಚಿಸುತ್ತಾರೆ. ಪ್ರತಿಯೊಬ್ಬ ಸನಾತನಿ, ಈ ದೇಶದ ಪ್ರತಿಯೊಬ್ಬ ಪ್ರೇಮಿ, ದೇಶದ ಮಣ್ಣಿನ ಪ್ರತಿಯೊಬ್ಬ ಅಭಿಮಾನಿ ಮತ್ತು ಈ ರಾಷ್ಟ್ರವನ್ನು ಪ್ರೀತಿಸುವ ಅಸಂಖ್ಯಾತ ಜನರು ಜಾಗರೂಕರಾಗಿರಬೇಕು. ಅವರು ಸನಾತನವನ್ನು ನಿರ್ಮೂಲನೆ ಮಾಡಲು ಮತ್ತು ಈ ದೇಶವನ್ನು ಮತ್ತೊಂದು ಸಾವಿರ ವರ್ಷಗಳ ಗುಲಾಮಗಿರಿಗೆ ದೂಡಲು ಬಯಸುತ್ತಾರೆ. ಆದರೆ ಒಟ್ಟಾಗಿ, ನಾವು ಈ ಶಕ್ತಿಗಳನ್ನು ತಡೆಯಬೇಕು ಮತ್ತು ನಮ್ಮ ಸಂಘಟನೆಯ ಬಲ ಹಾಗೂ ನಮ್ಮ ಏಕತೆಯಿಂದ ಅವರ ಯೋಜನೆಗಳನ್ನು ವಿಫಲಗೊಳಿಸಬೇಕು.

ನನ್ನ ಕುಟುಂಬ ಸದಸ್ಯರೇ,

ಭಾರತೀಯ ಜನತಾ ಪಕ್ಷವು ದೇಶಭಕ್ತಿ, ಜನಶಕ್ತಿಯ ಆರಾಧನೆ ಮತ್ತು ಸಾರ್ವಜನಿಕ ಸೇವೆಯ ರಾಜಕೀಯಕ್ಕೆ ಸಮರ್ಪಿತವಾಗಿದೆ. ಸಮಾಜದಲ್ಲಿ ಅವಕಾಶ ವಂಚಿತರಿಗೆ ಆದ್ಯತೆ ನೀಡುವುದು ಬಿಜೆಪಿಯ ಆಡಳಿತದ ಮೂಲಭೂತ ತತ್ವವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಸಹಾನುಭೂತಿಯುಳ್ಳ ಸರ್ಕಾರ. ಅದು ದೆಹಲಿ ಅಥವಾ ಭೋಪಾಲ್ ಆಗಿರಲಿ, ಇಂದು, ಸರ್ಕಾರವು ನಿಮ್ಮ ಮನೆಗಳನ್ನು ತಲುಪಲು ಮತ್ತು ನಿಮಗೆ ಸೇವೆ ಸಲ್ಲಿಸಲು ಶ್ರಮಿಸುತ್ತದೆ. ಕೋವಿಡ್ -19 ಸಾಂಕ್ರಾಮಿಕದ ತೀವ್ರ ಬಿಕ್ಕಟ್ಟು ಎದುರಿಸಿದಾಗ, ಸರ್ಕಾರವು ಕೋಟ್ಯಂತರ ನಾಗರಿಕರಿಗೆ ಉಚಿತ ಲಸಿಕೆ ನೀಡಿತು. ಸಂತೋಷ ಮತ್ತು ದುಃಖ ಎರಡರಲ್ಲೂ ನಾವು ನಿಮ್ಮ ಸಂಗಾತಿಗಳು. ನಮ್ಮ ಸರ್ಕಾರವು 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡಿತು. ಬಡವರ ಒಲೆ ಉರಿಯುತ್ತಲೇ ಇರಬೇಕು ಮತ್ತು ಅವರ ಹೊಟ್ಟೆ ಖಾಲಿಯಾಗಬಾರದು. ಬಡ, ದಲಿತ, ಹಿಂದುಳಿದ ಅಥವಾ ಬುಡಕಟ್ಟು ಕುಟುಂಬದ ಯಾವುದೇ ತಾಯಿ ಹಸಿದ ಮಗುವಿನೊಂದಿಗೆ ಮಲಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ನಮ್ಮ ಪ್ರಯತ್ನಗಳು ಹೊಂದಿದ್ದವು. ಆದ್ದರಿಂದ, ಬಡವರ ಈ ಮಗ ಬಡವರ ಪಡಿತರದ ಕಾಳಜಿ ಮತ್ತು ಬಡ ತಾಯಿಯ ಚಿಂತೆಗಳ ಬಗ್ಗೆ ಯೋಚಿಸಿದನು. ಮತ್ತು, ನಿಮ್ಮ ಆಶೀರ್ವಾದದಿಂದ, ನಾನು ಇಂದಿಗೂ ಈ ಜವಾಬ್ದಾರಿಯನ್ನು ಪೂರೈಸುತ್ತಿದ್ದೇನೆ.

ನನ್ನ ಕುಟುಂಬ ಸದಸ್ಯರೇ,

ಮಧ್ಯಪ್ರದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಬೇಕು ಮತ್ತು ಮಧ್ಯಪ್ರದೇಶದ ಪ್ರತಿ ಕುಟುಂಬದ ಜೀವನವನ್ನು ಸುಲಭಗೊಳಿಸಬೇಕು ಮತ್ತು ಪ್ರತಿ ಮನೆ ಬಾಗಿಲಿಗೆ ಸಮೃದ್ಧಿಯನ್ನು ಕೊಂಡೊಯ್ಯಬೇಕು ಎಂಬುದು ನಮ್ಮ ನಿರಂತರ ಪ್ರಯತ್ನವಾಗಿದೆ. ಮೋದಿಯವರ ಭರವಸೆಯ ಸಾಧನೆಯ ಇತಿಹಾಸ ನಿಮ್ಮ ಮುಂದೆ ಇದೆ. ಅವರ ಸಾಧನೆಯ ಇತಿಹಾಸವನ್ನು ನೆನಪಿಸಿಕೊಳ್ಳಿ ಮತ್ತು ಸಾಧನೆಯ ಇತಿಹಾಸವನ್ನು ನೋಡಿ. ಬಡವರಿಗೆ ಕಾಂಕ್ರೀಟ್ ಮನೆ ನೀಡುವ ಭರವಸೆಯನ್ನು ಮೋದಿ ನೀಡಿದ್ದರು. ಇಂದು ಮಧ್ಯಪ್ರದೇಶ ಒಂದರಲ್ಲೇ 40 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಕಾಂಕ್ರೀಟ್ ಮನೆಗಳನ್ನು ಪಡೆದುಕೊಂಡಿವೆ. ನಾವು ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ಖಾತರಿಪಡಿಸಿದ್ದೇವೆ ಮತ್ತು ನಾವು ಆ ಭರವಸೆಯನ್ನು ಪೂರೈಸಿದ್ದೇವೆ. ನಾವು ಕಡು ಬಡವರಿಗೆ ಉಚಿತ ಆರೋಗ್ಯ ರಕ್ಷಣೆಯನ್ನು ಖಾತರಿಪಡಿಸಿದ್ದೇವೆ. ಪ್ರತಿ ಮನೆಯಲ್ಲೂ ಬ್ಯಾಂಕ್ ಖಾತೆ ತೆರೆಯುವ ಭರವಸೆ ನೀಡಿದ್ದೇವೆ. ತಾಯಂದಿರು ಮತ್ತು ಸಹೋದರಿಯರಿಗೆ ಹೊಗೆ ಮುಕ್ತ ಅಡುಗೆಮನೆಗಳನ್ನು ನಾವು ಖಾತರಿಪಡಿಸಿದ್ದೇವೆ. ಇಂದು, ನಿಮ್ಮ 'ಸೇವಕ' ಮೋದಿ ಈ ಎಲ್ಲಾ ಭರವಸೆಗಳನ್ನು ಪೂರೈಸುತ್ತಿದ್ದಾರೆ. ನಮ್ಮ ಸಹೋದರಿಯರ ಹಿತಾಸಕ್ತಿಗಳನ್ನು ರಕ್ಷಿಸಲು ನಮ್ಮ ಸರ್ಕಾರ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ಇದರರ್ಥ ʻಉಜ್ವಲ ಯೋಜನೆʼಯ ಫಲಾನುಭವಿಗಳು 400 ರೂ.ಗಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಪಡೆಯುತ್ತಿದ್ದಾರೆ. ಉಜ್ವಲ ಯೋಜನೆ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಜೀವವನ್ನು ಹೇಗೆ ಉತ್ತಮಪಡಿಸುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಒಬ್ಬ ಸಹೋದರಿ ಅಥವಾ ಮಗಳು ಹೊಗೆಯ ನಡುವೆ ಅಡುಗೆ ಮಾಡಬೇಕಾಗಿಲ್ಲ ಎಂಬುದು ನಮ್ಮ ಪ್ರಯತ್ನವಾಗಿದೆ. ಅದಕ್ಕಾಗಿಯೇ ನಿನ್ನೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ದೇಶದಲ್ಲಿ ಹೆಚ್ಚುವರಿಯಾಗಿ 75 ಲಕ್ಷ ಸಹೋದರಿಯರು ಉಚಿತ ಅನಿಲ ಸಂಪರ್ಕವನ್ನು ಪಡೆಯಲಿದ್ದಾರೆ. ಯಾವುದೇ ಸಹೋದರಿಯನ್ನು ಅನಿಲ ಸಂಪರ್ಕದಿಂದ ಹೊರಗಿಡಲಾಗುವುದಿಲ್ಲ; ಇದು ನಮ್ಮ ಗುರಿ. ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸಿದ ನಂತರ ಕೆಲವು ಕುಟುಂಬಗಳು ವಿಸ್ತರಣೆಗೊಂಡಿವೆ, ಮತ್ತು ಕೆಲವು ಕುಟುಂಬಗಳು ವಿಭಜಿತವಾಗಿದೆ, ಆದ್ದರಿಂದ ಮತ್ತೊಂದು ಕುಟುಂಬಕ್ಕೆ ಅನಿಲ ಸಂಪರ್ಕದ ಅಗತ್ಯವಿದೆ. ಪಟ್ಟಿಯಲ್ಲಿ ಹೆಸರು ಇರುವವರಿಗಾಗಿ ನಾವು \ಹೊಸ ಯೋಜನೆಯನ್ನು ತಂದಿದ್ದೇವೆ.

ಸ್ನೇಹಿತರೇ,

ನಾವು ನೀಡಿದ ಪ್ರತಿಯೊಂದು ಖಾತರಿಯನ್ನು ಪೂರೈಸಲು ನಾವು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ಮಧ್ಯವರ್ತಿಗಳ ಹಾವಳಿ ಕೊನೆಗೊಳಿಸುವುದಾಗಿ ಮತ್ತು ಪ್ರತಿಯೊಬ್ಬ ಫಲಾನುಭವಿಯು ಸಂಪೂರ್ಣ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿ ನಾವು ಭರವಸೆ ನೀಡಿದ್ದೇವೆ. ಇದಕ್ಕೆ ಒಂದು ಉದಾಹರಣೆ ʻಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ. ಈ ಯೋಜನೆಯಡಿ, ಪ್ರತಿಯೊಬ್ಬ ರೈತನು ನೇರವಾಗಿ 28,000 ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ಪಡೆಯುತ್ತಾನೆ. ಈ ಯೋಜನೆಗಾಗಿ ಸರ್ಕಾರ 2.6 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಸ್ನೇಹಿತರೇ,

ಕಳೆದ 9 ವರ್ಷಗಳಲ್ಲಿ, ಕೇಂದ್ರ ಸರ್ಕಾರವು ರೈತರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅವರಿಗೆ ಅಗ್ಗದ ರಸಗೊಬ್ಬರಗಳನ್ನು ಒದಗಿಸಲು ಪ್ರಯತ್ನಗಳನ್ನು ಮಾಡಿದೆ. ಈ ಅವಧಿಯಲ್ಲಿ, ನಮ್ಮ ಸರ್ಕಾರವು ಸರ್ಕಾರದ ಖಜಾನೆಯಿಂದ 10 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದೆ. ಇಂದು, ರೈತರು ತಮ್ಮ ಹೊಲಗಳಲ್ಲಿ ಬಳಸುವ ʻಯೂರಿಯಾʼ ಚೀಲವನ್ನು ಅಮೆರಿಕದಲ್ಲಿ 3000 ರೂ.ಗೆ ಮಾರಾಟ ಮಾಡಲಾಗುತ್ತದೆ. ಆದಾಗ್ಯೂ, ಅದೇ ಚೀಲವನ್ನು ನನ್ನ ಸಹ ಭಾರತೀಯ ರೈತರಿಗೆ ಕೇವಲ 300 ರೂಪಾಯಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ ಮತ್ತು ಇದಕ್ಕಾಗಿ ಸರ್ಕಾರವು ಖಜಾನೆಯಿಂದ ಹತ್ತು ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ನೆನಪಿಡಿ, ಈ ಹಿಂದೆ, ಯೂರಿಯಾ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳು ನಡೆದಿದ್ದವು ಮತ್ತು ರೈತರು ಯೂರಿಯಾ ಪಡೆಯಲು ಲಾಠಿ ಪ್ರಹಾರವನ್ನು ಎದುರಿಸಬೇಕಾಗಿತ್ತು. ಈಗ, ಅದೇ ಯೂರಿಯಾ ಎಲ್ಲೆಡೆ ಬಹಳ ಸುಲಭವಾಗಿ ಲಭ್ಯವಿದೆ.

ನನ್ನ ಕುಟುಂಬ ಸದಸ್ಯರೇ,

ನೀರಾವರಿಯ ಮಹತ್ವವನ್ನು ಬುಂದೇಲ್‌ಖಂಡದ ಜನರು ಇತರರಿಗಿಂತ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬುಂದೇಲ್‌ಖಂಡ್‌ನಲ್ಲಿ ಹಲವಾರು ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡಿದೆ. ʻಕೆನ್-ಬೆಟ್ವಾ ಲಿಂಕ್ ಕಾಲುವೆʼಯು ಈ ಪ್ರದೇಶದ ಇತರ ನೀರಾವರಿ ಯೋಜನೆಗಳೊಂದಿಗೆ, ಲಕ್ಷಾಂತರ ರೈತರಿಗೆ ಜೀವಿತಾವಧಿಯಲ್ಲಿ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗೂ ಹೆಚ್ಚು ಪ್ರಯೋಜನಕಾರಿಯಾಗಲಿದೆ. ನಮ್ಮ ಸಹೋದರಿಯರ ಪ್ರತಿಯೊಂದು ಮನೆಗೂ ಕೊಳವೆ ನೀರನ್ನು ಒದಗಿಸಲು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಕೇವಲ ನಾಲ್ಕು ವರ್ಷಗಳಲ್ಲಿ, ದೇಶಾದ್ಯಂತ ಸುಮಾರು 10 ಕೋಟಿ ಹೊಸ ಕುಟುಂಬಗಳಿಗೆ ಪೈಪ್ ಲೈನ್‌ಗಳ ಮೂಲಕ ನೀರನ್ನು ಒದಗಿಸಲಾಗಿದೆ. ಮಧ್ಯಪ್ರದೇಶ ಒಂದರಲ್ಲೇ 65 ಲಕ್ಷ ಕುಟುಂಬಗಳಿಗೆ ಕೊಳವೆ ಮೂಲಕ ನೀರು ಪೂರೈಸಲಾಗಿದೆ. ಇದು ನನ್ನ ಬುಂದೇಲ್‌ಖಂಡದ ತಾಯಂದಿರು ಮತ್ತು ಸಹೋದರಿಯರಿಗೆ ಗಮನಾರ್ಹ ಪ್ರಯೋಜನಗಳನ್ನು ತಂದಿದೆ. ಬುಂದೇಲ್‌ಖಂಡ್‌ನಲ್ಲಿ ʻಅಟಲ್ ಭೂಜಲ್ ಯೋಜನೆʼ ಅಡಿಯಲ್ಲಿ, ನೀರಿನ ಮೂಲಗಳನ್ನು ಸೃಷ್ಟಿಸಲು ಸಾಕಷ್ಟು ಕೆಲಸ ಮಾಡಲಾಗುತ್ತಿದೆ.

ಸ್ನೇಹಿತರೇ,

ಈ ಪ್ರದೇಶದ ಅಭಿವೃದ್ಧಿಗೆ ಮತ್ತು ಅದರ ಹೆಮ್ಮೆಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಈ ವರ್ಷ, ಅಕ್ಟೋಬರ್ 5 ರಂದು, ನಾವು ರಾಣಿ ದುರ್ಗಾವತಿ ಜೀ ಅವರ 500 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತೇವೆ. ಡಬಲ್ ಎಂಜಿನ್ ಸರ್ಕಾರವು ಈ ಶುಭ ಸಂದರ್ಭವನ್ನು ಬಹಳ ಉತ್ಸಾಹದಿಂದ ಆಚರಿಸಲು ಯೋಜಿಸುತ್ತಿದೆ.

ಸ್ನೇಹಿತರೇ,

ನಮ್ಮ ಸರ್ಕಾರದ ಪ್ರಯತ್ನಗಳು ಬಡವರು, ದಲಿತರು ಮತ್ತು ಬುಡಕಟ್ಟು ಸಮುದಾಯಗಳಿಗೆ ಹೆಚ್ಚು ಪ್ರಯೋಜನವನ್ನು ನೀಡಿವೆ. ಅಂಚಿನಲ್ಲಿರುವವರಿಗೆ ಆದ್ಯತೆ ನೀಡುವ ಮಾದರಿಯಾ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಇಂದು ಜಗತ್ತಿಗೆ ದಾರಿ ತೋರಿಸುತ್ತಿದೆ. ಭಾರತವು ಈಗ ಜಾಗತಿಕವಾಗಿ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗುವತ್ತ ಕೆಲಸ ಮಾಡುತ್ತಿದೆ. ಭಾರತವು ವಿಶ್ವದ ಅಗ್ರ ಮೂರು ಸ್ಥಾನಗಳಲ್ಲಿಸುವಲ್ಲಿ ಮಧ್ಯಪ್ರದೇಶವು ಮಹತ್ವದ ಪಾತ್ರವನ್ನು ಹೊಂದಿದೆ ಮತ್ತು ಮಧ್ಯಪ್ರದೇಶವು ಆ ಪಾತ್ರವನ್ನು ಪೂರೈಸುತ್ತದೆ. ಇದು ಈ ಪ್ರದೇಶದ ರೈತರು, ಕೈಗಾರಿಕೆಗಳು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಮುಂದಿನ ಐದು ವರ್ಷಗಳು ಮಧ್ಯಪ್ರದೇಶದ ಅಭಿವೃದ್ಧಿಗೆ ಹೊಸ ಎತ್ತರವನ್ನು ತರಲಿವೆ. ನಾವು ಇಂದು ಪ್ರಾರಂಭಿಸಿದ ಯೋಜನೆಗಳು ಮಧ್ಯಪ್ರದೇಶದ ತ್ವರಿತ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ. ಅಭಿವೃದ್ಧಿಯ ಆಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ, ನಿಮ್ಮ ಉಪಸ್ಥಿತಿಯಿಂದ ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಮತ್ತು ನಿಮ್ಮ ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮೆಲ್ಲರಿಗೂ ಅನೇಕಾನೇಕ ಶುಭ ಹಾರೈಕೆಗಳು!

ನನ್ನೊಂದಿಗೆ ನೀವೂ ಹೇಳಿ

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಧನ್ಯವಾದಗಳು.

ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ  ಹಿಂದಿಯಲ್ಲಿತ್ತು.

****

 

 

 



(Release ID: 1958503) Visitor Counter : 116