ಪ್ರಧಾನ ಮಂತ್ರಿಯವರ ಕಛೇರಿ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನ 3ನೇ ಆವೃತ್ತಿಯನ್ನು ಆರಂಭಿಸುವುದಾಗಿ ಘೋಷಿಸಿದ ಪ್ರಧಾನ ಮಂತ್ರಿ


"ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಏಕ್ ಭಾರತ್ ಶ್ರೇಷ್ಠ ಭಾರತದ ದೊಡ್ಡ ಮಾಧ್ಯಮವಾಗಿದೆ"

"ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಕ್ರೀಡಾ ಮಾಧ್ಯಮ ಮೂಲಕ ಸಮಾಜವನ್ನು ಸಶಕ್ತಗೊಳಿಸುವ ಕ್ರೀಡೆಯ ಹೊಸ ಯುಗ ಪ್ರಾರಂಭವಾಗಿದೆ''

"ಕ್ರೀಡೆಯನ್ನು ಈಗ ಆಕರ್ಷಕ ವೃತ್ತಿಯಾಗಿ ನೋಡಲಾಗುತ್ತಿದ್ದು, ಖೇಲೋ ಇಂಡಿಯಾ ಅಭಿಯಾನವು ಅದರಲ್ಲಿ ದೊಡ್ಡ ಪಾತ್ರ ವಹಿಸಿದೆ"

"ರಾಷ್ಟ್ರೀಯ ಶೈಕ್ಷಣಿಕ ನೀತಿಯಡಿಯಲ್ಲಿ ಕ್ರೀಡೆಯನ್ನು ಪಠ್ಯಕ್ರಮದ ಭಾಗವಾಗಿ ಒಂದು ವಿಷಯವಾಗಿ ಪರಿಗಣಿಸಲು ಪ್ರಸ್ತಾಪಿಸಿದೆ"

"ಖೇಲೋ ಇಂಡಿಯಾ ಭಾರತದ ಸಾಂಪ್ರದಾಯಿಕ ಕ್ರೀಡೆಗಳ ಪ್ರತಿಷ್ಠೆಯನ್ನು ಮರುಸ್ಥಾಪಿಸಿದೆ"

“ಭಾರತದ ಪ್ರಗತಿಯು ನಿಮ್ಮ ಪ್ರತಿಭೆ, ನಿಮ್ಮ ಪ್ರಗತಿಯಲ್ಲಿ ಅಡಗಿದೆ. ನೀವು ಭವಿಷ್ಯದ ಚಾಂಪಿಯನ್"

"ಕ್ರೀಡೆಯು ಪಟ್ಟಭದ್ರ ಹಿತಾಸಕ್ತಿಗಳಿಗಿಂತ ಮೇಲೇರುವ ಮೂಲಕ ಸಾಮೂಹಿಕ ಯಶಸ್ಸಿನತ್ತ ನಮ್ಮನ್ನು ಪ್ರೇರೇಪಿಸುತ್ತದೆ"

Posted On: 25 MAY 2023 8:17PM by PIB Bengaluru

ಪಿಐಬಿ ದೆಹಲಿ ಮೇ 25: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023ನ್ನು(KIUG) ಆರಂಭಿಸುವುದಾಗಿ ಘೋಷಿಸಿದರು. 21 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸುವ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,750ಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023 ರ ಆಯೋಜನೆಗಾಗಿ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ. ಉತ್ತರ ಪ್ರದೇಶವು ಇಂದು ಕ್ರೀಡಾ ಪ್ರತಿಭೆಗಳ ಸಂಗಮವಾಗಿದೆ ಎಂದು ಹೇಳಿದರು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ 4,000 ಕ್ರೀಡಾಪಟುಗಳು ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಿಂದ ಬಂದಿದ್ದಾರೆ. ಅವರನ್ನು ವಿಶೇಷವಾಗಿ ರಾಜ್ಯದ ಸಂಸದರು ಸ್ವಾಗತಿಸಿದ್ದಾರೆ ಎಂದರು. ಕಾರ್ಯಕ್ರಮದ ಸಮಾರೋಪ ಸಮಾರಂಭ ತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು. ಭಾರತವು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಮೂರನೇ ಆವೃತ್ತಿಯನ್ನು ಆಯೋಜಿಸುತ್ತಿರುವುದು ಪ್ರಮುಖವಾಗಿದೆ. ಈ ಕಾರ್ಯಕ್ರಮವು ತಂಡ ಮನೋಭಾವದ ಜೊತೆಗೆ 'ಏಕ್ ಭಾರತ್ ಶ್ರೇಷ್ಠ ಭಾರತ'ದ ಮನೋಭಾವವನ್ನು ಬೆಳೆಸಲು ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಹೇಳಿದರು. ವಿವಿಧ ಪ್ರದೇಶಗಳಿಂದ ಬರುವ ಕ್ರೀಡಾಪಟುಗಳು ಪರಸ್ಪರ ಸಂವಾದ ನಡೆಸುತ್ತಾರೆ. ಕಾರ್ಯಕ್ರಮಗಳು ನಡೆಯುವ ಉತ್ತರ ಪ್ರದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದರು. ಖೇಲೋ ಇಂಡಿಯಾ ಗೇಮ್ಸ್ ವಿಶ್ವವಿದ್ಯಾಲಯದಲ್ಲಿ ಭಾಗವಹಿಸುವುದು ಎಲ್ಲ ಕ್ರೀಡಾಪಟುಗಳಿಗೆ ಅಚ್ಚುಮೆಚ್ಚಿನ ಸಂಗತಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಹೆಚ್ಚಿನ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಕ್ರೀಡೆಯ ಹೊಸ ಯುಗ ಪ್ರಾರಂಭವಾಗಿದೆ. ಇದು ಭಾರತವನ್ನು ಕ್ರೀಡೆಯಲ್ಲಿ ದೊಡ್ಡ ಶಕ್ತಿಯನ್ನಾಗಿ ಮಾಡುವುದರ ಜೊತೆಗೆ ಕ್ರೀಡಾ ಮಾಧ್ಯಮದ ಮೂಲಕ ಸಮಾಜವನ್ನು ಸಶಕ್ತಗೊಳಿಸುವ ಯುಗವಾಗಿದೆ. ಕ್ರೀಡೆಗಳ ಬಗ್ಗೆ ಹಿಂದಿನ ಸರ್ಕಾರ ಅಸಡ್ಡೆ ತೋರಿಸಿತ್ತು. ಇದರಿಂದ ಬಡವರು, ಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಭಾಗದ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡುವುದು ಅತ್ಯಂತ ಕಷ್ಟಕರವಾಗಿತ್ತು. ಇದು ವೃತ್ತಿಯಾಗಿ ಸೀಮಿತ ವ್ಯಾಪ್ತಿಯನ್ನು ಹೊಂದಿದ್ದರಿಂದ ಅನೇಕ ಪೋಷಕರು ಕ್ರೀಡೆಗಳನ್ನು ನಿರ್ಲಕ್ಷಿಸುವಂತೆ ಮಾಡಿತು. ಪೋಷಕರಲ್ಲಿ ಕ್ರೀಡೆಯ ಬಗೆಗಿನ ಮನೋಭಾವದಲ್ಲಿ ಭಾರೀ ಬದಲಾವಣೆಯನ್ನು ಇತ್ತೀಚೆಗೆ ಕಾಣಬಹುದು ಎಂದು ಹೇಳಿದರು. ಕ್ರೀಡೆಯನ್ನು ಈಗ ಆಕರ್ಷಕ ವೃತ್ತಿಯಾಗಿ ನೋಡಲಾಗುತ್ತಿದೆ. ಖೇಲೋ ಇಂಡಿಯಾ ಅಭಿಯಾನವು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಹೇಳಿದರು.

ಭಾರತದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸುತ್ತಲಿನ ಹಗರಣಗಳನ್ನು ಪ್ರಧಾನಿ ನೆನಪಿಸಿಕೊಂಡರು, ಇದು ಕ್ರೀಡೆಯ ಬಗ್ಗೆ ಹಿಂದಿನ ಸರ್ಕಾರಗಳ ವರ್ತನೆಗೆ ಉದಾಹರಣೆಯಾಗಿದೆ. ನಂತರ ರಾಜೀವ್ ಗಾಂಧಿ ಅಭಿಯಾನ ಎಂದು ಹೆಸರಿಸಲಾದ ಪಂಚಾಯತ್ ಯುವ ಕ್ರೀಡೆ ಮತ್ತು ಖೇಲ್ ಅಭಿಯಾನದಂತಹ ಯೋಜನೆಗಳಲ್ಲಿ ಪ್ರಾಮಾಣಿಕತೆಯ ಕೊರತೆಯ ಬಗ್ಗೆಯೂ ಮಾತನಾಡಿದರು. ಹಿಂದಿನ ಕಾಲದಲ್ಲಿ ಕ್ರೀಡಾ ಮೂಲಸೌಕರ್ಯಗಳ ಕೊರತೆ ಸಾಕಷ್ಟು ಇದ್ದವು. ನಗರ ಕ್ರೀಡೆಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ಹಿಂದಿನ ಸರ್ಕಾರಗಳು 6 ವರ್ಷಗಳಲ್ಲಿ ಕೇವಲ 300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೆ, ಖೇಲೋ ಇಂಡಿಯಾ ಅಡಿಯಲ್ಲಿ ಈಗ 3,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ, ಇದರಿಂದಾಗಿ ಹೆಚ್ಚಿನ ಕ್ರೀಡಾಪಟುಗಳು ಕ್ರೀಡೆಗಳನ್ನು ತೆಗೆದುಕೊಳ್ಳಲು ಸುಲಭವಾಗಿದೆ ಎಂದು ಹೇಳಿದರು.

ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಇದುವರೆಗೆ ಸುಮಾರು 30,000 ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದರಲ್ಲಿ 1,500 ಕ್ರೀಡಾಪಟುಗಳು ಆರ್ಥಿಕ ನೆರವು ಪಡೆಯುತ್ತಿದ್ದಾರೆ. 9 ವರ್ಷಗಳ ಹಿಂದೆ ಇದ್ದ ಕ್ರೀಡಾ ಬಜೆಟ್‌ಗೆ ಹೋಲಿಸಿದರೆ ಈಗ ಸರ್ಕಾರದ ಬಜೆಟ್ ಮೂರು ಪಟ್ಟು ಹೆಚ್ಚಳವಾಗಿದೆ. ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೂ ಉತ್ತಮ ಕ್ರೀಡಾ ಮೂಲಸೌಕರ್ಯ ದೊರೆಯುತ್ತಿದೆ ಎಂದರು.

ಉತ್ತರ ಪ್ರದೇಶದ ಕುರಿತು ಮಾತನಾಡಿದ ಪ್ರಧಾನಿ, ಲಕ್ನೋದಲ್ಲಿ ಕ್ರೀಡಾ ಸೌಲಭ್ಯಗಳ ವಿಸ್ತರಣೆ, ವಾರಾಣಸಿಯ ಸಿಗ್ರಾ ಕ್ರೀಡಾಂಗಣದ ಆಧುನೀಕರಣ ಮತ್ತು 400 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳ ರಚನೆಯ ಕುರಿತು ಮಾತನಾಡಿದರು. ಲಾಲ್‌ಪುರದ ಸಿಂಥೆಟಿಕ್‌ ಹಾಕಿ ಮೈದಾನ, ಗೋರಖ್‌ಪುರದ ವೀರ್‌ ಬಹದ್ದೂರ್‌ ಸಿಂಗ್‌ ಕ್ರೀಡಾ ಕಾಲೇಜಿನ ಬಹುಪಯೋಗಿ ಸಭಾಂಗಣ, ಮೀರತ್‌ನ ಸಿಂಥೆಟಿಕ್‌ ಹಾಕಿ ಮೈದಾನ ಮತ್ತು ಸಹರಾನ್‌ಪುರದ ಸಿಂಥೆಟಿಕ್‌ ರನ್ನಿಂಗ್‌ ಟ್ರ್ಯಾಕ್‌ ಕುರಿತು ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು.

ಕ್ರೀಡಾಪಟುಗಳು ಉತ್ತಮ ಸ್ಪರ್ಧಾತ್ಮಕ ಮಾನ್ಯತೆ ಪಡೆಯುತ್ತಿದ್ದಾರೆ, ಅವರಿಗೆ ಮೌಲ್ಯಮಾಪನ ಮಾಡಲು ಮತ್ತು ಸುಧಾರಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಮತ್ತು ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ಗೆ ವಿಸ್ತರಿಸಿದ ಖೇಲೋ ಇಂಡಿಯಾ ಗೇಮ್ಸ್ ಅನ್ನು ಪ್ರಾರಂಭಿಸಲು ಇದು ಮುಖ್ಯ ಕಾರಣವಾಗಿದೆ. ನಮ್ಮ ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತಿದೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದೆ ಎಂದರು.

ರಾಷ್ಟ್ರೀಯ ಶೈಕ್ಷಣಿಕ ನೀತಿಯು ಕ್ರೀಡೆಯನ್ನು ಪಠ್ಯಕ್ರಮದ ಭಾಗವಾಗಿಸುವ ವಿಷಯವಾಗಿ ತೆಗೆದುಕೊಳ್ಳಲು ಪ್ರಸ್ತಾಪಿಸಿದೆ. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ನಿರ್ಮಾಣವು ಈ ಕಾರಣವನ್ನು ಮತ್ತಷ್ಟು ಬಲಪಡಿಸುತ್ತದೆ. ರಾಜ್ಯಗಳಲ್ಲಿ, ಕ್ರೀಡೆಯನ್ನು ವಿಶೇಷ ಉನ್ನತ ಶಿಕ್ಷಣವನ್ನಾಗಿ ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು. ಉತ್ತರ ಪ್ರದೇಶ ಸರ್ಕಾರ ಅತ್ಯಂತ ಶ್ಲಾಘನೀಯ ಕೆಲಸ ಮಾಡುತ್ತಿದೆ. ಮೀರತ್‌ನಲ್ಲಿರುವ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯವನ್ನು ಉದಾಹರಣೆಯಾಗಿ ನೀಡಿದರು. ದೇಶದಾದ್ಯಂತ 1,000 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸುಮಾರು 12 ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ಗಳನ್ನು ಸಹ ಕಾರ್ಯಗತಗೊಳಿಸಲಾಗಿದೆ, ಅಲ್ಲಿ ತರಬೇತಿ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಕ್ರೀಡಾ ವಿಜ್ಞಾನ ಬೆಂಬಲವನ್ನು ಒದಗಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. "ಖೇಲೋ ಇಂಡಿಯಾವು ಭಾರತದ ಸಾಂಪ್ರದಾಯಿಕ ಕ್ರೀಡೆಗಳ ಪ್ರತಿಷ್ಠೆಯನ್ನು ಮರುಸ್ಥಾಪಿಸಿದೆ", ಗಟ್ಕಾ, ಮಲ್ಲಖಾಂಬ್, ತಂಗ್-ಟ, ಕಲರಿಪಯಟ್ಟು ಮತ್ತು ಯೋಗಾಸನದಂತಹ ವಿವಿಧ ಸ್ಥಳೀಯ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಒದಗಿಸಿದ ವಿದ್ಯಾರ್ಥಿವೇತನ ಸಹಾಯವಾಗಲಿದೆ ಎಂದರು.

ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಗಮನಿಸಿದ ಪ್ರಧಾನಿ, ದೇಶದ ಅನೇಕ ನಗರಗಳಲ್ಲಿ ಖೇಲೋ ಇಂಡಿಯಾ ಮಹಿಳಾ ಲೀಗ್ ಅನ್ನು ಆಯೋಜಿಸಲಾಗುತ್ತಿದೆ. ವಿವಿಧ ವಯೋಮಾನದ ಸುಮಾರು 23 ಸಾವಿರ ಮಹಿಳಾ ಅಥ್ಲೀಟ್‌ಗಳು ಇಲ್ಲಿಯವರೆಗೆ ಭಾಗವಹಿಸಿದ್ದಾರೆ ಎಂದು ಹೇಳಿದರು. ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಮಹಿಳಾ ಅಥ್ಲೀಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದರು. 

“ಭಾರತದ ಪ್ರಗತಿಯು ನಿಮ್ಮ ಪ್ರತಿಭೆ, ನಿಮ್ಮ ಪ್ರಗತಿಯಲ್ಲಿ ಅಡಗಿದೆ. ನೀವು ಭವಿಷ್ಯದ ಚಾಂಪಿಯನ್”, ತ್ರಿವರ್ಣ ಧ್ವಜದ ವೈಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಕ್ರೀಡಾಪಟುಗಳ ಜವಾಬ್ದಾರಿ ಎಂದು ಪ್ರಧಾನಿ ಒತ್ತಿ ಹೇಳಿದರು. ಕ್ರೀಡಾಸ್ಫೂರ್ತಿ ಮತ್ತು ಸಾಂಘಿಕ ಮನೋಭಾವದ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಕೇವಲ ಸೋಲು-ಗೆಲುವು ಮತ್ತು ಟೀಮ್‌ವರ್ಕ್‌ಗೆ ಸೀಮಿತವಾಗಿದೆಯೇ ಎಂದು ಕೇಳಿದರು. ಕ್ರೀಡಾಸ್ಫೂರ್ತಿಯ ಅರ್ಥ ಇದಕ್ಕಿಂತ ವಿಶಾಲವಾಗಿದೆ. ಕ್ರೀಡೆಯು ಪಟ್ಟಭದ್ರ ಹಿತಾಸಕ್ತಿಗಳಿಗಿಂತ ಮೇಲೇರುವ ಮೂಲಕ ಸಾಮೂಹಿಕ ಯಶಸ್ಸಿನತ್ತ ನಮ್ಮನ್ನು ಪ್ರೇರೇಪಿಸುತ್ತದೆ. ಸಭ್ಯತೆ ಮತ್ತು ನಿಯಮಗಳನ್ನು ಅನುಸರಿಸಲು ಕ್ರೀಡೆಗಳು ನಮಗೆ ಕಲಿಸುತ್ತವೆ. ಸಂದರ್ಭಗಳು ತಮಗೆ ವಿರುದ್ಧವಾದಾಗ ಆಟಗಾರರು ತಮ್ಮ ಹಿಡಿತವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಯಾವಾಗಲೂ ನಿಯಮಗಳಿಗೆ ಬದ್ಧರಾಗಿರಿ. ನಿಯಮಗಳು ಮತ್ತು ನಿಬಂಧನೆಗಳ ಮಿತಿಯಲ್ಲಿ ಉಳಿಯುವುದು ಮತ್ತು ಎದುರಾಳಿಯನ್ನು ತಾಳ್ಮೆಯಿಂದ ಸೋಲಿಸುವುದು ಆಟಗಾರನ ಗುರುತು ಎಂದು ಹೇಳಿದರು. "ಜಯಗಳಿಸುವವನು ಯಾವಾಗಲೂ ಕ್ರೀಡಾ ಮನೋಭಾವ ಮತ್ತು ಘನತೆಯ ಮನೋಭಾವವನ್ನು ಅನುಸರಿಸಿದಾಗ ಮಾತ್ರ ಶ್ರೇಷ್ಠ ಆಟಗಾರನಾಗುತ್ತಾನೆ. ಸಮಾಜವು ಅವನ ಪ್ರತಿಯೊಂದು ನಡೆವಳಿಕೆಯಿಂದ ಸ್ಫೂರ್ತಿ ಪಡೆದಾಗ ಮಾತ್ರ ವಿಜೇತ ಶ್ರೇಷ್ಠ ಆಟಗಾರನಾಗುತ್ತಾನೆ” ಎಂದು ಹೇಳಿ ಪ್ರಧಾನ ಮಂತ್ರಿಗಳು ಮಾತು ಮುಗಿಸಿದರು. 

ಹಿನ್ನೆಲೆ

ಪ್ರಧಾನಮಂತ್ರಿಯವರು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಮತ್ತು ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಹೆಚ್ಚಿನ ಗಮನವನ್ನು ನೀಡಿದ್ದಾರೆ. ಉದಯೋನ್ಮುಖ ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ. ದೇಶದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದ ಆಯೋಜನೆಯು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.

ಈ ವರ್ಷ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಮೂರನೇ ಆವೃತ್ತಿಯು ಉತ್ತರ ಪ್ರದೇಶದಲ್ಲಿ ಇಂದು ಮೇ 25 ರಿಂದ ಜೂನ್ 3 ರವರೆಗೆ ನಡೆಯಲಿದೆ. ವಾರಣಾಸಿ, ಗೋರಖ್‌ಪುರ, ಲಕ್ನೋ ಮತ್ತು ಗೌತಮ್ ಬುದ್ಧ ನಗರದಲ್ಲಿ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟವು 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,750ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ, ಅವರು 21 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಕ್ರೀಡಾಕೂಟದ ಸಮಾರೋಪ ಸಮಾರಂಭವು ಜೂನ್ 3 ರಂದು ವಾರಾಣಸಿಯಲ್ಲಿ ನಡೆಯಲಿದೆ. ಗೇಮ್ಸ್‌ನ ಮ್ಯಾಸ್ಕಾಟ್‌ಗೆ ಜಿತು ಎಂದು ಹೆಸರಿಸಲಾಗಿದೆ, ಇದು ಉತ್ತರ ಪ್ರದೇಶದ ರಾಜ್ಯ ಪ್ರಾಣಿಯಾದ ಜೌಗು ಜಿಂಕೆ (ಬರಸಿಂಗ)ಯನ್ನು ಪ್ರತಿನಿಧಿಸುತ್ತದೆ.

 

*****



(Release ID: 1927433) Visitor Counter : 134