ಪ್ರಧಾನ ಮಂತ್ರಿಯವರ ಕಛೇರಿ

ವಿಡಿಯೋ ಸಂದೇಶದ ಮೂಲಕ 'ಜಲ-ಜನ ಅಭಿಯಾನ'ಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿಯವರ ಭಾಷಣ


"ಅಮೃತ ಕಾಲದಲ್ಲಿ, ಭಾರತವು ನೀರಿಗಾಗಿ ಭವಿಷ್ಯದತ್ತ ನೋಡುತ್ತಿದೆ"

"ಭಾರತವು ನೀರನ್ನು ದೇವರು ಮತ್ತು ನದಿಗಳನ್ನು ತಾಯಂದಿರೆಂದು ಪರಿಗಣಿಸುತ್ತದೆ"

"ಜಲ ಸಂರಕ್ಷಣೆ ನಮ್ಮ ಸಮಾಜದ ಸಂಸ್ಕೃತಿ ಮತ್ತು ನಮ್ಮ ಸಾಮಾಜಿಕ ಚಿಂತನೆಯ ಕೇಂದ್ರಬಿಂದುವಾಗಿದೆ"

"ನಮಾಮಿ ಗಂಗೆ ಅಭಿಯಾನವು ದೇಶದ ವಿವಿಧ ರಾಜ್ಯಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ"

"ದೇಶದ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳ ನಿರ್ಮಾಣವು ಜಲ ಸಂರಕ್ಷಣೆಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ"

Posted On: 16 FEB 2023 2:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂದೇಶದ ಮೂಲಕ ಬ್ರಹ್ಮಕುಮಾರಿಯವರ 'ಜಲ-ಜನ ಅಭಿಯಾನ'ವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಬ್ರಹ್ಮಕುಮಾರಿಯವರೊಂದಿಗೆ ಜಲ ಜನ ಅಭಿಯಾನದ ಉದ್ಘಾಟನೆಯ ಭಾಗವಾಗಲು ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ಅವರಿಂದ ಕಲಿಯುವುದು ಸದಾ ಒಂದು ವಿಶೇಷ ಅನುಭವವಾಗಿದೆ ಎಂದು ಹೇಳಿದರು. "ದಿವಂಗತ ರಾಜಯೋಗಿನಿ ದಾದಿ ಜಾನಕೀಜಿಯವರಿಂದ ನಾನು ಪಡೆದ ಆಶೀರ್ವಾದಗಳು ನನ್ನ ದೊಡ್ಡ ಆಸ್ತಿ" ಎಂದು ಪ್ರಧಾನಿ ಹೇಳಿದ್ದಾರೆ. 2007ರಲ್ಲಿ ದಾದಿ ಪ್ರಕಾಶ್ ಮಣಿ ಜಿಯವರ ನಿಧನದ ನಂತರ ಗೌರವ ಸಲ್ಲಿಸಲು ಅಬು ರೋಡ್ ಗೆ ತಾವು ಬಂದ ಘಟನೆಯನ್ನು ಅವರು ನೆನಪಿಸಿಕೊಂಡರು. ಹಿಂದಿನ ವರ್ಷಗಳಲ್ಲಿ ಬ್ರಹ್ಮಕುಮಾರಿ ಸಹೋದರಿಯರಿಂದ ತಮಗೆ ದೊರೆತ ಆತ್ಮೀಯ ಆಹ್ವಾನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಆಧ್ಯಾತ್ಮಿಕ ಕುಟುಂಬದ ಸದಸ್ಯರಾಗಿ ತಾವು ಯಾವಾಗಲೂ ಅವರೊಂದಿಗಿರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. 2011ರಲ್ಲಿ ಅಹ್ಮದಾಬಾದ್ ನಲ್ಲಿ ನಡೆದ 75 ವರ್ಷಗಳ ಸಂಸ್ಥಾಪನಾ ದಿನದ 'ಫ್ಯೂಚರ್ ಆಫ್ ಪವರ್' ಕಾರ್ಯಕ್ರಮವನ್ನು ಅವರು ನೆನಪಿಸಿಕೊಂಡರು. 2013ರಲ್ಲಿ ನಡೆದ ಸಂಗಮ ತೀರ್ಥ; 2017ರಲ್ಲಿ ಬ್ರಹ್ಮ ಕುಮಾರಿಸ್ ಸಂಸ್ಥಾನದ 80ನೇ ಸಂಸ್ಥಾಪನಾ ದಿನ; ಮತ್ತು ಅಮೃತ ಮಹೋತ್ಸವದ ಸಮಯದ ಕಾರ್ಯಕ್ರಮ, ಈ ಎಲ್ಲವನ್ನೂ ಅವರು ನೆನಪಿಸಿಕೊಂಡು, ಅವರ ಪ್ರೀತಿ ಮತ್ತು ಬಾಂಧವ್ಯಕ್ಕಾಗಿ ಧನ್ಯವಾದ ಅರ್ಪಿಸಿದರು. ಬ್ರಹ್ಮಕುಮಾರಿಯವರೊಂದಿಗಿನ ತಮ್ಮ ವಿಶೇಷ ಸಂಬಂಧವನ್ನು ಒತ್ತಿಹೇಳಿದ ಅವರು, ಆತ್ಮದಿಂದ ಎತ್ತರಕ್ಕೇರಿ, ಎಲ್ಲವನ್ನೂ ಸಮಾಜಕ್ಕೆ ಸಮರ್ಪಿಸುವುದು ಅವರೆಲ್ಲರ ಆಧ್ಯಾತ್ಮಿಕ ಸಾಧನೆಯ ಒಂದು ರೂಪವಾಗಿದೆ ಎಂದು ಹೇಳಿದರು.

ವಿಶ್ವದಾದ್ಯಂತ ನೀರಿನ ಅಭಾವವನ್ನು ಭವಿಷ್ಯದ ಬಿಕ್ಕಟ್ಟಾಗಿ ನೋಡುತ್ತಿರುವ ಈ ಸಮಯದಲ್ಲಿ ಜಲ-ಜನ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 21ನೇ ಶತಮಾನದ ಈ ಜಗತ್ತು ನಮ್ಮ ಭೂಮಿಯ ಮೇಲಿನ ಸೀಮಿತ ಜಲ ಸಂಪನ್ಮೂಲಗಳ ಗಂಭೀರತೆಯನ್ನು ಅರಿತುಕೊಳ್ಳುತ್ತಿದೆ. ಹೆಚ್ಚಿದ ಜನಸಂಖ್ಯೆಯಿಂದಾಗಿ ನೀರಿನ ಸುರಕ್ಷತೆಯು ಭಾರತಕ್ಕೆ ದೊಡ್ಡ ಪ್ರಶ್ನೆಯಾಗಿದೆ ಎಂದು ಅವರು ಗಮನಸೆಳೆದರು. "ಈ ಅಮೃತ ಕಾಲದಲ್ಲಿ, ಭಾರತವು ನೀರಿಗಾಗಿ ಭವಿಷ್ಯದತ್ತ ನೋಡುತ್ತಿದೆ. ನೀರು ಇದ್ದಲ್ಲಿ ಭವಿಷ್ಯ ಇರುತ್ತದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಇಂದಿನಿಂದಲೇ ಎಲ್ಲಾ ಜಂಟಿ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಒತ್ತಿ ಹೇಳಿದರು. ದೇಶವು ಜಲ ಸಂರಕ್ಷಣೆಯನ್ನು ಜನಾಂದೋಲನವಾಗಿ ಪರಿವರ್ತಿಸಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಬ್ರಹ್ಮಕುಮಾರಿಯವರ ಜಲ-ಜನ ಅಭಿಯಾನವು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಈ ಪ್ರಯತ್ನಕ್ಕೆ ಹೊಸ ಶಕ್ತಿಯನ್ನು ನೀಡಲಿದೆ ಎಂದರು. ಜಲ ಸಂರಕ್ಷಣಾ ಅಭಿಯಾನಗಳ ವ್ಯಾಪ್ತಿಯು ಉತ್ತೇಜನವನ್ನು ಪಡೆದು, ಆ ಮೂಲಕ ಅದರ ಪರಿಣಾಮವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಸಾವಿರಾರು ವರ್ಷಗಳ ಹಿಂದೆ ಪ್ರಕೃತಿ, ಪರಿಸರ ಮತ್ತು ನೀರಿನ ಬಗ್ಗೆ ಸಂಯಮ, ಸಮತೋಲಿತ ಮತ್ತು ಸೂಕ್ಷ್ಮ ವ್ಯವಸ್ಥೆಯನ್ನು ರಚಿಸಿದ ಭಾರತದ ಋಷಿಮುನಿಗಳನ್ನು ಪ್ರಧಾನಿ ಎತ್ತಿ ತೋರಿಸಿದರು. ನೀರನ್ನು ನಾಶಗೊಳಿಸದೆ ಅದನ್ನು ಸಂರಕ್ಷಿಸಿ ಎಂಬ ಹಳೆಯ ಮಾತನ್ನು ಅವರು ನೆನಪಿಸಿಕೊಂಡರು. ಈ ಭಾವನೆಯು ಸಾವಿರಾರು ವರ್ಷಗಳಿಂದ ಭಾರತದ ಆಧ್ಯಾತ್ಮಿಕತೆ ಮತ್ತು ನಮ್ಮ ಧರ್ಮದ ಒಂದು ಭಾಗವಾಗಿದೆ ಎಂದು ಪ್ರಧಾನಿಯವರು ಒತ್ತಿಹೇಳಿದರು. "ಜಲ ಸಂರಕ್ಷಣೆ ನಮ್ಮ ಸಮಾಜದ ಸಂಸ್ಕೃತಿ ಮತ್ತು ನಮ್ಮ ಸಾಮಾಜಿಕ ಚಿಂತನೆಯ ಕೇಂದ್ರಬಿಂದುವಾಗಿದೆ," ಎಂದ ಅವರು, ಮುಂದುವರೆದು "ಆದ್ದರಿಂದಲೇ ನಾವು ನೀರನ್ನು ದೇವರು ಮತ್ತು ನಮ್ಮ ನದಿಗಳನ್ನು ತಾಯಂದಿರೆಂದು ಪರಿಗಣಿಸುತ್ತೇವೆ" ಎಂದು ಹೇಳಿದರು. ಸಮಾಜವು ಪ್ರಕೃತಿಯೊಂದಿಗೆ ಅಂತಹ ಭಾವನಾತ್ಮಕ ಸಂಪರ್ಕವನ್ನು ಕಲ್ಪಿಸಿಕೊಂಡಾಗ ಮಾತ್ರ, ಸುಸ್ಥಿರ ಅಭಿವೃದ್ಧಿಯು ಅದರ ನೈಸರ್ಗಿಕ ಜೀವನ ವಿಧಾನವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಭೂತಕಾಲ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುವಾಗ ಭವಿಷ್ಯದ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುವ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಜಲ ಸಂರಕ್ಷಣೆಯ ಮೌಲ್ಯಗಳ ಬಗ್ಗೆ ದೇಶವಾಸಿಗಳಲ್ಲಿ ನಂಬಿಕೆ ಮೂಡಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಜಲಮಾಲಿನ್ಯಕ್ಕೆ ಕಾರಣವಾಗುವ ಪ್ರತಿಯೊಂದು ಅಡೆತಡೆಗಳನ್ನು ತೆಗೆದುಹಾಕಬೇಕು ಎಂದು ಪ್ರಧಾನಿ ಹೇಳಿದರು. ಜಲ ಸಂರಕ್ಷಣೆಯಲ್ಲಿ ಬ್ರಹ್ಮಕುಮಾರಿಯರಂತಹ ಭಾರತದ ಆಧ್ಯಾತ್ಮಿಕ ಸಂಸ್ಥೆಗಳ ಪಾತ್ರವನ್ನು ಅವರು ಒತ್ತಿ ಹೇಳಿದರು. 

ಕಳೆದ ದಶಕಗಳಲ್ಲಿ ನಕಾರಾತ್ಮಕ ಚಿಂತನೆಯ ಪ್ರಕ್ರಿಯೆ ಬೆಳೆದು, ಜಲ ಸಂರಕ್ಷಣೆ ಮತ್ತು ಪರಿಸರದಂತಹ ವಿಷಯಗಳನ್ನು ಕಷ್ಟಕರವೆಂದು ಪರಿಗಣಿಸಲಾಗಿತ್ತು ಎಂದು ಪ್ರಧಾನಿ ವಿಷಾದಿಸಿದರು. ಕಳೆದ 8-9 ವರ್ಷಗಳಲ್ಲಿ ಆಗಿರುವ ಬದಲಾವಣೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಮನಸ್ಥಿತಿ ಮತ್ತು ಪರಿಸ್ಥಿತಿ ಎರಡೂ ಬದಲಾಗಿವೆ ಎಂದರು. ನಮಾಮಿ ಗಂಗೆ ಅಭಿಯಾನದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ನೈಸರ್ಗಿಕ ಕೃಷಿಯಂತಹ ಅಭಿಯಾನಗಳು ಗಂಗಾ ತೀರದಲ್ಲಿ ಪ್ರಾರಂಭವಾದಾಗಿನಿಂದ ಗಂಗಾನದಿ ಮಾತ್ರವಲ್ಲದೆ ಅದರ ಎಲ್ಲಾ ಉಪನದಿಗಳು ಸಹ ಸ್ವಚ್ಚವಾಗುತ್ತಿವೆ ಎಂದು ಒತ್ತಿ ಹೇಳಿದರು. "ನಮಾಮಿ ಗಂಗೆ ಅಭಿಯಾನವು ದೇಶದ ವಿವಿಧ ರಾಜ್ಯಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ" ಎಂದು ಅವರು ತಿಳಿಸಿದರು.

'ಕ್ಯಾಚ್ ದಿ ರೇನ್ ಅಭಿಯಾನ'ದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಕುಸಿಯುತ್ತಿರುವ ಅಂತರ್ಜಲ ಮಟ್ಟವೂ ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದರು. ಅಟಲ್ ಭೂಜಲ್ ಯೋಜನೆಯ ಮೂಲಕ ದೇಶದ ಸಾವಿರಾರು ಗ್ರಾಮ ಪಂಚಾಯತಿಗಳಲ್ಲಿ ನೀರಿನ ಸಂರಕ್ಷಣೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ದೇಶದ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸುವ ಅಭಿಯಾನವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದು ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದರು.

ಜಲ ಸಂರಕ್ಷಣೆಯಲ್ಲಿ ಮಹಿಳೆಯರ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹಳ್ಳಿಯ ಮಹಿಳೆಯರು ಜಲ ಸಮಿತಿಗಳ ಮೂಲಕ ಜಲ ಜೀವನ ಮಿಷನ್ ನಂತಹ ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಿದ್ದಾರೆ ಎಂದರು. ಬ್ರಹ್ಮ ಕುಮಾರಿ ಸಹೋದರಿಯರು ದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿಯೂ ಈ ರೀತಿಯ ಪಾತ್ರವನ್ನು ವಹಿಸಲು ಅವರು ಕರೆ ನೀಡಿದರು. ಜಲ ಸಂರಕ್ಷಣೆಯ ಜೊತೆಗೆ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗತ್ತ ಗಮನ ಹರಿಸುವ ಅಗತ್ಯವನ್ನೂ ಅವರು ಉಲ್ಲೇಖಿಸಿದರು. ಕೃಷಿಯಲ್ಲಿ ನೀರಿನ ಸಮತೋಲೀನ ಬಳಕೆಗಾಗಿ ದೇಶವು ಹನಿ ನೀರಾವರಿಯಂತಹ ತಂತ್ರಗಳನ್ನು ಬಳಸುತ್ತಿದೆ ಎಂದು ತಿಳಿಸಿದ ಪ್ರಧಾನಿ, ಅದರ ಬಳಕೆಯನ್ನು ಹೆಚ್ಚಿಸಲು ರೈತರನ್ನು ಪ್ರೇರೇಪಿಸುವಂತೆ ಬ್ರಹ್ಮಕುಮಾರಿ ಸಹೋದರಿಯರನ್ನು ಒತ್ತಾಯಿಸಿದರು.

ಇಡೀ ವಿಶ್ವವೇ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಆಚರಿಸುತ್ತಿದೆ ಎಂದು ಹೇಳಿದ ಪ್ರಧಾನಿಯವರು, ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಸಿರಿಧಾನ್ಯಗಳನ್ನು ಸೇವಿಸಬೇಕೆಂದು ಒತ್ತಾಯಿಸಿದರು. ಶ್ರೀ ಅಣ್ಣಾ ಬಾಜ್ರಾ ಮತ್ತು ಶ್ರೀ ಅಣ್ಣಾ ಜೋಳವು ಶತಮಾನಗಳಿಂದ ಭಾರತದ ಕೃಷಿ ಮತ್ತು ಆಹಾರ ಪದ್ಧತಿಯ ಒಂದು ಭಾಗವಾಗಿದೆ ಎಂದು ಅವರು ತಿಳಿಸಿದರು. ಸಿರಿಧಾನ್ಯಗಳು ಪೌಷ್ಠಿಕಾಂಶದಿಂದ ಸಮೃದ್ಧವಾಗಿದ್ದು, ಕೃಷಿಯ ಸಮಯದಲ್ಲಿ ಕಡಿಮೆ ನೀರನ್ನು ಬಳಸುತ್ತವೆ ಎಂದು ಮಾಹಿತಿ ನೀಡಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಜಲ-ಜನ ಅಭಿಯಾನವು ಜಂಟಿ ಪ್ರಯತ್ನದಿಂದ ಯಶಸ್ವಿಯಾಗಲಿದೆ ಮತ್ತು ಉತ್ತಮ ಭವಿಷ್ಯದೊಂದಿಗೆ ಉತ್ತಮ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 
***



(Release ID: 1899938) Visitor Counter : 115