ಪ್ರಧಾನ ಮಂತ್ರಿಯವರ ಕಛೇರಿ

ಬೆಂಗಳೂರಿನಲ್ಲಿ  ಭಾರತ ಇಂಧನ ಸಪ್ತಾಹ -2023ರನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಇಂಡಿಯನ್ ಆಯಿಲ್ ನ 'ಅನ್ ಬಾಟಲ್ಡ್' ಉಪಕ್ರಮದ ಅಡಿಯಲ್ಲಿ ಸಮವಸ್ತ್ರದ ಬಿಡುಗಡೆ 

ಇಂಡಿಯನ್ ಆಯಿಲ್ ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಅವಳಿ-ಕುಕ್ ಟಾಪ್ ಮಾದರಿಗಳ ಸಮರ್ಪಣೆ

ಇ20 ಇಂಧನ ಬಿಡುಗಡೆ

ಹಸಿರು ಚಲನಶೀಲತೆ ರ‍್ಯಾಲಿಗೆ ಹಸಿರು ನಿಶಾನೆ 

"ವಿಕಸಿತ ಭಾರತದ ಸಂಕಲ್ಪದೊಂದಿಗೆ ಸಾಗುತ್ತಿರುವ ಭಾರತದ ಇಂಧನ ಕ್ಷೇತ್ರಕ್ಕೆ ಅಭೂತಪೂರ್ವ ಸಾಧ್ಯತೆಗಳು ಹೊರಹೊಮ್ಮುತ್ತಿವೆ"

"ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದ ಬಳಲುತ್ತಿರುವ ಜಗತ್ತಿನಲ್ಲಿ ಭಾರತವು ಜಾಗತಿಕ ಪ್ರಕಾಶಮಾನವಾದ ತಾಣವಾಗಿ ಮುಂದುವರಿದಿದೆ"

" ನಿರ್ಣಾಯಕ ಸರ್ಕಾರ, ಸುಸ್ಥಿರ ಸುಧಾರಣೆಗಳು, ತಳಮಟ್ಟದಲ್ಲಿನ ಸಾಮಾಜಿಕ-ಆರ್ಥಿಕ ಸಬಲೀಕರಣ ಭಾರತದ ಆರ್ಥಿಕ ಚೇತರಿಕೆಯ ಮೂಲನೆಲೆಯಾಗಿದೆ

"ಸುಧಾರಣೆಗಳು ಮಹತ್ವಾಕಾಂಕ್ಷೆಯ ಸಮಾಜವನ್ನು ಸೃಷ್ಟಿಸುತ್ತಿವೆ"

"ನಾವು ನಿರಂತರವಾಗಿ ನಮ್ಮ ಸಂಸ್ಕರಣಾ ಸಾಮರ್ಥ್ಯವನ್ನು ದೇಶೀಯ, ಆಧುನಿಕ ಮತ್ತು ನವೀಕರಿಸುತ್ತಿದ್ದೇವೆ"

 "2030 ರ ವೇಳೆಗೆ ನಮ್ಮ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲ ಬಳಕೆಯನ್ನು ಹೆಚ್ಚಿಸಲು ನಾವು ಅಭಿಯಾನದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ"

Posted On: 06 FEB 2023 2:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ) 2023 ಅನ್ನು ಉದ್ಘಾಟಿಸಿದರು. ಇಂಡಿಯನ್ ಆಯಿಲ್ ನ 'ಅನ್ ಬಾಟಲ್ಡ್' ಉಪಕ್ರಮದ ಅಡಿಯಲ್ಲಿ ಪ್ರಧಾನಮಂತ್ರಿಯವರು ಸಮವಸ್ತ್ರಗಳನ್ನು ಬಿಡುಗಡೆ ಮಾಡಿದರು. ಈ ಸಮವಸ್ತ್ರಗಳನ್ನು ಮರುಬಳಕೆ ಮಾಡಿದ ಪಿ.ಇ.ಟಿ ಬಾಟಲಿಗಳಿಂದ ತಯಾರಿಸಲಾಗುತ್ತದೆ. ಇಂಡಿಯನ್ ಆಯಿಲ್ ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಟ್ವಿನ್-ಕುಕ್ ಟಾಪ್ ಮಾದರಿಯನ್ನು ಅವರು ಲೋಕಾರ್ಪಣೆ ಮಾಡಿದರು ಮತ್ತು ಅದರ ವಾಣಿಜ್ಯ ಬಳಕೆಗೆ ಹಸಿರು ನಿಶಾನೆ ತೋರಿದರು.

ನಂತರ, ಎಥೆನಾಲ್ ಮಿಶ್ರಣ ಮಾರ್ಗಸೂಚಿಯ ನಿಟ್ಟಿನಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ತೈಲ ಮಾರುಕಟ್ಟೆ ಕಂಪನಿಗಳ 84 ಚಿಲ್ಲರೆ ಮಳಿಗೆಗಳಲ್ಲಿ ಇ 20 ಇಂಧನಕ್ಕೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು. ಹಸಿರು ಇಂಧನ ಮೂಲಗಳಿಂದ ಚಲಿಸುವ ವಾಹನಗಳು ಭಾಗವಹಿಸುವ ಮತ್ತು ಹಸಿರು ಇಂಧನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನೆರವಾಗುವ ಹಸಿರು ಸಾರಿಗೆ ರ‍್ಯಾಲಿಗೂ ಅವರು ಹಸಿರು ನಿಶಾನೆ ತೋರಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಟರ್ಕಿ ಮತ್ತು ಸುತ್ತಮತ್ತಲಿನ ದೇಶಗಳಲ್ಲಿ ಸಂಭವಿಸಿರುವ ವಿಪತ್ತು ಮತ್ತು ಸಾವು ನೋವಿಗೆ ಸಂತಾಪ ಸೂಚಿಸಿ, ಎಲ್ಲ ಸಾಧ್ಯ ನೆರವು ನೀಡಲು ಭಾರತ ಸಿದ್ಧವಿದೆ ಎಂದು ತಿಳಿಸಿದರು.

ಬೆಂಗಳೂರು ತಂತ್ರಜ್ಞಾನ, ಪ್ರತಿಭೆ ಮತ್ತು ನಾವಿನ್ಯದಿಂದ ತುಂಬಿ ತುಳುಕುತ್ತಿರುವ ನಗರವಾಗಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರೂ ಇಂದು ಆ ಚೈತನ್ಯವನ್ನು ಅನುಭವಿಸಲಿದ್ದಾರೆ ಎಂದರು. ಭಾರತ ಇಂಧನ ಸಪ್ತಾಹವು ಜಿ 20 ಕಾರ್ಯಕ್ರಮಗಳಲ್ಲಿನ ಮೊದಲ ಮಹತ್ವದ ಇಂಧನ ಕಾರ್ಯಕ್ರಮವಾಗಿದೆ ಎಂದು ಅವರು ಮಾಹಿತಿ ನೀಡಿದರು ಮತ್ತು ಈ ಸಂದರ್ಭದಲ್ಲಿ ಎಲ್ಲರನ್ನೂ ಸ್ವಾಗತಿಸಿದರು.

21ನೇ ಶತಮಾನದ ವಿಶ್ವದ ಭವಿಷ್ಯದ ದಿಕ್ಕನ್ನು ರೂಪಿಸುವಲ್ಲಿ ಇಂಧನ ಕ್ಷೇತ್ರದ ಪ್ರಮುಖ ಪಾತ್ರವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಇಂಧನ ಪರಿವರ್ತನೆ ಮತ್ತು ಹೊಸ ಇಂಧನ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಭಾರತವು ವಿಶ್ವದ ಪ್ರಬಲ ಧ್ವನಿಗಳಲ್ಲಿ ಒಂದಾಗಿದೆ. ವಿಕಸಿತ ಭಾರತದ ಸಂಕಲ್ಪದೊಂದಿಗೆ ಸಾಗುತ್ತಿರುವ ಭಾರತದಲ್ಲಿ ಅಭೂತಪೂರ್ವ ಸಾಧ್ಯತೆಗಳು ಹೊರಹೊಮ್ಮುತ್ತಿವೆ" ಎಂದು ಅವರು ಹೇಳಿದರು.

ಇತ್ತೀಚೆಗೆ ಬಿಡುಗಡೆಯಾದ ಐಎಂಎಫ್ ಅಂದಾಜುಗಳನ್ನು ಉಲ್ಲೇಖಿಸಿದ ಶ್ರೀ ಮೋದಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗ ಮತ್ತು 2022ರಲ್ಲಿ ಯುದ್ಧದ ಯುಗದಿಂದ ಬಳಲುತ್ತಿರುವ ವಿಶ್ವದಲ್ಲಿ ಭಾರತವು ಜಾಗತಿಕ ಪ್ರಕಾಶಮಾನ ತಾಣವಾಗಿ ಮುಂದುವರಿದಿದೆ ಎಂದು ಹೇಳಿದರು. ಬಾಹ್ಯ ಅಂಶಗಳನ್ನು ಲೆಕ್ಕಿಸದೆ ಯಾವುದೇ ಅಡೆತಡೆಗಳನ್ನು ನಿವಾರಿಸಲು ರಾಷ್ಟ್ರಕ್ಕೆ ಅನುವು ಮಾಡಿಕೊಟ್ಟ ಭಾರತದ ಆಂತರಿಕ ಚೇತರಿಕೆಯನ್ನು ಅವರು ಪ್ರಶಂಸಿಸಿದರು.

ಅದಕ್ಕೆ ಹಲವು ಕಾರಣಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮೊದಲನೆಯದು ಸ್ಥಿರ, ನಿರ್ಣಾಯಕ ಸರ್ಕಾರ, ಎರಡನೆಯದು, ಸುಸ್ಥಿರ ಸುಧಾರಣೆಗಳು, ಮೂರನೆಯದು, ತಳಮಟ್ಟದಲ್ಲಿ ಸಾಮಾಜಿಕ-ಆರ್ಥಿಕ ಸಬಲೀಕರಣ ಎಂದು ತಿಳಿಸಿದರು. ಬ್ಯಾಂಕ್ ಖಾತೆಗಳ ಮೂಲಕ ಹಣ ಪೂರಣ, ಉಚಿತ ಆರೋಗ್ಯ ಸೌಲಭ್ಯಗಳು, ಸುರಕ್ಷಿತ ನೈರ್ಮಲ್ಯ, ವಿದ್ಯುತ್, ವಸತಿ ಮತ್ತು ಕೊಳವೆ ಮೂಲಕ ನೀರು ಸೇರಿದಂತೆ ಬೃಹತ್ ಸಾಮಾಜಿಕ ಮೂಲಸೌಕರ್ಯಗಳು ಕೋಟ್ಯಂತರ ಜನರನ್ನು ತಲುಪಿವೆ ಮತ್ತು ಅನೇಕ ಪ್ರಮುಖ ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಜನರ ಜೀವನವನ್ನು ಬದಲಾಯಿಸಿವೆ ಎಂದು ಪ್ರಧಾನಮಂತ್ರಿ ವಿವರಿಸಿದರು.

ಬಡತನದಿಂದ ಹೊರಬಂದು ಮಧ್ಯಮ ವರ್ಗದ ಮಟ್ಟವನ್ನು ತಲುಪಿರುವ ಭಾರತದ ಕೋಟ್ಯಂತರ ಜನರ ಜೀವನದ ಗುಣಮಟ್ಟದಲ್ಲಿ ಆಗಿರುವ ಧನಾತ್ಮಕ ಬದಲಾವಣೆಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ದೇಶದಲ್ಲಿ 6,00,000 ಕಿಲೋಮೀಟರ್ ಆಪ್ಟಿಕಲ್ ಫೈಬರ್ ಗಳನ್ನು ಹಾಕಲಾಗಿದೆ, ಇದರಿಂದ ಪ್ರತಿ ಹಳ್ಳಿಗೂ ಇಂಟರ್ನೆಟ್ ಸಂಪರ್ಕ ಸಿಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಕಳೆದ 9 ವರ್ಷಗಳಲ್ಲಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ದೇಶದಲ್ಲಿ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ ಹದಿಮೂರು ಪಟ್ಟು ಹೆಚ್ಚಾಗಿದೆ ಮತ್ತು ಇಂಟರ್ನೆಟ್ ಸಂಪರ್ಕಗಳು ಮೂರು ಪಟ್ಟು ಹೆಚ್ಚಾಗಿದೆ ಎಂದರು. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಭಾರತವು ವಿಶ್ವದ 2ನೇ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ, ಇದು ವಿಶ್ವದ ಅತಿದೊಡ್ಡ ಮಹತ್ವಾಕಾಂಕ್ಷೆಯ ವರ್ಗದ ರಚನೆಗೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. "ಭಾರತದ ಜನರು ಉತ್ತಮ ಉತ್ಪನ್ನಗಳು, ಉತ್ತಮ ಸೇವೆಗಳು ಮತ್ತು ಉತ್ತಮ ಮೂಲಸೌಕರ್ಯಗಳನ್ನು ಬಯಸುತ್ತಾರೆ" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತೀಯ ನಾಗರಿಕರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಇಂಧನದ ಮಹತ್ವದ ಪಾತ್ರದ ಬಗ್ಗೆ ಅವರು ಗಮನಸೆಳೆದರು.

ಮುಂದಿನ ದಿನಗಳಲ್ಲಿ ಭಾರತದಲ್ಲಿ ಇಂಧನದ ಅಗತ್ಯ ಮತ್ತು ಬೇಡಿಕೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಕ್ಷಿಪ್ರಗತಿಯ ಅಭಿವೃದ್ಧಿಯು ಹೊಸ ನಗರಗಳ ಅಭಿವೃದ್ಧಿಗೆ ಕಾರಣವಾಗಲಿದೆ ಎಂದರು. ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪ್ರಸಕ್ತ ದಶಕದಲ್ಲಿ ಭಾರತದ ಇಂಧನ ಬೇಡಿಕೆಗಳು ಅತ್ಯಧಿಕವಾಗಿರಲಿದ್ದು, ಇದು ಇಂಧನ ಕ್ಷೇತ್ರದ ಹೂಡಿಕೆದಾರರು ಮತ್ತು ಬಾಧ್ಯಸ್ಥರಿಗೆ ಅವಕಾಶವನ್ನು ಒದಗಿಸುತ್ತದೆ ಎಂದರು. ಜಾಗತಿಕ ತೈಲ ಬೇಡಿಕೆಯಲ್ಲಿ ಭಾರತದ ಪಾಲು ಶೇ.5ರಷ್ಟಿದ್ದು, ಇದು ಶೇ.11ಕ್ಕೆ ಏರಿಕೆಯಾಗುವ ನಿರೀಕ್ಷೆಯಿದ್ದರೆ, ಭಾರತದ ಅನಿಲ ಬೇಡಿಕೆ ಶೇ.500ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಭಾರತದ ವಿಸ್ತರಿಸುತ್ತಿರುವ ಇಂಧನ ವಲಯ ಹೂಡಿಕೆ ಮತ್ತು ಸಹಯೋಗಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿಯವರು ಇಂಧನ ಕ್ಷೇತ್ರದ ಕಾರ್ಯತಂತ್ರದ ನಾಲ್ಕು ಪ್ರಮುಖ ಆಯಾಮಗಳನ್ನು ವಿವರಿಸಿದರು. ಮೊದಲನೆಯದಾಗಿ, ದೇಶೀಯ ಪರಿಶೋಧನೆ ಮತ್ತು ಉತ್ಪಾದನೆ ಹೆಚ್ಚಳ, ಪೂರೈಕೆಯನ್ನು ವೈವಿಧ್ಯಮಯಗೊಳಿಸುವುದು ಮತ್ತು ಮೂರನೆಯದಾಗಿ, ಜೈವಿಕ ಇಂಧನ, ಎಥೆನಾಲ್, ಸಂಕುಚಿತ ಜೈವಿಕ ಅನಿಲ ಮತ್ತು ಸೌರಶಕ್ತಿಯಂತಹ ಇಂಧನಗಳನ್ನು ವಿಸ್ತರಿಸುವುದು. ನಾಲ್ಕನೆಯದಾಗಿ, ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಡ್ರೋಜನ್ ಮೂಲಕ ಇಂಗಾಲದ ಪರಿಣಾಮ ತಗ್ಗಿಸುವುದು (ಡಿ-ಕಾರ್ಬನೈಸೇಶನ್) ಎಂದರು. ಈ ಆಯಾಮಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ಭಾರತವು ತನ್ನ ಸಂಸ್ಕರಣಾ ಸಾಮರ್ಥ್ಯದಲ್ಲಿ ನಾಲ್ಕನೇ ಅತಿ ದೊಡ್ಡ ದೇಶವಾಗಿದೆ ಎಂದರು. ಪ್ರಸ್ತುತ 250 ಎಂಎಂಟಿಪಿಎ ಸಾಮರ್ಥ್ಯದಿಂದ 450 ಎಂಎಂಟಿಪಿಎಗೆ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. "ನಾವು ನಿರಂತರವಾಗಿ ನಮ್ಮ ಸಂಸ್ಕರಣಾ ಸಾಮರ್ಥ್ಯವನ್ನು ದೇಶೀಯ, ಆಧುನಿಕ ಮತ್ತು ನವೀಕರಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಅಂತೆಯೇ, ಭಾರತವು ಪೆಟ್ರೋ ರಾಸಾಯನಿಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ತಮ್ಮ ಇಂಧನ ಭೂರಮೆಯನ್ನು ವಿಸ್ತರಿಸಲು ತಂತ್ರಜ್ಞಾನ ಮತ್ತು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಅವರು ಉದ್ಯಮದ ನಾಯಕರಿಗೆ ತಿಳಿಸಿದರು.

2030ರ ವೇಳೆಗೆ ನಮ್ಮ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಬಳಕೆಯನ್ನು ಶೇ.6 ರಿಂದ ಶೇ.15ಕ್ಕೆ ಹೆಚ್ಚಿಸಲು ಸರ್ಕಾರ ಅಭಿಯಾನದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು, ಅಲ್ಲಿ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು 'ಒಂದು ರಾಷ್ಟ್ರ ಒಂದು ಗ್ರಿಡ್' ಮೂಲಕ ಒದಗಿಸಲಾಗುವುದು. "ಎಲ್.ಎನ್.ಜಿ ಟರ್ಮಿನಲ್ ಮರು ಅನಿಲೀಕರಣ (ರೀ-ಗ್ಯಾಸಿಫಿಕೇಷನ್) ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಟರ್ಮಿನಲ್ ರೀ -ಗ್ಯಾಸಿಫಿಕೇಶನ್ ಸಾಮರ್ಥ್ಯವು 2022 ರಲ್ಲಿ 21 ಎಂಎಂಟಿಪಿಎ ದ್ವಿಗುಣಗೊಂಡಿದೆ ಮತ್ತು ಅದನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ದೇಶದಲ್ಲಿ ಸಿಜಿಡಿಗಳ ಸಂಖ್ಯೆ 9 ಪಟ್ಟು ಹೆಚ್ಚಾಗಿದೆ ಮತ್ತು ಸಿಎನ್.ಜಿ ಕೇಂದ್ರಗಳ ಸಂಖ್ಯೆ 2014 ರಲ್ಲಿದ್ದ 900 ರಿಂದ 5000 ಕ್ಕೆ ಏರಿದೆ ಎಂದು ಅವರು ಹೇಳಿದರು. 2014 ರಲ್ಲಿದ್ದ 14,000 ಕಿಲೋಮೀಟರ್ ಇದ್ದ ಅನಿಲ ಕೊಳವೆ ಮಾರ್ಗ ಜಾಲವು 22,000 ಕಿಲೋಮೀಟರ್ ಗೆ ಏರಿದೆ ಮತ್ತು ಮುಂದಿನ 4-5 ವರ್ಷಗಳಲ್ಲಿ ಈ ಜಾಲವು 35,000 ಕಿಲೋಮೀಟರ್ ಗೆ ವಿಸ್ತರಿಸಲಿದೆ ಎಂದು ಪ್ರಧಾನಮಂತ್ರಿ ಗಮನಸೆಳೆದರು.

ದೇಶೀಯ ಅನ್ವೇಷಣೆ ಮತ್ತು ಉತ್ಪಾದನೆಗೆ ಭಾರತದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಪಿ ವಲಯವು ಇಲ್ಲಿಯವರೆಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿದ್ದ ಕ್ಷೇತ್ರಗಳಲ್ಲಿ ಆಸಕ್ತಿ ತೋರಿಸಿದೆ ಎಂದು ತಿಳಿಸಿದರು. "ನಾವು 'ನೋ-ಗೋ' ಪ್ರದೇಶಗಳನ್ನು ಕಡಿಮೆ ಮಾಡಿದ್ದೇವೆ. ಈ ಕಾರಣದಿಂದಾಗಿ, 10 ಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ನೋ-ಗೋ ನಿರ್ಬಂಧಗಳಿಂದ ಮುಕ್ತಗೊಳಿಸಲಾಗಿದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಪಳೆಯುಳಿಕೆ ಇಂಧನಗಳ ಅನ್ವೇಷಣೆಯಲ್ಲಿ ನಿಮ್ಮ ಉಪಸ್ಥಿತಿಯನ್ನು ಹೆಚ್ಚಿಸಲು ನಾನು ಎಲ್ಲ ಹೂಡಿಕೆದಾರರನ್ನು ಆಗ್ರಹಿಸುತ್ತೇನೆ " ಎಂದು ಅವರು ಹೇಳಿದರು.

ಜೈವಿಕ ಇಂಧನ ವಿಸ್ತರಣೆಗೆ ಸಂಬಂಧಿಸಿದಂತೆ, ಕಳೆದ ವರ್ಷ ಆಗಸ್ಟ್ ನಲ್ಲಿ ಆರಂಭಿಸಿದ ಮೊದಲ 2ಜಿ ಎಥೆನಾಲ್ ಜೈವಿಕ ಸಂಸ್ಕರಣಾಗಾರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 12 ವಾಣಿಜ್ಯ 2ಜಿ ಎಥೆನಾಲ್ ಘಟಕಗಳಿಗೆ ಸಿದ್ಧತೆ ನಡೆಯುತ್ತಿದೆ ಎಂದರು. ಅಂತೆಯೇ, ಸುಸ್ಥಿರ ವಾಯುಯಾನ ಇಂಧನ ಮತ್ತು ನವೀಕರಿಸಬಹುದಾದ ಡೀಸೆಲ್ ನ ವಾಣಿಜ್ಯ ಕಾರ್ಯಸಾಧ್ಯತೆಯ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ವರ್ಷದ ಆಯವ್ಯಯದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, 500 ಹೊಸ 'ತ್ಯಾಜ್ಯದಿಂದ ಸಂಪತ್ತಿಗೆ' ಗೋಬರ್ಧನ್ ಸ್ಥಾವರಗಳು, 200 ಸಂಕುಚಿತ ಜೈವಿಕ ಅನಿಲ ಸ್ಥಾವರಗಳು ಮತ್ತು 300 ಸಮುದಾಯ ಆಧಾರಿತ ಸ್ಥಾವರಗಳು ಹೂಡಿಕೆಗೆ ಹೊಸ ಮಾರ್ಗ ತೆರೆಯಲಿದೆ ಎಂದು ಮಾಹಿತಿ ನೀಡಿದರು.

"ರಾಷ್ಟ್ರೀಯ ಹಸಿರು ಜಲಜನಕ ಅಭಿಯಾನ 21ನೇ ಶತಮಾನದ ಭಾರತಕ್ಕೆ ಹೊಸ ದಿಕ್ಕನ್ನು ನೀಡುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. ಈ ದಶಕದ ಅಂತ್ಯದ ವೇಳೆಗೆ ದೇಶವು 5 ಎಂಎಂಟಿಪಿಎ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿಹೇಳಿದರು, ಇದು 8 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ ಸಾಧ್ಯತೆಯನ್ನು ತರುತ್ತದೆ. ಬೂದು ಹೈಡ್ರೋಜನ್ ಅನ್ನು ಬದಲಿಸುವ ಮೂಲಕ ಭಾರತವು ಹಸಿರು ಹೈಡ್ರೋಜನ್ ಪಾಲನ್ನು ಶೇಕಡಾ 25 ಕ್ಕೆ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ವೆಚ್ಚದಂತಹ ನಿರ್ಣಾಯಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಅದರ ವೆಚ್ಚವು ಕಾರಿನ ವೆಚ್ಚದ 40-50 ಪ್ರತಿಶತದಷ್ಟಿದೆ ಎಂದರು. ಸರ್ಕಾರದಿಂದ 18,000 ಕೋಟಿ ಮೌಲ್ಯದ ಪಿಎಲ್ಐ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದು 50 ಗಿಗಾವ್ಯಾಟ್ ಗಂಟೆಗಳ ಸುಧಾರಿತ ರಾಸಾಯನಿಕ ಕೋಶಗಳನ್ನು ತಯಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆ, ಸುಸ್ಥಿರ ಸಾರಿಗೆ ಮತ್ತು ಹಸಿರು ತಂತ್ರಜ್ಞಾನಗಳಿಗೆ ಹೊಸ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಇಂಧನ ಪರಿವರ್ತನೆ ಮತ್ತು ನಿವ್ವಳ ಶೂನ್ಯ ಉದ್ದೇಶಗಳನ್ನು ಹೆಚ್ಚಿಸಲು ಆದ್ಯತೆಯ ಬಂಡವಾಳ ಹೂಡಿಕೆಗಾಗಿ 35,000 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. 10 ಲಕ್ಷ ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ಒದಗಿಸುವುದರಿಂದ ಹಸಿರು ಹೈಡ್ರೋಜನ್, ಸೌರ ಶಕ್ತಿಯಿಂದ ರಸ್ತೆ ಮೂಲಸೌಕರ್ಯಕ್ಕೆ ಉತ್ತೇಜನ ಸಿಗಲಿದೆ ಎಂದರು.

ಕಳೆದ 9 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 70 ಗಿಗಾವ್ಯಾಟ್ ಗಳಿಂದ ಸುಮಾರು 170 ಗಿಗಾವ್ಯಾಟ್ ಗಳಿಗೆ ಏರಿದೆ ಮತ್ತು ಸೌರಶಕ್ತಿಯು 20 ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. "ಈ ದಶಕದ ಅಂತ್ಯದ ವೇಳೆಗೆ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ನಾವು ಹೊಂದಿದ್ದೇವೆ. " ಜೈವಿಕ ಇಂಧನ ಮತ್ತು ಎಥೆನಾಲ್ ಮಿಶ್ರಣದ ಬಗ್ಗೆಯೂ ನಾವು ಬಹಳ ವೇಗವಾಗಿ ಶ್ರಮಿಸುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ, ನಾವು ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇಕಡಾ 1.5 ರಿಂದ 10 ಕ್ಕೆ ಹೆಚ್ಚಿಸಿದ್ದೇವೆ. ಈಗ ನಾವು ಶೇ.20ರಷ್ಟು ಎಥೆನಾಲ್ ಮಿಶ್ರಣದ ಗುರಿಯತ್ತ ಸಾಗುತ್ತಿದ್ದೇವೆ", ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಬಿಡುಗಡೆ ಮಾಡಲಾದ ಇ-20  ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮೊದಲ ಹಂತದಲ್ಲಿ 15 ನಗರಗಳನ್ನು ಒಳಗೊಳ್ಳುತ್ತಿದ್ದು, ಎರಡು ವರ್ಷಗಳಲ್ಲಿ ಇದನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದರು.

ಇಂಧನ ಪರಿವರ್ತನೆಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆಯುತ್ತಿರುವ ಜನಾಂದೋಲನ ಪ್ರಕರಣವು ಅಧ್ಯಯನದ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಇದು ಎರಡು ರೀತಿಯಲ್ಲಿ ನಡೆಯುತ್ತಿದೆ: ಮೊದಲನೆಯದಾಗಿ, ನವೀಕರಿಸಬಹುದಾದ ಇಂಧನ ಮೂಲಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಮತ್ತು ಎರಡನೆಯದಾಗಿ, ಇಂಧನ ಸಂರಕ್ಷಣೆಯ ಪರಿಣಾಮಕಾರಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು", ಭಾರತದ ನಾಗರಿಕರು ನವೀಕರಿಸಬಹುದಾದ ಇಂಧನ ಮೂಲಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಮನೆಗಳು, ಹಳ್ಳಿಗಳು ಮತ್ತು ವಿಮಾನ ನಿಲ್ದಾಣಗಳು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತಿವೆ ಮತ್ತು ಸೌರ ಪಂಪ್ ಗಳೊಂದಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಉದಾಹರಣೆಗಳನ್ನು ಅವರು ನೀಡಿದರು. ಕಳೆದ 9 ವರ್ಷಗಳಲ್ಲಿ ಭಾರತದ 19 ಕೋಟಿಗೂ ಹೆಚ್ಚು ಕುಟುಂಬಗಳು ಶುದ್ಧ ಅಡುಗೆ ಇಂಧನದೊಂದಿಗೆ ಸಂಪರ್ಕಿತವಾಗಿವೆ ಎಂದು ಅವರು ಮಾಹಿತಿ ನೀಡಿದರು. ಇಂದು ಬಿಡುಗಡೆ ಮಾಡಲಾದ ಸೌರ ಕುಕ್ ಟಾಪ್ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇದು ಭಾರತದಲ್ಲಿ ಹಸಿರು ಮತ್ತು ಶುದ್ಧ ಅಡುಗೆಗೆ ಹೊಸ ಆಯಾಮ ನೀಡಲಿದೆ ಎಂದರು. "ಮುಂದಿನ 2-3 ವರ್ಷಗಳಲ್ಲಿ 3 ಕೋಟಿಗೂ ಹೆಚ್ಚು ಮನೆಗಳಿಗೆ ಸೌರ ಕುಕ್ ಟಾಪ್ ಗಳು ಲಭ್ಯವಾಗಲಿವೆ" ಎಂದು ಅವರು ಹೇಳಿದರು. "ಭಾರತದಲ್ಲಿ 25 ಕೋಟಿಗೂ ಹೆಚ್ಚು ಕುಟುಂಬಗಳಿದ್ದು, ಇದು ಅಡುಗೆಮನೆಯಲ್ಲಿ ಕ್ರಾಂತಿಯನ್ನು ತರುತ್ತದೆ ಎಂದರು. ಮನೆಗಳಲ್ಲಿ ಮತ್ತು ಬೀದಿ ದೀಪಗಳಲ್ಲಿ ಎಲ್ಇಡಿ ಬಲ್ಬ್ ಗಳು, ಮನೆಯಲ್ಲಿ ಸ್ಮಾರ್ಟ್ ಮೀಟರ್ ಗಳು, ಸಿಎನ್.ಜಿ ಮತ್ತು ಎಲ್ಎನ್.ಜಿ. ಅಳವಡಿಕೆ ಮತ್ತು ಎಲೆಕ್ಟ್ರಿಕ್ ವಾಹನಗಳ ಹೆಚ್ಚುತ್ತಿರುವ ಜನಪ್ರಿಯತೆಯ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಇಂಧನ ಸಂರಕ್ಷಣೆಯ ಪರಿಣಾಮಕಾರಿ ವಿಧಾನಗಳತ್ತ ವೇಗವಾಗಿ ಬದಲಾಗುತ್ತಿರುವ ಪ್ರವೃತ್ತಿಗಳನ್ನು ಎತ್ತಿ ತೋರಿಸಿದರು. 

ಪ್ರಧಾನಮಂತ್ರಿಯವರು ಹಸಿರು ವೃದ್ಧಿ ಮತ್ತು ಇಂಧನ ಪರಿವರ್ತನೆಗಾಗಿ ಭಾರತದ ಪ್ರಯತ್ನವನ್ನು ಭಾರತೀಯ ಮೌಲ್ಯಗಳೊಂದಿಗೆ ಜೋಡಿಸಿದರು, ಅಲ್ಲಿ ವೃತ್ತಾಕಾರದ ಆರ್ಥಿಕತೆಯು ಪ್ರತಿಯೊಬ್ಬ ಭಾರತೀಯನ ಜೀವನಶೈಲಿಯ ಭಾಗವಾಗಿದೆ ಮತ್ತು ತಗ್ಗಿಸುವುದು, ಪುನರ್ ಬಳಕೆ ಮಾಡುವುದು ಮತ್ತು ಮರುಬಳಕೆ ಮಾಡುವುದು ಸಂಸ್ಕೃತಿಯ ಭಾಗವಾಗಿದೆ. ಪ್ಲಾಸ್ಟಿಕ್ ಬಾಟಲಿಗಳನ್ನು ಸಮವಸ್ತ್ರಕ್ಕೆ ಮರುಬಳಕೆ ಮಾಡುವ ಉಪಕ್ರಮಗಳು ಲೈಫ್ ಅಭಿಯಾನವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

ಭಾರತದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಮತ್ತು ಅದರಲ್ಲಿ ತೊಡಗಿಸಿಕೊಳ್ಳುವಂತೆ ಬಾಧ್ಯಸ್ಥರಿಗೆ ಕರೆ ನೀಡಿದ ಪ್ರಧಾನಮಂತ್ರಿಯವರು, "ಇಂದು ಭಾರತವು ನಿಮ್ಮ ಹೂಡಿಕೆಗೆ ವಿಶ್ವದ ಅತ್ಯಂತ ಸೂಕ್ತವಾದ ಸ್ಥಳವಾಗಿದೆ" ಎಂದು ಹೇಳಿ ಭಾಷಣ ಮುಕ್ತಾಯಗೊಳಿಸಿದರು.

ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಶ್ರೀ ರಾಮೇಶ್ವರ್ ತೆಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹಿನ್ನೆಲೆ

ಫೆಬ್ರವರಿ 6 ರಿಂದ 8 ರವರೆಗೆ ಭಾರತ ಇಂಧನ ಸಪ್ತಾಹವನ್ನು ಆಯೋಜಿಸಲಾಗಿದ್ದು, ಇಂಧನ ಪರಿವರ್ತನೆಯ ಶಕ್ತಿ ಕೇಂದ್ರವಾಗಿ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಜವಾಬ್ದಾರಿಯುತ ಇಂಧನ ಪರಿವರ್ತನೆಯು ಪ್ರಸ್ತುತಪಡಿಸುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚಿಸಲು ಈ ಕಾರ್ಯಕ್ರಮವು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಇಂಧನ ಉದ್ಯಮ, ಸರ್ಕಾರಗಳು ಮತ್ತು ಶೈಕ್ಷಣಿಕ ವಲಯದ ನಾಯಕರನ್ನು ಒಗ್ಗೂಡಿಸುತ್ತದೆ. ಇದು ವಿಶ್ವದಾದ್ಯಂತದ 30ಕ್ಕೂ ಹೆಚ್ಚು ಸಚಿವರುಗಳ ಉಪಸ್ಥಿತಿಗೆ ಸಾಕ್ಷಿಯಾಗಲಿದೆ. 30,000 ಕ್ಕೂ ಹೆಚ್ಚು ಪ್ರತಿನಿಧಿಗಳು, 1,000 ಪ್ರದರ್ಶಕರು ಮತ್ತು 500 ಭಾಷಣಕಾರರು ಭಾರತದ ಇಂಧನ ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚಿಸಲು ಇಲ್ಲಿ ಸೇರಲಿದ್ದಾರೆ.

ಇಂಡಿಯನ್ ಆಯಿಲ್ ನ 'ಅನ್ ಬಾಟಲ್ಡ್' ಉಪಕ್ರಮದ ಅಡಿಯಲ್ಲಿ ಸಮವಸ್ತ್ರಗಳನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು. ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಹಂತಹಂತವಾಗಿ ನಿರ್ಮೂಲನೆ ಮಾಡುವ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಪ್ರೇರಿತವಾದ ಇಂಡಿಯನ್ ಆಯಿಲ್, ಮರುಬಳಕೆಯ ಪಾಲಿಯೆಸ್ಟರ್ (ಆರ್. ಪೆಟ್) ಮತ್ತು ಹತ್ತಿಯಿಂದ ತಯಾರಿಸಿದ ಸಮವಸ್ತ್ರವನ್ನು ಚಿಲ್ಲರೆ ಗ್ರಾಹಕರಿಗೆ ಸೇವೆ ಒದಗಿಸುವ ಸಿಬ್ಬಂದಿ ಮತ್ತು ಎಲ್ಪಿಜಿ ವಿತರಣಾ ಸಿಬ್ಬಂದಿಗೆ ನೀಡಲಿದೆ. ಇಂಡಿಯನ್ ಆಯಿಲ್ ನ ಗ್ರಾಹಕರ ಸೇವೆ ಒದಗಿಸುವವರ ಪ್ರತಿಯೊಂದು ಸಮವಸ್ತ್ರವು ಸುಮಾರು 28 ಬಳಸಿದ ಪಿಇಟಿ ಬಾಟಲಿಗಳ ಮರುಬಳಕೆಯನ್ನು ಬೆಂಬಲಿಸುತ್ತದೆ. ಮರುಬಳಕೆಯ ಪಾಲಿಯೆಸ್ಟರ್ ನಿಂದ ತಯಾರಿಸಿದ ಸರಕುಗಳಿಗಾಗಿ ಪ್ರಾರಂಭಿಸಲಾದ ಸುಸ್ಥಿರ ಉಡುಪುಗಳ ಬ್ರಾಂಡ್ 'ಅನ್ ಬಾಟಲ್ಡ್' ಮೂಲಕ ಇಂಡಿಯನ್ ಆಯಿಲ್ ಈ ಉಪಕ್ರಮವನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಬ್ರಾಂಡ್ ಅಡಿಯಲ್ಲಿ, ಇಂಡಿಯನ್ ಆಯಿಲ್ ಇತರ ತೈಲ ಮಾರುಕಟ್ಟೆ ಕಂಪನಿಗಳ ಗ್ರಾಹಕ ಪರಿಚಾರಕರಿಗೆ ಸಮವಸ್ತ್ರ, ಸೈನ್ಯಕ್ಕೆ ಸಮರ ಹೊರತಾದ ಸಮವಸ್ತ್ರ, ಸಂಸ್ಥೆಗಳಿಗೆ ಸಮವಸ್ತ್ರ / ಉಡುಪುಗಳು ಮತ್ತು ಚಿಲ್ಲರೆ ಗ್ರಾಹಕರಿಗೂ ಮಾರಾಟ ಮಾಡಿ, ಅವರ ಅಗತ್ಯವನ್ನು ಪೂರೈಸುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿಯವರು ಇಂಡಿಯನ್ ಆಯಿಲ್ ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಟ್ವಿನ್-ಕುಕ್ ಟಾಪ್ ಮಾದರಿಯನ್ನು ದೇಶಕ್ಕೆ ಸಮರ್ಪಿಸಿದರು ಮತ್ತು ಅದರ ವಾಣಿಜ್ಯ ಬಳಕೆಗೆ ಹಸಿರು ನಿಶಾನೆ ತೋರಿದರು. ಇಂಡಿಯನ್ ಆಯಿಲ್ ಈ ಹಿಂದೆ ಒಂದೇ ಕುಕ್ ಟಾಪ್ ನೊಂದಿಗೆ ನವೀನ ಮತ್ತು ಪೇಟೆಂಟ್ ಪಡೆದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು. ಸ್ವೀಕರಿಸಿದ ಪ್ರತಿಕ್ರಿಯೆಯ ಆಧಾರದ ಮೇಲೆ, ಟ್ವಿನ್-ಕುಕ್ ಟಾಪ್ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯನ್ನು ಬಳಕೆದಾರರಿಗೆ ಹೆಚ್ಚು ನಮ್ಯತೆ ಮತ್ತು ಸುಗಮ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕ್ರಾಂತಿಕಾರಿ ಒಳಾಂಗಣ ಸೌರ ಅಡುಗೆ ಪರಿಹಾರವಾಗಿದ್ದು, ಇದು ಸೌರ ಮತ್ತು ಪೂರಕ ಇಂಧನ ಮೂಲಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಭಾರತಕ್ಕೆ ವಿಶ್ವಾಸಾರ್ಹ ಅಡುಗೆ ಪರಿಹಾರವಾಗಿದೆ. 
 

 
*****



(Release ID: 1896707) Visitor Counter : 392