ಪ್ರಧಾನ ಮಂತ್ರಿಯವರ ಕಛೇರಿ

ಬೆಂಗಳೂರಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ  2ನೇ ಟರ್ಮಿನಲ್ ಉದ್ಘಾಟಿಸಿದ  ಪ್ರಧಾನಿ 

Posted On: 11 NOV 2022 3:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿ ಅವರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು, ಅಧಿಕಾರಿಗಳು ಟರ್ಮಿನಲ್ 2 ಕಟ್ಟಡದ ಮಾದರಿಯ ಬಗ್ಗೆ ವಿವರಿಸಿದರು. ಪ್ರಧಾನಮಂತ್ರಿಯವರು ಅನುಭವ ಕೇಂದ್ರ (ಎಕ್ಸ್‌ ಪೀರಿಯನ್ಸ್‌ ಸೆಂಟರ್) ದಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ನಡೆದಾಡಿದರು. ಟರ್ಮಿನಲ್ 2 ಕುರಿತ ಕಿರುಚಿತ್ರವನ್ನೂ ಪ್ರಧಾನಿ ವೀಕ್ಷಿಸಿದರು. 

 “ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್,  ಸಾಮರ್ಥ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ. ಇದು ನಗರ ಕೇಂದ್ರಗಳಿಗೆ ಉನ್ನತ ದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ. ಟರ್ಮಿನಲ್ ಸುಂದರ ಮತ್ತು ಪ್ರಯಾಣಿಕರ ಸ್ನೇಹಿಯಾಗಿದೆ! ಇದನ್ನು ಉದ್ಘಾಟಿಸಿದ್ದು ಸಂತಸ ತಂದಿದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

 

ಹಿನ್ನೆಲೆ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಟರ್ಮಿನಲ್ ವಿಮಾನ ನಿಲ್ದಾಣದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ವಾರ್ಷಿಕವಾಗಿ ಪ್ರಸ್ತುತ ಇರುವ 2.5 ಕೋಟಿಯಿಂದ 5-6 ಕೋಟಿ ಪ್ರಯಾಣಿಕರಿಗೆ ದುಪ್ಪಟ್ಟುಗೊಳಿಸುತ್ತದೆ.

ಟರ್ಮಿನಲ್ 2 ಅನ್ನು ಬೆಂಗಳೂರಿನ ಉದ್ಯಾನ ನಗರಿ ಹೆಸರಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರಯಾಣಿಕರ ಅನುಭವವು "ಉದ್ಯಾನದಲ್ಲಿ ನಡಿಗೆ" ಯಾಗಿರುತ್ತದೆ. ಪ್ರಯಾಣಿಕರು 10,000ಕ್ಕೂ ಹೆಚ್ಚು ಚದರ ಮೀಟರ್‌ಗಳಷ್ಟು ಹಸಿರು ಗೋಡೆಗಳು, ತೂಗು ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸುತ್ತಾರೆ. ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಇಂಧನದ ಶೇ.100 ರಷ್ಟು ಬಳಕೆಯೊಂದಿಗೆ ವಿಮಾನ ನಿಲ್ದಾಣವು ಈಗಾಗಲೇ ಸುಸ್ಥಿರತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ.

ಸುಸ್ಥಿರತೆಯ ತತ್ವಗಳೊಂದಿಗೆ ಟರ್ಮಿನಲ್ 2 ಅನ್ನು ವಿನ್ಯಾಸಗೊಳಿಸಲಾಗಿದೆ. ಟರ್ಮಿನಲ್ 2 ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ಸುಸ್ಥಿರತೆಯ ಉಪಕ್ರಮಗಳ ಆಧಾರದಲ್ಲಿ ಯುಎಸ್‌ ಜಿಬಿಸಿ (ಹಸಿರು ಕಟ್ಟಡ ಮಂಡಳಿ) ಯಿಂದ ಪೂರ್ವ ಪ್ರಮಾಣೀಕರಿಸಿದ ಪ್ಲಾಟಿನಂ ರೇಟಿಂಗ್ ಅನ್ನು ಹೊಂದಿರುವ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿರುತ್ತದೆ. ಟರ್ಮಿನಲ್ 2 ರ 'ನವರಸ' ಧ್ಯೇಯವು ಎಲ್ಲಾ ಕಲಾಕೃತಿಗಳನ್ನು ಒಂದುಗೂಡಿಸುತ್ತದೆ. ಕಲಾಕೃತಿಗಳು ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿ ಮತ್ತು ವಿಶಾಲವಾದ ಭಾರತೀಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ.

ಒಟ್ಟಾರೆಯಾಗಿ, ಟರ್ಮಿನಲ್ 2 ರ ವಿನ್ಯಾಸ ಮತ್ತು ವಾಸ್ತುಶಿಲ್ಪವು ನಾಲ್ಕು ಮಾರ್ಗದರ್ಶಿ ತತ್ವಗಳಿಂದ ಪ್ರಭಾವಿತವಾಗಿದೆ: ಉದ್ಯಾನದಲ್ಲಿ ಟರ್ಮಿನಲ್, ಸುಸ್ಥಿರತೆ, ತಂತ್ರಜ್ಞಾನ ಮತ್ತು ಕಲೆ ಮತ್ತು ಸಂಸ್ಕೃತಿ. ಈ ಎಲ್ಲಾ ಅಂಶಗಳು ಟರ್ಮಿನಲ್ 2ನ್ನು ಆಧುನಿಕವಾದರೂ ನಿಸರ್ಗ ಪ್ರೀತಿಯ ಟರ್ಮಿನಲ್ ಆಗಿ ಪ್ರದರ್ಶಿಸುತ್ತವೆ ಮತ್ತು ಎಲ್ಲಾ ಪ್ರಯಾಣಿಕರಿಗೆ ಸ್ಮರಣೀಯ 'ಗಮ್ಯಸ್ಥಾನ' ಅನುಭವವನ್ನು ನೀಡುತ್ತದೆ.

ಪ್ರಧಾನಮಂತ್ರಿಯವರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.

 

*******

 



(Release ID: 1875211) Visitor Counter : 175