ಪ್ರಧಾನ ಮಂತ್ರಿಯವರ ಕಛೇರಿ

ಅಕ್ಟೋಬರ್ 31ರಂದು ಕೆವಾಡಿಯಾದಲ್ಲಿ ಪ್ರಧಾನ ಮಂತ್ರಿಯವರ ಮುಂದೆ ಪ್ರದರ್ಶನ ನೀಡಲಿರುವ ಬುಡಕಟ್ಟು ಮಕ್ಕಳ ಸಂಗೀತ ತಂಡ 


ಒಂದು ಕಾಲದಲ್ಲಿ ಅಂಬಾಜಿ ದೇವಾಲಯದಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳು ಈಗ ಪ್ರಧಾನ ಮಂತ್ರಿಯವರ ಪ್ರೋತ್ಸಾಹದ ಬಳಿಕ ಕೆವಾಡಿಯಾದಲ್ಲಿ ಪ್ರದರ್ಶನ ನೀಡಲಿದ್ದಾರೆ

ಸೆಪ್ಟೆಂಬರ್ 30ರಂದು ಪ್ರಧಾನಮಂತ್ರಿಯವರು ಅಂಬಾಜಿಗೆ ಭೇಟಿ ನೀಡಿದಾಗ ಈ ಹಿಂದೆಯೂ ಈ ತಂಡವು ಪ್ರದರ್ಶನ ನೀಡಿತ್ತು

Posted On: 28 OCT 2022 1:21PM by PIB Bengaluru

ಬನಸ್ಕಾಂತ ಜಿಲ್ಲೆಯ ಅಂಬಾಜಿ ಪಟ್ಟಣದ ಬುಡಕಟ್ಟು ಮಕ್ಕಳ ಸಂಗೀತ ತಂಡವು ಅಕ್ಟೋಬರ್ 31ರಂದು ಕೆವಾಡಿಯಾದಲ್ಲಿ ಪ್ರಧಾನ ಮಂತ್ರಿಯವರ ಮುಂದೆ ಪ್ರದರ್ಶನ ನೀಡಲಿದೆ. ʻರಾಷ್ಟ್ರೀಯ ಏಕತಾ ದಿವಸ್ʼ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕೆವಾಡಿಯಾಕ್ಕೆ ಭೇಟಿ ನೀಡಲಿದ್ದಾರೆ.

ಈ ಸಂಗೀತ ತಂಡವು ಪ್ರಧಾನ ಮಂತ್ರಿಗಳಿಗಾಗಿ ಪ್ರದರ್ಶನ ನೀಡುತ್ತಿರುವುದು ಇದೇ ಮೊದಲೇನಲ್ಲ. 2022ರ ಸೆಪ್ಟೆಂಬರ್ 30ರಂದು ಪ್ರಧಾನಮಂತ್ರಿಯವರು ಗುಜರಾತ್‌ನ ಅಂಬಾಜಿಗೆ ಭೇಟಿ ನೀಡಿದಾಗ ಮತ್ತು ₹ 7200 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ / ಲೋಕಾರ್ಪಣೆ ನೆರವೇರಿಸಿದಾಗ ಸಾರ್ವಜನಿಕ ಸಮಾರಂಭಕ್ಕೆ ಪ್ರಧಾನ ಮಂತ್ರಿ ಅವರನ್ನು ಸ್ವಾಗತಿಸಲು ಈ ತಂಡವು ಪ್ರದರ್ಶನ ನೀಡಿತ್ತು. 

ಪ್ರಧಾನ ಮಂತ್ರಿಯವರು ಯುವ ತಂಡದ ಪ್ರದರ್ಶನವನ್ನು ಆನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಸಾರ್ವಜನಿಕ ಸಮಾರಂಭ ಪ್ರಾರಂಭವಾಗುವ ಮೊದಲು ತಂಡದ ಸದ್ಯರೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸಿದರು. ಯುವ ಸ್ನೇಹಿತರನ್ನು ಉತ್ತೇಜಿಸಲು, ಪ್ರಧಾನ ಮಂತ್ರಿಗಳು ಅವರೊಂದಿಗೆ ಒಂದು ಗ್ರೂಪ್‌ ಫೋಟೊವನ್ನೂ ತೆಗೆಸಿಕೊಂಡರು. 

ಅಸಾಧಾರಣ ಸಂಗೀತ ಕೌಶಲ್ಯಗಳನ್ನು ಕಲಿತ ಈ ಬುಡಕಟ್ಟು ಮಕ್ಕಳ ಯಶೋಗಾಥೆಯು ಹೇಳಲು ಯೋಗ್ಯವಾದುದಾಗಿದೆ. ಈ ಮಕ್ಕಳು ಒಮ್ಮೆ ತಮ್ಮ ಮೂಲಭೂತ ಅಗತ್ಯಗಳಿಗಾಗಿ ಮತ್ತು ಶಿಕ್ಷಣ ಪಡೆಯುವ ಅವಕಾಶಕ್ಕಾಗಿ ಹೋರಾಡುತ್ತಿದ್ದರು. ಅವರು ಆಗಾಗ್ಗೆ ಅಂಬಾಜಿ ದೇವಾಲಯದ ಬಳಿ ಕಾಣಿಸಿಕೊಳ್ಳುತ್ತಿದ್ದರು. ಅಲ್ಲಿ ಅವರು ಸಂದರ್ಶಕರ ಮುಂದೆ ಭಿಕ್ಷೆ ಬೇಡುತ್ತಿದ್ದರು. ಅಂಬಾಜಿಯಲ್ಲಿರುವ ಶ್ರೀ ಶಕ್ತಿ ಸೇವಾ ಕೇಂದ್ರ ಎಂಬ ಸ್ಥಳೀಯ ಎನ್‌ಜಿಒ ಈ ಮಕ್ಕಳಿಗಾಗಿ ಕೆಲಸ ಮಾಡಿತು. ಅವರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೆ ಅವರಲ್ಲಿರುವ ಉತ್ತಮ ಕೌಶಲ್ಯಗಳನ್ನು ಗುರುತಿಸಲು ಸಹ ನೆರವು ನೀಡಿತು. ಸಂಗೀತ ತಂಡದ ಬುಡಕಟ್ಟು ಮಕ್ಕಳಿಗೆ ಶ್ರೀ ಶಕ್ತಿ ಸೇವಾ ಕೇಂದ್ರ ಎನ್‌ಜಿಒ ಕೌಶಲ್ಯವನ್ನು ಸಹ ಒದಗಿಸಿತು.

ಪ್ರಧಾನಮಂತ್ರಿಯವರು ಯುವ ತಂಡದ ಪ್ರದರ್ಶನವನ್ನು ಎಷ್ಟು ಆನಂದಿಸಿದರು ಮತ್ತು  ಶ್ಲಾಘಿಸಿದರೆಂದರೆ, ಅಕ್ಟೋಬರ್ 31ರಂದು ʻರಾಷ್ಟ್ರೀಯ ಏಕತಾ ದಿವಸʼದ ಸಂದರ್ಭದಲ್ಲಿ ಕೆವಾಡಿಯಾಕ್ಕೆ ತಂಡವನ್ನು ಆಹ್ವಾನಿಸಿದರು. ಇದರಿಂದ ಐತಿಹಾಸಿಕ ದಿನದಂದು ಕಾರ್ಯ್ರಮದಲ್ಲಿ ಭಾಗವಹಿಸವ ಮತ್ತು ಪ್ರದರ್ಶನ ನೀಡುವ ಅವಕಾಶವನ್ನು ತಂಡವು ಪಡೆದಿದೆ. 

ಅಕ್ಟೋಬರ್ 31ರಂದು ಪ್ರಧಾನಮಂತ್ರಿಯವರು ಕೆವಾಡಿಯಾಕ್ಕೆ ಭೇಟಿ ನೀಡಲಿದ್ದು, ಸರ್ದಾರ್ ಪಟೇಲರ 147ನೇ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ಅವರು ʻಏಕತಾ ದಿವಸ್ ಪರೇಡ್ʼನಲ್ಲಿ ಭಾಗವಹಿಸಲಿದ್ದಾರೆ ಮತ್ತು ʻಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿʼಯಲ್ಲಿ ಫೌಂಡೇಶನ್ ಕೋರ್ಸ್‌ ತರಬೇತಿ ಪಡೆಯುತ್ತಿರುವ ವಿವಿಧ ನಾಗರಿಕ ಸೇವೆಗಳಿಗೆ ಸೇರಿದ ಅಧಿಕಾರಿ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

*****



(Release ID: 1871824) Visitor Counter : 127