ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಸ್ವಚ್ಛ ಭಾರತ 2022 ಅಭಿಯಾನದ ಅಡಿ, ಅಕ್ಟೋಬರ್ 19ರಂದು ದೆಹಲಿಯ ಚಾಂದನಿ ಚೌಕ್‌ನಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಉದ್ಘಾಟಿಸಲಿರುವ ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ 


ಸ್ವಚ್ಛ ಭಾರತ್ 2022 ಅಭಿಯಾನದ ಅಡಿ, ದೇಶಾದ್ಯಂತ ಎಲ್ಲಾ ಜಿಲ್ಲೆಗಳಿಂದ ಇದುವರೆಗೆ 60 ಲಕ್ಷ ಕೆ.ಜಿ.ಗೂ ಹೆಚ್ಚಿನ ತ್ಯಾಜ್ಯ ಸಂಗ್ರಹ

Posted On: 18 OCT 2022 10:54AM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2022 ಅಕ್ಟೋಬರ್ 19ರಂದು ದೆಹಲಿಯ ಚಾಂದನಿ ಚೌಕ್‌ನಿಂದ ಸ್ವಚ್ಛ ಭಾರತ 2022 ಅಭಿಯಾನದ ಅಡಿ, ಬೃಹತ್ ಸ್ವಚ್ಛತಾ ಆಂದೋಲನ ಉದ್ಘಾಟಿಸಲಿದ್ದಾರೆ. ದೇಶಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಅಂದು ಇದೇ ರೀತಿಯ ಸ್ವಚ್ಛತಾ ಆಂದೋಲನಗಳನ್ನು ಕೈಗೊಳ್ಳಲಾಗುವುದು. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ ಮತ್ತು ಅದರ ಅಂಗಸಂಸ್ಥೆಗಳಾದ ಎನ್ ವೈಕೆಎಸ್ ಹಾಗೂ ಎನ್ನೆಸ್ಸೆಸ್ ಮೂಲಕ ಸ್ವಚ್ಛ ಭಾರತ 2022 ಅಭಿಯಾನದ ಪ್ರಯತ್ನಗಳನ್ನು ಕ್ರೋಢೀಕರಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ದೇಶಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಂದೋಲನದಲ್ಲಿ ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಇದು ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸುತ್ತದೆ.

ಒಂದು ಸಣ್ಣ ವಿನಮ್ರ ಆರಂಭವು ದೊಡ್ಡ ಬದಲಾವಣೆ ಮತ್ತು ಬೃಹತ್ ಪರಿವರ್ತನೆಗೆ  ಕಾರಣವಾಗಬಹುದು. ಆಜಾದಿ ಕಾ ಅಮೃತ ಮಹೋತ್ಸವದ ಸ್ಮರಣಾರ್ಥ ಯುವಜನ ವ್ಯವಹಾರಗಳ ಇಲಾಖೆ ಆರಂಭಿಸಿದ ಸ್ವಚ್ಛ ಭಾರತ್ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿದೆ.

ಕೇವಲ 17 ದಿನಗಳ ಹಿಂದೆ 1 ಕೋಟಿ ಕೆ.ಜಿ. ತೂಕದ ತ್ಯಾಜ್ಯ ಸಂಗ್ರಹ ಉದ್ದೇಶದಿಂದ ಕಾರ್ಯಕ್ರಮ ಆರಂಭಿಸಲಾಯಿತು. ಆದರೆ ಕೇವಲ 1 ತಿಂಗಳ ಅವಧಿಯಲ್ಲಿ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಿಂದ ಇಲ್ಲಿಯವರೆಗೆ ಸುಮಾರು 60 ಲಕ್ಷ ಕೆ.ಜಿ. ತ್ಯಾಜ್ಯ ಸಂಗ್ರಹಿಸಲಾಗಿದೆ. ಇದು ದೇಶದ ಅಪಾರ ಸಂಖ್ಯೆ ಯುವಕರು ಮತ್ತು ಎಲ್ಲಾ ವರ್ಗಗಳ ಜನರ ಅಗಾಧ ಬೆಂಬಲ ಮತ್ತು ಪ್ರತಿಕ್ರಿಯೆಯೊಂದಿಗೆ ಸಾಧ್ಯವಾಗಿದೆ.

ಇದು ಒಂದು ರೀತಿಯ ಟ್ರೆಂಡ್ ಸೆಟ್ಟರ್ ಆಗಿದೆ. ಜನರು ವಿಶೇಷವಾಗಿ ಯುವಕರು ತಮ್ಮ ಹಿನ್ನೆಲೆ ಮತ್ತು ಸಂಬಂಧಗಳನ್ನು ಲೆಕ್ಕಿಸದೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅವರು ಸ್ವಯಂಪ್ರೇರಿತರಾಗಿ ಕಾರ್ಯಕ್ರಮಕ್ಕೆ ಸೇರುವಂತೆ ಇತರರನ್ನು ಪ್ರೇರೇಪಿಸುವಲ್ಲಿ ಮತ್ತು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಸ್ವಚ್ಛತಾ ಅಭಿಯಾನವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ 2014ರಲ್ಲಿ ಆರಂಭಿಸಿದರು. ಅಂದಿನಿಂದ  ಗಮನಾರ್ಹ ಪ್ರಗತಿ ಸಾಧಿಸಿರುವುದನ್ನು ಗಮನಿಸಬಹುದು. ಈ ಕಾರ್ಯಕ್ರಮವು ನವೀಕೃತ ಗಮನ ಮತ್ತು ಬದ್ಧತೆಯೊಂದಿಗೆ ಪ್ರಧಾನಮಂತ್ರಿ ಅವರ ನೇತೃತ್ವದ ಉಪಕ್ರಮದ ಮುಂದುವರಿಕೆಯ ಭಾಗವಾಗಿದೆ.

ಯುವ ಸಮುದಾಯ ಕೇಂದ್ರಿತ ಮಾದರಿಯೊಂದಿಗೆ ಸ್ವಚ್ಛ ಭಾರತವು, ಕಾರ್ಯಕ್ರಮದ ದೃಶ್ಯೀಕರಣ, ಜನರ ಸಜ್ಜುಗೊಳಿಸುವಿಕೆ ಮತ್ತು ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಲ್ಲಿ ಯುವಕರಿಗೆ ಪ್ರಮುಖ ಪಾತ್ರ ಕಲ್ಪಿಸಿದೆ. ಯುವಕರ ಆಗಮನವು ದೇಶದ ಅಭಿವೃದ್ಧಿಯನ್ನು ಅಂಚಿನಿಂದ ಮುಖ್ಯವಾಹಿನಿಗೆ ತರಲು ಉತ್ತಮವಾಗಿದೆ.

ಆದಾಗ್ಯೂ, ಕಾರ್ಯಕ್ರಮದ ಕೇಂದ್ರಬಿಂದು ಗ್ರಾಮೀಣ ಭಾಗವಾಗಿದೆ. ಆದರೆ ಜನಸಂಖ್ಯೆಯ ನಿರ್ದಿಷ್ಟ ಭಾಗಗಳಾದ ಧಾರ್ಮಿಕ ಸಂಸ್ಥೆಗಳು, ಶಿಕ್ಷಕರು, ಕಾರ್ಪೊರೇಟ್ ಸಂಸ್ಥೆಗಳು, ಮಹಿಳಾ ಗುಂಪುಗಳು ಮತ್ತು ಇತರರು ತಮ್ಮ ಒಗ್ಗಟ್ಟು ಪ್ರದರ್ಶಿಸಲು ಮತ್ತು ಅದನ್ನು ನೈಜ ಸಾರ್ವಜನಿಕ ಚಳುವಳಿಯನ್ನಾಗಿ ಮಾಡಲು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಐತಿಹಾಸಿಕ, ಪ್ರಸಿದ್ಧ ಅಥವಾ ಜನಪ್ರಿಯ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಸ್ಥಳಗಳಲ್ಲಿ ಇದೇ ರೀತಿಯ ಆಂದೋಲನಗಳನ್ನು ಕೈಗೊಳ್ಳಲಾಗುತ್ತಿದೆ.

ಕಾರ್ಯಕ್ರಮವು ಪ್ರಮಾಣ ಮತ್ತು ಪ್ರಭಾವ ಎರಡರಲ್ಲೂ ವಿಶಿಷ್ಟವಾಗಿದೆ. ಯುವ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಜನಾಂದೋಲನ ಮಾದರಿಯಲ್ಲಿ ಇದು ದೃಶ್ಯೀಕರಣಗೊಂಡಿದೆ. ಈ ಮೂಲಕ ಕಾರ್ಯಕ್ರಮದ ಯಶಸ್ಸು ಮತ್ತು ಸುಸ್ಥಿರತೆಗೆ ಪ್ರತಿಯೊಬ್ಬ ನಾಗರಿಕರ ಪಾತ್ರ ಮತ್ತು ಕೊಡುಗೆಯನ್ನು ಉಲ್ಲೇಖಿಸಲಾಗಿದೆ.

ಸ್ವಚ್ಛ ಭಾರತವು ಕೇವಲ ಒಂದು ಕಾರ್ಯಕ್ರಮವಲ್ಲ, ಆದರೆ ಇದು ಸಾಮಾನ್ಯ ಜನರ ನಿಜವಾದ ಕಾಳಜಿ ಮತ್ತು ಸಮಸ್ಯೆಯನ್ನು ಎದುರಿಸಲು ಅವರಿಗಿರುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತಿದೆ.

ಈ ಉಪಕ್ರಮದ ಪ್ರಮುಖ ಚಾಲನಾ ಅಂಶ(ಶಕ್ತಿ)ವೆಂದರೆ, ಎಲ್ಲಾ ಪಾಲುದಾರರ ನಡುವೆ ಸಮನ್ವಯ ಮತ್ತು ಸಹಕ್ರಿಯೆ. ವಿವಿಧ ಇಲಾಖೆಗಳು, ಏಜೆನ್ಸಿಗಳು, ಸಮುದಾಯ ಆಧರಿತ ಸಂಘ ಸಂಸ್ಥೆಗಳು(ಸಿಬಿಒಗಳು) ಮತ್ತು ಸಿವಿಲ್ ಸೊಸೈಟಿ ಸಂಸ್ಥೆಗಳು; ಏಕಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಮತ್ತು ಸ್ವಚ್ಛತೆ ಖಾತ್ರಿಪಡಿಸುವ ಸಾಮಾನ್ಯ ಗುರಿ ಸಾಧಿಸಲು ಅವರೆಲ್ಲರೂ ಒಟ್ಟಾಗಿ ಸೇರುತ್ತಿದ್ದಾರೆ.

ಪ್ರಚಾರ(ಮಿಷನರಿ) ಉತ್ಸಾಹದಿಂದ ಪಟ್ಟುಬಿಡದೆ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ನೆಹರು ಯುವ ಕೇಂದ್ರ ಸಂಘಟನೆ(ಎನ್ ವೈಕೆಎಸ್  ಮತ್ತು ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಯ ಲಕ್ಷಾಂತರ ಯುವ ಸ್ವಯಂಸೇವಕರ ಬೆಂಬಲ ಮತ್ತು ಅಪಾರ ಕೊಡುಗೆ ಇಲ್ಲದಿದ್ದರೆ, ಈ ಸ್ವಚ್ಛ ಭಾರತ್ ಉಪಕ್ರಮದ ಯಶಸ್ವೀ ಪಯಣ ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಪ್ರಚಾರ ಪಡೆಯದೆ, ಹೆಸರು ಮುಂದೆ ಮಾಡದೆ, ಗುರುತು ಹೇಳಿಕೊಳ್ಳದೆ ತಮ್ಮದೇ ಆದ ಸ್ವಚ್ಛತಾ ಅಭಿಯಾನದಲ್ಲಿ ಸೇರಿಕೊಂಡು, ಉದಾರ ಕೊಡುಗೆ ನೀಡುತ್ತಿರುವ ಲಕ್ಷಾಂತರ ಯೋಧರಿದ್ದಾರೆ. ಅವರು ಈ ಆಂದೋಲನದ ನಿಜವಾದ ನಾಯಕರಾಗಿದ್ದಾರೆ. 

*****



(Release ID: 1868999) Visitor Counter : 127