ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಸಮ್ಮೇಳನ 2022 ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ


600 ಪ್ರಧಾನ ಮಂತ್ರಿಗಳ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ

ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ - ಒಂದು ರಾಷ್ಟ್ರ ಒಂದು ರಸಗೊಬ್ಬರಕ್ಕೆ ಚಾಲನೆ

ಭಾರತ್ ಯೂರಿಯಾ ಚೀಲ ಅನಾವರಣ

16,000 ಕೋಟಿ ರೂ. ಮೌಲ್ಯದ ಪಿಎಂ-ಕಿಸಾನ್ ನಿಧಿಗಳ ಬಿಡುಗಡೆ 

ರೈತರ ವಿವಿಧ ರೀತಿಯ ಅಗತ್ಯಗಳನ್ನು ಪೂರೈಸಲು,

3.5 ಲಕ್ಷ ರಸಗೊಬ್ಬರಗಳ ಚಿಲ್ಲರೆ ಅಂಗಡಿಗಳನ್ನು ಹಂತ ಹಂತವಾಗಿ ಪ್ರದಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಪರಿವರ್ತಿಸಲಾಗುವುದು 

"ತಂತ್ರಜ್ಞಾನ ಆಧಾರಿತ ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ"
 
"ಕಳೆದ 7-8 ವರ್ಷಗಳಲ್ಲಿ 70 ಲಕ್ಷ ಹೆಕ್ಟೇರ್ ಭೂಮಿಯನ್ನು ಸಣ್ಣ ನೀರಾವರಿಗೆ ಒಳಪಡಿಸಲಾಗಿದೆ"
 
“1.75 ಕೋಟಿಗೂ ಹೆಚ್ಚು ರೈತರು ಮತ್ತು 2.5 ಲಕ್ಷ ವ್ಯಾಪಾರಿಗಳು ಇ-ನ್ಯಾಮ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಇ-ನ್ಯಾಮ್ ಮೂಲಕ 2 ಲಕ್ಷ ಕೋಟಿ ರೂ. ದಾಟಿದ ವಹಿವಾಟು
 
"ಕೃಷಿ ವಲಯದ ಹೆಚ್ಹೆಚ್ಚು ಸ್ಟಾರ್ಟಪ್‌ಗಳು ಗ್ರಾಮೀಣ ಆರ್ಥಿಕತೆಗೆ ಉತ್ತಮವಾಗಿವೆ"

Posted On: 17 OCT 2022 2:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನ-2022 ಉದ್ಘಾಟಿಸಿದರು. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿ ಬರುವ 600 ಪ್ರಧಾನ ಮಂತ್ರಿಗಳ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ (ಪಿಎಂಕೆಎಸ್ ಕೆ) ಪ್ರಧಾನ ಮಂತ್ರಿ ಚಾಲನೆ ನೀಡಿದರು. ಇದಲ್ಲದೆ, ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನೆ(‘ಒಂದು ರಾಷ್ಟ್ರ ಒಂದು ರಸಗೊಬ್ಬರ’)ಯನ್ನು ಸಹ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿ, ನೇರ ನಗದು ವರ್ಗಾವಣೆ ಮೂಲಕ 12ನೇ ಕಂತಿನ 16,000 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ಅವರು ಅಗ್ರಿ ಸ್ಟಾರ್ಟಪ್ ಸಮಾವೇಶ ಮತ್ತು ಪ್ರದರ್ಶನ ಉದ್ಘಾಟಿಸಿದರು. ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರು ರಸಗೊಬ್ಬರದ ‘ಇಂಡಿಯನ್ ಎಡ್ಜ್’ ಹೆಸರಿನ ಇ-ಪತ್ರಿಕೆ ಬಿಡುಗಡೆ ಮಾಡಿದರು. ಶ್ರೀ ಮೋದಿ ಅವರು ಸ್ಟಾರ್ಟಪ್ ವಸ್ತುಪ್ರದರ್ಶನದಲ್ಲಿ ಎಕ್ಸಿಬಿಷನ್‌ನ ಥೀಮ್ ವೀಕ್ಷಿಸಿದರು ಮತ್ತು ಪ್ರದರ್ಶನದಲ್ಲಿರುವ ಉತ್ಪನ್ನಗಳನ್ನು ಪರಿಶೀಲಿಸಿದರು.

ನಂತರ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಮತ್ತು ಜೈ ಅನುಸಂಧಾನದ ಉಪಸ್ಥಿತಿಯನ್ನು ಒಪ್ಪಿಕೊಂಡ ಅವರು, ಈ ಮಂತ್ರದ ನೇರ ರೂಪವನ್ನು ನಾವು ಇಂದು ಇಲ್ಲಿ ನೋಡಬಹುದಾಗಿದೆ. ಕಿಸಾನ್ ಸಮ್ಮೇಳನವು ರೈತರ ಜೀವನ ಸುಲಭಗೊಳಿಸಲು, ಅವರ ಸಾಮರ್ಥ್ಯ ಹೆಚ್ಚಿಸಲು ಮತ್ತು ಸುಧಾರಿತ ಕೃಷಿ ತಂತ್ರಗಳನ್ನು ಉತ್ತೇಜಿಸಲು ಒಂದು ಸಾಧನವಾಗಿದೆ ಎಂದರು.
"600ಕ್ಕಿಂತ ಹೆಚ್ಚಿನ ಪ್ರಧಾನ ಮಂತ್ರಿಗಳ ಸಮೃದ್ಧಿ ಕೇಂದ್ರಗಳನ್ನು ಇಂದು ಉದ್ಘಾಟಿಸಲಾಗಿದೆ". ಈ ಕೇಂದ್ರಗಳು ಕೇವಲ ರಸಗೊಬ್ಬರ ಮಾರಾಟ ಕೇಂದ್ರಗಳಾಗದೆ, ದೇಶದ ರೈತರೊಂದಿಗೆ ಗಾಢವಾದ ಬಾಂಧವ್ಯ ಸ್ಥಾಪಿಸುವ ಕಾರ್ಯವಿಧಾನವಾಗಿವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್)ಯ ಹೊಸ ಕಂತಿಗೆ ಸಂಬಂಧಿಸಿದಂತೆ, ಯಾವುದೇ ಮಧ್ಯವರ್ತಿಗಳನ್ನು ಒಳಗೊಳ್ಳದೆ ನೇರವಾಗಿ ರೈತರ ಖಾತೆಗಳಿಗೆ ಹಣ ತಲುಪುತ್ತಿದೆ. "ಪ್ರಧಾನ ಮತ್ರಿಗಳ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಕೋಟ್ಯಂತರ ರೈತ ಕುಟುಂಬಗಳಿಗೆ 16,000 ಕೋಟಿ ರೂಪಾಯಿ ಮೊತ್ತದ ಮತ್ತೊಂದು ಕಂತು ಬಿಡುಗಡೆಯಾಗಿದೆ". ಈ ಕಂತು ದೀಪಾವಳಿಯ ಮೊದಲು ರೈತರಿಗೆ ತಲುಪುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ ಪ್ರಧಾನಿ, ಇಂದು ಪ್ರಧಾನ ಮಂತ್ರಿ ಭಾರತೀಯ ಜನ ಊರ್ವರಕ್ ಪರಿಯೋಜನೆ(ಒಂದು ರಾಷ್ಟ್ರ, ಒಂದು ರಸಗೊಬ್ಬರ)ಯನ್ನು ಸಹ ಪ್ರಾರಂಭಿಸಲಾಗಿದೆ, ಇದು ರೈತರಿಗೆ ಭಾರತ್ ಬ್ರ್ಯಾಂಡ್‌ನಲ್ಲಿ ಕೈಗೆಟುಕುವ ದರಕ್ಕೆ ಗುಣಮಟ್ಟದ ರಸಗೊಬ್ಬರ ಖಾತ್ರಿಪಡಿಸುವ ಯೋಜನೆಯಾಗಿದೆ ಎಂದು ಹೇಳಿದರು.

2014ರಕ್ಕಿಂತ ಹಿಂದಿನ ಸಮಯದಲ್ಲಿ ರೈತರು ಎದುರಿಸುತ್ತಿದ್ದ ಸಂಕಷ್ಟ, ಕೃಷಿ ಕ್ಷೇತ್ರದ ಹಿನ್ನಡೆ ಮತ್ತು ಯೂರಿಯಾದ ಕಾಳಸಂತೆ ಮಾರಾಟ ಪರಿಸ್ಥಿತಿಯ ಸಮಯವನ್ನು ನೆನಪಿಸಿಕೊಂಡ ಪ್ರಧಾನಿ, ರೈತರು ಅಂದಿನ ದಿನಗಳಲ್ಲಿ ನ್ಯಾಯಯುತವಾಗಿ ಏನನ್ನಾದರೂ ಪಡೆದುಕೊಳ್ಳಬೇಕಾದರೆ, ಲಾಠಿ ಏಟು ತಿನ್ನಬೇಕಾದ ಪರಿಸ್ಥಿತಿ ಇತ್ತು. ಯೂರಿಯಾ ರಸಗೊಬ್ಬರಕ್ಕೆ 100% ಬೇವಿನ ಲೇಪನ ಮಾಡುವ ಮೂಲಕ ಕಾಳಸಂತೆ ಮಾರುಕಟ್ಟೆಯನ್ನು ಸರ್ಕಾರ ಸಂಪೂರ್ಣ ನಿಯಂತ್ರಿಸಿದೆ. ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದ ದೇಶದ 6 ಬೃಹತ್ ಯೂರಿಯಾ ಕಾರ್ಖಾನೆಗಳನ್ನು ಪುನಾರಂಭಿಸಲು ನಾವು ಶ್ರಮಿಸಿದ್ದೇವೆ  ಎಂದು ಪ್ರಧಾನಿ ಹೇಳಿದರು.

ಕಷ್ಟಪಟ್ಟು ದುಡಿಯುವ ರೈತರಿಗೆ ಅಗಾಧವಾದ ಪ್ರಯೋಜನಗಳನ್ನು ನೀಡಿರುವ ಕ್ರಮಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ, ದ್ರವ ರೂಪದ ನ್ಯಾನೋ ಯೂರಿಯಾ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆಯತ್ತ ಮುನ್ನಡೆದಿದೆ. ನ್ಯಾನೊ ಯೂರಿಯಾವನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದಿಸಲಾಗುತ್ತಿದೆ. ಒಂದು ಚೀಲ ಯೂರಿಯಾವನ್ನು ಈಗ ಒಂದೇ ಬಾಟಲಿ ನ್ಯಾನೋ ಯೂರಿಯಾದಿಂದ ಬದಲಾಯಿಸಬಹುದು. ಯೂರಿಯಾದ ಸಾಗಣೆ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪ್ರಧಾನಿ ಹೇಳಿದರು.

ಭಾರತದ ರಸಗೊಬ್ಬರ ಸುಧಾರಣಾ ಯಶೋಗಾಥೆಯಲ್ಲಿ ಪ್ರಧಾನಿ ಅವರು 2 ಹೊಸ ಕ್ರಮಗಳನ್ನು ಪ್ರಸ್ತಾಪಿಸಿದರು. ಮೊದಲನೆಯದಾಗಿ, ದೇಶದಾದ್ಯಂತ 3.25 ಲಕ್ಷಕ್ಕೂ ಹೆಚ್ಚು ರಸಗೊಬ್ಬರ ಅಂಗಡಿಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಅಭಿಯಾನವನ್ನು ಇಂದು ಪ್ರಾರಂಭಿಸಲಾಗುತ್ತಿದೆ. ಇವುಗಳು ರೈತರು ರಸಗೊಬ್ಬರ ಮತ್ತು ಬೀಜಗಳನ್ನು ಖರೀದಿಸಲು ಮಾತ್ರವಲ್ಲದೆ, ಮಣ್ಣಿನ ಪರೀಕ್ಷೆಯನ್ನು ಅಳವಡಿಸಲು ಮತ್ತು ಕೃಷಿ ತಂತ್ರಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆಯುವ ಕೇಂದ್ರಗಳಾಗಿವೆ. ಎರಡನೆಯದಾಗಿ, ಒಂದು ರಾಷ್ಟ್ರ, ಒಂದು ರಸಗೊಬ್ಬರದೊಂದಿಗೆ, ರೈತರು ಗೊಬ್ಬರದ ಗುಣಮಟ್ಟ ಮತ್ತು ಅದರ ಲಭ್ಯತೆಯ ಬಗೆಗಿನ ಎಲ್ಲಾ ರೀತಿಯ ಗೊಂದಲಗಳನ್ನು ಹೋಗಲಾಡಿಸಬಹುದು. “ಈಗ ದೇಶದಲ್ಲಿ ಮಾರಾಟವಾಗುವ ಯೂರಿಯಾ ಅದೇ ಹೆಸರು, ಅದೇ ಬ್ರ್ಯಾಂಡ್ ಮತ್ತು ಅದೇ ಗುಣಮಟ್ಟದ್ದಾಗಿರುತ್ತದೆ ಮತ್ತು ಈ ಬ್ರ್ಯಾಂಡ್ ಭಾರತ್ ಆಗಿದೆ! ಈಗ ಇಡೀ ದೇಶದಲ್ಲಿ ‘ಭಾರತ್’ ಬ್ರ್ಯಾಂಡ್ ಹೆಸರಿನಲ್ಲಿ ಮಾತ್ರ ಯೂರಿಯಾ ಲಭ್ಯವಾಗಲಿದೆ. ಇದು ರಸಗೊಬ್ಬರಗಳ ಬೆಲೆ ಕಡಿಮೆ ಮಾಡಲು ಮತ್ತು ಅವುಗಳ ಲಭ್ಯತೆ ಹೆಚ್ಚಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದರು.

ತಂತ್ರಜ್ಞಾನ ಆಧಾರಿತ ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಇಂದಿನ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ನಾವು ಕೃಷಿಯಲ್ಲಿ ಹೊಸ ವ್ಯವಸ್ಥೆಗಳನ್ನು ಸೃಷ್ಟಿಸಬೇಕು, ಮುಕ್ತ ಮನಸ್ಸಿನಿಂದ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಈ ಚಿಂತನೆಯೊಂದಿಗೆ, ನಾವು ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಉತ್ತೇಜಿಸಲು ಮತ್ತು ತಂತ್ರಜ್ಞಾನದ ಗರಿಷ್ಠ ಬಳಕೆಗೆ ಒತ್ತು ನೀಡಿದ್ದೇವೆ. ಇಲ್ಲಿಯವರೆಗೆ 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸಲು ವೈಜ್ಞಾನಿಕ ಪ್ರಯತ್ನಗಳು ನಡೆಯುತ್ತಿವೆ. "ಕಳೆದ 7-8 ವರ್ಷಗಳಲ್ಲಿ ಬದಲಾದ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಸುಮಾರು 1,700 ಹೊಸ ತಳಿಯ ಬೀಜಗಳನ್ನು ರೈತರಿಗೆ ಲಭ್ಯವಾಗುವಂತೆ ಮಾಡಲಾಗಿದೆ" ಎಂದು ಪ್ರಧಾನಿ ಹೇಳಿದರು.

ಜಾಗತಿಕ ಮಟ್ಟದಲ್ಲಿ ರಾಗಿಯ ಬಗ್ಗೆ ಹೆಚ್ಚುತ್ತಿರುವ ಒಲವು ಮತ್ತು ಕುತೂಹಲವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, "ಇಂದು, ನಾವು ಇಲ್ಲಿ ಹೊಂದಿರುವ ಸಾಂಪ್ರದಾಯಿಕ ಸಿರಿಧಾನ್ಯಗಳ ಬೀಜಗಳ ಗುಣಮಟ್ಟ ಹೆಚ್ಚಿಸಲು ದೇಶದಲ್ಲಿ ಅನೇಕ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ". ವಿಶ್ವಾದ್ಯಂತ ಭಾರತದ ಸಿರಿಧಾನ್ಯಗಳನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಮುಂದಿನ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ನೀರಾವರಿಗಾಗಿ ವಿವೇಚನಾರಹಿತವಾಗಿ ನೀರು ಬಳಸದಂತೆ ಎಚ್ಚರಿಕೆ ನೀಡಿದ ಪ್ರಧಾನಮಂತ್ರಿ, ಪ್ರತಿ ಹನಿ ನೀರಿನಿಂದ ಅಧಿಕ ಬೆಳೆ, ಸೂಕ್ಷ್ಮ ನೀರಾವರಿ ಮತ್ತು ಹನಿ ನೀರಾವರಿಯ ದಿಕ್ಕಿನಲ್ಲಿ ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಪುನರುಚ್ಚರಿಸಿದರು. ಕಳೆದ 7-8 ವರ್ಷಗಳಲ್ಲಿ 70 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಭೂಮಿಯನ್ನು ಸೂಕ್ಷ್ಮ(ಸಣ್ಣ) ನೀರಾವರಿಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನೈಸರ್ಗಿಕ ಕೃಷಿ ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಭವಿಷ್ಯದ ಸವಾಲುಗಳನ್ನು ಪರಿಹರಿಸಲು ಇದು ಪ್ರಮುಖ ಮಾಧ್ಯಮವಾಗಲಿದೆ. ನಾವು ಇಂದು ದೇಶಾದ್ಯಂತ ಸಾಕಷ್ಟು ಜಾಗೃತಿಯನ್ನು ಅನುಭವಿಸುತ್ತಿದ್ದೇವೆ. ನೈಸರ್ಗಿಕ ಕೃಷಿಗಾಗಿ ಗುಜರಾತ್, ಹಿಮಾಚಲ ಪ್ರದೇಶ ಮತ್ತು ಆಂಧ್ರ ಪ್ರದೇಶದ ಜತೆಗೆ ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಗುಜರಾತ್ ನಲ್ಲಿ ಜಿಪಂ ಮತ್ತು ಗ್ರಾಪಂ ಮಟ್ಟದಲ್ಲಿಯೂ ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಪಿಎಂ-ಕಿಸಾನ್‌  ಪರಿವರ್ತನಾ ಉಪಕ್ರಮವನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸಣ್ಣ ರೈತರು ಹೇಗೆ ಪ್ರಯೋಜನ ಪಡೆಯುತ್ತಾರೆ ಎಂಬುದಕ್ಕೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಒಂದು ಉದಾಹರಣೆಯಾಗಿದೆ. “ಈ ಯೋಜನೆ ಪ್ರಾರಂಭವಾದಾಗಿನಿಂದ, ರೈತರ ಬ್ಯಾಂಕ್ ಖಾತೆಗಳಿಗೆ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ. ದೇಶದ ಶೇಕಡ 85ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವ ಸಣ್ಣ ರೈತರಿಗೆ ಇದು ದೊಡ್ಡ ಬೆಂಬಲವಾಗಿದೆ ಎಂದರು.
 
ಇಂದು ನಮ್ಮ ರೈತರಿಗೆ 'ಸುಗಮ ಜೀವನ' ಖಾತ್ರಿಪಡಿಸುವ ಕ್ರಮಗಳನ್ನು ಪ್ರಸ್ತಾಪಿಸಿದ  ಪ್ರಧಾನಮಂತ್ರಿ, ಉತ್ತಮ ಮತ್ತು ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ, ನಾವು ಕೃಷಿ ಮತ್ತು ಮಾರುಕಟ್ಟೆಯ ನಡುವಿನ ಅಂತರ ಕಡಿಮೆ ಮಾಡುತ್ತಿದ್ದೇವೆ. ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಮೀನುಗಳಂತ ಬೇಗನೇ ಕೊಳೆಯುವ ಉತ್ಪನ್ನಗಳೊಂದಿಗೆ ಸಂಬಂಧ ಹೊಂದಿರುವ ಸಣ್ಣ ರೈತರು ಇದರ ದೊಡ್ಡ ಫಲಾನುಭವಿಯೂ ಆಗಿದ್ದಾರೆ. ಕಿಸಾನ್ ರೈಲು ಮತ್ತು ಕೃಷಿ ಉಡಾನ್ ವಿಮಾನ ಸೇವೆಗಳು ಇದಕ್ಕೆ ಸಾಕಷ್ಟು ಸಹಾಯ ಮಾಡುತ್ತಿವೆ. ಈ ಆಧುನಿಕ ಸೌಲಭ್ಯಗಳು ಇಂದು ರೈತರ ಹೊಲಗಳನ್ನು ದೇಶದ ಪ್ರಮುಖ ನಗರಗಳಿಗೆ ಮತ್ತು ವಿದೇಶಗಳ ಮಾರುಕಟ್ಟೆಗಳಿಗೆ ಸಂಪರ್ಕಿಸುತ್ತಿವೆ. ಕೃಷಿ ರಫ್ತಿನಲ್ಲಿ ಭಾರತವು ವಿಶ್ವದ ಅಗ್ರ 10 ದೇಶಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಸಾಂಕ್ರಾಮಿಕ ರೋಗದ ಸಮಸ್ಯೆಗಳ ಹೊರತಾಗಿಯೂ ಕೃಷಿ ರಫ್ತು ಶೇಕಡ 18ರಷ್ಟು ಹೆಚ್ಚಾಗಿದೆ. ಪ್ರದೇಶವಾರು  ನಿರ್ದಿಷ್ಟ ರಫ್ತುಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ, ಈ ಉಪಕ್ರಮಗಳಿಗೆ ಬೆಂಬಲ ನೀಡಲಾಗುತ್ತಿದೆ, ಜಿಲ್ಲಾ ಮಟ್ಟದಲ್ಲಿ ರಫ್ತು ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅದೇ ರೀತಿ ಸಂಸ್ಕರಿತ ಆಹಾರ ಉತ್ಪನ್ನಗಳಿಂದ ರೈತರಿಗೆ ಹೆಚ್ಚಿನ ಆದಾಯ ಬರುತ್ತಿದೆ. ಬೃಹತ್ ಫುಡ್ ಪಾರ್ಕ್ ಗಳ ಸಂಖ್ಯೆ 2ರಿಂದ 23ಕ್ಕೆ ಏರಿಕೆ ಆಗಿದೆ. ಅದೇ ಸಮಯದಲ್ಲಿ, ಎಫ್ ಪಿ ಒ ಗಳು ಮತ್ತು ಸ್ವಸಹಾಯ ಗುಂಪುಗಳನ್ನು ಈ ಪಾರ್ಕ್ ಗಳೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇ-ನ್ಯಾಮ್ ರೈತರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಇ-ನ್ಯಾಮ್ ತಂತ್ರಜ್ಞಾನದ ಬಳಕೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತಿದೆ. “1.75 ಕೋಟಿಗೂ ಹೆಚ್ಚು ರೈತರು ಮತ್ತು 2.5 ಲಕ್ಷ ವ್ಯಾಪಾರಿಗಳು ಇ-ನ್ಯಾಮ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಇ-ನಾಮ್ ಮೂಲಕ ವಹಿವಾಟು 2 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಅವರು ಮಾಹಿತಿ ನೀಡಿದರು.

ದೇಶದ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಟಾರ್ಟಪ್‌ಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಇದು ಕೃಷಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಗೆ ಉತ್ತಮ ಭವಿಷ್ಯ ನೀಡಲಿದೆ.  “ಸ್ಟಾರ್ಟಪ್‌ಗಳು  ಹೊಸದನ್ನು ಕಂಡುಹಿಡಿಯುವ ಯುವ ಸಮುದಾಯ ಭಾರತೀಯ ಕೃಷಿ ಮತ್ತು ಭಾರತದ ಗ್ರಾಮೀಣ ಆರ್ಥಿಕತೆಯ ಭವಿಷ್ಯವಾಗಿದ್ದಾರೆ. ವೆಚ್ಚದಿಂದ ಸಾರಿಗೆಯವರೆಗೆ, ನಮ್ಮ ಸ್ಟಾರ್ಟಪ್‌ಗಳು ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡುಹಿಡಿಯುತ್ತಿವೆ” ಎಂದು ಮೋದಿ ಹೇಳಿದರು.

ಆತ್ಮನಿರ್ಭರ್ ಭಾರತ ಕಟ್ಟುವ ತಮ್ಮ ಪಟ್ಟುಬಿಡದ ಉದ್ದೇಶಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಖಾದ್ಯ ತೈಲ, ರಸಗೊಬ್ಬರ ಮತ್ತು ಕಚ್ಚಾ ತೈಲದಂತಹ ಪ್ರಮುಖ ಉತ್ಪನ್ನಗಳು ಬೃಹತ್ ಹಣಕಾಸಿನ ಹೊರಹೋಗುವಿಕೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರುವ ಜಾಗತಿಕ ಪರಿಸ್ಥಿತಿಗಳಿಗೆ ಕಾರಣವಾಗಿವೆ ಎಂದರು. ಅವರು ಡಿಎಪಿ ಮತ್ತು ಇತರ ರಸಗೊಬ್ಬರಗಳ ಉದಾಹರಣೆಗಳನ್ನು ನೀಡಿದರು. ಅದರ ಬೆಲೆಗಳು ವಿಪರೀತವಾಗಿ ಏರಿದವು. ಭಾರತವು ಪ್ರತಿ ಕೆಜಿ ಯೂರಿಯಾವನ್ನು 75-80 ರೂಪಾಯಿ ದರದಲ್ಲಿ ಖರೀದಿಸಬೇಕಾಯಿತು, ಆದರೂ ಅದನ್ನು ಕೆಜಿಗೆ 5-6 ರೂ.ಗೆ ರೈತರಿಗೆ ಸರಬರಾಜು ಮಾಡಲಾಯಿತು. ಈ ವರ್ಷವೂ ರೈತರಿಗೆ ಕೈಗೆಟುಕುವ ರಸಗೊಬ್ಬರ ಖಚಿತಪಡಿಸಿಕೊಳ್ಳಲು ಸರ್ಕಾರ 2.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಿದೆ ಎಂದು ಮೋದಿ ಹೇಳಿದರು. ಕಚ್ಚಾ ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದಂತೆ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಜೈವಿಕ ಇಂಧನ ಮತ್ತು ಎಥೆನಾಲ್ ಇಂಧನ ಉತ್ಪಾದನೆ ಕ್ರಮಗಳನ್ನು ಅವರು ಪ್ರಸ್ತಾಪಿಸಿದರು.
 
ಖಾದ್ಯ ತೈಲ ವಲಯದಲ್ಲಿ ಆತ್ಮನಿರ್ಭರ್ ಭಾರತ ಕಟ್ಟುವ ಮತ್ತು ಸಾಧಿಸುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿರುವ ಮಿಷನ್ ಆಯಿಲ್ ಪಾಮ್ ಅನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಪ್ರಧಾನಿ ಅವರು ದೇಶಧ ರೈತರನ್ನು ಒತ್ತಾಯಿಸಿದರು. ಎಣ್ಣೆ ಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಭಾರತವು ಖಾದ್ಯ ತೈಲಗಳ ಬಳಕೆಯನ್ನು ಕಡಿಮೆ ಮಾಡಬಹುದು.  ನಮ್ಮ ರೈತರು ಈ ಕ್ಷೇತ್ರದಲ್ಲಿ ಹೆಚ್ಚು ಸಮರ್ಥರಾಗಿದ್ದಾರೆ.  ಬೇಳೆಕಾಳುಗಳ ಉತ್ಪಾದನೆಗೆ ಸಂಬಂಧಿಸಿದಂತೆ 2015ರಲ್ಲಿ ನೀಡಿದ್ದ ಸ್ಪಷ್ಟ ಕರೆಯನ್ನು ನೆನಪಿಸಿಕೊಂಡ ಪ್ರಧಾನಿ, ಬೇಳೆಕಾಳುಗಳ ಉತ್ಪಾದನೆಯಲ್ಲಿ 70% ಹೆಚ್ಚಳ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಪ್ರಧಾನಿ, ಇದಕ್ಕೆ ಕಾರಣರಾದ ರೈತರಿಗೆ ಧನ್ಯವಾದಗಳನ್ನು ಅರ್ಪಿಸಿದರು. "ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ನಾವು ಕೃಷಿಯನ್ನು ಆಕರ್ಷಕವಾಗಿಸುತ್ತೆವೆ ಮತ್ತು ಸಮೃದ್ಧಗೊಳಿಸುತ್ತೇವೆ". ಎಲ್ಲಾ ರೈತರು ಮತ್ತು ಸ್ಟಾರ್ಟಪ್‌ಗಳಿಗೆ ಶುಭ ಹಾರೈಸುವುದರೊಂದಿಗೆ ಪ್ರಧಾನಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಮತ್ತು ಶ್ರೀ ಕೈಲಾಶ್ ಚೌಧರಿ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
 
ಹಿನ್ನೆಲೆ
 
ಈ ಕಾರ್ಯಕ್ರಮವು ದೇಶಾದ್ಯಂತ 13,500ಕ್ಕಿಂತ ಹೆಚ್ಚಿನ ರೈತರು ಮತ್ತು ಸುಮಾರು 1,500 ಅಗ್ರಿ ಸ್ಟಾರ್ಟಪ್‌ಗಳನ್ನು ಒಂದೇ ವೇದಿಕೆಗೆ ತಂದಿದೆ. ವಿವಿಧ ಸಂಸ್ಥೆಗಳಿಂದ 1 ಕೋಟಿಗಿಂತ ಹೆಚ್ಚಿನ ರೈತರು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮ್ಮೇಳನವು ಸಂಶೋಧಕರು, ನೀತಿ ನಿರೂಪಕರು ಮತ್ತು ಇತರ ಪಾಲುದಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.

ಪ್ರಧಾನಮಂತ್ರಿ ಅವರು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿ, 600 ಪ್ರಧಾನ ಮಂತ್ರಿಗಳ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು (ಪಿಎಂಕೆಎಸ್ ಕೆ) ಉದ್ಘಾಟಿಸಿದರು. ಯೋಜನೆಯಡಿ, ದೇಶದ ಚಿಲ್ಲರೆ ರಸಗೊಬ್ಬರ ಅಂಗಡಿಗಳನ್ನು ಹಂತ ಹಂತವಾಗಿ ಪಿಎಂಕೆಎಸ್ ಕೆ ಆಗಿ ಪರಿವರ್ತಿಸಲಾಗುತ್ತದೆ. ಪಿಎಂಕೆಎಸ್ ಕೆ ರೈತರ ವಿವಿಧ ರೀತಿಯ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಕೃಷಿಗೆ ಅಗತ್ಯವಾದ ಸಾಮಗ್ರಿಗಳು(ಗೊಬ್ಬರಗಳು, ಬೀಜಗಳು, ಉಪಕರಣಗಳು), ಮಣ್ಣು, ಬೀಜಗಳು ಮತ್ತು ರಸಗೊಬ್ಬರಗಳಿಗೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುತ್ತದೆ. ರೈತರಲ್ಲಿ ಜಾಗೃತಿ ಮೂಡಿಸಿ, ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿ ಮತ್ತು ಬ್ಲಾಕ್, ಜಿಲ್ಲಾ ಮಟ್ಟದ ಮಳಿಗೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳ ನಿಯಮಿತ ಸಾಮರ್ಥ್ಯ ನಿರ್ಮಾಣವನ್ನು ಖಚಿತಪಡಿಸುತ್ತದೆ. 3.3 ಲಕ್ಷಕ್ಕೂ ಹೆಚ್ಚು ಚಿಲ್ಲರೆ ರಸಗೊಬ್ಬರ ಅಂಗಡಿಗಳನ್ನು ಪಿಎಂಕೆಎಸ್ ಕೆ ಆಗಿ ಪರಿವರ್ತಿಸಲು ಯೋಜಿಸಲಾಗಿದೆ.
 
ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿಗಳ ಭಾರತೀಯ ಜನ ಉರ್ವರಕ್ ಪರಿಯೋಜನೆ(ಒಂದು ರಾಷ್ಟ್ರ, ಒಂದು ರಸಗೊಬ್ಬರ)ಯನ್ನು ಸಹ ಪ್ರಾರಂಭಿಸಿದರು. ಯೋಜನೆಯ ಅಡಿ, ಪ್ರಧಾನ ಮಂತ್ರಿಗಳ ಭಾರತ್ ಯೂರಿಯಾ ಬ್ಯಾಗ್‌ಗಳನ್ನು ಬಿಡುಗಡೆ ಮಾಡಿದರು. ಇದು ಕಂಪನಿಗಳಿಗೆ 'ಭಾರತ್' ಎಂಬ ಏಕಬ್ರ್ಯಾಂಡ್ ಹೆಸರಿನಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತದೆ.

ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ಅವರ ನಿರಂತರ ಬದ್ಧತೆಯ ಪ್ರತಿಬಿಂಬವಾಗಿ, ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿ, 16,000 ಕೋಟಿ ರೂ. ಯೋಜನೆಯಡಿ, 12ನೇ ಕಂತಿನ ಮೊತ್ತವನ್ನು ನೇರ ಲಾಭ ವರ್ಗಾವಣೆ ಮೂಲಕ ಬಿಡುಗಡೆ ಮಾಡಿದರು. ಅರ್ಹ ರೈತ ಕುಟುಂಬಗಳಿಗೆ 3 ಸಮಾನ ಕಂತುಗಳಲ್ಲಿ ರೂ. ತಲಾ 2000 ರೂ.ನಂತೆ ವರ್ಷಕ್ಕೆ 6000 ರೂ. ಲಭ್ಯವಾಗುತ್ತಿದೆ. ಇಲ್ಲಿಯವರೆಗೆ, ಅರ್ಹ ರೈತ ಕುಟುಂಬಗಳು ಪಿಎಂ-ಕಿಸಾನ್ ಅಡಿ, 2 ಲಕ್ಷ ಕೋಟಿ ರೂ. ಗಿಂತ ಹೆಚ್ಚಿನ ಮೌಲ್ಯದ ಪ್ರಯೋಜನಗಳನ್ನು ಪಡೆದಿವೆ. 

ಪ್ರಧಾನಮಂತ್ರಿ ಅವರು ಅಗ್ರಿ ಸ್ಟಾರ್ಟಪ್ ಸಮಾವೇಶ ಮತ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಸುಮಾರು 300 ಸ್ಟಾರ್ಟಪ್‌ಗಳು ನಿಖರವಾದ ಕೃಷಿ, ಕೊಯ್ಲು ನಂತರದ ಮತ್ತು ಮೌಲ್ಯವರ್ಧನೆಯ ಪರಿಹಾರಗಳು, ಕೃಷಿ ಸಂಬಂಧಿತ ತ್ಯಾಜ್ಯದಿಂದ ಸಂಪತ್ತು ಸೃಷ್ಟಿ, ಸಣ್ಣ ರೈತರಿಗೆ ಯಾಂತ್ರೀಕರಣ, ಸರಬರಾಜು ಸರಪಳಿ ನಿರ್ವಹಣೆ ಮತ್ತು ಕೃಷಿ ಉತ್ಪನ್ನಗಳ ಸಾಗಣೆಗೆ ಸಂಬಂಧಿಸಿದ ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಿವೆ. ಈ ವೇದಿಕೆಯು ಸ್ಟಾರ್ಟಪ್‌ಗಳೊಂದಿಗೆ ರೈತರು, ಎಫ್‌ಪಿಒಗಳು, ಕೃಷಿ ತಜ್ಞರು, ಕಾರ್ಪೊರೇಟ್‌ಗಳು ಇತ್ಯಾದಿಗಳೊಂದಿಗೆ ಸಂವಹನ ನಡೆಸಲು ಅನುಕೂಲವಾಗುತ್ತದೆ. ಸ್ಟಾರ್ಟಪ್‌ಗಳು ತಮ್ಮ ಅನುಭವ ಹಂಚಿಕೊಳ್ಳುತ್ತವೆ ಮತ್ತು ತಾಂತ್ರಿಕ ಅವಧಿಗಳಲ್ಲಿ ಇತರ ಪಾಲುದಾರರೊಂದಿಗೆ ಸಂವಹನ ನಡೆಸುತ್ತವೆ.

ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ‘ಇಂಡಿಯನ್ ಎಡ್ಜ್’ ಎಂಬ ರಸಗೊಬ್ಬರದ ಇ-ಪತ್ರಿಕೆ ಬಿಡುಗಡೆ ಮಾಡಿದರು. ಇದು ಇತ್ತೀಚಿನ ಬೆಳವಣಿಗೆಗಳು, ಬೆಲೆ ಪ್ರವೃತ್ತಿಗಳ ವಿಶ್ಲೇಷಣೆ, ಲಭ್ಯತೆ ಮತ್ತು ಬಳಕೆ, ರೈತರ ಇತರೆ ಯಶೋಗಾಥೆಗಳು ಒಳಗೊಂಡಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ರಸಗೊಬ್ಬರ ಲಭ್ಯತೆ, ಮಾರುಕಟ್ಟೆ ಸನ್ನಿವೇಶಗಳ ಕುರಿತು ಮಾಹಿತಿ ಒದಗಿಸುತ್ತದೆ.

*****



(Release ID: 1868710) Visitor Counter : 318