ಪ್ರಧಾನ ಮಂತ್ರಿಯವರ ಕಛೇರಿ

ದಿವಂಗತ ಶ್ರೀ ಹರ್ಮೋಹನ್ ಸಿಂಗ್ ಯಾದವ್ ಅವರ 10ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ


 “ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ದೇಶದ ಅತ್ಯುನ್ನತ
ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದರಿಂದ ಇಂದಿನ ದಿನ
ಭಾರತೀಯ ಪ್ರಜಾಪ್ರಭುತ್ವಕ್ಕೆ ಒಂದು ಬಹಳ ಮಹತ್ವದ ದಿನವಾಗಿದೆ"

"ಶ್ರೀ ಹರ್ಮೋಹನ್ ಸಿಂಗ್ ಯಾದವ್ ಅವರು ತಮ್ಮ ಸುದೀರ್ಘ
ರಾಜಕೀಯ ಜೀವನದಲ್ಲಿ ಡಾ. ರಾಮ್ ಮನೋಹರ್ ಲೋಹಿಯಾ
ಅವರ ವಿಚಾರ ಸಿದ್ಧಾಂತಗಳನ್ನು ಅನುಸರಿಸಿದರು”
 

"ಹರ್ಮೋಹನ್ ಸಿಂಗ್ ಯಾದವ್ ಜೀ ಅವರು ಸಿಖ್ ಸಾಮೂಹಿಕ
ಹತ್ಯಾಕಾಂಡದ ವಿರುದ್ಧ ರಾಜಕೀಯ ನಿಲುವನ್ನು ತಳೆದಿದ್ದಲ್ಲದೆ, ಅವರು ಸಿಖ್
ಸಹೋದರರು ಮತ್ತು ಸಹೋದರಿಯರನ್ನು ರಕ್ಷಿಸಲು ಮುಂಚೂಣಿಯಲ್ಲಿ ನಿಂತು ಹೋರಾಡಿದರು”.

"ಇತ್ತೀಚಿನ ದಿನಗಳಲ್ಲಿ, ಸೈದ್ಧಾಂತಿಕ ಅಥವಾ ರಾಜಕೀಯ ಹಿತಾಸಕ್ತಿಗಳನ್ನು
ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗಿಂತ ಮೇಲ್ಮಟ್ಟದಲ್ಲಿ ಇಡುವ ಪ್ರವೃತ್ತಿ ಇದೆ”.

"ಒಂದು ಪಕ್ಷ ಅಥವಾ ವ್ಯಕ್ತಿಯ ವಿರೋಧವು ದೇಶದ ವಿರೋಧವಾಗಿ
ಬದಲಾಗಬಾರದಂತೆ ನೋಡಿಕೊಳ್ಳುವುದು ಪ್ರತಿಯೊಂದು ರಾಜಕೀಯ ಪಕ್ಷದ ಜವಾಬ್ದಾರಿಯಾಗಿದೆ"

"ಡಾ. ಲೋಹಿಯಾ ರಾಮಾಯಣ ಉತ್ಸವಗಳನ್ನು ಆಯೋಜಿಸುವ ಮತ್ತು
ಗಂಗೆಯ ಬಗ್ಗೆ ಕಾಳಜಿ ವಹಿಸುವ ಮೂಲಕ ದೇಶದ ಸಾಂಸ್ಕೃತಿಕ ಶಕ್ತಿಯನ್ನು ಬಲಪಡಿಸಲು ಶ್ರಮಿಸಿದರು"

"ಸಾಮಾಜಿಕ ನ್ಯಾಯವೆಂದರೆ ಸಮಾಜದ ಪ್ರತಿಯೊಂದು ವರ್ಗವೂ ಸಮಾನ
ಅವಕಾಶಗಳನ್ನು ಪಡೆಯಬೇಕು, ಮತ್ತು ಯಾರೂ ಜೀವನದ ಮೂಲಭೂತ ಅಗತ್ಯಗಳಿಂದ ವಂಚಿತರಾಗಬಾರದು.

Posted On: 25 JUL 2022 5:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ, ಶಾಸಕ
ಮತ್ತು ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಹಾಗೂ ಯಾದವ ಸಮುದಾಯದ ಅತ್ಯಂತ ಪ್ರಭಾವೀ ವ್ಯಕ್ತಿ ಮತ್ತು
ನಾಯಕರಾದ ದಿವಂಗತ ಶ್ರೀ ಹರ್ಮೋಹನ್ ಸಿಂಗ್ ಯಾದವ್ ಅವರ 10ನೇ ಪುಣ್ಯತಿಥಿಯ
ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದಿವಂಗತ ಶ್ರೀ ಹರ್ಮೋಹನ್ ಸಿಂಗ್
ಯಾದವ್ ಅವರ 10ನೇ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಸ್ವಾತಂತ್ರ್ಯದ ನಂತರ
ಮೊದಲ ಬಾರಿಗೆ ಇಂದು ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಹುದ್ದೆಯನ್ನು
ಅಲಂಕರಿಸಿರುವ ಬಗ್ಗೆ ಅವರು ಪ್ರಸ್ತಾಪಿಸಿದರು. ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ಬಹಳ ಮಹತ್ವದ
ದಿನ ಎಂದು ಅವರು ಬಣ್ಣಿಸಿದರು.
ಉತ್ತರ ಪ್ರದೇಶದ ಮಹಾನ್ ನಾಯಕರ ಭವ್ಯ ಪರಂಪರೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು,
"ಹರ್ಮೋಹನ್ ಸಿಂಗ್ ಯಾದವ್ ಜೀ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಡಾ. ರಾಮ್
ಮನೋಹರ್ ಲೋಹಿಯಾ ಅವರ ವಿಚಾರಗಳನ್ನು ಉತ್ತರ ಪ್ರದೇಶ ಮತ್ತು ಕಾನ್ಪುರದ ಮಣ್ಣಿನಿಂದ
ಮುಂದಕ್ಕೆ ಹರಡಿದರು. ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ಅವರು ನೀಡಿದ ಕೊಡುಗೆ, ಸಮಾಜಕ್ಕಾಗಿ

ಅವರು ಮಾಡಿದ ಕೆಲಸಗಳು ಇಂದಿಗೂ ತಲೆಮಾರುಗಳಿಗೆ ಮಾರ್ಗದರ್ಶನ ನೀಡುತ್ತಿವೆ" ಎಂದರು. 'ಗ್ರಾಮ
ಸಭೆ'ಯಿಂದ ರಾಜ್ಯಸಭೆಯವರೆಗೆ ಅವರ ಸುದೀರ್ಘ ಮತ್ತು ವಿಶಿಷ್ಟ ಪ್ರಯಾಣದಲ್ಲಿ ಸಮಾಜ ಮತ್ತು
ಸಮುದಾಯಕ್ಕೆ ಅವರು ಸಮರ್ಪಿಸಿಕೊಂಡಿರುವುದನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.
ಶ್ರೀ ಹರ್ಮೋಹನ್ ಸಿಂಗ್ ಯಾದವ್ ಅವರ ಅನುಕರಣೀಯ ಧೈರ್ಯವನ್ನು ಪ್ರಮುಖವಾಗಿ ಉಲ್ಲೇಖಿಸಿದ
ಪ್ರಧಾನಮಂತ್ರಿಯವರು, "ಹರ್ಮೋಹನ್ ಸಿಂಗ್ ಯಾದವ್ ಜೀ ಅವರು ಸಿಖ್ ಹತ್ಯಾಕಾಂಡದ ವಿರುದ್ಧ
ರಾಜಕೀಯ ನಿಲುವನ್ನು ತಳೆದಿದ್ದಲ್ಲದೆ, ಅವರು ಮುಂದೆ ಬಂದು ಸಿಖ್ ಸಹೋದರರು ಮತ್ತು
ಸಹೋದರಿಯರನ್ನು ರಕ್ಷಿಸಲು ಹೋರಾಡಿದರು. ತನ್ನ ಜೀವದ ಬಗ್ಗೆ ಕಾಳಜಿ ವಹಿಸದೆ, ಅವರು ಅನೇಕ
ಮುಗ್ಧ ಸಿಖ್ ಕುಟುಂಬಗಳ ಜೀವಗಳನ್ನು ಉಳಿಸಿದರು. ದೇಶವು ಅವರ ನಾಯಕತ್ವವನ್ನು ಗುರುತಿಸಿತು
ಮತ್ತು ಅವರಿಗೆ ಶೌರ್ಯ ಚಕ್ರವನ್ನು ನೀಡಲಾಯಿತು" ಎಂದೂ ಹೇಳಿದರು.
ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಪಕ್ಷ
ರಾಜಕಾರಣಕ್ಕಿಂತ ರಾಷ್ಟ್ರದ ಪ್ರಾಧಾನ್ಯತೆಯನ್ನು ಒತ್ತಿ ಹೇಳಿದರು. "ಪ್ರಜಾಪ್ರಭುತ್ವದಿಂದಾಗಿ
ಪಕ್ಷಗಳು ಅಸ್ತಿತ್ವದಲ್ಲಿವೆ, ಮತ್ತು ಪ್ರಜಾಪ್ರಭುತ್ವವು ದೇಶದ ಕಾರಣದಿಂದಾಗಿ ಅಸ್ತಿತ್ವದಲ್ಲಿದೆ. ನಮ್ಮ
ದೇಶದ ಹೆಚ್ಚಿನ ಪಕ್ಷಗಳು, ವಿಶೇಷವಾಗಿ ಎಲ್ಲಾ ಕಾಂಗ್ರೆಸ್ಸೇತರ ಪಕ್ಷಗಳು ಸಹ ಈ ಕಲ್ಪನೆಯನ್ನು,
ಚಿಂತನೆಯನ್ನು ಮತ್ತು ದೇಶಕ್ಕಾಗಿ ಸಹಕಾರ ಮತ್ತು ಸಮನ್ವಯದ ಆದರ್ಶವನ್ನು ಅನುಸರಿಸಿವೆ"
ಎಂದವರು ನುಡಿದರು. 1971ರ ಯುದ್ಧ, ಪರಮಾಣು ಪರೀಕ್ಷೆ ಮತ್ತು ತುರ್ತುಪರಿಸ್ಥಿತಿಯ ವಿರುದ್ಧದ
ಹೋರಾಟದ ಉದಾಹರಣೆಗಳನ್ನು ನೀಡಿದ ಅವರು, ದೇಶಕ್ಕಾಗಿ ಒಂದು ಐಕ್ಯ ರಂಗವನ್ನು
ಸ್ಥಾಪಿಸುವ ರಾಜಕೀಯ ಪಕ್ಷಗಳ ಭಾವನೆಗೆ ಇದು ದೃಷ್ಟಾಂತ ಎಂದು ವಿವರಿಸಿದರು. ತುರ್ತು
ಪರಿಸ್ಥಿತಿಯ ಸಮಯದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಹೊಸಕಿಹಾಕಿದಾಗ, ಎಲ್ಲಾ ಪ್ರಮುಖ
ಪಕ್ಷಗಳು, ನಾವೆಲ್ಲರೂ ಒಗ್ಗೂಡಿ ಸಂವಿಧಾನವನ್ನು ಉಳಿಸಲು ಹೋರಾಡಿದೆವು. ಚೌಧರಿ
ಹರ್ಮೋಹನ್ ಸಿಂಗ್ ಯಾದವ್ ಜೀ ಕೂಡ ಆ ಹೋರಾಟದಲ್ಲೊಬ್ಬ ಧೈರ್ಯಶಾಲಿ ವೀರ
ಸೈನಿಕರಾಗಿದ್ದರು. ಅಂದರೆ, ನಮ್ಮ ದೇಶ ಮತ್ತು ಸಮಾಜದ ಹಿತಾಸಕ್ತಿಗಳು ಯಾವಾಗಲೂ
ಸಿದ್ಧಾಂತಗಳಿಗಿಂತ ದೊಡ್ಡದಾಗಿರುತ್ತವೆ", ಎಂದು ಅವರು ಹೇಳಿದರು. ಆದಾಗ್ಯೂ, "ಇತ್ತೀಚಿನ
ದಿನಗಳಲ್ಲಿ, ಸೈದ್ಧಾಂತಿಕ ಅಥವಾ ರಾಜಕೀಯ ಹಿತಾಸಕ್ತಿಗಳನ್ನು ಸಮಾಜ ಮತ್ತು ದೇಶದ
ಹಿತಾಸಕ್ತಿಗಿಂತ ಮೇಲಾಗಿ, ಹಿರಿದಾಗಿ ಪರಿಗಣಿಸುವ ಪ್ರವೃತ್ತಿ ಕಂಡುಬರುತ್ತಿದೆ" ಎಂದು ಪ್ರಧಾನ
ಮಂತ್ರಿ ಅವರು ಹೇಳಿದರು. ಅನೇಕ ಬಾರಿ, ಕೆಲವು ವಿರೋಧ ಪಕ್ಷಗಳು ಸರ್ಕಾರದ ಕೆಲಸದಲ್ಲಿ
ಅಡೆತಡೆಗಳನ್ನು ತಂದೊಡ್ಡುತ್ತವೆ, ಏಕೆಂದರೆ ಅವರು ಅಧಿಕಾರದಲ್ಲಿದ್ದಾಗ, ನಿರ್ಧಾರಗಳನ್ನು ಸ್ವತಃ
ಜಾರಿಗೆ ತರಲು ಅವರಿಗೆ ಸಾಧ್ಯವಾಗಿರಲಿಲ್ಲ" ಎಂದು ಅವರು ನುಡಿದರು. ದೇಶದ ಜನರು ಇದನ್ನು
ಇಷ್ಟಪಡುವುದಿಲ್ಲ ಎಂದೂ ಪ್ರಧಾನ ಮಂತ್ರಿ ಹೇಳಿದರು. "ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯ

ವಿರೋಧವು ದೇಶದ ವಿರೋಧವಾಗಿ ಬದಲಾಗಬಾರದು. ಇದು ಪ್ರತಿಯೊಂದು ರಾಜಕೀಯ ಪಕ್ಷದ
ಜವಾಬ್ದಾರಿಯಾಗಿದೆ. ಸಿದ್ಧಾಂತಗಳು ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ತಮ್ಮದೇ ಆದ
ಸ್ಥಾನವಿದೆ, ಮತ್ತು ಹಾಗೆ ಇರಬೇಕು ಕೂಡಾ. ಆದರೆ, ದೇಶ, ಸಮಾಜ ಮತ್ತು ರಾಷ್ಟ್ರ ಮೊದಲ
ಸ್ಥಾನದಲ್ಲಿರಬೇಕು" ಎಂದು ಹೇಳಿದರು.
ಡಾ. ಲೋಹಿಯಾ ಅವರ ಸಾಂಸ್ಕೃತಿಕ ಶಕ್ತಿಯ ಪರಿಕಲ್ಪನೆಯ ಬಗ್ಗೆ ಪ್ರಧಾನ ಮಂತ್ರಿ ಅವರು ಗಮನ
ಸೆಳೆದರು. ಮೂಲ ಭಾರತೀಯ ಚಿಂತನೆಯಲ್ಲಿ, ಸಮಾಜವು ವಿವಾದ ಅಥವಾ ಚರ್ಚೆಯ ವಿಷಯವಲ್ಲ
ಮತ್ತು ಅದನ್ನು ಒಗ್ಗಟ್ಟು ಮತ್ತು ಸಾಮೂಹಿಕತೆಯ ಚೌಕಟ್ಟಾಗಿ ನೋಡಲಾಗುತ್ತದೆ ಎಂದು ಶ್ರೀ ಮೋದಿ
ಹೇಳಿದರು. ಡಾ. ಲೋಹಿಯಾ ಅವರು ರಾಮಾಯಣ ಉತ್ಸವಗಳನ್ನು ಆಯೋಜಿಸುವ ಮೂಲಕ ಮತ್ತು
ಗಂಗೆಯ ಬಗ್ಗೆ ಕಾಳಜಿ ವಹಿಸುವ ಮೂಲಕ ದೇಶದ ಸಾಂಸ್ಕೃತಿಕ ಶಕ್ತಿಯನ್ನು ಬಲಪಡಿಸಲು ಶ್ರಮಿಸಿದರು
ಎಂಬುದನ್ನು ಅವರು ನೆನಪಿಸಿಕೊಂಡರು. ನಮಾಮಿ ಗಂಗೆಯಂತಹ ಉಪಕ್ರಮಗಳು, ಸಮಾಜದ
ಸಾಂಸ್ಕೃತಿಕ ಸಂಕೇತಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಹಕ್ಕುಗಳನ್ನು ಖಾತ್ರಿಪಡಿಸುವುದರ
ಜೊತೆಗೆ ಕರ್ತವ್ಯದ ಮಹತ್ವವನ್ನು ಒತ್ತಿಹೇಳುವ ಮೂಲಕ ಭಾರತವು ಈ ಕನಸುಗಳನ್ನು
ಸಾಕಾರಗೊಳಿಸುತ್ತಿದೆ ಎಂದೂ ಅವರು ಹೇಳಿದರು.
ಸಮಾಜದ ಸೇವೆಗಾಗಿ, ನಾವು ಸಾಮಾಜಿಕ ನ್ಯಾಯದ ಮನೋಭಾವವನ್ನು ಅಂಗೀಕರಿಸುವುದು
ಮತ್ತು ಅದನ್ನು ಅಳವಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಇಂದು, ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವವನ್ನು
ಆಚರಿಸುತ್ತಿರುವಾಗ, ಇದನ್ನು ಅರ್ಥಮಾಡಿಕೊಳ್ಳುವುದು ಮತ್ತು ಆ ದಿಕ್ಕಿನಲ್ಲಿ ಸಾಗುವುದು ಬಹಳ
ಮುಖ್ಯ ಎಂದು ಅವರು ಹೇಳಿದರು. ಸಾಮಾಜಿಕ ನ್ಯಾಯ ಎಂದರೆ ಸಮಾಜದ ಪ್ರತಿಯೊಂದು
ವರ್ಗಕ್ಕೂ ಸಮಾನ ಅವಕಾಶಗಳು ಲಭ್ಯವಾಗಬೇಕು ಮತ್ತು ಯಾರೂ ಜೀವನದ ಮೂಲಭೂತ
ಅಗತ್ಯಗಳಿಂದ ವಂಚಿತರಾಗಬಾರದು ಎಂದೂ ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ಟರು.
ದಲಿತರು, ಹಿಂದುಳಿದವರು, ಆದಿವಾಸಿಗಳು, ಮಹಿಳೆಯರು, ದಿವ್ಯಾಂಗರು ಮುಂದೆ ಬಂದಾಗ
ಮಾತ್ರ ದೇಶ ಮುಂದುವರಿಯುತ್ತದೆ. ಈ ಬದಲಾವಣೆಗೆ ಶಿಕ್ಷಣವು ಅತ್ಯಂತ ಮುಖ್ಯವೆಂದು
ಹರ್ಮೋಹನ್ ಜೀ ಪರಿಗಣಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರ ಕೆಲಸವು ಸ್ಪೂರ್ತಿದಾಯಕವಾಗಿದೆ.
ಬೇಟಿ ಬಚಾವೋ, ಬೇಟಿ ಪಡಾವೋ, ಬುಡಕಟ್ಟು ಪ್ರದೇಶಗಳಿಗೆ ಏಕಲವ್ಯ ಶಾಲೆಗಳು,
ಮಾತೃಭಾಷೆಯಲ್ಲಿ ಶಿಕ್ಷಣವನ್ನು ಉತ್ತೇಜಿಸುವುದು ಮುಂತಾದ ಉಪಕ್ರಮಗಳ ಮೂಲಕ ದೇಶವು
ಈ ಹಾದಿಯಲ್ಲಿ ಮುಂದೆ ಸಾಗುತ್ತಿದೆ. "ದೇಶವು ಶಿಕ್ಷಣದ ಮೂಲಕ ಸಬಲೀಕರಣದ ಮಂತ್ರವನ್ನು
ಅನುಸರಿಸಿ ಮುಂದುವರಿಯುತ್ತಿದೆ ಮತ್ತು ಶಿಕ್ಷಣವೇ ಒಂದು ಸ್ವತಹ ಸಬಲೀಕರಣದಂತೆ" ಎಂದು
ಅವರು ಹೇಳಿದರು.

ಶ್ರೀ ಹರ್ಮೋಹನ್ ಸಿಂಗ್ ಯಾದವ್ (18 ಅಕ್ಟೋಬರ್ 1921 - 25 ಜುಲೈ 2012)
ಶ್ರೀ ಹರ್ಮೋಹನ್ ಸಿಂಗ್ ಯಾದವ್ (18 ಅಕ್ಟೋಬರ್ 1921 - 25 ಜುಲೈ 2012) ಅವರು ಯಾದವ
ಸಮುದಾಯದ ಮಹೋನ್ನತ ವ್ಯಕ್ತಿ ಮತ್ತು ನಾಯಕರಾಗಿದ್ದರು. ರೈತರು, ಹಿಂದುಳಿದ ವರ್ಗಗಳು ಮತ್ತು
ಸಮಾಜದ ಇತರ ವರ್ಗಗಳಿಗೆ ದಿವಂಗತ ನಾಯಕರು ನೀಡಿದ ಕೊಡುಗೆಯನ್ನು ಗುರುತಿಸಿ ಪ್ರಧಾನ
ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಶ್ರೀ ಹರ್ಮೋಹನ್ ಸಿಂಗ್ ಯಾದವ್ ಅವರು ದೀರ್ಘಕಾಲದವರೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು
ಮತ್ತು ಎಂಎಲ್ಸಿ, ಶಾಸಕ, ರಾಜ್ಯಸಭಾ ಸದಸ್ಯರಾಗಿ ಹಾಗು 'ಅಖಿಲ ಭಾರತೀಯ ಯಾದವ ಮಹಾಸಭಾ'ದ
ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ತಮ್ಮ ಮಗ ಶ್ರೀ ಸುಖರಾಮ್ ಸಿಂಗ್ ಅವರ
ನೆರವಿನಿಂದ ಕಾನ್ಪುರ ಮತ್ತು ಸುತ್ತಮುತ್ತಲಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ
ಪಾತ್ರ ವಹಿಸಿದ್ದರು.
1984 ರ ಸಿಖ್ ವಿರೋಧಿ ದಂಗೆಗಳ ಸಮಯದಲ್ಲಿ ಹಲವಾರು ಸಿಖ್ಖರ ಜೀವಗಳನ್ನು ರಕ್ಷಿಸುವಲ್ಲಿ
ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಶ್ರೀ ಹರ್ಮೋಹನ್ ಸಿಂಗ್ ಯಾದವ್ ಅವರಿಗೆ 1991 ರಲ್ಲಿ ಶೌರ್ಯ
ಚಕ್ರವನ್ನು ನೀಡಲಾಗಿತ್ತು.

 

***********



(Release ID: 1844823) Visitor Counter : 116