ಪ್ರಧಾನ ಮಂತ್ರಿಯವರ ಕಛೇರಿ

ಹೊಸದಿಲ್ಲಿಯಲ್ಲಿ ನಡೆದ ಎನ್ಐಐಒ ವಿಚಾರ ಸಂಕಿರಣ  'ಸ್ವಾವಲಂಬನ್'ನಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

Posted On: 18 JUL 2022 8:23PM by PIB Bengaluru

  ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ ಜೀ, ಶ್ರೀ ಅಜಯ್ ಭಟ್ ಜೀ, ನೌಕಾ ಸಿಬ್ಬಂದಿ ಮುಖ್ಯಸ್ಥರು, ನೌಕಾಪಡೆಯ ಉಪ ಮುಖ್ಯಸ್ಥರು, ರಕ್ಷಣಾ ಕಾರ್ಯದರ್ಶಿಗಳು, ಎಸ್.ಐ.ಡಿ.ಎಂ.ನ ಅಧ್ಯಕ್ಷರು, ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸಹೋದ್ಯೋಗಿಗಳೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸ್ವಾವಲಂಬನೆಯ ಗುರಿಯು 21 ನೇ ಶತಮಾನದ ಭಾರತಕ್ಕೆ ಬಹಳ ಅಗತ್ಯವಾಗಿದೆ. ಸ್ವಾವಲಂಬಿ ನೌಕಾಪಡೆಗಾಗಿ ಮೊದಲ 'ಸ್ವಾವಲಂಬನ್ ವಿಚಾರ ಸಂಕಿರಣವನ್ನು ಆಯೋಜಿಸಿರುವುದು ಬಹಳ ಮುಖ್ಯವಾದ ಹೆಜ್ಜೆ ಎಂದು ನಾನು ಭಾವಿಸುತ್ತೇನೆ, ಮತ್ತು ಇದಕ್ಕಾಗಿ ನಾನು ನಿಮ್ಮೆಲ್ಲರನ್ನು ತುಂಬಾ ಅಭಿನಂದಿಸುತ್ತೇನೆ ಹಾಗು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.

ಸ್ನೇಹಿತರೇ,

ಮಿಲಿಟರಿ ಸನ್ನದ್ಧತೆಯಲ್ಲಿ, ವಿಶೇಷವಾಗಿ ನೌಕಾಪಡೆಯಲ್ಲಿ ಜಂಟಿ ಸಮರಾಭ್ಯಾಸಗಳು ಪ್ರಮುಖ ಪಾತ್ರವಹಿಸುತ್ತವೆ. ಈ ವಿಚಾರ ಸಂಕಿರಣವು ಒಂದು ರೀತಿಯ ಜಂಟಿ ವ್ಯಾಯಾಮವೂ ಆಗಿದೆ. ಸ್ವಾವಲಂಬನೆಯ ಈ ಜಂಟಿ ಸಮರಾಭ್ಯಾಸದಲ್ಲಿ, ನೌಕಾಪಡೆ, ಕೈಗಾರಿಕೆ, ಎಂಎಸ್ಎಂಇಗಳು, ಅಕಾಡೆಮಿಕ್ ತಜ್ಞರು, ಅಂದರೆ ಪ್ರಪಂಚದಾದ್ಯಂತದ ಜನರು ಮತ್ತು ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬ ಪಾಲುದಾರರು ಒಗ್ಗೂಡುವ ಗುರಿಯ ಬಗ್ಗೆ ಯೋಚಿಸುತ್ತಿದ್ದಾರೆ. ಈ ಜಂಟಿ ವ್ಯಾಯಾಮದ ಗುರಿಯು ಎಲ್ಲಾ ಸ್ಪರ್ಧಿಗಳಿಗೆ ಗರಿಷ್ಠ ಒಡ್ಡಿಕೊಳ್ಳುವುದು ಅಥವಾ ತೆರೆದುಕೊಳುವುದು, ಪರಸ್ಪರರ ಬಗ್ಗೆ ಹೆಚ್ಚಿನ ತಿಳುವಳಿಕೆ ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು. ಆದ್ದರಿಂದ, ಈ ಜಂಟಿ ವ್ಯಾಯಾಮದ ಗುರಿಯು ಬಹಳ ಮುಖ್ಯವಾಗಿದೆ. ಮುಂದಿನ ವರ್ಷ ಆಗಸ್ಟ್ 15 ರೊಳಗೆ ನೌಕಾಪಡೆಗಾಗಿ 75 ದೇಶೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರವು ಸ್ವತಃ ಒಂದು ದೊಡ್ಡ ಹೆಜ್ಜೆಯಾಗಿದೆ, ಮತ್ತು ನಿಮ್ಮ ಪ್ರಯತ್ನಗಳು, ಅನುಭವಗಳು ಮತ್ತು ಜ್ಞಾನವು ಖಂಡಿತವಾಗಿಯೂ ಅದನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ. ಇಂದು, ಅಮೃತ ಮಹೋತ್ಸವದ ಮೂಲಕ ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಅಂತಹ ಗುರಿಗಳ ಸಾಧನೆಯು ನಮ್ಮ ಸ್ವಾವಲಂಬನೆಯ ಗುರಿಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ. ಅಂದಹಾಗೆ, 75 ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿಯು ಒಂದು ರೀತಿಯಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ನಾನು ಹೇಳುತ್ತೇನೆ. ಈ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಲು ನಾವು ಕೆಲಸ ಮಾಡುತ್ತಲೇ ಇರಬೇಕು. ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುತ್ತಿರುವಾಗ ನೌಕಾಪಡೆಯು ಅಭೂತಪೂರ್ವ ಎತ್ತರದಲ್ಲಿರಬೇಕು ಎಂಬುದು ನಿಮ್ಮ ಗುರಿಯಾಗಿರಬೇಕು.

ಸ್ನೇಹಿತರೇ,

ನಮ್ಮ ಸಮುದ್ರಗಳು ಮತ್ತು ಕರಾವಳಿ ಗಡಿಗಳು ನಮ್ಮ ಆರ್ಥಿಕ ಸ್ವಾವಲಂಬನೆಯ ದೊಡ್ಡ ರಕ್ಷಕರು ಮತ್ತು ಅದಕ್ಕೆ ವೇಗವನ್ನು  ನೀಡುವಂತಹವು. ಆದ್ದರಿಂದ, ಭಾರತೀಯ ನೌಕಾಪಡೆಯ ಪಾತ್ರವು ನಿರಂತರವಾಗಿ ಹೆಚ್ಚುತ್ತಿದೆ. ಆದುದರಿಂದ ನೌಕಾಪಡೆಯು ತನಗಾಗಿ ಮಾತ್ರವಲ್ಲದೆ ದೇಶದ ಹೆಚ್ಚುತ್ತಿರುವ ಅಗತ್ಯಗಳಿಗಾಗಿಯೂ ಸ್ವಯಂ-ಬೆಂಬಲಿತವಾಗುವುದು ಬಹಳ ಮುಖ್ಯ. ಈ ವಿಚಾರ ಸಂಕಿರಣವು ನಮ್ಮ ಪಡೆಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಬಹುದೂರ ಕೊಂಡೊಯ್ಯುತ್ತದೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೇ,

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿ ಭವಿಷ್ಯದ ಬಗ್ಗೆ ನಾವು ಚರ್ಚಿಸುತ್ತಿರುವ ಈ ಕಾಲಘಟ್ಟದಲ್ಲಿ, ಕಳೆದ ದಶಕಗಳಲ್ಲಿ ಏನಾಯಿತು ಎಂಬುದರಿಂದ ನಾವು ಪಾಠಗಳನ್ನು ಕಲಿಯುವುದು ಸಹ ಅಗತ್ಯವಾಗಿದೆ. ಇದು ಭವಿಷ್ಯಕ್ಕೆ ದಾರಿ ಮಾಡಿಕೊಳ್ಳುವಲ್ಲಿ ನಮಗೆ ಸಹಾಯ ಮಾಡುತ್ತದೆ. ನಾವು ಹಿಂತಿರುಗಿ ನೋಡಿದಾಗ, ನಾವು ಶ್ರೀಮಂತ ನಾವಿಕ ಪರಂಪರೆಯನ್ನು ಹೊಂದಿದ್ದೇವೆ ಎಂಬುದನ್ನು ಕಂಡುಕೊಳ್ಳುತ್ತೇವೆ. ಭಾರತದ ಶ್ರೀಮಂತ ವ್ಯಾಪಾರ ಮಾರ್ಗವು ಈ ಪರಂಪರೆಯ ಒಂದು ಭಾಗವಾಗಿದೆ. ನಮ್ಮ ಪೂರ್ವಜರು ಸಾಗರದ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು ಏಕೆಂದರೆ ಅವರು ಗಾಳಿಯ ದಿಕ್ಕು  ಮತ್ತು ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದರು. ವಿವಿಧ ಋತುಗಳಲ್ಲಿ ಗಾಳಿಯ ದಿಕ್ಕಿನ ಬಗ್ಗೆ ಮತ್ತು ಗಾಳಿಯ ದಿಕ್ಕನ್ನು ಬಳಸಿಕೊಂಡು ಗಮ್ಯಸ್ಥಾನವನ್ನು ಹೇಗೆ ತಲುಪಬೇಕು ಎಂಬುದರ ಬಗ್ಗೆ ನಮ್ಮ ಪೂರ್ವಜರ ಜ್ಞಾನವು ಒಂದು ದೊಡ್ಡ ಶಕ್ತಿಯಾಗಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದ ರಕ್ಷಣಾ ವಲಯವು ಬಹಳ ಪ್ರಬಲವಾಗಿತ್ತು ಎಂಬುದು ದೇಶದ ಬಹಳಷ್ಟು ಜನರಿಗೆ ತಿಳಿದಿಲ್ಲ. ಸ್ವಾತಂತ್ರ್ಯದ ಸಮಯದಲ್ಲಿ, ದೇಶದಲ್ಲಿ 18 ಶಸ್ತ್ರಾಸ್ತ್ರ ಕಾರ್ಖಾನೆಗಳಿದ್ದವು, ಅಲ್ಲಿ ಫಿರಂಗಿ ಬಂದೂಕುಗಳು ಸೇರಿದಂತೆ ವಿವಿಧ ರೀತಿಯ ಮಿಲಿಟರಿ ಸಲಕರಣೆಗಳನ್ನು ತಯಾರಿಸಲಾಗುತ್ತಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ನಾವು ರಕ್ಷಣಾ ಸಲಕರಣೆಗಳ ಪ್ರಮುಖ ಪೂರೈಕೆದಾರರಾಗಿದ್ದೆವು. ಇಶಾಪೋರ್ ರೈಫಲ್ ಫ್ಯಾಕ್ಟರಿಯಲ್ಲಿ ತಯಾರಿಸಿದ ನಮ್ಮ ಹೋವಿಟ್ಜರ್ ಗಳು ಮತ್ತು ಮಷಿನ್ ಗನ್ ಗಳನ್ನು ಆ ಸಮಯದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿತ್ತು. ನಾವು ಸಾಕಷ್ಟು ರಫ್ತು ಮಾಡುತ್ತಿದ್ದೆವು. ಆದರೆ ಈ ಕ್ಷೇತ್ರದಲ್ಲಿ ನಾವು ವಿಶ್ವದ ಅತಿದೊಡ್ಡ ಆಮದುದಾರರಾಗಲು ಕಾರಣವೇನು? ನಾವು ಹಿಂತಿರುಗಿ ನೋಡಿದರೆ, ಮೊದಲನೆಯ ಮತ್ತು ಎರಡನೆಯ ಮಹಾಯುದ್ಧವು ಸಾಕಷ್ಟು ವಿನಾಶವನ್ನು ಉಂಟುಮಾಡಿತು. ವಿಶ್ವದ ಪ್ರಮುಖ ದೇಶಗಳು ಅನೇಕ ಬಿಕ್ಕಟ್ಟುಗಳಿಂದ ಬಾಧಿತವಾದವು, ಆದರೆ ಅವರು ಆ ಬಿಕ್ಕಟ್ಟುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಒಂದು ಬೃಹತ್ ಜಾಗತಿಕ ಮಾರುಕಟ್ಟೆಯನ್ನು ಕೈವಶಮಾಡಿಕೊಳ್ಳಲು, ಅವರು ಯುದ್ಧಗಳಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಮಾರ್ಗವನ್ನು ಕಂಡುಕೊಂಡರು. ರಕ್ಷಣಾ ಜಗತ್ತಿನಲ್ಲಿ ಬಹಳ ದೊಡ್ಡ ಉತ್ಪಾದಕರಾದರು ಮತ್ತು ದೊಡ್ಡ ಪೂರೈಕೆದಾರರಾದರು. ಅವರು ಯುದ್ಧಗಳಲ್ಲಿ ಬಹಳ ಸಂತ್ರಸ್ತರಾದರೂ, ಅವರು ಹೊಸ ಮಾರ್ಗವನ್ನು ಕಂಡುಕೊಂಡರು. ಕೊರೋನಾ ಅವಧಿಯಲ್ಲಿ ನಾವು ಕೂಡಾ ದೊಡ್ಡ ಬಿಕ್ಕಟ್ಟನ್ನು ಎದುರಿಸಿದ್ದೇವೆ. ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ನಾವು ಕೆಳಗಿದ್ದೆವು. ನಮ್ಮಲ್ಲಿ ಪಿಪಿಇ ಕಿಟ್ ಗಳಿರಲಿಲ್ಲ. ಲಸಿಕೆಗಳು ಬಹಳ ದೂರದ ಕನಸಾಗಿದ್ದವು. ಆದರೆ ಮೊದಲ ಮತ್ತು ಎರಡನೇ ಮಹಾಯುದ್ಧದಿಂದ ಒಂದು ಅವಕಾಶವನ್ನು ಸೃಷ್ಟಿಸಿಕೊಂಡ ಮತ್ತು ಪ್ರಮುಖ ರಕ್ಷಣಾ ಶಕ್ತಿಗಳಾಗಿ ರೂಪುಗೊಳ್ಳಲು ದಾರಿ ಮಾಡಿಕೊಂಡ ದೇಶಗಳಂತೆಯೇ, ಭಾರತವು ಕೊರೊನಾ ಅವಧಿಯಲ್ಲಿ ಲಸಿಕೆಗಳು ಮತ್ತು ಇತರ ಸಲಕರಣೆಗಳನ್ನು ಅಭಿವೃದ್ಧಿಪಡಿಸುವ ಮೂಲಕ  ಹಿಂದೆಂದೂ ಸಂಭವಿಸದಂತಹ  ಎಲ್ಲವನ್ನೂ ಮಾಡಿತು. ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತಿದ್ದೇನೆ ಏಕೆಂದರೆ ನಮ್ಮಲ್ಲಿ ಸಾಮರ್ಥ್ಯ ಅಥವಾ ಪ್ರತಿಭೆ ಇಲ್ಲ ಎಂದಲ್ಲ. ಇತರ ಹತ್ತು ದೇಶಗಳ ಸೈನಿಕರು ಹೊಂದಿರುವ ಅದೇ ಆಯುಧಗಳಿಂದ ನಮ್ಮ ಸೈನಿಕರನ್ನು ಸಜ್ಜುಗೊಳಿಸುವುದು ಸಹ ಬುದ್ಧಿವಂತಿಕೆಯಲ್ಲ. ಬಹುಶಃ ಅವರು ಉತ್ತಮ ಪ್ರತಿಭೆಯನ್ನು ಹೊಂದಿರಬಹುದು, ಅವರು ಉತ್ತಮ ತರಬೇತಿಯನ್ನು ಹೊಂದಿರಬಹುದು, ಅಥವಾ ಅವರು ಆ ಆಯುಧಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿರಬಹುದು. ಆದರೆ ನಾನು ಎಷ್ಟು ಸಮಯದವರೆಗೆ ಅಪಾಯವನ್ನು ಎದುರಿಸುತ್ತ  ಇರುತ್ತೇನೆ? ನನ್ನ ಯುವ ಸೈನಿಕನು ಯಾಕೆ ಅದೇ ಆಯುಧಗಳನ್ನು ಒಯ್ಯುತ್ತಿರಬೇಕು? ಅವನು ಊಹಿಸಿರದ ಆಯುಧಗಳನ್ನು ಆತ ಹೊಂದಿರಬೇಕು. ಈ ಮನೋಧರ್ಮವು ಕೇವಲ ಸೈನಿಕರನ್ನು ಸಿದ್ಧಮಾಡುವುದಷ್ಟೇ ಅಲ್ಲ, ಆತನಿಗೆ  ಯಾವ ರೀತಿಯ ಆಯುಧಗಳನ್ನು ನೀಡಲಾಗುತ್ತದೆ ಎಂಬುದರ ಮೇಲೆಯೂ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಆತ್ಮನಿರ್ಭರ ಭಾರತ ಕೇವಲ ಆರ್ಥಿಕ ಚಟುವಟಿಕೆಯಲ್ಲ; ನಾವು ಅದನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ

ಸ್ನೇಹಿತರೇ,

ಸ್ವಾತಂತ್ರ್ಯದ ನಂತರದ ಮೊದಲ ಒಂದೂವರೆ ದಶಕಗಳಲ್ಲಿ, ನಾವು ಹೊಸ ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ನಿರ್ಮಿಸಲಿಲ್ಲ. ವಾಸ್ತವವಾಗಿ, ಹಳೆಯ ಕಾರ್ಖಾನೆಗಳು ಸಹ ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡವು. 1962ರ ಯುದ್ಧದ ನಂತರ, ಒತ್ತಾಯ, ಒತ್ತಡಗಳಿಂದಾಗಿ ನೀತಿಗಳಲ್ಲಿ ಕೆಲವು ಬದಲಾವಣೆಗಳಾದವು ಮತ್ತು ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಹೆಚ್ಚಿಸುವ ಕೆಲಸ ಪ್ರಾರಂಭವಾಯಿತು. ಆದರೆ ಈ ಕಾರ್ಖಾನೆಗಳನ್ನು ಸ್ಥಾಪಿಸುವಾಗ ಸಂಶೋಧನೆ, ಆವಿಷ್ಕಾರ ಮತ್ತು ಅಭಿವೃದ್ಧಿಗೆ ಒತ್ತು ನೀಡಲಿಲ್ಲ. ಆ ಸಮಯದಲ್ಲಿ ಜಗತ್ತು ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗಾಗಿ ಖಾಸಗಿ ವಲಯವನ್ನು ಅವಲಂಬಿಸಿತ್ತು, ಆದರೆ ದುರದೃಷ್ಟವಶಾತ್, ನಮ್ಮ ದೇಶದ ರಕ್ಷಣಾ ವಲಯವನ್ನು ಸರ್ಕಾರದ ವ್ಯಾಪ್ತಿಗೆ ಒಳಪಡಿಸಲಾಯಿತು. ನಾನು ಗುಜರಾತ್ ನಿಂದ ಬಂದವನು ಮತ್ತು ನಾನು ಅಹಮದಾಬಾದ್ ನಲ್ಲಿ ದೀರ್ಘಕಾಲ ಕಳೆದಿದ್ದೇನೆ. ನಿಮ್ಮಲ್ಲಿ ಅನೇಕರು ಒಂದಲ್ಲ ಒಂದು ಹಂತದಲ್ಲಿ ಗುಜರಾತಿನ ಕರಾವಳಿಯಲ್ಲಿ ಕೆಲಸ ಮಾಡಿರಬಹುದು. ಅಹಮದಾಬಾದಿನ ಸುತ್ತಲೂ ಬೃಹತ್ ಚಿಮಣಿಗಳು ಮತ್ತು ಗಿರಣಿಗಳು ಇದ್ದವು. ಅಹ್ಮದಾಬಾದ್ ನ್ನು ಅದರ ಜವಳಿಯಿಂದಾಗಿ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲಾಗುತ್ತಿತ್ತು. ಆದರೆ ಏನಾಯಿತು? ಯಾವುದೇ ನಾವೀನ್ಯತೆ ಇರಲಿಲ್ಲ, ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಿಲ್ಲ ಮತ್ತು ತಂತ್ರಜ್ಞಾನ ವರ್ಗಾವಣೆಯೂ ಆಗಲಿಲ್ಲ. ಇದರ ಪರಿಣಾಮವಾಗಿ, ದೊಡ್ಡ ಚಿಮಣಿಗಳು ನೆಲಕ್ಕುರುಳಿದವು. ಇದೆಲ್ಲವನ್ನೂ ನಾವು ನಮ್ಮ ಕಣ್ಣಮುಂದೆಯೇ ನೋಡಿದ್ದೇವೆ. ಇದು ಒಂದು ಸ್ಥಳದಲ್ಲಿ ಸಂಭವಿಸಿದರೆ, ಅದು ಮತ್ತೊಂದು ಸ್ಥಳದಲ್ಲಿ ಸಂಭವಿಸಲಾರದು ಎಂದೇನೂ ಇಲ್ಲ . ಆದ್ದರಿಂದ, ನಾವೀನ್ಯತೆ ಅತ್ಯಗತ್ಯ ಮತ್ತು ಅದೂ ಸಹ ದೇಶೀಯ ನಾವೀನ್ಯತೆ.  ಆಮದು ಮಾಡಿದ ಸರಕುಗಳಿಂದ ಯಾವುದೇ ನಾವಿನ್ಯತೆ ಬರಲು ಸಾಧ್ಯವಿಲ್ಲ. ವಿದೇಶಗಳಲ್ಲಿ ನಮ್ಮ ಯುವಕರಿಗೆ ಅನೇಕ ಅವಕಾಶಗಳಿವೆ, ಆದರೆ ಆ ಸಮಯದಲ್ಲಿ ಅವರಿಗೆ ದೇಶದಲ್ಲಿ ಸೀಮಿತ ಅವಕಾಶಗಳಿದ್ದವು. ಇದರ ಪರಿಣಾಮವಾಗಿ, ಒಂದು ಕಾಲದಲ್ಲಿ ವಿಶ್ವದ ಪ್ರಮುಖ ಮಿಲಿಟರಿ ಶಕ್ತಿಯಾಗಿದ್ದ ಭಾರತೀಯ ಸೇನೆಯು ರೈಫಲ್ ನಂತಹ ಸರಳ ಆಯುಧಕ್ಕಾಗಿ ವಿದೇಶಗಳನ್ನು ಅವಲಂಬಿಸಬೇಕಾಯಿತು. ಮತ್ತು ಕ್ರಮೇಣ, ಇದು ಒಂದು ಅಭ್ಯಾಸವಾಯಿತು. ವಿದೇಶಿ ನಿರ್ಮಿತ ಮೊಬೈಲ್ ಫೋನ್ ಬಳಸಿದರೆ, ಅವರು ದೇಶದಲ್ಲಿ ಲಭ್ಯವಿರುವುದನ್ನು ಲೆಕ್ಕಿಸದೆ ಉತ್ತಮ ಮೊಬೈಲ್ ಫೋನ್ ಗೆ ಆದ್ಯತೆ ನೀಡುತ್ತಾರೆ. ಇದು ಒಂದು ಅಭ್ಯಾಸವಾಗುತ್ತದೆ ಮತ್ತು ಆ ಮನಸ್ಥಿತಿಯಿಂದ ಹೊರಬರಲು ನಾವು ಮಾನಸಿಕ ಸೆಮಿನಾರ್ ಆಯೋಜಿಸಬೇಕಾಗುತ್ತದೆ. ಸಮಸ್ಯೆಯ ಮೂಲವು ಮಾನಸಿಕವಾದುದು. ಭಾರತೀಯರು ವಿದೇಶಿ ಉತ್ಪನ್ನಗಳನ್ನು ಹೇಗೆ ತೊಡೆದುಹಾಕಬಹುದು ಎಂಬುದನ್ನು ಕಂಡುಹಿಡಿಯಲು ಮನಶ್ಶಾಸ್ತ್ರಜ್ಞರ ಸೆಮಿನಾರ್ ನಡೆಸಿ. ಮಾದಕ ವ್ಯಸನಿಗಳಿಗೆ ಮಾದಕವಸ್ತುಗಳನ್ನು ತೊಡೆದುಹಾಕಲು ತರಬೇತಿ ಸೆಷನ್ ಗಳ ಅಗತ್ಯವಿರುವ ರೀತಿಯಲ್ಲಿಯೇ, ನಮಗೆ ಇದೇ ರೀತಿಯ ತರಬೇತಿಯ ಅಗತ್ಯವಿದೆ. ನಮಗೆ ನಮ್ಮಲ್ಲಿ ಆತ್ಮವಿಶ್ವಾಸವಿದ್ದರೆ, ನಮ್ಮ ಕೈಯಲ್ಲಿರುವ  ಆಯುಧಗಳ ಸಾಮರ್ಥ್ಯವನ್ನು ನಾವು ಹೆಚ್ಚಿಸಬಹುದು.

ಸ್ನೇಹಿತರೇ,

ಹೆಚ್ಚಿನ ರಕ್ಷಣಾ ಒಪ್ಪಂದಗಳು ಪ್ರಶ್ನಾರ್ಹವಾಗಿದ್ದರಿಂದ ಅಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಈ ಕ್ಷೇತ್ರದಲ್ಲಿ ಅನೇಕ ಲಾಬಿಗಳಿವೆ. ಒಂದು ಲಾಬಿಗೆ ಆದ್ಯತೆ ನೀಡಿದರೆ, ಇತರ ಲಾಬಿಗಳು ಆ ಒಪ್ಪಂದದ ವಿರುದ್ಧ ಸಜ್ಜಾಗುತ್ತವೆ, ಮತ್ತು ರಾಜಕಾರಣಿಗಳನ್ನು ನಿಂದಿಸುವುದು ನಮ್ಮ ದೇಶದಲ್ಲಿ ಬಹಳ ಸಾಮಾನ್ಯವಾಗಿದೆ. ಇದರ ಪರಿಣಾಮವಾಗಿ, ಒಪ್ಪಂದಗಳು ಎರಡರಿಂದ ನಾಲ್ಕು ವರ್ಷಗಳವರೆಗೆ ಸ್ಥಗಿತಗೊಳ್ಳುತ್ತವೆ ಮತ್ತು ನಮ್ಮ ಸಶಸ್ತ್ರ ಪಡೆಗಳು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳಿಗಾಗಿ ದಶಕಗಳ ಕಾಲ ಕಾಯುವಂತಹ ಸ್ಥಿತಿ ಬರುತ್ತದೆ. 

ಸ್ನೇಹಿತರೇ,

ರಕ್ಷಣೆಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಅಗತ್ಯಕ್ಕೂ ವಿದೇಶಗಳ ಮೇಲೆ ಅವಲಂಬಿತರಾಗಿರುವುದು ನಮ್ಮ ದೇಶದ ಆತ್ಮಗೌರವಕ್ಕೆ ಗಂಭೀರ ಬೆದರಿಕೆ ಮಾತ್ರವಲ್ಲ, ವ್ಯೂಹಾತ್ಮಕವಾಗಿಯೂ ತೊಂದರೆದಾಯಕ ಮತ್ತು ಅದು  ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. 2014 ರ ನಂತರ, ದೇಶವನ್ನು ಈ ಪರಿಸ್ಥಿತಿಯಿಂದ ಹೊರತರಲು ನಾವು ಆಂದೋಲನದೋಪಾದಿಯಲ್ಲಿ ಕೆಲಸವನ್ನು ಪ್ರಾರಂಭಿಸಿದ್ದೇವೆ. ಕಳೆದ ದಶಕಗಳ ಧೋರಣೆಗಳಿಂದ  ಕಲಿತು, ಇಂದು ನಾವು ಎಲ್ಲರ ಪ್ರಯತ್ನಗಳೊಂದಿಗೆ ಹೊಸ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಇಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಖಾಸಗಿ ವಲಯ, ಶಿಕ್ಷಣ ಸಂಸ್ಥೆಗಳು, ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಗೆ ಮುಕ್ತವಾಗಿಸಲಾಗಿದೆ. ನಾವು ನಮ್ಮ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಗಳನ್ನು ವಿವಿಧ ವಲಯಗಳಲ್ಲಿ ಸಂಘಟಿಸುವ ಮೂಲಕ ಬಲಪಡಿಸಿದ್ದೇವೆ. ಇಂದು ನಾವು ಐಐಟಿಗಳಂತಹ ನಮ್ಮ ಪ್ರಮುಖ ಸಂಸ್ಥೆಗಳನ್ನು ರಕ್ಷಣಾ ಸಂಶೋಧನೆ ಮತ್ತು ಆವಿಷ್ಕಾರದೊಂದಿಗೆ ಹೇಗೆ ಸಂಪರ್ಕಿಸಬಹುದು ಎಂಬುದರ ನಿಟ್ಟಿನಲ್ಲಿ  ಖಚಿತವಾದ ರೀತಿಯಲ್ಲಿ ಮುನ್ನಡೆಯುತ್ತಿದ್ದೇವೆ.  ನಮ್ಮ ದೇಶದ ಸಮಸ್ಯೆಯೆಂದರೆ ನಮ್ಮ ತಾಂತ್ರಿಕ ವಿಶ್ವವಿದ್ಯಾಲಯಗಳು ಅಥವಾ ತಾಂತ್ರಿಕ ಅಥವಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಯಾವುದೇ ರಕ್ಷಣಾ ಸಂಬಂಧಿತ ಕೋರ್ಸ್ ಗಳನ್ನು ಕಲಿಸಲಾಗುವುದಿಲ್ಲ. ಅಗತ್ಯವಿದ್ದಾಗಲೆಲ್ಲಾ, ಅದನ್ನು ಹೊರಗಿನಿಂದ ಒದಗಿಸಲಾಗುತ್ತದೆ. ಇಲ್ಲಿ ಅಧ್ಯಯನ ಮಾಡುವ ಅಗತ್ಯವೇನಿದೆ? ಅಂದರೆ, ಅದರ ವ್ಯಾಪ್ತಿಯು ತುಂಬಾ ಸೀಮಿತವಾಗಿತ್ತು. ಈ ನಿಟ್ಟಿನಲ್ಲಿ ಬದಲಾವಣೆಗಳನ್ನು ತರಲು ನಾವು ನಿರಂತರವಾಗಿ ಪ್ರಯತ್ನಿಸಿದ್ದೇವೆ. ಡಿ.ಆರ್.ಡಿ.ಒ.  ಮತ್ತು ಇಸ್ರೋದ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ನಮ್ಮ ಯುವಜನತೆ ಮತ್ತು ನವೋದ್ಯಮಗಳಿಗೆ ಗರಿಷ್ಠ ಅವಕಾಶಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಕ್ಷಿಪಣಿ ವ್ಯವಸ್ಥೆಗಳು, ಜಲಾಂತರ್ಗಾಮಿ ನೌಕೆಗಳು, ತೇಜಸ್ ಫೈಟರ್ ಜೆಟ್ ಗಳು ಇತ್ಯಾದಿಗಳ ಅಭಿವೃದ್ಧಿಯನ್ನು ವೇಗಗೊಳಿಸಲು ನಾವು ಸ್ಥಾಗಿತ್ಯವನ್ನು, ಅಡೆತಡೆಗಳನ್ನು  ನಿವಾರಿಸಿದ್ದೇವೆ.  ಅವು ತಮ್ಮ ಗುರಿ ಸಾಧನೆಯಿಂದ ಬಹಳ ವರ್ಷಗಳಷ್ಟು ಹಿಂದುಳಿದಿದ್ದವು. ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆಯ ಕಾರ್ಯಾರಂಭಕ್ಕಾಗಿ ಕಾಯುವಿಕೆ ಕೂಡ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಸಂಗತಿ  ನನಗೆ ಸಂತೋಷ ತಂದಿದೆ. ನೌಕಾ ಆವಿಷ್ಕಾರ ಮತ್ತು ಸ್ವದೇಶಿ ಸಂಘಟನೆ, ಐಡೆಕ್ಸ್ ಅಥವಾ ಟಿಡಿಎಸಿ ಆಗಿರಲಿ, ಇವೆಲ್ಲವೂ ಸ್ವಾವಲಂಬನೆಯ ಬೃಹತ್ ನಿರ್ಧಾರಗಳಿಗೆ ವೇಗ ನೀಡಲಿವೆ.

ಸ್ನೇಹಿತರೇ,

ಕಳೆದ ಎಂಟು ವರ್ಷಗಳಲ್ಲಿ, ನಾವು ರಕ್ಷಣಾ ಬಜೆಟ್ ಹೆಚ್ಚಿಸಿರುವುದು ಮಾತ್ರವಲ್ಲದೆ, ಈ ಬಜೆಟ್ ದೇಶದಲ್ಲೇ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಬಳಕೆಯಾಗುವುದನ್ನು ಖಾತ್ರಿಪಡಿಸಿದ್ದೇವೆ. ಇಂದು, ರಕ್ಷಣಾ ಸಲಕರಣೆಗಳ ಖರೀದಿಗಾಗಿ ಮೀಸಲಿಟ್ಟ ಬಜೆಟ್ ನ ಹೆಚ್ಚಿನ ಭಾಗವನ್ನು ಭಾರತೀಯ ಕಂಪನಿಗಳಿಂದ ಖರೀದಿಗೆ ವಿನಿಯೋಗಿಸಲಾಗುತ್ತಿದೆ. ಮತ್ತು ನೀವು ಕುಟುಂಬ ವ್ಯಕ್ತಿಯಾಗಿರುವುದರಿಂದ ಮತ್ತು ಕುಟುಂಬದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದರಿಂದ ನಾವು ಇದನ್ನು ಅನುಷ್ಟಾನಿಸಬೇಕು. ನೀವು ಮನೆಯಲ್ಲಿ ನಿಮ್ಮ ಮಗುವಿಗೆ ಪ್ರೀತಿ ಮತ್ತು ಗೌರವವನ್ನು ನೀಡದಿದ್ದರೆ, ನಿಮ್ಮ ನೆರೆಹೊರೆಯವರು ಅವರನ್ನು ಪ್ರೀತಿಸಬೇಕೆಂದು ನೀವು ಹೇಗೆ ನಿರೀಕ್ಷಿಸಲು ಸಾಧ್ಯ?. ನೀವು ಪ್ರತಿದಿನವೂ ಅವನನ್ನು ನಿಷ್ಪ್ರಯೋಜಕ ಎಂದು ಕರೆಯುತ್ತಿದ್ದರೆ, ನಿಮ್ಮ ನೆರೆಹೊರೆಯವರು ಅವನನ್ನು ಒಳ್ಳೆಯವನೆಂದು ಕರೆಯಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ?.  ನಾವು ನಮ್ಮ ದೇಶೀಯ ಶಸ್ತ್ರಾಸ್ತ್ರಗಳನ್ನು ಗೌರವಿಸದಿದ್ದರೆ, ಜಗತ್ತು ನಮ್ಮ ಶಸ್ತ್ರಾಸ್ತ್ರಗಳನ್ನು ಗೌರವಿಸುತ್ತದೆ ಎಂದು ನಾವು ಹೇಗೆ ನಿರೀಕ್ಷಿಸಲು ಸಾಧ್ಯ? ಅದು ಸಾಧ್ಯವಿಲ್ಲ. ನಾವು ನಮ್ಮಿಂದಲೇ ಪ್ರಾರಂಭಿಸಬೇಕು. ಮತ್ತು ಬ್ರಹ್ಮೋಸ್ ಈ ದೇಶೀಯ ತಂತ್ರಜ್ಞಾನಕ್ಕೆ ಒಂದು ಉದಾಹರಣೆಯಾಗಿದೆ. ಭಾರತವು ಬ್ರಹ್ಮೋಸ್ ಅಭಿವೃದ್ಧಿಪಡಿಸಿತು ಮತ್ತು ಇಂದು ಜಗತ್ತು ಬ್ರಹ್ಮೋಸ್ ನ್ನು ಒಪ್ಪಿಕೊಳ್ಳಲು ಸರದಿಯಲ್ಲಿದೆ, ಸ್ನೇಹಿತರೇ. ನಾವು ಅಭಿವೃದ್ಧಿಪಡಿಸುವ ಎಲ್ಲದರ ಬಗ್ಗೆ ನಾವು ಹೆಮ್ಮೆ ಪಡಬೇಕು. ಮತ್ತು ಭಾರತದಲ್ಲಿ ತಯಾರಿಸಲಾಗುವ ಮತ್ತು ಆಮದು ಮಾಡಿಕೊಳ್ಳದ 300 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಕ್ಕಾಗಿ ನಾನು ಭಾರತೀಯ ಸಶಸ್ತ್ರ ಪಡೆಗಳನ್ನು ಅಭಿನಂದಿಸುತ್ತೇನೆ. ಈ ನಿರ್ಧಾರಕ್ಕಾಗಿ ನಾನು ಮೂರು ಸೇನೆಗಳ ಎಲ್ಲಾ ಕಾಮ್ರೇಡ್ ಗಳನ್ನು (ಸಂಗಾತಿಗಳನ್ನು)  ಅಭಿನಂದಿಸುತ್ತೇನೆ.

ಸ್ನೇಹಿತರೇ,

ಅಂತಹ ಪ್ರಯತ್ನಗಳ ಫಲಿತಾಂಶಗಳು ಈಗ ಗೋಚರಿಸುತ್ತವೆ. ಕಳೆದ 4-5 ವರ್ಷಗಳಲ್ಲಿ, ನಮ್ಮ ರಕ್ಷಣಾ ಆಮದು ಸುಮಾರು 21 ಪ್ರತಿಶತದಷ್ಟು ಕಡಿಮೆಯಾಗಿದೆ. ಇಷ್ಟು ಕಡಿಮೆ ಸಮಯದಲ್ಲಿ, ನಾವು ಹಣವನ್ನು ಉಳಿಸಿದ್ದೇವೆ ಮಾತ್ರವಲ್ಲ, ಬದಲಾಗಿ ಪರ್ಯಾಯವನ್ನು ರೂಪಿಸಿದ್ದೇವೆ. ಇಂದು ನಾವು ಅತಿದೊಡ್ಡ ರಕ್ಷಣಾ ಆಮದುದಾರ ಎಂಬ ಪಟ್ಟದಿಂದ  ಪ್ರಮುಖ ರಫ್ತುದಾರನಾಗುವತ್ತ ವೇಗವಾಗಿ ಸಾಗುತ್ತಿದ್ದೇವೆ. ಸೇಬು ಮತ್ತು ಇತರ ಹಣ್ಣುಗಳ ನಡುವೆ ಯಾವುದೇ ಹೋಲಿಕೆ ಮಾಡಲು ಸಾಧ್ಯವಿಲ್ಲವಾದರೂ, ನಾನು ಭಾರತದ ಜನರ ಸಾಮರ್ಥ್ಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕೊರೊನಾ ಅವಧಿಯಲ್ಲಿ ನಾನು ಒಂದು ಸಣ್ಣ ವಿಷಯವನ್ನು ಪ್ರಸ್ತಾಪಿಸಿದ್ದೆ. ಆ ಸಮಯದಲ್ಲಿ, ದೇಶಕ್ಕೆ ಹೊರೆಯಾಗಬಹುದಾದ ವಿಷಯಗಳ ಬಗ್ಗೆ ಮಾತನಾಡಲು ನಾನು ಬಯಸಲಿಲ್ಲ. ಆದ್ದರಿಂದ, ಆಟಿಕೆಗಳನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ನಾನು ಪ್ರಶ್ನಿಸಿದೆ. ಅದೊಂದು ಸಣ್ಣ ವಿಷಯವಾಗಿತ್ತು. ನಾವು ನಮ್ಮ ಸ್ವಂತ ಆಟಿಕೆಗಳನ್ನು ಏಕೆ ಖರೀದಿಸಬಾರದು? ನಾವು ನಮ್ಮ ಆಟಿಕೆಗಳನ್ನು ವಿದೇಶದಲ್ಲಿ ಏಕೆ ಮಾರಾಟ ಮಾಡಬಾರದು? ನಮ್ಮ ಆಟಿಕೆ ತಯಾರಕರು ಸಾಂಸ್ಕೃತಿಕ ಸಂಪ್ರದಾಯವನ್ನು ಹೊಂದಿದ್ದಾರೆ. ಅದೊಂದು ಬಹಳ ಸಣ್ಣ ವಿಷಯವಾಗಿತ್ತು. ನಾನು ಕೆಲವು ವಿಚಾರ ಸಂಕಿರಣಗಳು ಮತ್ತು ವರ್ಚುವಲ್ ಸಮ್ಮೇಳನಗಳನ್ನು ಆಯೋಜಿಸಿದೆ ಮತ್ತು ಅವರನ್ನು ಸ್ವಲ್ಪ ಪ್ರೋತ್ಸಾಹಿಸಿದೆ. ಇಷ್ಟು ಕಡಿಮೆ ಸಮಯದಲ್ಲಿ ಬಂದ ಫಲಿತಾಂಶಗಳನ್ನು ನೋಡಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ನನ್ನ ದೇಶದ ಶಕ್ತಿ ಮತ್ತು ಸ್ವಾಭಿಮಾನದತ್ತ ನೋಡಿ  ಮತ್ತು ಸಾಮಾನ್ಯ ನಾಗರಿಕರ ಆಕಾಂಕ್ಷೆಯನ್ನು ನೋಡಿ. ಮನೆಯಲ್ಲಿ ಯಾವುದೇ ವಿದೇಶಿ ಆಟಿಕೆಗಳಿವೆಯೇ ಎಂದು ತಿಳಿಯಲು ಮಕ್ಕಳು ತಮ್ಮ ಸ್ನೇಹಿತರಿಗೆ ಕರೆ ಮಾಡುತ್ತಿದ್ದರು. ಕೊರೋನಾ ಅವಧಿಯಲ್ಲಿ ಅನೇಕ ಸವಾಲುಗಳು ಇದ್ದಾಗ ಅವರಲ್ಲಿ ಈ ಭಾವನೆ ಬೆಳೆಯಿತು.     ಒಂದು ಮಗುವು ವಿದೇಶಿ ನಿರ್ಮಿತ ಆಟಿಕೆಗಳನ್ನು ಇಟ್ಟುಕೊಳ್ಳಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಮತ್ತೊಂದು ಮಗುವಿಗೆ ಕರೆ ಮಾಡುತ್ತಿತ್ತು.  ಇದರ ಪರಿಣಾಮವಾಗಿ ಎರಡು ವರ್ಷಗಳಲ್ಲಿ ಆಟಿಕೆಗಳ ಆಮದು 70 ಪ್ರತಿಶತದಷ್ಟು ಕಡಿಮೆಯಾಯಿತು. ಸಮಾಜದ ಮನೋಧರ್ಮ ಮತ್ತು ನಮ್ಮ ದೇಶದ ಆಟಿಕೆ ತಯಾರಕರ ಸಾಮರ್ಥ್ಯವನ್ನು ನೋಡಿ. ನಮ್ಮ ಆಟಿಕೆಗಳ ರಫ್ತು 70% ನಷ್ಟು ಹೆಚ್ಚಾಗಿದೆ, ಇದರಲ್ಲಿಯ ವ್ಯತ್ಯಾಸ 114% ನಷ್ಟು. ಇಷ್ಟೊಂದು  ದೊಡ್ಡ ವ್ಯತ್ಯಾಸ! ನಮ್ಮ ಆಟಿಕೆಗಳಿಗೆ ಹೋಲಿಕೆ ಸಾಧ್ಯವಿಲ್ಲ ಎಂದು ನಾನು ಹೇಳಬಯಸುತ್ತೇನೆ. ಆದ್ದರಿಂದ, ಸೇಬುಗಳನ್ನು ಇತರ ಹಣ್ಣುಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ನಾನು ಭಾರತದ ಜನಸಾಮಾನ್ಯರ  ಶಕ್ತಿಯನ್ನು ಹೋಲಿಕೆ ಮಾಡುತ್ತಿದ್ದೇನೆ ಮತ್ತು ಅದು ನಮ್ಮ ಆಟಿಕೆ ತಯಾರಕರಿಗೆ ಉಪಯುಕ್ತವಾಗಬಹುದು. ಮತ್ತು ಅದೇ ಶಕ್ತಿಯು ನನ್ನ ದೇಶದ ಮಿಲಿಟರಿ ಶಕ್ತಿಗೂ ಉಪಯುಕ್ತವಾಗಬಹುದು. ನಾವು ನಮ್ಮ ದೇಶವಾಸಿಗಳ ಮೇಲೆ ಈ ನಂಬಿಕೆಯನ್ನು ಇಟ್ಟಿರಬೇಕು. ಕಳೆದ ಎಂಟು ವರ್ಷಗಳಲ್ಲಿ ನಮ್ಮ ರಕ್ಷಣಾ ರಫ್ತು 7 ಪಟ್ಟು ಹೆಚ್ಚಾಗಿದೆ.  . ಬಹಳ ಹಿಂದೇನಲ್ಲ, ಸ್ವಲ್ಪ ಸಮಯದ ಹಿಂದೆ, ಕಳೆದ ವರ್ಷ ನಾವು 13,000 ಕೋಟಿ ರೂ.ಗಳ ಮೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಿದ್ದೇವೆ ಎಂದು ತಿಳಿದಾಗ ಪ್ರತಿಯೊಬ್ಬ ದೇಶವಾಸಿಯೂ ಹೆಮ್ಮೆಪಟ್ಟರು. ಮತ್ತು ಮುಖ್ಯವಾಗಿ, ಈ ನಿಟ್ಟಿನಲ್ಲಿ ಖಾಸಗಿ ವಲಯದ ಪಾಲು ಶೇಕಡಾ 70 ರಷ್ಟಿದೆ.

ಸ್ನೇಹಿತರೇ, 

21 ನೇ ಶತಮಾನದಲ್ಲಿ, ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ರಕ್ಷಣಾ ಸಲಕರಣೆಗಳ ಸ್ವಾವಲಂಬನೆಯ ಜೊತೆಗೆ ಮತ್ತೊಂದು ಅಂಶದ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಈಗ ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳು ವ್ಯಾಪಕವಾಗಿವೆ ಮತ್ತು ಯುದ್ಧದ ವಿಧಾನಗಳು ಸಹ ಬದಲಾಗುತ್ತಿವೆ ಎಂದು ನಿಮಗೆ ತಿಳಿದಿದೆ. ಈ ಮೊದಲು ರಕ್ಷಣೆ ಎಂದರೆ ಭೂಮಿ, ಸಮುದ್ರ ಮತ್ತು ಆಕಾಶ. ಈಗ ಈ ವ್ಯಾಪ್ತಿಯು ಬಾಹ್ಯಾಕಾಶ, ಸೈಬರ್ ಸ್ಪೇಸ್, ಆರ್ಥಿಕ ಮತ್ತು ಸಾಮಾಜಿಕ ಅವಕಾಶವನ್ನು ಒಳಗೊಳ್ಳುತ್ತಿದೆ. ಇಂದು ಪ್ರತಿಯೊಂದು ವ್ಯವಸ್ಥೆಯನ್ನು ಆಯುಧವಾಗಿ ಪರಿವರ್ತಿಸಲಾಗುತ್ತಿದೆ. ಅದು ಅಪರೂಪದ ಅಮೂಲ್ಯ ಭೂಮಿ ಇರಲಿ ಅಥವಾ ಕಚ್ಚಾ ತೈಲವಾಗಿರಲಿ, ಎಲ್ಲವನ್ನೂ ಅಯುಧವಾಗಿ ಬಳಸಲಾಗುತ್ತದೆ. ಇಡೀ ಪ್ರಪಂಚದ ಮನೋಭಾವ ಬದಲಾಗುತ್ತಿದೆ. ಈಗ ಒಬ್ಬೊಬ್ಬರ ನಡುವಿನ ಜಗಳಗಳು,  ಯುದ್ಧಗಳು ಅಗೋಚರ ರೀತಿಯಲ್ಲಿ, ಕಣ್ಣಿಗೆ ಕಾಣದ ರೀತಿಯಲ್ಲಿ ನಡೆಯುತ್ತಿವೆ. ಮತ್ತು ಅವು ಹೆಚ್ಚು ಮಾರಣಾಂತಿಕವಾಗುತ್ತಿವೆ. ಈಗ ನಾವು ಹಿಂದಿನದನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಕ್ಷಣಾ ನೀತಿಗಳನ್ನು ಮತ್ತು ತಂತ್ರಗಳನ್ನು ರೂಪಿಸಲು ಸಾಧ್ಯವಿಲ್ಲ. ಈಗ ನಾವು ಭವಿಷ್ಯದ ಸವಾಲುಗಳನ್ನು ನಿರೀಕ್ಷಿಸುವ ಮೂಲಕ ಮುಂದಡಿ ಇಡಬೇಕಾಗಿದೆ. ನಮ್ಮ ಸುತ್ತಲೂ ಏನಾಗುತ್ತಿದೆ ಎಂಬುದಕ್ಕೆ ಅನುಗುಣವಾಗಿ, ಹೊಸ ಬದಲಾವಣೆಗಳು ಮತ್ತು ಭವಿಷ್ಯದ ಹೊಸ ರಂಗಗಳಿಗೆ ಅನುಗುಣವಾಗಿ ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಮತ್ತು ಸ್ವಾವಲಂಬನೆಯ ಈ ಗುರಿಯು ದೇಶಕ್ಕೆ ಸಾಕಷ್ಟು ಸಹಾಯ ಮಾಡಲಿದೆ.

ಸ್ನೇಹಿತರೇ,

ನಮ್ಮ ದೇಶದ ರಕ್ಷಣೆಗಾಗಿ ನಾವು ಮತ್ತೊಂದು ಪ್ರಮುಖ ಅಂಶದ ಬಗ್ಗೆ ಗಮನ ಹರಿಸಬೇಕು. ಭಾರತದ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಗೆ ಸವಾಲೊಡ್ಡುವ ಶಕ್ತಿಗಳ ವಿರುದ್ಧ ನಾವು ನಮ್ಮ ಯುದ್ಧವನ್ನು ತೀವ್ರಗೊಳಿಸಬೇಕಾಗಿದೆ. ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿರುವಾಗ, ತಪ್ಪು ಮಾಹಿತಿ, ಸುಳ್ಳು ಮಾಹಿತಿಗಳು ಇತ್ಯಾದಿಗಳ ಮೂಲಕ ನಿರಂತರ ದಾಳಿಗಳು ನಡೆಯುತ್ತಿವೆ. ಮಾಹಿತಿಯನ್ನು ಸಹ ಒಂದು ಆಯುಧವನ್ನಾಗಿ ಮಾಡಲಾಗುತ್ತಿದೆ. ನಮ್ಮ ಮೇಲೆ ನಂಬಿಕೆಯನ್ನು ಇಟ್ಟುಕೊಂಡು, ದೇಶದಲ್ಲಿ ಅಥವಾ ವಿದೇಶಗಳಲ್ಲಾಗಲಿ, ಭಾರತದ ಹಿತಾಸಕ್ತಿಗಳಿಗೆ ಹಾನಿಯುಂಟುಮಾಡುವ ಶಕ್ತಿಗಳ ಪ್ರತಿಯೊಂದು ಪ್ರಯತ್ನವನ್ನು ನಾವು ತಡೆಯಬೇಕಾಗಿದೆ. ರಾಷ್ಟ್ರೀಯ ರಕ್ಷಣೆಯು ಇನ್ನು ಮುಂದೆ ಗಡಿಗಳಿಗೆ ಸೀಮಿತವಾಗಿರುವುದಿಲ್ಲ, ಆದರೆ ಹೆಚ್ಚು ವಿಶಾಲವಾಗಿರಲಿದೆ. ಆದುದರಿಂದ, ಪ್ರತಿಯೊಬ್ಬ ನಾಗರಿಕರಿಗೂ ಅದರ ಬಗ್ಗೆ ಅರಿವು ಮೂಡಿಸುವುದು ಅಷ್ಟೇ ಅಗತ್ಯವಾಗಿದೆ. वयं राष्ट्रे जागृयाम (ರಾಷ್ಟ್ರದ ಹಿತದೃಷ್ಟಿಯಿಂದ ನಾವು ಜಾಗರೂಕರಾಗಿರಬೇಕು) -- ಈ ಪ್ರತಿಪಾದನೆ ಜನಸಾಮಾನ್ಯರನ್ನು ತಲುಪಬೇಕು. ಇದು ಬಹಳ ಅಗತ್ಯವಾಗಿದೆ. ನಾವು 'ಆತ್ಮ ನಿರ್ಭರ ಭಾರತ'ಕ್ಕಾಗಿ ಇಡೀ ಸರ್ಕಾರದ ಧೋರಣೆಯೊಂದಿಗೆ ಮುಂದೆ ಸಾಗುತ್ತಿರುವಂತೆಯೇ, ಇಡೀ ರಾಷ್ಟ್ರದ ರಕ್ಷಣೆಗಾಗಿ ರಾಷ್ಟ್ರೀಯ ಧೋರಣೆಯು ಈ ಕಾಲದ ಅವಶ್ಯಕತೆಯಾಗಿದೆ. ಭಾರತದ ಜನತೆಯ ಈ ಸಾಮೂಹಿಕ ರಾಷ್ಟ್ರೀಯ ಪ್ರಜ್ಞೆಯು ಭದ್ರತೆ ಮತ್ತು ಸಮೃದ್ಧಿಯ ಸಶಕ್ತವಾದ ತಳಹದಿಯಾಗಿದೆ. ಈ ಉಪಕ್ರಮಕ್ಕಾಗಿ ಮತ್ತು ಮುನ್ನಡೆಯುವ  ಪ್ರಯತ್ನಗಳಿಗಾಗಿ ನಾನು ಮತ್ತೊಮ್ಮೆ ರಕ್ಷಣಾ ಸಚಿವಾಲಯ, ನಮ್ಮ ರಕ್ಷಣಾ ಪಡೆಗಳು, ಹಾಗು ಅವರ ನಾಯಕತ್ವವನ್ನು ಅಭಿನಂದಿಸುತ್ತೇನೆ. ನಾನು ಕೆಲವು ಸ್ಟಾಲ್ ಗಳಿಗೆ ಭೇಟಿ ನೀಡಿದ್ದಾಗ, ನಮ್ಮ ನೌಕಾಪಡೆಯ ನಿವೃತ್ತ ಸಹೋದ್ಯೋಗಿಗಳು ಸಹ ಆವಿಷ್ಕಾರಗಳಲ್ಲಿ ತಮ್ಮ ಸಮಯ, ಅನುಭವ ಮತ್ತು ಶಕ್ತಿಯನ್ನು ವಿನಿಯೋಗಿಸಿರುವ ಉತ್ತಮ ಸಂಗತಿ ಕಂಡು ಬಂದಿತು. ಇದರಿಂದ ನಮ್ಮ ನೌಕಾಪಡೆ ಮತ್ತು ರಕ್ಷಣಾ ಪಡೆಗಳು ಬಲಗೊಳ್ಳುತ್ತವೆ. ಇದು ಒಂದು ದೊಡ್ಡ ಪ್ರಯತ್ನ ಎಂದು ನಾನು ಭಾವಿಸುತ್ತೇನೆ ಮತ್ತು ನಿವೃತ್ತಿಯ ನಂತರವೂ ಆಂದೋಲನದೋಪಾದಿಯಲ್ಲಿ ಕೆಲಸ ಮಾಡಿದವರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ನಿಮ್ಮ ಪ್ರಯತ್ನಗಳಿಗಾಗಿ ನಿಮ್ಮನ್ನು ಗೌರವಿಸಲಾಗುತ್ತಿದೆ ಮತ್ತು ನೀವು ಅಭಿನಂದನೆಗೆ ಅರ್ಹರಾಗಿದ್ದೀರಿ. ತುಂಬಾ ಧನ್ಯವಾದಗಳು! ಅನೇಕ ಅಭಿನಂದನೆಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.   

 

**********



(Release ID: 1842940) Visitor Counter : 193