ಪ್ರಧಾನ ಮಂತ್ರಿಯವರ ಕಛೇರಿ

ಮಾತೃಭೂಮಿಯ ಶತಮಾನೋತ್ಸವ ವರ್ಷಾಚರಣೆ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


“ಅಮೃತ ಕಾಲ ಸದೃಢ, ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಂಡ ಭಾರತ ನಿರ್ಮಾಣ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅವಕಾಶ ಒದಗಿಸಿದೆ’’

“ಪ್ರತಿಯೊಂದು ಮಾಧ್ಯಮ ಸಂಸ್ಥೆಗಳೂ ಸ್ವಚ್ಛ ಭಾರತ್ ಮಿಷನ್ ಅನ್ನು ಹೆಚ್ಚಿನ ಪ್ರಾಮಾಣಿಕತೆಯಿಂದ ಕೈಗೆತ್ತಿಕೊಂಡಿವೆ’’

“ಯೋಗ, ದೈಹಿಕ ಕ್ಷಮತೆ ಮತ್ತು ಬೇಟಿ ಬಚಾವೋ ಬೇಟಿ ಪಢಾವೋ ಜನಪ್ರಿಯಗೊಳಿಸಲು ಮಾಧ್ಯಮಗಳು ಹೆಚ್ಚಿನ ಉತ್ತೇಜನಕಾರಿ ಪಾತ್ರ ವಹಿಸಿವೆ’’

“ನಮ್ಮ ಪ್ರತಿಭಾವಂತ ಯುವಜನರ ಶಕ್ತಿಯೊಂದಿಗೆ ನಮ್ಮ ದೇಶ ಆತ್ಮನಿರ್ಭರ ಅಥವಾ ಸ್ವಾವಲಂಬಿ”ಯತ್ತ ಸಾಗುತ್ತಿದೆ’’

“ಮುಂಬರುವ ಪೀಳಿಗೆಗಳು ಸದ್ಯ ಇರುವುದಕ್ಕಿಂತ ಉತ್ತಮ ಜೀವನಶೈಲಿಯನ್ನು ಮುನ್ನಡೆಸುವುದನ್ನು ಖಾತ್ರಿಪಡಿಸಿಕೊಳ್ಳುವುದು ನಮ್ಮ ಮಾರ್ಗದರ್ಶ ತತ್ವವಾಗಿದೆ’’

Posted On: 18 MAR 2022 12:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತೃಭೂಮಿ ಪತ್ರಿಕೆಯ ಶತಮಾನೋತ್ಸವ ವರ್ಷಾಚರಣೆಯನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿ ಅವರು ಪತ್ರಿಕೆಯ ಪಯಣದಲ್ಲಿ ಭಾಗಿಯಾದ ಎಲ್ಲಾ ಪ್ರಮುಖ ವ್ಯಕ್ತಿಗಳಿಗೆ ಗೌರವ ನಮನ ಸಲ್ಲಿಸಿದರು. “ಮಹಾತ್ಮ ಗಾಂಧಿಯವರ ಆದರ್ಶಗಳಿಂದ ಪ್ರೇರಿತವಾಗಿ, ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಲು ಮಾತೃಭೂಮಿ ಪತ್ರಿಕೆ ಉದಯವಾಯತು’’ ಎಂದು ಅವರು ಹೇಳಿದರು. ವಸಾಹತುಶಾಹಿ ಆಡಳಿತದ ವಿರುದ್ಧ ನಮ್ಮ ರಾಷ್ಟ್ರದ ಜನರನ್ನು ಒಗ್ಗೂಡಿಸಲು ದೇಶಾದ್ಯಂತ ಆರಂಭಿಸಲಾದ ಪತ್ರಿಕೆಗಳು ಮತ್ತು ನಿಯತಕಾಲಿಕಗಳ ವೈಭವದ ಸಂಪ್ರದಾಯದ ಪ್ರಕಟಣೆಗಳನ್ನು ಅವರು ವಿವರಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಲೋಕಮಾನ್ಯ ತಿಲಕ್, ಮಹಾತ್ಮ ಗಾಂಧಿ, ಗೋಪಾಲ ಕೃಷ್ಣ ಗೋಖಲೆ, ಶ್ಯಾಮ್‌ಜಿ ಕೃಷ್ಣ ವರ್ಮ ಮತ್ತಿತರರು ತಮ್ಮ ಕೆಲಸಕ್ಕಾಗಿ ಪತ್ರಿಕೆಗಳನ್ನು ಬಳಸಿಕೊಂಡ ಉದಾಹರಣೆಗಳನ್ನು ಪ್ರಧಾನಮಂತ್ರಿ ನೀಡಿದರು. ವಿಶೇಷವಾಗಿ ಅವರು  ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದ ಶ್ರೀ ಎಂ.ಪಿ. ವೀರೇಂದ್ರ ಕುಮಾರ್ ಅವರ ಪ್ರಯತ್ನಗಳನ್ನು ಸ್ಮರಿಸಿದರು.

ಸ್ವರಾಜ್ಯಕ್ಕಾಗಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮ ಪ್ರಾಣವನ್ನು ತ್ಯಾಗಮಾಡಲು ನಮಗೆ ಅವಕಾಶವಿಲ್ಲದಿದ್ದರೂ, ಈ ಅಮೃತ ಕಾಲವು ಬಲಿಷ್ಠ, ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತಕ್ಕಾಗಿ ಕೆಲಸ ಮಾಡುವ ಅವಕಾಶವನ್ನು ನಮಗೆ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನವಭಾರತದ ಪ್ರಚಾರಗಳ ಮೇಲೆ ಮಾಧ್ಯಮಗಳ ಧನಾತ್ಮಕ ಪ್ರಭಾವದ ಕುರಿತು ಅವರು ವಿವರಿಸಿದರು. ಸ್ವಚ್ಛ ಭಾರತ್ ಮಿಷನ್‌ನ ಉದಾಹರಣೆ ನೀಡಿದ ಅವರು, ಪ್ರತಿಯೊಂದು ಮಾಧ್ಯಮ ಸಂಸ್ಥೆಯು ಈ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ತೆಗೆದುಕೊಂಡಿತು. ಅಂತೆಯೇ, ಯೋಗ, ದೈಹಿಕ ಕ್ಷಮತೆ ಮತ್ತು ಬೇಟಿ ಬಚಾವೋ ಬೇಟಿ ಪಢಾವೋ  ಜನಪ್ರಿಯಗೊಳಿಸುವಲ್ಲಿ ಮಾಧ್ಯಮಗಳು ಅತ್ಯುತ್ತಮ  ಪ್ರೋತ್ಸಾಹದಾಯಕ ಪಾತ್ರ ವಹಿಸಿವೆ ಎಂದರು. “ಇವು ರಾಜಕೀಯ ಮತ್ತು ರಾಜಕೀಯ ಪಕ್ಷಗಳ  ವ್ಯಾಪ್ತಿಗೆ ಮೀರಿದ ವಿಷಯಗಳು, ಅವರು ಮುಂಬರುವ ವರ್ಷಗಳಲ್ಲಿ ಉತ್ತಮ ರಾಷ್ಟ್ರವನ್ನು ರೂಪಿಸುತ್ತಾರೆ’’ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟದ ಹೆಚ್ಚಿನ ಜನರಿಗೆ ತಿಳಿಯದಂತಹ ಘಟನೆಗಳು ಮತ್ತು ಅಸಾಮಾನ್ಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹೋರಾಟಕ್ಕೆ ಸಂಬಂಧಿಸಿದ ಸ್ಥಳಗಳನ್ನು ಪ್ರಮುಖವಾಗಿ ಜನಪ್ರಿಯಗೊಳಿಸುವ ಪ್ರಯತ್ನಗಳನ್ನು ಮಾಧ್ಯಮಗಳು ಮಾಡಬೇಕು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ಅಂತೆಯೇ, ಮಾಧ್ಯಮ ಹೊರತುಪಡಿಸಿದ ಹಿನ್ನೆಲೆಯಿಂದ ಬರುವ ಬರಹಗಾರರಿಗೆ ವೇದಿಕೆಯನ್ನು ನೀಡಲು ಮತ್ತು ಅವರು ಮಾತನಾಡದ ಪ್ರದೇಶಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಲು ಪತ್ರಿಕೆಗಳು ಉತ್ತಮ ವಿಧಾನವಾಗಿದೆ ಎಂದು ಹೇಳಿದರು.

ಇಂದಿನ ದಿನ ಮತ್ತು ಯುಗದಲ್ಲಿ ವಿಶ್ವ ಭಾರತದಿಂದ ಏನ್ನನ್ನು ನಿರೀಕ್ಷಿಸುತ್ತಿದೆ ಎಂಬ ಕುರಿತು ಮಾತನಾಡಿದ ಪ್ರಧಾನಮಂತ್ರಿ,  ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಅಸಮರ್ಥವಾಗಿದೆ ಎಂಬ ಆರಂಭಿಕ ವದಂತಿಗಳನ್ನು ಭಾರತ ಸ್ಪಷ್ಟವಾಗಿ ಸುಳ್ಳು ಮಾಡಿದೆ ಎಂದು ಹೇಳಿದರು. ಎರಡು ವರ್ಷಗಳಿಂದ 80 ಕೋಟಿ ಜನರಿಗೆ ಉಚಿತ ಪಡಿತರ ಧಾನ್ಯ ಸೌಲಭ್ಯ ದೊರಕಿದೆ, 180 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. “ಭಾರತದ ಪ್ರತಿಭಾನ್ವಿತ ಯುವಕರಿಂದ ಶಕ್ತಿಯಿಂದಾಗಿ ನಮ್ಮ ರಾಷ್ಟ್ರವು ಆತ್ಮನಿರ್ಭರ ಅಥವಾ ಸ್ವಾವಲಂಬನೆಯತ್ತ ಸಾಗುತ್ತಿದೆ’’ ಎಂದು ಅವರು ಹೇಳಿದರು.

ದೇಶೀಯ ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸುವ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಭಾರತವನ್ನು ನಿರ್ಮಿಸುವುದು ಈ ತತ್ವದ ತಿರುಳಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆರ್ಥಿಕ ಪ್ರಗತಿಯನ್ನು ವೃದ್ಧಿಸಲು ಹಿಂದೆಂದೂ ಕಾಣದಂತಹ ಅಭೂತಪೂರ್ವ ಸುಧಾರಣೆಗಳನ್ನು ತರಲಾಗಿದೆ. ಇದು ಸ್ಥಳೀಯ ಉದ್ಯಮವನ್ನು ಪ್ರೋತ್ಸಾಹಿಸಲು ವಿವಿಧ ವಲಯಗಳಲ್ಲಿ ಉತ್ಪಾದನೆ ಆಧರಿಸಿದ ಪ್ರೋತ್ಸಾಹಕ ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಭಾರತದ ನವೋದ್ಯಮ ಪೂರಕ ವ್ಯವಸ್ಥೆಯು ಹಿಂದೆಂದೂ ಇಷ್ಟು ಸಕ್ರಿಯವಾಗಿರಲಿಲ್ಲ  ಎಂದು ಅವರು ಹೇಳಿದರು. ಕಳೆದ 4 ವರ್ಷಗಳಲ್ಲಿ, ಯುಪಿಐ ವಹಿವಾಟುಗಳ ಸಂಖ್ಯೆಯು 70 ಪಟ್ಟು ಹೆಚ್ಚಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್‌ಗೆ 110 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು.

ಪಿಎಂ ಗತಿಶಕ್ತಿ ಮೂಲಸೌಕರ್ಯ ವೃದ್ಧಿ ಮತ್ತು ಆಡಳಿತವನ್ನು ಹೆಚ್ಚು ತಡೆರಹಿತವಾಗಿಸಲು ಹೊರಟಿದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು. “ಭಾರತದ ಪ್ರತಿಯೊಂದು ಹಳ್ಳಿಯೂ ಹೈಸ್ಪೀಡ್ ಇಂಟರ್ನೆಟ್  ಸಂಪರ್ಕವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಭವಿಷ್ಯದ ಪೀಳಿಗೆಗಳು ಸದ್ಯ ಇರುವುದಕ್ಕಿಂತ ಉತ್ತಮ ಜೀವನಶೈಲಿ ಮುನ್ನಡೆಸುವುದನ್ನು ಖಾತ್ರಿಪಡಿಸಿಕೊಳ್ಳುವುದು ನಮ್ಮ ಪ್ರಯತ್ನಗಳ ಮಾರ್ಗದರ್ಶಿ ತತ್ವವಾಗಿದೆ” ಎಂದು ಅವರು ಹೇಳಿದರು.

***

 



(Release ID: 1807143) Visitor Counter : 187