ಹಣಕಾಸು ಸಚಿವಾಲಯ

ತುರ್ತು ಸಾಲ ಖಾತ್ರಿ ಯೋಜನೆಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು;. ಆತಿಥ್ಯ ಮತ್ತು ಸಂಬಂಧಿತ ಉದ್ಯಮಗಳನ್ನು ಬೆಂಬಲಿಸಲು ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ. ಗಳಿಗೆ ವಿಸ್ತರಣೆ


ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಯೋಜನೆಗಾಗಿ ನವೀಕರಿಸಿದ ಸಾಲ ಖಾತ್ರಿ ಟ್ರಸ್ಟ್ ಮೂಲಕ ಎಂಎಸ್ಎಂಇಗಳಿಗೆ 2 ಲಕ್ಷ ಕೋಟಿ ರೂ.ಹೆಚ್ಚುವರಿ ಸಾಲ

6,000 ಕೋಟಿ ರೂ. ವೆಚ್ಚದಲ್ಲಿ “ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ”(ಆರ್ ಎ ಎಮ್ ಪಿ) ಕಾರ್ಯಕ್ರಮವನ್ನು ಆರಂಭಿಸಲಾಗುವುದು

ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಪರಸ್ಪರ ಸಂಪರ್ಕಿಸಲಾಗಿಸುವುದು

Posted On: 01 FEB 2022 12:51PM by PIB Bengaluru

ತುರ್ತು ಸಾಲ ಖಾತ್ರಿ ಯೋಜನೆ (ಇ ಸಿ ಎಲ್ ಜಿ ಎಸ್) ಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು ಮತ್ತು ಅದರ ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ.ಗಳಿಗೆ ವಿಸ್ತರಿಸಲಾಗುವುದು. ಈಗ ಅದರ ಒಟ್ಟು ವ್ಯಾಪ್ತಿ 5 ಲಕ್ಷ ಕೋಟಿ ರೂ. ಗಳಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಡ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ 2022-23 ರಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಹೆಚ್ಚುವರಿ ಮೊತ್ತವನ್ನು ಆತಿಥ್ಯ ಮತ್ತು ಸಂಬಂಧಿತ ಉದ್ಯಮಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗುತ್ತಿದೆ ಎಂದರು. ಇ ಸಿ ಎಲ್ ಜಿ ಎಸ್ 130 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇ ಗಳಿಗೆ ಹೆಚ್ಚು ಅಗತ್ಯವಿರುವ ಹೆಚ್ಚುವರಿ ಸಾಲವನ್ನು ಒದಗಿಸಿದೆ. ಇದು ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮವನ್ನು ತಗ್ಗಿಸಲು ಅವುಗಳಿಗೆ ಸಹಾಯ ಮಾಡಿದೆ ಎಂದು ಹಣಕಾಸು ಸಚಿವರು ತಿಳಿಸಿದರು.  ಆತಿಥ್ಯ ಮತ್ತು ಸಂಬಂಧಿತ ಸೇವೆಗಳು, ವಿಶೇಷವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು, ತಮ್ಮ ಸಾಂಕ್ರಾಮಿಕ ಪೂರ್ವದ ವ್ಯವಹಾರದ ಮಟ್ಟವನ್ನು ಇನ್ನೂ ಮರಳಿ ಪಡೆದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಈ ಪ್ರಸ್ತಾಪವನ್ನು ಮಾಡಲಾಗಿದೆ. ಎಂಎಸ್‌ಎಂಇ ವಲಯಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವರು ಇತರ ಹಲವಾರು ಪ್ರಸ್ತಾವನೆಗಳನ್ನು ಸಹ ಮಾಡಿದ್ದಾರೆ.

7. Accelerating Growth of MSME.jpg

ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪರಿಷ್ಕರಿಸಿದ ಸಾಲ ಖಾತ್ರಿ ಟ್ರಸ್ಟ್ (ಸಿ ಜಿ ಟಿ ಎಂ ಎಸ್ ) ಮೂಲಕ ಹೆಚ್ಚುವರಿ ಸಾಲ

ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ಟ್ರಸ್ಟ್ (ಸಿ ಜಿ ಟಿ ಎಂ ಎಸ್ ಇ) ಯೋಜನೆಯನ್ನು ಅಗತ್ಯವಿರುವ ಹಣದ ಒಳಹರಿವಿನೊಂದಿಗೆ ಪರಿಷ್ಕರಿಸಲಾಗುತ್ತದೆ. ಇದು ಹೆಚ್ಚುವರಿಯಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ರೂ. ಸಾಲ ಒದಗಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ ಹಣಕಾಸು ಸಚಿವರು ಹೇಳಿದರು.

ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎಂ ಪಿ)

5 ವರ್ಷಗಳ ಅವಧಿಯಲ್ಲಿ 6,000 ಕೋಟಿ ರೂ. ವೆಚ್ಚದ ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎ ಎಂ ಪಿ) ಕಾರ್ಯಕ್ರಮವನ್ನು ಆರಂಭಿಸುವುದಾಗಿ ಸಚಿವರು ಘೋಷಿಸಿದರು. ಇದು ಎಂಎಸ್‌ಎಂಇ ವಲಯವು ಹೆಚ್ಚು ಸ್ಥಿತಿಸ್ಥಾಪಕತ್ವ, ಸ್ಪರ್ಧಾತ್ಮಕ ಮತ್ತು ದಕ್ಷತೆ ಹೊಂದಲು ಸಹಾಯ ಮಾಡುತ್ತದೆ.

ಉದ್ಯಮ್, -ಶ್ರಮ್, ಎನ್ಸಿಎಸ್ ಮತ್ತು ಅಸೀಮ್ ಪೋರ್ಟಲ್ಗಳ ಪರಸ್ಪರ ಸಂಪರ್ಕ

ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಪರಸ್ಪರ ಸಂಪರ್ಕಿಸಲಾಗಿಸುವುದು. ಅವುಗಳು ಈಗ ಲೈವ್, ಡೇಟಾಬೇಸ್‌ಗಳೊಂದಿಗೆ ಪೋರ್ಟಲ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. G2C, B2C ಮತ್ತು B2B ಸೇವೆಗಳನ್ನು ಒದಗಿಸುತ್ತವೆ.ಈ ಸೇವೆಗಳು ಆರ್ಥಿಕತೆಯನ್ನು ಮತ್ತಷ್ಟು ಔಪಚಾರಿಕಗೊಳಿಸುವ ಮತ್ತು ಎಲ್ಲರಿಗೂ ಉದ್ಯಮಶೀಲತೆಯ ಅವಕಾಶಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಸಾಲ ಸೌಲಭ್ಯ, ಕೌಶಲ್ಯ ಮತ್ತು ನೇಮಕಾತಿಗೆ ಸಂಬಂಧಿಸಿವೆ.

ಕಸ್ಟಮ್ ಸುಂಕಗಳನ್ನು ತರ್ಕಬದ್ಧಗೊಳಿಸುವಿಕೆ

ವಿವಿಧ ಸುಂಕಗಳನ್ನು ತರ್ಕಬದ್ಧಗೊಳಿಸುವ ನಿಟ್ಟಿನಲ್ಲಿ, ಛತ್ರಿಗಳ ಮೇಲಿನ ಸುಂಕವನ್ನು ಶೇಕಡಾ 20 ಕ್ಕೆ ಏರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಛತ್ರಿಗಳ ಬಿಡಿ ಭಾಗಗಳ ಮೇಲಿನ ವಿನಾಯಿತಿಯನ್ನು ಹಿಂಪಡೆಯಲಾಗುತ್ತದೆ. ಭಾರತದಲ್ಲಿ ತಯಾರಾಗುವ ಕೃಷಿ ವಲಯದ ಉಪಕರಣಗಳು ಮತ್ತು ಸಾಧನಗಳ ಮೇಲೆ ವಿನಾಯಿತಿಯನ್ನು ತರ್ಕಬದ್ಧಗೊಳಿಸಲಾಗುತ್ತಿದೆ. ಎಂಎಸ್ಎಂಇ ಸೆಕೆಂಡರಿ ಸ್ಟೀಲ್ ಉತ್ಪಾದಕರಿಗೆ ಪರಿಹಾರ ನೀಡಲು ಕಳೆದ ವರ್ಷ ಉಕ್ಕಿನ ಸ್ಕ್ರ್ಯಾಪ್‌ಗೆ ನೀಡಲಾದ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ಸ್ಟೇನ್‌ಲೆಸ್ ಸ್ಟೀಲ್ ಮತ್ತು ಲೇಪಿತ ಸ್ಟೀಲ್ ಫ್ಲಾಟ್ ಉತ್ಪನ್ನಗಳು, ಮಿಶ್ರಲೋಹ ಸ್ಟೀಲ್ ಮತ್ತು ಹೈ-ಸ್ಪೀಡ್ ಸ್ಟೀಲ್‌ನ ಬಾರ್‌ಗಳ ಮೇಲಿನ ಕೆಲವು ಆಂಟಿ-ಡಂಪಿಂಗ್ ಮತ್ತು ಸಿವಿಡಿಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಸಕ್ತ ಲೋಹಗಳ ಹೆಚ್ಚಿನ ಬೆಲೆಗಳನ್ನು ಪರಿಗಣಿಸಿ ಹಿಂತೆಗೆದುಕೊಳ್ಳಲಾಗುತ್ತಿದೆ.

***



(Release ID: 1794551) Visitor Counter : 338