ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಮಹಿಳಾ ಆಯೋಗದ 30ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


“ದೇಶದಲ್ಲಿರುವ ಎಲ್ಲಾ ಮಹಿಳಾ ಆಯೋಗಗಳು ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳಬೇಕು ಮತ್ತು ತಮ್ಮ ರಾಜ್ಯಗಳ ಮಹಿಳೆಯರಿಗೆ ಹೊಸ ದಿಕ್ಕು ತೋರಬೇಕು”

“ಆತ್ಮನಿರ್ಭರ್ ಭಾರತ ಆಂದೋಲನವು ದೇಶದ ಅಭಿವೃದ್ಧಿಯ ಜತೆಗೆ ಮಹಿಳೆಯರ ಸಾಮರ್ಥ್ಯಗಳ ಸಂಪರ್ಕ ಕಲ್ಪಿಸುತ್ತಿದೆ”

“2016ರ ನಂತರ ದೇಶದಲ್ಲಿ ಉದಯವಾಗಿರುವ 60 ಸಾವಿರಕ್ಕಿಂತ ಹೆಚ್ಚಿನ ನವೋದ್ಯಮಗಳ ಪೈಕಿ 45% ನವೋದ್ಯಮಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕರಿದ್ದಾರೆ”

“2015ರ ನಂತರ 185 ಮಹಿಳಾ ಸಾಧಕಿಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ, ಈ ವರ್ಷ ವಿವಿಧ ವಲಯಗಳ 34 ಸಾಧಕಿಯರಿಗೆ ಪ್ರಶಸ್ತಿ ಸಂದಿದೆ, ಇದೊಂದು ದಾಖಲೆ”

“ಗರಿಷ್ಠ ಹೆರಿಗೆ ರಜೆ ಅವಕಾಶ ಒದಗಿಸುತ್ತಿರುವ ದೇಶಗಳ ಸಾಲಿನಲ್ಲಿ ಭಾರತ ನಿಂತಿದೆ”

"ಯಾವುದೇ ಸರ್ಕಾರವು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡದಿದ್ದಾಗ, ಮಹಿಳೆಯರು ಅಧಿಕಾರದಿಂದ ನಿರ್ಗಮಿಸುವುದನ್ನು ಗಮನಿಸಬಹುದಾಗಿದೆ"

Posted On: 31 JAN 2022 5:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 30ನೇ ರಾಷ್ಟ್ರೀಯ ಮಹಿಳಾ ಆಯೋಗದ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. “ಆಕೆಯೇ  ಬದಲಾವಣೆಯ ರೂವಾರಿ(ಶೀ ದಿ ಚೇಂಜ್ ಮೇಕರ್)” ಎಂಬ ಘೋಷವಾಕ್ಯದಡಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ, ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರನ್ನು ಕೊಂಡಾಡುವ, ಗೌರವಿಸುವ ಗುರಿ ಹೊಂದಿದೆ. ರಾಜ್ಯ ಮಹಿಳಾ ಆಯೋಗಗಳು, ರಾಜ್ಯ ಸರ್ಕಾರಗಳಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶ್ವವಿದ್ಯಾಲಯ ಮತ್ತು ಕಾಲೇಜು ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು, ಮಹಿಳಾ ಉದ್ಯಮಿಗಳು ಮತ್ತು ವ್ಯಾಪಾರ ಸಂಘಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ; ರಾಜ್ಯ ಸಚಿವರಾದ ಡಾ. ಮುಂಜ್ಪಾರಾ ಮಹೇಂದ್ರಭಾಯಿ ಕಲುಭಾಯಿ ಮತ್ತು ಶ್ರೀಮತಿ ದರ್ಶನಾ ಜರ್ದೋಶ್; ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ರೇಖಾ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ, ರಾಷ್ಟ್ರೀಯ ಮಹಿಳಾ ಆಯೋಗದ 30ನೇ ಸಂಸ್ಥಾಪನಾ ದಿನದ ಅಂಗವಾಗಿ ಶುಭಾಶಯ ಕೋರಿದರು. “ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಜೀವನದಲ್ಲಿ 30 ವರ್ಷಗಳ ಮೈಲಿಗಲ್ಲು ಬಹಳ ಮುಖ್ಯವಾಗಿದೆ. ಹೊಸ ಜವಾಬ್ದಾರಿಗಳು ಮತ್ತು ಹೊಸ ಶಕ್ತಿಯೊಂದಿಗೆ ಮುನ್ನಡೆಯಲು ಇದು ಸಮಯ" ಎಂದು ಅವರು ಹೇಳಿದರು.

ಇಂದು ಬದಲಾಗುತ್ತಿರುವ ಭಾರತದಲ್ಲಿ ಮಹಿಳೆಯರ ಪಾತ್ರ ನಿರಂತರವಾಗಿ ವಿಸ್ತರಿಸುತ್ತಿದೆ. ಆದ್ದರಿಂದ ರಾಷ್ಟ್ರೀಯ ಮಹಿಳಾ ಆಯೋಗದ ಪಾತ್ರ ವಿಸ್ತರಣೆಯೂ ಇಂದಿನ ಅಗತ್ಯವಾಗಿದೆ. ನಿಟ್ಟಿನಲ್ಲಿ ದೇಶದ ಎಲ್ಲಾ ಮಹಿಳಾ ಆಯೋಗಗಳು ಸಹ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಂಡು ತಮ್ಮ ರಾಜ್ಯಗಳ ಮಹಿಳೆಯರಿಗೆ ಹೊಸ ದಿಕ್ಕು ತೋರಬೇಕು ಎಂದು ಕರೆ ನೀಡಿದರು.

ಶತಮಾನಗಳಿಂದಲೂ ಭಾರತದ ನೈಜ ಶಕ್ತಿ ಮತ್ತು ಸಾಮರ್ಥ್ಯವು ಸ್ಥಳೀಯ ಸಣ್ಣ ಉದ್ದಿಮೆಗಳು ಅಥವಾ ಎಂಎಸ್‌ಎಂಇಗಳಲ್ಲಿದೆ. ಉದ್ದಿಮೆಗಳಲ್ಲಿ ಪುರುಷರಂತೆ ಮಹಿಳೆಯರಿಗೂ ಸಮಾನ ಪಾತ್ರಗಳಿವೆ. ಹಳೆಯದಾದ ಚಿಂತನೆಯು ಮಹಿಳೆಯರ ಕೌಶಲ್ಯಗಳನ್ನು ಕೇವಲ ಮನೆಗೆಲಸಕ್ಕೆ ಸೀಮಿತಗೊಳಿಸಿತ್ತು. ಆದರೆ ಈಗ ದೇಶದ ಆರ್ಥಿಕತೆಯನ್ನು ಮುನ್ನಡೆಸಲು ಹಳೆಯ ಚಿಂತನೆಯನ್ನು ಬದಲಾಯಿಸುವುದು ಅಗತ್ಯವಾಗಿದೆ. ಮೇಕ್ ಇನ್ ಇಂಡಿಯಾ ಇಂದು ಇದನ್ನು ಮಾಡುತ್ತಿದೆ. ಆತ್ಮನಿರ್ಭರ್ ಭಾರತ್ ಅಭಿಯಾನವು ದೇಶದ ಅಭಿವೃದ್ಧಿಯೊಂದಿಗೆ ಮಹಿಳೆಯರ ಸಾಮರ್ಥ್ಯವನ್ನು ಜೋಡಿಸುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಮುದ್ರಾ ಯೋಜನೆಯಲ್ಲಿ ಸುಮಾರು ಶೇ.70 ಫಲಾನುಭವಿಗಳು ಮಹಿಳೆಯರೇ ಆಗಿರುವುದರಿಂದ ಬದಲಾವಣೆಯು ಗೋಚರಿಸುತ್ತಿದೆ. ದೇಶವು ಕಳೆದ 6-7 ವರ್ಷಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಂಖ್ಯೆಯಲ್ಲಿ 3 ಪಟ್ಟು ಹೆಚ್ಚಳ ಕಂಡಿದೆ. ಅದೇ ರೀತಿ,  2016 ನಂತರ ಹೊರಹೊಮ್ಮಿರುವ 60 ಸಾವಿರಕ್ಕೂ ಹೆಚ್ಚಿನ ನವೋದ್ಯಮಗಳ ಪೈಕಿ, ಶೇ.45 ನವೋದ್ಯಮಗಳು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕರನ್ನು ಹೊಂದಿವೆ ಎಂದು ನರೇಂದ್ರ ಮೋದಿ ತಿಳಿಸಿದರು.

ನವ ಭಾರತದ ಬೆಳವಣಿಗೆಯ ಚಕ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮಹಿಳಾ ಆಯೋಗಗಳು ಸಮಾಜದ ಉದ್ಯಮಶೀಲತೆಯಲ್ಲಿ ಮಹಿಳೆಯರ ಪಾತ್ರವನ್ನು ಉತ್ತೇಜಿಸಲು ಮತ್ತು ಗರಿಷ್ಠ ಮಾನ್ಯತೆ ನೀಡಲು ಕೆಲಸ ಮಾಡಬೇಕು. 2015ರಿಂದ 185 ಮಹಿಳಾ ಸಾಧಕಿಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವರ್ಷವೂ ವಿವಿಧ ವಿಭಾಗಗಳಲ್ಲಿ 34 ಮಹಿಳಾ ಸಾಧಕಿಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳೆಯರಿಗೆ ಹಲವು ಪ್ರಶಸ್ತಿಗಳು ಸಿಕ್ಕಿರುವುದು ಅಭೂತಪೂರ್ವ. ಇದೊಂದು ದಾಖಲೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಕಳೆದ 7 ವರ್ಷಗಳಲ್ಲಿ ದೇಶದ ನೀತಿಗಳು ಮಹಿಳೆಯರ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿವೆ. ಇಂದು ಭಾರತವು ಗರಿಷ್ಠ ಹೆರಿಗೆ ರಜೆಯನ್ನು ಒದಗಿಸುವ ಮುಂಚೂಣಿ ದೇಶಗಳ ಸಾಲಿನಲ್ಲಿ ನಿಂತಿದೆ. ಚಿಕ್ಕವಯಸ್ಸಿನಲ್ಲೇ ಮದುವೆ ಮಾಡುವುದರಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ವೃತ್ತಿಗೆ ಅಡ್ಡಿಯಾಗುವುದನ್ನು ಅರಿತು, ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಗ್ರಾಮೀಣ ಮಹಿಳೆಯರು ಸಬಲೀಕರಣದಿಂದ ಐತಿಹಾಸಿಕ ದೂರದಲ್ಲಿದರು. ಹಾಗಾಗಿ, ಮಹಿಳೆಯರಿಗೆ 9 ಕೋಟಿ ಗ್ಯಾಸ್ ಸಂಪರ್ಕಗಳನ್ನು ನೀಡಲಾಗಿದೆಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮನೆಯ ಮಹಿಳೆಯರ ಹೆಸರಿನಲ್ಲಿ ಪಿಎಂ ಆವಾಸ್ ಯೋಜನೆಯ ಪಕ್ಕಾ ಮನೆಗಳು, ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಸರ್ಕಾರದ ಬೆಂಬಲ, ಜನ್ ಧನ್ ಖಾತೆಗಳು ಸೇರಿದಂತೆ ವಿವಿದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಎಲ್ಲಾ ಮಹಿಳೆಯರನ್ನು ಬದಲಾಗುತ್ತಿರುವ ಭಾರತ ಮತ್ತು ಮಹಿಳಾ ಸಬಲೀಕರಣದ ಮುಖವನ್ನಾಗಿ ಮಾಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಮಹಿಳೆಯರು ಸಂಕಲ್ಪ ಮಾಡಿದಾಗ, ಅವರು ಅದರ ದಿಕ್ಕನ್ನು ರೂಪಿಸುತ್ತಾರೆ. ಯಾವುದೇ ಸರ್ಕಾರವು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುವುದಿಲ್ಲ ಎಂದಾದಲ್ಲಿ ಮಹಿಳೆಯರು ಅಧಿಕಾರದಿಂದ ನಿರ್ಗಮಿಸುವುದನ್ನು ಖಚಿತಪಡಿಸಿದ್ದಾರೆ. ಮಹಿಳೆಯರ ಮೇಲಿನ ಅಪರಾಧವನ್ನು ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ಸರ್ಕಾರವು ಕೆಲಸ ಮಾಡುತ್ತಿದೆ. ಅತ್ಯಾಚಾರದ ಘೋರ ಪ್ರಕರಣಗಳಿಗೆ ಮರಣದಂಡನೆ ಸೇರಿದಂತೆ ಅನೇಕ ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ತ್ವರಿತ ವ್ಯಾಜ್ಯ ವಿಲೇವಾರಿ ನ್ಯಾಯಾಲಯಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಮಹಿಳಾ ಸಹಾಯ ಕೇಂದ್ರಗಳು, 24 ಗಂಟೆಗಳ ಸಹಾಯವಾಣಿಗಳು, ಸೈಬರ್ ಅಪರಾಧಗಳನ್ನು ಎದುರಿಸಲು ಪೋರ್ಟಲ್ ಮುಂತಾದ ಹಲವಾರು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ನರೇದ್ರ ಮೋದಿ ತಿಳಿಸಿದರು.

***



(Release ID: 1794393) Visitor Counter : 559