ಪ್ರಧಾನ ಮಂತ್ರಿಯವರ ಕಛೇರಿ

ಸರ್ಕಾರದ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕುರಿತು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ


“ಇತರರ ಮಹತ್ವಾಕಾಂಕ್ಷೆಗಳು ನಿಮ್ಮ ಮಹತ್ವಾಕಾಂಕ್ಷೆಗಳಾದಾಗ ಹಾಗೂ ಇತರರ ಕನಸುಗಳನ್ನು ನನಸಾಗಿಸುವುದು ನಿಮ್ಮ ಯಶಸ್ಸಿನ ಮಾಪನವಾದಾಗ ಕರ್ತವ್ಯದ ಹಾದಿ ಇತಿಹಾಸ ಸೃಷ್ಟಿಸುತ್ತದೆ”

“ಇಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳು ದೇಶದ ಅಭ್ಯುದಯದ ಅಡೆತಡೆಗಳನ್ನು ಮೂಲೋತ್ಪಾಟನೆ ಮಾಡುತ್ತಿವೆ. ಅವು ಅಡಚಣೆಯ ಬದಲು ವೇಗ ವರ್ಧಕವಾಗುತ್ತಿವೆ”

“ಆಜಾದಿ ಕಾ ಅಮೃತ್ ಮಹೋತ್ಸವ್ ಸಂದರ್ಭದಲ್ಲಿ ಸೇವೆಗಳು ಮತ್ತು ಸೌಲಭ್ಯಗಳಲ್ಲಿ ಶೇ 100 ರಷ್ಟು ಶುದ್ಧತೆ ಸಾಧಿಸುವ ಗುರಿ ಹೊಂದಲಾಗಿದೆ”

“ದೇಶ ಡಿಜಿಟಲ್ ಇಂಡಿಯಾ ರೂಪದಲ್ಲಿ ಮೌನ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಇದರಲ್ಲಿ ಯಾವುದೇ ಜಿಲ್ಲೆ ಹಿಂದುಳಿಯಬಾರದು”

Posted On: 22 JAN 2022 1:53PM by PIB Bengaluru

ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಇಂದು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು.

ಜಿಲ್ಲಾಧಿಕಾರಿಗಳು ಹಲವಾರು ಸೂಚಕಗಳಲ್ಲಿ ತಮ್ಮ ಜಿಲ್ಲೆಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಕಾರಣವಾಗಿರುವ  ಅನುಭವಗಳನ್ನು ಹಂಚಿಕೊಂಡರು. ಜಿಲ್ಲೆಗಳಲ್ಲಿ ಯಶಸ್ಸಿಗೆ ಕಾರಣವಾದ ಪ್ರಮುಖ ಕ್ರಮಗಳು ಮತ್ತು ಈ ಪ್ರಯತ್ನದಲ್ಲಿ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದಲೇ ನೇರ ಮಾಹಿತಿ ಪಡೆದುಕೊಂಡರು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದಡಿ ಕೆಲಸ ಮಾಡುವುದು ಈ ಹಿಂದೆ ಮಾಡಿದ ಕೆಲಸಕ್ಕಿಂತ ಹೇಗೆ ಭಿನ್ನ ಎಂದು ಪ್ರಧಾನಮಂತ್ರಿಯವರು ಕೇಳಿದರು. ಈ ಯಶಸ್ಸಿನ ಹಿಂದೆ ಜನರ ಸಹಭಾಗಿತ್ವ ಹೇಗಿದೆ ಎಂಬ ಅಂಶಗಳ ಕುರಿತಂತೆಯೂ ಅಧಿಕಾರಿಗಳು ಚರ್ಚಿಸಿದರು.  ದಿನನಿತ್ಯ ತಮ್ಮ ತಂಡದಲ್ಲಿ ಕೆಲಸ ಮಾಡುವ ಸದಸ್ಯರನ್ನು ಹೇಗೆ ಪ್ರತಿದಿನ ಪ್ರೇರೇಪಿಸಲಾಗುತ್ತಿದೆ ಎಂಬ ಕುರಿತು ಅಧಿಕಾರಿಗಳು ಮಾತನಾಡಿದರು. ತಂಡದಲ್ಲಿರುವವರು ಕೆಲಸ ಮಾಡುತ್ತಿಲ್ಲ, ಬದಲಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಭಾವನೆ ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ಜತೆಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಮತ್ತು ದತ್ತಾಂಶ ಆಧಾರಿತ ಆಡಳಿತದ ಪ್ರಯೋಜನಗಳ ಕುರಿತು ಅಧಿಕಾರಿಗಳು ಮಾತನಾಡಿದರು.

ನೀತಿ ಆಯೋಗದ ಸಿಇಒ ಅವರು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಒಟ್ಟಾರೆ ಪ್ರಗತಿ ಕುರಿತು ಬೆಳಕು ಚೆಲ್ಲಿದರು. ಈ ಕಾರ್ಯಕ್ರಮ ಭಾರತ ತಂಡದ ಸ್ಫೂರ್ತಿಯಿಂದ ನಡೆಸಲ್ಪಡುವ ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟವನ್ನು ಹೇಗೆ ಸದುಪಯೋಗಪಡಿಸಿ ಕೊಂಡಿದೆ ಎಂಬ ಕುರಿತು ಉಲ್ಲೇಖಿಸಿದರು. ಈ ಪ್ರಯತ್ನಗಳ ಫಲಿತಾಂಶದಿಂದ ಪ್ರತಿಯೊಂದು ಮಾನದಂಡದಲ್ಲೂ ಉತ್ತಮ ಮತ್ತು ಗಮನಾರ್ಹ ಸಾಧನೆ ಮಾಡಿದ್ದು, ಇದು ಜಾಗತಿಕವಾಗಿಯೂ ತಜ್ಞರಿಂದ ಸ್ವತಂತ್ರ್ಯವಾಗಿ ಗುರುತಿಸಲ್ಪಟ್ಟಿರುವ ಸತ್ಯವಾಗಿದೆ. ಬಿಹಾರದ ಬಂಕಾದಲ್ಲಿ ಸ್ಮಾರ್ಟ್ ತರಗತಿ ಕುರಿತ ಉತ್ತಮ ಅಭ್ಯಾಸಗಳು, ಒಡಿಶಾದ ಕೊರಾಪತ್ ನಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಮಿಷನ್ ಅಪರಾಜಿತ ಮತ್ತಿತರ ಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು.  ಇವು ಇತರೆ ಜಿಲ್ಲೆಗಳಲ್ಲೂ ಜಾರಿಗೊಳಿಸಲಾಗಿದೆ. ಜಿಲ್ಲೆಯ ಪ್ರಮುಖ ಅಧಿಕಾರಿಗಳ ಅಧಿಕಾರಾವಧಿಯಲ್ಲಿನ ಸಾಧನೆ ಮತ್ತು ಸಂಬಂಧಿಸಿದಂತೆ ಜಿಲ್ಲೆಯ ಕಾರ್ಯಕ್ಷಮತೆ ಕುರಿತಂತೆಯೂ ವಿಶ್ಲೇಷಣೆ ಮಾಡಲಾಯಿತು.

ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಅವರು ಆಯ್ದ 142 ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಮೇಲೆತ್ತಲು ಕೇಂದ್ರೀಕರಿಸಲಾದ ಕೆಲಸಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಗುರುತಿಸಲಾದ ಜಿಲ್ಲೆಗಳ ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆಗಳನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿರುವ ಕುರಿತು ವಿವರಿಸಿದರು. 15 ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಅನುಗುಣವಾಗಿ 15 ವಲಯಗಳನ್ನು ಗುರುತಿಸಲಾಗಿದೆ. ಈ ವಲಯಗಳಲ್ಲಿ ಕಾರ್ಯಕ್ಷಮತೆಗಾಗಿ ಸೂಚಕಗಳನ್ನು [ಕೆಪಿಐಗಳು] ಗುರುತಿಸಲಾಗಿದೆ. ಆಯ್ದ ಜಿಲ್ಲೆಗಳಲ್ಲಿ ಕೆಪಿಐಗಳು ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಸರಾಸರಿಯನ್ನು ಮೀರಿಸುವಂತೆ ಮತ್ತು ಎರಡು ವರ್ಷಗಳಲ್ಲಿ ರಾಷ್ಟ್ರೀಯ ಸರಾಸರಿಗೆ ಸಮನಾಗಿ ಪ್ರಗತಿ ಸಾಧಿಸುವಂತೆ  ನೋಡಿಕೊಳ್ಳುವುದು ಸರ್ಕಾರದ ಗುರಿಯಾಗಿದೆ. ಪ್ರತಿಯೊಂದು ಸಂಬಂಧಪಟ್ಟ ಸಚಿವಾಲಯ ಮತ್ತು ಅದರ ಕೆಪಿಐಗಳ ಗುಂಪನ್ನು ಗುರುತಿಸಲಾಗಿದ್ದು, ಇದರ ಆಧಾರದ ಮೇಲೆ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಉಪಕ್ರಮ ಸ್ವಯಂ ಚಾಲಿತ ಮಾದರಿಯಲ್ಲಿ ಎಲ್ಲಾ ಪಾಲುದಾರರೊಂದಿಗೆ ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳಿಂದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಶುದ್ಧತೆ ಸಾಧಿಸುವ ಗುರಿ ಹೊಂದಲಾಗಿದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ಈ ಗುರಿಗಳನ್ನು ಸಾಧಿಸುವಲ್ಲಿ ತಮ್ಮ ಸಚಿವಾಲಯಗಳು ಹೇಗೆ ಸಾಗುತ್ತಿವೆ ಎಂಬ ಕುರಿತು ಕ್ರಿಯಾ ಯೋಜನೆಯ ಬಗ್ಗೆ ವಿಶ್ಲೇಷಣೆ ಮಾಡಿದರು.

ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇತರರ ಮಹತ್ವಾಕಾಂಕ್ಷೆಗಳು ನಿಮ್ಮ ಮಹತ್ವಾಕಾಂಕ್ಷೆಗಳಾದಾಗ ಹಾಗೂ ಇತರರ ಕನಸುಗಳನ್ನು ನನಸಾಗಿಸುವುದು ನಿಮ್ಮ ಯಶಸ್ಸಿನ ಮಾಪನವಾದಾಗ ಕರ್ತವ್ಯದ ಹಾದಿ ಇತಿಹಾಸ ಸೃಷ್ಟಿಸುತ್ತದೆ. ಇವತ್ತು ನಾವು ನೋಡುತ್ತಿದ್ದೇವೆ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಇತಿಹಾಸ ಸೃಷ್ಟಿಯಾಗಿದೆ ಎಂದರು.

ಈ ಹಿಂದೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಹಿಂದುಳಿದಿರುವಿಕೆ ಪರಿಸ್ಥಿತಿಗೆ ವಿವಿಧ ಅಂಶಗಳು ಕಾರಣವಾಗಿವೆ ಎಂದು ಪ್ರಧಾನಮಂತ್ರಿಯರು ಹೇಳಿದರು. ಸಮಗ್ರಾಭಿವೃದ್ಧಿಗೆ ಅನುಕೂಲವಾಗುವಂತೆ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ವಿಶೇಷ ನೆರವು ನೀಡಲಾಗಿದೆ. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ. ಇಲ್ಲಿ ದೇಶದ ಪ್ರಗತಿಯ ಅಡಚಣೆಗಳನ್ನು ಮೂಲೋತ್ಪಾಟನೆ ಮಾಡಲಾಗುತ್ತಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳು ಅಡಚಣೆಯಾಗುವ ಬದಲು ವೇಗವರ್ಧಕವಾಗುತ್ತಿವೆ ಎಂದ ಪ್ರಧಾನಮಂತ್ರಿಯರು, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಪ್ರಚಾರದಿಂದಾಗಿ ನಡೆದಿರುವ ವಿಸ್ತರಣೆ ಮತ್ತು ಮರು ವಿನ್ಯಾಸ ಕುರಿತು ಒತ್ತಿ ಹೇಳಿದರು. ಇದು ಸಂವಿಧಾನದ ಒಕ್ಕೂಟದ ಮನೋಭಾವದ ಪ್ರತೀಕವಾಗಿದ್ದು, ಸಂಸ್ಕೃತಿಗೆ ಗಟ್ಟಿಯಾದ ರೂಪ ನೀಡಿದೆ. ಇದಕ್ಕೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯಾಡಳಿತ ತಂಡವಾಗಿ ಕೆಲಸ ಮಾಡುತ್ತಿರುವುದು ಕಾರಣವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗೆ ಆಡಳಿತ ಮತ್ತು ಸಾರ್ವಜನಿಕರ ನಡುವೆ ನೇರ ಮತ್ತು ಭಾವನಾತ್ಮಕ ಸಂಪರ್ಕ ಬಹಳ ಮುಖ್ಯ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇದು ಒಂದು ರೀತಿಯಲ್ಲಿ “ಮೇಲಿನಿಂದ ಕೆಳಗಡೆ” ಮತ್ತು “ಕೆಳಗಡೆಯಿಂದ ಮೇಲಿನ ಹಂತಕ್ಕೆ” ಆಡಳಿತ ಹರಿಯುವ ವಿಧಾನದಂತಾಗಿದೆ. ಈ ಅಭಿಯಾನದ ಪ್ರಮುಖ ಆಯಾಮವೆಂದರೆ ತಂತ್ರಜ್ಞಾನ ಮತ್ತು ನಾವೀನ್ಯತೆಯಾಗಿದೆ. ಈ ಜಿಲ್ಲೆಗಳಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಬಳಸಿಕೊಂಡು ಅಪೌಷ್ಟಿಕತೆ, ಶುದ್ಧ ಕುಡಿಯುವ ನೀರು ಮತ್ತು ಲಸಿಕಾ ಅಭಿಯಾನದಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಜಿಲ್ಲೆಗಳ ಬಗ್ಗೆಯೂ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. 

ದೇಶದ ಯಶಸ್ಸಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಒಂದೇ ರೀತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆದಿರುವುದು ಕಾರಣವಾಗಿದೆ. ಎಲ್ಲಾ ಸಂಪನ್ಮೂಲಗಳು ಒಂದೇ, ಸರ್ಕಾರದ ಆಡಳಿತ ವ್ಯವಸ್ಥೆಯೂ ಸಹ ಒಂದೇ, ಅಧಿಕಾರಿ ವರ್ಗವೂ ಸಹ ಒಂದೇ ರೀತಿಯಲ್ಲಿದೆ. ಆದರೆ ಫಲಿತಾಂಶ ಮಾತ್ರ ವಿಭಿನ್ನವಾಗಿದೆ. ಇಡೀ ಜಿಲ್ಲೆಯನ್ನು ಒಂದು ಘಟಕವಾಗಿ ನೋಡುವುದರಿಂದ ಅಧಿಕಾರಿಯು ತನ್ನ ಪ್ರಯತ್ನಗಳ ಅಗಾಧತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಜೀವನದ ಉದ್ದೇಶದ ಅರ್ಥವನ್ನು ಮತ್ತು ಅರ್ಥಪೂರ್ಣ ಬದಲಾವಣೆ ತರುವ ತೃಪ್ತಿಯನ್ನು ಇದು ನೀಡುತ್ತದೆ.

ಕಳೆದ ನಾಲ್ಕು ವರ್ಷಗಳಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜನ್-ಧನ್ ಖಾತೆಗಳಲ್ಲಿ 4-5 ಪಟ್ಟು ಖಾತೆಗಳ ಸಂಖ್ಯೆ ಏರಿಕೆಯಾಗಿದೆ. ಬಹುತೇಕ ಎಲ್ಲಾ ಕುಟುಂಬಗಳು ಶೌಚಾಲಯಗಳನ್ನು ಹೊಂದಿವೆ ಮತ್ತು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ಜನರ ಬದುಕಿನಲ್ಲಿ ಹೊಸ ಶಕ್ತಿ ಬಂದಿದೆ. ಕಠಿಣ ಜೀವನದಿಂದಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜನತೆ ಹೆಚ್ಚು ಕಷ್ಟಪಟ್ಟು ದುಡಿಯುವರು, ಧೈರ್ಯಶಾಲಿಗಳು ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಈ ಶಕ್ತಿಯನ್ನು ಗುರುತಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಅನುಷ್ಠಾನದಲ್ಲಿ ಸಿಲೋಸ್ ನಿರ್ಮೂಲನೆ ಮಾಡುವಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳು ತಮ್ಮ ಸಾಮರ್ಥ್ಯವನ್ನು ನಿರೂಪಿಸಿವೆ ಎಂದು ಹೇಳಿದ  ಪ್ರಧಾನಮಂತ್ರಿಯರು ಈ ಸುಧಾರಣೆ ಹಾದಿಯ ಪ್ರಯೋಜನಗಳ ಬಗ್ಗೆ ಒತ್ತಿ ಹೇಳಿದರು. ಸಿಲೋಸ್ ಕೊನೆಗೊಂಡಾಗ 1+1 ಸೇರಿದರೆ 2 ಆಗುವುದಿಲ್ಲ. 1+1 ಸೇರಿದರೆ ಅದು 11 ಆಗುತ್ತದೆ. ಇಂದು ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜಿಲ್ಲಾಡಳಿತದಲ್ಲಿ ಸಾಮೂಹಿಕ ಶಕ್ತಿಯನ್ನು ನೋಡುತ್ತಿದ್ದೇವೆ.  ಎರಡನೆಯದಾಗಿ ಕಾರ್ಯಶೈಲಿಯು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಅನುಭವಗಳ ಆಧಾರದ ಮೇಲೆ ಪರಿಷ್ಕರಿಸಲ್ಪಟ್ಟಿದೆ ಮತ್ತು ಅಳೆಯಬಹುದಾದ ಸೂಚಕಗಳು, ಅಭಿವೃದ್ಧಿ ಕುರಿತು ನೈಜ ಸಮಯದ ಮೇಲ್ವಿಚಾರಣೆ, ಜಿಲ್ಲೆಗಳ ನಡುವೆ ಆರೋಗ್ಯಕರ ಚರ್ಚೆ ಮತ್ತು ಉತ್ತಮ ಅಭ್ಯಾಸಗಳ ಪುನರಾವರ್ತನೆಗಳ ಆಧಾರದ ಮೇಲೆ ಕಾರ್ಯ ವಿಧಾನವನ್ನು ಪರಿಷ್ಕರಿಸಲಾಗಿದೆ. ಮೂರನೆಯದಾಗಿ ಅಧಿಕಾರಿಗಳನ್ನು ನಿರ್ದಿಷ್ಟ ಅವಧಿವರೆಗೆ ನಿಯೋಜಿಸಿ ಸುಧಾರಣೆಗಳನ್ನು ತರಲಾಗಿದ್ದು, ಉತ್ತಮ ತಂಡಗಳನ್ನು ನಿಯೋಜಿಸಿ ಕಾರ್ಯೋನ್ಮುಖವಾಗು ವಂತೆ ಮಾಡಲಾಗಿದೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಇದರಿಂದ ದೊಡ್ಡ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ. ಸರಿಯಾದ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಕ್ಷೇತ್ರ ಭೇಟಿ, ತಪಾಸಣೆ ಮತ್ತು ರಾತ್ರಿ ನಿಲುಗಡೆಗೆ ವಿವರವಾದ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಮಂತ್ರಿಯವರು ಸೂಚಿಸಿದರು.

ನವಭಾರತದ ಬದಲಾದ ಮನಸ್ಥಿತಿಯತ್ತ ಪ್ರಧಾನಮಂತ್ರಿಯರು ಅಧಿಕಾರಿಗಳ ಗಮನ ಸೆಳೆದರು. ಆಜಾದಿ ಕಾ ಅಮೃತ್ ಮಹೋತ್ಸವ್ ಸಂದರ್ಭದಲ್ಲಿ ಸೇವೆಗಳು ಮತ್ತು ಸೌಲಭ್ಯಗಳಲ್ಲಿ ಶೇ 100 ರಷ್ಟು ಪರಿಪೂರ್ಣತೆ ಸಾಧಿಸುವ ಗುರಿ ಹೊಂದಲಾಗಿದೆ. ಅಂದರೆ ನಾವು ಇಲ್ಲಿಯವರೆಗೆ ಸಾಧಿಸಿರುವ ಮೈಲಿಗಲ್ಲುಗಳಿಗೆ ಹೋಲಿಸಿದರೆ ನಾವು ಬಹಳ ದೂರ ಸಾಗಬೇಕಾಗಿದೆ ಮತ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ರಸ್ತೆ, ಆಯುಷ್ಮಾನ್ ಕಾರ್ಡ್, ಪ್ರತಿಯೊಬ್ಬ ವ್ಯಕ್ತಿಗೆ ಬ್ಯಾಂಕ್ ಖಾತೆ, ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ, ಪ್ರತಿಯೊಬ್ಬರಿಗೂ ಪಿಂಚಣಿ, ವಿಮೆ, ವಸತಿ ಸೌಲಭ್ಯ ಕಲ್ಪಿಸಲು ಕಾಲಮಿತಿ ಗುರಿಗಳ ಕುರಿತು ಒತ್ತಿ ಹೇಳಿದರು. ಎರಡು ವರ್ಷಗಳಲ್ಲಿ ಇಂತಹ ದೃಷ್ಟಿಕೋನವನ್ನು ಸಾಧಿಸಬೇಕು. ಸಾಮಾನ್ಯ ಜನರ ಸುಗಮ ಜೀವನಕ್ಕಾಗಿ ಪ್ರತಿಯೊಂದು ಜಿಲ್ಲೆಗಳು ಮುಂದಿನ ಮೂರು ತಿಂಗಳಲ್ಲಿ ಹತ್ತು ಕೆಲಸಗಳನ್ನು ಪೂರ್ಣಗೊಳಿಸಬೇಕು. ಈ ಐತಿಹಾಸಿಕ ಯುಗದಲ್ಲಿ ಚಾರಿತ್ರಿಕ ಯಶಸ್ಸು ಸಾಧಿಸಲು ಆಜಾದಿ ಕಾ ಅಮೃತ ಮಹೋತ್ಸವ ದೊಂದಿಗೆ ಐದು ಕೆಲಸಗಳನ್ನು ಸಂಯೋಜಿಸುವಂತೆ ಸಲಹೆ ಅವರು ಮಾಡಿದರು.

ಡಿಜಿಟಲ್ ಇಂಡಿಯಾದಿಂದ ಭಾರತ ಮೌನ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಯಾವುದೇ ಜಿಲ್ಲೆ ಇದರಿಂದ ಹಿಂದೆ ಬಿದ್ದಿಲ್ಲ. ಹಿಂದೆ ಬೀಳಬಾರದು. ಡಿಜಿಟಲ್ ಮೂಲ ಸೌಕರ್ಯ ಪ್ರತಿಯೊಂದು ಗ್ರಾಮಗಳಿಗೂ ತಲುಪುತ್ತಿವೆ ಮತ್ತು ಸೇವೆ ಹಾಗೂ ಸೌಲಭ್ಯಗಳು ಪ್ರತಿಯೊಬ್ಬರ ಮನೆ ಬಾಗಿಲಿನಲ್ಲಿಯೇ ಸಿಗುತ್ತಿವೆ. ಹೀಗಾಗಿ ನೀತಿ ಆಯೋಗ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ನಿಯಮಿತವಾಗಿ ಸಂವಾದ ನಡೆಸಬೇಕು. ಕೇಂದ್ರ ಸರ್ಕಾರದ ಸಚಿವಾಲಯಗಳು ಈ ಜಿಲ್ಲೆಗಳ ಸವಾಲುಗಳನ್ನು ದಾಖಲಿಸುವಂತೆ ಪ್ರಧಾನಮಂತ್ರಿಯವರು ಸೂಚಿಸಿದರು.

ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು 142 ಜಿಲ್ಲೆಗಳ ಪಟ್ಟಿಯನ್ನು ಸಿದ್ಧಪಡಿಸಿವೆ. ಅವುಗಳು ಅಭಿವೃದ್ಧಿಯಲ್ಲಿ ಹೆಚ್ಚು ಹಿಂದುಳಿದಿಲ್ಲ. ಆದರೆ ಒಂದೆರಡು ನಿಯತಾಂಕಗಳಲ್ಲಿ ದುರ್ಬಲವಾಗಿವೆ. ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿನ ಹಾಲಿ ಸಾಮೂಹಿಕ ವಿಧಾನದೊಂದಿಗೆ ಕೆಲಸ ಮಾಡುತ್ತಿರುವ ವಿಧಾನದ ಬಗ್ಗೆ ಪ್ರಧಾನಮಂತ್ರಿಯವರು ಅವರು ಒತ್ತಿ ಹೇಳಿದರು.  “ಎಲ್ಲಾ ಸರ್ಕಾರಗಳು – ಭಾರತ ಸರ್ಕಾರ, ಜಿಲ್ಲಾಡಳಿತ, ಆಡಳಿತ ಯಂತ್ರಕ್ಕೆ ಇವು ಹೊಸ ಸವಾಲುಗಳಾಗಿವೆ. ಈಗ ನಾವು ಒಟ್ಟಾಗಿ ಸವಾಲನ್ನು ಪೂರ್ಣಗೊಳಿಸಬೇಕಾಗಿದೆ “ಎಂದು ಶ‍್ರೀ ನರೇಂದ್ರ ಮೋದಿ ಹೇಳಿದರು. 

ನಾಗರಿಕ ಸೇವೆಯಲ್ಲಿರುವವರು ತಮ್ಮ ಸೇವೆಯ ಮೊದಲ ದಿನವನ್ನು ನೆನಪಿಸಿಕೊಳ್ಳಬೇಕು ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಉತ್ಸಾಹ ಮತ್ತು ಉತ್ತೇಜನವನ್ನು ಸ್ಮರಿಸಿಕೊಳ್ಳಬೇಕು. ಅಲ್ಲದೇ ಇದೇ ಸ್ಫೂರ್ತಿಯಿಂದ ಮುನ್ನಡೆಯಬೇಕು ಪ್ರಧಾನಮಂತ್ರಿಯವರು ಸಲಹೆ ಮಾಡಿದರು.

***



(Release ID: 1791838) Visitor Counter : 305