ಪ್ರಧಾನ ಮಂತ್ರಿಯವರ ಕಛೇರಿ

21ನೇ ಭಾರತ-ರಷ್ಯಾ ವಾರ್ಷಿಕ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ

Posted On: 06 DEC 2021 8:10PM by PIB Bengaluru

ಘನತೆವೆತ್ತ,

ನನ್ನ ಆತ್ಮೀಯ ಸ್ನೇಹಿತ ಮತ್ತು ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಮತ್ತು ನಿಮ್ಮ ನಿಯೋಗವನ್ನು 21ನೇ ಭಾರತ-ರಷ್ಯಾ ವಾರ್ಷಿಕ ಸಮಾವೇಶಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಕೊರೊನಾ ಕಾಲಾವಧಿಯಲ್ಲಿ ಕಳೆದ 2 ವರ್ಷಗಳಿಂದ ನೀವು ಹೊರರಾಷ್ಟ್ರಕ್ಕೆ ನೀಡುತ್ತಿರುವ 2ನೇ ಭೇಟಿ ಇದು ಎಂಬುದು ನನಗೆ ಗೊತ್ತಿದೆ. ಭಾರತದ ಜತೆ ನಿಮ್ಮ ಬಾಂಧವ್ಯ ಮತ್ತು ನಿಮ್ಮ ವೈಯಕ್ತಿಕ ಬದ್ಧತೆಯು ಭಾರತ-ರಷ್ಯಾ ಸಂಬಂಧಗಳ ಪ್ರಾಮುಖ್ಯತೆಯನ್ನು ಸಂಕೇತಿಸುತ್ತಿದೆ. ಅದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.

ಕೋವಿಡ್-19 ಸಾಂಕ್ರಾಮಿಕ ಸೋಂಕು ಒಡ್ಡಿದ ಸವಾಲುಗಳ ಹೊರತಾಗಿಯೂ, ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳ ಗತಿ ಬದಲಾಗಿಲ್ಲ. ನಮ್ಮ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯು ನಿರಂತರವಾಗಿ ಬಲಗೊಳ್ಳುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲೂ ಉಭಯ ದೇಶಗಳ ನಡುವೆ ಅತ್ಯುತ್ತಮ ಸಹಕಾರವನ್ನು ಏರ್ಪಟ್ಟಿದೆ. ಲಸಿಕೆ ಪ್ರಯೋಗಗಳೇ ಇರಲಿ, ಲಸಿಕೆ ಉತ್ಪಾದನೆಯೇ ಇರಲಿ, ಮಾನವೀಯ ಸಹಾಯ ಅಥವಾ ನೆರವೇ ಇರಲಿ  ಅಥವಾ ಪರಸ್ಪರ ನಾಗರಿಕರ ವಾಪಸಾತಿಯೇ ಇರಲಿ, ಎಲ್ಲಾ ವಿಷಯಗಳಲ್ಲೂ ಉಭಯ ದೇಶಗಳ ಸಹಕಾರ ಮತ್ತು ಸಂಬಂಧ ಬಲಗೊಳ್ಳುತ್ತಿದೆ.

ಗೌರವಾನ್ವಿತರೆ,

2021ನೇ ವರ್ಷವು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹಲವು ವಿಧಗಳಲ್ಲಿ ಪ್ರಾಮುಖ್ಯತೆ ಹೊಂದಿದೆ. 1971 ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದ ಏರ್ಪಟ್ಟು 5 ದಶಕ ಪೂರ್ಣವಾಗಿರುವುದನ್ನು ಮತ್ತು ನಮ್ಮ ಕಾರ್ಯತಂತ್ರದ ಪಾಲುದಾರಿಕೆ 2 ದಶಕ ಪೂರ್ಣವಾಗಿರುವುದನ್ನು ವರ್ಷ ಗುರುತಿಸುತ್ತಿದೆ. ಕಳೆದ 20 ವರ್ಷಗಳಲ್ಲಿ ನಮ್ಮ ಕಾರ್ಯತಂತ್ರದ ಸಹಭಾಗಿತ್ವವು ಸಾಧಿಸಿರುವ ಗಮನಾರ್ಹ ಪ್ರಗತಿಗೆ ಪ್ರಮುಖ ಚಾಲನಾಶಕ್ತಿ ನೀವೇ ಆಗಿರುವುದರಿಂದ ವಿಶೇಷ ವರ್ಷದಲ್ಲಿ ಮತ್ತೊಮ್ಮೆ ನಿಮ್ಮೊಂದಿಗೆ ಇರಲು ನನಗೆ ಸಂತೋಷವಾಗಿದೆ.

ಕಳೆದ ಹಲವು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಲವು ಮೂಲಭೂತ ಬದಲಾವಣೆಗಳಾಗಿವೆ. ಬಹಳಷ್ಟು ಭೌಗೋಳಿಕ-ರಾಜಕೀಯ ಸಮೀಕರಣಗಳು ಹೊರಹೊಮ್ಮಿವೆ. ಆದರೆ ಎಲ್ಲಾ ಅಸ್ಥಿರತೆಗಳ ನಡುವೆ ಭಾರತ-ರಷ್ಯಾ ಸ್ನೇಹವು ನಿರಂತರವಾಗಿ ಮುಂದವರಿದಿದೆ. ಎರಡೂ ದೇಶಗಳು ಯಾವುದೇ ಹಿಂಜರಿಕೆಯಿಲ್ಲದೆ ಪರಸ್ಪರ ಸಹಕಾರ ನೀಡಿದ್ದು ಮಾತ್ರವಲ್ಲದೆ, ಪರಸ್ಪರ ಸೂಕ್ಷ್ಮತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿವೆ. ಇದು ನಿಜವಾಗಿಯೂ 2 ರಾಷ್ಟ್ರಗಳ ನಡುವಿನ ಸ್ನೇಹದ ಅನನ್ಯ ಮತ್ತು ವಿಶ್ವಾಸಾರ್ಹ ಮಾದರಿಯಾಗಿದೆ.

ಗೌರವಾನ್ವಿತರೆ,

2021 ನಮ್ಮ ಕಾರ್ಯತಂತ್ರ ಪಾಲುದಾರಿಕೆಗೆ ವಿಶೇಷ ಸಂವತ್ಸರವಾಗಿದೆ. ಇಂದು ನಮ್ಮ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ನಡುವಿನ 2+2 ಸಂವಾದದ ಉದ್ಘಾಟನಾ ಸಭೆ. ಇದು ನಮ್ಮ ಪ್ರಾಯೋಗಿಕ ಸಹಕಾರವನ್ನು ಹೆಚ್ಚಿಸಲು ಹೊಸ ಕಾರ್ಯವಿಧಾನವನ್ನು ಪ್ರಾರಂಭಿಸಿದೆ.

ಅಫ್ಘಾನಿಸ್ತಾನ ಮತ್ತು ಇತರ ಪ್ರಾದೇಶಿಕ ವಿಷಯಗಳ ಬಗ್ಗೆಯೂ ನಾವು ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿದ್ದೇವೆ. ಪೂರ್ವ ಆರ್ಥಿಕ ವೇದಿಕೆ ಮತ್ತು ವ್ಲಾಡಿವೋಸ್ಟಾಕ್ ಶೃಂಗಸಭೆಯೊಂದಿಗೆ ಪ್ರಾರಂಭವಾದ ಪ್ರಾದೇಶಿಕ ಪಾಲುದಾರಿಕೆ ಇಂದು ರಷ್ಯಾದ ಪೂರ್ವ ಭಾಗಗಳು ಮತ್ತು ಭಾರತದ ರಾಜ್ಯಗಳ ನಡುವೆ ನೈಜ ಸಹಕಾರವಾಗಿ ಬದಲಾಗುತ್ತಿದೆ.

ಆರ್ಥಿಕ ವಲಯದಲ್ಲಿ ನಮ್ಮ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ನಾವು ದೂರದೃಷ್ಟಿ ಅಳವಡಿಸಿಕೊಳ್ಳುತ್ತಿದ್ದೇವೆ. ನಾವು 2025 ವೇಳೆಗೆ 30 ಶತಕೋಟಿ ಡಾಲರ್ ವ್ಯಾಪಾರ ವಹಿವಾಟು 50 ಶತಕೋಟಿ ಡಾಲರ್ ಹೂಡಿಕೆ ಗುರಿ ಹೊಂದಿದ್ದೇವೆ. ಗುರಿಗಳನ್ನು ತಲುಪಲು ನಾವು ನಮ್ಮ ಉದ್ಯಮ ಸಮುದಾಯಗಳಿಗೆ ಮಾರ್ಗದರ್ಶನ ನೀಡಬೇಕು.

ವಿವಿಧ ಕ್ಷೇತ್ರಗಳಲ್ಲಿ ನಾವಿಂದು ಮಾಡಿಕೊಳ್ಳುತ್ತಿರುವ ಒಪ್ಪಂದಗಳು ಉಭಯ ರಾಷ್ಟ್ರಗಳ ಕಾರ್ಯತಂತ್ರವನ್ನು ಮತ್ತಷ್ಟು ಸುಗಮಗೊಳಿಸುತ್ತವೆ. 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಅಡಿ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ಮೂಲಕ ನಮ್ಮ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಬಾಹ್ಯಾಕಾಶ ಮತ್ತು ನಾಗರಿಕ ಪರಮಾಣು ಕ್ಷೇತ್ರಗಳಲ್ಲಿ ನಮ್ಮ ಸಹಕಾರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.

ಅಲಿಪ್ತ ಚಳವಳಿ(ಎನ್ಎಎಂ) ಶೃಂಗದ ವೀಕ್ಷಕರಾಗಿ ಮತ್ತು ಹಿಂದೂಮಹಾಸಾಗರ ವಲಯದ ಸಂಘಟನೆ(ಐಒಆರ್ ) ಸಂಧಾನ ಪಾಲುದಾರರಾಗಿ ಪಾಲ್ಗೊಂಡಿದ್ದಕ್ಕಾಗಿ ರಷ್ಯಾಕ್ಕೆ ನಾವು ಹಲವು ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಎರಡೂ ವೇದಿಕೆಗಳಲ್ಲಿ ರಷ್ಯಾದ ಉಪಸ್ಥಿತಿಯನ್ನು ಬೆಂಬಲಿಸಲು ನಮಗೆ ಸಂತೋಷವಾಯಿತು. ಭಾರತ ಮತ್ತು ರಷ್ಯಾ ಎಲ್ಲಾ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಒಂದೇ ರೀತಿಯ ದೃಷ್ಟಿಕೋನವನ್ನು ಹೊಂದಿವೆ. ಇಂದಿನ ಸಭೆಯಲ್ಲಿ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶವಿದೆ.

ಗೌರವಾನ್ವಿತರೆ,

ಮತ್ತೊಮ್ಮೆ, ನಾನು ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ, ನೀವು ಭಾರತಕ್ಕೆ ಭೇಟಿ ನೀಡಲು ಸಮಯ ತೆಗೆದುಕೊಂಡಿದ್ದೀರಿ, ಇದು ನಮಗೆ ಬಹಳ ಮುಖ್ಯ. ಇಂದಿನ ಚರ್ಚೆಯು ನಮ್ಮ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂಬ ಖಾತ್ರಿ ನನಗಿದೆ.

ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅನುವಾದ. ಅವರ ಮೂಲ ಭಾಷಣ ಹಿಂದಿಯಲ್ಲಿದೆ.

***



(Release ID: 1779086) Visitor Counter : 326